ಕಗ್ಗ ದರ್ಶನ – 25 (2)

ಕಗ್ಗ ದರ್ಶನ – 25 (2)

ದುಡಿ ಲೋಕದಲಿ ಮರುಳೆ ದುಡಿದೊಡಲ ಸವೆಯಿಸೈ
ಒಡಲು ಸವೆದಂತೆ ಮನದಲಗು ಸವೆಯುವುದು
ಸಡಗರವು ಕುಗ್ಗುತಿರೆ ಬುದ್ಧಿ ಕಳೆಯೇರುವುದು
ಬೆಡಗುವಡೆಯುವುದಾತ್ಮ – ಮರುಳ ಮುನಿಯ
“ಮರುಳೆ, ದುಡಿ ಲೋಕದಲಿ; ದುಡಿದೊಡಲ ಸವಿಯಿಸೈ.” ಇದು, ಮುಂಚಿನ ಮುಕ್ತದದಲ್ಲಿ ನೀಡಿದ ಸಂದೇಶಕ್ಕೆ ಪೂರಕವಾಗಿ ಈ ಮುಕ್ತಕದಲ್ಲಿ ಮಾನ್ಯ ಡಿ.ವಿ.ಜಿ.ಯವರು ನೀಡುವ ಸಂದೇಶ.
ಲೋಕದಲ್ಲಿ ಈ ದೇಹ (ಒಡಲು) ಸವೆಯುವಂತೆ ದುಡಿ ಮರುಳೇ ಎಂಬುದವರ ಹಿತನುಡಿ. ಯಾಕೆಂದರೆ, ಒಡಲು ಸವೆದಂತೆ ನಮ್ಮ ಮನಸ್ಸೆಂಬ ಕತ್ತಿಯ ಹರಿತವೂ ಸವೆಯುತ್ತದೆ. ಹಾಗೆ ಮಾಡದಿದ್ದರೆ ನಾವು ಆಗಾಗ ಮನಸ್ಸಿನ ಏರುಪೇರುಗಳಿಗೆ ಒಳಗಾಗುತ್ತೇವೆ. ಆವೇಶದಿಂದ ವರ್ತಿಸುತ್ತೇವೆ; ಉದ್ವೇಗಕ್ಕೆ ಬಲಿಯಾಗುತ್ತೇವೆ. ನಮ್ಮ ಒಡಲು ಸವೆಯುವಂತೆ ದುಡಿಯದಿರುವುದೇ ಈ ಜಗತ್ತಿನ ಹಲವು ಅನಾಹುತಗಳಿಗೆ ಕಾರಣ ಅನಿಸುತ್ತದೆ.
ಮನೆಯ ಕೆಲಸಗಳನ್ನೇ ಗಮನಿಸಿ. ದಶಕಗಳ ಮುಂಚೆ ಬಾವಿಯಿಂದ ನೀರು ಸೇದಿ, ಮನೆಗೆ ತರುವುದು. ಬಟ್ಟೆ ಹಾಗೂ ಉಡುಪು ಕೈಗಳಿಂದ ಒಗೆಯುವುದು,ಅಡುಗೆಗಾಗಿ ಅರೆಯುವ ಕಲ್ಲಿನಿಂದ ಅರೆಯುವುದು, ಧಾನ್ಯ ಬೀಸಿ ಹಿಟ್ಟು ಮಾಡುವುದು – ಇವೆಲ್ಲ ಕೆಲಸಗಳಿದ್ದವು. ಈಗ ಇಂಥ ಕೆಲಸಗಳನ್ನು ಯಂತ್ರಗಳಿಂದ ಮಾಡಲಾಗುತ್ತಿದೆ.
