ಗೂಗಿ ವಾ ಥಿಯೋಂಗ: ನಮ್ಮೊಳಗಿರಬೇಕಾದ ಎಚ್ಚರ

ಗೂಗಿ ವಾ ಥಿಯೋಂಗ: ನಮ್ಮೊಳಗಿರಬೇಕಾದ ಎಚ್ಚರ

'ಅಧೀನಕ್ಕೊಳಪಟ್ಟವರು ಯಾವಾಗ ತಮ್ಮ ಯಜಮಾನನ ವಿಜಯವನ್ನು ಮತ್ತು ಅವನ ಸದ್ಗುಣಗಳನ್ನು ಹೊಗಳಲು ಪ್ರಾರಂಭಿಸುತ್ತಾರೋ ಆಗ ಆಳುವವನ ದಿಗ್ವಿಜಯಗಳಿಗೆ ಕೊನೆಯೆಂಬುದಿರುವುದಿಲ್ಲ.' -ಗೂಗಿ ವಾ ಥಿಯೋಂಗಾ, 'ಡಿಕಾಲೊನೈಸಿಂಗ್ ಮೈಂಡ್'

ಗೂಗಿ ವಾ ಥಿಯೋಂಗ ನಿನ್ನೆ (28.05.2025) ನಮ್ಮನ್ನಗಲಿದ್ದಾರೆ. ಕೀನ್ಯಾದ ಆದಿವಾಸಿ ಜನಾಂಗವೊಂದರಲ್ಲಿ ಜನಿಸಿ ಲೋಕ ಬೆರಗಾಗುವಂತೆ ಬದುಕಿದ ಗೂಗಿ ತಮ್ಮ 87ನೇ ವಯಸ್ಸಿನಲ್ಲಿ ಇಹಲೋಕವನ್ನು ತೊರೆದಿದ್ದಾರೆ. ಯುರೋಪಿನ ವಸಾಹತುಗಳಾಗಿದ್ದ ಪೂರ್ವ ಆಫ್ರಿಕಾದ ದೇಶಗಳ ಕಪ್ಪು ಜನರ ನೈಜ ಪ್ರತಿನಿಧಿಯಾಗಿ ಗೂಗಿ ನಿರಂತರವಾಗಿ ಬರೆದರು. `ನಾನು ಬರೆದದ್ದು ಬರವಣಿಗಾಗಿ ಅಲ್ಲ, ಬರೆದದ್ದು ನನ್ನವರ ವಿಮೋಚನೆಗಾಗಿ. ನನ್ನ ಬರವಣಿಗೆಯಲ್ಲಿ ಸೌಂದರ್ಯವಿದೆಯೇ? ಅಲಂಕಾರಗಳಿವೆಯೇ? ಪ್ರತಿಮೆಗಳಿವೆಯೇ ಎಂಬುದು ನಿಮಗೆ ಬಿಟ್ಟ ವಿಚಾರ. ಆದರೆ ನಾನು ಬರೆದದ್ದು ನನ್ನ ಜನರ ಅತ್ಮಪ್ರತ್ಯಯಗಳ ಉಳುವಿಕೆಗಾಗಿ. ಯುರೋಪಿನ ಭ್ರಮೆಗಳು ನಮ್ಮ ಜನಾಂಗಗಳನ್ನು ಆವರಿಸಿಕೊಂಡುಬಿಟ್ಟವೆ. ಯುರೋಪ್ ನಮ್ಮ ಜನಾಂಗಗಳ ಅಂತರಂಗಗಳನ್ನು ಹೊಕ್ಕು ಕೂತಿದೆ. ನಮ್ಮ ದೇಶಗಳು ವಸಾಹತುಶಾಹಿಯಿಂದ ರಾಜಕೀಯ ಸ್ವಾತಂತ್ರ್ಯವನ್ನು ಮಾತ್ರ ಪಡೆದಿವೆ. ಆದರೆ ಮಾನಸಿಕವಾಗಿ ಇನ್ನೂ ಯುರೋಪಿನ ದಾಸ್ಯದಲ್ಲಿಯೇ ಬದುಕುತ್ತಿವೆ. ಇಂತಹ ಗುಲಾಮಗಿರಿಯಿಂದ ನನ್ನ ಜನ ವಿಮೋಚಿತರಾಗಬೇಕು ಎಂಬ ಕಾರಣಕ್ಕಾಗಿ ನಾನು ಬರೆದೆ’ ಎಂದು ಗೂಗಿ ತನ್ನ ಬರಹದ ಉದ್ದೇಶಗಳನ್ನು ಹೇಳಿಕೊಳ್ಳುತ್ತಲೇ ಬದುಕಿದರು. 

