ಗಾಂಧೀವಾದಿಗಳೊಂದಿಗೆ ನನ್ನ ಅನುಭವಗಳು (ಓಷೋ ರಜನೀಶ್ ಚಿಂತನೆಗಳು)

ಗಾಂಧೀವಾದಿಗಳೊಂದಿಗೆ ನನ್ನ ಅನುಭವಗಳು (ಓಷೋ ರಜನೀಶ್ ಚಿಂತನೆಗಳು)

            ಸ್ವಾತಂತ್ರ್ಯ ಬಂದ ಮೇಲೆ ದೇಶದ ಬಹುತೇಕ ರಾಜಕಾರಿಣಿಗಳು ಗಾಂಧೀವಾದಿಗಳೇ ಆಗಿದ್ದರು. ಗಾಂಧಿ ಸತ್ತ ಮೇಲೆ ಅವರ ವಾರ್ಧಾ ಆಶ್ರಮವನ್ನು ಅವರ ಮಗ ರಾಮದಾಸ್ ನಡೆಸಿಕೊಂಡು ಹೋಗುತ್ತಿದ್ದಾರೆ. ನಾನು ಜೈನ ಕುಟುಂಬದಲ್ಲಿ ಹುಟ್ಟಿದ್ದರಿಂದ ಮೊದಮೊದಲು ಜೈನರೇ ನನ್ನ ಕೇಳುಗರಾಗಿದ್ದರು. ಮತ್ತು ನಮ್ಮ ಕಡೆ ಎಲ್ಲ ಜೈನರೂ ಗಾಂಧೀವಾದಿಗಳಾಗಿದ್ದರು. ಜೈನಧರ್ಮದ ಅಹಿಂಸಾ ತತ್ವವನ್ನು ಗಾಂಧಿ ತಮ್ಮ ಸಿದ್ಧಾಂತದಲ್ಲಿ ಅಳವಡಿಸಿಕೊಂಡಿದ್ದರಿಂದ ಕ್ರಮೇಣ ಗಾಂಧೀವಾದಿಗಳೂ ನನ್ನ ಬಳಿ ಬರಲಾರಂಭಿಸಿದರು. ವಿನೋಬಾ ಭಾವೆ ಸಹ ಒಮ್ಮೆ ನನ್ನನ್ನು ಭೇಟಿ ಮಾಡಲು ಬಯಸಿದ್ದರು. ಆ ಕಾಲದ ಪ್ರಸಿದ್ಧ ಗಾಂಧೀವಾದಿಗಳಾದ ಶಂಕರರಾವ್ ದೇವ್ (ಆಡಳಿತ ಪಕ್ಷದ ಪ್ರಧಾನ ಕಾರ್ಯದರ್ಶಿ), ದಾದಾ ಧರ್ಮಾಧಿಕಾರಿ, ಆಚಾರ್ಯ ಭಾಗವತ್ ಮೊದಲಾದವರು ನನ್ನ ಧ್ಯಾನಶಿಬಿರಕ್ಕೆ ಬರಲಾರಂಭಿಸಿದ ಮೇಲೆ ಗಾಂಧೀವಾದಿಗಳ ವಲಯದಲ್ಲಿ ನಾನು ಕ್ರಮೇಣ ಹೆಸರುವಾಸಿಯಾದೆ. ಒಮ್ಮೆ ನಾನು ಗಾಂಧಿಯನ್ನು ಟೀಕಿಸಲಾರಂಭಿಸಿದ ಮೇಲೆ ಇವರೆಲ್ಲ ಒಬ್ಬೊಬ್ಬರಾಗಿ ನನ್ನ ವಲಯದಿಂದ ದೂರವಾದರು. ಹಾಗೆ ನೋಡಿದರೆ ನಾನೇನೂ ಟೀಕಿಸಿರಲಿಲ್ಲ, ಇರುವ ವಿಷಯಗಳನ್ನು ನೇರವಾಗಿ ಹೇಳಿದ್ದೆ.

            ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ಸಿನ ಅಧ್ಯಕ್ಷರೂ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಯು.ಎನ್.ಧೇಬರ್ ಅವರು ನನ್ನ ಶಿಬಿರಗಳಿಗೆ ಬರುತ್ತಿದ್ದರು. ಒಮ್ಮೆ ನನ್ನ ಪ್ರವಚನಗಳನ್ನು ಕೇಳಿ “ನೀವು ಗಾಂಧೀವಾದದ ಸಮರ್ಥ ಉತ್ತರಾಧಿಕಾರಿಗಳು ಎಂದು ನನ್ನ ಅನಿಸಿಕೆ. ನೀವು ಮಾತ್ರ ಗಾಂಧೀವಾದವನ್ನು ಸಾಯದಂತೆ ರಕ್ಷಿಸಬಲ್ಲಿರಿ” ಎಂದಿದ್ದರು “ನಾನು ಯಾರ ಉತ್ತರಾಧಿಕಾರಿಯಾಗಲೂ ಇಷ್ಟ ಪಡುವುದಿಲ್ಲ, ಇನ್ನೊಬ್ಬರ ಸಿದ್ಧಾಂತಗಳನ್ನು ಪ್ರಚಾರ ಮಾಡುವುದು ನನ್ನ ಜಾಯಮಾನವಲ್ಲ” ಎಂದಿದ್ದೆ. ಆ ದಿನ ದೇಬರ್ ನನ್ನನ್ನು ಪ್ರಚೋದಿಸಿದ್ದ ಕಾರಣ ನನ್ನ ಪ್ರವಚನದಲ್ಲಿ ಗಾಂಧೀವಾದವನ್ನು ತೀವ್ರವಾಗಿ ಖಂಡಿಸಿದೆ. “ನಮ್ಮ ದೇಶ ಉಳಿಯಬೇಕೆಂದರೆ ಗಾಂಧೀವಾದ ಸಾಯಬೇಕು, ಇಲ್ಲವಾದರೆ ಗಾಂಧೀವಾದವನ್ನು ಉಳಿಸಿಕೊಳ್ಳಲು ನಾಡನ್ನೇ ಬಲಿದಾನ ನೀಡಬೇಕಾಗುತ್ತದೆ. ನನಗಂತೂ ನಾಡು ಮುಖ್ಯ, ಗಾಂಧೀವಾದ ಸತ್ತರೆ ಸಾಯಲಿ, ಗಾಂಧಿಯೇ ಸತ್ತ ಮೇಲೆ ಅವರ ವಾದವನ್ನು ಉಳಿಸಿಕೊಂಡು ಏನು ಮಾಡುವುದು? ನಾನು ದೇಬರ್ ಅವರೊಂದಿಗೆ ಇಡೀ ಸಭೆಯನ್ನು ಈ ವಿಷಯದ ಕುರಿತ ಬಹಿರಂಗ ಚರ್ಚೆಗೆ ಆಹ್ವಾನಿಸುತ್ತೇನೆ” ಎಂದು ಸವಾಲೆಸೆದೆ. ಆಮೇಲೆ ದೇಬರ್ ಅವರು “ನನಗೆ ನಿಮ್ಮ ಇಂಗಿತ ಅರ್ಥವಾಗುತ್ತದೆ. ಆದರೂ ಅಂತಹ ಸಭೆಗಳಲ್ಲಿ ನಾವು ಹಿಂದೆ ಮುಂದೆ ವಿಚಾರ ಮಾಡಿ ಮಾತನಾಡಿದರೆ ಒಳ್ಳೆಯದು” ಎಂದರು. ನನಗೆ ಅವರ ಮಾತುಗಳು ಅರ್ಥವಾಗಲಿಲ್ಲ ಆಮೇಲೆ ಅವರೇ ವಿವರಿಸಿದರು “ನಿಮಗೆ ಗಾಂಧೀವಾದಿಗಳ ಇಷ್ಟು ದೊಡ್ಡ ಬೆಂಬಲವಿದೆ, ಈ ಬೆಂಬಲದಿಂದ ನೀವು ಯಾವ ಮಟ್ಟಕ್ಕಾದರೂ ಹೋಗಬಹುದೆಂದು ನಿಮಗೆ ತಿಳಿದಿದೆಯೇ? ನಿಮ್ಮ ಯಾವುದೇ ಮಾತುಗಳಿಂದ ನಿಮಗೆ ಪ್ರಯೋಜನವಾಗುತ್ತದೆಯೇ ಇಲ್ಲವೇ ಎಂದು ಯೋಚಿಸಿ ಮಾತನಾಡಿದರೆ ಕ್ಷೇಮ. ನೀವು ಗಾಂಧೀ ವಿರುದ್ಧ ಮಾತನಾಡಿದರೆ ಇವರೆಲ್ಲ ನಿಮ್ಮನ್ನು ಬಿಟ್ಟು ದೂರ ಸರಿಯುತ್ತಾರೆ, ಆದರೆ ಗಾಂಧೀವಾದವನ್ನಂತೂ ಇವರು ಬಿಡುವವರಲ್ಲ” ಎಂದು ಕಿವಿ ಮಾತು ಹೇಳಿದರು. ರಾಜಕೀಯ ಲಾಭಕ್ಕಾಗಿ ನಾನು ನನ್ನ ಅಭಿಪ್ರಾಯಗಳನ್ನು ದುಡಿಸಿಕೊಳ್ಳಬೇಕು ಎಂಬುದು ಅವರ ಒಟ್ಟಾರೆ ಸಲಹೆಯಾಗಿತ್ತು. ಆದರೆ ಸತ್ಯವೆಂದು ತೋರುವುದನ್ನು ಪರಿಣಾಮಗಳನ್ನು ಲೆಕ್ಕಿಸದೇ ಹೇಳುವುದು ನನ್ನ ಜಾಯಮಾನ. ಹಾಗಾಗಿ ಈ ಮೂವತ್ತು ವರ್ಷಗಳಲ್ಲಿ ನಾನು ಎಷ್ಟೋ ಗಾಂಧೀವಾದಿ ಸ್ನೇಹಿತರನ್ನು ಕಳೆದುಕೊಂಡಿದ್ದೇನೆ. ಸಣ್ಣ ಪುಟ್ಟ ಕಾರಣಗಳಿಗಾಗಿ ಲೆಕ್ಕವಿಲ್ಲದಷ್ಟು ಸ್ನೇಹಿತರು ನನ್ನ ಸಂಪರ್ಕವನ್ನು ತ್ಯಜಿಸಿದ್ದಾರೆ. ನಾನು ಕೈಮಗ್ಗದ ಬಟ್ಟೆಗಳನ್ನು ಉಪಯೋಗಿಸುತ್ತಿದ್ದುದೂ ಗಾಂಧೀವಾದಿಗಳು ನನ್ನತ್ತ ಆಕರ್ಷಿತರಾಗಲು ಇನ್ನೊಂದು ಕಾರಣ.

            ನಾನು ಅರಮನೆಗಳಲ್ಲಿ ವಾಸಿಸುವ ಗಾಂಧೀವಾದಿಗಳನ್ನು ನಾನು ಬಲ್ಲೆ. ಬಾಬು ರಾಜೇಂದ್ರ ಪ್ರಸಾದರು ರಾಷ್ಟ್ರಪತಿಗಳಾಗಿದ್ದ ಸಮಯದಲ್ಲಿ ಒಮ್ಮೆ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ್ದೆ. ನೂರು ಮಲಗುವ ಕೋಣೆಗಳು, ರಾಜಭವನದ ಸುತ್ತ ನೂರು ಎಕರೆ ವಿಸ್ತಾರದ ಬೃಹತ್ ಉದ್ಯಾನವನ, ಎಲ್ಲ ಐಷಾರಾಮಿ ಅನುಕೂಲಗಳೂ ಅಲ್ಲಿದ್ದವು. ಆದರೆ ಅವರು ವೈಸ್‌ರಾಯ್ ಸಿಂಹಾಸನದ ಮೇಲೆ ಬಿದಿರಿನ ಚಾಪೆ ಹಾಸಿಕೊಂಡು ಕುಳಿತುಕೊಳ್ಳುತ್ತಿದ್ದುದನ್ನು ಗಮನಿಸಿದೆ. ನೂರಾರು ಸೇವಕರುಗಳು ಕೆಲಸ ಮಾಡುವ ಅರಮನೆಯಲ್ಲಿ ಜೀವಿಸುವವನು ಚಾಪೆ ಹಾಸಿಕೊಂಡು ಕುಳಿತುಕೊಳ್ಳುವುದು ನಿಜಕ್ಕೂ ಅರ್ಥಹೀನ. ನನ್ನ ಕಣ್ಣಿಗೆ ಇವೆಲ್ಲ ಹುಚ್ಚುತನದ ಲಕ್ಷಣಗಳಂತೆ ತೋರುತ್ತವೆ. ಗುಡಿಸಲಲ್ಲಿ ವಾಸಿಸುವ ಇಚ್ಛೆ ಇದ್ದವನು ಗುಡಿಸಲಿಗೆ ಹೋಗಿ ವಾಸಿಸಬೇಕು. ಹಾಗಲ್ಲದೆ, ಅರಮನೆ, ಅಧಿಕಾರಗಳು ಬೇಕಿದ್ದರೆ, ಅರಮನೆಯ ಐಷಾರಾಮೀ ಜೀವನ ಅನುಭವಿಸಬೇಕು. ಯಾರನ್ನು ಸಮಾಧಾನ ಪಡಿಸಲು ಅರಮನೆಯಲ್ಲಿ ಗುಡಿಸಲಿನ ವಾತಾವರಣವನ್ನು ತರುವರೋ ನನಗೆ ಅರ್ಥವಾಗುವುದಿಲ್ಲ. ಇವೆಲ್ಲ ನಮ್ಮೊಳಗಿನ ದ್ವಂದ್ವವನ್ನು ಸೂಚಿಸುತ್ತದೆ.

