ಗಾಂಧೀವಾದ ಒಂದು ಮರುಪರಿಶೀಲನೆ (ಓಷೋ ರಜನೀಶ್ ಚಿಂತನೆಗಳು)

ಗಾಂಧೀವಾದ ಒಂದು ಮರುಪರಿಶೀಲನೆ (ಓಷೋ ರಜನೀಶ್ ಚಿಂತನೆಗಳು)


ಗಾಂಧಿಯ ಅಹಿಂಸೆ - ಒಂದು ರಾಜಕೀಯ ತಂತ್ರ

 

ಒಮ್ಮೆ ಒಬ್ಬರು ತುಂಬಿದ ಸಭೆಯಲ್ಲಿ “ಗಾಂಧಿ ಹಾಗು ಅವರ ಅಹಿಂಸಾ ತತ್ವದ ಬಗ್ಗೆ ಏನು ಹೇಳುವಿರಿ?” ಎಂದು ಕೇಳಿದರು. ಆಗ ನಾನು “ಗಾಂಧಿ ಒಬ್ಬ ಕುತಂತ್ರ ರಾಜಕಾರಿಣಿ. ಅಹಿಂಸೆಯ ಹೆಸರಿನಲ್ಲಿ ತಮ್ಮ ಹಲವು ಉದ್ದೇಶಗಳನ್ನು ಸುಲಭವಾಗಿ ನೆರವೇರಿಸಿಕೊಂಡರು” ಎಂದು ಹೇಳಿದ್ದೆ. ಮೊದಲಿಗೆ, ಗುಜರಾತ್‌ನ ಬಹುಸಂಖ್ಯಾತರಾದ ಜೈನ ಸಮುದಾಯವನ್ನು ತಮ್ಮತ್ತ ಸೆಳೆದುಕೊಂಡರು. ಗಾಂಧಿ ಶೇ.೯ ರಷ್ಟು ಜೈನರಾಗಿದ್ದರು. ನಾನು ಗಾಂಧಿಯ ವ್ಯಕ್ತಿತ್ವವನ್ನು ಶೇಕಡಾವಾರು ಲೆಕ್ಕದಲ್ಲಿ ಅಳೆಯಬಲ್ಲೆ. ಗಾಂಧಿ ಹುಟ್ಟಿನಿಂದ ಹಿಂದೂ ಆಗಿದ್ದರೂ ಅವರು ಶೇ. ೧ ರಷ್ಟು ಮಾತ್ರ ಹಿಂದು ಆಗಿದ್ದರು, ಶೇ.೯ ರಷ್ಟು ಅವರು ಜೈನರಾಗಿದ್ದರು. ಒಮ್ಮೆ ಜೈನನಾಗಿ ಮತಾಂತರ ಹೊಂದಲೂ ಬಯಸಿದ್ದರು. ಜೈನ ಗುರುವಾಗಿದ್ದ ಶ್ರೀಮತ್ ರಾಜಚಂದ್ರ ಗಾಂಧಿಯ ಮೊದಲ ಧಾರ್ಮಿಕಗುರು. ಹಾಗು ಶೇ.೯೦ ರಷ್ಟು ಕ್ರಿಶ್ಚಿಯನ್ ಆಗಿದ್ದರು. ಗಾಂಧಿಯ ಎರಡನೆಯ ಗುರು ಒಬ್ಬ ಕ್ರಿಶ್ಚಿಯನ್ - ಜಾನ್ ರಸ್ಕಿನ್. ತಮ್ಮ ಬದುಕಿನಲ್ಲಿ ಅವರಿಗೆ ಮೂರು ಬಾರಿ ಕ್ರೈಸ್ತಧರ್ಮಕ್ಕೆ ಮತಾಂತರ ಹೊಂದುವ ಸನ್ನಿವೇಶ ಎದುರಾಗಿತ್ತು. ಸಿ.ಎಫ್. ಆಂಡ್ರ್ಯೂಸ್ ಅವರನ್ನು ಒಂದೇ ಸಮನೆ ಮತಾಂತರವಾಗುವಂತೆ ಬಲವಂತ ಪಡಿಸುತ್ತಿದ್ದರು. ಕ್ರೈಸ್ತಧರ್ಮದ ಸೇವಾಭಾವವನ್ನು ಅಪಾರವಾಗಿ ಮೆಚ್ಚಿ, ಮತಾಂತರ ಹೊಂದಲೂ ನಿರ್ಧರಿಸಿದ್ದರು. ಆದರೆ ಆ ಸೇವಾಭಾವದ ಹಿಂದೆ ಮತಾಂತರದ ಹುನ್ನಾರವಿದ್ದುದನ್ನು ಕಂಡು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಅಹಿಂಸೆಯ ಹೆಸರಿನಲ್ಲಿ ಅವರು ಜೈನ ಸಮುದಾಯವನ್ನೂ, ಹಿಂದೂ ಧರ್ಮದ ಬಹುತೇಕ ಎಲ್ಲ ಮೇಲ್ವರ್ಗಗಳನ್ನೂ ಹಾಗೆಯೇ ಎಲ್ಲ ಕ್ರಿಶ್ಚಿಯನ್ನರನ್ನೂ ಸುಲಭವಾಗಿ ತಮ್ಮ ಬುಟ್ಟಿಗೆ ಹಾಕಿಕೊಂಡರು. ಎರಡು ಸಾವಿರ ವರ್ಷಗಳಿಂದ ಗುಲಾಮತನ ಅನುಭವಿಸಿರುವ ನಮ್ಮ ದೇಶವು ಯುದ್ಧವೆಂದರೆ ಹಿಮ್ಮೆಟ್ಟುವ ಪ್ರವೃತ್ತಿ ಬೆಳೆಸಿಕೊಂಡಿದೆ. ಇಂಥ ದೇಶದಲ್ಲಿ ಅಹಿಂಸೆಯ ನಾಣ್ಯ ಸುಲಭವಾಗಿ ಚಲಾವಣೆಯಾಗುತ್ತದೆ ಎಂದು ಅವರಿಗೆ ಗೊತ್ತಿತ್ತು.

            ಎರಡನೆಯದಾಗಿ ಭಾರತೀಯರು ಯುದ್ಧದ ಪ್ರವೃತ್ತಿಯವರಲ್ಲ, ಒಂದು ವೇಳೆ ಯುದ್ಧಕ್ಕೆ ನಿಂತರೂ ನಮ್ಮ ಬಳಿ ಸುಸಜ್ಜಿತ ಶಸ್ತ್ರಾಸ್ತ್ರಗಳಿಲ್ಲ ಎಂಬುದು ಗಾಂಧಿಗೆ ತಿಳಿದಿತ್ತು. ಮೂರನೆಯದಾಗಿ ಬ್ರಿಟಿಷ್ ಸಾಮ್ರಾಜ್ಯ ಜಗತ್ತಿನ ಅತ್ಯಂತ ಶಕ್ತಿಶಾಲೀ ಪ್ರಭುತ್ವಗಳಲ್ಲೊಂದಾಗಿತ್ತು. ಅವರೊಡನೆ ಶಸ್ತ್ರಸಜ್ಜಿತ ಹೋರಾಟ ನಡೆಸುವುದು ಯಾರಿಗಾದರೂ ಅಸಾಧ್ಯದ ಮಾತಾಗಿತ್ತು. ಹಾಗಾಗಿ ನಮ್ಮ ಬಳಿ ಉಳಿದಿರುವುದು ’ಅಹಿಂಸೆ’ ಎಂಬ ಏಕಮೇವ ಅಸ್ತ್ರ ಎಂದು ಗಾಂಧಿ ಲೆಕ್ಕ ಹಾಕಿದರು. ಮತ್ತು ಅವರ ಲೆಕ್ಕಾಚಾರ ಸರಿಯಾಗಿಯೇ ಕೆಲಸ ಮಾಡಿತು. ಆದ್ದರಿಂದ ಗಾಂಧಿಯ ಅಹಿಂಸೆ ಒಂದು ಶುದ್ಧ ರಾಜಕೀಯ ಲೆಕ್ಕಾಚಾರವೇ ವಿನಃ ಅದಕ್ಕೆ ಯಾವ ಆಧ್ಯಾತ್ಮಿಕ ಮೌಲ್ಯವೂ ಇಲ್ಲ. ನಾನು ಯಾರ ವಿಷಯದಲ್ಲೂ ಹಾಗೆ ತಲೆ ಹಾಕುವವನಲ್ಲ, ಆದರೆ ಒಮ್ಮೆ ಒಂದು ವಿಷಯವನ್ನು ತಿಳಿಯಲು ಮನಸ್ಸಾದರೆ ಅದನ್ನು ಬುಡಮಟ್ಟದವರೆಗೂ ಶೋಧಿಸದೇ ಬಿಡುವವನೂ ಅಲ್ಲ. ಗಾಂಧಿಯನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿದ ಮೇಲೆ ಅವರನ್ನು ಟೀಕಿಸದೇ ಬೇರೆಯ ರೀತಿಯಲ್ಲಿ ಅವರನ್ನು ವ್ಯಾಖ್ಯಾನಿಸಲು ನನಗೆ ಸಾಧ್ಯವೇ ಆಗಲಿಲ್ಲ. ಆಗ ನನ್ನ ವಲಯದಲ್ಲಿದ್ದ ಗಾಂಧೀವಾದಿಗಳಲ್ಲಿ ಈಗ ಶೇ.೧ರಷ್ಟೂ ಉಳಿದಿಲ್ಲ ಎಂದು ನಾನು ಬಲ್ಲೆ.

            ನಾನು ಗಾಂಧಿಯನ್ನು ’ಒಬ್ಬ ಬನಿಯಾ’ ಎಂದು ಕರೆದದ್ದು ಕೆಲವರ ಭಾವನೆಗೆ ನೋವಾಯಿತಂತೆ. ಆ ಸರಳಜೀವಿಯನ್ನು ಹೇಗೆ ಬನಿಯಾ ಎಂದು ಕರೆಯುತ್ತೀರಿ? ಅದಕ್ಕೆ ಪುರಾವೆ ಏನು? ಎಂದು ತುಂಬ ಜನ ನನ್ನನ್ನು ಕೇಳಿದರು. ಬನಿಯಾ ಎಂದರೆ ವ್ಯಾಪಾರಿ ಎಂದರ್ಥ. ಅದು ಜಾತಿಸೂಚಕ ಪದವಲ್ಲ. ಈ ವಿಷಯಗಳಲ್ಲಿ ನಾವು ಎಷ್ಟು ಅಸೂಕ್ಷ್ಮರಾಗಿದ್ದೇವೆ ಎಂದರೆ ನಮಗೆ ಹೊಗಳಿಕೆಯ ಭಾಷೆ ಅಥವ ತೆಗಳಿಕೆಯ ಭಾಷೆಗಳನ್ನು ಬಿಟ್ಟರೆ ಬೇರೆ ಮತ್ತೊಂದು ಭಾಷೆ ಅರ್ಥವಾಗುವುದೇ ಇಲ್ಲವಲ್ಲ! ನಾನು ಖಂಡಿತ ಜಾತಿವಾದಿಯಲ್ಲ. ಒಂದು ವೇಳೆ ಜಾತಿಯ ಪರಿಭಾಷೆಯಲ್ಲೇ ಹೇಳಬೇಕಾಗಿ ಬಂದರೆ ಗಾಂಧಿ ಬ್ರಾಹ್ಮಣನಲ್ಲ, ಒಬ್ಬ ಯೋಧನಲ್ಲ, ಶೂದ್ರನೂ ಅಲ್ಲ. ಆತ ಒಬ್ಬ ಶುದ್ಧ ವ್ಯಾಪಾರಿ, ವೈಶ್ಯ ಎಂದೇ ಹೇಳುತ್ತೇನೆ. ಇದಕ್ಕೆ ನಾನು ಸಾವಿರಾರು ನಿದರ್ಶನಗಳನ್ನು ನೀಡಬಲ್ಲೆ. ಮಹಾವೀರ್ ತ್ಯಾಗಿ ಎಂಬ ಒಬ್ಬ ಕಾಂಗ್ರೇಸ್ ನಾಯಕರ ಆತ್ಮ ಚರಿತ್ರೆಯನ್ನು ಓದುತ್ತಿದ್ದೆ. ಅದರಲ್ಲಿ ಒಂದು ಉಲ್ಲೇಖವಿದೆ: ಒಮ್ಮೆ ಮಹಾವೀರ್ ತ್ಯಾಗಿಯವರ ಊರಿನಲ್ಲಿ ನಡೆದ ಒಂದು ಸಭೆಗೆ ಗಾಂಧೀ ಆಗಮಿಸಿದ್ದರಂತೆ. ಯಾವ ಸಭೆಗೆ ಹೋದರೂ ವೇದಿಕೆಯ ಮೇಲೆ ತಮ್ಮ ಹುಂಡಿಯನ್ನಿರಿಸಿ ಹೆಣ್ಣುಮಕ್ಕಳ ಒಡವೆಗಳನ್ನು ಕೇಳುವುದು ಗಾಂಧೀಜಿಯ ಪದ್ಧತಿ. ಹೀಗೆ ಸಭೆ ಮಧ್ಯರಾತ್ರಿಯ ವೇಳೆಗೆ ಮುಗಿದ ಮೇಲೆ ತುಂಬಿದ ಹುಂಡಿಯೊಡನೆ ತ್ಯಾಗಿ ಗಾಂಧೀ ಇಳಿದುಕೊಂಡಿದ್ದ ಜಾಗಕ್ಕೆ ಹೋದರು. “ಇಷ್ಟು ಹೊತ್ತಿಗಾಗಲೇ ಗಾಂಧೀಜಿ ಮಲಗಿರಬೇಕು” ಎಂದುಕೊಂಡೇ ಬಾಗಿಲು ತಟ್ಟಿದರು. ತ್ಯಾಗಿಗೆ ವ್ಯಾಪಾರಿಯ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂದು ಗೊತ್ತಿಲ್ಲ ಎನಿಸುತ್ತದೆ. ದಿನದ ಲೆಕ್ಕ ಚುಕ್ತಾ ಆಗದೇ ಒಬ್ಬ ವ್ಯಾಪಾರಿಗೆ ನಿದ್ರೆ ಹೇಗೆ ಬರುತ್ತದೆ? ಗಾಂಧೀ ಹಾಸಿಗೆಯ ಮೇಲೆ ಎಚ್ಚರವಾಗಿಯೇ ಕುಳಿತಿದ್ದರಂತೆ. ತ್ಯಾಗಿ ಬಂದೊಡನೆ ಗಾಂಧೀ ತಮ್ಮ ಬಳಿ ಇದ್ದ ಬೀಗದ ಕೈಯಿಂದ ಹುಂಡಿಯನ್ನು ತೆರೆದು. ಆ ದಿನದ ಸಂಪಾದನೆಯನ್ನೆಲ್ಲ ಎಣಿಸತೊಡಗಿದರಂತೆ. ಕೊನೆಗೆ ಹುಂಡಿಯಲ್ಲಿ ಒಂದೇ ಒಂದು ಕಿವಿಯ ಓಲೆ ಇದ್ದುದನ್ನು ತ್ಯಾಗಿಗೆ ತೋರಿಸಿ “ಯಾರೂ ಹೀಗೆ ಒಂದೇ ಓಲೆಯನ್ನು ದಾನ ಮಾಡುವುದಿಲ್ಲ. ಇನ್ನೊಂದು ಓಲೆಯೂ ವೇದಿಕೆಯ ಮೇಲೆಯೇ ಎಲ್ಲೋ ಬಿದ್ದಿರಬೇಕು, ಹುಡುಕಿ ತನ್ನಿ” ಎಂದರಂತೆ. ತ್ಯಾಗಿ ಮತ್ತೆ ಹಿಂದಿರುಗಿ ಗ್ಯಾಸ್ ದೀಪದ ನೆರವಿನಿಂದ ಇನ್ನೊಂದು ಓಲೆಯನ್ನೂ ಪತ್ತೆ ಮಾಡಿ ತಂದ ಮೇಲೆಯೇ ಗಾಂಧೀ ನಿದ್ರೆ ಮಾಡಿದರಂತೆ. ನಾನು ಗಾಂಧೀ ಒಬ್ಬ ವ್ಯಾಪಾರಿ ಎನ್ನಲು ಕಾರಣಗಳಿವೆ. ಆತ ಒಬ್ಬ ವ್ಯಾಪಾರಿ ಎಂದು ಭಾವಿಸಿದಾಗಲೇ ಗಾಂಧೀವಾದವನ್ನು ಆರೋಗ್ಯಕರವಾಗಿ ಭಾವಿಸಲು ಸಾಧ್ಯವಾಗುವುದು ಹಾಗು ಆತನಿಗೂ ನ್ಯಾಯ ಸಲ್ಲಿಸಿದಂತಾಗುವುದು.

            ನಾವು ದೇಶದ ನಾಯಕನೆಂದು ಯಾವುದೇ ವ್ಯಕ್ತಿಯನ್ನು ಒಪ್ಪಿಕೊಳ್ಳುವ ಮುನ್ನ ಆ ವ್ಯಕ್ತಿ ಎಂಥವನು ಎಂದು ಮುನ್ನವೇ ತಿಳಿದಿರುವುದು ಕ್ಷೇಮವಲ್ಲವೇ? ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್‌ರಂತಹ ಯೋಧರು ಮುನ್ನಡೆಸಬೇಕಾದ ದೇಶವನ್ನು ಒಬ್ಬ ವ್ಯಾಪಾರಿಯ ಕೈಗಿಟ್ಟರೆ ದೇಶದ ಗತಿ ಏನಾಗಬಹುದು? ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಗಾಂಧೀ ತಮ್ಮ ಜಾಯಮಾನಕ್ಕೆ ತಕ್ಕುದನ್ನೇ ಮಾಡಿದರು. ದೇಶ ವಿಭಜನೆಯಾಯಿತು. ಒಬ್ಬ ವ್ಯಾಪಾರಿ ಸದಾ ರಾಜಿ ಮಾಡಿಕೊಳ್ಳುವ ಅವಕಾಶಕ್ಕೇ ಕಾಯುತ್ತಿರುತ್ತಾನೆಯೇ ವಿನಃ ಎಂದಿಗೂ ತೀವ್ರವಾದಿಯಾಗಲಾರ. ಲೆಕ್ಕಾಚಾರದ ಮನಸ್ಸು ಎರಡೂ ಪಕ್ಷಗಳಿಗೆ ಲಾಭವಾಗಬೇಕು ಎಂದು ಯೋಚಿಸುತ್ತದೆ, ಗಲಾಟೆ ಹೋರಾಟಗಳನ್ನು ಎಂದಿಗೂ ಸಹಿಸುವುದಿಲ್ಲ. ಅದಕ್ಕೇ ವ್ಯಾಪಾರಿಗಳಾದ ಬ್ರಿಟಿಷರಿಗೆ ಗಾಂಧಿ ಹಿಡಿಸಿದ್ದು. ಅವರಿಗೆ ಕಾಂಗ್ರೇಸ್‌ನಲ್ಲಿ ಸುಭಾಷ್ ಚಂದ್ರ ಬೋಸ್‌ರಂತಹವರೊಡನೆ ಮಾತುಕತೆ, ಸಂಧಾನ ನಿಜಕ್ಕೂ ಕಷ್ಟವಾಗುತ್ತಿತ್ತು. ನೀವು ನಂಬಲಾರಿರಿ, ಬ್ರಿಟಿಷರು ಗಾಂಧಿಗೆ ಸಂಪೂರ್ಣ ಭದ್ರತೆ ಒದಗಿಸಿದ್ದರು. ಒಂದು ಪ್ರಭುತ್ವ ತನ್ನ ವಿರುದ್ಧ ದಂಗೆ ಎದ್ದವನಿಗೇ ಭದ್ರತೆ ಒದಗಿಸಿದ್ದ ನಿದರ್ಶನ ಜಗತ್ತಿನ ಇತಿಹಾಸದಲ್ಲಿ ಎಲ್ಲಾದರೂ ಉಂಟೇ? ಈ ಮನುಷ್ಯ ಇಂದಲ್ಲ ನಾಳೆ ನಮ್ಮ ಕೆಲಸಕ್ಕೆ ಬರುತ್ತಾನೆ ಎಂದು ಅವರಿಗೆ ತಿಳಿದಿತ್ತು. ಆದ್ದರಿಂದಲೇ ಅವರು ಈ ದೇಶ ಬಿಟ್ಟು ಹೋಗುತ್ತಿದ್ದಂತೆಯೇ ಗಾಂಧಿಗೆ ಆ ಮಟ್ಟದ ಭದ್ರತೆ ನೀಡಲು ನಮ್ಮಿಂದಾಗದೇ ಅವರು ಹತ್ಯೆಯಾದರು. ಅಂತರಂಗದಲ್ಲಿ ಗಾಂಧೀ-ಬ್ರಿಟಿಷರ ನಡುವೆ ಒಂದು ವಿಚಿತ್ರ ಬಾಂಧವ್ಯ ಏರ್ಪಟ್ಟಿತ್ತು. ಇಬ್ಬರೂ ವ್ಯಾಪಾರಿಗಳಾದುದರಿಂದ ಒಬ್ಬರ ಇಂಗಿತ ಇನ್ನೊಬ್ಬರಿಗೆ ಸುಲಭವಾಗಿ ತಿಳಿಯುತ್ತಿತ್ತು. ಆದ್ದರಿಂದಲೇ ಭಾರತ ಸ್ವಾತಂತ್ರ್ಯವನ್ನು ಸಂಪಾದಿಸಿಕೊಳ್ಳಲಿಲ್ಲ. ಅದನ್ನು ಒಂದು ಉಡುಗೊರೆಯಂತೆ ನೀಡಲಾಯಿತು. ಉಡುಗೊರೆಯಂತೆ ನೀಡಲಾದ ಸ್ವಾತಂತ್ರ್ಯಕ್ಕಿಂತ ಗುಲಾಮತನವೇ ಲೇಸು. ರಾಜಿ, ಮಾತುಕತೆ, ಒಪ್ಪಂದಗಳ ಮೂಲಕ ಪಡೆಯುವ ಸ್ವಾತಂತ್ರ್ಯ ನಿಜಕ್ಕೂ ತುಂಬ ಕುರೂಪವಾದುದು. ಸ್ವಾತಂತ್ರ್ಯ ಸಿಕ್ಕ ಮರುಗಳಿಗೆಯೇ ಆ ಕುರೂಪದ ಸಂಪೂರ್ಣ ಅನಾವರಣ ಆಯಿತು.

