ಕಪನೀಪತಿ ಜೊತೆ ಒಂದು ದಿನ -ನೋಡಿ ಸ್ವಾಮಿ ನಾವ್ ಇರೋದು ಹೀಗೆಯೇ!!

ಕಪನೀಪತಿ ಜೊತೆ ಒಂದು ದಿನ -ನೋಡಿ ಸ್ವಾಮಿ ನಾವ್ ಇರೋದು ಹೀಗೆಯೇ!!

  'ಅವಳ' ತೆಕ್ಕೆಯಲ್ಲಿ  ಬಂದಿಯಾಗಿ ಜಗವನ್ನೇ ಮರೆತು, ಮುದುಡಿ ಮಲಗಿ 'ಸಕತ್ತಾದ್ದೊಂದು' ಕನಸು ಕಾಣುತ್ತಿದ್ದ  ಅವರ್ಗೆ ಇದ್ದಕ್ಕಿದ್ದಂತೆ  ಯಾರೋ ಎಳೆದಾಡಿ ಎಬ್ಬಿಸಿದಂತಾಗಿ ತಡ್ ಬಡಾಯ್ಸಿ -ಕಷ್ಟ ಪಟ್ಟು ಎದ್ದು  ,ಕಣ್ಣು ಉಜ್ಜಿಕೊಂಡು 'ಅ ಸಕತಾಗಿದ್ದ ಕನಸನ್ನ' ಹಾಳು ಮಾಡಿ ನಿದ್ದೆಯಿಂದೆಬ್ಬಿಸಿದ 'ದುಸ್ಟ'ರಾರು ಅಂತ ಯೋಚಿಸಿದಾಗ  ಅದು.ಬೇರಾರು ಆಗಿರದೆ  ತಾವ್ ತಮ್ಮ 'ಗತ ಜನ್ಮದ ಪರಮ ವೈರಿ' ಎಂದು ಅನ್ಕೊಂಡಿರೋ , ಸದಾ ಗುರಾಯಿಸುತ್ತಾ 'ಫೈಲುಗಳ  ರಾಶಿ ಕೊಟ್ಟು' ಬೇಗ ಮುಗಿಸಿ ಎನ್ನುವ  ತನ್ನ ಬಾಸು 'ಸದಾ(ಗುರಾಯ್ಸುವ)ಶಿವರಾವ್', 

 

 

ತಥ್ತೆರಿಕೆ!  ಈವಯ್ಯ ಆಫೀಸಲ್ಲೂ ಬಿಡಲ್ಲ, ಇಲ್ಲಾರ ಆರಾಮಾಗಿ ಮಲ್ಕೊಳೋಣ ಅಂದ್ರೆ ''ಹೋದ್ಯಾ ಪಿಶಾಚೀ ಅಂದ್ರೆ ಬಂದೇ ಗವಾಕ್ಷೀಲಿ  ಅನ್ನೋಹಾಗ್ ಬರ್ತಾನಲ್ಲ. '  ಅನ್ಕೊಳ್ತಾ ಕಷ್ಟ ಪಟ್ಟು ಎದ್ದ ಅವರ ಹೆಸರು ಕಪನೀಪತಿ, ಇಷ್ಟು ಹೊತ್ತು  ಅವರು 'ಅವಳ' ತೆಕ್ಕೆಯಲ್ಲಿ ಮುಳುಗಿ ಕನಸು ಕಂಡರಲ್ಲ  'ಅವಳು' ಅವರ ಪತ್ನಿ ಅಲ್ಲ! ಮತ್ತೆ? 
'ನಿದ್ರಾ ದೇವಿ"!!
 
 
 
ಅವ್ರ ಧರ್ಮ ಪತ್ನಿ  ಅನುಸೂಯ  ಅದಾಗಲೇ ಬೆಳಮ್ಬೆಳಗ್ಗೆ ಎದ್ದು ಕಸ ಗುಡಿಸಿ, ಪಾತ್ರೆ ತೊಳೆದು,ಸ್ನಾನ ಮಾಡಿ  ತುಳಸಿ ಗಿಡವನ್ನ ಭಾವ-ಭಯ-ಭಕ್ತಿಯಿಂದ ಸುತ್ತಿ, ಗಂಡಂಗೆ ದೀರ್ಘಾಯುಷ್ಯ ಕೊಡಂತ ಬೇಡ್ಕೊಂಡು ,  ದೇವರ್ಗೆ ದೀಪ  ಬೆಳಗಿ ಆಗಿದೆ. - ಬೆಳಗಿನ ತಿಂಡಿ ತಯಾರ್ ಮಾಡ್ತಿರೋ ಅವರ ಕಿವಿಗೆ ಪತಿ  ಲೇ  ಇವಳೇ  ನೀರ್ ಕಾಯ್ಸಿ ರೆಡಿ  ಮಾಡ್ ಇಡೇ ಎಂದದ್ದು ಕೇಳಸ್ತು. 
 