            ಹಾಗೆ ನೋಡಿದರೆ ಲಾಲ್ ಬಹದ್ದೂರ್ ಶಾಸ್ತ್ರೀ ನಾನು ನೋಡಿದ ಅತ್ಯುತ್ತಮ ರಾಜಕಾರಿಣಿಯಾಗಿದ್ದರು. “ನೀವು ಹೀಗೆ ಕಟು ಸತ್ಯಗಳನ್ನು ಹೇಳದೇ ಸ್ವಲ್ಪ ಕಡಿಮೆ ಪ್ರಾಮಾಣಿಕರೂ, ಹೆಚ್ಚು ವ್ಯವಹಾರಸ್ಥರೂ ಆಗಿಬಿಟ್ಟರೆ ಸುಲಭವಾಗಿ ಈ ದೇಶದ ಬಹುದೊಡ್ಡ ಮಹಾತ್ಮ ಆಗಿಬಿಡುವಿರಿ” ಎಂದು ನನಗೆ ಹೇಳುತ್ತಿದ್ದರು. “ನಾನು ಧಾರ್ಮಿಕತೆಯನ್ನು ಬಿಡಬಲ್ಲೆ ಆದರೆ ಬಂಡಾಯದ ಪ್ರವೃತ್ತಿಯನ್ನು ಕೊನೆಯವರೆಗೂ ಬಿಡಲಾರೆ. ಬಂಡಾಯದ ಪ್ರವೃತ್ತಿಯನ್ನು ಕಳೆದುಕೊಂಡರೆ ನನ್ನ ಧಾರ್ಮಿಕತೆಯ ಮೂಲವೇ ತಿರೋಧಾನವಾಗಿಬಿಡುತ್ತದೆ” ಎಂದು ಹೇಳಿದ್ದೆ. ಅವರು ನನ್ನತ್ತ ತುಂಬ ಆಕರ್ಷಿತರಾಗಿದ್ದರೂ ಕೂಡ ನೇರವಾಗಿ ಭೇಟಿಯಾಗಲು ಹಿಂಜರಿಯುತ್ತಿದ್ದರು. ಕಾಶ್ಮೀರದ ರಾಜಮನೆತನದವರೂ, ಸಂಪುಟ ಸಚಿವರೂ ಆಗಿದ್ದ ಕರಣ್‍ಸಿಂಗ್‌ಗೆ ಔತಣ ಕೂಟವನ್ನು ಏರ್ಪಡಿಸಲು ಹೇಳಿ ನನ್ನನ್ನು ಅಲ್ಲಿಗೆ ಆಹ್ವಾನಿಸುವಂತೆ ಏರ್ಪಾಟು ಮಾಡುತ್ತಿದ್ದರು. ಆಗ ಅವರೂ ಔತಣಕೂಟದ ನೆವದಲ್ಲಿ ಅಲ್ಲಿಗೆ ಬಂದು ನನ್ನೊಡನೆ ತಮ್ಮ ಸಮಸ್ಯೆಗಳ ಕುರಿತು, ದೇಶದ ರಾಜಕೀಯ ಅಧಃಪತನದ ಕುರಿತು ಗಂಟೆಗಟ್ಟಲೆ ಚರ್ಚಿಸುತ್ತಿದ್ದರು. ಕರಣ್ ಸಿಂಗ್ ಸಹ ನನ್ನ ಆಪ್ತ ಸಂಗಡಿಗರಲ್ಲೊಬ್ಬರು. “ನೀವೇಕೆ ಒಮ್ಮೆ ನನ್ನ ಧ್ಯಾನಶಿಬಿರಕ್ಕೆ ಬಂದು ನನ್ನೊಂದಿಗೆ ಕೆಲವು ದಿನ ಇರಬಾರದು” ಎಂದು ಸಲಹೆ ನೀಡುತ್ತಿದ್ದೆ. “ಎಲ್ಲಾದರೂ ಉಂಟೇ? ನಿಮ್ಮೊಂದಿಗೆ ಆಪ್ತ ಸಮಾಲೋಚನೆ ನಡೆಸುತ್ತಿದ್ದೇನೆ ಎಂದು ಹೊರಗೆ ತಿಳಿದರೆ ನನ್ನ ಕತೆ ಮುಗಿದಂತೆಯೇ. ದೇಶದೆಲ್ಲೆಡೆ ನಿಮ್ಮ ಶತ್ರುಗಳಿದ್ದಾರೆ, ನನ್ನ ಪಕ್ಷದಲ್ಲೇ ಹಲವು ವೈರಿಗಳಿದ್ದಾರೆ. ನನ್ನಿಂದ ಅದು ಸಾಧ್ಯವಿಲ್ಲ, ನಾನು ನಿಜಕ್ಕೂ ತುಂಬ ದುರ್ಬಲ ವ್ಯಕ್ತಿ. ನಾನು ದುರ್ಬಲನೆಂದೇ ಪ್ರಧಾನಿಯ ಕುರ್ಚಿಯ ಮೇಲೆ ಕೂರಿಸಿರುವುದು” ಎಂದು ತುಂಬ ಪ್ರಾಮಾಣಿಕವಾಗಿ ಹೇಳುತ್ತಿದ್ದರು. ರಷ್ಯಾದಲ್ಲಿ ಅವರು ಅಸುನೀಗಿದಾಗ ಪ್ರಯಾಣದುದ್ದಕ್ಕೂ ನನ್ನ ಪುಸ್ತಕವನ್ನು ಓದುತ್ತಿದ್ದರು ಎಂದು ಆಮೇಲೆ ಅವರ ಕಾರ್ಯದರ್ಶಿಯಿಂದ ನನಗೆ ತಿಳಿಯಿತು. ಹೃದಯಾಘಾತವಾದ ರಾತ್ರಿಯೂ ಅವರ ಕೈಯಲ್ಲಿ ನನ್ನ ಕೃತಿಯೇ ಇತ್ತಂತೆ.                                                                                                                                                                                           *

            ಇಲ್ಲಿನ ಸಮಾಜವಾದೀ ಪಕ್ಷಗಳಿಗೆ ಕಮ್ಯುನಿಸ್ಟರ ವಿರುದ್ಧ ಸೆಣೆಸಲು ಬಂಡವಾಳಶಾಹಿಗಳಿಂದ ಧನಸಹಾಯ ಸಿಗುತ್ತಿತ್ತು ಎಂದು ತುಂಬ ಜನಕ್ಕೆ ತಿಳಿದಿಲ್ಲ. ಜಯಪ್ರಕಾಶ ನಾರಾಯಣರಿಗೆ ಜುಗಲ್ ಕಿಶೋರ್ ಬಿರ್ಲಾರಿಂದ ಪ್ರತಿ ತಿಂಗಳೂ ಹಣ ಸಂದಾಯವಾಗುತ್ತಿತ್ತು. ಸಮಾಜವಾದಿಗಳನ್ನು ಮುಂದಿಟ್ಟುಕೊಂಡು ತಮ್ಮ ನಿಜವಾದ ಶತ್ರುಗಳಾದ ಕಮ್ಯುನಿಸ್ಟರನ್ನು ತಲೆ ಎತ್ತದಂತೆ ಮಾಡುವುದು ಬಿರ್ಲಾರಂತಹ ಶ್ರೀಮಂತರ ಮುಖ್ಯ ಉದ್ದೇಶಗಳಲ್ಲಿ ಒಂದಾಗಿತ್ತು. ಆಗ ನನ್ನ ಪ್ರತಿಯೊಂದು