ತೂಗುಸೇತುವೆ ದುರಂತ ಎಲ್ಲಾ ರಾಜ್ಯಗಳಿಗೂ ಎಚ್ಚರಿಕೆ ಗಂಟೆ

ತೂಗುಸೇತುವೆ ದುರಂತ ಎಲ್ಲಾ ರಾಜ್ಯಗಳಿಗೂ ಎಚ್ಚರಿಕೆ ಗಂಟೆ

ಗುಜರಾತಿನ ಮೊರ್ಬಿ ಜಿಲ್ಲೆಯಲ್ಲಿ ರಜಾ ದಿನವಾದ ಭಾನುವಾರ ಸಂಜೆ ವಿಹಾರಕ್ಕೆ ತೆರಳಿದ್ದ ಜನರು ಕಿಕ್ಕಿರಿದು ಸೇರಿದ್ದಾಗ ತೂಗು ಸೇತುವೆಯೊಂದು ತುಂಡಾಗಿ, ಅದರ ಮೇಲೆ ನಿಂತಿದ್ದ ನೂರ ಮೂವತ್ತಕ್ಕೂ ಅಧಿಕ ಜನರು ಸಾವಿಗೀಡಾದ ಘೊರ ದುರಂತವೊಂದು ನಡೆದಿದೆ. ಭಾರತದ ಯಾವುದೇ ಮೂಲೆಯಲ್ಲೂ ತೂಗುಸೇತುವೆಯೊಂದರಿಂದ ಇಷ್ಟೊಂದು ಅಗಾಧವಾದ ದುರಂತ ಸಂಭವಿಸಿದ ನಿದರ್ಶನಗಳಿಲ್ಲ. ಮೊರ್ಬಿ ಜಿಲ್ಲೆಯಲ್ಲಿ ಮಚ್ಚೂ ನದಿಗೆ ಬ್ರಿಟಿಷರು ನೂರಾರು ವರ್ಷಗಳ ಹಿಂದೆ ನಿರ್ಮಿಸಿದ್ದ ತೂಗು ಸೇತುವೆಯನ್ನು ಇತ್ತೀಚೆಗಷ್ಟೇ ನವೀಕರಿಸಲಾಗಿತ್ತು. ಗುತ್ತಿಗೆ ಪಡೆದ ಖಾಸಗಿ ಕಂಪನಿ ತ್ವರಿತ ಗತಿಯಲ್ಲಿ ಕೆಲಸವನ್ನೂ ಮುಗಿಸಿತ್ತು. ಆದರೆ ಅದಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ಪಡೆಯುವ ಮೊದಲೇ ಜನರಿಗೆ ಪ್ರವೇಶಾವಕಾಶ ಕಲ್ಪಿಸಲಾಗಿತ್ತು ಎಂದು ವರದಿಗಳು ಹೇಳುತ್ತಿವೆ. ಮೇಲ್ನೋಟಕ್ಕೆ ಈ ದುರಂತಕ್ಕೆ ಕಂಡುಬರುವ ಪ್ರಮುಖ ಕಾರಣವೆಂದರೆ, ಸುಮಾರು ೨೫ ಜನರು ಮಾತ್ರವೇ ನಿಲ್ಲಬಹುದಾದ ೭೦೦ ಅಡಿ ಉದ್ದದ ತೂಗುಸೇತುವೆ ಮೇಲೆ ೪೦೦ಕ್ಕೂ ಹೆಚ್ಚು ಜನರು ಸೇರಿದ್ದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಪ್ರವೇಶ ಟಿಕೆಟ್ ನಿಂದ ಲಾಭಗಳಿಸುವ ಆಸೆಗೆ, ಅನುಮತಿ ಪಡೆಯುವ ಮೊದಲೇ ಖಾಸಗಿ ಕಂಪನಿ ಮಿತಿಮೀರಿದ ಜನರ ಪ್ರವೇಶಕ್ಕೆ ಅನುಮತಿ ನೀಡಿತ್ತೇ ಎಂಬುದು ತನಿಖೆಯಿಂದಲೇ ಗೊತ್ತಾಗಬೇಕು.

