ನೋಡಿ ಸ್ವಾಮೀ, ನಾವಿರೋದೇ ಹೀಗೆ
(ಇಂದಿನ ’ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯಲ್ಲಿ ಪ್ರಕಟಿತ)
ಮಾಸ್ಟರ್ ಹಿರಣ್ಣಯ್ಯ ಅವರಿಗೆ ಬಹಿರಂಗ ಉತ್ತರ
ಮಾಸ್ಟರ್ ಹಿರಣ್ಣಯ್ಯ ಅವರಿಗೆ ನಮಸ್ಕಾರಗಳು.
ದಿನಾಂಕ ೧೨ರ ’ಸಂಯುಕ್ತ ಕರ್ನಾಟಕ’ದಲ್ಲಿ ನೀವು ’ಮತದಾರನಿಗೆ ಕಿವಿಮಾತು’ ಎನ್ನುತ್ತ ’ಬಹಿರಂಗ ಪತ್ರ’ ಬರೆದುಬಿಟ್ಟಿದ್ದೀರಿ! ಭಲೇ ಬುದ್ಧಿವಂತರಪ್ಪ ನೀವು!
ಓರ್ವ ಮತದಾರನಾಗಿ ನಾನು ನಿಮ್ಮ ಬಹಿರಂಗ ಪತ್ರಕ್ಕೆ ಉತ್ತರ ಕೊಡುವುದು ನನ್ನ ಕರ್ತವ್ಯವೆಂದು ಭಾವಿಸಿ ಈ ’ಬಹಿರಂಗ ಉತ್ತರ’ವನ್ನು ಬರೆಯುತ್ತಿದ್ದೇನೆ.
’ದೇಶದ ಆಗುಹೋಗುಗಳ ಬಗ್ಗೆ ಮತ್ತು ರಾಜಕಾರಣಿಗಳ ನಡೆನುಡಿಗಳ ಬಗ್ಗೆ ಮತದಾರನಿಗೆ ಮಹಾ ಮರವು’ ಎಂದು ನೀವು ಬೇಸರಪಟ್ಟುಕೊಂಡಿದ್ದೀರಿ. ಏನು ಮಾಡುವುದು ಸ್ವಾಮೀ, ನಮ್ಮ ಮಹಾ ಮರವಿಗೆ ಕಾರಣ ಇಂದಿನ ಕಲಬೆರಕೆ ಆಹಾರ. ಏನೋ ನಿಮ್ಮಂಥ ಬೆರಳೆಣಿಕೆಯ ಮೇಧಾವಿಗಳು ಅದುಹೇಗೋ ಎಲ್ಲವನ್ನೂ ನೆನಪಿಟ್ಟುಕೊಂಡು, ಛಲಬಿಡದ ತ್ರಿವಿಕ್ರಮನಂತೆ ಫಾಲೋಅಪ್ ಮಾಡುತ್ತೀರಿ. ತ್ರಿವಿಕ್ರಮನ ಬೆನ್ನಿಗೆಬಿದ್ದ ಬೇತಾಳನಂತೆ ನೀವು ರಾಜಕಾರಣಿಗಳ ಬೆನ್ನೇರಿ ಜುಟ್ಟುಹಿಡಿದು ಅಲ್ಲಾಡಿಸುತ್ತೀರಿ. ಶ್ರೀಸಾಮಾನ್ಯ ಮತದಾರರಾದ ನಮಗೆಲ್ಲರಿಗೂ ಅಂಥ ಮೇಧಾಶಕ್ತಿ, ಅಂಥ ಛಲ ಎಲ್ಲಿಂದ ಬರಬೇಕು ಸ್ವಾಮೀ.
