ಕನ್ನಡ ಭಾಷೆ ಬಳಸಿದರೆ ಮಾತ್ರ ಉಳಿದೀತು...!

ಕನ್ನಡ ಭಾಷೆ ಬಳಸಿದರೆ ಮಾತ್ರ ಉಳಿದೀತು...!

ಇದೋ ನವೆಂಬರ್ ತಿಂಗಳು ಬಂತು, ಕರ್ನಾಟಕ ರಾಜ್ಯೋತ್ಸವದ ದಿನವಾದ ನವೆಂಬರ್ ೧ನ್ನು ರಾಜ್ಯಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಹಲವರಿಗೆ ಕನ್ನಡ ಎಂದರೆ ಭಾಷೆ ಮಾತ್ರವಲ್ಲ ಅದು ಜೀವನ. ನಾವು ಕನ್ನಡ ಭಾಷೆಯನ್ನು ನಿರಂತರವಾಗಿ ನಮ್ಮ ಆಗುಹೋಗುಗಳಲ್ಲಿ ಬಳಸಿದರೆ ಮಾತ್ರ ಕನ್ನಡ ಭಾಷೆ ಉಳಿದೀತು. ಹೇಗೆ ಅಂತೀರಾ? ನಮ್ಮ ರಾಜ್ಯದಲ್ಲಿ ವಾಸಿಸುವ ಜನರು ತಮ್ಮ ಮಾತೃಭಾಷೆಯಾಗಿ ಕನ್ನಡವನ್ನು ಬಳಸುವವರು ಬಹಳಷ್ಟು ಮಂದಿ ಇದ್ದರೂ, ಉಳಿದ ಭಾಷೆಗಳನ್ನು ಮಾತೃಭಾಷೆಯಾಗಿ ಬಳಸುವವರೂ ಸಾಕಷ್ಟು ಮಂದಿ ಇದ್ದಾರೆ.

ಉದಾಹರಣೆಗೆ ನಾವು ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗೆ ಬಂದರೆ ಇಲ್ಲಿ ಮನೆ ಭಾಷೆಯಾಗಿ ಕನ್ನಡ ಮಾತನಾಡುವವರು ಬಹಳ ಕಡಿಮೆ. ತುಳು, ಕೊಂಕಣಿ, ಬ್ಯಾರಿ ಭಾಷೆ, ಮಲಯಾಳಂ, ಹವ್ಯಕ ಕನ್ನಡ, ಕುಂದ ಕನ್ನಡ ಹೀಗೆ ಪೂರ್ಣ ಪ್ರಮಾಣದ ಕನ್ನಡ ಭಾಷಿಕರು ಸಿಗುವುದು ಬಹಳ ಕಡಿಮೆ. ಹಾಗೆಂದು ಇವರಿಗೆ ತಮ್ಮ ಮಾತೃಭಾಷೆಯನ್ನು ತ್ಯಜಿಸಿ ಕನ್ನಡವೇ ಮಾತನಾಡಿ ಎಂದು ಹೇಳಲು ಸಾಧ್ಯವೇ? ಖಂಡಿತಕ್ಕೂ ಸಾಧ್ಯವಿಲ್ಲ. ಈ ಕಾರಣದಿಂದ ನಾವು ಕನ್ನಡವನ್ನು ಉಳಿಸಲು ಕನ್ನಡವನ್ನು ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲಲ್ಲಿ ಬಳಸಬೇಕಾಗಿದೆ. ಉದಾಹರಣೆಗೆ ನಮ್ಮ ಬರವಣಿಗೆಯಲ್ಲಿ ಕನ್ನಡ ಭಾಷೆ ಬಳಸಬಹುದು. ಮನೆಯಿಂದ ಹೊರಗಡೆ ಕನ್ನಡದಲ್ಲೇ ಮಾತನಾಡಬಹುದು. ವ್ಯವಹಾರಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬಹುದು. ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಆಂಗ್ಲಭಾಷೆಯನ್ನು ಬದಿಗಿಟ್ಟು ಕನ್ನಡದಲ್ಲಿ ಮಾತನಾಡಬಹುದು. ಕೆಲವು ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಗಳು ತಮ್ಮ ಶಾಲೆಯಲ್ಲಿ ಕನ್ನಡ ಅಥವಾ ಇನ್ಯಾವುದೇ ಭಾಷೆ (ಆಂಗ್ಲ ಭಾಷೆ ಹೊರತು ಪಡಿಸಿ) ಮಾತನಾಡಿದರೆ ದಂಡವನ್ನೂ ಹಾಕುತ್ತಾರೆ. ಇದು ನಿಲ್ಲಬೇಕು. ಕನ್ನಡ ಮಾತನಾಡಿದರೆ ಪ್ರೋತ್ಸಾಹಿಸಬೇಕು. ಆಗ ಆಂಗ್ಲ ಮಾಧ್ಯಮ ಶಾಲೆಗಳು ಇನ್ನಷ್ಟು ಮಕ್ಕಳ ಸ್ನೇಹಿಯಾಗಿರುತ್ತವೆ. ವಿದ್ಯಾರ್ಜನೆಗೆ ಆಂಗ್ಲ ಭಾಷೆ ಬಳಸಿದರೂ, ಮಾತುಕತೆಗೆ ಅಥವಾ ಸಂವಹನಕ್ಕಾಗಿ ಕನ್ನಡ ಬಳಸಬಹುದು. 

