ಚಿಂತಕರು ಸ್ವಾಮಿ ನಾವು ಚಿಂತಕರು...!

ಚಿಂತಕರು ಸ್ವಾಮಿ ನಾವು ಚಿಂತಕರು...!

"ನೀವು ಎಲ್ಲಕ್ಕಿಂತ ಹೆಚ್ಚಾಗಿ ಹಣವನ್ನು ಬಯಸುವಿರಾದರೆ ಖರೀದಿಗೆ ಒಳಗಾಗುತ್ತೀರಿ ಮತ್ತು ನಿಮ್ಮ ಇಡೀ ಜೀವನವನ್ನು ಮಾರಿಕೊಳ್ಳುತ್ತೀರಿ" -ರೂಮಿ

ತಿರುಮಲ ತಿರುಪತಿ ದೇವಸ್ಥಾನದಲ್ಲಿ ಇಂದಿನಿಂದ ಒಂದು ಕೋಟಿಯ ಉದಯಾಸ್ತಮಾನ ಸೇವೆ ಮತ್ತು ಪ್ರತಿ ಶುಕ್ರವಾರದಂದು ಸೂಪರ್ ಸ್ಪೆಷಲ್ ದರ್ಶನಕ್ಕೆ 1.5 ಕೋಟಿ ಮೊತ್ತವನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಮತ್ತಷ್ಟು ಸೇವಾ ಅನುಕೂಲಗಳು ಸಹ ಇವೆ. ( ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹಣ ಸಂಗ್ರಹಿಸುವ ಉದ್ದೇಶ ಎಂದು ಹೇಳಲಾಗಿದೆ )

ರೂಮಿ ಹೇಳುವ ಹಾಗೆ ದೇವರನ್ನು ಸಹ ಹಣಕ್ಕಾಗಿ ನಿರಂತರವಾಗಿ ಮಾರಾಟ ಮಾಡಲಾಗುತ್ತಿದೆ ಎಂದು  ಭಾವಿಸಬಹುದೇ? ನಿಲ್ಲಿ, ದೇವರುಗಳ ವ್ಯಾಪಾರೀಕರಣ ಪ್ರತ್ಯೇಕವಾಗಿ ಮತ್ತು ಪರೋಕ್ಷವಾಗಿ ವಿವಿಧ ರೀತಿಗಳಲ್ಲಿ ಮಾರಾಟ ಮಾಡುವುದು ಅಥವಾ ಅದನ್ನು ದುರುಪಯೋಗ ಪಡಿಸಿಕೊಳ್ಳುವುದು ಎಲ್ಲಾ ಧರ್ಮಗಳಲ್ಲೂ ಇದೆ. ಜಗತ್ತಿನ ಕೆಲವೇ ಅದ್ಬುತ ಚಿಂತಕರಲ್ಲಿ ಒಬ್ಬರಾದ ರೂಮಿ ಜೀವನ ಇನ್ನೂ ಹೆಚ್ಚು ಸಂಕೀರ್ಣವಾಗಿರದ ಕಾಲದಲ್ಲಿಯೇ ಹಣದ ಈ ವ್ಯಾಮೋಹದ ದುಷ್ಪರಿಣಾಮಗಳನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿದ್ದಾರೆಂದರೆ ಇಂದು ಅದೆಷ್ಟು ವಾಸ್ತವ ಎಂಬುದು ನಮಗೆಲ್ಲ ತಿಳಿದೇ ಇದೆ.

