ಜಿ 20 ಶೃಂಗಸಭೆ ಮತ್ತು ನನ್ನ ಮನಸ್ಸಿನಲ್ಲಿ ಮೂಡಿದ ಅಸೂಯೆ...

ಅಸೂಯೆಯಿಂದ ಬಡವನೊಬ್ಬನ ಬಡಬಡಿಕೆ ಎಂದು ಭಾವಿಸಲು ಅಡ್ಡಿಯಿಲ್ಲ. ಜಿ 20 ಶೃಂಗಸಭೆಯ ಅಧ್ಯಕ್ಷತೆ ಮತ್ತು ಆತಿಥ್ಯ ಭಾರತದ ನೆಲದಲ್ಲಿ ನಡೆಯುತ್ತಿದೆ. ಅದನ್ನು ಶ್ರೀ ನರೇಂದ್ರ ಮೋದಿ ಅವರ ನೇತ್ರತ್ವದ ಸರ್ಕಾರ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಅದಕ್ಕಾಗಿ ಹೃದಯ ಪೂರ್ವಕ ಅಭಿನಂದನೆಗಳು.
ಜಿ 20 ಸಂಘಟನೆಯ ರಚನೆ, ಉದ್ದೇಶ, ಪ್ರಾಬಲ್ಯ, ಪರಿಣಾಮ, ಭವಿಷ್ಯದ ಯೋಜನೆಗಳು, ಭಾರತದ ಪಾತ್ರ ಎಲ್ಲವನ್ನೂ ಭಾರತದ ಬಹುತೇಕ ಎಲ್ಲಾ ರೀತಿಯ ಮಾಧ್ಯಮಗಳು ವರದಿ ಮಾಡುತ್ತಿವೆ. ನೇರ ಪ್ರಸಾರವೂ ಇದೆ. ಮಾಹಿತಿಗಳ ಮಹಾಪೂರವೇ ಹರಿದುಬರುತ್ತಿದೆ. ಆದ್ದರಿಂದ ಆ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಆದರೆ ಇದನ್ನು ನೋಡಿ, ಓದಿ, ಕೇಳಿ, ಕೆಳ ಮಧ್ಯಮ ವರ್ಗದ ಮಧ್ಯ ವಯಸ್ಸಿನ ನನ್ನಲ್ಲಿ ಮೂಡಿದ ಅಸೂಯೆಗೆ ಅಕ್ಷರ ರೂಪ ನೀಡುತ್ತಿದ್ದೇನೆ ಅಥವಾ ಅಸಹಾಯಕತೆಯಿಂದ...
ಅತಿಥಿಗಳು ಬಂದು ಇಳಿಯುವ ಆಯಾ ದೇಶದ ಅಧ್ಯಕ್ಷರಿಗೆ ಮಾತ್ರ ಮೀಸಲಾದ ವೈಭವೋಪೇತ ವಿಮಾನಗಳು ನನ್ನಲ್ಲಿ ಅಚ್ಚರಿ ಮೂಡಿಸುತ್ತದೆ. ಆ ವಿಮಾನಗಳ ಒಳಾಂಗಣ, ಭದ್ರತಾ ವ್ಯವಸ್ಥೆ, ಸುಖಾಸೀನಗಳು ಹೇಗಿರಬಹುದು ಎಂಬ ಕುತೂಹಲವು ಇದೆ. ಅದರಲ್ಲೂ ವಿಶ್ವದ ಸದ್ಯದ ಬಿಗ್ ಬಾಸ್ ಅಮೆರಿಕದ ಅಧ್ಯಕ್ಷರ ಅಮೆರಿಕ ಒನ್ ಎಂಬ ತ್ರಿವಳಿ ಇಂಜಿನ್ ವಿಮಾನದ ಬಗ್ಗೆ ವರ್ಣನೆಗಳನ್ನು ಕೇಳಿದಾಗ ಮನಸ್ಸು ರೋಮಾಂಚನ ಗೊಳ್ಳುತ್ತದೆ. ನಾನು ಈಗಲೂ ಸರ್ಕಾರಿ ಬಸ್ಸುಗಳಲ್ಲಿ ಅಥವಾ ರೈಲುಗಳಲ್ಲಿ ನಿರಂತರವಾಗಿ ಓಡಾಡುವಾಗಿನ ಅನುಭವಗಳನ್ನು ನೆನದು ಮನಸ್ಸು ಕುಬ್ಜಗೊಳ್ಳುತ್ತದೆ. ಆ ಜನಜಂಗುಳಿ ಮತ್ತು ವಾಸನೆ ಪ್ರಯಾಣದ ಎಷ್ಟೋ ಸಮಯದವರೆಗೂ ಹಾಗೆಯೇ ಇರುತ್ತದೆ.
