ನಗರ ಮತ್ತು ನಾಗರಿಕ ಪ್ರಜ್ಞೆ
ಸುಮಾರು ಇಪ್ಪತ್ತೆಂಟು- ಇಪ್ಪತ್ತೊಂಬತ್ತು ವರ್ಷಗಳ ಹಿಂದೆ, ಬಹುಶಃ ನಾನಾಗ ನಾಲ್ಕನೆಯೋ ಐದನೆಯೋ ಕ್ಲಾಸಿನಲ್ಲಿ ಇದ್ದಿರಬಹುದು, ಒಂದು ದಿನ ನನ್ನ ಅಪ್ಪಒಮ್ಮೆ ಮಂಗಳೂರಿಗೆ ಹೋಗುವಾಗ ನನ್ನನ್ನು ಕರೆದುಕೊಂಡು ಹೋಗಿದ್ದರು. ನಮ್ಮ ಮನೆ ಅಜಕ್ಕಳದಿಂದ ಸುಮಾರು ಮುರು ಮೈಲು ದೂರ ಇರುವ ಬುಳೇರಿಕಟ್ಟೆಗೆ ನಡೆದು ಅಲ್ಲಿಂದ ಬಸ್ಸಲ್ಲಿ ಪುತ್ತೂರಿಗೆ ಹೋಗಿ ಅಲ್ಲಿಂದ ನೋನ್-ಸ್ಟೋಪ್ ಬಸ್ಸಲ್ಲಿ ಮಂಗಳೂರಿಗೆ ಹೋಗುವುದು ಆಗೆಲ್ಲ.ಮಂಗಳೂರಿನ ಹಂಪನಕಟ್ಟೆ ಬಸ್ ಸ್ಟಾಂಡಲ್ಲಿ ಇಳಿದು(ಈಗ ಪಾರ್ಕಿಂಗ್ ಇರುವ ಜಾಗದಲ್ಲಿ ಆಗ ಬಸ್ ಸ್ಟಾಂಡ್ ಇತ್ತು) ಮಾರ್ಕೆಟಿನ ಕಡೆಗೆ ಹೋಗುವಾಗ ಅಪ್ಪ ನನ್ನ ಕಾಲನ್ನು ನೋಡಿದರು. ಕೇಳಿದರು,ಥಕ್ ! ಬೋದಾಳ, ನೀನು ಚಪ್ಪಲಿ ಹಾಕ್ಲಿಲ್ಲವೋ?"
ನಾನೆಂದೆ, "ಬೇಡಾಂತ ಕಂಡಿತು, ಇಡೀ ದಿನ ಹಾಕಿದ್ರೆ ಚಪ್ಪಲಿ ಕಚ್ಚಿದ್ರೆ ಅಂತ ". ಆ ಕಾಲದಲ್ಲಿ ಮನೆಯ ಮೆಟ್ಟಿಲಿಳಿವಾಗ ಚಪ್ಪಲಿ ಕಡ್ಡಾಯವಾಗಿರಲಿಲ್ಲ.ಅಪ್ಪ ಕೇಳಿದ್ರು ,"ಮನೆಯಲ್ಲಿ ಜೋಡು ಉಂಟಲ್ಲ? "ಉಂಟು. "ಮನೆಯಲ್ಲಿ ಒಂದಿರುತ್ತಾ ಮಂಗಳೂರಲ್ಲಿ ಹೊಸತೊಂದು ಖರೀದಿಸುವುದು ವೇಸ್ಟು. ವಿಷಯ ಅದಲ್ಲ.
ಅಷ್ಟು ದೂರ ನಡೆವಾಗಲಾಗಲೀ, ಈವನ್ ಪುತ್ತೂರು ಪೇಟೆಯಲ್ಲಾಗಲೀ ನನ್ನ ಕಾಲಿನ ಬಗ್ಗೆ ಕಾಳಜಿ ಮಾಡದ ಅಪ್ಪ ಈಗ ಯಾಕೆ ಈ ಪ್ರಶ್ನೆ ಕೇಳ್ತಾರೆ ಅಂತ ಆಗ ನನಗೆ ಅರ್ಥ ಆಗ್ಲಿಲ್ಲ.
