ಪನ್ನೇರಳೆ

ಪನ್ನೇರಳೆ

ಪುಸ್ತಕದ ಲೇಖಕ/ಕವಿಯ ಹೆಸರು
ಎಚ್.ಎಸ್. ಸತ್ಯನಾರಾಯಣ
ಪ್ರಕಾಶಕರು
ಅಲಂಪು ಪ್ರಕಾಶನ, ಮಾಲೂರು
ಪುಸ್ತಕದ ಬೆಲೆ
ರೂ.120.00, ಮುದ್ರಣ: 2022

ಎಚ್.ಎಸ್. ಸತ್ಯನಾರಾಯಣರವರು ತಮ್ಮ ವೈಯಕ್ತಿಕ ಬದುಕಿನ ಅನುಭವಗಳನ್ನು, ಅವರು ಅನುಭವಿಸಿದ ಕಷ್ಟಕೋಟಲೆಗಳನ್ನು ಯಾವುದೇ ಸಂಕೋಚಕ್ಕೆ ಒಳಗಾಗದೇ ನಿರ್ಭೀತಿಯಿಂದ, ಪ್ರಾಮಾಣಿಕವಾಗಿ ಓದುಗರ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುವ ಮೂಲಕ ಅವರ ಬಗ್ಗೆ ಮತ್ತಷ್ಟು ಗೌರವ ಭಾವ ಹುಟ್ಟುವಂತೆ ಪ್ರಬಂಧ ರಚಿಸಿದ್ದಾರೆ.

ಹಾಸ್ಯ ಬರಹಗಳಲ್ಲಿ ಲಲಿತ ಪ್ರಬಂಧಗಳು ಬಹಳ ಮುಂಚೂಣಿಯಲ್ಲಿರುವ ಸಶಕ್ತವಾದ ಪ್ರಕಾರವೆನ್ನಬಹುದು. ಯಾರು ಸಹನೆ ಮತ್ತು ತಾಳ್ಮೆಯ ಗುಣವನ್ನು ಹೊಂದಿದ್ದು ಗಂಭೀರ ವಿಷಯವನ್ನೂ ಕೂಡ ಸಕಾರಾತ್ಮಕ ಮನೋಭಾವದಿಂದ ನೋಡಿ ಅದರೊಳಗೆ ಅಂತರ್ಗತವಾಗಿರುವ, ಮನಸ್ಸಿಗೆ ಉಲ್ಲಾಸ ಉತ್ಸಾಹ ತುಂಬುವ ಅಂಶಗಳನ್ನು ಹೆಕ್ಕಿ ತೆಗೆದು ಅದನ್ನು ತನ್ನದೇ ಆದ ವಿಶಿಷ್ಟ ರೂಪದಲ್ಲಿ ಬರಹ ರೂಪಕ್ಕಿಳಿಸುವಂತಹ ವ್ಯಕ್ತಿಗಳಿಗೆ ಮಾತ್ರ ಲಲಿತ ಪ್ರಬಂಧಗಳನ್ನು ಬರೆಯುವ ಕಲೆಗಾರಿಕೆ ಸಿದ್ಧಿಸುತ್ತದೆ ಎನ್ನಬಹುದು.

ವಿಷಯವನ್ನು ಲಾಲಿತ್ಯಪೂರ್ಣವಾದ ಲಹರಿಯಲ್ಲಿ ತೆಳುವಾದ ಹಾಸ್ಯದೊಂದಿಗೆ ವ್ಯಕ್ತಪಡಿಸುವ ಬರಹವೆ ಲಲಿತ ಪ್ರಬಂಧಗಳು. ಈ ಲಲಿತ ಪ್ರಬಂಧಗಳು ಸಾಮಾನ್ಯ ಪ್ರಬಂಧಗಳಿಗಿಂತ ಸ್ವಲ್ಪ ವಿಭಿನ್ನವಾದ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಲಲಿತ ಪ್ರಬಂಧಗಳು ಹಾಸ್ಯ ಮಿಶ್ರಿತವಾಗಿದ್ದು, ಸತ್ಯ ಸಂಗತಿಗಳನ್ನು ಮತ್ತು ಘಟನೆಗಳನ್ನು ಹಾಸ್ಯ ದೃಷ್ಟಿಯಿಂದ ನೋಡುವುದಾಗಿದೆ. ನಿಜ ಘಟನೆಗಳು ಸರಸ ಅಥವಾ ಪರಿಹಾಸ ದೃಷ್ಟಿಕೋನದಿಂದ ಮೂಡಿಬಂದಿದ್ದರೆ ಅವುಗಳನ್ನು ಲಲಿತ ಪ್ರಬಂಧಗಳು ಎನ್ನಬಹುದು.