ಅವರು ವಿಮಾನದಿಂದ ಇಳಿಯುತ್ತಿದ್ದಂತೆ ಅವರನ್ನು ದೇವಲೋಕದ ಇಂದ್ರನಂತೆ ಸ್ವಾಗತಿಸುವ ಪರಿ ಮತ್ತು ನಾನು ಕೆಲವೊಮ್ಮೆ ಬಸ್ಸಿನ ಸೀಟಿಗಾಗಿ ಇತರರಿಂದ ನಿಂದನೆಗೊಳಗಾಗುವ ರೀತಿ ನೆನಪಾಗಿ ನಗು ಉಕ್ಕುತ್ತದೆ. ಸ್ವಾಗತದ ನಂತರ ಅವರನ್ನು ಭೂಮಿಯ ಮೇಲಿನ ಅತ್ಯಂತ ಸುರಕ್ಷಿತ ವಾಹನದಲ್ಲಿ, ನೂರಾರು ಶಸ್ತ್ರಸಜ್ಜಿತ ವಾಹನಗಳ ಮತ್ತು ಅಂಗರಕ್ಷಕರ ಬೆಂಗಾವಲಿನೊಂದಿಗೆ ಕರೆದೊಯ್ಯಲಾಗುತ್ತದೆ. ಆಂಬುಲನ್ಸ್, ಅಗ್ನಿಶಾಮಕ ಸೇವೆ, ನೇರ ಪ್ರಸಾರದ ಓಬಿ ವ್ಯಾನ್ ಅವರನ್ನು ಹಿಂಬಾಲಿಸುತ್ತದೆ. ಆಗ ನೆನಪಾಗುವುದು ನಾನು ಬಸ್ಸಿನಲ್ಲಿ ಯಾವುದೋ ಊರಿನಲ್ಲಿ ಏಕಾಂಗಿಯಾಗಿ ಇಳಿದಾಗ ಮೊದಲು ಹುಡುಕುವುದು ಶೌಚಾಲಯ ಮತ್ತು ಅಲ್ಲಿ ಹೋಗಬೇಕಾಗಿರುವ ಜಾಗದ ವಿಳಾಸ.
ಮುಂದೆ ಅವರನ್ನು ಕರೆದೊಯ್ಯುವುದು ವಿಶ್ರಾಂತಿಗಾಗಿ ಭಾರತದ ಅತ್ಯಂತ ಶ್ರೀಮಂತ ಮತ್ತು ಅದ್ದೂರಿ ತಾರಾ ಹೋಟೆಲ್ ಗೆ. ಅಲ್ಲಿನ ನೆಲ ಹಾಸುಗಳೇ ಅಮೃತಶಿಲೆಯಿಂದ ಮಾಡಿರುವಂತಿರುತ್ತದೆ. ಗೋಡೆಗಳನ್ನು ಅತ್ಯಂತ ಕಲಾತ್ಮಕವಾಗಿ ಸಿಂಗರಿಸಲಾಗಿರುತ್ತದೆ. ಆದರೆ ನಾನು ಪಾದಯಾತ್ರೆಯ ಸಮಯದಲ್ಲಿ ಕೆಲವು ರಾತ್ರಿಗಳಲ್ಲಿ ತಂಗಿದ್ದ ಸ್ಥಳದಲ್ಲಿ ಹಾವು ಚೇಳುಗಳು ಓಡಾಡುವುದನ್ನು ಕಂಡು ರಾತ್ರಿ ಇಡೀ ಎಚ್ಚರವಿದ್ದು ಬೆಳಗ್ಗೆ ಮತ್ತೆ ಪಾದಯಾತ್ರೆ ಮುಂದುವರಿಸುತ್ತಿದ್ದೆ. ಮನೆಯಲ್ಲಿ ಈಗಲೂ ಜಿರಲೆ ತಿಗಣೆ ಸೊಳ್ಳೆಯ ಕಾಟ ನಿರಂತರ… ಈ ತಾರಾ ಹೋಟೆಲುಗಳಲ್ಲಿ ಮಲಗುವ ಕೋಣೆ ಬಹುಶಃ ಆಕ್ಸಿಜನ್ ಬೆಡ್ ಹೊಂದಿದ ಅತ್ಯಂತ ಆರಾಮದಾಯಕ ವ್ಯವಸ್ಥೆ ಇರುತ್ತದೆ. ಚಾಪೆಯೂ ಇಲ್ಲದ ಸಮಯದಲ್ಲಿ ಹಳೇ ಪೇಪರ್ ಹಾಕಿಕೊಂಡು ಈಗಲೂ ಕೆಲವೊಮ್ಮೆ ಮಲಗುವ ಪರಿಸ್ಥಿತಿ ನನ್ನದು.
