ಕೆ.ಆರ್.ಎಸ್.ನಿರ್ಮಾಣ ಮತ್ತು ನಾಲ್ವಡಿಯವರು

ಕೆ.ಆರ್.ಎಸ್.ನಿರ್ಮಾಣ ಮತ್ತು ನಾಲ್ವಡಿಯವರು

ಅದು 1902ನೇ ಇಸವಿ. ಏಷ್ಯಾದಲ್ಲೆ ಪ್ರಪ್ರಥಮ ಜಲವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪನೆಯಾದ ವರ್ಷವದು. ಅದನ್ನು ಸ್ಥಾಪಿಸಿದವರು ಮೈಸೂರಿನ ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಇವರು. ಬ್ರಿಟಿಷರೊಂದಿಗೆ ಕೋಲಾರದ ಚಿನ್ನದ ಗಣಿಗೆ ವಿದ್ಯುತ್ ಸರಬರಾಜಿನ ಒಪ್ಪಂದ ಮಾಡಿಕೊಂಡಿದ್ದ ಅವರು ಆ ದಿಸೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಶಿವನಸಮುದ್ರ ಎಂಬಲ್ಲಿ ಜಲವಿದ್ಯುತ್‍ಕೇಂದ್ರ ಸ್ಥಾಪಿಸಿದರು. ಒಂದು ಮಾತು, ಅದೇನೆಂದರೆ ಆಗಿನ್ನು ಮೈಸೂರು ಸಂಸ್ಥಾನಕ್ಕೆ ಸರ್.ಎಂ.ವಿಶ್ವೇಶ್ವರಯ್ಯನವರು ಪ್ರವೇಶ ಪಡೆದೇ ಇರಲಿಲ್ಲ! ಇರಲಿ, ವಿದ್ಯುತ್‍ ಕೇಂದ್ರವನ್ನೇನೊ ನಾಲ್ವಡಿಯವರು ಸ್ಥಾಪಿಸಿದರು. ಆದರೆ ವಿದ್ಯುತ್‍ಕೇಂದ್ರಕ್ಕೆ ನೀರು? ಮಳೆ ಬಂದಾಗ ವಿದ್ಯುತ್. ಇಲ್ಲದಿದ್ರೆ ನೋ ವಿದ್ಯುತ್! ಬೇಸಿಗೆ ಕಾಲದಲ್ಲಂತೂ ಒಂದು ವೋಲ್ಟ್ ಉತ್ಪತ್ತಿ ಕೂಡ ಕಷ್ಟ! ಈ ನಿಟ್ಟಿನಲ್ಲಿ ಚಿನ್ನದ ಗಣಿಗೆ ನಿರಂತರ ವಿದ್ಯುತ್ ನೀಡುವುದಾಗಿ ಒಪ್ಪಿದ್ದ ಅವರಿಗೆ ನೀರಿನ ಕೊರತೆಯಿಂದಾಗಿ ಅದರ ಪೂರೈಕೆ ಸವಾಲಿನ ಕೆಲಸವಾಗಿತ್ತು. ಈ ಕಾರಣಕ್ಕಾಗಿ ಶಿವನಸಮುದ್ರದ ಬಳಿ ತೊರೆಕಾಡನಹಳ್ಳಿ ಎಂಬಲ್ಲಿ ಚೆಕ್‍ಡ್ಯಾಂ ಕೂಡ ನಿರ್ಮಿಸಿದರು. ಆದರೆ ಕೆಲವೇ ಅಡಿಗಳಷ್ಟಿದ್ದ ಚೆಕ್‍ಡ್ಯಾಂ ನೀರು ಏನೇನಕ್ಕು ಸಾಲುತ್ತಿರಲಿಲ್ಲ.

ಕಡೆಗೆ ವಿದ್ಯುತ್ ಉತ್ಪತ್ತಿ ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕಿದ ಮಹಾರಾಜರು 1904ರಲ್ಲಿ ಜೋಗ್ ಬಳಿ ಕೂಡ ವಿದ್ಯುತ್‍ ಉತ್ಪತ್ತಿಗೆ ಚಿಂತಿಸಿದರು. ಆದರೆ ಪರಿಸರದ ನೆಪವೊಡ್ಡಿ ವೈಸ್‍ರಾಯ್ ಲಾರ್ಡ್‍ಕರ್ಜನ್ ಅದಕ್ಕೆ ಅನುಮತಿ ನೀಡಲಿಲ್ಲ. ಅಂತಿಮವಾಗಿ ಬೇರೆ ದಾರಿ ಕಾಣದೆ ಶಿವನಸಮುದ್ರಕ್ಕೆ ಕಾವೇರಿ ನದಿಯಿಂದಲೇ ನಿರಂತರ ನೀರು ಒದಗಿಸುವ ನಿಟ್ಟಿನಲಿ ಆಲೋಚನೆಗಿಳಿದ ಒಡೆಯರ್ ಇವರು 120 ವರ್ಷಗಳ ಹಿಂದೆ ಟಿಪ್ಪು ಸುಲ್ತಾನ್ ಶಂಕುಸ್ಥಾಪನೆಮಾಡಿದ್ದ ಕನ್ನಂಬಾಡಿ ಎಂಬಲ್ಲಿ ಅಣೆಕಟ್ಟೆ ಕಟ್ಟುವುದೆಂದು ನಿರ್ಧರಿಸಿ ಆ ಟಿಪ್ಪುವಿನ ಕನಸಿನ ಯೋಜನೆಗೆ ಮರುಜೀವ ನೀಡಲು ನಿಶ್ಚಯಿಸಿದರು ಮತ್ತು ಈ ನಿಟ್ಟಿನಲಿ ಕಾರ್ಯಪ್ರವೃತ್ತರಾಗುವಂತೆ ತಮ್ಮ ಇಂಜಿನಿಯರ್‍ಗಳ ತಂಡಕ್ಕೆ (ಮ್ಯಾಕ್ ಹಚ್ ಮತ್ತವರ ತಂಡ) ಸೂಚಿಸಿದರು. ಅಂದಹಾಗೆ ನಾಲ್ವಡಿಯವರು ಹಾಗೆ ಸೂಚನೆ ನೀಡಿದ(1906) ಆ ಇಂಜಿನಿಯರ್ ಗಳ ತಂಡದಲ್ಲಿಯೂ ವಿಶ್ವೇಶ್ವರಯ್ಯನವರಿರಲಿಲ್ಲ! ಯಾಕೆಂದರೆ ಆಗಿನ್ನೂ ಮೈಸೂರು ಸಂಸ್ಥಾನಕ್ಕೆ ಅವರು ಕಾಲೇ ಇಟ್ಟಿರಲಿಲ್ಲ! ಮಹಾರಾಜರು ಅಣೆಕಟ್ಟೆ ಕಟ್ಟಲೇನೋ ನಿರ್ಧರಿಸಿದರು ಆದರೆ ಅದು ಅಷ್ಟೊಂದು ಸರಾಗದ ಕೆಲಸವಾಗಿತ್ತೆ? ಖಂಡಿತ ಇಲ್ಲ. ಏಕೆಂದರೆ ಬ್ರಿಟಿಷ್ ರೆಸಿಡೆಂಟರಿಂದ ಅವರಿಗೆ ಸಿಕ್ಕಿದ್ದು ಕೇವಲ 70 ಅಡಿ ಎತ್ತರ ಕಟ್ಟಲು ಹಾಗೂ 60 ಅಡಿ ನೀರು ಸಂಗ್ರಹಿಸಲು ಮಾತ್ರ! ಈ ನಿಟ್ಟಿನಲಿ ರೆಸಿಡೆಂಟರ ಜೊತೆ ವಾದಕ್ಕಿಳಿದ ನಾಲ್ವಡಿಯವರು ಅಂತಿಮವಾಗಿ 90 ಅಡಿ ಎತ್ತರ ಕಟ್ಟಡ ಕಟ್ಟಲು ಮತ್ತು 80 ಅಡಿ ನೀರು ಸಂಗ್ರಹಿಸಲು ಒಪ್ಪಿಗೆ ಪಡೆದರು(ಮುಂದೆ ವಿಸ್ತರಿಸಬಹುದಾದ ಅವಕಾಶದೊಂದಿಗೆ) ಮತ್ತು ಹಾಗೆ ಒಪ್ಪಿಗೆ ಸಿಕ್ಕಿದ್ದೆ ತಡ ಇಂಜಿನಿಯರ್ ಮ್ಯಾಕ್‍ಹಚ್ ಮತ್ತವರ ತಂಡ ಜಲಾಶಯದ ನಿರ್ಮಾಣಕ್ಕೆ(1908) ಕಾರ್ಯೋನ್ಮುಖವಾಯಿತು. ಈ ನಿಟ್ಟಿನಲಿ ಜಲಾಶಯ ನಿರ್ಮಾಣದ ಪ್ರಾಥಮಿಕ ತಯಾರಿ ನಡೆದ ಈ ಸಂಧರ್ಭದಲ್ಲಿ ಕೂಡ ವಿಶ್ವೇಶ್ವರಯ್ಯನವರಿರಲಿಲ್ಲ!