            ೧೯೩೪ರಲ್ಲಿ ಬಿಹಾರದಲ್ಲಿ ಭೂಕಂಪವಾದಾಗ ಮಹಾತ್ಮಾ ಗಾಂಧೀ “ಭಗವಂತ ಪಾಪಿಗಳನ್ನು ಶಿಕ್ಷಿಸುತ್ತಿದ್ದಾನೆ” ಎಂದು ಹೇಳಿಕೆ ನೀಡಿದ್ದರು. ಮುಂದೆ ನಾನು ಆ ಕುರಿತು ಅವರಿಗೊಂದು ಪತ್ರ ಬರೆದಿದ್ದೆ “ಇದು ನಿಜಕ್ಕೂ ವಿಚಿತ್ರ, ಭಗವಂತ ಬರೀ ಬಿಹಾರದ ಪಾಪಿಗಳನ್ನು ಮಾತ್ರ ಶಿಕ್ಷಿಸಿದನಲ್ಲ! ಹಾಗಿದ್ದರೆ ಜಗತ್ತಿನ ಉಳಿದ ಪಾಪಿಗಳ ಗತಿಯೇನು? ಅಥವ ಜಗತ್ತಿನ ಪಾಪಿಗಳೆಲ್ಲಾ ಬಿಹಾರದಲ್ಲೇ ಇದ್ದರೇ?” ಆ ಪತ್ರಕ್ಕೆ ಉತ್ತರಿಸುವ ಧೈರ್ಯವನ್ನಾಗಲಿ, ಕೊನೆಯ ಪಕ್ಷ ಪ್ರಾಮಾಣಿಕತೆಯನ್ನಾಗಲಿ ಅವರು ತೋರಿಸಲಿಲ್ಲ. ಅದೇ ದಿನ ಅವರ ಮಗ ರಾಮದಾಸನಿಗೂ ಬರೆದು (ಆತ ನನ್ನ ಆತ್ಮೀಯ ಗೆಳೆಯ) ನಿಮ್ಮ ತಂದೆಗೆ ನನ್ನ ಪತ್ರ ತಲುಪಿದೆಯೇ ಎಂದು ಕೇಳಿದೆ “ತಲುಪಿದೆ, ಆದರೆ ಆ ಪತ್ರಕ್ಕೆ ಅವರ ಬಳಿ ಉತ್ತರವಿಲ್ಲ” ಎಂದು ಉತ್ತರಿಸಿದ. ಭಗವಂತನ ಅಪ್ಪಣೆ ಇಲ್ಲದೆ ಒಂದು ಹುಲ್ಲುಕಡ್ಡಿಯೂ ಅಲುಗಾಡದು ಎನ್ನುವುದು ಭಾರತೀಯರ ನಂಬಿಕೆ. ಹಾಗಿದ್ದರೆ ಒಬ್ಬ ಕೊಲೆಗಾರನೂ ನಿರಪರಾಧಿಯೇ ಆಗುತ್ತಾನೆ. ಇದನ್ನೇ ಗೀತೆಯೂ ಬೋಧಿಸುವುದು. ಆದರೆ ಗಾಂಧಿಯಂತಹ ಅಹಿಂಸಾ ಬೋಧಕರೂ ಗೀತೆಯನ್ನು ’ಮಾತೆ’ ಎಂದು ಕರೆಯುವುದು ವಿಪರ್ಯಾಸ. ಆಗ ಹಿಂದೂ ಮುಸ್ಲಿಂರು ಒಂದೇ ಎಂದು ಕರೆ ನೀಡುತ್ತಿದ್ದ ಗಾಂಧೀಜಿಗೆ ೧೭ರ ಪ್ರಾಯದ ನಾನು ಒಂದು ಪತ್ರ ಬರೆದಿದ್ದೆ “ಗೀತೆಯನ್ನು ತಾಯಿ ಎಂದು ಕರೆಯುವ ನಿಮಗೆ ಖುರಾನ್ ಏನಾಗಬೇಕು,.. ತಂದೆಯಾಗಬೇಕೇ?” ಎಂದು ಕೇಳಿದ್ದೆ. ಆಗ ಗಾಂಧೀಜಿ ತುಂಬ ಸಿಟ್ಟು ಮಾಡಿಕೊಂಡು ಆ ಪತ್ರವನ್ನು ಹರಿದೆಸೆದುಬಿಟ್ಟರಂತೆ. ಆಮೇಲೆ ರಾಮದಾಸ್‌ನಿಂದ ನನಗೆ ತಿಳಿಯಿತು. “ಅವನು ಕೇಳುವುದರಲ್ಲಿ ತಪ್ಪೇನಿದೆ? ಗೀತೆ ತಾಯಿಯಾದ ಮೇಲೆ ಕುರಾನ್ ತಂದೆಯೋ, ಮಲತಂದೆಯೋ, ಚಿಕ್ಕಪ್ಪನೋ ಆಗಲೇ ಬೇಕು. ಇಲ್ಲವಾದರೆ ’ಹಿಂದೂ ಮುಸ್ಲಿಮ್ ಭಾಯಿ ಭಾಯಿ’ ಎಂಬ ಮಾತಿಗೆ ಅರ್ಥವೇ ಇರುವುದಿಲ್ಲ” ಎಂದು ರಾಮದಾಸ್ ತಂದೆಯ ಜೊತೆ ವಾದ ಮಾಡಿದ್ದನಂತೆ.

            ’ಹಾಗಿದ್ದರೆ ನೀವು ಹಿಂಸಾವಾದಿಗಳೋ ಅಥವ ಅಹಿಂಸಾವಾದಿಯೋ?’ ಎಂದು ಒಬ್ಬರು ಪ್ರಶ್ನೆಯನ್ನು ಕಳಿಸಿದ್ದಾರೆ. ನಾನು ಖಂಡಿತ ಹಿಂಸಾವಾದಿಯಲ್ಲ ಹಾಗೆಯೇ ಗಾಂಧಿ ಬೋಧಿಸುವ ಅಹಿಂಸಾವಾದವನ್ನು ಒಪ್ಪುವವನೂ ಅಲ್ಲ. ಗಾಂಧಿಯ ಅಹಿಂಸಾವಾದ ಮೇಲು ನೋಟಕ್ಕಷ್ಟೇ ಅಹಿಂಸಾವಾದ ಎನಿಸುತ್ತದೆ. ಗಾಂಧಿ ದಕ್ಷಿಣ ಆಫ್ರಿಕಾದಲ್ಲಿದ್ದಾಗ ಬೋಹ್‌ರ್ ಯುದ್ಧದಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮೊದಲ ಮಹಾಯುದ್ಧದ ಸಮಯದಲ್ಲೂ ಭಾರತೀಯರು ಬ್ರಿಟಿಷರಿಗೆ ನೆರವಾಗಲು ಏಜೆಂಟ್‌ರಂತೆ ಕಾರ್ಯ ನಿರ್ವಹಿಸಿದವರು. ಪಂಜಾಬಿನಲ್ಲಿ ಮುಸಲ್ಮಾನರ ದಂಗೆ ಹುಟ್ಟಿಕೊಂಡಾಗ ಅದನ್ನು ಅಡಗಿಸಲು ಬ್ರಿಟಿಷರು ಗೋರಖ್ ಪಂಥದವರನ್ನು ಅಲ್ಲಿಗೆ ಕಳುಹಿಸಿದರು. ಬ್ರಿಟಿಷರ ಆಡಳಿತದಲ್ಲಿ ಹಿಂದೂ ಸಮಾಜದಲ್ಲಿ ದಂಗೆ ಎದ್ದಾಗ ಅದನ್ನು ಅಡಗಿಸಲು ಮುಸಲ್ಮಾನರನ್ನು ಕಳುಹಿಸುವುದು, ಮುಸ್ಲಿಮರ ಸಮಾಜದ ದಂಗೆಯನ್ನು ಅಡಗಿಸಲು ಹಿಂದೂ ಸೈನಿಕರನ್ನು ಕಳುಹಿಸುವುದು ಬ್ರಿಟಿಷರ ಒಂದು ಜಾಣ್ಮೆಯ ತಂತ್ರಗಳಲ್ಲೊಂದಾಗಿತ್ತು. ಆದರೆ ಪಂಜಾಬಿನ ಬೆಳವಣಿಗೆಯನ್ನು ಬ್ರಿಟಿಷರು ನಿರೀಕ್ಷಿಸಿರಲಿಲ್ಲ. ಗೋರಖ್ ಪಂಥಿಗಳು ಮುಸಲ್ಮಾನರ ಮೇಲೆ ಗುಂಡು ಹಾರಿಸಲು ನಿರಾಕರಿಸಿದರು. ಗೋರಖ್ ಪಂಥಿಗಳ ಈ ವರ್ತನೆಯನ್ನು ಗಾಂಧಿ ಖಂಡಿಸಿದರೆಂದರೆ ನಿಮಗೆ ಆಶ್ಚರ್ಯವಾಗಬಹುದು. ಆಗ ಗಾಂಧಿ ಇಂಗ್ಲೆಂಡಿನಲ್ಲಿದ್ದರು. “ಸೈನಿಕರ ಅಶಿಸ್ತನ್ನು ನಾನು ಸಹಿಸಲಾರೆ. ನಾಳೆಯ ದಿನ ದೇಶ ಸ್ವತಂತ್ರವಾದ ಮೇಲೆ ಈ ಸೈನಿಕರನ್ನೇ ನಂಬಿ ನಾವು ಆಡಳಿತ ಮಾಡಬೇಕಲ್ಲವೇ?” ಎಂದಿದ್ದರು. ಇದೆಂತಹ ಅಹಿಂಸಾವಾದವೋ ನನಗೆ ಅರ್ಥವಾಗದು. ಗಾಂಧಿ ಅವರ ಅಶಿಸ್ತನ್ನು ಮೆಚ್ಚಿಕೊಂಡಿದ್ದರೆ ಆಗ ದೇಶದ ಎಲ್ಲ ಕೋಮಿನ ಸೈನಿಕರೂ ಆಜ್ಞೆಯನ್ನು ಉಲ್ಲಂಘಿಸುವ ಧೈರ್ಯ ಮಾಡುತ್ತಿದ್ದರು. ನಾನು ಹಿಂಸಾವಾದಿಯಲ್ಲ. ಮೂರ್ಖರು ಮಾತ್ರ ಹಿಂಸೆಯ ಮೊರೆ ಹೋಗುತ್ತಾರೆ. ಬುದ್ಧಿಯಿರುವ ಯಾರೂ ಹಿಂಸಾವಾದಿಗಳಾಗಲು ಇಷ್ಟ ಪಡುವುದಿಲ್ಲ. ಪಶುಗಳು ಮಾತ್ರ ಹಿಂಸೆಯನ್ನು ನಂಬುತ್ತವೆ. ಈತನಕ ಪ್ರಭುತ್ವವನ್ನು ಪಶುಗಳ ಕೈಗೆ ಒಪ್ಪಿಸಿಕೊಂಡೇ ಬಂದಿರುವುದು ನಮ್ಮ ದುರಂತ. ’ಅಹಿಂಸೆ’ ಎಂಬ ಪದವೇ ತುಂಬ ವಿರೂಪವಾದುದು. ಏಕೆಂದರೆ ಲೋಕದಲ್ಲಿ ’ಹಿಂಸೆ’ಯೂ ಉಂಟು ಎಂಬುದನ್ನು ಅದು ನೆನಪಿಸುತ್ತದೆ. ಇನ್ನೊಬ್ಬರಿಗೆ ಹಿಂಸೆ ಮಾಡಬಾರದು ಎಂಬುದನ್ನು ಪ್ರತೀತಗೊಳಿಸುತ್ತದೆ. ಆದರೆ ಇನ್ನೊಬ್ಬರಿಗೆ ಹಿಂಸೆ ಮಾಡದೆ ಸುಮ್ಮನಿದ್ದುಬಿಟ್ಟರೆ ಸಾಕಾಗುವುದಿಲ್ಲ. ಇನ್ನೊಬ್ಬರಿಗೆ ಕ್ಷೇಮವನ್ನೂ ಉಂಟು ಮಾಡಿದಾಗಲೇ ಅಹಿಂಸೆಯ ಕಲ್ಪನೆ ಪರಿಪೂರ್ಣವಾಗುವುದು.

            ಯಾವ ಕ್ರಾಂತಿ ಹಿಂಸಾತ್ಮಕವೋ, ನನ್ನ ದೃಷ್ಟಿಯಲ್ಲಿ ಅದು ಕ್ರಾಂತಿಯೇ ಅಲ್ಲ. ಅದೊಂದು ಗದ್ದಲ, ಉಪದ್ರವ ಅಷ್ಟೇ. ನಿಜವಾದ ಕ್ರಾಂತಿ ಯಾರಿಗೂ ಅರಿವಾಗದಂತೆ ಆಮೂಲಾಗ್ರ ಬದಲಾವಣೆಯನ್ನು ಉಂಟುಮಾಡುತ್ತದೆ. ಅದು ಸಾಧ್ಯವಾಗದಾಗ ಗದ್ದಲ, ಉಪದ್ರವ ಹುಟ್ಟಿಕೊಳ್ಳುತ್ತದೆ. ರಷ್ಯಾದಲ್ಲಿ ಸ್ಟಾಲಿನ್‌ನ ಆಡಳಿತ ಮುಗಿದ ಮೇಲೆ, ಖಾಸಗಿ ಆಸ್ತಿಯನ್ನು ಹೊಂದಲು ಮತ್ತೆ ಅನುಮತಿ ದೊರೆತ ಮೇಲೆ ಈಗ ಪ್ರಗತಿ ಎಂಬುದು ನಿಧಾನವಾಗಿ ತಲೆ ಎತ್ತುತ್ತಿದೆ. ಎಷ್ಟು ಕಾಲ ಹಿಂಸೆಯಿಂದ, ಒತ್ತಾಯದಿಂದ ಒಬ್ಬ ವ್ಯಕ್ತಿಯನ್ನು ಸುಮ್ಮನಿರಿಸಲು ಸಾಧ್ಯ? ದಬ್ಬಾಳಿಕೆ ತಾತ್ಕಾಲಿಕ ಉಪಾಯ ಆಗಬಹುದು ಅಷ್ಟೇ. ಕ್ರಾಂತಿಯ ಹೆಸರಿನಲ್ಲಿ ಹಿಂಸೆ ವಿಜೃಂಭಿಸಬಲ್ಲುದೇ ವಿನಃ ಹಿಂಸೆಯನ್ನು ನಂಬಿ ಈತನಕ ಯಾವ ಕ್ರಾಂತಿಯೂ ಸಾರ್ಥಕವಾಗಿಲ್ಲ. ನನ್ನ ಉಪನ್ಯಾಸವನ್ನು ನೀವು ಗಂಟೆ ಗಟ್ಟಲೆ ಕೇಳುವಿರಿ. ಆದರೆ ಎರಡು ಗಂಟೆಗಳ ಕಾಲ ನೀವು ಈ ಜಾಗ ಬಿಟ್ಟು ಕದಲ ಕೂಡದು ಎಂದು ಅಪ್ಪಣೆ ನೀಡಿ ಬಳಿಕ ಉಪನ್ಯಾಸವನ್ನು ಪ್ರಾರಂಭಿಸಿದರೆ ನಿಮಗೆ ಸುಮ್ಮನಿರಲಾಗುವುದೇ? ವ್ಯಕ್ತಿ ಸ್ವಭಾವತಃ ಕಟ್ಟುಪಾಡುಗಳ ವಿರುದ್ಧ ಸೆಟೆದು ನಿಲ್ಲುವ ಪ್ರವೃತ್ತಿ ಹೊಂದಿರುತ್ತಾನೆ. ಕಾರಣ ಒಳ್ಳೆಯದಾದರೂ ದಬ್ಬಾಳಿಕೆ ಎಂದಿಗೂ ಒಳ್ಳೆಯ ಪರಿಣಾಮ ಉಂಟುಮಾಡುವುದಿಲ್ಲ. ಒಳ್ಳೆಯ ಅಪ್ಪ-ಅಮ್ಮ ಎನಿಸಿಕೊಂಡವರ ಮಕ್ಕಳು ದಾರಿ ತಪ್ಪುವುದು ಒಳ್ಳೆಯ ಉದ್ದೇಶದಿಂದ ಹೇರಲಾದ ದಬ್ಬಾಳಿಕೆಯಿಂದಲೇ ಅಲ್ಲವೇ? ತಾತ್ವಿಕ ನೆಲೆಯಿಂದ ನೋಡುವುದಾದರೆ ಚೀನಾದ ಮಾವೋ ಕ್ರಾಂತಿಗೂ ಇಲ್ಲಿನ ಗಾಂಧಿಯ ಸತ್ಯಾಗ್ರಹಕ್ಕೂ ಯಾವ ವ್ಯತ್ಯಾಸವೂ ಕಾಣಿಸದು. ಬಿಳಿಯ ಬಣ್ಣದ ಖಾದಿ ಧರಿಸಿ ಗಾಂಧಿಯ ಜೊತೆ ಹೋರಾಡಿದ ನಾಯಕರುಗಳು ಬಳಿಕ ತಮ್ಮ ಆಂತರ್ಯ ಬಿಳುಪಿನದ್ದಲ್ಲ ಎಂಬುದನ್ನು ಬಯಲು ಮಾಡಿದರು. ಗಾಂಧಿ ಮಾರ್ಗ ಕೊನೆಗೆ ಹೀಗೆಯೇ ಪರ್ಯವಸಾನವಾಗುವುದು.

