ಒಂದು ಒಳ್ಳೆಯ ನುಡಿ - 138

ಮಹಿಳೆ ಮನೆ ಬೆಳಗುವ ನಂದಾದೀಪ, ಆಕೆ ಜ್ಯೋತಿ, ಸಹನಾ ಮೂರುತಿ, ಕ್ಷಮಯಾಧರಿತ್ರಿ, ಪ್ರಕೃತಿ ಮಾತೆಗೆ ಸರಿಸಮಾನಳು, ಸ್ವಾಸ್ಥ್ಯ ಸಮಾಜದ ಕಣ್ಣು, ಅನ್ನಪೂರ್ಣೆ, ಸಹನೆ ಶಾಂತಿಯ ಪ್ರತೀಕ. ಇದೆಲ್ಲವೂ
ಬರವಣಿಗೆ, ಬಾಯಿಮಾತಿನಲಿ ಮಾತ್ರವೇ, ಅಲ್ಲ ನಿಜವಾಗಿಯೂ ಹೌದೇ ಎಂಬ ಸಂಶಯವೊಂದು ಸುಳಿದಾಡುತ್ತದೆ. ರಣಹದ್ದುಗಳಾಗಿ, ಕಿತ್ತು ತಿನ್ನುವ, ರಕ್ತವನ್ನು ಬಸಿದು, ಹೃದಯಹೀನರಾಗಿ, ಕಣ್ಣಲ್ಲಿ ರಕ್ತವಿಲ್ಲದವರಂತೆ ಶವವಾಗಿಸುವುದು ಎಷ್ಟು ಸರಿ? ಒಂದು ಸಂಸಾರವೆಂದರೆ ಹೆಣ್ಣು ಗಂಡು ಬೇಕೇ ಬೇಕು. ಬಾಯಿ ಬಾರದ ಹಸುಳೆಯ ಮೇಲೆರಗುವ ಪೈಶಾಚಿಕತೆ ಎಂದರೇನು? ಎಷ್ಟು ಅಧೋಗತಿಗೆ ಇಳಿಯಿತು ನಮ್ಮ ಸಾಮಾಜಿಕ ಪ್ರಜ್ಞೆ, ನೈತಿಕ ಮೌಲ್ಯಗಳು. ಇದು ದುರಂತವಲ್ಲವೇ?
ಸಮಾಜದಲ್ಲಿ ಆಕೆಗೆ ಸಮಾನ ಅವಕಾಶಗಳು ಗೌರವಗಳು ಸಿಗಬೇಕೆಂದರೆ, ಅವಳಿಗೂ ಒಂದು ಹೃದಯವಿದೆ, ಸ್ವಾಭಿಮಾನವಿದೆ ಎಂದು ಅರಿತರೆ ಮಾತ್ರ ಸಾಧ್ಯ. ‘ನೀನು ಹೆಣ್ಣು’ ಎಂದು ಮಾತುಮಾತಿಗೂ ಚುಚ್ಚಿದರೆ ಆಕೆ ಚಿಗುರುವುದಾದರೂ ಹೇಗೆ?
ಆಕೆಗೂ ಚೆನ್ನಾಗಿ ವಿದ್ಯಾಭ್ಯಾಸ ಕೊಡಿಸಬೇಕು. ಅವಳೂ ಸಹ ಅರಿತು ನಡೆಯಬೇಕು. ಸ್ವಾತಂತ್ರ್ಯವಿದೆ ಎಂದು ದುರುಪಯೋಗ ಮಾಡಬಾರದು. ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸಗಳಾಗಬೇಕು. ಲಿಂಗ ತಾರತಮ್ಯ ಮನೆಯಿಂದಲೇ ತೊಡೆದು ಹಾಕಬೇಕು. ಬರಿಯ ಆಂದೋಲನ, ಕಡತಗಳಲ್ಲಿದ್ದರೆ ಏನು ಬಂತು? ಅವರ ಓದಿಗಾಗಿ ಹಲವಾರು ಯೋಜನೆಗಳನ್ನು ತರಲಾಯಿತು. ಜನನ ಪೂರ್ವ ಲಿಂಗ ಪರೀಕ್ಷೆ ಸಾರಾಸಗಟಾಗಿ ನಡೆಯುವ ಕಾಲವೊಂದಿತ್ತು. ಈಗ ಶಿಕ್ಷೆ ಕಟ್ಟಿಟ್ಟ ಬುತ್ತಿ. ಗರ್ಭಿಣಿಯರಿಗೆ ತಪಾಸಣೆ, ಆರೋಗ್ಯ ಕಿಟ್ ವಿತರಣೆಯಿಂದ ಆರೋಗ್ಯವಂತ ಮಗುವಿನ ಜನನಕ್ಕೆ ಯೋಜನೆಗಳನ್ನು ರೂಪಿಸಿತು. ಮಹಿಳಾ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಇದರ ವಿರುದ್ಧ ಧ್ವನಿ ಎತ್ತುವ ಕೆಲಸಗಳು, ಸಂಘಸಂಸ್ಥೆಗಳು ಕೈಕೊಂಡವು. ಹೆಣ್ಣು ಮಕ್ಕಳಿಗಾಗಿ ರೂಪಿಸಲ್ಪಟ್ಟ ಕಾನೂನು ಕಾರ್ಯಕ್ರಮಗಳ ವ್ಯಾಪಕ ಪ್ರಚಾರ ಮಾಡಲಾಯಿತು. ಶಿಕ್ಷಣ, ಆರೋಗ್ಯ, ಮದುವೆಯ ವಯಸ್ಸು, ಪೌಷ್ಠಿಕತೆ, ಅಸಮಾನತೆ, ಎಲ್ಲದರ ಬಗ್ಗೆಯೂ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ, ಬೀದಿನಾಟಕಗಳಲ್ಲಿ ಪ್ರಚಾರ ಮಾಡಲಾಯಿತು. ಆದರೂ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಬಹುದು. ಆಕೆಗೂ ಎಲ್ಲರಂತೆ ಬದುಕುವ ಹಕ್ಕಿದೆಯಲ್ಲವೇ? ಆಕೆ ಅಡುಗೆ ಮನೆಗೆ ಸೀಮಿತವೇ? ‘ಹದಿಬದೆಯ ಧರ್ಮದಲ್ಲಿ ಸಂಚಿಯ ಹೊನ್ನಮ್ಮಬರೆದ ಸಾಂಗತ್ಯದಲ್ಲಿ’
*ಪೆಣ್ಣಲ್ಲವೇ ನಮ್ಮನೆಲ್ಲ ಹಡೆದ ತಾಯಿ*
*ಪೆಣ್ಣಲ್ಲವೇ ಪೊರೆದವಳು ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು* ಶಾಲಾ ದಿನಗಳಲ್ಲಿ ಓದಿದ್ದೇವೆ.
ಆಕೆಯನ್ನು ಹೊನ್ನಿನ ಅಂಬಾರಿಯಲ್ಲಿ ಕೂರಿಸಿ ಮೆರವಣಿಗೆ ಮಾಡಬೇಕೆಂದು ಎಂದೂ ಬಯಸುವುದಿಲ್ಲ. ಒಂದಿಷ್ಟು ಮಾನವತೆಯಲ್ಲಿ ನೋಡಿ ಎಲ್ಲರಂತೆ ಬದುಕಲು ಬಿಡಿ. ಇತರ ಹೆಣ್ಣು ಮಕ್ಕಳನ್ನು ನೋಡಿದಾಗ, ಕಾಮನೆಗಳು ಕಾಡಿದಾಗ ಕಣ್ಣೆದುರು ಹೆತ್ತ ತಾಯಿ, ಸಹೋದರಿ ಬರಲಿ.
ಹೆಣ್ಣಿಗೆ ಚೌಕಟ್ಟಿದೆ, ಆದರೆ ಅದರ ಹೊರಗೆ ಕಾಲಿಟ್ಟಾಗ ಸ್ವಾತಂತ್ರ್ಯ, ಸ್ವೇಚ್ಛಾಚಾರ ಆ ಪದಗಳ ಅರ್ಥ ಆಕೆಗೆ ತಿಳಿದಿರಬೇಕು. ಇಂದಿನ ದಿನ ದುಡಿತ ಅನಿವಾರ್ಯ. ಮನೆ, ಕಛೇರಿ ಎಲ್ಲಾ ಕಡೆಯೂ ಆಕೆಗೆ ರಕ್ಷಣೆ, ಬೆಂಗಾವಲಾಗಿ ಸಮಾಜದಲ್ಲಿ ಸ್ಪಂದನ ದೊರೆತರೆ ಆಕೆಗೆಂದೂ ಕಷ್ಟವಿಲ್ಲ. ನೋಡುವ ದೃಷ್ಟಿಗಳು ಬದಲಾಗಬೇಕು ಅಷ್ಟೆ. ಒಂದು ಕಾಲಕ್ಕೆ ತೊಂದರೆಗಳು, ವೈರಿ ಆಕ್ರಮಣಗಳು ನಡೆದಾಗ ರಾಜ್ಯದ ಆಡಳಿತ ಸೂತ್ರವನ್ನು ಕೈಗೆತ್ತಿಕೊಂಡು ಯಶಸ್ವಿಯಾದ ಭವ್ಯ ಪರಂಪರೆ ನಮ್ಮದು. ಇಡೀ ವಿಶ್ವದಲ್ಲಿ ಇಂತಹ ಅನೇಕ ಉದಾಹರಣೆ ಆಗಿ ಹೋಗಿದೆ. ಆಕೆಯ ದೇಹ ಪ್ರಕೃತಿ ಭಿನ್ನ ಒಪ್ಪೋಣ. ಆದರೂ ಎಲ್ಲಾ ಕ್ಷೇತ್ರದಲ್ಲೂ ಕಾಲಿಟ್ಟ ಆಕೆಯ ಧೈರ್ಯ, ಸ್ಥೈರ್ಯ, ಮಾನಸಿಕ ಮಟ್ಟಕ್ಕೊಂದು ಸೆಲ್ಯೂಟ್.
