ಕಗ್ಗ ದರ್ಶನ – 38 (2)

ಕಗ್ಗ ದರ್ಶನ – 38 (2)

ಆವೊಂದು ವಸ್ತುವಂ ಪೂರ್ಣದಿಂ ತಿಳಿದಿರಲು
ಜೀವಿತದ ಮಿಕ್ಕೆಲ್ಲಮಂ ತಿಳಿಯಲಹುದೋ
ಆ ವಿದ್ಯೆಯಂ ಗಳಿಸು ಮೊದಲೆಲ್ಲಕಿಂತಲದು
ದೀವಿಗೆಯೊ ಬಾಳಿರುಳ್ಗೆ – ಮರುಳ ಮುನಿಯ
ಯಾವ ಒಂದು ವಸ್ತುವನ್ನು ನೀನು ಸಂಪೂರ್ಣವಾಗಿ ತಿಳಿದುಕೊಂಡರೆ, ಜೀವನದ ಮಿಕ್ಕೆಲ್ಲವನ್ನು ತಿಳಿಯಲು ಸಾಧ್ಯವೋ, ಆ ವಿದ್ಯೆಯನ್ನು ಎಲ್ಲದಕ್ಕಿಂತಲೂ ಮುಂಚೆ ಗಳಿಸು; ಅದು ನಿನ್ನ ಬಾಳಿನ ಕತ್ತಲಿಗೆ (ಇರುಳಿಗೆ) ಬೆಳಕು ಬೀರುವ ದೀವಿಗೆಯಾಗುತ್ತದೆ ಎನ್ನುತ್ತಾರೆ ಮಾನ್ಯ ಡಿ.ವಿ.ಗುಂಡಪ್ಪನವರು. ವೇದ, ಉಪನಿಷತ್ತುಗಳ ರೂಪದಲ್ಲಿರುವ ಭರತಖಂಡದ ಪ್ರಾಚೀನಜ್ನಾನ ಅಗಾಧ. ಇಂತಹ ಜ್ನಾನಸಾಗರದಲ್ಲಿ ಯಾವುದೋ ಒಂದನ್ನು ಆಮೂಲಾಗ್ರವಾಗಿ ಅರ್ಥ ಮಾಡಿಕೊಂಡರೆ, ಉಳಿದ ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ಸಾಧ್ಯ. ಜ್ನಾನಾರ್ಜನೆಯ ಈ ಗುಟ್ಟನ್ನು ಅರಿತವರು ತಮ್ಮ ಪುಟ್ಟ ಬದುಕಿನಲ್ಲಿಯೇ ಅಗಾಧ ಸಾಧನೆ ಮಾಡಿದರು.
ಕೇರಳದ ಕಲಡಿಯಲ್ಲಿ ಕ್ರಿಶ ೭೮೮ರಲ್ಲಿ ಹುಟ್ಟಿದ ಆದಿ ಶಂಕರಾಚಾರ್ಯರು ಅವರಲ್ಲೊಬ್ಬರು. ಬಾಲ್ಯದಿಂದಲೇ ಅಧ್ಯಾತ್ಮದಲ್ಲಿ ಆಸಕ್ತರಾಗಿದ್ದ ಶಂಕರಾಚಾರ್ಯರು, ಸನ್ಯಾಸಿಯಾಗಿ ಬದುಕಿದರು. ಗೋವಿಂದ ಭಗವತ್ಪಾದರನ್ನು ತನ್ನ ಗುರುವಾಗಿ ಸ್ವೀಕರಿಸಿ, ಯೋಗದ ಅಧ್ಯಯನದಲ್ಲಿ ತೊಡಗಿದರು. ಬ್ರಹ್ಮಜ್ನಾನ ಪಡೆದು ಆದಿ ಶಂಕರಾಚಾರ್ಯ ಎಂದೆನಿಸಿದರು. ಎಲ್ಲ ವೇದಗಳು ಮತ್ತು ಉಪವೇದಗಳಿಗೆ ಭಾಷ್ಯ ಬರೆದವರು ಅವರೊಬ್ಬರೇ ಎಂಬುದು ಅವರ ಪ್ರಗಲ್ಭ ಪಾಂಡಿತ್ಯದ ಪುರಾವೆ. ಅದ್ವೈತ ಸಿದ್ಧಾಂತವನ್ನು ಪ್ರಚಾರ ಮಾಡಲಿಕ್ಕಾಗಿ ಭಾರತದಲ್ಲಿ ಯಾತ್ರೆ ಮಾಡಿದರು; ಕೇರಳದಿಂದ ಕಾಶ್ಮೀರದ ವರೆಗೆ ಮತ್ತು ಮಧ್ಯಭಾರತದಿಂದ ಅಸ್ಸಾಂನ ವರೆಗೆ. ಭಾರತದ ೪ ಮೂಲೆಗಳಲ್ಲಿ ನಾಲ್ಕು ಶಂಕರಪೀಠಗಳನ್ನು ಸ್ಥಾಪಿಸಿದರು. ಕ್ರಿಶ ೮೨೦ರಲ್ಲಿ ೩೨ನೆಯ ವಯಸ್ಸಿನಲ್ಲೇ ಇಹಲೋಕದ ಯಾತ್ರೆ ಮುಗಿಸಿದರು.
ಇನ್ನೊಬ್ಬ ಮಹಾನ್ ಸಾಧಕ ಸ್ವಾಮಿ ವಿವೇಕಾನಂದ. ಭಾರತದ ಅತ್ಯಂತ ಪ್ರಭಾವಿ ಅಧ್ಯಾತ್ಮಿಕ ಗುರು. ನರೇಂದ್ರನಾಥ ದತ್ತರ ಮಗನಾಗಿ ೧೨.೧.೧೮೬೩ರಲ್ಲಿ ಕಲ್ಕತ್ತಾದಲ್ಲಿ ಅವರ ಜನನ. ಮೆಟ್ರಿಕ್ ಪಾಸಾದ ಬಳಿಕ ಅವರು ಕಲಿತದ್ದು ತತ್ವಶಾಸ್ತ್ರ. ಅನಂತರ ರಾಮಕೃಷ್ಣ ಪರಮಹಂಸರನ್ನು ಗುರುವಾಗಿ ಸ್ವೀಕಾರ. ಗುರುವಿನ ಮರಣಾನಂತರ ರಾಮಕೃಷ್ಣ ಮಠ ಸ್ಥಾಪಿಸಿ, ೧೮೯೦ರಲ್ಲಿ ಹಿಂದೂ ಧರ್ಮದ ಪುನರುಜ್ಜೀವನಕ್ಕಾಗಿ ಭಾರತದ ಉದ್ದಗಲದಲ್ಲಿ ಸುತ್ತಾಟ. ೧೮೯೩ರಲ್ಲಿ ಅಮೆರಿಕದ ಚಿಕಾಗೋದಲ್ಲಿ ಜಾಗತಿಕ ಧಾರ್ಮಿಕ ಸಮ್ಮೇಳನದಲ್ಲಿ ತಮ್ಮ ಪ್ರಖರ ಭಾಷಣದಿಂದಾಗಿ ವಿಶ್ವವಿಖ್ಯಾತ. ಭಾರತಕ್ಕೆ ಮರಳಿದ ಬಳಿಕ ೧೮೯೭ರಲ್ಲಿ ರಾಮಕೃಷ್ಣ ಮಿಷನಿನ ಸ್ಥಾಪನೆ. ೪.೭.೧೯೦೨ರಲ್ಲಿ ೩೯ನೆಯ ವಯಸ್ಸಿನಲ್ಲೇ ವಿಧಿವಶರಾಗುತ್ತಾರೆ. ಇವರಿಬ್ಬರು ಮಹಾನ್ ಚೇತನಗಳು ಈ ಮುಕ್ತಕದ ಸಂದೇಶದ ಅದ್ಭುತ ನಿದರ್ಶನಗಳು.