ಭಾಷೆ ಮತ್ತು ಭಾವಗಳ ಲಾಲಿತ್ಯದಿಂದ ಲಲಿತ ಪ್ರಬಂಧಗಳು ಉಳಿದೆಲ್ಲಾ ಕಾವ್ಯ ಪ್ರಕಾರಗಳಿಗಿಂತ ಭಿನ್ನವಾದ ನೆಲೆಯಲ್ಲಿ ಓದುಗರನ್ನು ಎದುರುಗೊಳ್ಳುತ್ತವೆ. ಅಂತಹ ವಿಶಿಷ್ಟ ಬರಹಕ್ಕೆ ಕೈ ಹಾಕಿದವರಲ್ಲಿ ಡಾ. ಎಚ್.ಎಸ್. ಸತ್ಯನಾರಾಯಣ ಕೂಡ ಒಬ್ಬರು. ಇವರು ʻಪನ್ನೇರಳೆʼ ಎಂಬ ಲಲಿತ ಪ್ರಬಂಧಗಳ ಸಂಕಲನವನ್ನು ಬರೆದು ಓದುಗರ ಮುಂದಿಟ್ಟಿದ್ದಾರೆ. ಪನ್ನೇರಳೆ ಹೇಗೆ ಸಿಹಿ ಮತ್ತು ಒಗರಿನ ಮಿಶ್ರಣವಾಗಿ ಫಲಪ್ರಿಯರಿಗೆ ಆಪ್ತವಾಗುತ್ತದೆಯೋ ಹಾಗೆ ಇಲ್ಲಿರುವ ಲಲಿತ ಪ್ರಬಂಧಗಳು ಕಾವ್ಯಾಸಕ್ತರಿಗೆ ತುಂಬಾ ಇಷ್ಟವಾಗಿ ಒಂದೇ ಗುಕ್ಕಿಗೆ ಕಾಡಿಸಿಕೊಂಡು ಓದಿಸಿಕೊಂಡು ಹೋಗುತ್ತವೆ.

ಪನ್ನೇರಳೆ ಕೃತಿಯಲ್ಲಿರುವ ಲಲಿತ ಪ್ರಬಂಧಗಳು ವಿಭಿನ್ನವಾದ ಕಥಾವಸ್ತುಗಳನ್ನು ಇಟ್ಟುಕೊಂಡು ರಚಿತವಾಗಿರುವ ಲೇಖಕರ ಸ್ವಗತದೋಪಾದಿಯಲ್ಲಿ ಜನ್ಮತಾಳಿವೆ. ಇಲ್ಲಿ ಲೇಖಕರು ಹನ್ನೆರಡು ಪ್ರಬಂಧಗಳನ್ನು ಮಂಡಿಸಿದ್ದಾರೆ. ಒಂದಕ್ಕಿಂತ ಮತ್ತೊಂದು ಹೊಸತನದಿಂದ ಮೂಡಿಬಂದಿದ್ದು ಲವಲವಿಕೆ ಜೊತೆಗೆ ನವಚೈತನ್ಯ ಹಾಗೂ ತಾಜಾತನವನ್ನು ಹೊಂದಿವೆ.