            ಅಹಿಂಸೆಯನ್ನು ಜಗತ್ತಿಗೆ ಬೋಧಿಸುತ್ತಿದ್ದ ಗಾಂಧೀ ಸ್ವಭಾವತಃ ಮಹಾ ನಿರ್ದಯಿಯಾಗಿದ್ದರು. ಶತ್ರುವನ್ನು ಇರಿಯಲು ಕತ್ತಿ ಎತ್ತುವವನು ನಿರ್ದಯಿ ನಿಜ. ಆದರೆ ಅದೇ ಕತ್ತಿಯನ್ನು ಆತ ತನ್ನ ಕುತ್ತಿಗೆಗೆ ಇರಿಸಿಕೊಂಡೊಡನೆ ಅಹಿಂಸೆಯ ಪ್ರವಾದಿಯಾಗಿ ಬಿಡುವನೇ? ಇಲ್ಲಿ ಮೊದಲನೆಯ ಹಿಂಸೆಗಿಂತ ಎರಡನೆಯ ಹಿಂಸೆ ಹೆಚ್ಚು ಅಪಾಯಕಾರಿ. ಏಕೆಂದರೆ ಅದು ಹಿಂಸೆ ಎಂದು ಯಾರಿಗೂ ಸುಲಭವಾಗಿ ಗೋಚರಿಸುವುದಿಲ್ಲ. ಆದರೆ ಇದುವೆ ಗಾಂಧಿಯ ಸತ್ಯಾಗ್ರಹದ ಮೂಲತತ್ವ. ಸತ್ಯಾಗ್ರಹದ ಹೆಸರಿನಲ್ಲಿ ಹೀಗೆ ಎಲ್ಲರನ್ನೂ ಬೆದರಿಸುತ್ತಲೇ ಗಾಂಧಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಿದ್ದರು. ಹೀಗೆ ಬೆದರಿಸಿಯೇ ಅವರು ಡಾ.ಅಂಬೇಡ್ಕರ್‌ರನ್ನು ಬಗ್ಗಿಸಿದ್ದು. ಗಾಂಧಿ “ಸತ್ಯಾಗ್ರಹ ಹೃದಯಗಳನ್ನು ಪರಿವರ್ತನೆ ಮಾಡುತ್ತದೆ” ಎಂದು ಹೇಳಿಕೊಳ್ಳುತ್ತಿದ್ದರೇ ವಿನಃ ಅವರ ಸತ್ಯಾಗ್ರಹದಿಂದ ಎಂದೂ ಯಾರ ಹೃದಯವೂ ಪರಿವರ್ತನೆಯಾಗಲಿಲ್ಲ. “ಅಂತಹ ಭ್ರಮೆಗಳಲ್ಲಿ ಇರಬೇಡಿ” ಎಂಬ ಮಾತುಗಳನ್ನು ಸ್ವತಃ ಅಂಬೇಡ್ಕರರೇ ಗಾಂಧಿಗೆ ಹೇಳಿದ್ದರು. ಒಂದು ವೇಳೆ ಗಾಂಧಿಯ ಪ್ರಾಣಕ್ಕೆ ಗಂಡಾಂತರವಾದರೆ ಇಡೀ ದೇಶವೇ ಬಡಪಾಯಿ ದಲಿತರ ಮೇಲೆ ಹಲ್ಲೆ ನಡೆಸುತ್ತದೆ ಎಂಬ ಒಂದೇ ಕಾರಣದಿಂದ ಅವರು ಗಾಂಧೀಜಿಯ ಸತ್ಯಾಗ್ರಹದ ಹಟಮಾರಿತನಕ್ಕೆಲ್ಲ ತಲೆಬಾಗಿದರು.

            ಡಾ.ಅಂಬೇಡ್ಕರ್ ಆಗ ಭಾರತದ ಕಾಲುಭಾಗದಷ್ಟು ಜನಸಂಖ್ಯೆ ಹೊಂದಿದ್ದ ದಲಿತರಿಗೆ ಪ್ರತ್ಯೇಕ ಮೀಸಲು ಮತಕ್ಷೇತ್ರದ ಬೇಡಿಕೆ ಇಟ್ಟರು. ಮತ್ತು ಅವರ ಬೇಡಿಕೆ ತುಂಬ ನ್ಯಾಯಯುತವಾದುದು ಕೂಡ. ದಲಿತರೇಕೆ ತಮ್ಮನ್ನು ತಾವು ಹಿಂದೂಗಳೊಂದಿಗೆ ಗುರುತಿಸಿಕೊಳ್ಳಬೇಕೋ ನನಗರ್ಥವಾಗುವುದಿಲ್ಲ. ಈ ಹಿಂದೂಗಳೆನಿಸಿಕೊಂಡವರು ಬಿಟ್ಟಿಯಾಗಿ ಅವರ ಕೈಯಿಂದ ಮಾಡಬಾರದ ಕೆಲಸಗಳನ್ನು ಮಾಡಿಸಿಕೊಂಡಿದ್ದಾರೆ, ಪ್ರಾಣಿಗಳಿಗಿಂತ ಹೀನಾಯವಾಗಿ ನಡೆಸಿಕೊಂಡು ಅವರ ಘನತೆಯನ್ನೇ ನಾಶ ಮಾಡಿದ್ದಾರೆ. ತಾವು ವಾಸಿಸುತ್ತಿದ್ದ ನಗರಗಳಲ್ಲಿ ಸಂಚರಿಸಲೂ ಅವರಿಗೆ ಆಸ್ಪದ ನೀಡದೆ “ನಾನೊಬ್ಬ ಅಸ್ಪೃಶ್ಯ, ಬರುತ್ತಿದ್ದೇನೆ. ಸವರ್ಣೀಯರೆಲ್ಲ ನನ್ನ ನೆರಳು ಸೋಕದಂತೆ ದೂರ ಸರಿದು ನಿಲ್ಲಿರಿ” ಎಂದು ಗಟ್ಟಿಯಾಗಿ ಕೂಗಿಕೊಂಡು ನಡೆದಾಡುವಂತೆ ಮಾಡಿದ್ದಾರೆ. ಜಗತ್ತಿನಲ್ಲಿ ಎಷ್ಟೋ ಪಾತಕಿಗಳು ಜನ್ಮ ತಳೆದಿರಬಹುದು, ಆದರೆ ಮನು ಅವರಲ್ಲೆಲ್ಲ ಅಗ್ರಗಣ್ಯನಾಗಿದ್ದಾನೆ. ಅದಕ್ಕಾಗಿಯೇ ಅಡಾಲ್ಫ್ ಹಿಟ್ಲರ್ ಮನುವನ್ನು ಆರಾಧಿಸುತ್ತಿದ್ದುದು. ೫ ಸಾವಿರ ವರ್ಷಗಳಿಂದಲೂ ಮನು ಈ ದೇಶಗೆ ಪಾಲಿನ ಒಂದು ಶಾಪವಾಗಿದ್ದಾನೆ. ಆದರೆ ಇಂಥ ಹಿಂದೂ ಜನಾಂಗದಿಂದ ದಲಿತರು ಬೇರ್ಪಡಬಾರದು ಎಂಬುದು ಗಾಂಧಿಯ ಒತ್ತಾಯ. ಇದೂ ಕೂಡ ಗಾಂಧಿಯ ಮತ್ತೊಂದು ರಾಜಕೀಯ ಕುತಂತ್ರವೇ, ಅದು ದಲಿತಪರ ಕಾಳಜಿಯೇನಲ್ಲ. ಏಕೆಂದರೆ ಹಿಂದೂಧರ್ಮದ ಶೇ.೨೫ ಜನಸಂಖ್ಯೆ ಮತಾಂತರವಾಗಿಬಿಟ್ಟರೆ ಹಿಂದೂ ಸ್ಥಾನದಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗಿಬಿಡುವರು ಎಂಬ ಭೀತಿ ಗಾಂಧಿಯದು. ನನ್ನ ದೃಷ್ಟಿಯಲ್ಲಿ ಗಾಂಧಿ ಒಬ್ಬ ಒಳ್ಳೆಯ ಧಾರ್ಮಿಕ ವ್ಯಕ್ತಿಯೂ ಅಲ್ಲ.

            ಅಂಬೇಡ್ಕರ್ ತಮ್ಮ ಬೇಡಿಕೆಯನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯ ಪಡಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡಿದರು. ವಿಧಿಯಿಲ್ಲದೆ ಅಂಬೇಡ್ಕರ್ ತಮ್ಮ ಬೇಡಿಕೆಯಿಂದ ಹಿಂದೆ ಸರಿದ ಕೂಡಲೆ ಅವರನ್ನು ಓಲೈಸಲು ಗಾಂಧಿ ದಲಿತರನ್ನು ’ಹರಿಜನರು’ ಎಂದು ಕರೆಯಲಾರಂಭಿಸಿದರು. ನಾನು ಅಂಬೇಡ್ಕರ್ ಜಾಗದಲ್ಲಿ ಇದ್ದಿದ್ದರೆ “ನಿಮ್ಮ ಬದುಕು, ನಿಮ್ಮ ಸಾವು ನಿಮ್ಮ ಕೈಲಿದೆ. ಧಾರಾಳವಾಗಿ ಉಪವಾಸ ಮಾಡಿ ಸಾಯಬಹುದು, ಸತ್ತ ಮೇಲೆಯೂ ಉಪವಾಸ ಮಾಡುತ್ತಲೇ ಇರಬಹುದು. ಆದರೆ ಒಂದು ಮಾತು, ನೀವು ಸತ್ತರೆ ನಿಮ್ಮ ಸಾವಿನ ಅಪವಾದ ನನ್ನ ಮೇಲೆ ಬರುತ್ತದೆ. ಇಡೀ ದೇಶ ನನಗೆ ಶಾಪ ಹಾಕುತ್ತದೆ. ಇದೇನು ಅಹಿಂಸೆಯೇ? ಇದು ತುಂಬ ಕ್ರೂರ ವಿಧಾನವಲ್ಲವೇ?” ಎಂದು ಪ್ರಶ್ನಿಸುತ್ತಿದ್ದೆ. ಅಂಬೇಡ್ಕರ್ ಇದನ್ನೆಲ್ಲ ಬಾಯಿ ಬಿಟ್ಟು ಹೇಳದಿದ್ದರೂ ತೋರಿಕೆಗೆ ಗಾಂಧಿಯ ಕ್ಷಮಾಪಣೆ ಕೇಳಿದರು. ನಾನಾಗಿದ್ದರೆ ಖಂಡಿತ ಕೇಳುತ್ತಿರಲಿಲ್ಲ. ಇತಿಹಾಸದಲ್ಲಿ ಗಾಂಧಿಯ ಸಾವಿನ ಕಳಂಕವನ್ನು ಹೊತ್ತು ನಿಲ್ಲುತ್ತಿದ್ದೆ. ಮಾತ್ರವಲ್ಲ, ಗಾಂಧಿ ಮಹಾ ಕ್ರೂರ ವ್ಯಕ್ತಿ ಎಂದು ಎಲ್ಲೆಡೆ ಪ್ರಚಾರ ಮಾಡುತ್ತಿದ್ದೆ. ನಾವು ಸತ್ತ ಮೇಲೆ ಯಾರು ಇತಿಹಾಸವನ್ನು ಹೇಗೆ ಬರೆದುಕೊಂಡರೂ ನಮಗೇನು ಚಿಂತೆ? ಆದರೆ ಅಂಬೇಡ್ಕರ್ ಬೇರೊಂದು ದಾರಿ ಹಿಡಿದರು. ಅವರು ದಲಿತ ಸಮುದಾಯದೊಂದಿಗೆ ಬೌದ್ಧಧರ್ಮದತ್ತ ನಡೆದರು. ಆದ್ದರಿಂದ ಭಾರತದಲ್ಲಿ ಬೌದ್ಧರ ಸಂಖ್ಯೆ ಈಗ ಸ್ವಲ್ಪ ಹೆಚ್ಚಾಗಿದೆ. ಅಂಬೇಡ್ಕರರದೂ ಕೂಡ ಪುನಃ ರಾಜಕೀಯ ಪ್ರೇರಿತ ಮತಾಂತರವೇ, ಅದರಲ್ಲಿ ನನಗೆ ಯಾವುದೇ ಆಧ್ಯಾತ್ಮಿಕ ಮೌಲ್ಯ ಕಾಣಿಸುವುದಿಲ್ಲ. ಭಾರತದಲ್ಲಿ ದಲಿತರು ಸುಲಭವಾಗಿ ತಮ್ಮನ್ನು ತಾವು ಮಾರಿಕೊಂಡುಬಿಡುತ್ತಾರೆ ಎಂಬುದನ್ನು ಅಂಬೇಡ್ಕರ್ ಮತ್ತೊಮ್ಮೆ ರುಜುವಾತುಪಡಿಸಿದರು. ಭಾರತದ ಸಂವಿಧಾನ ರಚನೆಯ ಸಮಿತಿಯಲ್ಲಿ ಅವರಿಗೆ ಮುಖ್ಯವಾದ ಸ್ಥಾನಮಾನವನ್ನು ನೀಡಿ ಅವರನ್ನು ಕೊಂಡುಕೊಳ್ಳಲಾಯಿತು. ಆ ಸ್ಥಾನ ಮಾನ ಸಿಕ್ಕ ಮೇಲೆ ಅವರು ತಮ್ಮ ಬೌದ್ಧಧರ್ಮದ ನಿಷ್ಠೆಯನ್ನು ಸಂಪೂರ್ಣವಾಗಿ ಮರೆತು ಸಂವಿಧಾನ ರಚನೆಯಲ್ಲಿ ತೊಡಗಿದರು. ಇವರನ್ನು ನಂಬಿ ಬೌದ್ಧಧರ್ಮಕ್ಕೆ ಮತಾಂತರಗೊಂಡಿದ್ದ ಮಹಾರಾಷ್ಟ್ರದ ೩ ಲಕ್ಷಕ್ಕೂ ಅಧಿಕ ದಲಿತರಿಗೆ ಅನ್ಯಾಯವಾಯಿತು. ಪರಿಶಿಷ್ಟ ಜನಾಂಗಗಳಿಗೆ ನೀಡಲಾಗುವ ಮೀಸಲಾತಿಯ ಪ್ರಯೋಜನವು ಅವರು ಹಿಂದೂಗಳಾಗಿದ್ದರೆ ಮಾತ್ರ ಸಿಗುತ್ತದೆ ಎಂಬುದನ್ನು ಅವರು ಮರೆತರು. ಹಾಗಾಗಿ ಮಹಾರಾಷ್ಟ್ರದ ಎಲ್ಲ ಬೌದ್ಧ ದಲಿತರೂ ಮೀಸಲಾತಿಯಿಂದ ವಂಚಿತರಾದರು. ಆದರೂ ಅಂಬೇಡ್ಕರ್ ಗಾಂಧಿಗಿಂತ ಎಷ್ಟೋ ಒಳ್ಳೆಯ ಅಹಿಂಸಾವಾದಿ. ನನ್ನ ದೃಷ್ಟಿಯಲ್ಲಿ ನಮ್ಮನ್ನು ನಾವು ತಿಳಿಯುವುದೇ ಅಹಿಂಸೆ. ನಮ್ಮನ್ನು ನಾವು ಸರಿಯಾಗಿ ಅರಿತರೆ ಮನುಷ್ಯತ್ವದ ಮೂಲಧಾತುಗಳು ನಮಗೆ ತಿಳಿದುಬಿಡುತ್ತದೆ. ಇದರಿಂದ ಇಡೀ ಮನುಷ್ಯಜಾತಿಯ ಬಗ್ಗೆ ನಮ್ಮಲ್ಲಿ ಪ್ರೀತಿ ಮೊಳೆಯುತ್ತದೆ. ಇಂತಹ ಪ್ರೀತಿಗೆ ನೋವನ್ನು ಉಂಟು ಮಾಡಲು ಸಾಧ್ಯವಾಗುವುದಿಲ್ಲ, ಇದೇ ನಿಜವಾದ ಅಹಿಂಸೆ.

            ಗಾಂಧಿಯ ಅಹಿಂಸಾತ್ಮಕ ಆಂದೋಲನ, ಸತ್ಯಾಗ್ರಹಗಳು ಒತ್ತಡವನ್ನು ಹೇರುವ ತಂತ್ರವನ್ನು ಆಧರಿಸಿದ ರಾಜಕೀಯ ಆಂದೋಲನಗಳಾಗಿವೆ. ಒತ್ತಡ, ಆಗ್ರಹಗಳು ಅಹಿಂಸೆಯ ಪರಿಭಾಷೆ ಹೇಗಾದಾವು? ಒತ್ತಡ ಹೇರುವ ರೀತಿ ಅಹಿಂಸಾತ್ಮಕವಾದರೂ ಒತ್ತಡ ಹೇರುವ ಧೋರಣೆ ಹಿಂಸಾತ್ಮಕವಾದುದು. ಗಾಂಧಿ ಕಲಿಸಿಕೊಟ್ಟ ಉಪವಾಸ ಸತ್ಯಾಗ್ರಹದಿಂದ ಇಂದು ನಮ್ಮ ದೇಶ ಸರ್ವನಾಶವಾಗುತ್ತಿದೆ. ಗಾಂಧಿಯ ಎಲ್ಲ ಅಹಿಂಸಾತ್ಮಕ ಹೋರಾಟಗಳೂ ಹಿಂಸೆಯಲ್ಲೇ ಪರ್ಯವಸಾನವಾಗುತ್ತದೆ. ಹೃದಯಪರಿವರ್ತನೆಯ ಹೆಸರಿನಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ತನ್ನ ಅಭಿಪ್ರಾಯಕ್ಕೆ ಮಣಿಸುವ ಆಲೋಚನೆಯೇ ಹಿಂಸಾತ್ಮಕವಾದುದು. ಈ ಸೃಷ್ಟಿಯಲ್ಲಿ ಇನ್ನಾವ ಬದಲಾವಣೆಯನ್ನೂ ಅಪೇಕ್ಷಿಸದವನೇ ನಿಜವಾದ ಅಹಿಂಸಾವಾದಿ. ನೀಷೆ ಯೇಸುವನ್ನು ಟೀಕಿಸುತ್ತ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯನ್ನು ತೋರಿಸುವುದು ಪ್ರೀತಿಯ ಲಕ್ಷಣವಲ್ಲ. ಅಂಥವನಲ್ಲಿ ಹಾಗೆ ಹೊಡೆದವನನ್ನು ಕೊನೆಯ ಪಕ್ಷ ಮನುಷ್ಯತ್ವದಿಂದ ನೋಡುವ ಸಹನೆಯೂ ಇರುವುದಿಲ್ಲ. ಆ ವರ್ತನೆಯಲ್ಲಿ ’ನೀನೆಂಥ ಕ್ರಿಮಿ, ನಾನಾದರೂ ಎಂತಹ ಮಹಾತ್ಮ ಎಂದು ಈಗಲಾದರೂ ತಿಳಿಯಿತೇ’ ಎಂಬ ಧೋರಣೆ ಇದೆ. ಎನ್ನುತ್ತಾನೆ. ನಮ್ಮ ಸೂಕ್ಷ್ಮ ಅಹಂಕಾರವು ತಾನು ಇನ್ನೊಬ್ಬನಿಗಿಂತ ಉತ್ತಮ ಎಂದು ಸಾಬೀತು ಮಾಡಲು ಹಲವು ಒಳ ದಾರಿಗಳನ್ನು ಹುಡುಕಿಕೊಳ್ಳಬಲ್ಲದು. ಆದರೆ ಅವು ಕೊನೆಗೆ ಹಿಂಸೆಯತ್ತ ಕೊಂಡೊಯ್ಯುವ ದಾರಿಗಳು ಎಂಬುದನ್ನು ಮರೆಯಬಾರದು. ಅಹಿಂಸೆಯ ಇನ್ನೊಂದು ರೂಪ ಪ್ರೀತಿಯೇ ವಿನಃ ಒತ್ತಡವಲ್ಲ. ಸೂರ್ಯೋದಯದೊಂದಿಗೆ ಸೂರ್ಯನ ಕಿರಣಗಳು ಸದ್ದಿಲ್ಲದೆ ವ್ಯಾಪಿಸುವಂತೆ ಅಹಿಂಸೆಯು ಪ್ರೀತಿಯನ್ನು ಸದ್ದಿಲ್ಲದೆ ಪಸರಿಸುತ್ತದೆ. ಒತ್ತಡವನ್ನು ತರುವುದಿಲ್ಲ. ಅಹಿಂಸೆಯಿಂದ ಪರಿವರ್ತನೆ ಸಂಭವಿಸುತ್ತದೆ ಎಂಬ ಮಾತು ಬೇರೆ. ಆದರೆ ಪರಿವರ್ತನೆಯನ್ನು ಬಯಸುವವನು ಅಹಿಂಸಾವಾದಿ ಎನಿಸಿಕೊಳ್ಳಲಾರ.