ತಂತ್ರಜ್ನಾನವಂತೂ ಹಲವು ಕೆಲಸಗಳನ್ನು ಸುಲಭವಾಗಿಸಿದೆ; ವೇಗವಾಗಿಸಿದೆ. ಮುಂಚೆ ಬಸ್, ರೈಲ್, ವಿಮಾನ ಟಿಕೆಟ್ ಕಾದಿರಿಸಲು ಗಂಟೆಗಟ್ಟಲೆ ಕಾಯಬೇಕಾಗಿತ್ತು; ಈಗ ನಮ್ಮ ಕೈಯಲ್ಲಿರುವ ಮೊಬೈಲಿನಿಂದಲೇ ಈ ಕೆಲಸ ಸಾಧ್ಯ. ಅದೊಂದು ಕಾಲವಿತ್ತು; ಫೋನಿನಲ್ಲಿ ದೂರದೂರಿಗೆ ಮಾತಾಡಲು ಗಂಟೆಗಟ್ಟಲೆ ಕಾಯಬೇಕಾಗಿದ್ದ ಕಾಲ. ಈಗ ಪ್ರಪಂಚದ ಯಾವುದೇ ಮೂಲೆಯ ವ್ಯಕ್ತಿಯೊಂದಿಗೆ ನಿಮಿಷದೊಳಗೆ ಫೋನ್ ಸಂಪರ್ಕ ಸಾಧ್ಯ. ಹಿಂದಿನ ದಿನಗಳಲ್ಲಿ ಮಾಹಿತಿ ತಿಳಿಸಲು ಪತ್ರ ಬರೆದು ಉತ್ತರಕ್ಕಾಗಿ ದಿನಗಟ್ಟಲೆ ಕಾಯಬೇಕಿತ್ತು. ಈಗ ಎಸ್ಎಂಎಸ್, ಇ-ಮೆಯಿಲ್ ಅಥವಾ ವಾಟ್ಸಪ್ ಮೂಲಕ ಹತ್ತಾರು ಜನರಿಗೆ ತಕ್ಷಣವೇ ಮಾಹಿತಿ ರವಾನಿಸಿ, ತಕ್ಷಣವೇ ಹಿಮ್ಮಾಹಿತಿ ಪಡೆಯಲೂ ಸಾಧ್ಯ.
ಇದೆಲ್ಲದರಿಂದಾಗಿ ನಮ್ಮ ಕಾಯಕ ಕಡಿಮೆಯಾಗಿದೆ. ಹಾಗಾಗಿ ಮನದಲಗು ಸವೆಯುತ್ತಿಲ್ಲ. ಮನದ ಮೊನಚು ಕುಗ್ಗಿದರೆ, ನಮ್ಮ ಅರ್ಥವಿಲ್ಲದ ಸಡಗರಗಳೂ ಕುಗ್ಗಿ, ಬುದ್ಧಿ ಕಳೆಯೇರುತ್ತಿತ್ತು. ಅದರಿಂದಾಗಿ ನಮ್ಮ ಆತ್ಮ ಬೆಡಗು ಪಡೆಯುತ್ತಿತ್ತು. ಈಗ ಹಾಗಾಗುತ್ತಿಲ್ಲ. ಕಾಯಕ ಕಳಕೊಂಡು ನಾವು ಆತ್ಮೋನ್ನತಿಯ ದಾರಿಯನ್ನೂ ಕಳೆದುಕೊಂಡಿದ್ದೇವೆ ಅನಿಸುತ್ತದೆ. ಇನ್ನಾದರೂ ಬದಲಾಗೋಣ.

Comments

Submitted by kavinagaraj Mon, 06/25/2018 - 12:32

ಮುಕುಂದೂರು ಸ್ವಾಮಿಗಳ ಮಾತು ನೆನಪಾಗುತ್ತದೆ: ’ಮುದ್ದೆ ಮುರಿಯೋಕ್ ಮುಂಚೆ ಅದಕ್ಕೆ ತಕ್ಕಂಗೆ ಗೇಮೆ ಮಾಡಿದೀನಾ ಅಂತ ಕೇಳ್ಕೊಳ್ರಪ್ಪಾ’. ದಿವ್ಯ ಸಂದೇಶ.