ಇಂದಿನ ದಿನವೇ ಶುಭದಿನವು

ಇಂದಿನ ದಿನವೇ ಶುಭದಿನವು

ಬರಹ
ಇಂದಿನ ದಿನವೇ ಶುಭದಿನವು
ಇಂದಿನ ವಾರ ಶುಭವಾರ
ಇಂದಿನ ತಾರೆ ಶುಭತಾರೆ
ಇಂದಿನ ಯೋಗ ಶುಭಯೋಗ
ಇಂದಿನ ಕರಣ ಶುಭ ಕರಣ
ಇಂದು ಪುರಂದರ ವಿಟ್ಠಲ ರಾಯನ
ಸಂದರ್ಶನ ಫಲವೆಮಗಾಯಿತು!

ಈ ಉಗಾಭೋಗದಲ್ಲಿ ಪುರಂದರದಾಸರು ಹೇಳೋದು ನಿಜವೇ. ದೇವರನ್ನು ನೆನೆಯೋದಕ್ಕೆ ಪಂಚಾಂಗ ನೋಡ್ಬೇಕಿಲ್ಲ. ಯಾಕಂದ್ರೆ, ಎಂದು ನಾವು ಹರಿಯನ್ನು ನೆನ್ನೆಯುತ್ತೇವೋ ಅವತ್ತಿನ ದಿನ ಚೆನ್ನಾಗೇ ಆಗುತ್ತೆ ಅನ್ನೋದು ಪುರಂದರದಾಸರ ಅಭಿಪ್ರಾಯ. ಹಾಗೇ, ಪುರಂದರದಾಸರಂತಹ ಮಹನೀಯರನ್ನ ನೆನೆಯೋದಕ್ಕೆ ಕೂಡ, ಯಾವ ದಿನವಾದರೂ ಒಳ್ಳೇದೇ. ಆದರೂ, ಅಂಥವರನ್ನ ಅವರು ಹುಟ್ಟಿದ ದಿನದಂದೋ, ಅಥವಾ ಅವರ ಜೀವನದ ಯಾವುದಾದರೂ ಮಹತ್ವದ ಘಟನೆ ನಡೆದ ದಿನ ನೆನೆಸಿಕೊಳ್ಳೋದು ಸಂಪ್ರದಾಯವಾಗಿ ಬಂದಿದೆ. ಅಂತಹ ದಿನಗಳು ನಮಗೆ ಇಂಥಾ ಹಿರಿಯ ಜೀವಗಳು ತಮ್ಮ ಬಾಳಿನಲ್ಲಿ ನಡೆದು ತೋರಿದ ದಾರಿಯನ್ನೊಮ್ಮೆ ಮತ್ತೊಮ್ಮೆ ವಿವರವಾಗಿ ನೋಡೋದಕ್ಕೆ ಒಂದು ಅವಕಾಶ ಕೊಡುತ್ತವೆ. ಇವತ್ತು ಪುರಂದರ ದಾಸರ ಆರಾಧನೆ ( ಜನವರಿ ೨೫, ೨೦೦೯, ಪುಷ್ಯ ಬಹುಳ ಅಮಾವಾಸ್ಯೆ) ಆಗಿರೋದ್ರಿಂದ, ಅವರ ಕೆಲವು ಮಾತುಗಳನ್ನೋ ಓದೋದು, ಅಥವಾ ಕೇಳೋದು ಒಳ್ಳೇದು ಅಂತ ನನ್ನನಿಸಿಕೆ.