 

ಗಾಂಧಿಯ ದ್ವಂದ್ವಗಳು

 

ಗಾಂಧಿಯ ಕಾಳಜಿಗಳನ್ನು ನಾನು ಪ್ರಶ್ನಿಸುವವನಲ್ಲ. ಆದರೆ ಬರೀ ಕಾಳಜಿ ಇದ್ದರೆ ಸಾಲದು. ಗಾಂಧೀ ಕ್ಷಯರೋಗಿಗಳಿಗೆ ಪ್ರಕೃತಿ ಚಿಕಿತ್ಸೆಯ ಹೆಸರಿನಲ್ಲಿ ತಿಳಿನೀರು ಕುಡಿಸುತ್ತಿದ್ದವರು. ಕಾಯಿಲೆ ಗುಣವಾಗಲೆಂದು ಹಳ್ಳಿಯ ಮುಗ್ಧರು ತಾಯಿತ ಕಟ್ಟಿಕೊಳ್ಳುವುದಕ್ಕೂ ಇದಕ್ಕೂ ಏನು ವ್ಯತ್ಯಾಸ? ಗಾಂಧೀ ತತ್ವವನ್ನು ನಂಬಿಕೊಂಡರೆ ಭಾರತ ಶಾಶ್ವತವಾಗಿ ಬಡರಾಷ್ಟ್ರವಾಗಿ ಉಳಿದುಬಿಡುತ್ತದೆ. ಅದನ್ನೇನಾದರೂ ಪಾಲಿಸಿದಲ್ಲಿ ನೂರರಲ್ಲಿ ಮೂವತ್ತು ಕೋಟಿ ಜನ ನಿಸ್ಸಂಶಯವಾಗಿ ಈ ಕೂಡಲೆ ಸತ್ತುಹೋಗುತ್ತಾರೆ. ಹಿಟ್ಲರ್, ಸ್ಟಾಲಿನ್, ಮಾವೋತ್ಸೆ ತುಂಗ್ ಈ ಮೂವರೂ ಸೇರಿ ಎಷ್ಟು ಜನರನ್ನು ಕೊಂದರೋ ಅದಕ್ಕಿಂತ ಹೆಚ್ಚು ಜನರನ್ನು ಗಾಂಧೀತತ್ವಗಳು ಕ್ಷಣಮಾತ್ರದಲ್ಲಿ ಆಹುತಿ ತೆಗೆದುಕೊಳ್ಳುತ್ತವೆ. ಅವರು ಸೂಚಿಸುವ ಮಧ್ಯಯುಗ, ಪುರಾತನಯುಗಗಳ ಸಲಕರಣೆಗಳನ್ನು ಬಳಸಿ ಈ ಬೃಹತ್ ಜನಸಂಖ್ಯೆಯನ್ನು ಕಾಪಾಡಲಾರೆವು. ಆ ಪುರಾತನಯುಗವನ್ನೇ ಗಾಂಧೀ ’ರಾಮರಾಜ್ಯ’ ಎಂದು ಕರೆಯುತ್ತಿದ್ದರೋ ಏನೋ. ಗಾಂಧೀ ಎಂಥ ಅಪಾಯಕಾರಿ ಎಂದು ಈಗ ಮನಗಾಣದಿದ್ದರೆ ಮುಂಬರುವ ತಲೆಮಾರುಗಳು “ಗಾಂಧೀ ಒಬ್ಬ ದೊಡ್ಡ ನರಹಂತಕ” ಎಂದು ಚರಿತ್ರೆಯಲ್ಲಿ ಓದಲಿವೆ. ಈಗಾಗಲೇ ಗಾಂಧಿಯ ತತ್ವಗಳನ್ನು ನೆಚ್ಚಿಕೊಂಡು ಲಕ್ಷಾಂತರ ಜನರ ಪ್ರಾಣಗಳನ್ನು ಕಳೆದುಕೊಂಡಿದ್ದೇವೆ. ಈಗ ನಮಗೆ ತುರ್ತಾಗಿ ಕೋಟ್ಯಂತರ ಹಸಿದ ಹೊಟ್ಟೆಗಳನ್ನು ಒಂದೇ ಸಲಕ್ಕೆ ತುಂಬಬಲ್ಲ ಸಾಧನಗಳ ಅವಶ್ಯಕತೆ ಇದೆ. ಇಂದು ಹಸಿವು ಬಡತನಗಳಿಗೆ ತಂತ್ರಜ್ಞಾನವೇ ನೇರ ಮದ್ದು. ಗಾಂಧಿಯಾದರೂ ತಂತ್ರಜ್ಞಾನದ ಪರಮ ವಿರೋಧಿ. ಗಾಂಧಿಗೆ ಜಯಕಾರ ಹಾಕುವ ನಮ್ಮ ರಾಜಕಾರಣಿಗಳಿಗೂ ಆಂತರ್ಯದಲ್ಲಿ ಗಾಂಧಿಯ ಬಗ್ಗೆ ಪೂರ್ತಿ ಭರವಸೆ ಇಲ್ಲದಿರುವುದು ನಿಜಕ್ಕೂ ನಮ್ಮ ಸುದೈವ. ಈಗ ಮಾತ್ರವಲ್ಲ ಆ ಕಾಲದ ಕಾಂಗ್ರೇಸ್ಸಿಗರಲ್ಲಿಯೂ ಯಾರೊಬ್ಬರೂ ಗಾಂಧಿಯ ಅನುಯಾಯಿಯಾಗಿರಲಿಲ್ಲ. ಕಾಂಗ್ರೇಸ್‌ನ ಬಹುತೇಕ ಗಾಂಧೀ ಅನುಯಾಯಿಗಳು ಗಾಂಧೀವಾದವನ್ನು ಲೆಕ್ಕಿಸದೆ ಮದ್ಯಪಾನ, ಮಾಂಸಾಹಾರಗಳನ್ನು ಸೇವನೆ ಮಾಡುತ್ತಿದ್ದರು. ನೆಹರೂ ಹಾಗು ಇಂದಿರಾಗಾಂಧೀ ಕೂಡ ಇದಕ್ಕೆ ಅಪವಾದವಲ್ಲ.

            ನಾವು ಬಡತನವನ್ನು ಪೂಜಿಸುತ್ತಲೇ ಬಂದುದರಿಂದ ಗಾಂಧಿಯಂಥವರು ನಮಗೆ ಸುಲಭವಾಗಿ ಇಷ್ಟವಾಗುತ್ತಾರೆ. ಯಾರಾದರೂ “ಬಾಪು ನೀವೇಕೆ ಮೂರನೆಯ ದರ್ಜೆಯ ಬೋಗಿಯಲ್ಲೇ ಪ್ರಯಾಣಿಸುವಿರಿ?” ಎಂದು ಕೇಳಿದರೆ ಅವರು “ಏನು ಮಾಡಲಿ ಇಲ್ಲಿನ ರೈಲುಗಳಿಗೆ ನಾಲ್ಕನೆಯ ದರ್ಜೆಯ ಬೋಗಿಯನ್ನು ಅಳವಡಿಸಿಲ್ಲವಲ್ಲ” ಎನ್ನುತ್ತಿದ್ದರಂತೆ. ಒಂದೆಡೆ ಮೂರನೆಯ ದರ್ಜೆಯಲ್ಲಿ ಪ್ರಯಾಣಿಸಲು ಒಪ್ಪದ ಜನ ಇನ್ನೊಂದೆಡೆ ಹಾಗೆ ಪ್ರಯಾಣಿಸುವವನನ್ನು ಹಾಗೆ ಪ್ರಯಾಣಿಸಿದ ಮಾತ್ರಕ್ಕೆ ಮಹಾತ್ಮಾ ಎಂದು ಗೌರವಿಸುವರು. ಇಲ್ಲಿ ನಮಗೆ ದ್ವಂದ್ವವೇ ಕಾಣಿಸುವುದಿಲ್ಲ. ಗಾಂಧೀ ತಮ್ಮ ’ಹಿಂದ್ ಸ್ವರಾಜ್’ನಲ್ಲಿ ಆಧುನಿಕತೆಯನ್ನು ವಿರೋಧಿಸುತ್ತಾರೆ. ೧೯೪೮ರಲ್ಲಿ ಸತ್ತ ವ್ಯಕ್ತಿಯನ್ನು ಅಷ್ಟು ಹಿಂದೆ ಪ್ರಕಟವಾದ (೧೯೦೫) ಒಂದು ಕೃತಿಯನ್ನು ಇಟ್ಟುಕೊಂಡು ಟೀಕಿಸುವುದು ಸರಿಯೇ ಎಂಬ ಪ್ರಶ್ನೆ ಏಳಬಹುದು. ೧೯೪೫ರಲ್ಲಿ ನೆಹರೂ ಗಾಂಧಿಗೆ ಒಂದು ಪತ್ರವನ್ನು ಬರೆದು “ನೀವು ಈಗಲೂ ಹಿಂದ್ ಸ್ವರಾಜ್‌ನಲ್ಲಿ ಹೇಳಿರುವಂತೆ ರೈಲ್ವೇ, ಅಂಚೆ, ಇತ್ಯಾದಿ ಆಧುನಿಕ ಆವಿಷ್ಕಾರಗಳನ್ನು ವಿರೋಧಿಸುವಿರೇ?” ಎಂದು ಕೇಳಿದ್ದರು. ಅದಕ್ಕೆ ಗಾಂಧೀ “ಆ ಪುಸ್ತಕದ ಒಂದು ಸಾಲನ್ನೂ ನಾನು ಅಳಿಸಲಾರೆ” ಎಂದು ಉತ್ತರಿಸಿದ್ದರಂತೆ. ಸ್ವತಃ ಗಾಂಧಿಯೇ ಅತ್ಯಂತ ಕಡಿಮೆ ಓದಿಕೊಂಡಿದ್ದ ವ್ಯಕ್ತಿ. ಗಾಂಧೀ ಫ್ರಾಯ್ಡ್, ಯೂಂಗ್‌ರಂತಹ ಆಧುನಿಕ ಮನೋವಿಶ್ಲೇಷಕರನ್ನು ಓದಿಕೊಂಡಿದ್ದರೆ ಮೂರು ಸಾವಿರ ವರ್ಷಗಳ ಹಿಂದಿನ ಬ್ರಹ್ಮಚರ್ಯದ ಪಳೆಯುಳಿಕೆ ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಿರಲಿಲ್ಲ. ೧೯೪೨ರಲ್ಲಿ ಜೈಲಿನಲ್ಲಿದ್ದಾಗ ಕಾರ್ಲ್‌ಮಾರ್ಕ್ಸ್‌ನ ಕೃತಿಗಳನ್ನು ಓದಿದ್ದೆ ಎಂದು ಬರೆದುಕೊಳ್ಳುತ್ತಾರೆ. ಆದರೆ ಮಾರ್ಕ್ಸ್ ಅವರೊಳಗೆ ಎಷ್ಟರ ಮಟ್ಟಿಗೆ ಇಳಿದಿದ್ದಾನೆಯೋ ದೇವರಿಗೇ ಗೊತ್ತು. ಬಡತನವನ್ನು ಬೋಧಿಸಿದ ಗಾಂಧಿಯ ಓದು, ತಿಳುವಳಿಕೆ, ವಿಚಾರ, ಎಲ್ಲವೂ ಬಡತನದಿಂದ ಸೊರಗಿತ್ತು. ಹಾಗೆ ಅವರು ಸರಿಯಾಗಿ ಓದಿಕೊಂಡಿದ್ದು ಎರಡೇ ಕೃತಿಗಳನ್ನು: ಒಂದು ಭಗವದ್ಗೀತೆ, ಇನ್ನೊಂದು ಶ್ರೀಮದ್‌ರಾಮಾಯಣ. ಗೀತೆ ಎಂತಹ ಅಪಾಯಕಾರಿ ಗ್ರಂಥ ಎಂದು ಬಹುಶಃ ಗಾಂಧಿಗೆ ತಿಳಿದಿರಲಿಲ್ಲ. ಯುದ್ಧ ಹಾಗು ಹಿಂಸೆಯೇ ಗೀತೋಪದೇಶದ ಸಮಸ್ತ ಸಾರ. ಜಗತ್ತಿನಲ್ಲಿ ಕೊಲೆ, ಹಿಂಸೆಗಳನ್ನು ಉಪದೇಶಿಸುವ ಏಕೈಕ ಧಾರ್ಮಿಕ ಗ್ರಂಥ ಅದು. ಕೃಷ್ಣನ ಗೀತೋಪದೇಶವು ಒಂದು ಸಾಮಾನ್ಯವಾದ ಕೌಟುಂಬಿಕ ಕಲಹವನ್ನು ಕುರುಕ್ಷೇತ್ರದಂತಹ ಮಹಾಯುದ್ಧವನ್ನಾಗಿ ಪರಿವರ್ತಿಸಿತು. ಮೊದಲ ದಿನ ಯುದ್ಧರಂಗದ ಎರಡೂ ಕಡೆ ಅರ್ಜುನನಿಗೆ ತನ್ನ ಬಂಧುಗಳ, ಗುರುಹಿರಿಯರ ಮುಖಗಳೇ ಕಾಣಿಸಿದಾಗ “ಇವರನ್ನೆಲ್ಲ ಕೊಂದು ಇವರ ಶವಗಳ ಮೇಲೆ ಚಿನ್ನದ ಸಿಂಹಾಸನವನ್ನು ಇರಿಸಿಕೊಂಡು ಕೂರುವುದಾದರೆ ನನಗೆ ಸಿಂಹಾಸನವೇ ಬೇಡ, ಮತ್ತೆ ಹಿಮಾಲಯಕ್ಕೆ ತಪಸ್ಸಿಗೆ ಹೊರಡುತ್ತೇನೆ” ಎಂದು ಹೇಳಿದ. ಆದರೆ ಕೃಷ್ಣ ೧೮ ಅಧ್ಯಾಯಗಳಲ್ಲಿ ಸತತವಾಗಿ ಯುದ್ಧದ ಪರವಾಗಿ ವಾದಿಸಿ ಅರ್ಜುನನನ್ನು ಒಪ್ಪಿಸಿದ.

            ಕೃಷ್ಣನ ಯಾದವೀ ಸೇನೆ ಯಾವ ರಾಜ್ಯದ ಮೇಲೆ ದಾಳಿ ಮಾಡಿದರೂ ಅವನ ಸೈನಿಕರು ಆ ಪ್ರಾಂತ್ಯದ ಎಲ್ಲ ಚೆಲುವೆಯರಾದ ಹೆಣ್ಣುಮಕ್ಕಳನ್ನೂ ಕೃಷ್ಣನ ಮುಂದೆ ತಂದು ನಿಲ್ಲಿಸುತ್ತಿದ್ದರಂತೆ. ಕೃಷ್ಣನು ಅವರಿಗೆ ಮಕ್ಕಳಿವೆಯೇ, ಮದುವೆಯಾಗಿದೆಯೇ, ಅವಿವಾಹಿತೆಯರೇ, ಅನಾಥರೇ ಇದಾವುದನ್ನೂ ಲೆಕ್ಕಿಸದೇ ಅವರನ್ನು ತನ್ನ ಅಂತಃಪುರಕ್ಕೆ ತಳ್ಳುತ್ತಿದ್ದ. ಅವನ ಅಂತಃಪುರದಲ್ಲಿ ಇಂತಹ ೧೬ ಸಾವಿರ ಹೆಂಗಸರು ವಾಸಿಸುತ್ತಿದ್ದರಂತೆ. ಅಷ್ಟೊಂದು ಹೆಣ್ಣುಗಳ ಹೆಸರುಗಳನ್ನಾದರೂ ನೆನಪಿನಲ್ಲಿಡಲಾಗುವುದೇ? ಹೀಗೆ ಕೃಷ್ಣನ ಲೋಲುಪತೆಗೆ ೧೬ ಸಾವಿರ ಕುಟುಂಬಗಳು ಬಲಿಯಾದವು. ಇಂಥವನು ಅರ್ಜುನನಿಗೆ “ಎಲ್ಲವೂ ದೈವೇಚ್ಛೆ, ನೀನು ಯುದ್ಧ ಮಾಡಲೇ ಬೇಕು (ಮಾಮನುಸ್ಮರ ಯುದ್ಧ್ಯಚ)” ಎಂದು ಬೋಧಿಸುತ್ತಾನೆ! ಕೊಲೆಗಡುಕತನವನ್ನು ಸಮರ್ಥಿಸಿಕೊಳ್ಳಲು ಎಷ್ಟು ಸುಲಭವಾಗಿ ದೇವರನ್ನು ಎಳೆದು ತರಲಾಗುತ್ತದೆ! ಕೊನೆಗೂ ಯುದ್ಧ ಜರುಗಿತು ಲಕ್ಷಾಂತರ ಜನ ಪ್ರಾಣ ಕಳೆದುಕೊಂಡರು. ಐದು ಸಾವಿರ ವರ್ಷಗಳ ಹಿಂದೆ ನಡೆದ ಈ ಯುದ್ಧದಿಂದ ಭಾರತದ ಬೆನ್ನುಮೂಳೆಯೇ ಮುರಿಯಿತು. ಅಂದು ಮಲಗಿದ ಭಾರತ ಮತ್ತೆ ಏಳಲೇ ಇಲ್ಲ; ಇಂದಿಗೂ ಮೇಲೇಳಲಾಗಿಲ್ಲ. ಅಂದು ನಡೆದ ಯುದ್ಧದಿಂದ ಭಾರತ ಎಷ್ಟೊಂದು ಹೆದರಿಬಿಟ್ಟಿತೆಂದರೆ ಪ್ರತಿಯೊಂದು ಮನೆಯಲ್ಲೂ ಒಬ್ಬ ಅಪ್ಪನೋ, ಅಣ್ಣನೋ, ಗಂಡನೋ, ಮಗನೋ ಸತ್ತಿದ್ದ. ಇಡೀ ದೇಶವನ್ನು ಎಂತಹ ಅನಾಥ ಪ್ರಜ್ಞೆ, ಅಸಹಾಯತೆಗಳು ಆವರಿಸಿತೆಂದರೆ ಸಣ್ಣ ಸಣ್ಣ ಬುಡಕಟ್ಟುಗಳಾದ ತುರ್ಕರು, ಹೂಣರು, ಗುಲಾಮಿಗಳು, ಮಂಗೋಲರು,..ಹೀಗೆ ಯಾರು ಬಂದು ಆಕ್ರಮಣ ಮಾಡಿದರೂ ನಾವು ಪ್ರತಿರೋಧಿಸಲೇ ಇಲ್ಲ. ಯುದ್ಧದ ದುರಂತಗಳನ್ನು ಚೆನ್ನಾಗಿಯೇ ಅನುಭವಿಸಿದ್ದ ನಮ್ಮಲ್ಲಿ ಎದ್ದು ನಿಂತು ಹೋರಾಡುವ ಉತ್ಸಾಹ ಉಳಿದಿರಲಿಲ್ಲ. ಕೇವಲ ಐನೂರು ಮಂದಿ ಸೈನಿಕರೊಂದಿಗೆ ತುರ್ಕರು ದಾಳಿ ನಡೆಸಿದಾಗ ದೇಶದ ಮೂವತ್ತು ಮೂರು ಕೋಟಿ ಮಕ್ಕಳು ಸುಮ್ಮನೆ ಶರಣಾಗಿಬಿಟ್ಟರು. ಇಂದು ಭಾರತದ ಗುಲಾಮತನಕ್ಕೆ ಕೃಷ್ಣನೇ ನೇರಹೊಣೆ ಎಂದು ನನ್ನ ಅಭಿಪ್ರಾಯ. ಪೂರ್ಣಾವತಾರ ಎಂದು ಇವರ ಕೈಲಿ ಪೂಜೆಗೊಳ್ಳುವ ಕೃಷ್ಣನಲ್ಲಿ ನನಗೆ ದೈವತ್ವವಿರಲಿ ಮನುಷ್ಯತ್ವ ಕೂಡ ಕಾಣಿಸುವುದಿಲ್ಲ. ಆದರೆ ಗಾಂಧಿ ಹಲವು ವಿಚಾರಗಳಿಗೆ ಸುಮ್ಮನೆ ಕಣ್ಮುಚ್ಚುತ್ತಾರೆ.