ಇಂದು ದುಡ್ಡಿನ ಸುತ್ತಲೇ ಇಡೀ ಸಮಾಜ ಸರ್ಕಾರ ಕೊನೆಗೆ ಜನ ಸಮೂಹ ಸುತ್ತುತ್ತಿದೆ. ಬಹುತೇಕ ಎಲ್ಲರೂ ಹಣಕ್ಕೆ ಮಾರಾಟವಾಗಿದ್ದಾರೆ. ದೇವರೇ ಹಣಕ್ಕೆ ಮಾರಾಟವಾದರೆ ಇನ್ನು ಸಾಮಾನ್ಯ ಜನರ ಪಾಡೇನು. ಹಣ, ವ್ಯವಹಾರ ಜಗತ್ತಿನ ಒಂದು ಮಾಧ್ಯಮ ಮಾತ್ರ ಆಗಬೇಕಿತ್ತು. ಅದರೆ ಇಂದು ಅದು ಮಾನವ ಬದುಕಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿ ಆತನ ಎಲ್ಲಾ ಉದ್ದೇಶ ಸಾಧನೆಗಳ ಮಾಧ್ಯಮವಾಗಿ ಪ್ರತಿಷ್ಠಾಪಿಸಲ್ಪಟ್ಟಿರುವುದು ಚಿಂತನೆಗೆ ದೂಡಿದೆ. ಮನುಷ್ಯನ ದೇಹ ಮನಸ್ಸು ಮೌಲ್ಯಗಳು ಎಲ್ಲವನ್ನೂ ಅಳೆಯುವ ಮಾಪನವಾಗಿ ಹಣ ಇಂದು ಚಲಾವಣೆಯಾಗುತ್ತಿದೆ.

ಹಣವೇ ನಿನ್ನಯ ಗುಣ ಎಂದಾಗಿದೆ. ಉದರ ನಿಮಿತ್ತಂ ಬಹುಕೃತ ವೇಷಂ ಕಾಲದ ಪಯಣದಲ್ಲಿ ಬದಲಾಗಿ ಹಣದ ನಿಮಿತಂ ಬಹುಕೃತ ಚಿಂತನಂ ಆಗಿದೆ. ಅದರ ಪರಿಣಾಮ ನಾವೆಲ್ಲರೂ ಚಿಂತಕರಾಗಿ ಪರಿವರ್ತನೆ ಹೊಂದಿದ್ದೇವೆ. ಅದು ಯಾವ ರೀತಿಯ ಚಿಂತಕರೆಂದರೆ...

ಚಿಂತಕರು ಸ್ವಾಮಿ ನಾವು ಚಿಂತಕರು...

ಜ್ಞಾನದ ಚಿಂತಕರಲ್ಲ ಸಮಸ್ಯೆಗಳ ಚಿಂತಕರು.

ವೃದ್ದೆ ಗಂಗಮ್ಮಜ್ಜಿಗೆ ಕೊರೋನಾ ಚಿಂತೆ,

ಮೊಮ್ಮಗ ಪ್ರಜ್ವಲನಿಗೆ ಆನ್ ಲೈನ್ ಕ್ಲಾಸಿನ ಚಿಂತೆ,

ತರಕಾರಿ ಮನಿಯಮ್ಮನಿಗೆ ಮಗಳ ಮದುವೆ ಚಿಂತೆ,....

ಮುಕೇಶ್ ಅಂಬಾನಿಗೆ ದುಡ್ಡಿನ ಸಾಮ್ರಾಜ್ಯ ವಿಸ್ತರಿಸುವ ಚಿಂತೆ,....

ಭಿಕ್ಷುಕ ಲೊಡ್ಡನಿಗೆ ರಾತ್ರಿ ಊಟದ ಚಿಂತೆ,....

ಸ್ವಾಮೀಜಿಗಳಿಗೆ ಭಕ್ತರ ಚಿಂತೆ....

ಡ್ರಗ್ಸ್ ಮಾಫಿಯಾದ ಸಿನಿಮಾ ನಟಿಯರಿಗೆ ಜಾಮೀನಿನ ಚಿಂತೆ.......

ಟೆಕ್ಕಿ ಸಂತೋಷನಿಗೆ ಮಲೆಯಾಳಿ ಕುಟ್ಟಿಯ ಪ್ರೀತಿಯದೇ ಚಿಂತೆ,....

ಮಟನ್ ಮೌಲಾನಾಗೆ ಕಾರ್ತಿಕ ಮಾಸದ್ದೇ ಚಿಂತೆ,....

ಬ್ಯಾಂಕ್ ಮ್ಯಾನೇಜರ್  ನಾಗೇಶ್ವರ ರಾವ್ ಗೆ ಸಾಲದ ರಿಕವರಿಯ ಚಿಂತೆ,.....