ಪುರಂದರ ದಾಸರನ್ನು ಕರ್ನಾಟಕದ ಹರಿದಾಸ ಪರಂಪರೆಯ ನಾಲ್ಕು ಆಧಾರ ಸ್ತಂಭಗಳಲ್ಲೊಬ್ಬರು ಎಂದು ಕರೆಯುವ ವಾಡಿಕೆ. ಒಂದು ಸಂಸ್ಕೃತ
ಶ್ಲೋಕ ಈ ನಾಲ್ಕು ದಾಸ ವರೇಣ್ಯರನ್ನು ಹೀಗೆ ಸ್ಮರಿಸುತ್ತದೆ:

ನಮ: ಶ್ರೀಪಾದರಾಜಾಯ ನಮಸ್ತೇ ವ್ಯಾಸ ಯೋಗಿನೇ |
ನಮ: ಪುರಂದರಾರ್ಯಾಯ ವಿಜಯಾರ್ಯಾಯ ತೇ ನಮ: ||

(ನಮಿಪೆ ಶ್ರೀಪಾದ ರಾಯರಿಗೆ ಮಣಿವೆ ಯೋಗಿ ವ್ಯಾಸಗೆ
ಹಿರಿಯ ಪುರಂದರ ಗುರುವರಗೆ ಬಳಿಕ ವಿಜಯದಾಸರಿಗೆ)



(ಪುರಂದರದಾಸರ ಶಿಲ್ಪ - ಇದು ಬಹುಶಃ ಹಂಪೆಯ ಪುರಂದರ ಮಂಟಪದಲ್ಲಿರುವುದು - ನಾನು ಪರಿಚಿತರ ಮನೆಯಲ್ಲಿದ್ದ ಛಾಯಾಚಿತ್ರವೊಂದನ್ನು ಫೋಟೋ ತೆಗೆದದ್ದು. ದಾಸರ ತಂಬೂರಿಯನ್ನೂ, ಜೋಳಿಗೆಯನ್ನೂ, ಮುಂಡಾಸನ್ನೂ ಗಮನಿಸಿ)

ಪುರಂದರದಾಸರನ್ನು ದಾಸಶ್ರೇಷ್ಠರೆಂದೇ ಕರೆಯುವ ರೂಢಿ. 'ಪುರಂದರಗುರುಂ ವಂದೇ ದಾಸಶ್ರೇಷ್ಠಮ್ ದಯಾನಿಧಿಮ್' ಎಂಬ ಮಾತೇ ಇದೆ. ಅದಕ್ಕೇ ಅಲ್ಲವೆ, ಗುರುಗಳಾದ ವ್ಯಾಸರಾಯರೇ ಪುರಂದರದಾಸರ ಬಗ್ಗೆ 'ದಾಸರೆಂದರೆ ಪುರಂದರ ದಾಸರಯ್ಯ' ಎಂದು ಹೊಗಳಿ ಹಾಡಿರುವುದು? ಈ ಮಾದರಿಯಲ್ಲಿ
ಗುರುವಿನಿಂದಲೇ ಬಾಯ್ತುಂಬ ಹೊಗಳಿಸಿಕೊಂಡ ಶಿಷ್ಯರು ವಿರಳವೇ.

ಪುರಂದರದಾಸರದ್ದು ಬಹುಮುಖ ಪ್ರತಿಭೆ. ಅವರನ್ನು 'ಕರ್ನಾಟಕ ಸಂಗೀತದ ಪಿತಾಮಹ'ರೆಂದೇ ಗೌರವಿಸುತ್ತೇವೆ. ಅವರು ಒಬ್ಬ ಭಕ್ತ, ಕವಿ, ರಸಿಕ, ಸಂಗೀತಗಾರ, ವಾಗ್ಗೇಯಕಾರ ಮತ್ತು ಸಮಾಜ ಸುಧಾರಕನಾಗಿ ದಕ್ಷಿಣ ಭಾರತದಲ್ಲೆಲ್ಲ ತಿರುಗಾಡಿದ್ದರು. ಆದರೆ, ನಮ್ಮಲ್ಲಿ ಎಷ್ಟೋ ದೊಡ್ಡವರ ಜೀವನದಲ್ಲಿ ಆಗಿರುವಂತೆ, ಅವರ ಜೀವನದ ಹೆಚ್ಚಿನ ವಿವರಗಳು ನಮಗೆ ಹೀಗೇ ಇದ್ದಿರಬೇಕೆಂದು ತಿಳಿಯುವುದಿಲ್ಲ. ಅವರು ಹುಟ್ಟಿದ ದಿನವೇ ಆಗಲಿ, ಅಥವಾ ಅವರು ವ್ಯಾಸತೀರ್ಥರ ಶಿಷ್ಯರಾಗಿ ಹರಿದಾಸ ದೀಕ್ಷೆಯನ್ನು ತೆಗೆದುಕೊಂಡ ದಿನವೂ ಯಾವುದೆಂದು ಖಡಾಖಂಡಿತವಾಗಿ ಹೇಳಲಾಗದು. ಆದರೆ ಅವರ ಜೀವನದ ಕಡೆಯ ದಿನದ ಬಗ್ಗೆ ಮಾತ್ರ ನಮಗೆ ಖಚಿತವಾದ ಮಾಹಿತಿ ತಿಳಿದುಬರುತ್ತೆ- ಅದು ನಡೆದದ್ದು ರಕ್ತಾಕ್ಷಿ ಸಂವತ್ಸರ ಪುಷ್ಯ ಮಾಸದ ಅಮಾವಾಸ್ಯೆಯ ದಿನ. ( ಈ ದಿನ
ಕ್ರಿ.ಶ.೧೫೬೪ ಕ್ಕೆ ಸರಿಹೋಗುತ್ತೆ). ಈ ವಿಷಯ ನಮಗೆ ತಿಳಿಯುವುದು ಪುರಂದರದಾಸರ ಮಗಮಧ್ವಪದಾಸರ ಒಂದು ರಚನೆಯಲ್ಲಿ.

ಆ ಪದ ಹೀಗಿದೆ:

ತೆರಳಿದರು ಹರಿಪುರಕಿಂದು || ಪಲ್ಲವಿ ||

ಪುರಂದರದಾಸರಾಯರು ದೀನಬಂಧು || ಅನುಪಲ್ಲವಿ ||

ರಕ್ತಾಕ್ಷಿವತ್ಸರ ಪುಷ್ಯಾಂತ ರವಿವಾರ
ಮುಕ್ತಿಗೈದಿದರು ಕೇಳಿ ಬುಧಜನರು || ೧ ||

ವಿರೂಪಾಕ್ಷ ಕ್ಷೇತ್ರದಿ ವಿಠಲನ್ನ ಸನ್ನಿಧಿಯಲ್ಲಿ
ಶರೀರವನಿರಿಸಿ ಅನಾಥರನು ಹರಸಿ || ೨ ||


ರಚನೆಯ ಪಲ್ಲವಿಯನ್ನು ನೋಡಿದಾಗ, ಅದು ಪುರಂದರದಾಸರ ಮರಣದ ದಿನವೇ ರಚಿಸಿರಬೇಕೆಂದು ತೋರುತ್ತೆ. ಮೊದಲನೇ ಚರಣ ಅಂದು ಯಾವ ದಿನವಾಗಿತ್ತೆನ್ನುವುದನ್ನೂ, ಎರಡನೇ ಚರಣವು ಇದು ನಡೆದದ್ದು ಹಂಪೆಯ ವಿಜಯ ವಿಠಲನ ಸನ್ನಿಧಿಯಲ್ಲಿ ಎನ್ನುವುದನ್ನೂ ತಿಳಿಸುತ್ತೆ. ಹಾಗಾಗಿ, ಈ ಘಟನೆ ಹಂಪೆಯ ವಿಜಯ ವಿಠಲನ ಗುಡಿಯ ಬಳಿ, ತುಂಗಭದ್ರೆಯ ದಡದಲ್ಲಿರುವ ಪುರಂದರದಾಸ ಮಂಟಪದಲ್ಲೇ ಇರಬೇಕು ಎಂದೂ ಎನಿಸುತ್ತೆ.