ʻಕರಿಯನೆಂದು ಕುರಿಮರಿʼ, ʻಸಾರಿಗೆ ಬರೆ ಹಾಕುತ್ತಿದ್ದ ಯಶೋದಕ್ಕʼ, ʻಅಮ್ಮನ ಸರ್ಕಾರಿ ಆಸ್ಪತ್ರೆʼ, ʻಪನ್ನೇರಳೆʼ, ʻಎಲ್ಲರ ಒಡನಾಡಿ ಹಂಸʼ ʻಯಾರು ತಿಳಿಯರು ನಿನ್ನʼ, ʻಪಾಸು ಫೇಲ್ ಎಂಬ ತ್ರಿಶಂಕು ಸ್ಥಿತಿʼ, ʻಪೇಪರ್ಮೆಂಟ್ ಎಂಬ ಸಿಹಿಯ ಸ್ವರ್ಗʼ ಲೇಖಕರ ಬಾಲ್ಯ ಜೀವನದ ಅನುಭವಗಳ ಹಾರವಾದರೆ, ʻನಾನಾರ್ಥದ ಪಜೀತಿʼ ಅವರ ವೃತ್ತಿ ಬದುಕಿನ ಅನುಭವ ಮಾಲೆಯಾಗಿದೆ. ʻಪುಸ್ತಕಗಳೆಂಬ ಅಂತರಂಗದ ಅತಿಥಿʼ, ʻಇದು ಹಾರ ಪುರಾಣಂʼ ಪ್ರಬಂಧಗಳು ಸಾಮಾಜಿಕ ಬದುಕಿನ ಅನುಭವದಿಂದ ಮೂಡಿಬಂದ ಬರಹಗಳಾಗಿವೆ.

ಇಲ್ಲಿ ಪ್ರಾಣಿಗಳ ಬಗ್ಗೆ ಪ್ರೀತ್ಯಾಧರಗಳಿವೆ, ಜನಸಮುದಾಯದ ಕಷ್ಟಕೋಟಲೆಗಳ, ತಲ್ಲಣಗಳ, ತಾಕಲಾಟಗಳ ಚಿತ್ರಣವಿದೆ. ಬಡತನದಲ್ಲೂ ಕುಂದದ ಬದುಕಿನ ಸಂಭ್ರಮವಿದೆ. ಸರ್ವಧರ್ಮಗಳ ಸಾಮರಸ್ಯದ ಸಂದೇಶವಿದೆ. ಅಂಚೆ ಕಚೇರಿ ಜೊತೆಗಿನ ಜನರ ಅವಿನಾಭಾವ ಬಾಂಧವ್ಯದ ಎಳೆಗಳಿವೆ. ಲೇಖಕರಿಗೆ ಸಾಹಿತ್ಯದ ಗೀಳು ಹತ್ತಿದ ಸಮಗ್ರ ವಿವರಗಳಿವೆ, ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳ ಅತಿಯಾದ ಇಂಗ್ಲಿಷ್ ವ್ಯಾಮೋಹ ತಂದೊಡ್ಡುವ ರಂಪಾಟವಿದೆ, ರಂಗಭೂಮಿಯಯೊಂದಿಗಿನ ಲೇಖಕರ ನಂಟಿನ ಅಂಟಿದೆ. ಮಣ್ಣಿನ ಘಮಲಿದೆ, ಪುಷ್ಪ ಲೋಕದ ಸುತ್ತಾಟವಿದೆ. ಪೆಪ್ಪರ್ ಮಿಂಟ್‌ನ ಸಿಹಿಸವಿಯ ರುಚಿಯಿದೆ. ಪಾಸು ಫೇಲ್ ಅಗ್ನಿಕುಂಡದ ಬಿಸಿಯುಸಿರಿದೆ, ಗೌರವ ಮತ್ತು ಅಭಿಮಾನ ಭಾವವಿದೆ. ಒಟ್ಟಾರೆ ವೈವಿಧ್ಯತೆಗಳ ವಿಹಂಗಮ ನೋಟವೇ ಈ ಪನ್ನೇರಳೆ.