ಅಂದಹಾಗೆ ಅದು 1908ರ ಅಂತ್ಯದ ಸಮಯ. ಇಂಜಿನಿಯರ್ ಮ್ಯಾಕ್‍ಹಚ್ ಸೇವೆಯಿಂದ ನಿವೃತ್ತರಾದರು ಮತ್ತು ತೆರವುಗೊಂಡ ಆ ಸ್ಥಾನಕ್ಕೆ ಕ್ಯಾಪ್ಟನ್‍ಡೇವಿಸ್ ಎಂಬುವವರು ನೇಮಕಗೊಂಡರು. ಕ್ಯಾ. ಡೇವಿಸ್ ನದಿಯ ಪಾತ್ರ ಬದಲಿಸುವ ಹಚ್‍ರ ಕಾಮಗಾರಿಯನ್ನು ಮುಂದುವರೆಸಿದ. ದುರಂತವೆಂದರೆ ಆತ 1909ರ ಮೇ-ಜೂನ್‍ನಲ್ಲಿ ನದಿಯ ಪ್ರವಾಹವೊಂದರಲ್ಲಿ ಕೋಚ್ಚಿಹೋದ ಮತ್ತು ಘಟನೆಯಲ್ಲಿ ಹಠಾತ್ ಸಾವಿಗೀಡಾದ. ಡೇವಿಸ್‍ನ ಈ ಸಾವಿನಿಂದಾಗಿ 1909ರಲ್ಲಿ ಮೈಸೂರು ಸಂಸ್ಥಾನದ ಮುಖ್ಯಇಂಜಿನಿಯರ್ ಹುದ್ದೆ ಖಾಲಿಬಿದ್ದಿತು. ಇದೇ ಸಮಯದಲ್ಲಿ ಒಳಗೊಳಗೆ ಸಂಸ್ಥಾನದಲ್ಲಿ ಒಂದು ಹೋರಾಟ ನಡೆದಿತ್ತು. ಅದೇನೆಂದರೆ ಸಂಸ್ಥಾನದಲ್ಲಿದ್ದ ಮದ್ರಾಸಿ ಅಧಿಕಾರಿಗಳನ್ನು ಓಡಿಸುವ ‘ಮೈಸೂರು ಮೈಸೂರಿಗರಿಗೆ’ ಎಂಬ ಹೆಸರಿನ ಹೋರಾಟ. ಅಂದಹಾಗೆ ಮಹಾರಾಜರಿಗೆ ಈ ಹೋರಾಟವನ್ನು ಶಮನಗೊಳಿಸಬೇಕಾದ ತುರ್ತು ಒದಗಿತ್ತು ಹಾಗೆಯೇ ಖಾಲಿಬಿದ್ದ ಇಂಜಿನಿಯರ್ ಹುದ್ದೆ ಭರ್ತಿಮಾಡಬೇಕಾದ ಅನಿವಾರ್ಯತೆ ಕೂಡ ಎದುರಾಗಿತ್ತು. ಇಂಜಿನಿಯರ್ ನೇಮಕ ಮತ್ತು ಮೈಸೂರು, ಮೈಸೂರಿಗರಿಗೆ ಎಂಬ ಎರಡೂ ಬೇಡಿಕೆಯ ಹಿನ್ನೆಲೆಯಲ್ಲಿ ಅವರು 1909ರಲ್ಲಿ ಮೂಲತಃ ಮೈಸೂರು ಸಂಸ್ಥಾನದವರೆ ಆದ ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಶ್ವೇಶ್ವರಯ್ಯರವರನ್ನು ಮುಖ್ಯ ಇಂಜಿನಿಯರ್ ಹುದ್ದೆಗೆ ನೇಮಿಸಿಕೊಂಡರು. ಈ ನಿಟ್ಟಿನಲಿ ಹೇಳುವುದಾದರೆ ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಪ್ರವೇಶಪಡೆದದ್ದು ಸ್ವತಃ ಮಹಾರಾಜರ ಆದೇಶದಿಂದಾಗಿ ಮಾತ್ರ! ಸಂಸ್ಥಾನಕ್ಕೆ ಪ್ರವೇಶ ಪಡೆಯುತ್ತಿದ್ದಂತೆ ಸಹಜವಾಗಿ ಇಂಜಿನಿಯರರಾದ ವಿಶ್ವೇಶ್ವರಯ್ಯನವರ ಮೇಲೆ ಎಲ್ಲ ನಿರ್ಮಾಣ ಕಾಮಗಾರಿಗಳ ಹೊಣೆಯೂ ಬಿದ್ದಿತು. ಅದೇ ರೀತಿ ಮ್ಯಾಕ್‍ಹಚ್ ಮತ್ತು ಕ್ಯಾ.