 
 
 
 ಕಷ್ಟ ಪಟ್ಟು ! 'ನಿದ್ರಾದೇವಿ' ತೆಕ್ಕೆಯಿಂದ ಬಿಡಿಸಿಕೊಂಡು ಎದ್ದ  ಕಪನೀಪತಿಗಳು, ಪತ್ನಿ ಅನುಸುಯಂಗೆ,  ತಾವ್ ಟಾಯ್ಲೆಟ್ಗೆ ಹೋಗ ಬರ್ವಸ್ಟರಲ್ಲಿ ಸ್ನಾನ ಮಾಡೋಕೆ ಬಿಸಿ ನೀರ್ ರೆಡಿ ಮಾಡಮ್ಮಿ ,ಎಂದೇಳಿ ಟಾಯ್ಲೆಟ್ ಕಡೆಗೆ ಹೋಗಿ  ಬಾಗಿಲ ತಳ್ಳಲು ಹೋದರೆ  ಅದಾಗಲೇ ಒಳಗಡೆ 'ಆರಾಮವಾಗಿ' ಅರ್ಧ ಘಂಟೆಯಿಂದ 'ಟಾಯ್ಲೆಟ್ಆಸನ'ದಲ್ಲಿ ಮುಳಿಗಿದ್ದ್ದ ಮಗ 'ಸುಂದ್ರು'  ಅಪ್ಪ ಇರಪ್ಪ ಇನ್ ಹತ್ತೇ ನಿಮಿಷ  ,ಬಂದ್ ಬಿಡ್ತೀನಿ ಎಂದ!! 
 
ಕಪನೀಪತಿಗಳಿಗೆ ರೇಗಿ ಹೋಯ್ತು, ಅಲ್ಲಾ  ಈ ದಡ್ಡ ಮುಂಡೇದ ಈಗಲೇ ಟಾಯ್ಲೆಟ್ಗೆ ಹೋಗಬೇಕಿತ್ತ?   ಇನ್ ಈ ಯಪ್ಪಾ ಹೊರಗ ಬರೋದ ಇವತ್ತಲ್ಲ  ಸ್ನಾನ ಮಾಡೋದೇ ವಾಸಿ ಅಂತ ಮನಸಲ್ಲೇ ಅಂದ್ಕಳ್ತಾ ಬಚ್ಚಲೆಡೆಗೆ ಹೆಜ್ಜೆ ಹಾಕಿದರು.
 
 
ಹಲ್ಲುಜ್ಜಿ , ಬಿಸಿ ನೀರ್ ಸ್ನಾನ ಮಾಡ್  ಹಡಾವುಡಿಯಿಂದ  ಬಂದು ದೇವರ್ಗೆ ದೀಪ ಬೆಳಗಿ ಊದುಬತ್ತಿ ಹಚ್ಚಿ ಅಡ್ಡ ಬಿದ್ದ ಕಪನೀಪತಿಗಳು ಹೇಳಿದ್ರು ,ಲೇ ಇವಳೇ ಟಿಫಿನ್ ರೆಡಿನ?
 
 ಹೆಂಡ್ತಿ ತಂದಿಟ್ಟ 'ಉಪ್ಪಿಟ್ಟು' ನೋಡಿದಕೂಡಲೇ ಕಪನೀಪತಿಗಲ್ಗೆ  ಅದ್ನ ತಿನ್ನದೇನೆ ನೆತ್ತಿಗೆ ಹತ್ತಿದಂಗಾಗಿ,ಮನಸಲ್ಲೇ ಅನ್ಕಂಡ್ರು  ಇವತ್ತು ಎದ್ದ ವೇಳೆಯೇ ಸರಿ ಇಲ್ಲ!!  ಈ  ದರಿದ್ರದ್  'ಕಾಂಕ್ರೀಟ್' ತಿನ್ಬೇಕ?  ತರಾತುರಿಯಲ್ಲಿ ಅದ್ನ ತಿಂದು ಅದಾಗಲೇ ಹೆಂಡ್ತಿ ರೆಡಿ ಮಾಡ್ ಇಟ್ಟಿದ್ದ ಬ್ಯಾಗು  ಎತ್ಕಂಡು  
 
