ದೋಸಾ ಸೃಷ್ಟಿ ರಹಸ್ಯ

ಬ್ರಹ್ಮದೇವರಿಗೂ ಸೃಷ್ಟಿ ಕೆಲಸ ಮಾಡಿ ಮಾಡಿ ಬೇಸರವಾಗಿತ್ತು. ಅದೃಷ್ಟವಶಾತ್ ಭೂಲೋಕದಿಂದ ಬಂದ ನಾರದ ಮಹರ್ಷಿಗಳು ತಾಜಾ ಸುದ್ದಿಯೊಂದನ್ನು ತಂದಿದ್ದರು. ಕೃತಕಬುದ್ದಿಶಕ್ತಿಯನ್ನು ಉಪಯೋಗಿಸಿ ಮಾನವರು ಎಲ್ಲ ತರಹದ ಕೆಲಸಗಳನ್ನು ಗಣಕಗಳಿಂದ ಮಾಡಿಸುತ್ತಿದ್ದಾರೆ. ಬ್ರಹ್ಮ ದೇವರು ಹುರುಪಾಗಿ ಹೊಸ ಬ್ರಹ್ಮಗಣಕವೊಂದನ್ನು ನಿರ್ಮಿಸಿದರು. ಅದು ಜೀವವಿಲ್ಲದ ಯಾವುದೇ ವಸ್ತುವನ್ನು ಸೃಷ್ಟಿಸಬಹುದೆಂಬ ಆದೇಶ ಹೊರಟಿತು. ಬ್ರಹ್ಮ ದೇವರು ಕಣ್ಣು ಮುಚ್ಚಿ ವೇದಧ್ಯಾಯನದಲ್ಲಿ ತಲ್ಲೀನರಾದರು.
ಬ್ರಹ್ಮಗಣಕ ನಿರಾಯಾಸವಾಗಿ ಬ್ರಹ್ಮಾಂಡದಲ್ಲಿಯ ಜಡವಸ್ತುಗಳ ಸೃಷ್ಟಿ ಕೆಲಸ ನಡೆಸಿತು. ಅದೇ ಹಳೆಯ ನಿಯಮಗಳ ಪ್ರಕಾರ ಆದರೆ ಹೊಸ ಹೊಸ ವಸ್ತುಗಳ ನಿರ್ಮಾಣ ಸುರುವಾಯಿತು. ಎಲ್ಲ ಸರಿಯಾಗಿಯೆ ನಡೆದಿತ್ತು. ಆದರೆ ಜಂಭ ಎಂಬ ವಸ್ತುವೊಂದಿದೆಯಲ್ಲ.. ನೀವು ಹಿರಿಯರ ಕಥೆಗಳಿಂದ ಈಗಾಗಲೇ ಊಹಿಸಿರಬಹುದು. ಅದಕ್ಕೂ ಜಂಭ ಬಂದಿತು. ಆದರೆ ಕೇಳಿಸಿಕೊಳ್ಳಲು ಯಾರಿದ್ದಾರೆ?
ಉಪಾಯಮಾಡಿ ಬ್ರಹ್ಮದೇವರು ಒಂದು ವೇದಧ್ಯಾನದಿಂದ ಇನ್ನೊಂದಕ್ಕೆ ವೇದಾಂತರ ಮಾಡುವಾಗ ಕಣ್ಣು ತೆರೆದ ಸುಸಂಧಿಯನ್ನುಪಯೋಗಿಸಿ ಹೇಳಿಯೇ ಬಿಟ್ಟತು. 'ಪ್ರಭು, ನೀವು ಸೃಷ್ಟಿಸುವ ಯಾವುದೇ ಜಡವಸ್ತುವನ್ನು ನಾನು ಮೂರೇ ಪ್ರಯತ್ನಗಳಲ್ಲಿ ನಿರ್ಮಿಸಬಲ್ಲೇ. ಪರೀಕ್ಷಿಸಿ ಬೇಕಾದರೆ. ಅನಿವಾರ್ಯವೆಂಬಂತೆ ವಿವಿಧ ವಸ್ತುಗಳ ನಿರ್ಮಾಣದ ಚಿಲ್ಲರೆ ಪರೀಕ್ಷೆ ನಡೆಯಿತು. ಹಿಮಾಲಯ ಪರ್ವತ, ಚಂದ್ರನಿಲ್ಲದೇ ಬೆಳದಿಂಗಳು, ಕಪ್ಪುಕುಳಿ, ಕ್ಷೀರಪಥ, ನಕ್ಷತ್ರಪುಂಜಗಳು, ಕಾಮನಬಿಲ್ಲು ಇತ್ಯಾದಿ. ಬ್ರಹ್ಮಗಣಕ ಕೃತ್ರಿಮ ಠೀವಿಯಿಂದ ಹಸಿರು ದೀಪಗಳನ್ನು ಬೆಳಗುತ್ತ 'ಮೆಚ್ಚಿದಿರಾ ಪ್ರಭು''? ಎಂದು ಕೇಳಿತು.
ಪ್ರಭುಗಳು ಹೇಳಿದರು, “ಭೂಮಂಡಲದ ಮಧ್ಯದಲ್ಲಿರುವ ಬೆಂಗಳೂರು ನಗರದ ದರ್ಶಿನಿ ಹೊಟೇಲುಗಳಲ್ಲಿ ಸಿಗುವ ಮಸಾಲೆ ದೋಸೆ, ಚಟ್ಟಿ ಮತ್ತು ಸಾಂಬಾರ ಸೃಷ್ಟಿಸು. ಅದೇ ಗುಣಮಟ್ಟದ ಐದು ದೋಸೆಗಳು ಬೇಕು. ಒಂದು ಮಹರ್ಷಿಗಳಿಗೆ, ನಾಲ್ಕು ನನಗೆ, "ಹೊಟ್ಟೆ ಒಂದೆ ಆದರೂ ನಾಲಿಗೆ ನಾಲ್ಕಲ್ಲವೆ ? ಮಹರ್ಷಿಗಳು ಸಮರ್ಥಿಸಿದರು. ತುಂಟನಗೆಯನ್ನು ಹತ್ತಿಕ್ಕುವುದನ್ನು ಉದ್ದೇಶಪೂರ್ವಕ ಪ್ರದರ್ಶಿಸುತ್ತ ಮಂದಹಾಸವೊಂದು ಹೌದೊ ಅಲ್ಲವೊ ಎಂಬಂತೆ ಮಿಂಚಿ ಮಾಯವಾಗುತ್ತಲೆ ಗಂಭೀರವದನದಲ್ಲಿ ಬದಲಾವಣೆ ಇಲ್ಲದೆ ಮತ್ತೆ ಪ್ರಭುಗಳ ವೇದಧ್ಯಾನ. ಆದರೆ ಮಹರ್ಷಿಗಳ ಮುಗುಳುನಗೆಯ ಮಧ್ಯದಲ್ಲೂ ಗಂಭೀರ ವಿಚಾರವೊಂದು ಅಡಗಿದಂತೆ ಕಂಡಿತು. ಅವರು ಬೆಂಗಳೂರಿನ ದಿಕ್ಕಿನ ಕಡೆಗೆ ಪ್ರಯಣಿಸಿದರು.
ಬ್ರಹ್ಮದೇವರು ಕಣ್ಣು ತೆರೆದಾಗ ನಮ್ಮ ಬ್ರಹ್ಮಗಣಕ ಕೆಂಪು ದೀಪಗಳನ್ನು ಬೆಳಗುತ್ತ ವಿನೀತ ಮುದ್ರೆಯಿಂದ ಹೇಳಿತು "ಕ್ಷಮಿಸಿ ಪ್ರಭು, ಮೋಸಮಾಡಿದಂತಾಯಿತು. ಹತ್ತು ಪ್ರಯತ್ನಗಳನ್ನು ಮಾಡಿದೆ. ಆವರ್ತಕ ಕೋಷ್ಟದಲ್ಲಿ ಇರುವ ಎಲ್ಲ ಅಣುಗಳನ್ನು ಮತ್ತು ಎಲ್ಲ ತರಹದ ಶಕ್ತಿಗಳನ್ನು ಉಪಯೋಗಿಸಿದೆ. ಮೂರು ಪ್ರಯತ್ನಗಳ ಮೇರೆ ಮೀರಿದ್ದಕ್ಕಾಗಿ ಕ್ಷಮೆಯಿರಲಿ. ಆದರೆ ನನ್ನಿಂದ ಮಾಡಲಾಗಲಿಲ್ಲ'.
"ಮೂರ್ಖ ಯಂತ್ರವೆ, ಹತ್ತಲ್ಲ ನೂರು ಪ್ರಯತ್ನ ಮಾಡು; ಅದು ಹೇಗೆ ಸಾಧ್ಯ. ನನಗೇ ಸಾಧ್ಯವಾಗದ್ದು ನಿನ್ನಿಂದ ಆಗಬಹುದೇ? ನಾನು ಮಾಡಿದ್ದು ಮೊದಲು ಮಾನವರ ಸೃಷ್ಟಿ ಆನಂತರ ಅವರಿಂದ ದೋಸೆಯ ಸೃಷ್ಟಿ ಕೋಟ್ಯಾನುಕೋಟಿ ನಕ್ಷತ್ರಪುಂಜಗಳಿವೆ; ಪ್ರತಿಯೊಂದರಲ್ಲಿ ಮತ್ತೆ ಕೋಟ್ಯಾನುಕೋಟಿ ನಕ್ಷತ್ರಗಳು; ಇವೆಲ್ಲವುಗಳ ಸೃಷ್ಟಿಸುಮ್ಮನೆಯೇ ? ಒಂದಾದರೂ ನಕ್ಷತ್ರಮಂಡಲದಲ್ಲಿ ಮಾನವಸೃಷ್ಟಿಯಾಗಿ ನಂತರ ದೋಸೆಯಂತಹ ಅಪರೂಪದ ವಸ್ತು ಸೃಷ್ಟಿಯಾಗಲೆಂದು!'' ಬ್ರಹ್ಮದೇವರು ಗುಟ್ಟು ಬಿಚ್ಚಿಟ್ಟರು ಇದು ದೋಸಾ ಸೃಷ್ಟಿರಹಸ್ಯ.
-ಮೋಹನ ಡಿ. ದೇಶಪಾಂಡೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