ಆದ್ರೆ ಆ ಇಡೀ ಮಂಗಳೂರು ಯಾತ್ರೆಯಲ್ಲಿ ನನಗೆ ನೆನಪಿರೋದು ಅದೊಂದೇ ಸಂಗತಿ. ಮಂಗಳೂರಲ್ಲಿ ಯಾಕೆ ಚಪ್ಪಲಿ ಬಗ್ಗೆ , ಕಾಲಿನ ಬಗ್ಗೆ ಕಾಳಜಿ ಮಾಡಿದ್ರು ಅಂತ ಸುಮಾರು ವರ್ಷಗಳ ನಂತರ ನನಗೆ ಅರ್ಥ ಆಯಿತು.ನಗರಗಳ ಗಲೀಜು ಅಂಥದ್ದು. ಈಗ ಹಳ್ಳಿಗಳು ನಗರಗಳಾಗುತ್ತಿರುವಾಗ ಗಲೀಜು ಅಲ್ಲಿಗೂ ತಲುಪುತ್ತಿದೆ ಅನ್ನುವುದು ಬೇರೆ ಪ್ರಶ್ನೆ.
ಇಂದು ನಗರಗಳು ಕಸ ತಯಾರಿಯ ಕೇಂದ್ರಗಳಾಗುತ್ತಿವೆ. ಮುಖ್ಯವಾಗಿ ಪ್ಲಾಸ್ಟಿಕ್ ತ್ಯಾಜ್ಯ.ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಅಂಗಡಿ ಮಾಲಿಕರಂತೆ ನಮ್ಮಂಥ ಗಿರಾಕಿಗಳೂ ಕಾರಣ ನಿಜ. ಆದರೆ ,ನಮ್ಮ ಸಣ್ಣ ಪೇಟೆಗಳಲ್ಲಿ ಅನೇಕ ಬಾರಿ ನಾನು ನೋಡಿದ್ದೇನೆ- ಅಂಗಡಿಯವರು ಅದರಲ್ಲೂ ಮುಖ್ಯವಾಗಿ ಫೇನ್ಸಿ ಅಂಗಡಿಯವರು ಸಂಜೆಯಾಗುವಾಗ ಅಂಗಡಿಯನ್ನು ಚೆನ್ನಾಗಿ ಗುಡಿಸಿ ಪ್ಲಾಸ್ಟಿಕ್ ಇತ್ಯಾದಿ ಕಸಗಳನ್ನು ತಂದು ರಸ್ತೆ ಬದಿ ಚರಂಡಿಗೆ ಹಾಸಿದ ಕಾಂಕ್ರೀಟು ಹಲಗೆಗಳ ಎಡೆಯಲ್ಲಿರುವ ಸೆರೆಯಲ್ಲಿ ತೂರಿಸುವುದನ್ನು.
ಪೇಟೆಯಲ್ಲಿ ನಡೆವಾಗ ಇಂಥ ಗ್ಯಾಪುಗಳ ಮುಲಕ ಇಣುಕಿ ಒಳಗೆ ನೀರು ಹರಿಯುತ್ತಿದೆಯೇ ಎಂದು ನೋಡುವುದು ( ಇಣುಕುರತಿ ! ) ನನಗೊಂದು ಹವ್ಯಾಸ.ಹೀಗಾಗಿಯೇ ಕೆಲವೊಮ್ಮೆ ಹಲವರಿಗೆ ನಾನು ಡಿಕ್ಕಿ ಹೊಡೆದು ಸಾರಿ ಹೇಳಿ ಬೈಸಿಕೊಂಡದ್ದು ಉಂಟು.ಚರಂಡಿಯೊಳಗೆ ಕಾಣುವುದು ಪ್ಲಾಸ್ಟಿಕ್ ತೊಟ್ಟೆ, ಪ್ಲಾಸ್ಟಿಕ್ ಬಾಟಲಿ ಇತ್ಯಾದಿ ಮಾತ್ರ .ಇನ್ನು ಮಳೆಗಾಲದಲ್ಲಿ ನೀರು ರಸ್ತೆಯ ಮೇಲೆ ಹೋಗದೆ ಮತ್ತೆಲ್ಲಿ ನಮ್ಮ ತಲೆ ಮೇಲೆ ಹೋಗೋದಾ?
ಸಣ್ಣ-ದೊಡ್ಡ ಪೇಟೆಗಳಲ್ಲಿರುವ ತೆರೆದ ಸಣ್ಣ ಪುಟ್ಟ ತೋಡುಗಳಂತೂ ಕೇಳುವುದೇ ಬೇಡ. ಪ್ಲಾಸ್ಟಿಕ್ ತೊಟ್ಟೆಗಳಿಂದ ತುಂಬಿಹೋಗಿವೆ.ಓಡುವ ನೀರನ್ನು ನಡೆವಂತೆ ಮಾಡಿ ನಡೆವ ನೀರನ್ನು ನಿಲ್ಲುವಂತೆ ಮಾಡಿ ಅಂತ ನೀರಿಂಗಿಸುವವರು ಹೇಳುತ್ತಾರಲ್ಲ ಹಾಗೆ ತೋಡಿಗೆ ತೊಟ್ಟೆ ಹಾಕುವ ಮುಲಕ ನಾವು ಮಳೆನೀರಿಂಗಿಸುತ್ತಿದ್ದೇವೆ !!