ಲೇ ಇವಳೇ ನಾ ಹೋಗ್ತಿದೀನಿ  ಎಂದವರೆ ಹೆಚ್ಚು ಕಡಿಮೆ  ರೇಸಿಗೆ ಓಡುವ  ಕುದುರೆಯಂತೆ ಓಡ್ತ ರಸ್ತೆಗೆ  ಕಾಲಿಡಲು ತಲೆಗೆ ಅದೇನೋ ಬಂದು ದಡ್ ಅಂತ ಗುದ್ದಿದಾಗೆ  ಅನ್ಸ್ತು , ನೋವಿಂದ ಮುಖ ಕಿವಿಚ್ಕಂಡ್  ತಮಗೆ ಡಿಚ್ಚಿ ಹೊಡೆದದ್ದೇನು ಅಂತ ನೋಡಿದ್ರೆ  'ಅದ್ಯಾರೋ ವಯಸ್ಸಿನ ಹುಡ್ಗ  ಮೊಬೈಲಿನಲ್ಲಿ ಯಾರ್ಗೋ ಮೆಸೇಜ್ ಕಳಿಸ್ತಾ ಮೈ ಮರ್ತು  ಇವರ್ಗೆ ಬಂದು ಡಿಚ್ಚಿ  ಹೊಡೆದಿದ್ದ' 
 
ಆ ಹುಡುಗನನ್ನು 'ದೂರ್ವ್ವಾಸ ಮುನಿಯ ಧ್ರುಸ್ಟಿಯಲ್ಲಿ' ನೋಡಿದರು ಕಪನೀಪತಿಗಳು, ಅವ್ರೆಗೆನಾರ  'ದೂರ್ವ್ವಾಸ ಮುನಿಯ ಕಣ್ ಧ್ರುಸ್ಟಿ-ಸಂಹಾರ' ಸಿದ್ಧಿಸಿದ್ದರೆ  ಹುಡುಗ ಅಲ್ಲೇ ಪುಡಿ-ಹುಡಿಯಾಗ್ತಿದ್ದ!
ಯಾಕಪ್ಪ ಕಣ್ ಕಾಣಸಲ್ವ? ಮುಂದೆ ನೋಡ್ಕಂಡ್ ನಡೆಯೋದಲ್ವ ಅಂದ್ರು ,ಕಷ್ಟ ಪಟ್ಟು ಸಿಟ್ ತಡ್ಕೊಂಡು.
ಅದಾಗಲೇ ಬೆವೆತಿದ್ದ ಹುಡುಗ ಸಾರೀ  ಅಂಕಲ್  ಅರ್ಜಂಟ್ನಲ್ಲಿದ್ದೆ   ಅಂದವನೆ ಇವರ ಪ್ರತಿಕ್ರಿಯೆಗೂ ಕಾಯದೆ 'ರೈಟ್ ' ಹೇಳಿದ..
 
ಡಿಚ್ಚಿ ಹೊಡೆದು  ಈಗ ಏನೂ ಆಗಿಲ್ಲವೆಂಬಂತೆ  ಹೋದ ಆ ಹುಡುಗನನ್ನು ನೋಡ್ತಾ ಮನಸ್ಸಲ್ಲೇ ಅಂದ್ಕೊಂಡ್ರು   'ಅಹ ಅದೆಂತೆಂತ ಹುಡುಗ್ರು ಅವರಪ್ಪ, ಹಿರಿಯರ ಬಗ್ಗೆ  ಸ್ವಲ್ಪವೂ ಭಯವೂ ಇಲ್ಲ-ಭಕ್ತಿಯಂತೂ ಮೊದ್ಲೇ ಇಲ್ಲ  !! 
 
 
ಕಾಲು ಕಿಲೋಮೀಟರ್  ದೂರದ ಬಿ ಎಂ ಟಿ ಸಿ  ಬಸ್ ಸ್ಟಾಪ್ಗೆ  ಬಂದಾಗ್ ಎದೆ ಧಸಕ್ ಅಂತು ,ಆಲ್ ನಿಂತಿದ್ದ 'ಜನ ಸಾಗರ' ನೋಡಿ!! ಅಯ್ಯೋ ದೇವ್ರೇ  ಇವತ್ತೂ  ಅದೇ ಗೋಳಾ?
 