ನಿಮ್ಮ ಒಂದೊಂದು ನಾಟಕವನ್ನೂ ನಾವು ಪದೇಪದೇ ನೋಡುವುದು ಯಾಕೆ ಗೊತ್ತೆ? ನಾಟಕದಲ್ಲಿ ಇವತ್ತು ನೀವು ಹೇಳಿದ ಮಾತು ನಮಗೆ ನಾಳೆಗಾಗಲೇ ಮರೆತುಹೋಗಿರುತ್ತದೆ. ಆದ್ದರಿಂದಲೇ ನಾಳೆ ಮತ್ತೆ ನಿಮ್ಮ ನಾಟಕ ನೋಡುತ್ತೇವೆ. ನಾಳೆ ನಿಮ್ಮ ಬಾಯಿಂದ ಕೇಳುವ ಮಾತು ನಮಗೆ ನಾಳಿದ್ದಿಗೆ ನೆನಪಿರುವುದಿಲ್ಲ. ಆದ್ದರಿಂದ ನಾಳಿದ್ದು ಮತ್ತೆ ನಿಮ್ಮ ನಾಟಕ ನೋಡಲು ಧಾವಿಸುತ್ತೇವೆ.
ನಮ್ಮ ಈ ಅದ್ಭುತ ಮರವಿಗೆ ಕಲಬೆರಕೆ ಆಹಾರದ ಜೊತೆಗೆ ಬೇರೆ ಕಾರಣಗಳೂ ಇವೆ. ಉದ್ಯೋಗ/ಉದ್ಯಮ ಮತ್ತು ನಿದ್ದೆಸಹಿತ ದಿನಚರಿ ಇವೆರಡರ ಜೊತೆಗೆ ಪ್ರತಿನಿತ್ಯ ನಾವು ಟಿವಿ ಧಾರಾವಾಹಿಗಳನ್ನು ನೋಡಬೇಕು, ವರ್ಷದಲ್ಲಿ ಮುನ್ನೂರು ದಿನ ಟಿವಿಯಲ್ಲಿ ಕ್ರಿಕೆಟ್ ನೇರಪ್ರಸಾರ ವೀಕ್ಷಿಸಬೇಕು, ಟ್ರಾಫಿಕ್ ಜಾಮ್ನಲ್ಲಿ ಕಾಲಹರಣ ಮಾಡಬೇಕು, ಹಳ್ಳಿಗಳವರು ನಿಯಮಿತವಾಗಿ ನಗರಗಳಿಗೆ ಬಂದುಹೋಗುತ್ತಿರಬೇಕು, ನಗರಗಳವರು ನಿಯಮಿತವಾಗಿ ಮಾಲ್ಗಳಿಗೆ ಭೇಟಿ ನೀಡುತ್ತಿರಬೇಕು, ಇವೆಲ್ಲದರ ಜೊತೆಗೆ, ಪಕ್ಕದಮನೆಯವರೊಡನೆ ಜಗಳವಾಡಬೇಕು, ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕು, ಮಕ್ಕಳ ಅಡ್ಮಿಷನ್ಗಾಗಿ ಶಾಲೆಗಳಲ್ಲಿ ಕ್ಯೂ ನಿಲ್ಲಬೇಕು, ಪದೇಪದೇ ಕಾಯಿಲೆಯಿಂದ ಮಲಗಬೇಕು, ಇಂಥ ಅನೇಕಾನೇಕಾನೇಕ ಹರಿಬಗಳ, ಅಂದರೆ, ಕಾರ್ಯಗಳ, ಸಂಕಷ್ಟಗಳ ಒತ್ತಡದ ಮಧ್ಯೆ ನಾವು ದೇಶದ ಆಗುಹೋಗುಗಳ ಬಗ್ಗೆ ಮತ್ತು ರಾಜಕಾರಣಿಗಳ ನಡೆನುಡಿಗಳ ಬಗ್ಗೆ ಏನೆಲ್ಲವನ್ನೂ ನೆನಪಿಟ್ಟುಕೊಂಡಿರಬೇಕೆಂದರೆ ಹೇಗೆ ಸಾಧ್ಯ ಸ್ವಾಮೀ? ನಿಮ್ಮಂಥ ಮಾಸ್ಟರ್ಪೀಸ್ಗಳಿಗೆ ಮಾತ್ರ ಇದು ಸಾಧ್ಯ. ನಮ್ಮಳವಿಗಲ್ಲ ತೆಗೀರಿ.
