ಗಂಧದ ಮಾಲೆ-ವ್ಯಕ್ತಿಚಿತ್ರಗಳು

ಗಂಧದ ಮಾಲೆ-ವ್ಯಕ್ತಿಚಿತ್ರಗಳು

ಪುಸ್ತಕದ ಲೇಖಕ/ಕವಿಯ ಹೆಸರು
ರೋಹಿತ್ ಚಕ್ರತೀರ್ಥ
ಪ್ರಕಾಶಕರು
ಅಯೋಧ್ಯಾ, ಗಿರಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೨೦.೦೦ ಮುದ್ರಣ: ೨೦೨೦

ಅಂಕಣಕಾರ, ಲೇಖಕ ರೋಹಿತ್ ಚಕ್ರತೀರ್ಥ ಇವರು ವಿಶ್ವವಾಣಿ ಪತ್ರಿಕೆಯಲ್ಲಿ ‘ಚಕ್ರವ್ಯೂಹ' ಎಂಬ ಅಂಕಣವನ್ನು ಬರೆಯುತ್ತಿದ್ದರು. ಆ ಅಂಕಣ ಬರಹಗಳಿಂದ ಆಯ್ದ ಕೆಲವು ವ್ಯಕ್ತಿಚಿತ್ರಗಳನ್ನು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ರೋಹಿತ್ ಅವರ ಬರಹಗಳು ಸಾಕಷ್ಟು ಅಧ್ಯಯನ ಮಾಡಿ ಬರೆದವುಗಳಾಗಿರುತ್ತವೆ. ಏಕೆಂದರೆ ವ್ಯಕ್ತಿ ಚಿತ್ರಗಳನ್ನು ರೂಪಿಸುವಾಗ ಅವರ ಬಗ್ಗೆ ನಿಖರವಾದ ದಾಖಲೆಗಳಿರುವುದು ಅತ್ಯಂತ ಅವಶ್ಯಕ. ಅಯೋಧ್ಯಾ ಪ್ರಕಾಶನದವರು ಈ ಪುಸ್ತಕದ ಜೊತೆಗೆ ಇನ್ನೊಂದು ಪುಸ್ತಕವನ್ನೂ ಹೊರತಂದಿದ್ದಾರೆ. ಅದರ ಹೆಸರು ವೃಂದಾವನ. ಅವೂ ವ್ಯಕ್ತಿ ಚಿತ್ರಗಳದ್ದೇ ಕಥನ,

ಗಂಧದ ಮಾಲೆಯ ಮುನ್ನುಡಿಯಲ್ಲಿ ರೋಹಿತ್ ಕವಿ ಗೋಪಾಲಕೃಷ್ಣ ಅಡಿಗರ ಸಾಲನ್ನು ಉಲ್ಲೇಖಿಸುತ್ತಾ ಬರೆಯುತ್ತಾರೆ ‘ ಮಹಾತ್ಮರಾಗಲು ಬೇಕಾದ ಚೈತನ್ಯ ಅಂತಸ್ಥವಾಗಿರುವವರು ಜಗತ್ತಿನ ಪ್ರತಿಯೊಬ್ಬರೂ, ಆದರೆ ನಿಜಕ್ಕೂ ಮಹಾತ್ಮರ ಸಾಲಿಗೇರುವ ಮಂದಿ ಬೆರಳೆಣಿಕೆಯಷ್ಟೇ. ಯಾಕೆ ಹಾಗೆ? ಈ ಹೊತ್ತಗೆಯ ಕತೆಗಳಲ್ಲಿ ಅದಕ್ಕೆ ಉತ್ತರ ಸಿಗಬಹುದೇನೋ ಓದುಗರಿಗೆ. ಈ ಬರಹಗಳಲ್ಲಿ ಕೆಲವು ದುರಂತ ಕತೆಗಳು. ಕೆಲವು ದುರಂತಗಳನ್ನು ಮೆಟ್ಟಿ ಸಾಧನೆ ಮಾಡಿದವರ ಕತೆಗಳು. ಒಂದರ್ಥದಲ್ಲಿ ಇವು ನನ್ನ ಕತೆಗಳು, ನಮ್ಮೆಲ್ಲರ ಕತೆಗಳು'