            ಎತ್ತಿನ ಬಂಡಿ ಹಾಗು ವಿಮಾನಗಳ ಹಿಂದೆ ಇರುವ ತಾಂತ್ರಿಕ ತತ್ವ ಒಂದೇ. ವಿಮಾನದ ತಂತ್ರಜ್ಞಾನ ಎತ್ತಿನ ಗಾಡಿಯ ತಂತ್ರಜ್ಞಾನದ ವಿಸ್ತೃತ ರೂಪ ಅಷ್ಟೇ. ಇನ್ನು ಗಾಂಧೀ ಹೇಳುವ ವಿಕೇಂದ್ರೀಕರಣದ ಅರ್ಥವೇನು? ಸಣ್ಣ ಯಂತ್ರ ಸಾಕು, ದೊಡ್ಡದರ ಅವಶ್ಯಕತೆ ಇಲ್ಲ ಎಂಬುದು. ವಿಕೇಂದ್ರೀಕರಣವು ಎಲ್ಲ ಬಗೆಯ ಬೃಹತ್ ತಾಂತ್ರಿಕತೆಗಳನ್ನು ವಿರೋಧಿಸುತ್ತದೆ. ಮನುಷ್ಯ ಬುದ್ಧಿ ಎಷ್ಟು ದೊಡ್ಡ ಯಂತ್ರಗಳನ್ನು ತಯಾರು ಮಾಡುವುದೋ ಅದೇ ಅನುಪಾತದಲ್ಲಿ ಅದು ಸಂಕೀರ್ಣವಾಗುತ್ತ ಹೋಗುವುದು. ಜೀವನವಿಡೀ ಎತ್ತಿನ ಬಂಡಿ ನಡೆಸುವವನ ಮೆದುಳಿಗೆ ಆ ಎತ್ತಿನ ಬಂಡಿಯ ತಂತ್ರಜ್ಞಾನ ಯಾವ ಸವಾಲುಗಳನ್ನು ತಾನೇ ಒಡ್ಡಬಲ್ಲುದು? ಅದೇ ವ್ಯಕ್ತಿಯನ್ನು ವಿಮಾನ ನಡೆಸಲು ಹಚ್ಚಿದರೆ ಅವನ ಬುದ್ಧಿ ಪರಿಣಾಮಕಾರಿಯಾಗಿ ವಿಕಾಸವಾಗುತ್ತದೆ. ಬುದ್ಧಿಗೆ ಸವಾಲಾಗುವ ಪ್ರತಿಯೊಂದೂ ಬುದ್ಧಿಯನ್ನು ನಿರಂತರವಾಗಿ ಬೆಳೆಸುತ್ತದೆ. ಸಣ್ಣ ಪುಟ್ಟ ಯಂತ್ರಗಳಲ್ಲೇ ಸ್ಥಗಿತಗೊಂಡಿರುವ ಸಮಾಜಗಳು ಸಾಮಾಜಿಕವಾಗಿ, ಬೌದ್ಧಿಕವಾಗಿ ಬೆಳೆಯುವುದನ್ನು ಎಂದೋ ನಿಲ್ಲಿಸಿಬಿಟ್ಟಿವೆ. ಮಿಲಿಯಾಂತರ ವರ್ಷಗಳ ಹಿಂದೆ ಮೊದಲ ಬಾರಿಗೆ ಎರಡು ಕಾಲಿನ ಮೇಲೆ ನಿಂತ ಕೋತಿ ಉಳಿದ ಕೋತಿಗಳ ಎದುರು ಹಾಸ್ಯಾಸ್ಪದ ಎನಿಸಿಕೊಂಡಿತ್ತು. ಆದರೆ ಅದುವೆ ಮನುಷ್ಯಜಾತಿ ತಂತ್ರಜ್ಞಾನದತ್ತ ಇಟ್ಟ ಮೊದಲ ಹೆಜ್ಜೆಯಾಗಿತ್ತು. ಹಾಗೆ ನಿಂತದ್ದರ ಹಿಂದೆ ’ಎರಡು ಕಾಲಿನಿಂದಲೇ ಆಗುವ ಕೆಲಸಕ್ಕೆ ನಾಲ್ಕು ಕಾಲುಗಳನ್ನು ಏಕೆ ಬಳಸಬೇಕು’ ಎಂಬ ಜಿಜ್ಞಾಸೆಯಿದೆ. ಹೀಗೆ ನಿಂತ ಆ ಕೋತಿಯ ಎರಡು ಕಾಲುಗಳಿಗೆ ಸಂಪೂರ್ಣ ಬಿಡುವು ದೊರೆತಿತು. ಆ ಮೊದಲ ಕೋತಿ ಹೀಗೆ ದೃಢನಿರ್ಧಾರ ಮಾಡದೇ ಹೋಗಿದ್ದರೆ ನಮ್ಮ ಇಂದಿನ ನಾಗರಿಕತೆ ಹುಟ್ಟುತ್ತಲೇ ಇರಲಿಲ್ಲ. ಹೀಗೆ ಬಿಡುಗಡೆ ಪಡೆದ ಕೈಗಳೇ ಇಂದಿನ ಎಲ್ಲ ಸಂಸ್ಕೃತಿ, ಸಮಾಜ, ಕಲೆ, ಸಾಹಿತ್ಯ, ಧರ್ಮಗಳನ್ನು ನಿರ್ಮಿಸಿದವು. ನಾಲ್ಕೂ ಕಾಲುಗಳನ್ನು ದುಡಿಮೆಗೆ ತೊಡಗಿಸಿದ ಕೋತಿಗಳು ಕೋತಿಗಳಾಗೇ ಉಳಿದವು. ಇಂದು ಮನುಷ್ಯ-ಮಂಗಗಳ ಒಂದು ದೊಡ್ಡ ಅಂತರ ಏರ್ಪಟ್ಟಿರುವುದಾದರೆ ಅದಕ್ಕೆ ತಂತ್ರಜ್ಞಾನವೇ ಕಾರಣ.

            ಮುಂಬರುವ ದಿನಗಳಲ್ಲಿ ಎಲ್ಲ ಕೆಲಸಗಳನ್ನೂ ಯಂತ್ರಗಳೇ ನಿರ್ವಹಿಸಲಿರುವವು. ಸುಮ್ಮನೆ ಖಾಲಿಯಾಗಿ ಕುಳಿತು ಏನು ಮಾಡುವುದು ಎಂಬುದು ಮುಂದೆ ಮನುಷ್ಯ ಜಾತಿ ಎದುರಿಸಲಿರುವ ಒಂದು ದೊಡ್ಡ ಜಾಗತಿಕ ಸಮಸ್ಯೆಯಾಗುತ್ತದೆ. ದುಡಿಯುವ ಪ್ರಜ್ಞೆಗೂ, ದುಡಿಮೆಯಿಂದ ಸಂಪೂರ್ಣ ಬಿಡುಗಡೆ ಹೊಂದಿದ ಪ್ರಜ್ಞೆಗೂ ಅಪಾರವಾದ ವ್ಯತ್ಯಾಸ ಏರ್ಪಡುತ್ತದೆ. ಮನುಷ್ಯನ ಈವರೆಗಿನ ಎಲ್ಲ ಸಾಧನೆಗಳೂ ದುಡಿಮೆಯಿಂದ ಬಿಡುಗಡೆ ಹೊಂದಿದ ಸನ್ನಿವೇಶದಲ್ಲಿ ಸಂಭವಿಸಿದವು. ಅಥೆನ್ಸ್‌ನಲ್ಲಿ ವಿಜ್ಞಾನ, ತತ್ವಜ್ಞಾನ, ನೀತಿಶಾಸ್ತ್ರ, ಸಾಹಿತ್ಯಗಳು ತಮ್ಮ ಉತ್ತುಂಗಕ್ಕೆ ತಲುಪಲು ಕಾರಣಗಳಿವೆ. ಅಲ್ಲಿನ ಸಮಾಜವು ದುಡಿಯುವ ಗುಲಾಮ ವರ್ಗ ಹಾಗು ಅಭಿಜಾತ ವರ್ಗಗಳೆಂದು ವಿಭಜನೆಯಾಗಿತ್ತು. ಅವರನ್ನು ಮಾರ್ಕ್ಸಿಸ್ಟರು ಬೂರ್ಷ್ವಾಗಳೆಂದು ಕರೆಯುತ್ತಿದ್ದರು. ಈ ವರ್ಗವೇ ಸಾಕ್ರಟೀಸ್, ಅರಿಸ್ಟಾಟಲ್, ಪ್ಲೇಟೋರಂತಹ ತತ್ವಜ್ಞಾನಿಗಳಿಗೆ ಜನ್ಮ ನೀಡಿದ್ದು. ಭಾರತದಲ್ಲಿಯೂ ಶ್ರಮದಿಂದ ಸಂಪೂರ್ಣ ಬಿಡುಗಡೆ ಹೊಂದಿದ್ದ ಬ್ರಾಹ್ಮಣರದ್ದು ಇದೇ ಕತೆ. ಶ್ರಮದಿಂದ ಬಿಡುಗಡೆ ಹೊಂದಿದ ಬ್ರಾಹ್ಮಣನ ಚಿತ್ತ ಸುಲಭವಾಗಿ ಮುಂದಿನ ಹಂತವನ್ನು ಪ್ರವೇಶಿಸಿತು. ಇಡೀ ಮನುಷ್ಯಜಾತಿಯೇ ಹೀಗೆ ಶ್ರಮಸಾಧ್ಯ ದುಡಿಮೆಯಿಂದ ಮುಕ್ತವಾಗುವ ದಿನವೇ ನಿಜವಾದ ಕ್ರಾಂತಿ ಹಾಗು ಸಮಗ್ರ ವಿಕಾಸ ಸಂಭವಿಸುವುದು. ಮನುಷ್ಯನನ್ನು ಶ್ರಮಸಾಧ್ಯ ದುಡಿಮೆಯಿಂದ ಬಿಡುಗಡೆಗೊಳಿಸದೇ ವ್ಯಕ್ತಿಗೌರವ, ಸಾಮಾಜಿಕ ನ್ಯಾಯಗಳ ಬಗ್ಗೆ ಮಾತನಾಡುವುದು ಅರ್ಥಹೀನ. ಗಾಂಧಿಯನ್ನು ನಂಬಿದರೆ ಮನುಷ್ಯ ಜಾತಿ ಶ್ರಮದಿಂದ ಇನ್ನೆಂದಿಗೂ ಬಿಡುಗಡೆಯಾಗುವುದೇ ಇಲ್ಲ.

            ತನಗೆ ಇಷ್ಟವಾಗುವ ಬಟ್ಟೆಯನ್ನು ತಾನೇ ತನ್ನ ಕೈಯಾರೆ ತಯಾರಿಸಿಕೊಳ್ಳಬೇಕು ಎಂದು ಬಯಸುವ ವ್ಯಕ್ತಿ ಚರಕದ ಮುಂದೆ ವರ್ಷವಿಡೀ ಕುಳಿತು ಪ್ರತಿದಿನ ೪-೫ ಗಂಟೆಗಳ ಕಾಲ ಶ್ರಮ ಪಡಲೇ ಬೇಕು. ಒಂದು ಸಾಧಾರಣ ಬಟ್ಟೆಗಾಗಿ ಇಷ್ಟೊಂದು ಅಮೂಲ್ಯವಾದ ಸಮಯವನ್ನು ಪೋಲು ಮಾಡುವುದರಲ್ಲಿ ಅರ್ಥವಿದೆಯೇ? ನಮ್ಮ ಉತ್ಪಾದನಾ ಸಾಧನಗಳು ನಮ್ಮ ಬೌದ್ಧಿಕ ಕ್ಷಮತೆಯ ಮೇಲೆ ಪ್ರಭಾವ ಬೀರಬಲ್ಲವು. ಇಂದು ಪಶ್ಚಿಮ ದೇಶಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಯಾವ ತೀವ್ರತೆಯಿಂದ ಮುಂದುವರೆಯುತ್ತಿವೆ ಎಂದರೆ ಇನ್ನು ಕೆಲವೇ ವರ್ಷಗಳಲ್ಲಿ ಮನುಷ್ಯನಿಗೂ ಕೋತಿಗೂ ನಡುವಣ ಅಂತರದ ಅನುಪಾತದಷ್ಟೇ ಪೂರ್ವ-ಪಶ್ಚಿಮ ದೇಶಗಳ ಮಾನವತೆಗಳ ನಡುವಣ ಅನುಪಾತ ಏರ್ಪಡಲಿದೆ. ನಾವಾದರೂ ಸ್ವಾವಲಂಬನೆ, ಸಾಮೂಹಿಕ ದುಡಿಮೆ ಎಂಬ ಸಿದ್ಧಾಂತಗಳನ್ನು ನಂಬಿಕೊಂಡು ಕುಳಿತಿದ್ದೇವೆ. ಅಲೆಕ್ಸಾಂಡರ್ ಕುದುರೆಯೇರಿ ದಾಳಿ ನಡೆಸಿದಾಗ ಪೌರವ ಆನೆಯ ಮೇಲೆ ಕುಳಿತು ಮುಖಾಮುಖಿಯಾದ. ಆನೆ ಅಂಬಾರಿಗೆ ಚಂದ, ಯುದ್ಧಕ್ಕಲ್ಲ. ಪೌರವನ ಆನೆ ಯುದ್ಧರಂಗದಲ್ಲಿ ಕುಸಿಯಿತು. ಬಾಬರ್ ಬಾಂಬುಗಳಿಂದ ಆಕ್ರಮಣ ನಡೆಸಿದಾಗ ನಮ್ಮ ಯುದ್ಧಶಸ್ತ್ರಗಳು ನಿಷ್ಪ್ರಯೋಜಕವಾದವು. ತಂತ್ರಜ್ಞಾನದ ಕೊರತೆಯಿಂದ ನಾವು ಈತನಕ ಸೋಲುತ್ತಲೇ ಬಂದಿದ್ದೇವೆ.

            ನನಗೇನೂ ಚರಕಗಳ ಬಗ್ಗೆ ದ್ವೇಷವಿಲ್ಲ. ನಾನು ಚರಕ ತಕಲಿಗಳ ವಿರುದ್ಧ ಯುದ್ಧ ಹೂಡುತ್ತಿಲ್ಲ. ಬೇರೆ ವಿಧಿಯಿಲ್ಲದಿದ್ದರೆ ಖಂಡಿತ ಅವನ್ನು ಬಳಸೋಣ. ಅವು ಬೇರೆ ದಾರಿಯಿಲ್ಲದೆ ಬಳಸಬೇಕಾದ ಉಪಕರಣಗಳಾಗಬೇಕೇ ವಿನಃ ನಮ್ಮ ದುಡಿಮೆಯ ರೂಪಕಗಳಾಗಬಾರದು. ನಾನು ಖಂಡಿತ ಖಾದೀ ವಿರೋಧಿಯಲ್ಲ. ಆದರೆ ದೇಶದ ಆರ್ಥಿಕತೆ ಖಾದಿಯ ಮೇಲೆ ನಿಲ್ಲಬಾರದೆಂದಷ್ಟೇ ನನ್ನ ಕಳಕಳಿ. ಖಾದಿಗೆ ಒಂದು ಸೌಂದರ್ಯವಿದೆ. ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಕೈಯಾರೆ ಮಾಡಿದ ವಸ್ತುಗಳಿಗೆ ತಮ್ಮದೇ ಆದ ಒಂದು ವಿಶಿಷ್ಟ ಮೌಲ್ಯವಿದೆ. ಪ್ರಪಂಚ ಎಷ್ಟೇ ಮುಂದುವರೆದರೂ ಮನೆಯ ಕೆಲಸ, ಮನೆ ಅಡುಗೆಗಳು ನಿಲ್ಲುವುದಿಲ್ಲ. ಆದರೆ ಇದು ವೈಯಕ್ತಿಕ ಅಭಿರುಚಿಯ ವಿಷಯಗಳೇ ವಿನಃ ಅವಕ್ಕೆ ಆರ್ಥಿಕ ಮಾನದಂಡಗಳನ್ನು ಅನ್ವಯಿಸಲಾಗದು. ಅಭಿರುಚಿಗಳನ್ನು ವೈಜ್ಞಾನಿಕ ನಿರ್ಣಯಗಳಿಗಿಂತ ಮೇಲಿನ ಮಟ್ಟಕ್ಕೇರಿಸಿದರೆ ಆಭಾಸವಾಗುತ್ತದೆ.