ಮೊರ್ಬಿ ತೂಗುಸೇತುವೆ ದುರಂತ ಭಾರತಕ್ಕೆ ನಿಜಕ್ಕೂ ಎಚ್ಚರಿಕೆಯ ಗಂಟೆ. ಭಾರತದಲ್ಲಿ ಅಸಂಖ್ಯಾತ ತೂಗುಸೇತುವೆಗಳನ್ನು ಜನರು ಬಳಸುತ್ತಿದ್ದಾರೆ. ಇದರಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಸೇತುವೆಗಳೂ ಇವೆ. ಆದರೆ ಅವುಗಳ ಸುರಕ್ಷತಾ ಮಟ್ಟ ಯಾವ ರೀತಿ ಇದೆ ಎಂಬುದು ಕಾಲಕಾಲಕ್ಕೆ ಪರಿಶೀಲನೆಯಾದಂತೆ ಇಲ್ಲ. ಹೀಗಾಗಿ ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ತೂಗುಸೇತುವೆಗಳ ಕುರಿತಂತೆ ತ್ವರಿತ ಗತಿಯಲ್ಲಿ ಸುರಕ್ಷತಾ ಆಡಿಟ್ ನಡೆಸುವುದು ಸೂಕ್ತ ಮುನ್ನೆಚ್ಚರಿಕೆಯ ಕ್ರಮ. ನದಿಯಂಚಿನ ಜನರ ಓಡಾಟಕ್ಕೆ ಜೀವನಾಡಿಯಾಗಿದ್ದ ತೂಗುಸೇತುವೆಗಳ ಮಹಾನಗರಗಳ ಜನರ ಭೇಟಿಯಿಂದಾಗಿ ಪ್ರವಾಸಿ ತಾಣಗಳಾಗಿ ಪರಿವರ್ತನೆಯಾಗಿವೆ. ವಾರಾಂತ್ಯ, ಸರ್ಕಾರಿ ರಜಾ ದಿನ ಹಾಗೂ ಮಳೆಗಾಲದಂತಹ ವಿಶೇಷ ಸಂದರ್ಭಗಳಲ್ಲಿ ಜಲ ಸಿರಿಯನ್ನು ಕಣ್ತುಂಬಿಕೊಳ್ಳಲು ಅಸಂಖ್ಯಾತ ಜನರು ತೂಗುಸೇತುವೆಗಳಿಗೆ ಭೇಟಿ ನೀಡುತ್ತಾರೆ. ಅಂತಹ ಕಡೆ ಪ್ರವೇಶ ಮಿತಿಯನ್ನು ನಿಗದಿಪಡಿಸುವುದು ಮತ್ತೊಂದು ಎಚ್ಚರಿಕೆಯ ಕ್ರಮವಾದೀತು. ಮೊರ್ಬಿ ದುರಂತ ಆಗಬಾರದಿತ್ತು. ಆದರೆ ಘಟಿಸಿ ಹೋಗಿದೆ. ಈ ಘಟನೆಯಿಂದ ಇನ್ನಾದರೂ ನಾವು ಪಾಠ ಕಲಿಯದೇ ಹೋದರೆ ಭವಿಷ್ಯದಲ್ಲಿ ಇಂತಹ ಇನ್ನೊಂದು ದುರಂತ ಸಂಭವಿಸೀತು. ಹೀಗಾಗಿ ರಾಜ್ಯ ಸರ್ಕಾರಗಳು ಮೊರ್ಬಿ ದುರಂತದ ಹಿನ್ನಲೆಯಲ್ಲಿ ತೂಗುಸೇತುವೆಗಳ ವಿಚಾರದಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯಕ ನಡೆ.

ಕೃಪೆ: ಕನ್ನಡಪ್ರಭ, ಸಂಪಾದಕೀಯ, ದಿ: ೦೨-೧೦-೨೦೨೨