ಸುಮಾರು ಎರಡು-ಮೂರು ದಶಕಗಳ ಹಿಂದೆ ಬಹುತೇಕ ಮಂದಿ ಸಂವಹನ-ಸಂಪರ್ಕಕ್ಕಾಗಿ ಪತ್ರಗಳನ್ನು ಬರೆಯುತ್ತಿದ್ದರು. ಈ ಖಾಸಗಿ ಪತ್ರಗಳು ಕನ್ನಡದಲ್ಲೇ ಇರುತ್ತಿದ್ದವು. ಈಗಲೂ ಸರಕಾರಗಳು ಕಳಿಸುವ ಸುತ್ತೋಲೆ, ವರದಿ ಮುಂತಾದುವುಗಳು ಕನ್ನಡ ಭಾಷೆಯಲ್ಲೇ ಇರುತ್ತವೆ. ಕ್ರಮೇಣ ಮೊಬೈಲ್ ಬಂದ ಬಳಿಕ ಪತ್ರಗಳನ್ನು ಬರೆಯುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು. ಮಾತುಗಳು ಮೊಬೈಲ್ ನಲ್ಲೇ ನಡೆಯಲು ಪ್ರಾರಂಭವಾದವು. ಮೊಬೈಲ್ ಮೊದಲಿಗೆ ಬಂದಾಗ ಅದರಲ್ಲಿ ಇಂಗ್ಲಿಷ್ ಭಾಷೆಯನ್ನು ಮಾತ್ರ ಬಳಸುವ ತಂತ್ರಜ್ಞಾನವಿತ್ತು. ಆಗೆಲ್ಲಾ ಎಸ್ ಎಂ ಎಸ್ (ಸಂದೇಶ) ಗಳು ಆಂಗ್ಲ ಭಾಷೆಯಲ್ಲೇ ಕಳಿಸಬೇಕಿತ್ತು. ನಂತರ ಸ್ಮಾರ್ಟ್ ಫೋನ್ ಗಳು ಬಂದ ಬಳಿಕ ಕನ್ನಡ ಕೀಪ್ಯಾಡ್ ಬಳಸಿ ಕನ್ನಡ ಭಾಷೆಯಲ್ಲಿ ವಾಟ್ಸಾಪ್ ಮೆಸೇಜ್ ಮಾಡುವುದು ಸುಲಭವಾಯಿತು. ನಾವು ಸಾಧ್ಯವಾದಷ್ಟು ಖಾಸಗಿ ಮಾತುಕತೆಗಳಿಗೆ, ಸಂದೇಶಗಳನ್ನು ಕಳುಹಿಸಲು ಕನ್ನಡ ಭಾಷೆಯನ್ನೇ ಬಳಸಬೇಕು. ಕನ್ನಡ ಮಾತುಗಳನ್ನು ಆಂಗ್ಲ ಭಾಷೆಯಲ್ಲಿ ಅಚ್ಚಿಸಿ ಕಳುಹಿಸಿದರೆ ಸ್ವಾರಸ್ಯವೇನು? ಅದನ್ನೇ ಕನ್ನಡ ಭಾಷೆಯಲ್ಲೇ ಬರೆದು ಕಳಿಸಿದರೆ, ಆ ಸಂದೇಶಕ್ಕೂ ಒಂದು ತೂಕ ಬರುತ್ತದೆ. ಹೀಗೆ ನಾವು ಮೊಬೈಲ್ ಮೂಲಕ ಕನ್ನಡವನ್ನು ದಿನಬಳಕೆಯ ಭಾಷೆಯಾಗಿ ಬಳಸಬಹುದಾಗಿದೆ.