            ನಾನೂ ಸ್ವತಃ ಖಾದಿ ಉಪಯೋಗಿಸುವವನು. ಬೇರೆ ಬಟ್ಟೆಗಳಿಗಿಂತ ನನಗೆ ಖಾದಿಯೇ ಹಿತಕರ. ಆದರೆ ಇದು ನನ್ನ ಅಭಿರುಚಿಯ ಪ್ರಶ್ನೆ. ಖಾದಿ ಒಂದು ದುಬಾರಿ ಹವ್ಯಾಸ. ಮಿಲ್ ಬಟ್ಟೆ ಹತ್ತು ರೂಪಾಯಿಗಳಿಗೆ ಸಿಕ್ಕರೆ, ಅದೇ ಅಳತೆಯ ಖಾದಿಗೆ ಐವತ್ತು ರೂಪಾಯಿಗಳನ್ನು ತೆರಬೇಕು. ಐವತ್ತು ರೂಪಾಯಿಗಳೂ ಕಡಿಮೆಯೇ. ಏಕೆಂದರೆ ಅದರ ಮುಖಬೆಲೆಯಲ್ಲಿ ಹದಿನೈದು ರೂಪಾಯಿಗಳನ್ನು ಸರ್ಕಾರವೇ ಭರಿಸುತ್ತದೆ. ಇದು ನಿಜಕ್ಕೂ ಅರ್ಥಹೀನ ಅರ್ಥಶಾಸ್ತ್ರ! ಹವ್ಯಾಸಕ್ಕೆ ಕೊಳ್ಳುವವರು ಬೇಕಾದರೆ ಹತ್ತು ರೂಪಾಯಿ ಹೆಚ್ಚಿಗೆ ಕೊಟ್ಟು ಕೊಳ್ಳಲಿ ಬಿಡಿ! ಆದರೆ ಸರಕಾರವು ಖಾದಿ ಬಳಸದ ಸಾಮಾನ್ಯ ಪ್ರಜೆಗಳ ಜೇಬಿನಿಂದ ಹದಿನೈದು ರೂಪಾಯಿಗಳನ್ನು ತೆಗೆದು ನನಗೆ ಖಾದಿಬಟ್ಟೆಯನ್ನು ಕೊಡಿಸುವುದು ನಿಜಕ್ಕೂ ಅಸಂಗತ. ನಾನು ಖಾದಿ ಬಗ್ಗೆ ಹೀಗೆಲ್ಲ ವಿಚಾರ ಮಾಡುವುದು ಕೆಲವರಿಗೆ ಹಿಡಿಸುವುದಿಲ್ಲ. ಆಲೋಚನೆಯಿಂದ ನಮ್ಮ ನಂಬಿಕೆಗಳ ಬೇರುಗಳಿಗೆ ಅಪಾಯವೆಂದು ನಮ್ಮ ಅಪ್ರಜ್ಞಾ ಮನಸ್ಸಿಗೆ ಮೊದಲೇ ತಿಳಿದಿರುತ್ತದೆ. ಆದ್ದರಿಂದಲೇ ಅದು ಆಲೋಚನೆಯ ಗೊಡವೆಗೇ ಹೋಗದಂತಿರುತ್ತದೆ. ಈ ಬಗೆಯ ಇಚ್ಛಾಪೂರ್ವಕ ವಿಸ್ಮೃತಿ ಸಮಸ್ಯೆಗೆ ಪರಿಹಾರವಲ್ಲ. ಕಾಲಿಗೆ ಚುಚ್ಚಿರುವ ಮುಳ್ಳನ್ನು ಲೆಕ್ಕಿಸದೆ ಓಡಾಡಿದರೆ ಆರೋಗ್ಯ ಬರುವುದಿಲ್ಲ.

            ಇನ್ನು ಗಾಂಧೀ ತಾವು ನಂಬಿದಂತೆಯೇ ನಡೆದವರು, ಬದುಕಿ ತೋರಿಸಿದವರು ಎಂಬುದೂ ಶುದ್ಧ ಮೂಢನಂಬಿಕೆಯ ಮಾತು. ಗಾಂಧಿ ಎಂದೂ ತಮ್ಮ ಮಾತಿಗೆ ತಕ್ಕಂತೆ ನಡೆದವರಲ್ಲ. ನನ್ನ ಮಾತುಗಳು ನಿಮಗೆ ಕಹಿ ಎನಿಸಬಹುದು. ಆದರೆ ಇದು ಸತ್ಯ. ತಮ್ಮ ಜೀವನದುದ್ದಕ್ಕೂ ರೈಲುಗಳನ್ನು ವಿರೋಧಿಸಿದ, ರೈಲನ್ನು ’ಸೈತಾನನ ಅನ್ವೇಷಣೆ’ ಎಂದು ಕರೆದ ಗಾಂಧೀ ತಮ್ಮ ಜೀವಿತದ ಅರ್ಧಭಾಗವನ್ನು ರೈಲ್ವೇ ಪ್ರಯಾಣದಲ್ಲೇ ಕಳೆದರು. ಇಂಗ್ಲಿಷ್ ಔಷಧಿಗಳನ್ನು ವಿರೋಧಿಸಿ ’ರಾಮನಾಮವೇ ಪರಮೌಷಧ’ ಎಂದು ಸಾರುತ್ತಿದ್ದ ಗಾಂಧೀ ತಮ್ಮ ಕಾಯಿಲೆ ವಿಷಮಾವಸ್ಥೆಯನ್ನು ತಲುಪಿದಾಗಲೆಲ್ಲ ಅಲೋಪಥಿಯ ಮೊರೆ ಹೋಗುತ್ತಿದ್ದರು. ಹಾಗೆಯೇ ಅಂಚೆ ವ್ಯವಸ್ಥೆಯನ್ನು ವಿರೋಧಿಸುತ್ತಲೇ ದಿನಕ್ಕೆ ನೂರಾರು ಪತ್ರಗಳನ್ನು ಬರೆಯುತ್ತಿದ್ದರು. ಅವರ ವಾರ್ಧಾ ಆಶ್ರಮದಲ್ಲಿ ಎಷ್ಟೊಂದು ಅಂಚೆ ವ್ಯವಹಾರ ನಡೆಯುತ್ತಿದ್ದವೆಂದರೆ ಆಶ್ರಮಕ್ಕೆ ಒಂದು ಪ್ರತ್ಯೇಕ ಅಂಚೆ ಕಛೇರಿಯನ್ನೇ ಮೀಸಲಿರಿಸಲಾಗಿತ್ತಂತೆ. ಎಲ್ಲ ಆಧುನಿಕ ಅನ್ವೇಷಣೆಗಳನ್ನೂ ವಿರೋಧಿಸುತ್ತಲೇ ಅವುಗಳ ಸಂಪೂರ್ಣ ಲಾಭ ಪಡೆಯುತ್ತಿದ್ದರು ಗಾಂಧಿ. ಅವರ ಜೀವನ ಚರಿತ್ರೆಯನ್ನು ಒಮ್ಮೆ ಅವಲೋಕಿಸಿದರೆ ಆ ವ್ಯಕ್ತಿಗೂ ಅವರು ನಂಬಿದ್ದ ಸಿದ್ಧಾಂತಕ್ಕೂ ಅರ್ಥಾರ್ಥ ಸಂಬಂಧ ಕಾಣಿಸುವುದಿಲ್ಲ. ಆದರೆ ಒಮ್ಮೆ ’ಮಹಾತ್ಮಾ’ ಎಂದು ಕರೆದ ಮೇಲೆ ಇಂಥವೆಲ್ಲ ನಮ್ಮ ಕಣ್ಣಿಗೆ ಕಾಣಿಸುವುದೇ ಇಲ್ಲ, ಇದು ನಮ್ಮ ದುರಂತ.

            “ಸಮಾಜದ ಪಿಡುಗುಗಳಿಗೆ ಇನ್ನೊಬ್ಬರನ್ನು ಟೀಕಿಸದೇ ನಾವೇ ಸ್ವೋಪಜ್ಞತೆಯಿಂದ ಪರಿಹಾರ ಹುಡುಕುವುದು ಸರಿಯಲ್ಲವೇ?” ಎಂದು ಗಾಂಧಿಯನ್ನು ಮನಸ್ಸಿನಲ್ಲಿ ಇರಿಸಿಕೊಂಡು ಇಲ್ಲೊಬ್ಬರು ಪ್ರಶ್ನೆ ಕಳಿಸಿದ್ದಾರೆ.

            ವಿಮರ್ಶೆಯ ಬಗ್ಗೆ ಹೆದರಿದಾಗ ಮಾತ್ರ ಇಂತಹ ಪ್ರಶ್ನೆಗಳು ಹುಟ್ಟುತ್ತವೆ. ಹಳೆಯದನ್ನು ಮುರಿಯದೆ ಹೊಸತನ್ನು ಕಟ್ಟಲು ಸಾಧ್ಯವೇ? ಮುರಿಯುವ ಕ್ರಿಯೆಯೂ ಕಟ್ಟುವ ಕ್ರಿಯೆಗೆ ಪೂರಕವಾದುದು ಎಂಬುದನ್ನು ಮರೆಯಬಾರದು. ಹಿಂದಣ ಹೆಜ್ಜೆಯನ್ನು ನೋಡಿಕೊಳ್ಳದೆ ಭವಿಷ್ಯದತ್ತ ಹೆಜ್ಜೆ ಇಡಲಾಗದು. ಹಿಂದಿನದನ್ನು ಬೆದಕಲು ಹಿಂಜರಿಯುವವರು ಮುಂದಣ ಹೆಜ್ಜೆ ಇಡುವ ಉತ್ಸಾಹವನ್ನೂ ಕಳೆದುಕೊಳ್ಳುವರು. ಹಿಂದಣ ಪರಂಪರೆ ವಿಮರ್ಶಾ ಮಾತ್ರದಿಂದ ಮುರಿದು ಬೀಳುವಷ್ಟು ದುರ್ಬಲವಾದುದೆಂದು ನಾನು ಭಾವಿಸಿಲ್ಲ. ಹಾಗೊಂದು ವೇಳೆ ಬಿದ್ದರೆ ಅದು ಬೀಳುವುದೇ ಸರಿ. ಮುಂದಿನ ಹೆಜ್ಜೆ ಇಡುವಾಗ ಹಿಂದಿನ ಯಾವೆಲ್ಲ ಸಂಗತಿಗಳನ್ನು ನಮ್ಮೊಂದಿಗೆ ಕೊಂಡೊಯ್ಯಬಾರದು ಎಂಬ ತಿಳುವಳಿಕೆಗಾದರೂ ಹಿಂದಿನದನ್ನು ವಿಮರ್ಶಿಸಲೇ ಬೇಕಾಗುತ್ತದೆ. ಹಿಂದಿನ ಹೆಗಲ ಮೇಲೆ ನಿಂತು ಮುಂದಿನ ಅಡಿಯಿಡಬೇಕಲ್ಲದೆ ಹಿಂದಣ ಹೊರೆ ಹೊತ್ತು ಇಲ್ಲಿಯೇ ಕುಸಿಯಬಾರದು. ಅದಕ್ಕಾಗಿ ಈ ಉಪನ್ಯಾಸ.

            ಈವರೆಗಿನ ನಮ್ಮ ಪರಂಪರೆ ನಮ್ಮ ಆಯ್ಕೆಯ ಪರಂಪರೆ ಆಗಿಯೇ ಇಲ್ಲ. ಏಕೆಂದರೆ ನಾವು ಯಾವುದನ್ನು ’ಪರಂಪರೆ’ ಎಂದು ಕರೆಯುವೆವೋ ಅದರಲ್ಲಿ ಲೆಕ್ಕವಿಲ್ಲದಷ್ಟು ವಿರೋಧಾಭಾಸಗಳಿವೆ, ಅಸಂಗತಿಗಳಿವೆ. ಭಾರತೀಯರ ಮನಸ್ಸು ಇಷ್ಟೊಂದು ದ್ವಂದ್ವಗಳಿಂದ ಕೂಡಿರಲು ನಮ್ಮ ಮೇಲೆ ಹೊರಿಸಲಾದ ’ಪರಂಪರೆ’ಯ ಈ ವಿರೋಧಾಭಾಸಗಳ ಹೊರೆಯೇ ಕಾರಣ. ನಮ್ಮ ಪರಂಪರೆಯನ್ನು ನೆನೆಸಿಕೊಂಡರೆ ಒಂದು ದೊಡ್ಡ ಗೋದಾಮಿನ, ಕಸ ಸಂಗ್ರಹಿಸುವ ಬೃಹತ್ ಗಾತ್ರದ ತೊಟ್ಟಿಯ ನೆನಪಾಗುತ್ತದೆ. ಹೀಗಿರುವಾಗ “ಪರಂಪರೆಯನ್ನು ಬೆದಕಲೇ ಬೇಡಿ, ಟೀಕಿಸಲೇ ಬೇಡಿ” ಎಂದರೆ ಏನರ್ಥ? ಭಾರತೀಯ ಚಿಂತಕರಲ್ಲಿ ವಿದ್ಯಾವಂತರಲ್ಲಿ ಒಂದು ಸಮಗ್ರ ವ್ಯಕ್ತಿತ್ವ ಕಾಣಿಸುವುದು ತುಂಬ ಅಪರೂಪ. ಏಕೆಂದರೆ ಅಂಥವರ ಮನಸ್ಸುಗಳಲ್ಲಿ ಹಲವು ವಿಭಿನ್ನ ಸ್ವರಗಳು, ವೈರುಧ್ಯಕರ ವಿಚಾರಗಳು, ಇಬ್ಬಂದಿ ಆದರ್ಶಗಳು ಮನೆಮಾಡಿರುತ್ತದೆ. ಅವರು ಭಾವಿಸುವಂತೆ ಇದಕ್ಕೆ ನಮ್ಮ ಪರಂಪರೆಯ ಸಂಕೀರ್ಣ ಸ್ವರೂಪ ಕಾರಣವಲ್ಲ. ಪರಂಪರೆಯನ್ನು ತೀವ್ರವಾಗಿ ವಿಮರ್ಶಿಸದೆ ಪ್ರಶ್ನಾತೀತವಾಗಿ ಪೂಜಿಸುವ ಧೋರಣೆಯೇ ಕಾರಣ. ಇನ್ನಾದರೂ ಈ ಧೋರಣೆಯನ್ನು ಕೈಬಿಡದಿದ್ದರೆ ಭವಿಷ್ಯವೇ ಕುಂಠಿತವಾಗುತ್ತದೆ. ಭವಿಷ್ಯದೆದುರು ಗಾಂಧೀ, ರಾಮ, ಕೃಷ್ಣ, ಯಾರೂ ಮುಖ್ಯರಲ್ಲ. ಭವಿಷ್ಯಕ್ಕಾಗಿ ಯಾವ ದೊಡ್ಡ ಮಹಾತ್ಮನನ್ನು ತ್ಯಾಗ ಮಾಡಿದರೂ ಅಡ್ಡಿಯಿಲ್ಲ. ನನಗೆ ಭವಿಷ್ಯದ ಒಂದು ಮಗು ಭೂತಕಾಲದ ಎಲ್ಲ ಮಹಾತ್ಮರಿಗಿಂತ ಮುಖ್ಯವಾದುದು.

            ವಿಮರ್ಶೆಯೆಂದರೆ ನಿಂದನೆಯಲ್ಲ. ನನ್ನ ಮಾತುಗಳನ್ನು ಕುರಿತು ಗಂಭೀರವಾದ ಆಲೋಚನೆ ನಡೆದರೆ ನನ್ನ ಮಾತುಗಳು ತುಂಬ ಪ್ರಸ್ತುತವಾದುದು ಎಂಬ ಇಂಗಿತ ವ್ಯಕ್ತವಾಗುವುದೇ ವಿನಃ ನಿಂದಿಸಿದಂತಾಗುವುದೇ? ಎಲ್ಲರ ಬಗ್ಗೆಯೂ ಹಾಗೆ ಗಂಭೀರವಾಗಿ ಆಲೋಚಿಸಲಾಗುವುದೇ? ಗಾಂಧಿಯ ವಿಚಾರಗಳು ದೇಶದ ಒಳಿತಿನ ಮೇಲೆ ಅಥವ ಕೆಡುಕಿನ ಮೇಲೆ ತುಂಬ ಗಂಭೀರವಾದ ಪರಿಣಾಮ ಬೀರಬಲ್ಲವು ಎಂಬ ವಿಶ್ವಾಸ ಇರುವುದರಿಂದಲೇ ಅವರ ಬಗ್ಗೆ ನಾನು ಇಷ್ಟು ವಿಮರ್ಶಾತ್ಮಕವಾಗಿ ಚಿಂತನೆ ನಡೆಸುತ್ತಿರುವುದು. 

            ಮಾರ್ಕ್ಸ್ ಸತ್ತಾಗ ಏಂಗೆಲ್ಸ್ “ಮಾರ್ಕ್ಸ್‌ನ ವಿಚಾರಗಳನ್ನು ಅಧ್ಯಯನ ಮಾಡಿದವರು ಅದನ್ನು ಸಮ್ಮತಿಸುವರು ಇಲ್ಲವೇ ವಿರೋಧಿಸುವರು, ಆ ವಿಚಾರಗಳನ್ನು ತಿಳಿದೂ ಅವಜ್ಞೆ ಮಾಡಲು ಸಾಧ್ಯವೇ ಇಲ್ಲ” ಎಂದಿದ್ದ. ಯಾವ ವಿಚಾರಗಳನ್ನು ಸುಲಭವಾಗಿ ಅವಜ್ಞೆ ಮಾಡಲು ಸಾಧ್ಯವಿಲ್ಲವೋ ಅವೇ ನಿಜವಾಗಿಯೂ ಅರ್ಥಪೂರ್ಣ ವಿಚಾರಗಳು. ವಿರೋಧಿಸಲು ಸಾಧ್ಯವಿಲ್ಲದ ವಿಚಾರಗಳು ಸ್ವೀಕಾರಕ್ಕೂ ಯೋಗ್ಯವಾಗಲಾರದು ಎಂಬುದು ನನ್ನ ತಿಳುವಳಿಕೆ. ದೇವರನ್ನು ಪ್ರಶ್ನಿಸುವವರನ್ನು ಸಹ ನಾನು ನಾಸ್ತಿಕರು ಎಂದು ಕರೆಯಲಾರೆ. ಏಕೆಂದರೆ ದೇವರ ಪ್ರಶ್ನೆ ತುಂಬ ಗಂಭೀರವಾದುದು ಎಂದು ಆಸ್ತಿಕರಿಗಿಂತ ಹೆಚ್ಚಾಗಿ ಅಂಥ ನಾಸ್ತಿಕರು ಭಾವಿಸಿರುತ್ತಾರೆ.

            ಸ್ವಾತಂತ್ರ್ಯ ಸಿಗುವ ಮುನ್ನ ೧೨೫ ವರ್ಷಗಳ ಕಾಲ ಬದುಕುತ್ತೇನೆ ಎಂದು ಆಗಾಗ ತಮ್ಮ ಆತ್ಮಕಥೆಯಲ್ಲಿ ಹೇಳಿಕೊಳ್ಳುವ ಗಾಂಧಿ ಸ್ವಾತಂತ್ರ್ಯಾನಂತರ ಭ್ರಮನಿರಸನಕ್ಕೆ ಒಳಗಾದರು. ಆ ದಿನಗಳಲ್ಲಿ ತಮ್ಮ ಡೈರಿಯಲ್ಲಿ “ನನಗಿನ್ನು ಬದುಕಿರುವ ಆಸೆ ಉಳಿದಿಲ್ಲ. ನನ್ನನ್ನು ಇವರೆಲ್ಲ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡರು. ನನಗಿಲ್ಲಿ ಒಂದು ಖೋಟಾನೋಟಿನ ಬೆಲೆಯೂ ಇಲ್ಲ, ನನ್ನ ವಿಚಾರಗಳಿಗೆ ಚಲಾವಣೆಯೇ ಇಲ್ಲ” ಎಂದು ಬರೆದುಕೊಂಡಿದ್ದರು. ಅವರ ಶಿಷ್ಯರೂ ಸಹ “ಈ ಮುದುಕನಿಂದ ಇನ್ನೆಂದು ಬಿಡುಗಡೆಯೋ?’ ಎಂದು ಒಳಗೇ ಚಡಪಡಿಸುತ್ತಿದ್ದರು. ಸಾಯುವಾಗ ಗಾಂಧಿಯ ಬಾಯಲ್ಲಿ ’ಹೇರಾಮ್’ ಎಂಬ ಮಾತುಗಳು ಹೊರಬಂದವಂತೆ. ತೀವ್ರ ಭ್ರಮನಿರಸನಕ್ಕೊಳಗಾಗಿದ್ದ ಅವರ ಮನಸ್ಸಿಗೆ ಆ ಗುಂಡೇಟು ಸಮಾಧಾನವನ್ನೇ ತಂದಿರಬೇಕು. ಕೊನೆಗೂ ಸಾವನ್ನು ನೀಡಿದ ತನ್ನ ಇಷ್ಟದೈವವನ್ನು ಕೃತಜ್ಞತೆಯಿಂದ ನೆನೆಯುತ್ತ ಹಾಗೆ ಉದ್ಗರಿಸಿದರು ಎಂದು ನಾನು ಅವರ ಆ ಕೊನೆಯ ಮಾತುಗಳನ್ನು ವ್ಯಾಖ್ಯಾನಿಸುತ್ತೇನೆ. ಸ್ವಾತಂತ್ರ್ಯಾನಂತರ ಇಲ್ಲಿ ರಾಮರಾಜ್ಯದ ಕನಸನ್ನು ಕಾಣುತ್ತಿದ್ದ ಅವರ ಕಣ್ಣೆದುರು ೧೦ ಲಕ್ಷ ಜನರ ಹತ್ಯಾಕಾಂಡವಾಯಿತು, ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಕುಂಟರು, ಕುರುಡರು, ಅನಾಥರು ಹುಟ್ಟಿಕೊಂಡರು. ಎಂಥವರಿಗಾದರೂ ಭ್ರಮನಿರಸನವಾಗದೆ ಇದ್ದೀತೇ?