ಡೇವಿಸ್ ಆರಂಭಿಸಿದ್ದ ಕೆ.ಆರ್.ಎಸ್ ಕಾಮಗಾರಿ ಹೊಣೆ ಕೂಡ ಅವರ ಮೇಲೆ ಬಿತ್ತು. ಈ ನಿಟ್ಟಿನಲಿ ಸ್ಪಷ್ಟವಾಗುವುದೇನೆಂದರೆ ಕೆ.ಆರ್.ಎಸ್. ಕಾಮಗಾರಿ ವಿಶ್ವೇಶ್ವರಯ್ಯನವರು ಪ್ರಾರಂಭಿಸಿದ್ದಲ್ಲ ಎಂಬುದು! (ಸ್ವತಃ ವಿಶ್ವೇಶ್ವರಯ್ಯನವರೇ ತಮ್ಮ ಆತ್ಮಕಥೆ “ನನ್ನ ವೃತ್ತಿಜೀವನದ ನೆನಪುಗಳು” ಕೃತಿಯಲ್ಲಿ “ನಾನು ಬರುವುದಕ್ಕೆ ಮೊದಲೆ ಶ್ರೀರಂಗಪಟ್ಟಣದಿಂದ 10 ಮೈಲು ದೂರದಲ್ಲಿ ಕಾವೇರಿ ನದಿಯ ಪಶ್ಚಿಮ ದಂಡೆ ಮೇಲೆ ಕನ್ನಂಬಾಡಿ ಎಂಬಲ್ಲಿ ಅಣೆಕಟ್ಟೆ ನಿರ್ಮಾಣದ ಕಾಮಗಾರಿ ನೆಡೆದಿತ್ತು” ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಜಲಾಶಯದ ಕಾಮಗಾರಿ ತನ್ನ ಆಗಮನಕ್ಕೂ ಮೊದಲೇ ಪ್ರಾರಂಭಗೊಂಡಿತ್ತೆಂಬುದನ್ನು ಅವರೇ ಸ್ಪಷ್ಟವಾಗಿ ದಾಖಲಿಸಿದ್ದಾರೆ).

ಒಂದಂತು ನಿಜ, ಕೆ.ಆರ್.ಎಸ್ ವಿಶ್ವೇಶ್ವರಯ್ಯನವರ ಕನಸಿನ ಕೂಸಂತು ಅಲ್ಲ. ಟಿಪ್ಪು ಕನಸಿದ್ದನ್ನು ನಾಲ್ವಡಿಯವರು ಕಾರ್ಯರೂಪಕ್ಕೆ ತಂದ ಸಂದರ್ಭದಲ್ಲಿ ಮಧ್ಯೆ ಇಂಜಿನಿಯರರಾಗಿ ನೇಮಕಗೊಂಡ ಅವರು ಕೆಲಸ ಮುಂದುವರೆಸಿದ್ದಾರೆ ಅಷ್ಟೆ. ಈ ನಡುವೆ ಮಹಾರಾಜರ ವಿಶ್ವಾಸ ಸಂಪಾದಿಸಿದ ವಿಶ್ವೇಶ್ವರಯ್ಯನವರು “ಮೈಸೂರು ಮೈಸೂರಿಗರಿಗೆ” ಎಂಬ ಮತ್ತದೇ ತತ್ವದ ಅಡಿಯಲ್ಲಿ ದಿವಾನ ಹುದ್ದೆಗೂ ಕೂಡ ನೇಮಕಗೊಳ್ಳುತ್ತಾರೆ(1912). ಅಂದಹಾಗೆ ಆಗ ತೆರವಾದ ಮುಖ್ಯಇಂಜಿನಿಯರ್ ಹುದ್ದೆಗೆ ನೇಮಿಸಲ್ಪಟ್ಟವರು ಯಾರು? ಯಾರೂ ಯಾಕೆ ಅವರ ಹೆಸರು ಹೇಳುವುದಿಲ್ಲ? ಕೆ.