ತಾಯಿ ಹೃದಯವೇ, ನಿನಗೆ ಶರಣು..!
ಹೀಗೊಂದು ಪುಟ್ಟ ಊರು. ಹೆಸರು ಚೆಲುವನಹಳ್ಳಿ. ಹಳ್ಳಿಯಲ್ಲೊಬ್ಬ "ಚೆಲುವ", ವಯಸ್ಸಾದ ತನ್ನ ತಾಯಿಯೊಂದಿಗೆ ಕೂಲಿನಾಲಿ ಮಾಡಿಕೊಂಡು ಸುಖವಾಗಿದ್ದ. ಚೆಲುವನೇನೋ ನೋಡಲು ತುಂಬಾ ಚೆಲುವನೇ, ಆದರೆ ಎರಡು ಸಮಸ್ಯೆಗಳಿದ್ದವು ಆತನಿಗೆ. ಒಂದು, ಆತ ಕೊಂಚ ಪೆದ್ದ. ಇನ್ನೊಂದು ಅವನಿಗೆ ಇರಳುಗಣ್ಣು. ಸಂಜೆಯಾದ ನಂತರ ಪೂರ್ತಿ ಕುರುಡನೇ ಆಗಿ ಬಿಡುತ್ತಿದ್ದ.
ಇಂತಹ ಚೆಲುವನಿಗೆ ಮದುವೆ ಮಾಡುವಾ ಅಂತ ಅವನ ತಾಯಿ ಸುತ್ತಮುತ್ತಲ ಊರೆಲ್ಲಾ ಸುತ್ತಿ ಚೆಲುವಾಂತ "ಚೆಲುವಿ"ಯನ್ನೇ ಹುಡುಕಿ ತೆಗೆದುಬಿಟ್ಟಳು! ಮದುವೆಯು ಆಯಿತು. ಮೊದಮೊದಲಿಗೆ ಎಲ್ಲವೂ ಸಸೂತ್ರವಾಗಿಯೇ ಇತ್ತು. ವರ್ಷವೊಪ್ಪತ್ತಾಗುವದೊರಳಗೆ ಚೆಲುವಿಗೆ ಅತ್ತೆಯ ಇರವು ಬೇಸರ ತರಿಸಿತು. ಶುರುವಾಯಿತು ಮನೆಯಲ್ಲಿ ಒಳಗೊಳಗೇ ಅಸಮಾಧಾನದ ಬೇಗುದಿ. ಇದ್ದಕ್ಕಿದ್ದಂತೆ ಒಂದಿನ ನೆವ ಮಾಡಿಕೊಂಡು ತವರಿಗೆ ಹೋಗಿ ಕೂತೇಬಿಟ್ಟಳು ಚೆಲುವಿ.
"ಮಗಾ, ಅದೇನ್ ಆಕೀ ವಿಚಾರ, ಕೇಳ್ಕಂಡು ಸಮಾಧಾನ ಮಾಡಿ ಕರ್ಕಂಬಾಪ್ಪ", ಗೋಗರೆಯಿತು ಮುದುಕಿ. ಚೆಲುವಿಯ ತವರು ಮನೆಗೋದ ಚೆಲುವ ಆಕೆಯ ಮನ ವಲಿಸಲು ಹರ ಸಾಹಸ ಪಟ್ಟ. "ನಿನಗೇನಾರ ಬೇಕ್ ಚೆಲ್ವಿ, ಯೇಳರ ಯೇಳಲ" ಅಂದ. "ನೋಡ ಚೆಲ್ವ, ನೀ ಅಂಗ-ಇಂಗ ತಿಳೀಬ್ಯಾಡ ಮತ್ತ. ನಾ ಏನಾರ ಆ ಮನೀಗ ಬರಬೇಕಂದ್ರ ನೀ ವಂದು ಕೆಲ್ಸ ಮಾಡಲ ಮತ್ತ. ನಂಗೂ ಅತ್ತೀ ಮ್ಯಾಲ ಭಯಂಕರ ಪಿರೂತಿ ಐತಿ, ಅತ್ತೀ ಹೃದಯಾ ಯಾವಾಗ್ಲೂ ನನ್ ಅತ್ರಾನ ಇರಾಕ್ ಬೇಕು. ಆ ಮುದ್ಕೀನ ಕೇಳಿ ಆಕಿ ಹೃದಯಾ ಇಸ್ಕೋಂಡು ಬಾ ಮತ್ತ, ನಾ ನಿನ್ ಜೋಡಿ ಬಂದೇನು!" ಅಂದ್ಲು ಚೆಲುವಿ.