ಸುಮಾರು ಮೂರು ದಶಕಗಳ ಹಿಂದಿನ ಒಂದು ಘಟನೆ ಹೇಳುವೆ, ಆಗ ಎಲ್ಲಾ ಸಂದೇಶಗಳು ಬಹುತೇಕ ಅಂಚೆ ಪತ್ರಗಳ ಮೂಲಕವೇ ಆಗುತ್ತಿತ್ತು. ಸ್ಥಿರ ದೂರವಾಣಿಗಳು ದುಬಾರಿ ಹಾಗೂ ಎಲ್ಲರ ಮನೆಯಲ್ಲಿ ಇರಲೂ ಇಲ್ಲ. ನಾನು ಕಾಲೇಜ್ ನಲ್ಲಿ ಕಲಿಯುತ್ತಿರುವ ಸಮಯದಲ್ಲಿ ಒಂದು ಪುಸ್ತಕವನ್ನು ತರಿಸಿಕೊಳ್ಳಲು ಮನಿ ಆರ್ಡರ್ ಮಾಡಲು ಅಂಚೆ ಇಲಾಖೆಗೆ ಹೋದೆ. ಅಲ್ಲಿ ಆಗ ಲಭ್ಯ ಇರುವ ಅರ್ಜಿಯಲ್ಲಿ ಆಂಗ್ಲ ಭಾಷೆ ಮತ್ತು ಹಿಂದಿ ಭಾಷೆಗಳದ್ದೇ ದರ್ಬಾರು. ಆಗ ವಿದ್ಯಾರ್ಥಿಗಳಾಗಿದ್ದ ನಮಗೊಂದು ಹಠ. ಕನ್ನಡದಲ್ಲೇ ಬರೆದರೆ ಏನಾಗುತ್ತದೆ ನೋಡುವ ಎಂದು. ನಾನು ಆಂಗ್ಲ ಭಾಷೆಯಲ್ಲಿದ್ದ ಅರ್ಜಿ ಫಾರಂನಲ್ಲಿ ಕನ್ನಡದಲ್ಲೇ ಮಾಹಿತಿ ಬರೆದು (ಕನ್ನಡ ಅಂಕಿಗಳನ್ನೇ ಬಳಸಿ) ಗುಮಾಸ್ತೆಯ ಬಳಿ ಕೊಟ್ಟೆ. ನಾನು ಬರೆದ ವಿಳಾಸ ನನ್ನ ನೆನಪಿನ ಪ್ರಕಾರ ಮೈಸೂರು ಜಿಲ್ಲೆಯದ್ದಾಗಿತ್ತು. ಈ ಸ್ಥಳ ರಾಜ್ಯದ ಒಳಗೇ ಇದ್ದ ಕಾರಣದಿಂದ ಕನ್ನಡದಲ್ಲಿ ಬರೆದರೆ ತೊಂದರೆಯೇನಿಲ್ಲ ಎಂದು ನನ್ನ ಭಾವನೆಯಾಗಿತ್ತು. ಆದರೆ ಅಂಚೆ ಇಲಾಖೆಯ ಗುಮಾಸ್ತೆ ಅದನ್ನು ತೆಗೆದುಕೊಳ್ಳಲು ನಿರಾಕರಿಸಿದಳು. ಆಕೆಯ ವಾದದ ಪ್ರಕಾರ ಮೈಸೂರಿನಲ್ಲಿರುವ ಅಂಚೆ ಪೇದೆಗೆ ಕನ್ನಡ ಬಾರದೇ ಇದ್ದರೆ, ಪಿನ್ ಕೋಡ್ ಬರೆಯಲು ಬಳಸಿದ ಕನ್ನಡ ಅಂಕಿಗಳು ನನಗೇ ಗೊತ್ತಾಗುವುದಿಲ್ಲ, ಮತ್ತೆ ಅಲ್ಲಿಯವರಿಗೆ ಗೊತ್ತಾಗುತ್ತದೆಯಾ? ಎಂಬೆಲ್ಲಾ ವಿತಂಡ ವಾದ ಮಾಡಿದಳು. ನಾನು ಹೇಳಿದೆ “ನಾನು ಕಳುಹಿಸುತ್ತಿರುವ ಅರ್ಜಿ ಕರ್ನಾಟಕದ ಒಳಗೇ ಇರುವ ಒಂದು ಜಿಲ್ಲೆಗೆ. ಅಲ್ಲಿಯವರೂ ಕನ್ನಡಿಗರೇ ಆಗಿರುತ್ತಾರೆ. ಅವರಿಗೆ ಕನ್ನಡ ಗೊತ್ತಿರುತ್ತದೆ. ಗೊತ್ತಿಲ್ಲದಿದ್ದರೆ ಕೇಳಿ ತಿಳಿದುಕೊಂಡು ಬಟವಾಡೆ ಮಾಡುತ್ತಾರೆ" ಎಂದು ಹೇಳಿದೆ. ಆದರೂ ಆಕೆ ಹಾಗೆ ಕನ್ನಡದಲ್ಲಿ ರಶೀದಿ ಬರೆಯಲು ಸಾಧ್ಯವಿಲ್ಲ ಎಂಬುದು ಆಕೆಯ ವಾದ. ಆಗ ಇನ್ನೂ ಅಂಚೆ ಇಲಾಖೆಗಳು ಗಣಕೀಕರಣವಾಗಿರಲಿಲ್ಲ. ಕೈಬರಹದಲ್ಲೇ ರಶೀದಿ ಬರೆಯುತ್ತಿದ್ದರು. ಕಡೆಗೆ ಕನ್ನಡ ಅಂಕಿಗಳನ್ನು ಆಂಗ್ಲ ಅಂಕಿಗಳನ್ನಾಗಿ ಬದಲಾವಣೆ ಮಾಡಿದ ಬಳಿಕ (ಕನ್ನಡ ಅಕ್ಷರಗಳನ್ನು ಹಾಗೇ ಇರಿಸಿ) ಆಕೆ ರಶೀದಿ ನೀಡಿದಳು. ಇದು ಮೂರು ದಶಕದ ಹಿಂದಿನ ಕಥೆ. 

ಈಗ ಅಂಚೆ ಇಲಾಖೆಯಲ್ಲಿರುವ ಅರ್ಜಿಗಳಲ್ಲಿ ಕನ್ನಡ ಇದ್ದರೂ, ಅಲ್ಲಿಯ ಗುಮಾಸ್ತರು ಹೊರ ರಾಜ್ಯದವರಾಗಿರುವ ಸಾಧ್ಯತೆ ಇದೆ. ಬದಲಾದ ಅಂಚೆ ಇಲಾಖೆಯ ನಿಯಮದ ಪ್ರಕಾರ ಭಾರತ ದೇಶದ ಯಾವ ರಾಜ್ಯದಲ್ಲೂ ಕೆಲಸ ಮಾಡಲು ಅಭ್ಯರ್ಥಿ ಸಿದ್ಧನಿರಬೇಕು. ಈ ಕಾರಣದಿಂದಲೇ ಸ್ಥಳೀಯ ಭಾಷೆ ತಿಳಿಯದ ವ್ಯಕ್ತಿಗಳು ಅಂಚೆ ಇಲಾಖೆಗೆ ನೇಮಕವಾಗುತ್ತಿದ್ದಾರೆ. ಮಂಗಳೂರಿನ ಎರಡು ಮೂರು ಅಂಚೆ ಕಚೇರಿಗಳಲ್ಲಿ ಹಿಂದಿ ಭಾಷಿಕರನ್ನು ನಾನು ಗಮನಿಸಿರುವೆ. ಈಗಾಗಲೇ ಬಹಳಷ್ಟು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಈ ಪರಿಸ್ಥಿತಿ ಇದೆ. ಗ್ರಾಮೀಣ ಭಾಗಗಳಲ್ಲಿ ಕನ್ನಡ ಭಾಷೆ ತಿಳಿಯದ ಬ್ಯಾಂಕ್ ವ್ಯವಸ್ಥಾಪಕರು ಇದ್ದಲ್ಲಿ ಅನಕ್ಷರಸ್ಥ ಜನರು ಹೇಗೆ ವ್ಯವಹಾರ ಮಾಡಲು ಸಾಧ್ಯ? ಹೊರ ರಾಜ್ಯಗಳಿಂದ ಬಂದ ವ್ಯಕ್ತಿ ತಕ್ಷಣವೇ ಕನ್ನಡವನ್ನು ಕಲಿಯಲು ಸಾಧ್ಯವಿಲ್ಲದೇ ಹೋದರೂ, ನಿಧಾನವಾಗಿ ಕನ್ನಡ ಕಲಿಯುವಂತೆ ಅವರನ್ನು ಪ್ರೋತ್ಸಾಹಿಸಬೇಕು. ಐಎಎಸ್, ಐಪಿಎಸ್ ಮುಂತಾದ ಸಾರ್ವಜನಿಕ ಸೇವೆಗಳಲ್ಲಿರುವ ವ್ಯಕ್ತಿಗಳು ಆಯಾ ರಾಜ್ಯದ ಭಾಷೆಯನ್ನು ಕಲಿಯುವುದು ಕಡ್ಡಾಯವಾಗಿದೆ. ಆದುದರಿಂದ ಜಿಲ್ಲಾಧಿಕಾರಿಯಾಗಿ ಅಥವಾ ಪೋಲೀಸ್ ಅಧಿಕಾರಿಯಾಗಿ ಈ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಹೊರ ರಾಜ್ಯದವರು ಕನ್ನಡ ಭಾಷೆಯನ್ನು ಸೊಗಸಾಗಿ ಮಾತನಾಡುತ್ತಾರೆ, ಓದುತ್ತಾರೆ, ಬರೆಯುತ್ತಾರೆ ಕೂಡ.

ಕನ್ನಡ ಭಾಷೆಯ ಮೇಲಿನ ಪ್ರೇಮವನ್ನು ನಾವು ಸದಾ ಕಾಲ ಜೀವಂತವಾಗಿಡಬೇಕು. ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲಲ್ಲಿ ಕನ್ನಡ ಬಳಸಬೇಕು. ಈಗ ಅಂತರ್ಜಾಲದಲ್ಲಿರುವ ಬಹುತೇಕ ತಾಣಗಳು ತಮ್ಮ ಕನ್ನಡ ಆವೃತ್ತಿಯನ್ನು ಹೊರತಂದಿದೆ. ಅಮೆಜಾನ್, ಫ್ಲಿಪ್ ಕಾರ್ಟ್ ನಂತಹ ಜಾಲತಾಣಗಳೂ ಕನ್ನಡವನ್ನು ಬಳಸುತ್ತಿವೆ. ನಾವೂ ಕನ್ನಡ ಆವೃತ್ತಿಗಳನ್ನು ಬಳಸಿ ವಸ್ತುಗಳನ್ನು ಖರೀದಿಸಲು ಪ್ರಯತ್ನಿಸಬೇಕು. ಮೊದಲಿಗೆ ಸ್ವಲ್ಪ ಕಷ್ಟವಾದರೂ ಕ್ರಮೇಣ ಕನ್ನಡದ ಕ್ಲಿಷ್ಟಕರ ಪದಗಳು ಅರ್ಥವಾಗುತ್ತಾ ಹೋಗುತ್ತವೆ. ಕನ್ನಡ ಭಾಷೆ ಕೇವಲ ನವೆಂಬರ್ ತಿಂಗಳ ರಾಜ್ಯೋತ್ಸವಕ್ಕೆ ಮಾತ್ರವಲ್ಲ, ವರ್ಷ ಪೂರ್ತಿ ಬಳಸೋಣ. ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.

ಚಿತ್ರ ಕೃಪೆ: ಅಂತರ್ಜಾಲ ತಾಣ