ಆರ್.ಎಸ್‍ ಇತಿಹಾಸದ ದ್ವಂದ್ವವೆಂದರೆ ಇದೇ! ಯಾಕೆಂದರೆ ಜಲಾಶಯದಲ್ಲಿ ಈಗಲೂ ಕೆ.ಆರ್.ಎಸ್. ನಿರ್ಮಾಣದಲ್ಲಿ ಕಾರ್ಯನಿರ್ವಹಿಸಿದ 50ಕ್ಕೂ ಹೆಚ್ಚು ಇಂಜಿನಿಯರ್ ಗಳ ಹೆಸರನ್ನೊಳಗೊಂಡ ನಾಮಫಲಕವಿದೆ. ಅದರಲ್ಲಿ ಸರ್.ಎಂ.ವಿ. ಒಬ್ಬರಷ್ಟೆ. ಬರೀ ಸರ್.ಎಂ.ವಿ ಅವರೊಬ್ಬರೇ ಅಲ್ಲ! ಒಂದು ವಿಷಯ, 1911ರಲ್ಲಿ ಜಲಾಶಯದ ಕಟ್ಟಡದ ಕಾಮಗಾರಿ ಪ್ರಾರಂಭಗೊಂಡಾಗ ಅದು ಆರಂಭದಲ್ಲೆ ಹಣದ ಕೊರತೆಯನ್ನೆದುರಿಸಿತು. ಧೃತಿಗೆಡದ ಮಹಾರಾಜರು ತಮ್ಮ ತಾಯಿ ಮತ್ತು ತಮ್ಮ ಧರ್ಮ ಪತ್ನಿಯವರಿಗೆ ಸೇರಿದ 4 ಮೂಟೆ ವಜ್ರಾಭರಣಗಳನ್ನು ಮುಂಬೈ ಚಿನಿವಾರ ಪೇಟೆಯಲ್ಲಿ ಮಾರಿ ಕಾಮಗಾರಿಗೆ ಹಣ ಒದಗಿಸಿದರು. ಅಂದಹಾಗೆ ನಾಲ್ವಡಿಯವರು ಒದಗಿಸಿದ ಆ ಹಣದಲ್ಲಿ ಮುಖ್ಯಇಂಜಿನಿಯರ್ ವಿಶ್ವೇಶ್ವರಯ್ಯನವರ ಸಂಬಳವೂ ಸೇರಿತ್ತು! ಒಂದಂತು ನಿಜ, ಕಾಮಗಾರಿಯುದ್ದಕ್ಕೂ ನೋವು ಅನುಭವಿಸಿದ್ದು ಮಹಾರಾಜರು. ಆದರೆ ಶ್ರೇಯಸ್ಸು?

ಈ ನಡುವೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡುವ ನಿಟ್ಟಿನಲ್ಲಿ ಗೊಂದಲವುಂಟಾಗಿ 1918ರಲ್ಲಿ ವಿಶ್ವೇಶ್ವರಯ್ಯನವರು ದಿವಾನ ಹುದ್ದೆಗೆ ರಾಜೀನಾಮೆ ಕೊಡಬೇಕಾಗಿ ಬಂತು. ಪ್ರಶ್ನೆಯೇನೆಂದರೆ ಸರ್.ಎಂ.ವಿ.ರವರು ರಾಜೀನಾಮೆ ಇತ್ತಾಕ್ಷಣ ಕಾಮಗಾರಿ ನಿಂತು ಹೋಯಿತೆ? ಎಂಬುದು. ಖಂಡಿತ ಇಲ್ಲ. ಈ ನಿಟ್ಟಿನಲಿ ಕೆ.ಆರ್.ಎಸ್ ನಿರ್ಮಾಣವೆ ವಿಶ್ವೇಶ್ವರಯ್ಯನವರ ಧ್ಯೇಯವಾಗಿದ್ದರೆ ಅವರು ರಾಜೀನಾಮೆ ನೀಡಲೇಬಾರದಿತ್ತು! ಕೆ.ಆರ್.