ಕೈ, ಕಮಲಕ್ಕೆ ಆತ್ಮಾವಲೋಕನದ ಸಮಯ

ಕೈ, ಕಮಲಕ್ಕೆ ಆತ್ಮಾವಲೋಕನದ ಸಮಯ

ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಒಂದು ರಾಜ್ಯದಲ್ಲಿ ನಷ್ಟ ಅನುಭವಿಸಿದರೆ, ಇನ್ನೊಂದು ರಾಜ್ಯದಲ್ಲಿ ಭಾರೀ ಅಂತರದ ಗೆಲುವು ಸಾಧಿಸಿದೆ. ಗುಜರಾತ್ ನಲ್ಲಿ ೧೮೨ ಸ್ಥಾನಗಳಲ್ಲಿ ೧೫೭ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವ ಮೂಲಕ ಈವರೆಗೆ ನಡೆದ ಮತದಾನ ಇತಿಹಾಸದಲ್ಲಿ ಈವರೆಗಿನ ಅತಿ ದೊಡ್ಡ ದಾಖಲೆಯನ್ನು ನಿರ್ಮಿಸಿದೆ. ಕಳೆದ ೨೭ ವರ್ಷಗಳಿಂದ ಗುಜರಾತ್ ನಲ್ಲಿ ಆದ ಅಭಿವೃದ್ಧಿಯನ್ನು ಈ ಫಲಿತಾಂಶ ಎತ್ತಿ ತೋರಿಸಿದೆ. ಇದೇ ಮಾದರಿ ರಾಷ್ಟ್ರದ ಎಲ್ಲೆಡೆಯೂ ಪ್ರಸ್ತುತ ಪಡಿಸುವ ಅವಶ್ಯಕತೆ ಈಗ ಬಿಜೆಪಿಗೆ ಇದೆ. ಆದರೆ ಕಳೆದ ಒಂದು ಅವಧಿಯಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ, ಮೇಲಾಗಿ ಕೇಂದ್ರದಲ್ಲಿ ಕಳೆದ ೮ ವರ್ಷಗಳಿಂದಲೂ ಬಿಜೆಪಿ ಅಧಿಕಾರದಲ್ಲಿದ್ದರೂ ಹಿಮಾಚಲ ಪ್ರದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಬಿಜೆಪಿ ಹಿಂದೆ ಬಿದ್ದಿರುವ ಕುರಿತೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸಾಮಾನ್ಯವಾಗಿ ಯಾವುದೇ ಒಂದು ಪಕ್ಷ ಸತತ ಎರಡು ಬಾರಿ ಅಧಿಕಾರದಲ್ಲಿದ್ದರೆ ಆಡಳಿತ ವಿರೋಧಿ ಅಲೆ ನಿರ್ಮಾಣವಾಗುತ್ತದೆ. ಆದರೆ ಇದು ಗುಜರಾತ್ ವಿಷಯದಲ್ಲಿ ಸುಳ್ಳಾಗಿದೆ. ಹಿಮಾಚಲ ಪ್ರದೇಶ ವಿಷಯದಲ್ಲಿ ನಿಜವಾಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅಭಿವೃದ್ಧಿ ಆಡಳಿತಕ್ಕೆ ಜನ ಬೆಂಬಲ ಇರುತ್ತದೆ ಎಂಬುದು ಈ ಎರಡು ರಾಜ್ಯಗಳ ಫಲಿತಾಂಶ ಮತ್ತೊಮ್ಮೆ ಸಾಬೀತು ಮಾಡಿವೆ. ರಾಹುಲ್ ಗಾಂಧಿ ಅವರು ದೇಶಾದ್ಯಂತ ಭಾರತ ಜೋಡೋ ಯಾತ್ರೆ ಮಾಡಿದ್ದರೂ, ಕಾಂಗ್ರೆಸ್ ನಾಯಕತ್ವದಲ್ಲಿ ಬದಲಾವಣೆ ಮಾಡಿದ್ದರೂ ಗುಜರಾತ್ ನಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗಿಲ್ಲ. ಹಾಗಾದರೆ ಜನರ ಅಪೇಕ್ಷೆಗಳು ಏನು? ಕಾಂಗ್ರೆಸ್ ಪಕ್ಷದಲ್ಲಿ ಆಗಬೇಕಿರುವ ಬದಲಾವಣೆಗಳೇನು? ಎಂಬ ಕುರಿತು ಆ ಪಕ್ಷದ ಹಿರಿಯರು ತಿಳಿದುಕೊಳ್ಳಬೇಕಿದೆ. ಗುಜರಾತ್ ಸೋಲಿನಿಂದ ಕಾಂಗ್ರೆಸ್ ಪಾಠ ಕಲಿತು ಮುಂಬರುವ ದಿನಗಳಲ್ಲಿ ಪಕ್ಷದ ಕಾರ್ಯಚಟುವಟಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಹಿಮಾಚಲ ಪ್ರದೇಶದಲ್ಲಿ ಆದ ಪ್ರಮಾದವೇನು ಎಂಬ ಕುರಿತು ಬಿಜೆಪಿ ಮನಗಾಣಬೇಕಿದೆ. ಇನ್ನೊಂದೆಡೆ ಆಮ್ ಆದ್ಮಿ ಪಾರ್ಟಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.  ಗುಜರಾತ್ ನಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯುವಲ್ಲಿ ವಿಫಲವಾಗಿದ್ದರೂ ಐದು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ರಾಷ್ಟ್ರೀಯ ಪಕ್ಷ ಸ್ಥಾನಮಾನಕ್ಕೆ ಭಾಜನವಾಗಿದ್ದು, ಹೊಸ ಪಕ್ಷವೊಂದು ಭರವಸೆ ಮೂಡಿಸಿದೆ.

ಕೃಪೆ: ವಿಶ್ವವಾಣಿ, ಸಂಪಾದಕೀಯ.ದಿ:೦೯-೧೨-೨೦೨

ಚಿತ್ರ ಕೃಪೆ: ಇಂಟರ್ನೆಟ್ ತಾಣ