 ಸಾಲಾಗ್ ಬಂದ ೭-೮ ಬಸ್ಸುಗಳೂ   'ತುಂಬಿ ತುಳುಕ್ತ  '  ಬಂದರೂ ,  'ಡ್ರೈವರನ ಕೃಪಾ ಧೃ ಸ್ಟಿ ' ಬಸ್ ಸ್ಟಾಪ್ನಲ್ಲಿ ನಿಂತವರ  ಕಡೆಗೆ ಬೀಳದೆ  ಓಡ್ಸ್ಕೊಂಡೆ ಹೋದ... 
 
ಕೊನೆಗೆ ಇದ್ದುದರಲ್ಲಿ 'ಒಂಟಿಗಾಲ ಮೇಲೆ ನಿಲ್ಲೋಸ್ಟು ಜಾಗ' ಇರವ ಬಸ್ಸೊಂದು ಬಂದಾಗ ಜನ  ಒಬ್ಬರನ್ನೊಬ್ಬರು ತಳ್ಳುತ್ತ  ಬಸ್ಸಿನೆಡೆಗೆ ಓಡಿದರು.   
ಎಡ ಬುಜದ ಮೇಲೆ ಆಫೀಸಿನ ಫೈಲಿರುವ  ಚೀಲ, ಬಲಗೈಯ್ಯಲ್ಲಿ ಪತ್ನಿ ಕಟ್ಟಿದ ಊಟದ ಡಬ್ಬಿ-ನೀರು  ಹಿಡಿದಿದ್ದ ಕಪನೀಪತಿಗಳು ಏದುಸಿರು ಬಿಡುತ್ತ  ಓಡಿ ಬಸ್ಸು ಹತ್ತಲು ಹೋದರೆ 'ಅದ್ಯಾರೋ ಧಾಂಡಿಗ'-ಧೂರ್ತ ತರುಣನೊಬ್ಬ' ಇವರನ ತಳ್ಳಿಕೊಂಡು ಹೋಗಿ ಬಸ್ಸು ಹತ್ತಿದ,ಅಕ್ಕಪಕ್ಕದಲ್ಲಿ ಮೈಗೆ-ಮೈ ಅಂಟಿಕೊಂಡು ಬಸ್ಸು ಹತ್ತಲು ಪಡಿಪಾಟಲು ಪಡುತ್ತಿರುವ ಆ ಜನರನ್ನ ನೋಡಿದರೆ ಮೊದಲಾಗಿ ಜಾಗ ಹಿಡ್ಯುವ  
ಭರದಲ್ಲಿ  ಹೆಂಗಸರು- ಮಕ್ಕಳನ್ನು ಎತ್ತಿಕೊಂಡವರು-ವಯಸ್ಸಾದವರನ್ನು ತಳ್ಳಿ-ತಿವಿದು  ಹೋರಟ ಜನರ ನಡೆಯಲ್ಲಿ  'ಯಾರ್ಗೆನಾದ್ರೆ ನಮಗೇನು-ಸಧ್ಯ  ನಿಲ್ಲೋಕ್ ಜಾಗ ಸಿಕ್ರೆ ಅಸ್ಟೇ ಸಾಕು  ಅನ್ನುವ ಜಾಯಮಾನ' ಎದ್ದು ಕಾಣುತ್ತಿತ್ತು!!
 
 
 'ಅದೇನ್ಗೆನ್ಗೋ  ಸಾಹಸ' ಮಾಡಿ  ಒಳ ತೂರಿ ನಿಂತ ಕಪನೀಪತಿಗಳು ಸುಧಾರಿಸಿಕೊಳ್ತಿರ್ಬೇಕಾದರೆ, ಕಾಲೇಜು ಹುಡುಗನೊಬ್ಬ ತರಾತುರಿಯಿಂದ  ಅಕ್ಕ-ಪಕ್ಕ ಇದ್ದವರನ ತಳ್ಳುತ್ತ , ತನ್ನ 'ಮಣ ಭಾರದ' ಬ್ಯಾಗನ್ನ ಬೆನ್ನ ಮೇಲೆಯೇ ಹಾಕಿಕೊಂಡು   'ಬಿಲ್ಲಿಂದ ಬಿಟ್ಟ ಬಾಣದಂತೆ'  ಬಾಗಿಲಕಡೆ ತೂರಿಬರ ಹೊರಟ,ಅದಾಗಲೇ ರೋಸಿಹೋಗಿದ್ದ ಜನ , ಥೂ ತತ್ಹ್ಹೆರಿಕೆ  'ಲೋ ಆ ಬ್ಯಾಗ್ನ ಕೈಲಿ ಹಿಡ್ಕೊಂಡು ಹೋಗು' ಅಂದ್ರು.
 