ಪ್ರವಚನಕ್ಕೂ ಐವತ್ತು ಸಾವಿರ ಜನ ಸೇರುತ್ತಿದ್ದುದರಿಂದ ಒಮ್ಮೆ ಬಿರ್ಲಾ ಅವರು ನನಗೂ ಧನಸಹಾಯ ನೀಡಲು ಮುಂದೆ ಬಂದಿದ್ದರು. ನಾನಿದ್ದ ಕ್ಷೇತ್ರದ ಸಂಸದರಾಗಿದ್ದ ಸೇಠ್ ಗೋವಿಂದದಾಸ್‌ರ ಮೂಲಕ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಗೋವಿಂದದಾಸ್‌ರ ಒತ್ತಾಯಕ್ಕೆ ಮಣಿದು ನಾನು ಮನಸ್ಸಿಲ್ಲದೆ ಅವರನ್ನು ಭೇಟಿ ಮಾಡಲು ಒಪ್ಪಿದೆ. ನನ್ನನ್ನು ಭೇಟಿ ಮಾಡಿದ ದಿನ ಅವರು ಒಂದು ಖಾಲಿ ಚೆಕ್ಕನ್ನು ನೀಡಲು ಮುಂದಾದರು “ನಾನು ಸ್ವಾತಂತ್ರ್ಯ ಸಂಗ್ರಾಮದ ನೆರವಿಗೆಂದು ಮಹಾತ್ಮಾ ಗಾಂಧಿಯವರಿಗೂ ಖಾಲಿ ಚೆಕ್ಕುಗಳನ್ನು ನೀಡಿದ್ದೇನೆ” ಎಂದರು. ನಾಳೆಯ ದಿನ ಈ ಕಾಂಗ್ರೆಸ್ಸಿಗರು ಸರ್ಕಾರವನ್ನು ರಚಿಸಿದಾಗ ಈ ಹಣವನ್ನೆಲ್ಲ ಸುಲಭೋಪಾಯದಿಂದ ಮುಪ್ಪಟ್ಟು ಹಿಂದಕ್ಕೆ ಪಡೆಯಬಹುದು ಎಂಬುದು ಇವರ ಲೆಕ್ಕಾಚಾರ. ಮುಂದೆ ಇವರ ಲೆಕ್ಕಾಚಾರ ನಿಜವಾಯಿತು. ಸ್ವಾತಂತ್ರ್ಯಾನಂತರ ಎಲ್ಲ ರಾಜಕಾರಿಣಿಗಳನ್ನೂ ಇವರು ಖರೀದಿಸಿಬಿಟ್ಟರು. ನೆಹರೂ, ಲೋಹಿಯಾ, ಅಶೋಕ್ ಮೆಹತಾ ಎಲ್ಲರೂ ಇವರ ಹಂಗಿಗರಾಗಿದ್ದರು.

            ಒಮ್ಮೆ ಪ್ರಾಸಂಗಿಕವಾಗಿ ಜಯಪ್ರಕಾಶ ನಾರಾಯಣರ ಈ ವ್ಯವಹಾರವನ್ನು ಇಂದಿರಾಗಾಂಧಿಗೆ ತಿಳಿಸಿದಾಗ ಆಕೆಗೆ ನಿಜಕ್ಕೂ ಆಘಾತವಾಯಿತು. ಇಂದಿರಾ ಜಯಪ್ರಕಾಶರನ್ನು ತಂದೆಯಷ್ಟೇ ಗೌರವಿಸುತ್ತಿದ್ದಳು, ’ಕಾಕಾ’ ಎಂದು ಸಂಬೋಧಿಸುತ್ತಿದ್ದಳು. ತುಂಬ ವರ್ಷಗಳ ಕಾಲ ನೆಹರೂ ಅವರ ಕಾರ್ಯದರ್ಶಿಯಾಗಿದ್ದ ಜಯಪ್ರಕಾಶರ ಕಣ್ಮುಂದೆಯೇ ಹುಟ್ಟಿ ಬೆಳೆದ ಹುಡುಗಿ ಆಕೆ. ಒಮ್ಮೆ ಆಕೆ ಜಯಪ್ರಕಾಶರನ್ನು ಈ ಕುರಿತು ಕೇಳಿಯೇ ಬಿಟ್ಟಳು. ಅಂದಿನಿಂದ ಅವರಿಬ್ಬರ ನಡುವೆ ವಿರಸ ಏರ್ಪಟ್ಟಿತು. ಆಮೇಲೆ ಜಯಪ್ರಕಾಶರು ಇಂದಿರಾ ಗಾಂಧಿಯ ಪ್ರಭಾವವನ್ನು ತಗ್ಗಿಸಲು ಮೊರಾರ್ಜಿಯನ್ನು ಬೆಂಬಲಿಸಲಾರಂಭಿಸಿದರು. ಸ್ವಾತಂತ್ರ್ಯಾನಂತರ ಕಾಂಗ್ರೇಸ್-ಸಮಾಜವಾದೀ ಪಕ್ಷಗಳ ನಡುವೆ ನಡೆದ ತಿಕ್ಕಾಟಗಳೆಲ್ಲ ಬರೀ ಪ್ರತಿಷ್ಠೆಗಾಗಿ ನಡೆದ ಹೋರಾಟಗಳು. ತಾನು ನೆಹರೂಗಿಂತ ಕಡಿಮೆ ಪ್ರಭಾವಿಯಲ್ಲ ಎಂದು ಜಯಪ್ರಕಾಶರಿಗೆ ಸಾಬೀತು ಮಾಡಬೇಕಾಗಿತ್ತು. ತಾನು ಪ್ರಧಾನಿ ಹುದ್ದೆಗೆ ಆಶಿಸುವವನಲ್ಲ ಬದಲಿಗೆ ಪ್ರಧಾನಿಗಳನ್ನು ತನ್ನಿಚ್ಛೆಯಂತೆ ಸೃಷ್ಟಿಸಬಲ್ಲೆ ಎಂದು ಜಗತ್ತಿಗೆ ತೋರಿಸಲು ಮೊರಾರ್ಜಿಯನ್ನು ಬೆಂಬಲಿಸಿ ಪ್ರಧಾನಿಯನ್ನಾಗಿಸಿದರು. ಹಾಗಲ್ಲದೆ ಇಂದಿರಾ ವಿರುದ್ಧ ಅಷ್ಟು ದೊಡ್ಡ ಮಟ್ಟದ ಬಂಡಾಯವನ್ನು ನಡೆಸಲು ಬಡಪಾಯಿ ಮೊರಾರ್ಜಿಯಂತಹವರಿಗೆ ಸಾಧ್ಯವೇ? ನಾನು ಪಾಟ್ನಾದಲ್ಲಿ ಪ್ರವಚನಗಳನ್ನು ನೀಡುತ್ತಿದ್ದಾಗ ಜಯಪ್ರಕಾಶರ ಪತ್ನಿ ಪ್ರಭಾವತಿ ಪ್ರತಿದಿನ ನನ್ನ ಪ್ರವಚನಕ್ಕೆ ಹಾಜರಾಗುತ್ತಿದ್ದರು. ಒಮ್ಮೆ ನಾನು “ನಿಮ್ಮ ಮನೆಯವರು ಬರುವುದಿಲ್ಲವೇ?” ಎಂದು ಕೇಳಿದೆ. “ಅವರೂ ತಪ್ಪದೆ ಬರುತ್ತಾರೆ ಆದರೆ ಹೊರಗೆ ಕಾರಿನಲ್ಲಿ ಕುಳಿತೇ ತಮ್ಮ ಮಾತುಗಳನ್ನು ಕೇಳುತ್ತಾರೆ” ಎಂದು ಹೇಳಿದ್ದರು. ಅಹಂಕಾರ ಎಷ್ಟೊಂದು ಸೂಕ್ಷ್ಮವಾದುದು, ರಾಜಕಾರಿಣಿಗಳ ವಿಷಯದಲ್ಲಂತೂ ಅದೊಂದು ರೋಗವಾಗಿ ಪ್ರತಿಕ್ಷಣ ಬಾಧಿಸುತ್ತಿರುತ್ತದೆ!