ಪೈಂಟರ್ ಮಲ್ಲೇಶನಿಗೆ ತನ್ನ ರಕ್ತ ಕ್ಯಾನ್ಸರ್ ದೇ ಚಿಂತೆ,.....

ಮಂತ್ರಿ ಗೌಡನಿಗೆ ಗೆ ತನ್ನ ಕುರ್ಚಿಯದೇ ಚಿಂತೆ,....

ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಗಲ್ಲಿಗೇರುವ ದಿನಗಳ ಚಿಂತೆ,.....

ವಿದ್ಯಾರ್ಥಿ ಉಜ್ವಲ್ ಗೆ ಹೋಮ್ ವರ್ಕ್ ದೇ ಚಿಂತೆ,....

ಪೂಜಾರಿ ಶ್ರೀನಿವಾಸನಿಗೆ ತಟ್ಟೆ ಕಾಣಿಕೆಯದೇ ಚಿಂತೆ,...

ಕಳ್ಳ ನರಸಿಂಹನಿಗೆ ಹಗಲಿನದೇ ಚಿಂತೆ,....

ನರ್ಸ್ ಮೀನಾಕ್ಷಿಗೆ ತನ್ನ ಮೈ ಬಣ್ಣದ್ದೇ ಚಿಂತೆ,....

ಮಗು ರೋಹನ್ ಗೆ ಚಾಕೊಲೇಟ್ ಚಿಂತೆ......

ಅಸ್ತಮಾ ರೋಗಿ ರಾಮಮೂರ್ತಿ ಅಜ್ಜನಿಗೆ ಸತ್ತ ಮೇಲೆ ಸುಡುವರೋ, ಮಣ್ಣು ಮಾಡುವರೋ ಎಂಬ ಚಿಂತೆ....

ತರಲೆ ಜನಕರಾಜನಿಗೆ ಟಿಕ್ ಟಾಕ್ ಬ್ಯಾನ್ ಮಾಡಿದ್ದೇ ಚಿಂತೆ....

ಮಧುಮೇಹಿ ರಾಮಣ್ಣನಿಗೆ ವಾಕಿಂಗ್ ನದೇ ಚಿಂತೆ,....

ಪತ್ರಕರ್ತೆ ರಾಧಿಕಾಗೆ ಬ್ರೇಕಿಂಗ್‌ ನ್ಯೂಸ್ ನದೇ ಚಿಂತೆ,.....

ಕುಡುಕ ಸೋಮಪ್ಪನಿಗೆ ರಾತ್ರಿಯ ಎಣ್ಣೆ ಚಿಂತೆ.....

ಸೆಕ್ಯುರಿಟಿ ಶ್ಯಾಮ್ಸನ್ ಗೆ ತನ್ನ ನಿದ್ದೆಯದೇ ಚಿಂತೆ,.....

ಪುಟ್ಟೀ ಜ್ಯೋತಿಕಾಗೆ ಡಾಕ್ಟರ್ ಇಂಜೆಕ್ಷನ್ ದೇ ಚಿಂತೆ,.....

ಮಾರ್ವಾಡಿ ಚಗನ್ ಲಾಲ್ ಗೆ ಕಪ್ಪು ಹಣದ್ದೇ ಚಿಂತೆ......

ವಧು ಫಾತಿಮಾಗೆ ತನ್ನ ದಡೂತಿ ದೇಹದ್ದೇ ಚಿಂತೆ.....

ವೈದ್ಯ ರಾಮ್ ದೇವ್ ಗೆ ರೋಗಿಗಳದೇ  ಚಿಂತೆ,‌‌‌.....

ಪೋಲೀಸ್ ಅಧಿಕಾರಿ ಸುಂದರಂಗೆ ವರ್ಗಾವಣೆಯದೇ ಚಿಂತೆ.....

ಬಿಪಿ ಭರತನಿಗೆ ರಕ್ತದ ಒತ್ತಡದ ಏರಿಳಿತಗಳದೇ ಚಿಂತೆ....

ಆಡಿಟರ್ ಹನುಮೇಶ್ ಗೆ ಲೆಕ್ಕ ಪತ್ರ ಸಲ್ಲಿಕೆಯ ಕೊನೆಯ ದಿನದ್ದೇ ಚಿಂತೆ......