 

ಸೇವಾಗ್ರಾಮದ ದಿನಚರಿಗಳು

 

            ಗಾಂಧಿಯ ಸೇವಾಗ್ರಾಮದಲ್ಲಿ ಒಂದು ನಿರಂತರ ಘರ್ಷಣೆ, ತಿಕ್ಕಾಟ ಇದ್ದೇ ಇತ್ತು. ಏಕೆಂದರೆ ಅವರ ಮಗ ರಾಮದಾಸ್ ನನ್ನ ಸ್ನೇಹಿತ. ಆ ಕಡೆ ಹೋದಾಗಲೆಲ್ಲ ಅವರನ್ನು ಭೇಟಿ ಮಾಡುತ್ತೇನೆ, ಇಲ್ಲವೇ ಅವರೇ ಬಂದು ನನ್ನನ್ನು ಭೇಟಿಯಾಗುವುದೂ ಉಂಟು. ಹಾಗಾಗಿ ಸೇವಾಗ್ರಾಮದ ಒಳಹೊರಗನ್ನೂ ಅವರ ಮೂಲಕ ಅರಿಯುತ್ತಿದ್ದೆ. ರಾಮದಾಸ್ ಹಾಗು ನನ್ನ ಸ್ನೇಹ ಬೆಳೆಯುವ ಹೊತ್ತಿಗಾಗಲೇ ಗಾಂಧಿ ತೀರಿಕೊಂಡಿದ್ದರು. ರಾಮದಾಸ್ “ಆಶ್ರಮದ ವಾಸದಲ್ಲಿ ಒಂದಿಷ್ಟೂ ಸುಖವಿಲ್ಲ, ಸಣ್ಣ ಪುಟ್ಟ ವಿಷಯಗಳಿಗೂ ಗಾಂಧಿ ಕಿರಿಕಿರಿ ಮಾಡುತ್ತಿದ್ದರು, ಪ್ರತಿಯೊಬ್ಬರನ್ನೂ, ಎಲ್ಲ ರೀತಿಗಳಿಂದಲೂ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಗಾಂಧಿ ಪ್ರಯತ್ನಿಸುತ್ತಿದ್ದರು. ಅವರು ಹೊರಗೆ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿದ್ದರು. ಆದರೆ ಆಶ್ರಮದೊಳಗೆ ಗುಲಾಮಗಿರಿಯನ್ನು ಸ್ಥಾಪಿಸಿದ್ದರು” ಎಂದು ಹೇಳುತ್ತಿದ್ದರು. ಎಲ್ಲ ಸಂತರ ಕಥೆಯೂ ಇದೇ. ಅವರು ತಮ್ಮ ಮೇಲೆಯೇ ಗುಲಾಮತನವನ್ನು ಹೇರಿಕೊಳ್ಳುವುದರಿಂದ ತಮ್ಮ ಶಿಷ್ಯರ ಮೇಲೂ ಗುಲಾಮತನ ಹೇರುವ ಅಧಿಕಾರ ತಮಗಿದೆ ಎಂದು ಭಾವಿಸಿರುತ್ತಾರೆ. ಸಣ್ಣಪುಟ್ಟ ಕೆಲಸಕ್ಕೆ ಬಾರದ ವಿಷಯಗಳೂ ಗಾಂಧಿಯನ್ನು ಬಾಧಿಸುತ್ತಿತ್ತಂತೆ. ಸೇವಾಗ್ರಾಮದಲ್ಲಿ “ಆ ವ್ಯಕ್ತಿ ಮೂರು ಜೊತೆಗಿಂತ ಹೆಚ್ಚು ಬಟ್ಟೆಗಳನ್ನು ಏಕೆ ಇಟ್ಟುಕೊಂಡ?” “ಮತ್ತೊಬ್ಬ ಶಿಷ್ಯ ನಾಲ್ಕು ಗಂಟೆಯಾದರೂ ಏಕೆ ಮಲಗಿಯೇ ಇದ್ದ?” “ಇನ್ನೊಬ್ಬ ರಾತ್ರಿ ಎಷ್ಟು ಗಂಟೆಗೆ ಮಲಗುತ್ತಾನೆ, ಯಾವ ಆಹಾರ ಸೇವಿಸುತ್ತಾನೆ?”,..ಇಂಥವು ಗಾಂಧಿಯ ಕಾಳಜಿಗಳಂತೆ. ಇಂತಹ ಚಿಲ್ಲರೆ ಕಾಳಜಿಗಳು ನಿಸ್ಸಂಶಯವಾಗಿ ಅಡ್ಡದಾರಿಗಳಿಗೆ ಜನ್ಮ ನೀಡುತ್ತದೆ. ಜನ ಕಳ್ಳದಾರಿಗಳನ್ನು ಹುಡುಕಿಕೊಂಡೇ ತೀರುತ್ತಾರೆ. ಕೆಲವರು ಇಸ್ಪೀಟು ಆಡಿದರೆ ತಪ್ಪೇನು? ಅವರೇನು ಹಣ ಇಟ್ಟು ಜೂಜಾಡುತ್ತಿರುವರೇ? ಜೂಜಾಡಲು ಆಶ್ರಮದಲ್ಲಿ ಹಣವಾದರೂ ಎಲ್ಲಿಂದ ಬರಬೇಕು? ಒಂದು ವೇಳೆ ಸಿಕ್ಕಿಬಿದ್ದರೆ ಗಾಂಧಿಯಿಂದಾಗಿ ಇಡೀ ದೇಶದೆದುರು ಅವರ ತೇಜೋವಧೆ ನಡೆಯುತ್ತಿತ್ತು. ಗಾಂಧಿ ನೀಡುತ್ತಿದ್ದ ಹಿಂಸೆ ಸ್ಟಾಲಿನ್ ತರಹದ ಸರಳವಾದ, ನೇರವಾದ ಹಿಂಸೆಯಲ್ಲ. ಅವರು ಯಾರಿಗೆ ಏನೇ ಶಿಕ್ಷೆ ವಿಧಿಸಿದರೂ ಅದಕ್ಕಿಂತಲೂ ತೀವ್ರವಾಗಿ ತಮ್ಮನ್ನು ತಾವು ಶಿಕ್ಷಿಸಿಕೊಳ್ಳುತ್ತಿದ್ದರು. ಹಾಗಾಗಿ ಸೇವಾಗ್ರಾಮದಲ್ಲಿ ಗಾಂಧಿಯ ವಿರುದ್ಧ ಪ್ರತಿಭಟಿಸಲು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ.

            ಗಾಂಧೀ ಆಶ್ರಮದಲ್ಲಿ ಚಹಾಗೂ ನಿಷೇಧ ಹೇರಲಾಗಿತ್ತು. ಅಲ್ಲಿ ಬೀಡಿ ಸೇದುವಂತಿಲ್ಲ, ಇಸ್ಪೀಟು ಆಡುವಂತಿಲ್ಲ, ಸಣ್ಣ ಪುಟ್ಟ ಚಿಲ್ಲರೆ ವಿಷಯಗಳನ್ನೂ ಅಲ್ಲಿ ಗಂಭೀರವಾಗಿ ಪರಿಗಣಿಸಲಾಗುತ್ತಿತ್ತು. ಗಾಂಧಿಯ ಸೇವಾಗ್ರಾಮದಲ್ಲಿ ಬೆಳಗಿನ ಹೊತ್ತು ಕೆಲವರು ಆಗಾಗ ಕದ್ದು ಮುಚ್ಚಿ, ಬಾಗಿಲುಗಳನ್ನು ಭದ್ರ ಪಡಿಸಿಕೊಂಡು ಚಹಾ ಕುಡಿಯುತ್ತಿದ್ದರು. ಹಾಗೆ ಸದ್ದಿಲ್ಲದೆ ಬಾಗಿಲು ಹಾಕಿಕೊಂಡವರನ್ನು ಅಲ್ಲಿದ್ದ ಬೇರೆಯವರೆಲ್ಲ ಸಂಶಯದಿಂದ ನೋಡುತ್ತಿದ್ದರು, ಪತ್ತೆದಾರಿ ಕೆಲಸ ಮಾಡುತ್ತಿದ್ದರು. ಅವನು ಹೊರಗೆ ಹೋಗಿದ್ದ ಸಮಯದಲ್ಲಿ ಒಳನುಗ್ಗಿ ಎಲ್ಲೆಡೆ ಜಾಲಾಡಿ ಚಹಾದ ಸೊಪ್ಪು ಏನಾದರೂ ಸಿಕ್ಕರೆ ಅದರೊಂದಿಗೆ ಅವನನ್ನೂ ಎಳೆತಂದು ಗಾಂಧಿಯ ಎದುರು ಅಪರಾಧಿಯಂತೆ ನಿಲ್ಲಿಸುತ್ತಿದ್ದರಂತೆ. ಆದರೆ ಅಂಥವರು ಸೇವಾಗ್ರಾಮದಲ್ಲಿ ಒಬ್ಬಿಬ್ಬರೇ ಏನೂ ಇರಲಿಲ್ಲ. ತುಂಬ ಜನ ಚಹಾ ಪ್ರಿಯರು ಸಂಘಟನೆಯಾಗುತ್ತಿದ್ದರು. ಬೀಡಿಯ ಚಟವಿದ್ದವರೆಲ್ಲ ಸುಲಭವಾಗಿ ಒಂದಾಗಿ ಬಿಡುತ್ತಿದ್ದರು. ಆಗೆಲ್ಲ ಗಾಂಧಿ ತಮ್ಮ ಮೇಲೆಯೇ ಆಮರಣಾಂತ ಉಪವಾಸ ಶಿಕ್ಷೆ ಹೇರಿಕೊಳ್ಳುವ ನೆವದಲ್ಲಿ ಅಂಥವರನ್ನು ಶಿಕ್ಷಿಸುತ್ತಿದ್ದರು. ಅವರು ತಮ್ಮ ಜೀವಿತದಲ್ಲಿ ಆಮರಣಾಂತ ಉಪವಾಸಕ್ಕೆ ಎಂದೂ ಸಂಕಲ್ಪಿಸಿರದಿದ್ದರೂ ಪ್ರತಿ ಉಪವಾಸವನ್ನೂ ’ಆಮರಣಾಂತ’ ಎಂದೇ ಘೋಷಿಸಿಕೊಳ್ಳುತ್ತಿದ್ದರು. “ನಾವು ಚಹಾ ಕುಡಿಯುವುದಕ್ಕೂ ನಿಮ್ಮ ಉಪವಾಸಕ್ಕೂ ಎತ್ತಣಿಂದೆತ್ತ ಸಂಬಂಧ!” ಎಂದು ಅವರು ಕೇಳಿದಾಗ ಗಾಂಧೀ “ನನ್ನಲ್ಲಿಯೇ ಏನೋ ದೋಷವಿರಬೇಕು. ನನ್ನ ಆಶ್ರಮದಲ್ಲಿ ನಿಮಗೆ ಚಹಾ ಕುಡಿಯುವ ಆಸೆ ಹುಟ್ಟಿಕೊಂಡಿದೆ ಎಂದರೆ ಏನರ್ಥ? ನನ್ನ ಶೋಧನೆ ಹಾಗು ಶುದ್ಧೀಕರಣಕ್ಕಾಗಿ ಹೀಗೆ ಮಾಡಿಕೊಳ್ಳುತ್ತಿದ್ದೇನೆ” ಎನ್ನುತ್ತಿದ್ದರಂತೆ. ಕ್ಷುಲ್ಲಕವಾದ ಚಹಾಸೇವನೆಯಿಂದ ಗಾಂಧಿಯ ಹತ್ಯೆಯಾಗಬೇಕೇ ಎಂದು ಬೇಸರಿಸಿ ಅಂಥವರು ಉಪವಾಸ ನಿರತರಾಗಿದ್ದ ಗಾಂಧಿಯ ಕಾಲಿಗೆ ಬಿದ್ದು “ಇನ್ನು ಜೀವಮಾನದಲ್ಲಿ ಚಹಾ ಮುಟ್ಟುವುದಿಲ್ಲ, ನೀವು ಮಾತ್ರ ಉಪವಾಸ ನಿಲ್ಲಿಸಿ” ಎಂದು ಆಣೆ ಪ್ರಮಾಣ ಮಾಡಿ ಬೇಡಿಕೊಳ್ಳುತ್ತಿದ್ದರಂತೆ. ಹೀಗೆ ಮೂರು ನಾಲ್ಕು ದಿನ ಉಪವಾಸ ಕುಳಿತು ಇಡೀ ಆಶ್ರಮವನ್ನು ಹೆದರಿಸಿ ಆತಂಕ ಉಂಟುಮಾಡುತ್ತಿದ್ದರು. ಬಡಪಾಯಿ ಶಿಷ್ಯರ ಅಲ್ಪವ್ಯಸನಗಳನ್ನು ಖಂಡಿಸಿ ದೇಶದೆಲ್ಲೆಡೆಯಿಂದ ನೂರಾರು ಪತ್ರಗಳು, ತಂತಿಗಳು ಸೇವಾಗ್ರಾಮಕ್ಕೆ ತಲುಪುತ್ತಿದ್ದವು. ಅವರು ವಾರಗಟ್ಟಲೆ ಕುಳಿತು ಪ್ರತಿಯೊಂದಕ್ಕೂ ಕ್ಷಮಾಪಣೆಯ ಉತ್ತರವನ್ನು ನೀಡಬೇಕಾಗುತ್ತಿತ್ತು. ಎಲ್ಲೆಡೆ ಅಂಥವರಿಗೆ ಅವಮಾನ ಕೆಟ್ಟ ಹೆಸರು ಸಿಗುವಂತಾಗುತ್ತಿತ್ತು.

            ಆ ಆಶ್ರಮದಲ್ಲಿ ಪ್ರೀತಿಗೆ ಕೂಡ ಅವಕಾಶ ಇರಲಿಲ್ಲ. ಒಮ್ಮೆ ಅವರ ಕಾರ್ಯದರ್ಶಿ ಪ್ಯಾರೇಲಾಲ್ ಯಾರನ್ನೋ ಪ್ರೀತಿಸಿಬಿಟ್ಟರು. ಪ್ರೀತಿ ಏನು ಹೇಳಿ ಕೇಳಿ ಬರುವುದೇ? ಪ್ರೀತಿ ಉಂಟಾದ ಬಳಿಕವೇ ಪ್ರೀತಿ ಹುಟ್ಟಿತು ಎಂದು ತಿಳಿಯುವುದು. ಈ ವಿಚಾರ ಗಾಂಧಿಗೆ ತಿಳಿದಾಗ “ನಿನ್ನಂಥವನು ಪ್ರೇಮ ಪ್ರಕರಣದಲ್ಲಿ ಸಿಲುಕಿಕೊಳ್ಳುವುದೇ!” ಎಂದು ಆಶ್ಚರ್ಯ ವ್ಯಕ್ತ ಪಡಿಸಿದರಂತೆ. ಮಾತ್ರವಲ್ಲ, ಆಗ ಇದು ದೇಶದಲ್ಲೆಲ್ಲ ದೊಡ್ಡ ಸುದ್ದಿಯಾಗಿ ಪ್ಯಾರೇಲಾಲನನ್ನು ತುಂಬ ಅವಮಾನಕರ ರೀತಿಯಲ್ಲಿ ಆಶ್ರಮದಿಂದ ಓಡಿಸಲಾಯಿತಂತೆ. ಒಮ್ಮೆ ಅವರ ಮಗ ದೇವದಾಸನು ಚಕ್ರವರ್ತಿ ರಾಜಗೋಪಾಲಾಚಾರಿಯ ಮಗಳ ಜೊತೆ ಪ್ರೇಮ ಪ್ರಕರಣದಲ್ಲಿ ಸಿಲುಕಿದಾಗಲೂ ಗಾಂಧಿ ಪೇಚಿಗೆ ಸಿಲುಕಿದವರಂತೆ ವರ್ತಿಸಿದರಂತೆ. ನನ್ನ ಮಗ ಹೀಗೆ ಮಾಡಿದನೆಂದರೆ ನನ್ನಲ್ಲೇ ಏನೋ ದೋಷವಿರಬೇಕು ಎಂದು ಕಳವಳ ಪಟ್ಟರಂತೆ. ಆಕೆ ಗರ್ಭಿಣಿ ಬೇರೆ ಆಗಿದ್ದರಿಂದ ಅವರಿಬ್ಬರನ್ನೂ ಆಶ್ರಮದಿಂದ ಓಡಿಸುವಂತೆಯೂ ಇಲ್ಲ, ಬೇರೆ ಜಾತಿಯ ಹೆಣ್ಣಾದುದರಿಂದ ಮದುವೆ ಮಾಡಿಸುವಂತೆಯೂ ಇಲ್ಲ. ಜೀವಮಾನವಿಡೀ ಜಾತಿಯನ್ನು ನಿರ್ಮೂಲನೆ ಮಾಡಬೇಕೆಂದು ಪ್ರಚಾರ ಮಾಡುತ್ತಿದ್ದ ಗಾಂಧಿಗೆ ತಮ್ಮ ಮಗನ ಮದುವೆಗೆ ಜಾತಿ ಅಡ್ಡಿಯಾಯಿತು.

