ಇದು ತಿರುಕನ ಕನಸಲ್ಲ...

ಇದು ತಿರುಕನ ಕನಸಲ್ಲ...

ಸಿನಿಮಾ ಮಾಡೋಣ ಬನ್ನಿ

ಹೊಡೆದಾಟಗಳಿಲ್ಲದ - ರಕ್ತ ಚೆಲ್ಲದ - ಕುತಂತ್ರಗಳಿಲ್ಲದ -

ಆಕರ್ಷಕ - ಸೃಜನಾತ್ಮಕ - ಮನೋರಂಜನಾತ್ಮಕ -

ಮೌಲ್ಯಗಳನ್ನು ಎತ್ತಿ ಹಿಡಿಯುವ ಚಿತ್ರ.

 

ಸಾಹಿತ್ಯ ರಚಿಸೋಣ ಬನ್ನಿ,

ದ್ವೇಷಕಾರದ - ವಿಷಕಕ್ಕದ - ಪ್ರತಿಷ್ಠೆ ಮೆರೆಯದ -

ಚೆಂದದ ಭಾಷೆಯ - ಪ್ರೀತಿಯ ಚುಂಬಕದ - ಮಾನವೀಯ ಬರಹ.

 

ಚಿತ್ರ ಬಿಡಿಸೋಣ ಬನ್ನಿ,

ಆತ್ಮವಂಚನೆಯಿಲ್ಲದ - ಬೆಂಕಿಯುಗುಳದ - ಅಶ್ಲೀಲವಲ್ಲದ  - ಪ್ರಕೃತಿಯ ಮಡಿಲಿನ - ಸೌಂದರ್ಯದ ಬೀಡಿನ - ಮನಮೋಹಕ ದೃಶ್ಯ .

 

ಸಂಗೀತ ನುಡಿಸುತ್ತಾ ಹಾಡೋಣ ಬನ್ನಿ,

ಅಹಂಕಾರಗಳಿಲ್ಲದ - ಪಂಥಬೇದಗಳಿಲ್ಲದ - ಕೃತಿಮತೆಯಿಲ್ಲದ -

ಮನಕೆ ಮುದನೀಡುವ - ಆಹ್ಲಾದಕರ - ಆರಾಧನಾ ಭಾವದಿಂದ.

 

ಪರಿಸರ ಉಳಿಸೋಣ ಬನ್ನಿ,

ವಿಷಗಾಳಿಯಿಲ್ಲದ - ಕಲ್ಮಶನೀರಲ್ಲದ - ಆಹಾರ ಕಲಬೆರಕೆಯಾಗದ -  ಹಚ್ಚಹಸಿರಿನ - ಸ್ವಚ್ಚ ಗಾಳಿಯ - ಶುಧ್ಧ ನೀರಿನ ಪ್ರಕೃತಿ.

 

ಸಂಘಟಿತರಾಗೋಣ ಬನ್ನಿ,

ಸ್ವಾರ್ಥಿಗಳಾಗದ - ಘರ್ಷಣೆಗಳಿಲ್ಲದ - ಸೇವಾಮನೋಭಾವದ -

ತ್ಯಾಗದ - ಪ್ರಾಮಾಣಿಕತೆಯ - ಅರ್ಪಣಾಮನೋಭಾವದ ಸಂಸ್ಥೆಯೊಂದಿಗೆ.

 

ಆಡಳಿತ ನಡೆಸೋಣ ಬನ್ನಿ,

ಭ್ರಷ್ಟತೆಯಿಲ್ಲದ - ದೌರ್ಜನ್ಯಗಳಿಲ್ಲದ - ಅನ್ಯಾಯ ಮಾಡದ - ಸಮಾನತೆ - ಸ್ವಾತಂತ್ರ್ಯ - ಸೋದರತೆಯ ಜೀವಪರ ಸರ್ಕಾರ.

 

ಬದುಕೋಣ ಬನ್ನಿ,

ಚಿಂತೆಗಳಿಲ್ಲದ - ಜಿಗುಪ್ಸೆಗಳಿಲ್ಲದ - ನೋವುಗಳಿಲ್ಲದ -

ನೆಮ್ಮದಿಯ - ಆನಂದದಾಯಕ - ಸುಖದ ಜೀವನ .

 

ಮನುಷ್ಯರಾಗೋಣ ಬನ್ನಿ,

ಕಪಟತನವಿಲ್ಲದ - ದುರ್ಬುದ್ಧಿಗಳಿಲ್ಲದ - ಮನೋವಿಕಾರಗಳಿಲ್ಲದ - 

ಜ್ಞಾನಸ್ಥ - ಧ್ಯಾನಸ್ಥ - ಯೋಗಸ್ಥ - ಕರ್ಮಸ್ಥ - ಜೀವಿಗಳಾಗಿ.

 

ಇದು ತಿರುಕನ ಕನಸಲ್ಲ...

ನನಸಾಗಬಹುದಾದ ನಾಗರೀಕತೆಯ ಹೊಸ ಮನ್ವಂತರ ...

  • ಜ್ಞಾನ ಭಿಕ್ಷಾ ಪಾದಯಾತ್ರೆಯ 155 ನೆಯ ದಿನ ವಿಜಯನಗರ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ವಾಸ್ತವ್ಯದ ಸಮಯದಲ್ಲಿ ಬರೆದ ಬರಹ 

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ: ಇಂಟರ್ನೆಟ್ ತಾಣ