ಎಸ್‍ಕಟ್ಟಿಯೇ ನಾನು ಹೋಗುವುದು ಎಂದು ಅವರು ಹೇಳಬೇಕಿತ್ತು! ಊಹ್ಞೂಂ, ಅದ್ಯಾವುದೂ ನಡೆದೇ ಇಲ್ಲ. ವಿಶ್ವೇಶ್ವರಯ್ಯನವರು ರಾಜೀನಾಮೆ ಇತ್ತು ಹೋದರು ಮತ್ತು ಜಲಾಶಯದ ಕಾಮಗಾರಿ ಅದರ ಪಾಡಿಗೆ ಅದು ನಡೆದಿತ್ತು! ಅಂದಹಾಗೆ ತಮ್ಮ ರಾಜೀನಾಮೆಯ ನಂತರ ಅವರು ನಂತರದ ದಿವಾನರುಗಳಿಗೆ ಸಹಾಯಕರಾದದ್ದಾಗಲಿ, ಸಲಹೆಗಾರರಾದದ್ದಾಗಲಿ ಏನಾದರೂ ಇದೆಯೇ? ಎಂಥದ್ದು ಇಲ್ಲ! ಹಾಗಿದ್ದರೆ ಅದರ ನಿರ್ಮಾಣದ ಶ್ರೇಯಸ್ಸು ಅವರಿಗ್ಹೇಗೆ ಸಂದಿತು ಎಂಬುದು? ವಾಸ್ತವವೆಂದರೆ ಜಲಾಶಯದ ಕಾಮಗಾರಿ ಮುಗಿದದ್ದು ಅವರು ರಾಜೀನಾಮೆ ನೀಡಿದ 14 ವರ್ಷಗಳ ನಂತರ! ಅಂದರೆ 1932 ರಲ್ಲಿ. ಆಶ್ಚರ್ಯವೆಂದರೆ ನಾಲ್ವಡಿಯವರು ಆಗಲೂ ಕೂಡ ರಾಜರಾಗಿ ಮುಂದುವರಿದಿದ್ದರು, ತಮ್ಮ ಕೈಯಾರ ಪ್ರಾರಂಭಿಸಿದ ಯೋಜನೆಯನ್ನು ತಾವೇ ಉದ್ಘಾಟಿಸಿದ್ದರು! ದುರಂತವೆಂದರೆ ಅದರ ಶ್ರೇಯಸ್ಸು ಅವರಿಗೆ ಸಲ್ಲಲಿಲ್ಲ! ಅವರ ಕೈ ಕೆಳಗೆ ವೇತನಕ್ಕಾಗಿ ದುಡಿದವರೊಬ್ಬರಿಗೆ ಅದು ಸಂದಿತು!

ಸತ್ಯ ಹೀಗಿರುವಾಗ, ಇತಿಹಾಸದಲ್ಲಿ ನಾಲ್ವಡಿಯವರಿಗೆ ಘಟಿಸಿರುವ ಇಂತಹ ಘೋರತೆಗೆ ಯಾರು ಹೊಣೆ? ನಮ್ಮ ಕಣ್ಣೆದುರೆ ಒಬ್ಬ ಶ್ರೇಷ್ಠ ರಾಜನಿಗೆ ಅವನ ಸಾಧನೆಯ ಶ್ರೇಷ್ಠತೆ ಧಕ್ಕಲಿಲ್ಲವೆಂದರೆ? ಹಾಗಿದ್ದರೆ ತನ್ನ ತನು ಮನ ಧನವನ್ನೆಲ್ಲ ಧಾರೆ ಎರೆದು ಆತ ಮಾಡಿದ ಆ ತ್ಯಾಗಕ್ಕೆ ಬೆಲೆಯಾದರೂ ಎಲ್ಲಿದೆ? ನಾಲ್ವಡಿಯವರಿಗೆ ಯಾರು ಇಂಥ ದ್ರೋಹ ಎಸಗಿದ್ದು? ಸ್ವತಃ ವಿಶ್ವೇಶ್ವರಯ್ಯನವರಂತು ಖಂಡಿತ ಅಲ್ಲ. ಬದಲಿಗೆ ಕಪೋಲಕಲ್ಪಿತ ಕಥೆ ಕಟ್ಟಿದ ಅವರ ಅನುಯಾಯಿಗಳು!

--ರಘೋತ್ತಮ ಹೊ.ಬ

ಚಿತ್ರ ಕೃಪೆ: ಇಂಟರ್ನೆಟ್ ತಾಣ