ಜಾರಿ ಹೋಗದಿರಲಿ ಬೃಹತ್ ಹೂಡಿಕೆ

ಜಾರಿ ಹೋಗದಿರಲಿ ಬೃಹತ್ ಹೂಡಿಕೆ

ಕರ್ನಾಟಕದಲ್ಲೀಗ ಹೂಡಿಕೆಯ ಹಬ್ಬ. ದೇಶ ವಿದೇಶಗಳ ವಿವಿಧ ಕಂಪನಿ ಹಾಗೂ ಉದ್ಯಮಿಗಳಿಂದ ಹೂಡಿಕೆಗೆ ಆಸಕ್ತಿ  ವ್ಯಕ್ತವಾಗಿದೆ. ರಾಜ್ಯದಲ್ಲಿ ಹೂಡಿಕೆಗೆ ದಶಕಗಳಿಂದಲೂ ಕಂಪನಿಗಳು ಮುತುವರ್ಜಿ ವಹಿಸಿವೆ. ಈ ದಿಸೆಯಲ್ಲಿ ಕೇಂದ್ರದ ಆಸಕ್ತಿ ಮತ್ತು ಮುತುವರ್ಜಿ ಕೂಡ ಇದೆ. ದೇಶದ ಖಜಾನೆಗೆ ರಾಜ್ಯದಿಂದ ಗಣನೀಯ ಪ್ರಮಾಣದಲ್ಲಿ ಆದಾಯವಿದೆ. ಕನ್ನಡನಾಡಿನ ನೆಲ, ಜಲ ಮತ್ತು ಕೈಗಾರಿಕೆಗಳನ್ನು ಸ್ಥಾಪಿಸುವ ಹಿತಕರ ವಾತಾವರಣದ ಪರಿಣಾಮವಾಗಿ ಕೋಟ್ಯಾಂತರ ರೂಪಾಯಿಗಳ ಬಂಡವಾಳ ಇಲ್ಲಿಗೆ ಹರಿದು ಬರುತ್ತಿರುವುದು ಉತ್ತಮ ಅಂಶ.

ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿ ಪಥದಲ್ಲಿರುವ ಅನೇಕ ದೇಶಗಳಿಗೆ ಬೆಂಗಳೂರು ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಬಂಡವಾಳ ಹೂಡಲು ತೀವ್ರ ಆಸಕ್ತಿ ಇರುವುದು ನಿಜ. ವಾಣಿಜ್ಯ ನಗರಿ ಮುಂಬೈ., ಕಡಲತೀರದ ಚೆನ್ನೈ ಮತ್ತು ಕೋಲ್ಕತ್ತಾ ಮಹಾನಗರಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳು, ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಸಂಸ್ಥೆಗಳಿಗೆ ಬೃಹತ್ ಬಂಡವಾಳ ಹೂಡಲು ಇಷ್ಟವಿಲ್ಲ. ಇದಕ್ಕೆ ರಾಜಕೀಯ, ಭೌಗೋಳಿಕ ಮತ್ತು ಸಾಮಾಜಿಕ ಕಾರಣಗಳುಂಟು. ಕೇವಲ ಕೇಂದ್ರ ಸರ್ಕಾರದ ಆದೇಶ ಮತ್ತು ಅಪೇಕ್ಷೆಗಳ ಮೇರೆಗೆ ವಿದೇಶಿ ಬಂಡವಾಳ ಇಲ್ಲಿಗೆ ಹರಿದು ಬರುವುದಿಲ್ಲ ಏಕೆಂದರೆ ಯಾವುದೇ ವಿದೇಶಿ ಕಂಪನಿ ರಾಜ್ಯವೊಂದರಲ್ಲಿ ಉದ್ಯಮವನ್ನು ಸ್ಥಾಪಿಸಬೇಕಾದರೆ ಕೈಗಾರಿಕೆಗೆ ಅಗತ್ಯವಿರುವ ಭೂಮಿ, ನೀರು ಮತ್ತು  ರಸ್ತೆಗಳ ಸೌಕರ್ಯ ಮುಖ್ಯ. ಈ ದಿಸೆಯಲ್ಲಿ ಕರ್ನಾಟಕ ಇಂದು ಬೇರೆ ರಾಜ್ಯಗಳಿಗೆ ಹೋಲಿಸಿದಾಗ ಪ್ರಥಮ ಸ್ಥಾನದಲ್ಲಿದೆ. ಅಲ್ಲದೆ ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಾದ ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶದ ಉತ್ತಮ ಸಂಬಂಧಗಳನ್ನು ಒಂದಿರುವ ಬೆಂಗಳೂರು ಕೈಗಾರಿಕಾ ಅಭಿವೃದ್ಧಿಯಲ್ಲಿ ಮುಂದಿದೆ. ಮಿಗಿಲಾಗಿ ಪ್ರತಿವರ್ಷ ವೃತ್ತಿಪರ ಕಾಲೇಜುಗಳಿಂದ ಹೊರಬರುತ್ತಿರುವ ಸಾವಿರಾರು ಮಂದಿ ಇಂಜಿನಿಯರ್ ಗಳಿಗೆ ಮೂಲ ಆಸರೆಯೇ ಬೆಂಗಳೂರು. ಹೀಗಾಗಿ ಯಾವುದೇ ಉದ್ಯಮ ಯಶಸ್ಸಿನ ಹಾದಿಯಲ್ಲಿ ಸಾಗಬೇಕಾದರೆ ಕೌಶಲ್ಯಯುಕ್ತ ಮಾನವ ಸಂಪನ್ಮೂಲ ಅತ್ಯಗತ್ಯ. ಉದ್ಯಮಕ್ಕೆ ಉತ್ತಮ ಗಾಳಿ, ನೀರು, ವಿದ್ಯುತ್ ಮತ್ತು ಜಮೀನು ಎಷ್ಟು ಮುಖ್ಯವೋ ಹೂಡಿದ ಬಂಡವಾಳಕ್ಕೆ ನಷ್ಟವಾಗದ ರೀತಿಯಲ್ಲಿ ಉತ್ಪನ್ನಗಳ ತಯಾರಿಕೆಗೆ ಬೇಕಿರುವ ತಾಂತ್ರಿಕ ಉದ್ಯೋಗಾರ್ಥಿಗಳ  ಶ್ರಮ ಮತ್ತು ಕೌಶಲ್ಯವು ಅತಿಮುಖ್ಯ.

ಒಟ್ಟಿನಲ್ಲಿ ಕರ್ನಾಟಕಕ್ಕೆ ಈಗ ಬಂಡವಾಳದ ದೊಡ್ಡ ಪ್ರಮಾಣದ ಹರಿವಾಗಿರುವುದು ಹರ್ಷದಾಯಕ. ಆದರೆ ಆರೋಗ್ಯದಾಯಕ  ಬೆಳವಣಿಗೆಗೆ ಬುನಾದಿಯಾಗಬೇಕಾದರೆ ಸರ್ಕಾರವು ಇಲ್ಲಿ ಉತ್ತಮ ರಸ್ತೆ ಮತ್ತಿತರ ಮೂಲಸೌಕರ್ಯ ನೀಡಲು ಮುಂದಾಗಬೇಕು. ಬೆಂಗಳೂರಿನ ಕಳಪೆ ರಸ್ತೆಗಳು, ಜಮೀನು ಅಕ್ರಮ ಒತ್ತುವರಿ ಹಾಗೂ ರಿಯಲ್ ಎಸ್ಟೇಟ್ ದಂಧೆಗಳಂತಹ ಅನಿಷ್ಟಗಳು ಇನ್ವೆಸ್ಟ್ ಕರ್ನಾಟಕಕ್ಕೆ ಶಾಪವಾಗಿ ಪರಿಣಮಿಸಬಹುದು ಮತ್ತು ಬೃಹತ್ ಹೂಡಿಕೆಗಳು ಜಾರಿ ಹೋಗಲೂಬಾರದು.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೪-೧೧-೨೦೨೨

ಚಿತ್ರ ಕೃಪೆ: ಇಂಟರ್ನೆಟ್ ತಾಣ