ಗಂಧದ ಮಾಲೆಯಲ್ಲಿ ೧೫ ಅಧ್ಯಾಯಗಳಿವೆ. ಎಲ್ಲವೂ ಪ್ರೇರಕ ವ್ಯಕ್ತಿಚಿತ್ರಗಳು. ಕೊನೆಯ ಅಧ್ಯಾಯವಾದ ಚದುರಿದ ಚಿತ್ರಗಳಂತಿರುವ ನಾಲ್ಕು ಚಿತ್ರಗಳು ದಲ್ಲಿ ರೋಹಿತ್ ಬರೆದ ನಾಲ್ಕು ಕಥೆಗಳನ್ನು ಓದುವಾಗ ನಿಜಕ್ಕೂ ನಮ್ಮಲ್ಲಿ ಒಂದು ಹೊಸ ಉತ್ಸಾಹ ಮೂಡುವುದರಲ್ಲಿ ಸಂಶಯವಿಲ್ಲ. ವಿರಾಟ್ ಕೊಹ್ಲಿ, ಕಲ್ಪನಾ ಚಾವ್ಲಾ ಅವರ ಜೀವನದ ಸಣ್ಣ ಸಣ್ಣ ಕತೆಗಳು ಎಲ್ಲರೂ ಓದಲೇಬೇಕು. ಸುಮಾರು ೧೨೦ ಪುಟಗಳ ಒಂದೇ ಗುಕ್ಕಿನಲ್ಲಿ ಓದಿ ಮುಗಿಸಬಲ್ಲ ಪುಸ್ತಕ ಇದು. 

ಗಗನ ಯಾತ್ರಿಯಾಗಿದ್ದ ಕಲ್ಪನಾ ಚಾವ್ಲಾ ಕಾಲೇಜಿನ ದಿನಗಳ ಒಂದು ಅಧ್ಯಾಯ ಇದೆ. ಅದರಲ್ಲಿ ಹುಡುಗಿಯರು ಅಂದಿನ ಕಾಲದಲ್ಲಿ ಓದಲು ಬಯಸದ ಒಂದು ಕೋರ್ಸ್ ಗೆ ಕಲ್ಪನಾ ಅರ್ಜಿ ಹಾಕುತ್ತಾರೆ. ಕಾಲೇಜಿನ ಪ್ರಾಂಶುಪಾಲರು ‘ನಿನಗಿರುವ ಅಂಕಗಳಿಗೆ ನಿನಗೆ ಯಾವ ಕೋರ್ಸ್ ಗೆ ಬೇಕಾದರೂ ಸೀಟ್ ಕೊಡಬಲ್ಲೆ. ನೀನು ಯಾಕೆ ಇದೇ ಕೋರ್ಸ್ ಗೆ ಪ್ರವೇಶ ಬೇಕೆಂದು ಹಠ ಹಿಡಿಯುತ್ತೀ? ನೀನು ಈ ಕೋರ್ಸ್ ಗೆ ಸೇರಿದರೂ ಯಾರೂ ಹುಡುಗಿಯರು ಬರಲ್ಲ. ಹುಡುಗರ ನಡುವೆ ನೀನೊಬ್ಬಳೇ ಇರಬೇಕಲ್ಲಮ್ಮಾ’ ಅನ್ನುತ್ತಾರೆ. ಅದಕ್ಕೆ ಕಲ್ಪನಾ ಚಾವ್ಲಾ ಹೇಳುತ್ತಾರೆ' ಉಳಿದ ಹುಡುಗಿಯರು ಬರೊಲ್ಲಾ ಅನ್ನುವ ಕಾರಣಕ್ಕೆ ನಾನ್ಯಾಕೆ ಈ ಅವಕಾಶದಿಂದ ವಂಚಿತಳಾಗಬೇಕು? ಎಂದು ಬಿಗಿಯಾದ ವಾದ ಮಾಡುತ್ತಾರೆ. ಪ್ರಾಂಶುಪಾಲರು ಅವರ ವಾದಕ್ಕೆ ಮಣಿದು ಅದೇ ಕೋರ್ಸ್ ಗೆ ಸೀಟ್ ನೀಡುತ್ತಾರೆ. ಗೆಲ್ಲಲು ಹೊರಟವರು ಎಲ್ಲಾ ವಾದಗಳನ್ನು ತಮ್ಮ ಕಡೆಗೆ ತಿರುಗಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಕಲ್ಪನಾ ಚಾವ್ಲಾ ಒಂದು ಉದಾಹರಣೆಯಷ್ಟೇ. ಇಂತಹ ಹಲವಾರು ವ್ಯಕ್ತಿಚಿತ್ರಗಳನ್ನು ರೋಹಿತ್ ಚಕ್ರತೀರ್ಥರವರು ನಮ್ಮ ಕಣ್ಣಿಗೆ ಕಟ್ಟಿದಂತೆ ಬರೆದಿದ್ದಾರೆ. ಒಮ್ಮೆ ಖಂಡಿತವಾಗಿಯೂ ಓದಿನೋಡಿ.