ಹೀಗೆ ಬದುಕಿದ ಗೂಗಿ ಆಫ್ರಿಕಾದ ವಿವಿಧ ದೇಶಗಳ ಕಪ್ಪು ಜನರ ದಮನಿಗಳಲ್ಲಿ ಎಚ್ಚರಗಳ ದೀಪ ಹಚ್ಚಿದರು. ನೈಜೀರಿಯಾದ ಚಿನುವ ಅಚಿಬೆ, ವೋಲೆ ಸೋಯಿಂಕಾರಂತಹ ದೊಡ್ಡ ಲೇಖಕರಿಗೆ ಗೂಗಿ ಪ್ರೇರಣೆ ನೀಡಿದರು. ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯನ್ನು ಆಫ್ರಿಕಾದ ಲೇಖಕರು ರಾಜಕೀಯಾರ್ಥಿಕ ನೆಲೆಯಲ್ಲಿ ಮುಖಾಮುಖಿಯಾದರು. ಕೆನ್ ಸರೋವಿವಾ, ಫ್ರಾಂಜ್ ಫ್ಯಾನನ್, ಅಲ್ಬರ್ಟ್ ಮೆಮ್ಮಿ, ಏಮಿ ಸಿಸಾರೆ ತರಹದ ಚಿಂತಕ/ಹೋರಾಟಗಾರರಿಗೆ ಗೂಗಿ ಒಂದು ಸೈದ್ಧಾಂತಿಕ ವೇದಿಕೆಯನ್ನು ನಿರ್ಮಾಣ ಮಾಡಿದರು. ತಮ್ಮ  Petals of Blood ಕೃತಿಯಲ್ಲಿ  ಗೂಗಿ; `ಅವರು ಬೈಬಲ್ ಹೊತ್ತುಕೊಂಡು ಬಂದರು, ಸೈನಿಕರು ಬಂದೂಕು ಹೊತ್ತು ಬಂದರು, ವಸಾಹತುಶಾಹಿಗಳು ಬಂಡವಾಳ ಹೂಡಲು ಬಂದರು. ಈ ಕ್ರಿಶ್ಚಿಯನ್ ಧರ್ಮ, ಬಂದೂಕು ಮತ್ತು ಬಂಡವಾಳಗಳೆಂಬ ತ್ರಿಮೂರ್ತಿಗಳು ಏಕತ್ರಗೊಂಡು ಆಫ್ರಿಕಾಕ್ಕೆ ಬಂದರು.’ ಎಂದು ಯುರೋಪಿನ ಸಾಮ್ರಾಜ್ಯಶಾಹಿಯನ್ನು ಗೂಗಿ ವಿಶ್ಲೇಷಿಸುತ್ತಾರೆ. ಧರ್ಮದ ಹರಡುವ ಭ್ರಮೆಗಳನ್ನು, ಯುದ್ಧಗಳ ಹಿಂಸೆಗಳನ್ನು ಮತ್ತು ಬಂಡವಾಳಶಾಹಿ ಆಧುನಿಕತೆಯು ನಮ್ಮ ಮುಂದೊಡ್ಡುವ ಪ್ರಲೋಭನೆಗಳನ್ನು ಪ್ರಜ್ಞಾಪೂರ್ವಕವಾಗಿ ನಿರಾಕರಿಸದಿದ್ದಲ್ಲಿ ನಮ್ಮ ವಿಮೋಚನೆ ಅಸಾಧ್ಯ ಎಂಬುದನ್ನು ಗೂಗಿ ಸಮಸ್ತ ತಳಸಮುದಾಯಗಳಿಗೆ ಅರುಹಿದರು. ಆದರೆ ಜಗತ್ತು ಇಂದು ಧಾರ್ಮಿಕ ಮತ್ತು ಜನಾಂಗೀಯ ಶ್ರೇಷ್ಟತೆಯ ಬೆನ್ನು ಬಿದ್ದಿದೆ. ಫ್ಯಾಸಿಸಂ ಮೈಮುರಿದು ಎದ್ದು ಕುಳಿತಿದೆ. ಸಾಮ್ರಾಜ್ಯಶಾಹಿ ತನ್ನ ಕಬಂಧಬಾಹುಗಳನ್ನು ಇನ್ನಿಲ್ಲದಂತೆ ವಿಸ್ತರಿಸುತ್ತಿದೆ. 

ಗೂಗಿ ವಾ ಥಿಯೋಂಗಾ, ವೋಲೆ ಶೋಯಿಂಕಾ, ಅಚಿಬೆ, ಅಂಬೇಡ್ಕರ್ ರಂತಹ ಮಹಾನುಭಾವರು ಓದುವ ನಮ್ಮಗಳ ಆನಂದಕ್ಕೆ ಸೀಮಿತಗೊಳ್ಳಬಾರದು. ವರ್ತಮಾನವನ್ನು ಬದಲಿಸುವ ನಮ್ಮ ಶ್ರಮದಲ್ಲಿ ಅವರು ಪರ್ಯವಸಾನಗೊಳ್ಳಬೇಕು.

-ಪ್ರಭಾಕರ, ಕನ್ನಡ ವಿವಿ, ಹಂಪಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