ಬಾಪೂಜಿ, ಶಿವಾಜಿ, ಬಾಲಕ ನರೇಂದ್ರ ಇವರೆಲ್ಲರ ಜೀವನ ಚರಿತ್ರೆಗಳನ್ನು ಓದಿದಾಗ ತಾಯಿಯಿಂದ ಪ್ರೇರಣೆ ಪಡೆದವರು. ಸಮಾಜಕ್ಕೆ ಮಹಿಳೆ ಏನು ಕೊಡುಗೆ ನೀಡಿದ್ದಾಳೆ ಎಂಬುದರ ಅವಲೋಕನ ಮಾಡುವ ದಿನ. ಜೀವಜಗತ್ತಿನ ಅದ್ಭುತ ಸೃಷ್ಟಿ ಆಕೆ.ಇತಿಹಾಸದ ಪುಟಗಳ ತಿರುವಿ ಹಾಕಿದರೆ ರಣರಂಗದಲ್ಲಿ ಸಹ ನಿಂತು ಹೋರಾಡಿದ, ಆಡಳಿತ ನಡೆಸಿದ ಗಟ್ಟಿಗಿತ್ತಿ ಆಕೆ. ಹೆಣ್ಣಿಲ್ಲದ ಬದುಕನ್ನು ಊಹಿಸಲೂ ಸಾಧ್ಯವಿಲ್ಲ. ತನ್ನತನ ಏನೆಂಬುದನ್ನು ಅರಿತು ನಡೆದಾಗ ಎಲ್ಲವೂ ಕ್ಷೇಮವೇ. ನೋಡುವ ದೃಷ್ಟಿ ಬದಲಾಗಬೇಕು. ಯಾರೋ ಏನೋ ಹೇಳಿದರೆಂದು ಕೂರುವುದು ಸರಿಯಲ್ಲ. ವೈಚಾರಿಕ ಭೇದಗಳನ್ನು ಸರಿದೂಗಿಸಿಕೊಂಡು ಹೋಗುವುದು ಮುಖ್ಯ. ಅನುಕಂಪ, ತುಳಿತ ಬೇಡ, ಪ್ರೋತ್ಸಾಹ ಮತ್ತು ಅವಕಾಶವಿರಲಿ.
ಮನೆಯ ಒಂದು ಗಾಲಿ ಕಳಚಿದರೂ ಏರುಪೇರಾಗಬಹುದು. ಪುರುಷ-ಮಹಿಳೆ ಎಂಬ ಎರಡು ಗಾಲಿಗಳು ಒಂದು ಮನೆಯ ಆಧಾರ ಸ್ತಂಭಗಳು. ‘ಹೆಣ್ಣಿನ ಬಾಳಲ್ಲಿ ಕಣ್ಣೀರು ಬಾರದಂತೆ’ ಆಕೆಯನ್ನು ಪ್ರೀತಿ,ಮಮಕಾರ,ವಿಶ್ವಾಸ,ನಂಬಿಕೆಯೆಂಬ ಆಭರಣಗಳಿಂದಲಂಕರಿಸಿ ಬದುಕಲು ಅನುವು ಮಾಡಿಕೊಡಬೇಕು. ಅದು ಅವಳ ಹಕ್ಕು ಸಹ.ಎಲ್ಲಾ ಹೆಣ್ಣು ಮಕ್ಕಳಿಗೂ ಶುಭಾಶಯಗಳು.
-ರತ್ನಾ ಕೆ.ಭಟ್,ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