ಮತದಾರರಾದ ನಾವು ಚುನಾವಣೆ ಸಮಯದಲ್ಲಿ ಹಣ, ಹೆಂಡ, ಬಾಡೂಟ, ಸೀರೆಗಳ ಆಮಿಷಕ್ಕೆ ಒಳಗಾಗುವವರೆಂದು ನೀವು ಆಪಾದಿಸಿದ್ದೀರಿ. ದಶಕಗಳಿಂದ ನೀವು ಮಾಡುತ್ತಬಂದಿರುವ ನಾನಾ ಆಪಾದನೆಗಳನ್ನು ಸರ್ಕಾರಗಳೇ ಪ್ರೀತಿಯಿಂದ ಸ್ವೀಕರಿಸುತ್ತಬಂದಿವೆಯೆಂದಮೇಲೆ ಬಡ ಮತದಾರರಾದ ನಾವೆಲ್ಲಾದರೂ ನಿಮ್ಮ ಆಪಾದನೆ ಓದಿ ಸಿಟ್ಟಾಗುವುದುಂಟೇ ಒಡೆಯಾ? ಇಷ್ಟಕ್ಕೂ ನೀವೇನೂ ಸುಳ್ಳು ಹೇಳುತ್ತಿಲ್ಲ. ವಾಸ್ತವವನ್ನೇ ಹೇಳುತ್ತಿದ್ದೀರಿ. ಆದರೆ, ನಾವು ಆ ಆಮಿಷಗಳಿಗೆ ಯಾಕೆ ಒಳಗಾಗುತ್ತೇವೆಂದು ಕೊಂಚ ಯೋಚಿಸಿ.
’ಹಣ ಕಂಡರೆ ಹೆಣವೂ ಬಾಯಿಬಿಡುತ್ತದೆ’ ತಾನೆ. ಹಾಗಿರುವಾಗ, ಜೀವಂತ ಮತದಾರರಾದ ನಾವು ಅಭ್ಯರ್ಥಿ ನೀಡಿದ ಹಣವನ್ನು ಜೇಬಿಗಿಳಿಸುವುದು ಒಂದು ಮಾನವಸಹಜ, ಊಹ್ಞೂ, ಮತದಾರಸಹಜ ಪ್ರಕ್ರಿಯೆ. ಹೆಂಡಕ್ಕೆ ನಾವು ಪರಮಾತ್ಮನ ಸ್ಥಾನವನ್ನು ನೀಡಿದ್ದೇವೆ. ಮಂದಿರದೊಳಗಿನ ಆ ಪರಮಾತ್ಮನನ್ನಾದರೂ ತೊರೆದೇವು, ಬಾಟಲಿಯೊಳಗಿನ ಈ ಪರಮಾತ್ಮನನ್ನು ಮಾತ್ರ ಬಿಡಲಾರೆವು. ಈ ಪರಮಾತ್ಮ ಆಡಿಸಿದಂತೆ ಆಡುವ ಹುಲುಮಾನವರು ನಾವು. ಇನ್ನು ಬಾಡೂಟ. ಅದು ನಮ್ಮ ನಾಲಿಗೆ ಚಪಲ ಸ್ವಾಮೀ. ನಿಮಗೂ ನಾಲಿಗೆ ಚಪಲ ಇದೆ. ನಿಮಗೆ, ಪುಢಾರಿಗಳನ್ನು ಬೈಯುವ ನಾಲಿಗೆ ಚಪಲ; ನಮಗೆ, ಪುಢಾರಿಗಳು ಹಾಕಿಸುವ ಬಾಡೂಟ ಕತ್ತರಿಸುವ ನಾಲಿಗೆ ಚಪಲ. ಆದ್ದರಿಂದ ಅಡ್ಜಸ್ಟ್ ಮಾಡ್ಕಳಿ, ಅಬ್ಜಕ್ಷನ್ ಮಾಡ್ಬೇಡಿ. ಸೀರೆಯ ಆಮಿಷದ ಬಗ್ಗೆ ಹೇಳುವುದಾದರೆ, ಅದು ಈ ದೇಶಕ್ಕೆ ಇಂದಿರಮ್ಮನವರ ವರಪ್ರಸಾದ ಸ್ವಾಮೀ. ಇವತ್ತಿಗೂ ಎಷ್ಟೋ ಅಮಾಯಕ ಮಹಿಳೆಯರು, ’ದಿಲ್ಲಿಯಲ್ಲಿ ಕುಂತು ಇಂದ್ರಮ್ಮನೇ ಸೀರೆ ಹಂಚಿಸ್ತಾ ಅವ್ರೆ’, ಅಂತ ಭಾವಿಸಿದ್ದಾರೆ! ಅವರ ಅಮಾಯಕತೆಗೇಕೆ ಧಕ್ಕೆಯುಂಟುಮಾಡೋದು, ಅಲ್ವೆ?