            ಅಂದು ಬಿರ್ಲಾ ನನಗೆ ಖಾಲಿ ಚಕ್ಕನ್ನು ನೀಡಲು ಮುಂದಾದಾಗ ನಾನು “ಯಾವುದೇ ನಿಬಂಧನೆಗಳನ್ನು ಹೇರದೇ ಕೊಟ್ಟರೆ ನಿಮ್ಮ ಚೆಕ್ಕನ್ನು ತೆಗೆದುಕೊಳ್ಳುತ್ತೇನೆ” ಎಂದು ಹೇಳಿದೆ. “ಸುಮ್ಮನೆ ಹೇಗೆ ಚೆಕ್ಕನ್ನು ಕೊಡಲಿ? ನಿಮ್ಮಿಂದ ನನಗೆ ಕೆಲವು ಸಹಾಯಗಳಾಗಬೇಕು, ಎಷ್ಟೇ ಆದರೂ ನಾನೊಬ್ಬ ವ್ಯಾಪಾರಿ” ಎಂದರು “ಆದರೆ ನಾನು ವ್ಯಾಪಾರಿಯಲ್ಲವಲ್ಲ, ಅಷ್ಟಕ್ಕೂ ನಿಮ್ಮ ಅಪೇಕ್ಷೆಗಳೇನು?” ಎಂದು ಕೇಳಿದೆ ಅದಕ್ಕೆ ಅವರು “ತುಂಬ ಸರಳವಾದುದು. ಇನ್ನು ಮುಂದೆ ತಾವು ಹಿಂದೂಧರ್ಮವನ್ನು ಬೋಧಿಸಬೇಕು ಹಾಗು ಗೋಹತ್ಯಾ ನಿಷೇಧಕ್ಕೆ ಒತ್ತಾಯಿಸಿ ದೊಡ್ಡ ಮಟ್ಟದ ಚಳವಳಿಯನ್ನು ಪ್ರಾರಂಭಿಸಬೇಕು” ಎಂದರು. ನಾನು ಏನನ್ನೂ ಹೇಳದೇ ಕೂಡಲೆ ಎದ್ದು ಅಲ್ಲಿಂದ ಹೊರನಡೆದೆ. ಗೋವಿಂದದಾಸ್ ಇದನ್ನು ನಿರೀಕ್ಷಿಸಿರಲಿಲ್ಲ. ಬಿರ್ಲಾಗೆ ಮುಖಭಂಗವಾಯಿತು ಎಂದು ಭಾವಿಸಿದರು. ನಾನು ಅವರಿಗೆ ಹೇಳಿದೆ “ನಿಜವಾಗಿಯೂ ಮುಖಭಂಗವಾದದ್ದು ನನಗೆ. ನಾನೇನು ಮಾರಾಟಕ್ಕಿರಿಸಿದ ವಸ್ತುವೇ? ಇನ್ನುಮುಂದೆ ನನ್ನ ಜೀವಮಾನವಿಡೀ ಹಿಂದೂಧರ್ಮದ ವಿರುದ್ಧ ಹೋರಾಡುವಂತೆ ಇವರು ನನ್ನನ್ನು ಕೆರಳಿಸಿದ್ದಾರೆ. ಗೋವುಗಳನ್ನು ಸಂರಕ್ಷಿಸಲು ಸನ್ನದ್ಧರಾಗಿರುವ ಎಲ್ಲ ಗೋಮುಖ ವ್ಯಾಘ್ರಗಳ ವಿರುದ್ಧವೂ ನಾನು ಹೋರಾಟ ನಡೆಸುತ್ತೇನೆ” ಎಂದೆ. ನಾನು ಪುರಿ ಶಂಕರಾಚಾರ್ಯ ಪೀಠದ ಜಗದ್ಗುರುಗಳ ವೈರವನ್ನು ಕಟ್ಟಿಕೊಂಡದ್ದು ಹೀಗೆಯೇ. ಏಕೆಂದರೆ ಆಗ ಅವರು ಗೋರಕ್ಷಣೆಯ ಚಳವಳಿಯ ನೇತೃತ್ವ ವಹಿಸಿದ್ದರು. ಜಮುನಾಲಾಲ್ ಬಜಾಜರು ಮಹಾತ್ಮಾ ಗಾಂಧಿಯನ್ನು ಸಾಬರಮತಿಯಿಂದ ತಮ್ಮ ಸ್ಥಳವಾದ ವಾರ್ಧಾಗೆ ಆಹ್ವಾನಿಸಿ ವಾರ್ಧಾ ಆಶ್ರಮವನ್ನು ಬಳುವಳಿಯಾಗಿ ನೀಡಿ ಅವರು ಶಾಶ್ವತವಾಗಿ ಅಲ್ಲೇ ಉಳಿಯುವಂತೆ ಮಾಡಿದರು. ಮಾತ್ರವಲ್ಲ ಆಗಾಗ ಖಾಲಿ ಚೆಕ್ಕನ್ನೂ ನೀಡುತ್ತಿದ್ದರು. ಗಾಂಧಿಯನ್ನು ನೋಡಲೆಂದು ರಾಷ್ಟ್ರಮಟ್ಟದ ನಾಯಕರುಗಳೆಲ್ಲ ವಾರ್ಧಾಗೆ ಬರುವರೆಂದು ಅವರಿಗೆ ಗೊತ್ತಿತ್ತು. ಅಂಥವರಿಗೆಂದು ಐನೂರು ವೈಭವೋಪೇತ ಅತಿಥಿಗೃಹಗಳನ್ನೂ ಅಲ್ಲಿ ನಿರ್ಮಿಸಿದ್ದರು.