ವಕೀಲ ನರೇಂದ್ರನಿಗೆ ಕಕ್ಷಿದಾರನದೇ ಚಿಂತೆ......

ಬರಹಗಾರ ರತ್ನಾಕರನಿಗೆ ಪ್ರಶಸ್ತಿಯದೇ ಚಿಂತೆ....

ಶಿಕ್ಷಕಿ ರಮಾಗೆ ತನ್ನ ಕುಡುಕ ಗಂಡನದೇ ಚಿಂತೆ,...

ಗೂಡಂಗಡಿ ಪುಟ್ಟನಿಗೆ ಲಾಕ್ ಡೌನ್ ಚಿಂತೆ....

ನಿವೃತ್ತ ಐಏಎಸ್  ಅಧಿಕಾರಿ‌ ಸ್ವಾಮಿಗೆ ಸಮಯ ಕಳೆಯುವುದೇ ಚಿಂತೆ,..

ಸೇಲ್ಸ್ ಗರ್ಲ್ ಮಲ್ಲಿಕಾಳಿಗೆ ತನ್ನ ಬಾಯ್ ಫ್ರೆಂಡ್ ನದೇ ಚಿಂತೆ,...

ವಿಜ್ಞಾನಿ ಶ್ರೀಧರ್ ಶರ್ಮಾಗೆ ಹೊಸ ಸಂಶೋಧನೆಯ ಚಿಂತೆ,...

ನಟ ಭಾಸ್ಕರನಿಗೆ ಅವಕಾಶಗಳ ಚಿಂತೆ,....

ಜಯರಾಜ್ ರೆಡ್ಡಿಗೆ ತನ್ನ ಆಡಂಬರ ಪ್ರದರ್ಶಿಸುವ ಚಿಂತೆ,......

ವೇಶ್ಯೆ ಸುಂದರಿಗೆ ತನ್ನ ಆರೋಗ್ಯದ್ದೇ ಚಿಂತೆ,.....

ರೈತ ರಾಮಪ್ಪನಿಗೆ ಬೆಲೆಗಳದ್ದೇ ಚಿಂತೆ,.....

ನಿರುದ್ಯೋಗಿ ನಿಖಿಲ್ ಗೆ ಉದ್ಯೋಗವೇ ಚಿಂತೆ....

ಹೋಟೆಲ್ ಮಾಣಿ ಗುಣಶೇಖರ್ ಗೆ ತನ್ನ ಸಂಬಳದ್ದೇ ಚಿಂತೆ.....

ಕಾಲೇಜ್ ಹುಡುಗಿ ಸನ್ನಿಗೆ ಫೇಸ್ ಬುಕ್ ಲೈಕ್ ಗಳದ್ದೇ ಚಿಂತೆ,......

ಎಳೆ ವಿಧುವೆ ನಾಗರತ್ನಾಳಿಗೆ ತನ್ನ ಭವಿಷ್ಯದ್ದೇ ಚಿಂತೆ...

ಯಾರ್ಯಾರಿಗೆ ಏನೇನು ಚಿಂತೆಯೋ ಬಲ್ಲವರಾರು....

ಒಟ್ಟಿನಲ್ಲಿ ಎಲ್ಲರೂ ಚಿಂತಕರೇ (?!)

ಚಿಂತಕರು ಸ್ವಾಮಿ ನಾವು ಚಿಂತಕರು....

ಹಣ ಕೇಂದ್ರೀಕೃತ ಸಮಾಜದ ಹಣೆಬರಹ ಬಹುಶಃ ಇದೇ ಇರಬೇಕು. ರೂಮಿಗೆ ಇದು ಆಗಿನ ಕಾಲದಲ್ಲೇ ಅರಿವಾಗಿರಬೇಕು. ಒಟ್ಟಿನಲ್ಲಿ ಕಾಲಜ್ಞಾನಿಗಳ ಅನುಭವದ ಮಾತುಗಳು ವಾಸ್ತವವಾಗುವ ಕಾಲಘಟ್ಟದಲ್ಲಿ ನಾವು ನೀವು...

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