ನಾಲ್ಕು ವರ್ಷದ ನಂತರವೂ ರಾಜ್ಕುಮಾರ್ ! -- ಭಾಗ ೨
(ಹಿಂದಿನ ಸಂಚಿಕೆಯಿಂದ...)
(ಆ)
ಕಳೆದ ಶತಮಾನದ 70ರ ದಶಕದಲ್ಲಿ ಕನ್ನಡ ಶಾಲೆಗೆ ಹೋದವರೆಲ್ಲ ಈಗ ನಲ್ವತ್ತರ ಆಸುಪಾಸಿನಲ್ಲಿರುವವರು. ಅಣ್ಣಾವ್ರ ಚಿತ್ರಗಳನ್ನು ಮೊದಲ ದಿನದ, ಮೊದಲ ಶೋ ಆಗಿ ಕಂಪಲ್ಸರಿ ನೋಡುವುದರ ಜೊತೆ ಜೊತೆಗೇ ಇವರುಗಳಿಗೆಲ್ಲ ಮತ್ತೊಂದು ಸ್ಥಿತಿಪಲ್ಲಟವುಂತಾದುದುಂಟು. ಆರ್ಥಿಕವಾಗಿ ಸ್ಥಿತಿವಂತರಾದ ತಂದೆತಾಯಿಗಳನ್ನು ಪಡೆದಿದ್ದವರು ಇಂಗ್ಲೀಷ್ ಕಲಿತರು. ’ರಾಜ್ ಮತ್ತು ಕನ್ನಡ’ ಹಾಗೂ ’ರಾಜ್ -ರೀತಿಯ ಕನ್ನಡಕ್ಕೆ’ ಹೊಂದಿಕೊಂಡಿದ್ದ ಇಂತಹವರು ಇಲ್ಲಿಂದ ತಮ್ಮ ಬದುಕಿಗೆ ಅಗತ್ಯವಿರುವ ಭೌಗೋಳಿಕ ಮಾದರಿಗಳನ್ನು ಅರಸಿಕೊಂಡು ಎಲ್ಲೆಲ್ಲಿಗೋ ಹೋದದ್ದಿದೆ. ಸರಳವಾಗಿ ಇಂತಹವರನ್ನು ಎ.ಬಿ.ಸಿ.ಡಿ ಗಳು ಎನ್ನುತ್ತೇವೆ. ’ಅಮೇರಿಕನ್ನರಿಗೆ ಬಾರ್ನ್ ಆದ ಕನ್ಫ್ಯೂಸ್ಡ್ ದೇಸಿಗಳು’ ಎಂದಿದರ ಅರ್ಥ. ಅವರೆಲ್ಲ ತಮ್ಮ ತಮ್ಮ ಭೌತಿಕ ಅಗತ್ಯಗಳನ್ನು ಪೂರೆಸಿಕೊಂಡ ನಂತರದ ತಂಪುಹೊತ್ತಿನಲ್ಲಿ ರಾಜ್ಕುಮಾರ್ ನೆನಪಾಗಿ ಉಳಿದುಕೊಂಡಿದ್ದರ ಹಿಂದಿನ ನಾಸ್ಟಾಲ್ಜಿಕ್ ಯಾತನೆಯ ರಹಸ್ಯ ಅವರಿಗೇ ಅರ್ಥವಾಗುತ್ತಿಲ್ಲ.
ಆದರೆ ವಿದೇಶಗಳಲ್ಲಿ ನೆಲೆನಿಂತವರು ಟಿ.ವಿಯಲ್ಲಿ ಅಣ್ಣಾವ್ರು ಅಪಹರಣದ, ಅವಾರ್ಡಿನ ಇತ್ಯಾದಿ ಕಾರಣಗಳಿಂದ ಕಾಣಿಸಿಕೊಂಡಾಗ ಕೂಡಲೆ `ಏನೋ' ಕಳೆದುಕೊಂಡವರಂತೆ ತಡಬಡಾಯಿಸುವುದು ಒಂದು ನಿತ್ಯಸತ್ಯ. ತಮ್ಮ ಮಕ್ಕಳಿಗೂ ಈ ತಳಮಳವನ್ನು ವಿವರಿಸಲಾಗದ ಅಸಹಾಯಕತೆ. ವಲಸಿಗ ಸಂಸ್ಕೃತಿ, ತಂತ್ರಜ್ಞಾನದ ಆಗಮನ ಇತ್ಯಾದಿ ಜಾಗತೀಕರಣದ ಸೊಬಗಿನ ಸಂಕೀರ್ಣತೆಯೂ ಸೋತು ತಲೆಬಾಗುವುದು ರಾಜ್ ಎಂಬ ಸ್ಥಳೀಯ ನಾಸ್ಟಾಲ್ಜಿಯದ ಸೊಗಡಿಗೆ!
ಏನಿಲ್ಲವೆಂದರೂ ಅರವತ್ತರ ದಶಕದಿಂದ ನಾಲ್ಕಾರು ತಲೆಮಾರು ಈ ಸೊಗಡಿನ ಸವಿಯನ್ನು ಸವಿದಿದ್ದಾರೆ. ಚಿತ್ರೀಕರಣದ ತಾಂತ್ರಿಕ ಅದ್ಭುತಗಳಿಗೆಲ್ಲ ಆ ಒಂದು ಮುಖ, ಒಂದು ಡೈಲಾಗ್, ಒಂದು ಚಲನೆ, ಒಂದು ಭಾವ ಪರ್ಯಾಯ ಉತ್ತರವಾಗಿತ್ತು ರಾಜ್ರಲ್ಲಿ. ಆದ್ದರಿಂದಲೇ ಅವರ ಸಂಸ್ಥೆ ನಿರ್ಮಿಸಿದ ಸಿನೆಮಗಳಲ್ಲಿ ತಾಂತ್ರಿಕ ಚಮತ್ಕಾರವು ರಾಜ್-ಅಭಿನಯದ ’ರೂಪದಲ್ಲಿಯೇ’ ಅಷ್ಟೊಂದು ಕಂಡುಬರುವುದು. ರಾಜ್ರನ್ನೇ ಕುರಿತಾದ ಹಾಡಿನ ಸಾಲು, "ನಿನ್ನ ಮುಖ ಕಂಡ ಜನ ಹಿಗ್ಗಿ ನೂತನ, ಬಣ್ಣನೆಗೆ ಬಾರದಿಯ ನೂರು ತಲ್ಲಣ" ನೆನಪಿದೆಯೆ?
ಮತ್ತೊಂದೆಡೆ ಸ್ಥಿತಿವಂತರಲ್ಲದೆ, ಕನ್ನಡ ಶಾಲೆಯಲ್ಲಿಯೇ ಓದಿದವರು ಸಮಾಜದ ಮಧ್ಯಮವರ್ಗದ ನಿರ್ಮಿತಿಯ ಒಳಗೇ ಉಳಿದುಕೊಂಡು, ಬೆಂಗಳೂರೆಂಬುದು ಮೇಲ್ವರ್ಗಕ್ಕೆ ಮಾತ್ರ ಸೇರಿದ್ದೆಂದು ಬೆಚ್ಚುತ್ತಿದ್ದಾಗ್ಯೂ ಅವರ ನೈತಿಕ ಸ್ಥೆರ್ಯಕ್ಕೆ ಆಸರೆಯಾಗಿ ನಿಂತದ್ದು ರಾಜ್ ವ್ಯಕ್ತಿತ್ವದ ಮೇಲ್ವಿಚಾರಣೆಯೇ!
(ಇ)
ಇಂದಿನ ಬೆಂಗಳೂರು ಹಾಗೂ ಕನ್ನಡಕ್ಕೂ ಮಧ್ಯೆ ಇದ್ದಂತಹ ಕೊನೆಯ ಗಟ್ಟಿ ಕೊಂಡಿ ರಾಜ್. ಕಾಸ್ಮೊಪೊಲಿಟನ್ ಬೆಂಗಳೂರನ್ನು ಸಂಕೇತಿಸುವ ಕೋಶಿಸ್ ನಂಥ ಸ್ಥಳಗಳಲ್ಲಿ ಬೆಂಗಳೂರಿಗೆ ವಲಸಿಗರಾಗಿ ಬಂದವರಿಗೆ ರಾಜ್ಕುಮಾರ್ ಅವರನ್ನು `ಸರಿಯಾಗಿ' ಪರಿಚಯಿಸುವುದು ಒಂದು ಕ್ಲಿಷ್ಟಕರ ವಿಚಾರ. "ಐದು ದಶಕಗಳ ಕಾಲ ನಿರಂತರವಾಗಿ ಒಂದು ಭಾಷಾ ಪ್ರಾಂತ್ಯದಲ್ಲಿ ಸೂಪರ್ಸ್ಟಾರಾಗಿ ಮೆರೆದವರನ್ನು ಎಲ್ಲಾದರೂ ಕಂಡಿರುವಿರಾ?" ಎಂದು ಮ್ಯಾಕ್ಸ್ ಮುಲ್ಲರ್ ಭವನದ ಹುಡುಗಿಯೊಬ್ಬಳನ್ನು ಕೇಳಿದೆ. ಇಲ್ಲವೆಂದು ತಲೆಯಾಡಿಸಿದಳು.
ಕಳೆದ ವರ್ಷ ಲಂಡನ್ನಿನ ರಾಯಲ್ ಕಾಲೇಜ್ ಆಫ್ ಆರ್ಟ್ಸ್ನಲ್ಲಿ--ಆಶಿಶ್ ರಾಜಾಧ್ಯಕ್ಷ ಸಹಸಂಪಾದಕರಾಗಿರುವ ಭಾರತೀಯ ಸಿನಿಮ ಎನಂಸೆಕ್ಲೋಪಿಡಿಯದಲ್ಲಿ--ರಾಜ್ ಬಗೆಗಿನ ವಿವರವಿರುವ ಪುಟಕ್ಕಾಗಿ ಹುಡುಕಾಡಬೇಕಾಯಿತು. ಬಾಲಿವುಡ್ ಸಿನಿಮಾಗಳೇ ಭಾರತದ ಮುಖ್ಯ ಸಿನಿಮಾಗಳು ಎನಿಸಿಬಿಡುವಂತೆ ಸಂಯೋಜನೆಗೊಂಡಿರುವ ಆ ಬೃಹತ್ ಸಂಪುಟದ ಹೊದಿಕೆಯ ಮೇಲೆ ಒಂದು ದೊಡ್ಡ ಎಂ.ಜಿ. ಆರ್. ಫೋಟೊ! ಟೆಲಿವಿಷನ್ನಿನ ಹಿಂದಿ ಚಾನೆಲ್ಲುಗಳಲ್ಲಿ "ಕನ್ನಡ್" ಸಿನೆಮ ಸೂಪರ್ಸ್ಟಾರ್ ನಿಧನ ಎನ್ನುವಾಗಲೂ ಹಿಂದಿ ಹೊರತುಪಡಿಸಿದ ಭಾರತೀಯ ಭಾಷೆ, ಸಿನೆಮಾ, ಸಂಸ್ಕೃತಿಗಳೆಲ್ಲ ಅಂಚಿನವು ಎಂಬಂತಹ ಭಾವ.
ಕಾಲೇಜಿನಲ್ಲಿದ್ದಾಗ ಕುತ್ತಿಗೆ ಸುತ್ತಲಿನ ತಾಯಿತದಲ್ಲಿ ದೇವರ ಬದಲು ಪುಟ್ಟ ರಾಜ್ಕುಮಾರ್ ಫೋಟೋ ಹಾಕಿಕೊಳ್ಳುತ್ತಿದ್ದೆ ಎಂದು ನಮ್ಮ ಅಂದಿನ ದಿನಗಳ ಬಗ್ಗೆ ಹೇಳಿದರೆ ವಸಾಹತುಶಾಹಿಗಳು ವಸಾಹತೀಕರಣಗೊಂಡವರನ್ನು ನೋಡುವಂತ ಕರುಣಾಜನಕ ನೋಟ ಬೀರುತ್ತಾರೆ ಬೆಂಗಳೂರಿಗೆ ಬಂದ ಹೊಸಬರು. ರಾಜ್ ತೀರಿಕೊಂಡ ಸಂಜೆಯ ಆಗುಹೋಗುಗಳ ನಂತರ ಅಣ್ಣಾವ್ರ ಭಕ್ತನಾಗಿದ್ದ ಗೆಳೆಯನೊಬ್ಬ ಮ್ಯಾಕ್ಸ್ ಮುಲ್ಲರ್ ಭವನದ ಅದೇ ಹುಡುಗಿಗೆ ಕೇಳುತ್ತಿದ್ದ, "ಈಗ ತಿಳಿಯಿತೆ ರಾಜ್ಕುಮಾರ್ ಎಂದರೆ ಯಾರೆಂದು?"
ರಾಜ್ ಹುಟ್ಟುಹಾಕಿದ ಆದರ್ಶ ಮಧ್ಯಮವರ್ಗದ ಮಾದರಿಯನ್ನು ತಾತ್ವಿಕವಾಗಿ ವಿವರಿಸಲು, ಜಾಗತೀಕರಣದ ತೆಕ್ಕೆಯೊಳಕ್ಕೆ ಸೇರಿಸಲು ದೊಡ್ಡ ತೊಡಕಿದೆ. ಕನ್ನಡ ಸಾಹಿತ್ಯವು ಕನ್ನಡ ಸಂಸ್ಕೃತಿಯ ತಾತ್ವಿಕ ಗುತ್ತಿಗೆ ಪಡೆದಿರುವುದು, ಮತ್ತು ಆ ಸಾಂಸ್ಕೃತಿಕ ವಿರಚನೆಯು (ಡಿಸ್ಕೋರ್ಸ್) ವಾಚ್ಯ ಪ್ರಧಾನವಾಗಿದ್ದುಕೊಂಡು, ದೃಶ್ಯಸಂಸ್ಕೃತಿಯ ಬಗ್ಗೆ ಕುರುಡಾಗಿರುವುದು--ಇವೆರೆಡೂ ಈ ತೊಡಕಿಗೆ ಮುಖ್ಯ ಕಾರಣಗಳು.
(ಈ)
'ಬ್ರಾಹ್ಮಣೀಯ' ಗುಣಗಳೇ ಹೆಚ್ಚಿದ್ದ, ಅಕ್ಷರೇತರ ಕಲೆಗಳಿಗಿಂತ ಅಕ್ಷರಗಳದ್ದೇ ಆಧಿಪತ್ಯವಿದ್ದ ಕನ್ನಡದ ಸಂಸ್ಕೃತಿಯಲ್ಲಿ ಅಬ್ರಾಹ್ಮಣ ವ್ಯಕ್ತಿತ್ವವೊಂದು, ಜಾತ್ಯತೀತ ಮೆಚ್ಚುಗೆ ಪಡೆದುದು ವಿಮರ್ಶಕರ ಮೆಚ್ಚುಗೆಯ ಅಂಶವೂ ಹೌದು, ವೋಟು ಕೇಳುವವರ ಹೊಟ್ಟೆಯುರಿಗೆ ಕಾರಣವೂ ಹೌದು.
ಇಲ್ಲಿ `ಬ್ರಾಹ್ಮಣ್ಯ' ಎಂಬುದನ್ನು, ಅದರ ವಿರುದ್ಧ ಪದವನ್ನೂ ಒಂದು ಮನಸ್ಥಿತಿಯನ್ನಾಗಿ ನೋಡಬೇಕೇ ಹೊರತು ಒಂದು ಜಾತಿ-ನಿಷ್ಠ ದೃಷ್ಟಿಕೋನದಿಂದಲ್ಲವೆಂದು ಸೂಚಿಸುವುದೇ ಒಂದು ಕ್ಲೀಷೆಯಾಗಿ ಹೋಗಿದೆ. ಅಕ್ಷರಗಳಿಗೂ ಬ್ರಾಹ್ಮಣ ಕುಲಕ್ಕೂ ಇರುವ ಆತ್ಮೀಯತೆಯು ಐತಿಹಾಸಿಕ ಸತ್ಯವಾಗಿರುವಂತೆ ಅಕ್ಷರೇತರ (ದೃಶ್ಯಾತ್ಮಕ, ಅಭಿನಯಾತ್ಮಕ) ಕಲೆಗೂ ಶೂದ್ರತ್ವಕ್ಕೂ ಹೆಚ್ಚಿನ ನಂಟಿದೆ. ಅದೇ ಕಾರಣದಿಂದಾಗಿ ಅವಾಚ್ಯ ಕಲೆಗಳಿಗೆ ವಿಮರ್ಶೆಯ ಸೌಕರ್ಯವೂ ಕಡಿಮೆ ಇದೆ. ಆದ್ದರಿಂದಲೇ ದೃಶ್ಯಕಲೆ ಹೇಗಿರಬೇಕೆಂದು ಹೇಳುವ ಗ್ರಂಥಗಳು ಶಾಲಾ ಕಾಲೇಜುಗಳಲ್ಲಿ ಕಂಡುಬಂದರೆ, ಅವುಗಳನ್ನಾಧರಿಸಿ ಮೂಡಿಸಲಾದ ದೃಶ್ಯಕಲೆಯು ಟೈಂಪಾಸಿಗಿರುವ, ಟೂರಿಸ್ಟ್ ತಾಣವಾಗಿವೆ.
ಕನ್ನಡ ಮಾಧ್ಯಮದಲ್ಲಿ ಮೂರನೇ ತರಗತಿಯಷ್ಟೇ ಓದಿರುವ ರಾಜ್ಕುಮಾರ್ ಶಾಲಾಕಾಲೇಜನ್ನೂ ಮನರಂಜನಾ ತಾಣಗಳನ್ನು ಬೆಸೆದ ಏಕೈಕ ಸಾಂಸ್ಕೃತಿಕ ವ್ಯಕ್ತಿತ್ವ.
ರಾಜ್ನೇತೃತ್ವ ವಹಿಸಿದ್ದ ಕನ್ನಡದ ಗೋಕಾಕ್ ಚಳವಳಿಯು (೧೯೮೨) ’ಸ್ಕ್ರೀನ್’ ಎಂಬ ಸಿನಿಮಾ ಪತ್ರಿಕೆಗೆ ಮಿನಿ-ಹಿಟ್ಲರ್ನ ಚಟುವಟಿಕೆಗಳಂತೆ ಕಂಡಿತ್ತು. ಅದೇ ಚಳುವಳಿ ಕನ್ನಡದ ತಾತ್ವಿಕರಿಗೆ ಸಮೂಹ ಸನ್ನಿಯಂತೆಯೂ ಕಂಡಿದ್ದಿದೆ. ಅಣ್ಣಾವ್ರ ನಭೂತೋ ಎಂಬಂತಹ ಜನಪ್ರಿಯತೆಯ ಜಲಸಿ ಇದಕ್ಕೆ ಕಾರಣವಿರಬಹುದೇನೋ?
ಡಾ. ಯು. ಆರ್. ಅನಂತಮೂರ್ತಿಯವರು ಇದಕ್ಕೆ ಪೂರಕವಾದ ಒಂದು ಘಟನೆಯ ಬಗ್ಗೆ ಹೆಗ್ಗೋಡಿನಲ್ಲೊಮ್ಮೆ ಮಾತನಾಡಿದ್ದರು. ಅವರು ಹೇಳಿದ್ದು ಸಮಗ್ರವಾಗಿ ರಾಜಕುಮಾರ್ ಎಂಬ ಸಾಂಸ್ಕೃತಿಕ ವ್ಯಕ್ತಿತ್ವವನ್ನು ಹೇಗೆ ಶೈಕ್ಷಣಿಕ ಅಧ್ಯಯನವು ಮುಂದೆ ಒಟ್ಟುಗೂಡಿಸಬಹುದೆಂಬುದಕ್ಕೆ ಸಾಕ್ಷಿಃ
"ಕನ್ನಡ ಸಾಹಿತ್ಯ ಸಮ್ಮೇಳನಗಳಾದಾಗ ಕಂಬಾರರ ಮಾತನ್ನು ಕೊನೆಯಲ್ಲಿಡುತ್ತಿದ್ದರು. ಏಕೆಂದರೆ ಅಷ್ಟು ಚೆನ್ನಾಗಿ ಅವರು ಹಾಡು ಹೇಳುತ್ತಿದ್ದರು. ನಮಗೆಲ್ಲ ಆಗ ಒಂದು ರೀತಿಯ ಇರಿಸುಮುರಿಸು. ಒಮ್ಮೆ ಅಂತಹ ಸಮ್ಮೇಳನವೊಂದಕ್ಕೆ ರಾಜ್ಕುಮಾರ್ ಆಗಮಿಸಿದ್ದರು. ಆಗ ಕೊನೆಯಲ್ಲಿ ಮಾತನಾಡಿ ಹಾಡುವ ಅವಕಾಶವಿದ್ದುದು ರಾಜ್ಕುಮಾರರಿಗೆ. ಜನ ಎದ್ದು ಹೋಗದಿರಲು ಎಂದು ಆ ಉಪಾಯ ಮಾಡಿದ್ದರು. ಆಗ ನಮಗೆ ಕಂಬಾರರ ಮೇಲೆ ಸೇಡು ತೀರಿಸಿಕೊಳ್ಳುವ ಅವಕಾಶ ದೊರಕಿತ್ತು." ಎಂದು ಮಾರ್ಮಿಕವಾಗಿ ಹೇಳಿದ್ದರು ಯು.ಆರ್.ಎ.
ಕಳೆದ ಒಂದು ಸಾವಿರ ವರ್ಷದ ಕನ್ನಡ ಭಾಷೆಯ ಇತಿಹಾಸದಲ್ಲಿ ಡಾ. ರಾಜ್ಕುಮಾರರಷ್ಟು ಕನ್ನಡ ಭಾಷೆಯೊಂದಿಗೆ ಗುರ್ತಿಸಿಕೊಂಡು ಜನಪ್ರಿಯವಾದ ವ್ಯಕ್ತಿತ್ವ ಮತ್ತೊಂದಿಲ್ಲ. ಮತ್ತು ಇದು ಉತ್ಪ್ರೇಕ್ಷೆಯೂ ಅಲ್ಲ!//