ಆಕರ್ಷಕವಾದ, ಅಷ್ಟೇ ಹಾಸ್ಯ ಭರಿತವಾದ ಶೀರ್ಷಿಕೆಗಳು ಓದುಗರಲ್ಲಿ ಕುತೂಹಲ ಮೂಡಿಸಿ ಓದಿಸಿಕೊಳ್ಳಲು ಯಶಸ್ವಿಯಾಗುತ್ತವೆ. ಉದಾಹರಣೆ ʻನಾನಾರ್ಥಗಳ ಪಜೀತಿʼ ಎಂಬ ಶೀರ್ಷಿಕೆಯಲ್ಲಿ ಏನು ರಗಳೆ ಉಂಟಾಗಿದೆ ಅದೇನ್ ಇರಬಹುದು ಓದಿ ನೋಡೋಣ ಎಂಬ ಭಾವ ಮೂಡಿದರೆ, ಇದು ʻಹಾರ ಪುರಾಣಂʼ ಎಂಬುದು ಹಾರಗಳ ಸುಂದರ ಲೋಕವನ್ನೇ ಭಾವಕೋಶದ ಮುಂದೆ ತೆರೆದಿಡುತ್ತದೆ.

ಲಲಿತ ಪ್ರಬಂಧಕ್ಕೆ ವಿಷಯ ಇಂಥದ್ದೆ ಇರಬೇಕೆಂದಿಲ್ಲ. ದೊಡ್ಡ ದೊಡ್ಡ ವಿಚಾರಗಳನ್ನು ಹೊತ್ತು ತರಬೇಕೆಂದಿಲ್ಲ. ವಿಷಯ ಚಿಕ್ಕದಾದರೂ ನಡೆಯುತ್ತೆ. ಆದರೆ ಅದನ್ನು ನಿರೂಪಿಸುವಲ್ಲಿ ಕುಶಲತೆ ಮೆರೆಯಬೇಕು. ಆಗ ದುಂಬಿಯೊಂದು ಹೂವೊಳಗಿನ ಮಕರಂದ ಹೀರುವಂತೆ ಓದುಗರು ಪ್ರಬಂಧದ ಸಾರವನ್ನು ಸವಿಯುವರು. ಈ ನಿಟ್ಟಿನಲ್ಲಿ ಲೇಖಕರ ಪರಿಶ್ರಮ ಮತ್ತು ಜಾಣ್ಮೆ ಮೆಚ್ಚುವಂತದ್ದು.

ಇಲ್ಲಿ ಡಾ. ಎಚ್.ಎಸ್. ಸತ್ಯನಾರಾಯಣರವರು ಸಾಮಾಜಿಕ ಸಂಗತಿಗಳನ್ನು, ವಿಚಾರಗಳನ್ನು, ಘಟನೆಗಳನ್ನು ತಮ್ಮ ಪ್ರಬಂಧಕ್ಕೆ ವಸ್ತುವಾಗಿಸದೇ ತನ್ನ ವೈಯಕ್ತಿಕ ಬದುಕಿನ ಜಾಡನ್ನಿಡಿದು ಪ್ರಬಂಧ ರಚಿಸಿದ್ದಾರೆ. ಆದರೆ ಇವು ಯಾರಿಗೂ ಅವರು ವೈಯಕ್ತಿಕ ನೆಲೆಯಲ್ಲಿ ಮಾತ್ರ ಕಾಣದೇ ಸಾರ್ವತ್ರಿಕ ಅನುಭವದ ಛಾಯೆಯನ್ನು ಹೊದ್ದು ಎಲ್ಲೂ ಬೇಸರಿಸದೆ ಓದಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತವೆ. ಓದುಗರ ಬದುಕಿನ ಅನುಭವಕ್ಕೂ ಇವು ಪಕ್ಕಾಗುತ್ತವೆ. ಪ್ರತಿಯೊಬ್ಬರಿಗೂ ತಾವು ಇಂತಹ ಪಾತ್ರವೊಂದರ ಭಾಗವಾಗಿದ್ದರಿಂದ ಅನುಭವ ನೀಡುತ್ತವೆ.