ಅವ್ನು ಅದೇನೇನೋ ಸಾಹಸ ಮಾಡ ಬಾಗಿಲ ಹತ್ರ ಬಂದು  ಇಳಿಯ ಹೊರಟರೆ  ಅದಾಗಲೇ ಅಲ್ಲಿ 'ಬಸ್ಸಿನ ಬಾಗಿಲು ಕಾಯುವ' ಕೆಲಸ ಶುರು ಹಚ್ಚಿಕೊಂಡಿದ್ದ  ೫-೬ ಪಡ್ಡೆ ಹೈಕಳು  ಬಸ್ಸಿಂದ ಇಳಿಯದೆ, ಕೆಳಗಿದ್ದವು  ಬಸ್ಸು ಹತ್ತಲು-ಒಳಗಿದ್ದವರು  
 ಬಸ್ಸು ಇಳಿಯಲೂ ಬಿಡದೆ 'ಬಾಗಿಲ ಕಾಯುವ ಕೆಲಸ ತಮ್ಮ ಜನ್ಮ ಸಿದ್ಧ ಹಕ್ಕು' ಅದಕ್ಕೆ ಹತ್ತುವವರು-ಇಳಿಯುವವರೂ ಅಡ್ಡಿಪಡಿಸಬಾರದು ಎಂಬಂತೆ  ನಿಂತರು, ಒಂದಿಬ್ಬರು ವಯಸ್ಸಾದವರು  
 ರೇಗಿ  ತಮ್ ಪಾಡಿಗ್ ತಾವೇ ಗೊಣಗಿದರು, ತತ್ಥ್  ದರಿದ್ರ ಮುಂಡೇವು  ಬಾಗಿಲ ಹತ್ರ  ನಿಂತ ಜೀವ ತಿಂತಾವೆ..ಏನ್ ಹುಡ್ಗ್ರೋ ಏನೋ  ನಮ್ ಕಾಲದಲ್ಲಿ ಹಿಂಗಿರ್ಲಿಲ್ಲ...ಮುಂಡೇವ್ಕೆ  ಸಾಮಾನ್ಯ ಪರಿಜ್ಞಾನವೇ ಇಲ್ಲ .
 
ಮುಂದಿನ ಸ್ಟಾಪಿನಲ್ಲಿ  ಒಬ್ಬ  ಪುರುಷ ಹಿರಿಯ ನಾಗರೀಕರೊಬ್ಬರು ಹತ್ತಿದರು , ಅದಾಗಲೇ 'ಹಿರಿಯ ನಾಗರಿಕರ' ಸೀಟಿನಲ್ಲಿ  ಆಸೀನನಾಗಿದ್ದ ತರುಣನೋಬ್ಬನಿಗೆ   ತಮಗೆ ಜಾಗ ಬಿಡುವಂತೆ ಹೇಳಿ   ' ಪುರುಷ ಹಿರಿಯ ನಾಗರೀಕರಿಗಾಗಿ'ಎಂದಿದ್ದ ಬರಹ ತೋರಿಸಿ ಎಬ್ಬಿಸಿದರು.ಅದ್ವರ್ಗೆ  ಅಲ್ಲಿಯೇ ನಿಂತೂ ತಮ್ಮ 'ಹಕ್ಕನ್ನು' ಬಿಟ್ಟುಕೊಟ್ಟಿದ್ದ ಒಂದಿಬ್ಬರು ಹಿರಿಯ ನಾಗರೀಕರು, ತರುಣನನ್ನ ಎಬ್ಬಿಸಿ ಕುಳಿತ ಆ  ಹಿರಿಯ ನಾಗರೀಕನನ್ನು 'ಭವ್ವ್ಯ  ಭಾರತದ ನಿದ್ದೆ ಹೋದ ಪ್ರಜೆಗಳನ್ನ ಎಬ್ಬಿಸಿದ   'ಹಣ್ನಾ ' ಗೆ   ಹೋಲಿಸಿ- ಕಲ್ಪಿಸಿಕೊಂಡು  ಪುನೀತರಾದರು!!  
 
 

  ============================================================

Comments