ಈ ಅಂಶ ನಮಗೆ ಯಾಕೆ ಮುಖ್ಯವಾಗುತ್ತೆ? ಚಾರಿತ್ರಿಕ ಅಂಶಗಳನ್ನು ನಾವು ಹೇಗೆ ದಾಸರ ರಚನೆಗಳಿಂದ ಹೆಕ್ಕಿ ತೆಗೆಯಬಹುದು ಅನ್ನುವುದನ್ನು ಇದು ಸೂಚಿಸುತ್ತೆ. ಪುರಂದರದಾಸರ ಜೀವನದ ಸುತ್ತ ಇರುವ ದಂತಕಥೆಗಳನ್ನು ನಂಬಲಿ, ಬಿಡಲಿ, ಅವರ ಹಾಡುಗಳಿಂದಲೇ ಹೇಗೆ ನಾವು ಎಷ್ಟೋ ವಿಷಯಗಳನ್ನು
ಅರಿತುಕೊಳ್ಳಬಹುದು ಅನ್ನುವುದನ್ನು ಇದು ನಮಗೆ ನೆನಪಿಸುತ್ತೆ. ನಿಜ ಹೇಳಬೇಕೆಂದರೆ ಪುರಂದರದಾಸರು ದೊಡ್ಡವರಾಗುವುದು ಅವರ ರಚನೆಗಳಿಂದಲೇ ಹೊರತು ದಂತಕಥೆಗಳಿಂದಲ್ಲ. ಪುರಂದರದಾಸರು ಲಕ್ಷಗಟ್ಟಲೆ ರಚನೆಗಳನ್ನು ಬರೆದಿದ್ದಾರೆಂಬ ಪ್ರತೀತಿ ಇದ್ದರೂ, ನಮಗೆ ಸಿಕ್ಕಿರುವುದು ಸಾವಿರಗಟ್ಟಲೆಯಲ್ಲಿದೆ ಅಷ್ಟೇ. ಆದರೆ, ನಮಗೆ ದೊರೆತಿರುವ ರಚನೆಗಳಲ್ಲೇ ಅವರ ಕಾಲದ ಜನಜೀವನದ ಬಗ್ಗೆ ನಾವು ಚೆನ್ನಾಗಿ ಅರಿತುಕೊಳ್ಳಬಹುದು - ಅದಕ್ಕೇ ದಾಸಸಾಹಿತ್ಯ ಚರಿತ್ರೆಗೆ ಒಂದು ಕನ್ನಡಿ ಎಂದು ನನ್ನೆಣಿಕೆ. ಅಂದಿನ ದಿನಗಳಲ್ಲಿದ್ದ ಹುಳುಕುಗಳೇ ಆಗಲಿ, ಹಿರಿಮೆಗಳೇ ಆಗಲಿ, ಅವುಗಳನ್ನು ಅರಿತುಕೊಳ್ಳುವುದು, ಶತಮಾನಗಳ
ನಂತರವೂ, ಇವತ್ತಿಗೂ ಕೂಡ ನಮಗೆ ಬಹಳ ಮುಖ್ಯವೇ ಆಗುತ್ತೆ.

ಪುರಂದರರ ರಚನೆಗಳನ್ನು ಸಂಗ್ರಹಿಸುವುದರಲ್ಲಿ ೧೮ನೇ ಶತಮಾನದಲ್ಲಿ ಮುಖ್ಯ ಪಾತ್ರ ವಹಿಸಿದ ವಿಜಯದಾಸರು ಒಂದು ಹಾಡಿನಲ್ಲಿ, ಪುರಂದರದಾಸರು ದಾಸದೀಕ್ಷೆ ತೆಗೆದುಕೊಳ್ಳುವ ಮೊದಲು ವ್ಯಾಪಾರಿಯಾಗಿದ್ದರೆಂದು ಹೇಳುತ್ತಾರೆ. ಪುರಂದರದಾಸರೇ ಕೆಲವು ರಚನೆಗಳಲ್ಲಿ ವ್ಯಾಪಾರದ ಬಗ್ಗೆ ಮಾತಾಡುತ್ತಾರೆ. ಅವುಗಳಲ್ಲಿ ಸ್ವಾನುಭವದ ನೆನಹೂ ಇರಬಹುದೋ ಏನೋ?