            ಗಾಂಧಿಯ ಸಮಕಾಲೀನರಾಗಿದ್ದ ರಾಜಗೋಪಾಲಾಚಾರಿಯೇನೂ ಗಾಂಧೀವಾದಿಯಲ್ಲ ಆದರೂ ಅವರು ಹೇಗೆ ಭಾರತದ ಮೊದಲ ಗವರ್ನರ್ ಜನರಲ್ ಆದರು? ಅವರೂ ಕಾಂಗ್ರೇಸ್ ಸದಸ್ಯರಾದರೂ ಗಾಂಧಿಯೊಡನೆ ಕೊನೆಯವರೆಗೂ ಭಿನ್ನಾಭಿಪ್ರಾಯ ಇರಿಸಿಕೊಂಡಿದ್ದವರು. ಆದರೆ ಆತ ದಕ್ಷಿಣ ಭಾರತದ ಒಳ್ಳೆಯ ಮುತ್ಸದ್ದಿ. ಹಾಗಾಗಿ ಗಾಂಧಿಯ ಕಠಿಣ ನಿಯಮಗಳು ಅವರೆದುರು ಕೆಲಸಕ್ಕೆ ಬರುತ್ತಿರಲಿಲ್ಲ. ಮಗಳನ್ನು ನೋಡಲು ಅವರು ಆಗಾಗ ಆಶ್ರಮಕ್ಕೆ ಬರುತ್ತಿದ್ದರು. ಮಗಳು ಮಾಡಿಕೊಡುತ್ತಿದ್ದ ಚಹಾವನ್ನೂ ಆಶ್ರಮದಲ್ಲೇ ಕುಡಿಯುತ್ತಿದ್ದರು, ಅಲ್ಲೇ ಸಿಗರೇಟನ್ನೂ ಸೇದುತ್ತಿದ್ದರು. ಆದರೆ ಗಾಂಧಿ ಆಗೆಲ್ಲ ಉಪವಾಸ ಮಾಡುತ್ತಿರಲಿಲ್ಲ. ಆಗ ದೇವದಾಸ್ “ಈಗ ನೀನೇಕೆ ಉಪವಾಸ ಮಾಡುವುದಿಲ್ಲ?” ಎಂದು ಕೇಳಿದರೆ “ಆತ ನನಗೆ ಸೇರಿದವನಲ್ಲ, ನನ್ನ ಶಿಷ್ಯನೂ ಅಲ್ಲ. ಆತ ಹೊರಟ ಮೇಲೆ ಆ ಕೋಣೆಯನ್ನು ಶುದ್ಧೀಕರಿಸಿದರಾಯಿತು” ಎನ್ನುತ್ತಿದ್ದರು. ಆ ಶುದ್ಧೀಕರಣವಾದರೂ ಏನು? ನೆಲಕ್ಕೆ ಗೋಡೆಗಳಿಗೆ ಹಸುವಿನ ಸಗಣಿಯನ್ನು ಬಳಿಯುವುದು. ಹಸುವಿನ ಸಗಣಿ ಎಲ್ಲ ಪಾಪಗಳನ್ನು ನಾಶಮಾಡಬಲ್ಲದು! ಆ ಪಾಪಗಳಾದರೂ ಯಾವುವು? ಚಹಾ ಕುಡಿಯುವುದು, ಸಿಗರೇಟು ಸೇವನೆ, ಇವೆಲ್ಲ ಪಾಪಗಳೇ? ಆದರೆ ಅವರನ್ನು ಆಶ್ರಮಕ್ಕೆ ಬರದಂತೆ ತಡೆಯುವಂತೆಯೂ ಇಲ್ಲ. ಬೀಗತನ ಬೆಳೆಸಿಕೊಂಡಿದ್ದಾಗಿದೆ, ಜೊತೆಗೆ, ಕಾಂಗ್ರೇಸ್‌ನ ಹಿರಿಯ ನಾಯಕ ಬೇರೆ. ಹಾಗಾಗಿ ಗಾಂಧಿ ಅವರನ್ನು ಭಾರತದ ಮೊದಲ ಗವರ್ನರ್ ಜನರಲ್ ಆಗಿ ನೇಮಕ ಮಾಡಿ ತಮ್ಮ ಪ್ರತೀಕಾರವನ್ನು ತೀರಿಸಿಕೊಂಡರು. ರಾಜಕಾರಿಣಿಗಳು ಇಡುವ ಹೆಜ್ಜೆಗಳು ನಮಗೆ ಸುಲಭವಾಗಿ ಗೋಚರಿಸುವಂಥದಲ್ಲ. ಮೇಲ್ನೋಟಕ್ಕೆ ಗಾಂಧಿ ಪಕ್ಷಪಾತ ಮಾಡುತ್ತಿದ್ದಾರೆ, ತಮ್ಮ ನಂಟರಿಗೇ ಉನ್ನತ ಹುದ್ದೆಗಳನ್ನು ನೀಡುತ್ತಿದ್ದಾರೆ ಎಂದು ತುಂಬ ಜನ ಒಳಗೇ ಅಂದುಕೊಂಡರು. ಆದರೆ ರಾಜಗೋಪಾಲಾಚಾರಿ ಇನ್ನೆಲ್ಲಿ ಪ್ರಧಾನಿಯೋ, ರಾಷ್ಟ್ರಪತಿಯೋ ಆಗಿಬಿಡುವರೋ ಎಂದು ಮುಂಜಾಗ್ರತೆ ವಹಿಸಿ ಬೇಕೆಂದೇ ಅವರನ್ನು ಗಾಂಧಿ ಗವರ್ನರ್ ಜನರಲ್ ಮಾಡಿದರು. ಏಕೆಂದರೆ ನಮ್ಮ ಸಂವಿಧಾನದಲ್ಲಿ ಗವರ್ನರ್ ಜನರಲ್ ಹುದ್ದೆ ಅಸ್ತಿತ್ವದಲ್ಲೇ ಇಲ್ಲದಂತಹುದು. ಗವರ್ನರ್ ಜನರಲ್ ಎಂದರೆ ಬ್ರಿಟನ್ನಿನ ಪ್ರತಿನಿಧಿ ಎಂದರ್ಥ. ಸ್ವತಂತ್ರ ಭಾರತದಲ್ಲಿ ಅದು ಹದಿನೈದು ದಿನಗಳ ಒಂದು ತಾತ್ಕಾಲಿಕ ಹುದ್ದೆಯಾಗಿತ್ತು. ಹಿಂದಿರುಗುತ್ತಿದ್ದ ಮೌಂಟ್ ಬ್ಯಾಟನ್ ತನ್ನ ಅಧಿಕಾರವನ್ನು ಯಾರಿಗಾದರೂ ವಹಿಸಿಕೊಡಬೇಕಾಗಿತ್ತು. ಆಗ ಕಾಂಗ್ರೇಸ್ ತನ್ನ ಪ್ರಧಾನಿಯನ್ನಾಗಿ ಇನ್ನೂ ಯಾರನ್ನೂ ಆರಿಸಿರಲಿಲ್ಲ. ಸತ್ತ ಕುದುರೆಯಂತಹ ಒಂದು ಹುದ್ದೆ ಅದು. ಪ್ರಧಾನಿಗೆ, ಸಂಪುಟದ ಇತರ ಸಚಿವರುಗಳಿಗೆ ಪ್ರಮಾಣ ವಚನ ಬೋಧಿಸಿ ಕುರ್ಚಿಯಿಂದ ಕೆಳಗಿಳಿವುದಷ್ಟೇ ಆ ಹುದ್ದೆಯ ಹೊಣೆಗಾರಿಕೆ. ರಾಜಗೋಪಾಲಾಚಾರಿಯೂ ಗಾಂಧಿಯ ಚಾಣಾಕ್ಷತನಕ್ಕೆ ಮೋಸ ಹೋದರು. ಹದಿನೈದು ದಿನಗಳಾದ ಮೇಲೆ ಆತ ತನ್ನ ನಾಡಿಗೆ ಹಿಂದಿರುಗಿ ಮದ್ರಾಸ್ ಪ್ರಾಂತದ ಮುಖ್ಯಮಂತ್ರಿಯ ಹುದ್ದೆ ವಹಿಸಿಕೊಂಡರು. ಇಡೀ ಭಾರತದ ಗವರ್ನರ್ ಜನರಲ್ ಹುದ್ದೆಯನ್ನು ಅಲಂಕರಿಸಿದ್ದ ವ್ಯಕ್ತಿ ಒಂದು ಸಣ್ಣ ಪ್ರಾಂತದ ಮುಖ್ಯಮಂತ್ರಿ ಸ್ಥಾನ ವಹಿಸಿಕೊಳ್ಳುವುದು ಎಂದರೇನು? ಆದರೆ ಅಧಿಕಾರದ ವ್ಯಾಮೋಹವೇ ಅಂತಹುದು.

            ಸೊಳ್ಳೆ ಪರದೆ ವೈಭವದ ಜೀವನವನ್ನು ಸೂಚಿಸುತ್ತದೆ ಎಂದು ಭಾವಿಸಿ ಗಾಂಧೀ ಕಾಲದಿಂದಲೂ ವಾರ್ಧಾದ ಆಶ್ರಮದಲ್ಲಿ ಸೊಳ್ಳೆಪರದೆಗೆ ನಿಷೇಧ ಹೇರಲಾಗಿತ್ತು. ಒಮ್ಮೆ ರಾಮದಾಸ್ ತಮ್ಮ ಆಶ್ರಮಕ್ಕೆ ಆಹ್ವಾನಿಸಿದ್ದಾಗ “ಸೊಳ್ಳೆಪರದೆ ಇಲ್ಲದೆ ನಿಮ್ಮ ಆಶ್ರಮದಲ್ಲಿ ರಾತ್ರಿಯನ್ನು ಕಳೆಯಲು ನನ್ನಿಂದಾಗದು, ಸೊಳ್ಳೆಪರದೆ ಐಷಾರಾಮೀ ವಸ್ತುವಲ್ಲ ಅದೊಂದು ಮೂಲಭೂತ ಅಗತ್ಯ ಎಂದು ಸಾಮಾನ್ಯಜ್ಞಾನಕ್ಕೂ ತಿಳಿಯುವುದಿಲ್ಲವೇ?” ಎಂದು ಕೇಳಿದ್ದೆ. ಸೊಳ್ಳೆಪರದೆಗೆ ಬದಲಾಗಿ ಮೈಗೆಲ್ಲ ಸೀಮೆ ಎಣ್ಣೆ ಹಚ್ಚಿಕೊಳ್ಳಬೇಕು ಎಂದು ಗಾಂಧಿ ಸೂಚಿಸಿದ್ದರಂತೆ. ಒಂದು ದಿನ ಗೊತ್ತಿಲ್ಲದೇ ಅವರ ಆಶ್ರಮದಲ್ಲಿ ಮೈ ಕೈಗೆಲ್ಲ ಸೀಮೆ ಎಣ್ಣೆ ಹಚ್ಚಿಕೊಂಡು ಮಲಗಿದ್ದೆ. ರಾತ್ರಿಯಿಡೀ ಸೀಮೆ ಎಣ್ಣೆ ವಾಸನೆಗೆ ನಿದ್ರೆಯೇ ಬರಲಿಲ್ಲ. ಇದಕ್ಕಿಂತ ಸೊಳ್ಳೆಯ ಕಾಟವೇ ಎಷ್ಟೋ ವಾಸಿ ಎನಿಸಿತು. ಇದೇನು ಆಶ್ರಮವೋ ಅಥವ ಹುಚ್ಚಾಸ್ಪತ್ರೆಯೋ ಎಂದುಕೊಂಡು ನಡುರಾತ್ರಿಯೇ ಎದ್ದು ಹೊರನಡೆದೆ. ಅಲ್ಲಿ ಪ್ರತಿ ಹಂತದಲ್ಲೂ ಬದುಕನ್ನು ಅಸಾಧ್ಯವೂ ಅಸ್ವಾಭಾವಿಕವೂ ಆಗಿಸುವ ಪ್ರಯತ್ನ ನಡೆಯುತ್ತದೆ. ಅಲ್ಲಿ ರುಚಿಯಾದ ಪದಾರ್ಥಗಳನ್ನು ತಿನ್ನುವಂತಿಲ್ಲ (ಇದೂ ಕೂಡ ’ಅಸ್ವಾದ’ ಎಂಬ ಜೈನಧರ್ಮದ ಪಂಚ ಅಣುವ್ರತಗಳಲ್ಲಿ ಒಂದು). ರುಚಿಯಾದುದನ್ನು ತಿಂದರೆ ರಸಗ್ರಂಥಿಗಳು ಕೆರಳಿಬಿಡುತ್ತವಂತೆ! ಪಾಪ, ನಾಲಗೆಯ ರಸಗ್ರಂಥಿಗಳಿಗೆ ಇವರ ಆಧ್ಯಾತ್ಮವೇನು ಗೊತ್ತು? ಆ ಆಶ್ರಮದಲ್ಲಿ ನನಗೆ ತುಂಬ ಕಷ್ಟವಾಗಿದ್ದೆಂದರೆ ಊಟದ ಸಮಯದಲ್ಲಿ. ಅಲ್ಲಿ ಎಲ್ಲರಿಗೂ ಊಟಕ್ಕೆ ಬೇವಿನ ಚಟ್ನಿಯನ್ನು ಬಡಿಸುತ್ತಿದ್ದರು. ಬೇವಿಗೆ ಔಷಧೀಯ ಗುಣಗಳಿವೆಯಂತೆ, ರಕ್ತಶುದ್ಧಿ ಮಾಡುವುದಂತೆ. ಆಗ ನಾನು ರಾಮದಾಸ್‌ನನ್ನು ಕೇಳಿದೆ “ನಾವೇನು ರಕ್ತಶುದ್ಧಿ ಮಾಡಿಕೊಳ್ಳಲು ಉಣ್ಣುತ್ತಿರುವೆವೇ? ಅಷ್ಟಕ್ಕೂ ಊಟದ ರುಚಿಯನ್ನು ಹೀಗೆ ಹದಗೆಡಿಸಿಕೊಳ್ಳುವುದಕ್ಕೆ ’ಅಸ್ವಾದ’ ಎಂಬ ಮೌಲ್ಯವನ್ನು ನೀಡುವುದು ಸರಿಯೇ? ನಾಲಗೆಯಿಂದ ಕಹಿಯನ್ನು ಸವಿಯುವುದೂ ಒಂದು ಅನುಭವವೇ ಅಲ್ಲವೇ? ಕ್ರಮೇಣ ನಾಲಗೆಯು ಸಿಹಿಗೆ ಒಗ್ಗಿದಂತೆ ಕಹಿಗೂ ಒಗ್ಗಿಬಿಡುವುದಿಲ್ಲವೇ?” ಆಗ ರಾಮದಾಸ್ ನಿಮ್ಮ ಮಾತು ಸರಿ ಎಂಬಂತೆ ತಲೆಯಾಡಿಸಿದರು.

            ಗಾಂಧಿ ತಮ್ಮ ಸರಳಜೀವನವನ್ನು ಪ್ರದರ್ಶಿಸಲು ಸೇವಾಗ್ರಾಮದಲ್ಲಿ ಮೇಕೆಯ ಹಾಲನ್ನು ಕುಡಿಯುತ್ತಿದ್ದರಂತೆ. ನನ್ನ ಸಂಶೋಧನೆಯ ವಿಧಿವಿಧಾನ ಸ್ವಲ್ಪ ವಿಲಕ್ಷಣವಾದುದು. ಎಲ್ಲರೂ ಗಾಂಧಿಯ ಸರಳತೆಯನ್ನು ಕೊಂಡಾಡುತ್ತಿದ್ದರೆ ನಾನು ಸೇವಾಗ್ರಾಮದಲ್ಲಿದ್ದಾಗ ಆ ಬಡಪಾಯಿ ಮೇಕೆಯ ಮೂಲವನ್ನು ಹುಡುಕಿಕೊಂಡು ಹೊರಟೆ. ನನಗೆ ನಿಜಕ್ಕೂ ಗಾಂಧಿಯ ಸರಳ ಜೀವನ ವಿಧಾನವನ್ನು ಕಂಡು ಅಚ್ಚರಿಯಾಯಿತು. ಸೇವಾಗ್ರಾಮದಲ್ಲಿದ್ದ ಪ್ರತಿಯೊಬ್ಬರನ್ನೂ ಆ ಮೇಕೆಯ ಬಗ್ಗೆ ವಿಚಾರಿಸಿದೆ. ಅವರಿಂದ ತಿಳಿದು ಬಂದ ವಿಷಯವಿದು: ಆ ಮೇಕೆಗೆ ಪ್ರತಿದಿನವೂ ಲಕ್ಸ್ ಸೋಪಿನಿಂದ ಸ್ನಾನ ಮಾಡಿಸಲಾಗುತ್ತಿತ್ತಂತೆ. ಅದರ ಮೇವಿಗೆ ಪ್ರತಿದಿನ ಹತ್ತು ರೂಪಾಯಿ ಖರ್ಚಾಗುತ್ತಿತ್ತಂತೆ. ಆ ದಿನಗಳಲ್ಲಿ ಹತ್ತು ರೂಪಾಯಿ ಒಬ್ಬ ಶಾಲಾ ಶಿಕ್ಷಕನ ತಿಂಗಳ ವೇತನವಾಗಿತ್ತು. ಇದನ್ನೆಲ್ಲ ಯಾವ ಗಾಂಧೀವಾದಿಯೂ ಯೋಚಿಸುವುದಿಲ್ಲ. ಒಮ್ಮೆ ತಮಾಷೆಗೆ ಸರೋಜಿನೀ ನಾಯ್ಡು ಅವರು “ಗಾಂಧಿಯವರನ್ನು ಬಡವರನ್ನಾಗಿ ಇರಿಸಲು ನಾವು ನಮ್ಮ ಐಶ್ವರ್ಯವನ್ನೆಲ್ಲ ಧಾರೆ ಎರೆಯಬೇಕು” ಎಂದು ಹೇಳಿದ್ದರು. ಅವರ ಮಾತು ನಿಜ. ಗಾಂಧಿಯ ಸರಳತೆ ತುಂಬ ದುಬಾರಿಯಾದುದು. ಆದರೆ ಗಾಂಧಿಯ ಲೆಕ್ಕಾಚಾರವೊಂದೂ ಸುಳ್ಳಾಗಲಿಲ್ಲ. ದೇಶದ ಬಡವರೆಲ್ಲ “ಈತನೇ ನಮ್ಮ ನಿಜವಾದ ಪ್ರತಿನಿಧಿ” ಎಂದು ತಪ್ಪಾಗಿ ಭಾವಿಸಿದರು. ಬಡವರ ಮೇಲೆ ಅನುಕಂಪ ತೋರಿಸಿ ತಾನೂ ಅವನಂತೆ ಬದುಕುವುದೇ ನಿಜವಾದ ಮೌಲ್ಯ ಎನ್ನುವುದಾದರೆ ಕುಂಟರ, ಕುರುಡರ, ಗತಿಯೇನು? ಅವರೇನು ತಪ್ಪು ಮಾಡಿದ್ದಾರೆ? ಆಗ ನಾವೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಓಡಾಡಬೇಕಲ್ಲವೇ? ಮೂರ್ಖರಿಗೆ ಸಹಾನುಭೂತಿ ತೋರಿಸಬೇಕೆಂದು ನಾವೂ ಮೂರ್ಖರಂತೆ ಬದುಕುವುದೇ? ಇದು ಖಂಡಿತ ಮನುಷ್ಯತ್ವವನ್ನು ತೋರಿಸುವ ರೀತಿಯಲ್ಲ. ಆದರೆ ಭಾರತದ ಬಡಜನ ಗಾಂಧಿಯಂಥವರನ್ನೇ ಪೂಜಿಸುತ್ತಾರೆ. ಈ ಬಡವರ ವೋಟನ್ನು ನಂಬಿರುವ ರಾಜಕಾರಿಣಿಗಳು ಗಾಂಧಿಗೆ ಜಯಕಾರ ಹಾಕಲೇ ಬೇಕಾಗಿದೆ. ಇದೇ ಇಲ್ಲಿನ ದುರಂತ. ನಾನು ಗಾಂಧಿಯನ್ನು ಹಂತ ಹಂತವಾಗಿ ಟೀಕಿಸಿದ್ದೇನೆ, ಒಂದೊಂದು ವಿಷಯದಲ್ಲೂ ಗಾಂಧಿಯನ್ನು ಪ್ರಶ್ನಿಸಿದ್ದೇನೆ ಆದರೆ ಈ ಇಪ್ಪತ್ತೈದು ವರ್ಷಗಳಲ್ಲಿ ಒಬ್ಬ ಗಾಂಧೀವಾದಿಯಿಂದಲೂ ನನ್ನ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ, ಒಂದು ಕಾಲದಲ್ಲಿ, ಗಾಂಧಿಯನ್ನು ವಿಮರ್ಶೆಗೆ ಒಳಪಡಿಸಲು ನಿರ್ಧರಿಸುವುದಕ್ಕೂ ಮುನ್ನ ನನ್ನ ಸುತ್ತ ಸದಾ ನೆರೆದಿರುತ್ತಿದ್ದ ಒಬ್ಬ ಗಾಂಧೀವಾದಿಯೂ ನನ್ನ ಟೀಕೆಗಳನ್ನು ಮರುವಿಮರ್ಶೆಗೆ ಒಳಪಡಿಸಿಲ್ಲ.