ಒಂದು ಒಳ್ಳೆಯ ನುಡಿ - 186

* ನಾವು ಮಾಡುವ ಕೆಲಸ ಕಾರ್ಯ, ನಿತ್ಯದ ದುಡಿಮೆಯೇ ನಾವು ನಂಬಿಕೊಂಡು ಬಂದ ದೇವರು. ಅದನ್ನು ಅಪವಿತ್ರಗೊಳಿಸದೆ, ಅಪಮಾನಮಾಡದೆ ಬಾಳುವುದೇ ಬದುಕು.
* ಇನ್ನೇನು ಕನ್ನಡಮ್ಮನ ಬಗ್ಗೆ ಹಾಡಿ ಹೊಗಳಲು ಪದಗಳು ಸಾಲದು ಎಂಬ ಹಾಗೆ ಕನ್ನಡ ರಾಜ್ಯೋತ್ಸವದ ಬೆಳಗಿಗೆ ಒಂದಿರುಳೇ ಇರುವುದು. ಈ ಸಮಯದಲ್ಲಾದರೂ ಶುದ್ಧಕನ್ನಡ ಭಾಷೆಯಲ್ಲಿ ವ್ಯವಹರಿಸಿ, ನಾಡುನುಡಿ, ನೆಲಜಲ, ತಾಯಿಋಣ ತೀರಿಸೋಣ.
* ಬರೆಯೋಣ, ಓದೋಣ, ಬೆಳಗಿಸೋಣ, ಕಲಿಯೋಣ, ಕಲಿಸೋಣ ತಾಯಿಭಾಷೆಯ, ಹೊನ್ನುಡಿಯ, ಚೆಲ್ನುಡಿಯ, ನಲ್ನುಡಿಯ.ಮಾತಿನಲ್ಲಿ ಹೇಳಿದರೆ ಸಾಲದು, ಕೃತಿಯಲ್ಲೂ ಅನುಷ್ಠಾನಗೊಳ್ಳಬೇಕು.
* ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು, ತನು ಕನ್ನಡ, ಮನ ಕನ್ನಡ, ಧನ ಕನ್ನಡವೆಮ್ಮವು, ರತ್ನದ, ಎಂದೆಂದೂ ಶಾಶ್ವತವಾದ, ನಮ್ಮ ಕನ್ನಡ ನಾಡಿನ ಹಿರಿಯ ಸಾಹಿತಿಗಳು ಬರೆದ ಸಾಲುಗಳಿವು. ಈ ಜಗದ ಬಾಳೆಂಬ ತೋಟದಲ್ಲಿ ನಾವೆಲ್ಲ ಒಂದೇ ತಾಯಿಯ ಮಕ್ಕಳು, ಒಂದೇ ಮಣ್ಣಿನ ಒಕ್ಕಲು ಮರೆಯದಿರೋಣ.
* ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ಕನ್ನಡ ನಾಡು.ಹೊಂದಿಕೊಂಡು ಬಾಳುವುದೇ ಬದುಕು, ಜೀವನ. ಎಲ್ಲಾ ಭಾಷಿಗರನ್ನೂ ಒಪ್ಪೋಣ, ಸ್ವೀಕರಿಸೋಣ, ನಮ್ಮ ನಾಡಭಾಷೆ ಕನ್ನಡವನ್ನು ಕಲಿಯುವಂತೆ ಪ್ರೇರೇಪಿಸೋಣ.
* ಹಲವು ಕವಿಗಳ ಬೀಡಿದು, ವೀರ ಶೂರರ ನಾಡಿದು, ನಮ್ಮ ಕನ್ನಡ ನಾಡಿದು ಎಷ್ಟು ಸತ್ಯವಲ್ಲವೇ? ಇವರೆಲ್ಲರ ನೆರಳಿನಡಿ ಬೆಳೆದ ನಾವು ಚಿಕ್ಕ ಬಿಂದುವಾಗಿ ಸಾಹಿತ್ಯದ ಕೈಂಕರ್ಯ ಮಾಡಿ ಕನ್ನಡಮ್ಮನ ಸೇವೆಯನ್ನು ಮಾಡೋಣ.
* ಕನ್ನಡವೇ ಶಕ್ತಿ ,ಕನ್ನಡವೇ ಯುಕ್ತಿ, ಕನ್ನಡವೇ ಮುಕ್ತಿ. ಕನ್ನಡ ನಾಡಿಗಾಗಿ,ಕನ್ನಡಮ್ಮನ ಸೇವೆಗಾಗಿ,ಅನವರತ ದುಡಿಯೋಣ. ಅಕ್ಷರ ದೋಷವಿಲ್ಲದೆ ಬರೆಯಲು ಕಲಿಯೋಣ, ಕಲಿಸೋಣ.
* ಕನ್ನಡವೆಂದರೆ ಹೊತ್ತ ಹೆತ್ತಬ್ಬೆಗೆ ಸಮ. ಕನ್ನಡ ತಾಯಿ ದೇವತೆ. "ನನ್ನ ಜೀವವನ್ನು ನಿನ್ನಡಿಯ ಸೇವೆಯೊಳ್ ಮುಡಿಪಾಗಿಡುವೆ". ಹಿರಿಯ ಸಾಹಿತಿಗಳ ನುಡಿಯಲ್ಲಿ ಎಷ್ಟೊಂದು ತಿರುಳಿದೆಯಲ್ಲವೇ? ಬನ್ನಿ ಬಂಧುಗಳೇ, ಒಂದಾಗಿ ದುಡಿಯೋಣ ಮಾತೃಭಾಷೆಯ ಉಳಿವಿಗಾಗಿ ಶ್ರಮವಹಿಸೋಣ.
-ರತ್ನಾ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