ಅಂತಹ ಒಂದು ರಚನೆ ಹೀಗಿದೆ:

ವ್ಯಾಪಾರ ನಮಗಾಯಿತು
ಶ್ರೀಪತಿಯ ಪಾದಾರವಿಂದ ಸೇವೆಯೆಂಬೋ |

ಹರಿಕರುಣವೆ ಅಂಗಿ ಗುರುಕರುಣವೆ ಮುಂಡಾಸು
ಹರಿದಾಸರ ದಯವೆಂಬೋ ವಲ್ಲಿ
ಪರಮಪಾಪಿ ಕಲಿಯೆಂಬೋ ಪಾಪೋಸು ಮೆಟ್ಟಿ
ದುರಾತ್ಮರಾದವರ ಎದೆಮೇಲೆ ನಡೆವಂಥ
|| ವ್ಯಾಪಾರ ನಮಗಾಯಿತು||

ಬಿಳಿಯಕಾಗದ ಹೃದಯ ಬಾಯಿ ಕಲಮದಾನಿ
ನಾಲಿಗೆಯೆಂಬೋದೇ ಲೇಖನಿಯು
ಲೋಲನ ಕಥೆ ನಾಮಂಗಳ
ಶೀಲಮನವಿ ಬರೆದು ಹರಿಗೆ ಒಪ್ಪಿಸುವಂಥ
|| ವ್ಯಾಪಾರ ನಮಗಾಯಿತು||

ಇಲ್ಲಿ ಪುರಂದರದಾಸರು ಬೇರಾವುದೇ ಕೆಲಸದ ಬಗ್ಗೆ ಹೇಳದೆ ವ್ಯಾಪಾರದ ಬಗ್ಗೆ ಮಾತಾಡುವುದು, ಅವರಿಗೆ ವ್ಯಾಪಾರದ ಅನುಭವವಿದ್ದಿರಬಹುದೇ ಎಂಬ ಮಾತಿಗೆ ಇಂಬು ಕೊಡುತ್ತೆ.

ಹೀಗೇ, ಇನ್ನೊಂದು ಉಗಾಭೋಗದಲ್ಲಿ, ಅವರು ಹೇಳುವುದು ಹೀಗೆ:

ಎನ್ನ ಕಡೆಹಾಯಿಸಿರುವುದು ನಿನ್ನ ಭಾರ
ನಿನ್ನ ನಂಬಿ ಬದುಕುವುದು ಎನ್ನ ವ್ಯಾಪಾರ

ಒಟ್ಟಿನಲ್ಲಿ
ಜೀವನವ್ಯಾಪಾರವನ್ನು ಸಾಗಿಸಲು ಹರಿಯ ಮೇಲೆ ಪುರಂದರದಾಸರಿಗೆ ಇದ್ದ ನಂಬಿಕೆಗೆ ಸಾಟಿಯೇ ಇಲ್ಲ ಎನ್ನಬಹುದು. ಈ ದಾಸರ ಆರಾಧನೆಯ ಶುಭದಿನ, ಅವರ ಮಾತುಗಳ ಹೊಳಹನ್ನು ನೆನೆಯುವ ಪ್ರಯತ್ನ ಮಾಡೋದಕ್ಕೆ ಒಳ್ಳೇ ದಿನ ಆಲ್ಲವೇ?

-ಹಂಸಾನಂದಿ

(ಸೂ:ಈ ಬರಹವು ಮಂತ್ರಾಲಯದ ಶ್ರೀ ರಾಘವೇಂದ್ರ ಮಠದಿಂದ ಪ್ರಕಟವಾಗುವ 'ಗುರುಸಾರ್ವಭೌಮ' ಎನ್ನುವ ಮಾಸಪತ್ರಿಕೆ ಗೆಂದು ನಾನು ಬರೆದ 'A Day to Remember' ಎಂಬ ಇಂಗ್ಲಿಷ್ ಬರಹದ ಕನ್ನಡ ಅನುವಾದ)