ನಶೆಯ ವಿಷಜಾಲಕ್ಕೆ ಇದು ಪುರಾವೆ

ಮಾದಕ ವಸ್ತುಗಳ ಮಾರಾಟಜಾಲವು ನಾಡಿನ ಉದ್ದಗಲಕ್ಕೂ ಹಬ್ಬಿರುವ ಕುರಿತಾಗಿ ಹಲವಾರು ಬಾರಿ ಬರೆಯಲಾಗಿದೆ. ನಶೆಯ ಗೀಳಿಗೆ ಸಿಲುಕಿ ಜನರು, ಅದರಲ್ಲೂ ವಿಶೇಷವಾಗಿ ಯುವಜನರು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿರುವುದರ ಬಗ್ಗೆ ಸೂಚ್ಯವಾಗಿ ಎಚ್ಚರಿಸಲಾಗಿದೆ. ಈ ಮಾತಿಗೆ ಪುಷ್ಟಿ ನೀಡುವಂಥ ಸುದ್ದಿಯೊಂದು ಹೈದರಾಬಾದ್ನಿಂದ ವರದಿಯಾಗಿರುವುದು ನಿಮಗೆ ಈಗಾಗಲೇ ಗೊತ್ತು. ಖ್ಯಾತ ಹಿನ್ನೆಲೆ ಗಾಯಕಿಯೊಬ್ಬರ ಜನ್ಮದಿನದ ಸಂಭ್ರಮಾಚರಣೆಗೆಂದು ಆಯೋಜಿಸಲಾಗಿದ್ದ ಸಂತೋಷ ಕೂಟದಲ್ಲಿ ಮಾದಕ ದ್ರವ್ಯಗಳ ಬಳಕೆಯಾಗುತ್ತಿದೆ ಎಂಬ ಖಚಿತ ಮಾಹಿತಿ ಅನುಸರಿಸಿ ದಾಳಿ ಮಾಡಿದ ತೆಲಂಗಾಣ ಪೊಲೀಸರಿಗೆ ಗಾಂಜಾ, ವಿದೇಶಿ ಮದ್ಯ ಸಿಕ್ಕಿದೆ. ಸಂತೋಷ ಕೂಟದಲ್ಲಿ ಭಾಗಿಯಾಗಿದ್ದವರ ಪೈಕಿ ಕೆಲವರನ್ನು ಅವರು ವಶಕ್ಕೆ ತೆಗೆದುಕೊಂಡು ಪರೀಕ್ಷೆಗೆ ಒಳಪಡಿಸಿದಾಗ ಮಾದಕ ದ್ರವ್ಯದ ಅಂಶ ಅವರೆ ರಕ್ತದಲ್ಲಿ ಪತ್ತೆಯಾಗಿದೆ ಎಂಬುದು ಲಭ್ಯ ಸುದ್ದಿ. ದೇಶದ ಯಾವುದೋ ಒಂದು ಮೂಲೆಯಲ್ಲೇ ಈ ಮಟ್ಟಿಗಿನ ವ್ಯಸನ ಕಂಡುಬರುತ್ತಿದೆ ಎಂದರೆ, ಅರಿವಿಗೇ ಬಾರದ ರೀತಿಯಲ್ಲಿ ಆ ಗೀಳು ನಾಡಿನ ಉದ್ದಗಲಕ್ಕೂ ಅದ್ಯಾವ ಮಟ್ಟಿಗೆ ವ್ಯಾಪಿಸಿರಬಹುದು ಎಂಬುದನ್ನೊಮ್ಮೆ ಕಲ್ಪಿಸಿಕೊಳ್ಳಿ. ಪ್ರತಿಷ್ಠಿತರನ್ನು, ಸೆಲೆಬ್ರಿಟಿಗಳನ್ನು ಪೊಲೀಸರು ತಪಾಸಣೆ ಮಾಡುವುದಕ್ಕೆ ಹೋಗುವುದಿಲ್ಲ ಎಂಬ ಭಂಡಧೈರ್ಯವೇ ಇಂಥ ಸಂತೋಷ ಕೂಟಗಳ ಆಯೋಜನೆಗಳಿಗೆ ಕಾರಣ ಎನಿಸುತ್ತದೆ. ಆದ್ದರಿಂದ ಸಾರ್ವಜನಿಕರ ಮತ್ತು ಸಮಾಜದ ಸ್ವಾಸ್ಥ್ಯ, ವನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಇಂಥ ಅಡ್ಡಾಗಳನ್ನು ಮುಲಾಜಿಲ್ಲದೆ ತಡಕಬೇಕು, ಅಲ್ಲಿ ಲಭ್ಯವಾಗುವ ಮಾಹಿತಿಗಳನ್ನು ಆಧರಿಸಿ ಮಾದಕ ವಸ್ತುಗಳ ಮಾರಾಟಗಾರರನ್ನು ಮುಲಾಜಿಲ್ಲದೆ ವಶಕ್ಕೆ ತೆಗೆದುಕೊಂಡು ಹೆಡೆಮುರಿ ಕಟ್ಟಬೇಕು. ಏಕೆಂದರೆ, ಕೊಂಚವೇ ಮೈಮರೆತರೂ ಮತ್ತೆ ಚಿಗಿತು ಕೊಳ್ಳುವಂಥವರು ಈ ಡ್ರಗ್ ಪೆಡ್ಡರ್ಗಳು. ಅದೆಷ್ಟೇ ಪ್ರಭಾವಿಗಳಾಗಿದ್ದರೂ ಬಗ್ಗದೆ ಕಠಿಣ ಕಾನೂನು ಕ್ರಮವನ್ನು ಅವರ ಮೇಲೆ ಜರುಗಿಸುವಂತಾಗ ಬೇಕು. ಅದು ಈ ಕ್ಷಣದ ಅನಿವಾರ್ಯತೆಯೂ ಹೌದು.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೧೪-೦೬-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾನ