ನಾವ್ಯಾರು ಬಡವರಲ್ಲ ! (ಭಾಗ 1)

ನಮ್ಮಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಬೇರೆಯವರೊಂದಿಗೆ ಹೋಲಿಸಿಕೊಂಡು, ನಾವು ಬಡವರೆಂದುಕೊಂಡಿದ್ದೇವೆ. ನಮ್ಮಲ್ಲಿರುವ ಅಂತಸ್ತುಗಳನ್ನು ಎಣಿಸಿಕೊಂಡು, ಬಡವರೆಂದು ಕಲ್ಪಿಸಿಕೊಂಡು ಕೊರಗುತ್ತೇವೆ. ಈ ಲೇಖನ ಓದಿ ನಂತರ ತೀರ್ಮಾನಿಸಿ. ನಾವು ಬಡವರೆ?
ಬಲ್ಲವರು, ತಿಳಿದವರು, ತತ್ವಜ್ಞಾನಿಗಳು, ಸನ್ಯಾಸಿಗಳು, ಋಷಿಗಳು ಮತ್ತು ಮುನಿಗಳು ಹೇಳಿದ್ದು ಏನೆಂದರೆ ಜೇಬು, ಮನೆ ತುಂಬಿದ್ದು ಶ್ರೀಮಂತಿಕೆಯಲ್ಲ, ಮನಸ್ಸು ತುಂಬಿದ್ದು ಶ್ರೀಮಂತಿಕೆ. ಮೈಯಲ್ಲಿ ಶಕ್ತಿ ತುಂಬಿದ್ದು ಶ್ರೀಮಂತಿಕೆ. ಈ ಶರೀರ, ಈ ಶರೀರದ ಆಯಸ್ಸು ಸಂಪತ್ತು. ಮನುಷ್ಯನಿಗೆ ನೂರು ವರ್ಷ ಆಯಸ್ಸು ಇದ್ದರೆ, ಆ ನೂರು ವರ್ಷ ಕಾಲ ನಡೆಯುತ್ತಿದ್ದರೆ, ಕೈ ಹಿಡಿಯುತ್ತಿದ್ದರೆ, ಕಣ್ಣು ನೋಡುತ್ತಿದ್ದರೆ, ಕಿವಿ ಕೇಳುತ್ತಿದ್ದರೆ, ಆ ದೇಹ ಶ್ರೀಮಂತ. ನಮ್ಮ ಆಯಸ್ಸು ಎಷ್ಟಿದೆಯೋ ಅಷ್ಟು ಕ್ರಿಯಾಶೀಲವಾಗಿ, ಶಕ್ತಿಯುತವಾಗಿ ಇದ್ದರೆ, ಆ ದೇಹ ಶ್ರೀಮಂತ. ಆದ್ದರಿಂದ ಹೇಳುತ್ತಾರೆ "ಈ ಶರೀರ ಸಂಪತ್ತಿನ ಸಂಪತ್ತು". ಈ ದೇಹ ಕೆಡಿಸಿದರೆ, ಸಂಪತ್ತು ಹೋಯಿತು. ನಾವು ಬಡವರಾದೇವಿ ಎಂದು ಭಾವಿಸಬೇಕು. ಕಣ್ಣು ನೋಟ ಹೋಯ್ತು ಎಂದರೆ, ಅದ್ಭುತ ಸಂಪತ್ತು ಹೋಯಿತು. ಕಣ್ಣುಗಳು ಎರಡು ಇದ್ದು, ಸಣ್ಣದಿರಬಹುದು. ಕಣ್ಣು ತೆರೆದರೆ ಜಗತ್ತಿನ ಅದ್ಭುತ ಸೌಂದರ್ಯ ತೋರಿಸುತ್ತದೆ. ಜೀವನ ಶ್ರೀಮಂತ ಗೊಳಿಸಿದ್ದು ಕಣ್ಣು. ಎಲ್ಲಾ ಸೌಂದರ್ಯ ನೋಡುತ್ತದೆ. ಆ ಸೌಂದರ್ಯವನ್ನು ಮನಸ್ಸಿಗೆ ಕಳಿಸುತ್ತದೆ. ಅದು ಮನಸ್ಸನ್ನು ಶ್ರೀಮಂತ ಗೊಳಿಸುತ್ತದೆ, ಸಂತೋಷ ತುಂಬುತ್ತದೆ. ಹಾಗಾಗಿ ಈ ಕಣ್ಣು ಸಂಪತ್ತು.
ಒಬ್ಬ ಒಂದು ಕೋಟಿ ರೂ ಕನ್ನಡಕ ಹಾಕಿದ್ದಾನೆ. ಆದರೆ ಆತನಿಗೆ ಕಣ್ಣೆ ಕಾಣುವುದಿಲ್ಲ. ಬಂದವರೆಲ್ಲ, ನೋಡಿದವರೆಲ್ಲ, ಕನ್ನಡಕ ಕೊಂಡಾಡುತ್ತಾರೆ. ಕೋಟಿ ಇದ್ದರೇನು ಉಪಯೋಗ?. ಆದರೆ ನಮ್ಮ ಕಣ್ಣು ಕನ್ನಡಕ ಇಲ್ಲ. ಕೋಟಿ ಇಲ್ಲ .ಚೆನ್ನಾಗಿ ಕಾಣಿಸುತ್ತದೆ. ಇದು ಸಂಪತ್ತು ಅಲ್ಲವೇನು?. ಕನ್ನಡಕ ನೋಡಿ ಮರುಗುವುದಕ್ಕಿಂತ, ನಮ್ಮ ಕಣ್ಣಿನ ಸಾಮರ್ಥ್ಯ ನೋಡಿ ಸಂತೋಷ ಪಡಬೇಕು. ಇದೇ ಅರ್ಥ ಸಂಪಾದನೆ. ನಮ್ಮ ಕಾಲು ಕಪ್ಪು ಇದ್ದರೇನು?. 10 ಕಿಲೋಮೀಟರು ನಡೆಯುತ್ತದೆ ಅಂದಾಗ, ನಮ್ಮ ಕಾಲನ್ನು ಪ್ರೀತಿಸಬೇಕು. ನಮ್ಮ ಕಾಲು ಕೈ ಬಗ್ಗೆ ಅಭಿಮಾನ ಇರಬೇಕು. ನಮ್ಮ ದೇಹ, ಅವಯವಗಳ ಬಗ್ಗೆ ಅಭಿಮಾನ ಇರಬೇಕು. ಬಣ್ಣ ಮುಖ್ಯವಲ್ಲ. ಗಾತ್ರ, ಎತ್ತರ ಮುಖ್ಯವಲ್ಲ. ಅದರ ಕ್ರಿಯಾಶೀಲತೆ ಮುಖ್ಯ. ನಮಗೆ ಹಣ ಸಿಕ್ಕರೆ ಅಭಿಮಾನ ಪಡುತ್ತೇವೆ. ಆದರೆ ಈ ದೇಹ, ಸಂಪತ್ತಿನ ಸಂಪತ್ತಾಗಿರುವುದರಿಂದ ಅಭಿಮಾನ ಪಡಬೇಕು. ಕಿರೀಟ ಸಂಪತ್ತಲ್ಲ. ನಮ್ಮ ತಲೆ ಸಂಪತ್ತು. ತಲೆನೇ ಇಲ್ಲ, ಕಿರೀಟ ಹಾಕಿ ಪ್ರಯೋಜನವೇನು?. ತಲೆ ಇದೆ ಅಂತ ತಾನೆ ಕಿರೀಟ, ರೂಮಾಲು, ಟೋಪಿ ಹಾಕುವುದು. ತಲೆನೇ ಇಲ್ಲ , ಅವುಗಳ ಅಗತ್ಯವೇನು?. ತಲೆ ಬಗ್ಗೆ ಅಭಿಮಾನ ಇರಬೇಕು ವಿನಃ ಮೇಲೆ ಹಾಕಿದ್ದರ ಬಗ್ಗೆ ಅಲ್ಲ. ತಲೆ ಸಂಪತ್ತು ವಿನಹ, ಬೇರೆಯಲ್ಲ. ಸಂಪತ್ತು ತಲೆ, ದೇಹ, ಅವಯವಗಳೆ ವಿನಃ, ಅದರ ಮೇಲೆ ಹಾಕಿದ್ದು ಅಲ್ಲ. ದೇಹದ ಮೇಲೆ ಒಳ್ಳೆ ಡ್ರೆಸ್ ಹಾಕೋಣ. ಡ್ರೆಸ್ ಮಹತ್ವದಲ್ಲ, ದೇಹ ಮಹತ್ವದ್ದು. ಡ್ರೆಸ್ ಯಾವುದರ ಮೇಲೆ ಹಾಕಿದ್ದೇವೆಯೋ ಅದು ಮಹತ್ವದ್ದು. ದೇಹ ಶಕ್ತಿಯುತವಾಗಿ ಕ್ರಿಯಾಶೀಲವಾಗಿರಬೇಕು. ದೇಹ ಶಕ್ತಿಯುತವಾಗಿದ್ದು, ಕ್ರಿಯಾಶೀಲರಾಗಿರುವವರು ಯಾರು ಬಡವರಲ್ಲ. ಯಾರಿಗೆ ನಡೆಯುವುದಕ್ಕೆ ಬರುವುದಿಲ್ಲ?, ಕೈ ಕೆಲಸ ಮಾಡುವುದಕ್ಕೆ ಬರುವುದಿಲ್ಲ?, ಯಾರಿಗೆ ನೋಡುವುದಕ್ಕೆ ಬರುವುದಿಲ್ಲ?, ಯಾರಿಗೆ ಅನುಭವಿಸುವುದಕ್ಕೆ ಬರುವುದಿಲ್ಲ?. ಅವರು ಬಡವರು. ಈ ದೇಹವನ್ನು ಹಾಳು ಮಾಡದೆ, ರಕ್ಷಿಸುವುದೇ ಅರ್ಥ ಸಂಪಾದನೆ. ಏನೋ ಕುಡಿದು?. ಏನೋ ತಿಂದು ಬಲಿಯಾಗಬಾರದು.
ಈ ದೇಹ ಇರುವುದು ಹೊಡೆದಾಟಕ್ಕಲ್ಲ, ಆನಂದಕ್ಕಾಗಿ ನಿಸರ್ಗ ರೂಪಿಸಿದ್ದು. ಈ ಶರೀರ ಸಂಪತ್ತು ಆಗಿರುವುದರಿಂದ, ಇದನ್ನ ಯಾವ ಯಾವುದಕ್ಕೋ ಬಳಸಬಾರದು. ಯಾವುದಕ್ಕೆ ಬಳಸಿದರೆ ನಮ್ಮ ಸಂಪತ್ತು ಹೆಚ್ಚುತ್ತದೆ, ಅದಕ್ಕೆ ಬಳಸಬೇಕು. ಏಕೆಂದರೆ ನಮ್ಮ ಲಕ್ಷ್ಯ ಜೇಬಿನ ಕಡೆ ಇರಬಾರದು. ನಮ್ಮ ಲಕ್ಷ್ಯ, ಶರೀರದ ಕಡೆ ಇರಬೇಕು. ಶರೀರ ಅಂದರೆ ಮಾತು, ಮತಿ, ತಿಳಿದುಕೊಳ್ಳುವ ಸಾಮರ್ಥ್ಯ, ಇವೆಲ್ಲ ದೊಡ್ಡ ಸಂಪತ್ತು. ಬದುಕುವ ಶಕ್ತಿ ನಮ್ಮ ಮೈಯಲ್ಲಿ ಇದೆಯಲ್ಲ ಇದಕ್ಕೆ ಅಭಿಮಾನ ಪಡಬೇಕು. ಈ ದೃಷ್ಟಿಯಿಂದ ನೋಡಿದರೆ ಯಾರ ಮೇಲಾದರೂ ಮತ್ಸರ ಬರುತ್ತದೆಯೇನು?. ದೊಡ್ಡ ದೊಡ್ಡ ಮನೆ, ಬಟ್ಟೆ ಬರೆ, ಒಡವೆ ನೋಡಿ ಶ್ರೀಮಂತರು ಅನ್ನುತ್ತೇವೆ. ಕೆಲವರು ಸಾವಿರಾರು ರೂಪಾಯಿ ಖರ್ಚು ಮಾಡಿ ಶೂ ತಂದಿರುತ್ತಾರೆ. ಅದನ್ನು ಹಾಕಲು ಸಮಯವೇ ಇರುವುದಿಲ್ಲ. ಹಾಕಿದರೂ ಒಂದು ಕಿಲೋಮೀಟರ್ ನಡೆಯುವ ಸಾಮರ್ಥ್ಯವಿಲ್ಲ. ಶೂ ಸಂಪತ್ತಲ್ಲ. ಕಾಲು ಸಂಪತ್ತು. ಮಕ್ಕಳಿಗೆ ಯಾವುದೇ ಆಭರಣ, ವಸ್ತ್ರ ಹಾಕಿದರು, ತೆಗೆದು ಹಾಕಿ ಆಡಿ ಕುಣಿಯುತ್ತದೆ. ನಮಗೆ ಏನಾದರೂ ಕೊಟ್ಟರೆ ನಡೆಯುವುದೇ ಇಲ್ಲ. ಮಾತು ಇಲ್ಲ. ಏಕೆಂದರೆ ಈಗ ಬಂದಿರುವುದು ಒಂದು ಕೆಜಿ. ಇದನ್ನು ಎರಡು ಕೆಜಿ ಮಾಡಬೇಕು, 3 ಕೆಜಿ ಮಾಡಬೇಕು, ನಾಲ್ಕು ಕೆಜಿ ಮಾಡಬೇಕು. ಕೊನೆಗೆ ನೂರು ಕೆಜಿ ಆಯ್ತು. ಆ ಚಿನ್ನ ಇಲ್ಲೇ ಉಳಿಯಿತು. ಈತ ಮೇಲಕ್ಕೆ ಹೋದ. ಆತನ ಮಗನು ಇದನ್ನೇ ಮಾಡಿ ಮುಂದುವರಿಸಿದ. ದೇಹ ಬಡವಾಯಿತು. ಚಿನ್ನ ಶ್ರೀಮಂತವಾಯಿತು. ದೊಡ್ಡ ದೊಡ್ಡ ಶ್ರೀಮಂತರು ಅನುಭವಿಸುವುದಿಲ್ಲ. ಬಡವರು ಅನುಭವಿಸುವುದು. ಅದಕ್ಕಾಗಿ ಶ್ರೀಮಂತರ ಕಂಡು ಮರುಗುವುದಕ್ಕಿಂತ, ಕನಿಕರಪಡಬೇಕು. ಏನು ಇದ್ದರೆ ಎಲ್ಲ ಇದ್ದ ಹಾಗೆ ಇದೆಯಲ್ಲ ಅಂತ ಶರೀರ ಇರುವಾಗ ಅಭಿಮಾನ ಪಡಬೇಕು.
(ಇನ್ನೂ ಇದೆ)
-ಎಂ.ಪಿ. ಜ್ಞಾನೇಶ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