ನಿಮಗೆ ಗೊತ್ತಾ ಮಾಸ್ಟರ್ಜೀ, ಚುನಾವಣಾ ವಿಷಯದಲ್ಲೂ ನಾವು ಮರವಿನ ರೋಗಕ್ಕೆ ತುತ್ತಾಗುತ್ತೇವೆ! ಹೆಂಡ, ಬಾಡೂಟ, ಸೀರೆಗಳ ಆಕರ್ಷಣೆಯಿಂದ ಫಲಾನಾ ಅಭ್ಯರ್ಥಿಗೆ ಮತ ನೀಡುವ ನಾವು ಆ ಅಭ್ಯರ್ಥಿಯು ಚುನಾವಣೆ ವೇಳೆ ನೀಡಿದ ಆಶ್ವಾಸನೆಗಳನ್ನು ಶೀಘ್ರವೇ ಮರೆತುಬಿಡುತ್ತೇವೆ. ಮತದಾನ ಮುಗಿದ ಮರುಗಳಿಗೆಯೇ ಅಭ್ಯರ್ಥಿಯೂ ತನ್ನ ಆಶ್ವಾಸನೆಗಳನ್ನು ಮರೆತುಬಿಡುವುದರಿಂದಾಗಿ ಇಲ್ಲಿ ಸಮಸ್ಯೆಯುಂಟಾಗುವುದಿಲ್ಲ. ನಾವು ಎಷ್ಟೋ ಜನ ಚುನಾವಣೆಯ ದಿನದಂದು ಮತದಾನ ಮಾಡುವುದನ್ನೇ ಮರೆತುಬಿಡುತ್ತೇವೆಂದರೆ ನಮ್ಮ ಮರವು ಅದಿನ್ನೆಂಥಾದ್ದು, ಊಹಿಸಿ!
ಒಂದನ್ನು ಮಾತ್ರ ನಾವು ಎಂದಿಗೂ ಮರೆಯುವುದಿಲ್ಲ. ಅದೆಂದರೆ, ’ಪಬ್ಲಿಕ್ ಮೆಮೊರಿ ಈಸ್ ಷಾರ್ಟ್ (ಸಾರ್ವಜನಿಕರ ಸ್ಮೃತಿಶಕ್ತಿ ಅಲ್ಪಾವಧಿಯದು)’ ಎಂಬ ಲೋಕೋಕ್ತಿ. ಈ ಲೋಕೋಕ್ತಿಯನ್ನು ಮಾತ್ರ ನಾವು ಸದಾ ನೆನಪಿಟ್ಟುಕೊಂಡಿರುತ್ತೇವೆ. ಏಕೆಂದರೆ, ನಿಮ್ಮಂಥ ಗಣ್ಯರು ನಮ್ಮಮೇಲೆ ಆಪಾದನೆ ಮಾಡಿದಾಗ ಈ ಲೋಕೋಕ್ತಿ ನಮ್ಮ ನೆರವಿಗೆ ಬರುತ್ತದಲ್ಲಾ!
ಇತಿ,
ಮತದಾರ
ಎಚ್. ಆನಂದರಾಮ ಶಾಸ್ತ್ರೀ