ಇದರ ಹಿಂದಿನ ಹಿಕ್ಮತ್ತು ಅರಿಯದ ಚೆಲುವ ಸೀದಾ ತಾಯಿ ಬಳಿಗೆ ಬಂದು ನಿಂತ. "ಅವ್ವಾ, ಆಕೀಗೆ ನಿನ್ನ್ ಮ್ಯಾಲ ಬಾಳ್ ಪಿರೂತಿ ಐತೆ ಕಣವ್ವ. ನಿನ್ ಹೃದಯ ಆಕೀಗ ಕೊಟ್ ಬಂದ್ರ ನನ್ ಜೊತೀಗ್ ಬರ್ತಾಳಂತ" ಎಂದ.
ಹಿಂದೆ ಮುಂದೆ ಯೋಚಿಸದೆ ಆ ತಾಯಿ ಹುಲ್ಲು ಕತ್ತರಿಸೋ ಕುಡುಗೋಲು ಕೈಲಿ ಹಿಡ್ಕೊಂಡು ಬಂದೇ ಬಿಟ್ಟಳು. "ಮಗಾ, ನನಗಾರ ವಯಸ್ಸಾತು. ನಿನ್ ಹೆಂಡ್ತಿ ಮನಸ್ಸು ನೋಯಿಸದಂಗ ನೋಡ್ಕಂಡು ಸುಖವಾಗಿ ಸಂಸಾರ ಮಾಡು ಕಂದ" ಅಂದಿದ್ದೇ ಕುಡುಗೋಲಿನಿಂದ ಚರಚರನೇ ಎದೆಯನ್ನು ಬಗಿದು ಹೃದಯನ್ನು ಕಿತ್ತು ಮಗನ ಕೈಗೆ ಕೊಟ್ಟಳು! ಹೆತ್ತವ್ವನ ಸ್ಥಿತಿ ಏನಾಯಿತು ಅನ್ನೋ ಪರಿವೆಯಿಲ್ಲದೆ ಹೃದಯ ಸಿಕ್ಕ ಸಂತಸದಲ್ಲಿ ಚೆಲುವಿಯನ್ನು ಕರೆತರಲು ಹೊರಟೇಬಿಟ್ಟ ಪೆದ್ದ ಚೆಲುವ!
ಹಾಗೆಯೇ ಹೋಗಲೋಗುತ್ತ ಸಂಜೆಯ ಕತ್ತಲು ಮೆಲ್ಲಗೆ ಆವರಿಸತೊಡಗಿದಾಗ ಕೊಂಚ ದಾರಿ ತಡವರಿಸತೊಡಗಿದ ಚೆಲುವ. ಮೊದಲೇ ಕಲ್ಲು ಮುಳ್ಳಿನ ಹಾದಿ. ಇದ್ದಕ್ಕಿದ್ದಂತೆ ಕಲ್ಲೊಂದನ್ನ ಎಡವಿ ಬಿದ್ದೇ ಬಿಟ್ಟ ಇರಳುಗಣ್ಣಿನ ಚೆಲುವ. ಕೈಲಿದ್ದ ತಾಯಿಯ ಹೃದಯ ಹೋಗಿ ಬಿತ್ತು ಒಂದು ಮುಳ್ಳಿನ ರಾಶಿಯ ಮೇಲೆ. ಈಗಲಾಯಿತು ಆ ತಾಯಿ ಹೃದಯಕ್ಕೆ ಅತೀವ ವೇದನೆ, ಮುಳ್ಳು ಚುಚ್ಚಿದ್ದಕ್ಕಲ್ಲ!
ಆ ಹೃದಯ ಹಲಬಿತು ಹೀಗೆ, "ಅಯ್ಯೋ ಮಗನೇ, ನಾನೆಂಥ ಸ್ವಾರ್ಥಿ! ನೀನು ನನ್ನ ಹೃದಯವನ್ನು ಕೇಳಿದಾಗ ನನಗೆ ಗೊತ್ತಿತ್ತು ನಾನು ಸಾಯುವೆನಂತ. ಆ ಹೃದಯದ ಜೊತೆಗೆ ನಾನೇಕೆ ಕೊಡಲಿಲ್ಲ ನನ್ನೆರಡು ಕಣ್ಣುಗಳನ್ನ ನಿನಗೆ...!"
ಆಹಾ ಮಾತೃ ಹೃದಯವೇ, ನಿನಗಿದೋ ನೂರು ನಮನ...!