ಇನ್ನು ಅವರಿಗೆ ನೀಡುವ ಔತಣಕೂಟದ ಬಗ್ಗೆ ವಿವರಿಸಲು ಸಹ ನನಗೆ ಪದಗಳ ಕೊರತೆ ಕಾಣುತ್ತದೆ ಏಕೆಂದರೆ ಆ ವೈಭವ ನಾನು ನೋಡಿಯೇ ಇಲ್ಲ. ಮಾಧ್ಯಮಗಳ ವಿವರಣೆಯ ಆಧಾರದ ಮೇಲೆಯೇ ವಿವರಿಸುತ್ತಿದ್ದೇನೆ. ಇಡೀ ದೇಶದಲ್ಲಿ ದೊರೆಯುವ ಅತ್ಯುತ್ತಮ ಗುಣಮಟ್ಟದ ಹಣ್ಣು ತರಕಾರಿ, ದವಸ ಧಾನ್ಯಗಳು, ಸಿರಿ ಧಾನ್ಯಗಳು, ಹೈನು ಉತ್ಪನ್ನಗಳು, ಮಾಂಸಾಹಾರ, ಸಮುದ್ರ ಜೀವಿಗಳು, ಅಪರೂಪದ ಹಣಬೆಗಳು, ಅತ್ಯುತ್ತಮ ಗುಣಮಟ್ಟದ ಬೇಕರಿ ಪದಾರ್ಥಗಳು, ವಿಶಿಷ್ಟ - ವಿಭಿನ್ನ ಬಗೆಯ ಬಿಸಿ ಮತ್ತು ತಣ್ಣಗಿನ ಪಾನೀಯಗಳು ಹೀಗೆ ಒಂದೇ ಎರಡೇ...... ಅಬ್ಬಾ...
ಅಂತರರಾಷ್ಟ್ರೀಯ ಖ್ಯಾತಿಯ ಮತ್ತು ಭಾರತದ ಅತ್ಯಂತ ಪ್ರಖ್ಯಾತ ಬಾಣಸಿಗ ಸಂಜೀವ್ ಕಪೂರ್ ಈ ಔತಣಕೂಟದ ನೇತೃತ್ವ ವಹಿಸಿದ್ದಾರೆ. ಬಹುಶಃ ಕೆಲವೊಮ್ಮೆ ಇರುವೆ ಜಿರಲೆಗಳು ಆಕಸ್ಮಿಕವಾಗಿ ಬಿದ್ದು ಸ್ವಲ್ಪ ಹಳಸಿದ ಆಹಾರವನ್ನು ಸೇವಿಸಿರುವ ನನಗೆ ಇದು ಸಂಭ್ರಮ ಉಂಟುಮಾಡುವುದಕ್ಕಿಂತ ಹಸಿವಿನಿಂದ ಸಾಯುವ ವಿಶ್ವದ ಅನೇಕ ಮಕ್ಕಳು ನೆನಪಾಗುತ್ತಾರೆ.