ನಗರ ಅನ್ನುವ ಪದದಿಂದ ನಾಗರಿಕ ಅನ್ನುವ ಪದ ಬಂದಿರಬೇಕು. ನಾಗರಿಕ ಪ್ರಜ್ಞೆಯ ದೊಡ್ಡ ಕೊರತೆ ಇರುವುದು ಕೂಡ ನಗರದಲ್ಲೇ.
ಇಂಥ ಅಂಗಡಿಯವರ ನಡುವೆ ಗಿರಾಕಿಗಳಿಗೆ ಫ್ಲಾಸ್ಟಿಕ್ ತೊಟ್ಟೆಯಲ್ಲಿ ಹಾಕಿ ಪುಸ್ತಕಗಳನ್ನು ಪ್ಯಾಕ್ ಮಾಡಿ ಕೊಡೋದಿಲ್ಲಾಂತ ಖಡಾಖಡಿ ಹೇಳುವ ಮುಲಕ ವ್ಯಾಪಾರವನ್ನೂ ಕಳೆದುಕೊಳ್ಳಲು ಸಿದ್ಧವಿರುವ ಅತ್ರೀಯಂಥವರೂ ಇದ್ದಾರೆ ಅನ್ನೋದು ಸಂತೋಷದ ಸಂಗತಿ . ನಿಜವಾಗಿ ಅದು ಹೈಲೀ ಕಸ್ಟಮರ್ ಅನ್ ಫ್ರೆಂಡ್ಲೀ ಅಲ್ವೆ? ಪ್ಲಾಸ್ಟಿಕ್ ಬ್ಯಾಗ್ ಇಲ್ವ ನಿಮ್ಮಲ್ಲಿ ಅಂತ ಆಶ್ಚರ್ಯ/ಸಿಟ್ಟುಇತ್ಯಾದಿ ಭಾವಗಳಿಂದ ಕೇಳುವ ಗ್ರಾಹಕರಿಗೆ ಉತ್ತರ ಕೊಟ್ಟು ಕೊಟ್ಟು ಅಶೋಕವರ್ಧನರಿಗೆ ಬೊಡಿದು ಹೋಗಿ ಇವತ್ತಲ್ಲ ನಾಳೆ ತೊಟ್ಟೆ ಇಟ್ಟೇ (ಪುಸ್ತಕವನ್ನು) ಮಾರಿಯಾರೆಂದು ಸುಮಾರು ಸಮಯದಿಂದ ಆಲೋಚನೆ ಮಾಡುತ್ತಿದ್ದ ನನ್ನ ಗ್ರಹಿಕೆ ಸುಳ್ಳೆಂದು ನನಗೆ ಮನವರಿಕೆ ಆಗಿಯೇ ಸುಮಾರು ಸಮಯ ಆಯಿತು.
ಘನ ತ್ಯಾಜ್ಯ ವಿಲೇವಾರಿ ಹೀಗೇಕೆ ಮಾಡಬಾರದು?
ಈಗ ನಗರಗಳ ದೊಡ್ಡ ಸಮಸ್ಯೆ ಘನ ತ್ಯಾಜ್ಯ ವಿಲೇವಾರಿ.
ಈ ಚತುಷ್ಪಥ ಇತ್ಯಾದಿ ರಸ್ತೆಗಳ ನಿರ್ಮಾಣದ ಸಂದರ್ಭವನ್ನು ತ್ಯಾಜ್ಯ ವಿಲೇವಾರಿಗೆ ಯಾಕೆ ಬಳಸಿಕೊಳ್ಳಬಾರದು ? ಮಂಗಳೂರಿನಿಂದ ಬಿ. ಸಿ .ರೋಡಿಗೆ ಹೋಗುವ ರಸ್ತೆ ಅಗಲೀಕರಣಕ್ಕೆ ಹಲವು ಕಡೆಗಳಲ್ಲಿ ಇಪ್ಪತ್ತು ಅಡಿಗಳಿಗೂ ಹೆಚ್ಚು ಎತ್ತರಕ್ಕೆ ಮಣ್ಣು ಹಾಕಲಾಗಿದೆ. ಹೀಗೆ ಸುಮಾರು ಇಪ್ಪತ್ತು ಅಡಿಗಳಿಗಿಂತ ಎತ್ತರ ಮಣ್ಣು ನಿಲ್ಲುವಲ್ಲಿ ಅಡಿಯಲ್ಲಿ ಸಣ್ಣ ತೆಳು ಪದರ ಪ್ಲಾಸ್ಟಿಕ್ ,ಕುಪ್ಪಿ ಚೂರು ಇತ್ಯಾದಿ ಘನತ್ಯಾಜ್ಯಗಳನ್ನು ಹಾಕಬಹುದಲ್ಲ? ಉದ್ದಕ್ಕೆ ಹಾಕಬಾರದು, ಅಡಿಯ ಮಣ್ಣಿಗೆ ಮೇಲಿನ ಮಣ್ಣು ಕಚ್ಚಿಕೊಳ್ಳುವಷ್ಟು ಗ್ಯಾಪ್ ಬಿಟ್ಟರಾಯಿತು. ಇಂಥಾ ವಿಷಯಗಳಲ್ಲಿ ಪುರಸಭೆ-ನಗರಪಾಲಿಕೆಯವರು ರಸ್ತೆ ಕಂತ್ರಾಟುಧಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡರೆ ಇದು ಸುಲಭ ಸಾಧ್ಯ. ಹೇಗಿದ್ದರೂ ಹೆದ್ದಾರಿ ಅಡಿಯನ್ನು ಮುಂದಕ್ಕೆ ಅಗೆಯುವ ಅಗತ್ಯ ಕಡಿಮೆ. ಏನಿದ್ದರೂ ನಾವು ಮಾಡಿದ ಹೇಸಿಗೆಯನ್ನು ಭೂ ತಾಯಿಯೇ ಎಲ್ಲಾದರೂ ಹೊಟ್ಟೆಗೆ ಹಾಕಿಕೊಳ್ಳಬೇಕು ತಾನೆ ? ಹೆದ್ದಾರಿಗಳು ಎಲ್ಲವನ್ನು ನುಂಗಿ ನೊಣೆಯುತ್ತವೆ. ಸ್ವಲ್ಪ ಪ್ಲಾಸ್ಟಿಕ್ ಕೂಡ ನುಂಗಲಿ.ಅಷ್ಟಾದ್ರೆ ಅಷ್ಟು.
ಇಲಾಖೆಗಳ ಮಧ್ಯೆ ಹೊಂದಾಣಿಕೆ ಇಲ್ಲದ,ವಿವಿಧ ಆಡಳಿತಾತ್ಮಕ ವಿಭಾಗಗಳಿಗೆ ಪರಸ್ಪರ ಪರಿಚಯವೇ ಇಲ್ಲದ ನಮ್ಮ ದೇಶದಲ್ಲಿ ಇದೆಲ್ಲ ಸಾಧ್ಯವೇ ಅನ್ನೋದು ಪ್ರಶ್ನೆ.
ಇನ್ನೋದು ಬೇಸರದ ಸಂಗತಿ ಅಂದರೆ ಕಸದ ತೊಟ್ಟಿಗಳನ್ನು ಖಾಲಿ ಮಾಡಿ ಲಾರಿಗೆ ಮನುಷ್ಯರೇ ಕೈಗೆ ಗವಸು ಕೂಡ ಇಲ್ಲದೆ ಲೋಡು ಮಾಡುವ ಪರಿಸ್ಥಿತಿ ಹಲವು ಕಡೆಗಳಲ್ಲಿ ಈಗಲೂ ಉಳಿದಿರುವುದು.ಅದನ್ನೂ ನಿರ್ದಿಷ್ಟ ಜಾತಿಯವರೇ ಮಾಡಬೇಕಾಗಿರುವುದು ಖೇದಕರ. ಇಷ್ಟೆಲ್ಲ ಯಾಂತ್ರೀಕರಣ ಆಗಿರುವಾಗ ಜೆ ಸಿ ಬಿ ಅಥವಾ ಅದನ್ನೆ ಸ್ವಲ್ಪ ಮಾರ್ಪಾಡು ಮಾಡಿದ ಯಂತ್ರದ ಮುಲಕ ಈ ತೊಟ್ಟಿ ಖಾಲಿ ಕೆಲಸ ಮಾಡುವುದೇನೂ ಕಷ್ಟವಲ್ಲ . ಆ ಕಾರ್ಮಿಕರಿಗೆ ಕೆಲಸ ಇಲ್ಲ ಅಂತೇನೂ ಆಗಲಾರದು.ಅವರಿಗೆ ಪೇಟೆ ಸ್ವಚ್ಚತಾ ಮೇಲುಸ್ತುವಾರಿ ಜವಾಬ್ದಾರಿ ಕೊಟ್ಟರಾಯಿತು. (ಗಣಕ ಯಂತ್ರ ಬಂದಾಗ ಕೆಲಸ ಕಳ್ಕೊಳ್ತಾರೆ ಅಂತ ಬೊಬ್ಬೆ ಹೊಡೆದವರೆಷ್ಟು ಮಂದಿಯೋ ? ಹೊಸ ಕೆಲಸ ಸ್ರುಷ್ಟಿ ಆಗಲಿಲ್ವೆ ? )