ಇನ್ನೂ ಮುಂದಿನ ಸುದ್ದಿ ಎಂದರೆ ಈ ಅತಿಥಿಗಳಿಗೆ ಬಡಿಸುವ ಊಟದ ತಟ್ಟೆಗಳು ಅತ್ಯಂತ ಕಲಾತ್ಮಕ ಕುಸುರಿ ಕೆಲಸದಿಂದ ಮಾಡಿದ ಚಿನ್ನ ಲೇಪಿತ ಮತ್ತು ಶುಧ್ದ ಬೆಳ್ಳಿಯಿಂದ ಮಾಡಲಾಗಿದೆಯಂತೆ. ತೂತು ಅಲ್ಯುಮಿನಿಯಂ ತಟ್ಟೆಯಲ್ಲಿ ಅಣ್ಣನೊಂದಿಗೆ ಹಂಚಿಕೊಂಡು ಮುದ್ದೆ ತಿನ್ನುವಾಗ ಸಾರು ( ಸಾಂಬಾರ್ ) ಕೆಳಗೆ ಸುರಿಯುವುದನ್ನು ತಡೆಯಲು ಮುದ್ದೆಯ ತುತ್ತನ್ನೇ ಅಂಟಿಸಿ ಕೊನೆಗೆ ಅದನ್ನು ತಿನ್ನುತ್ತಿದ್ದ ದಿನಗಳು ನೆನಪಾಗುತ್ತಿದೆ. ಭೂಮಿಯ ಮೇಲೆ ಮನುಷ್ಯರೆಲ್ಲ ತಾಯಿ ಹೊಟ್ಟೆಯಲ್ಲಿಯೇ ಹುಟ್ಟುತ್ತಾರೆ. ಎಲ್ಲರಿಗೂ ಈ ಪ್ರಕೃತಿಯೇ ನೀರು ಗಾಳಿ ಆಹಾರ ಕೊಡುತ್ತದೆ. ಆದರೆ ಕೆಲವರು ಮಾತ್ರ ಬಾಹ್ಯವಾಗಿ ಅತ್ಯಂತ ವೈಭೋಗದ ಜೀವನ ನಡೆಸುತ್ತಾರೆ. ಮತ್ತೆಲ್ಲರ ಬದುಕು ಇಡೀ ಜೀವನ ಜೀವಿಸಲೇ ಸಂಘರ್ಷ ಮಾಡಬೇಕಾಗುತ್ತದೆ. ದೊಡ್ಡ ಶ್ರೀಮಂತರು ಹೆಚ್ಚು ಶ್ರಮ ಜೀವಿಗಳು ಮತ್ತು ಪ್ರತಿಭಾವಂತರು ಎಂಬುದು ಅಷ್ಟೇನು ನಿಜವಲ್ಲ. ಅವರಿಗಿಂತ ಹೆಚ್ಚು ಶ್ರಮ ಜೀವಿಗಳು ಮತ್ತು ಪ್ರತಿಭಾವಂತರು ಸಾಕಷ್ಟು ಇದ್ದಾರೆ. ಆದರೆ ಪರಿಸ್ಥಿತಿ ಬೇರೆಯದೇ ಫಲಿತಾಂಶ ನೀಡುತ್ತದೆ.
ಇರಲಿ, ನಿನ್ನೆ ರಾಷ್ಟ್ರಪತಿಗಳು ನೀಡಿದ ಔತಣಕೂಟ ನೋಡಿ ನನ್ನ ಈಗಿನ ಪರಿಸ್ಥಿತಿ ನೆನೆದು ನನ್ನಂತೆ ಇನ್ನೂ ಎಷ್ಟೋ ಜನ ಹೀಗೂ ಯೋಚಿಸುತ್ತಿರಬಹುದು ಎಂಬ ಭಾವನೆಯಿಂದ ಇದನ್ನು ಬರೆದಿದ್ದೇನೆ. ಮನುಷ್ಯನ ಅರಿಷಡ್ವರ್ಗಗಳಲ್ಲಿ ಮತ್ಸರವೂ ಒಂದು. ಅದನ್ನು ಮೀರುವ ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಉತ್ತಮ. ಆ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತಿದ್ದೇನೆ. ಮನಸ್ಸೆಂಬುದು ಹುಚ್ಚು ಕುದುರೆ. ಅದರ ಬೆನ್ನೇರಿ ಹೊರಟರೆ ಹೀಗೆ....
ಬದುಕು ಜಟಕಾ ಬಂಡಿ,
ವಿಧಿ ಅದರ ಸಾಹೇಬ,
ಪಯಣಿಗ ನೀನು,
ಮದುವೆಗೋ ಮಸಣಕೋ
ಹೋಗೆಂದ ಕಡೆ ಹೋಗು ಮಂಕು ತಿಮ್ಮ,
ಎಂಬ ಡಿವಿಜಿಯವರ ಕಗ್ಗ ನೆನಪು ಮಾಡಿಕೊಳ್ಳುತ್ತಾ… ಮತ್ತೊಮ್ಮೆ ಜಿ 20 ಶೃಂಗಸಭೆಯ ಯಶಸ್ಸಿಗಾಗಿ ಅಭಿನಂದಿಸುತ್ತಾ…
-ವಿವೇಕಾನಂದ ಎಚ್ ಕೆ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