ಬುದ್ಧಿ-ಭಾವಗಳ ಆಲಿಂಗನದೊಂದಿಗೆ ತಮ್ಮ ಜೀವನದ ಘಟನೆಗಳನ್ನು ತುಂಬಾ ಸ್ವಾರಸ್ಯಕರವಾಗಿ ಲವಲವಿಕೆಯಿಂದ ಅಕ್ಷರಗಳಲ್ಲಿ ಗಟ್ಟಿಯಾದ ಮನೋಭೂಮಿಕೆ ನಿರ್ಮಿಸಿ ಲಲಿತ ಪ್ರಬಂಧಗಳನ್ನು ಹೆಣೆದಿದ್ದಾರೆ. ಈ ಪ್ರಬಂಧಗಳಲ್ಲಿ ಮೂಡಿಬರುವ ಅಚಾನಕ್ ತಿರುವುಗಳು, ಹಾಸ್ಯಪ್ರಸಂಗಗಳು, ಹೊಸ ಶಬ್ದಗಳು, ತುಂಟಾಟಗಳು, ಮನಕ್ಕೆ ಮುದ ನೀಡುತ್ತವೆ. ಪನ್ನೇರಳೆಯಲ್ಲಿ ಲೇಖಕರು ಬಳಸಿರುವ ಜನಪದ ನುಡಿಗಟ್ಟುಗಳು, ಗಾದೆಗಳು, ಕವಿಗಳ ಸಾಹಿತ್ಯದ ತುಲನಾತ್ಮಕ ಅಧ್ಯಯನ, ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಕವಿಗಳ ಸಂದರ್ಭೋಚಿತ ಸ್ಮರಣೆ, ಪ್ರಬಂಧಗಳ ತೂಕವನ್ನು ಮತ್ತಷ್ಟು ಗಟ್ಟಿಗೊಳಿಸಿದರೆ, ಆಡು ಭಾಷೆಯ ಬೈಗುಳಗಳು ಗ್ರಾಮೀಣ ‌ಸೊಗಡನ್ನು ಜೀವಂತವಾಗಿಸಿವೆ.

ಬಿಗಿಯಾದ ನಿರೂಪಣೆ, ಭಾವಗಳ ತೀವ್ರತೆ, ಪದಪುಂಜಗಳ ಹೆಣಿಗೆ, ಅರ್ಥ ಸಂಯೋಜನೆಗಳ ದೃಷ್ಟಿಯಿಂದ ತೆಳುವಾಗದಂತೆ ಎಚ್ಚರ ವಹಿಸಿದ್ದಾರೆ. ಗ್ರಹಿಕೆಗೆ ನಿಲುಕುವ ನಿರೂಪಣೆ ಮನಸೆಳೆಯುತ್ತದೆ. ವಸ್ತು ವಿನ್ಯಾಸ ಮತ್ತು ಗುಣಾತ್ಮಕತೆಯ ದೃಷ್ಟಿಯಿಂದ ಉತ್ತಮವಾಗಿ ಮೂಡಿಬಂದಿದ್ದು‌ ಭಾಷಾ ಕಸುವನ್ನು ಹೆಚ್ಚಿಸುವಂತೆ ಜೀವ ತಳೆದಿವೆ.

ಪ್ರತಿಯೊಬ್ಬರ ಬದುಕನ್ನು ಸಹ್ಯಗೊಳಿಸುವುದು ಭಾವನೆಗಳು. ಹಾಗಾಗಿ ಮನುಷ್ಯನ ಜೀವನದಲ್ಲಿ ಭಾವನೆಗಳು ತುಂಬಾ ಮಹತ್ವಪೂರ್ಣ ಸ್ಥಾನ ಪಡೆದಿವೆ. ಅಂತಹ ಭಾವನೆಗಳ ತಳಹದಿಯ ಮೇಲೆ ತನ್ನ ಭಾವಕೋಶದಲ್ಲಿ ಇರುವಂತಹ ಸುಂದರ ಅಂಶಗಳ ಮೊಗ್ಗನ್ನು ತೆಗೆದುಕೊಂಡು ಅವುಗಳನ್ನು ಪ್ರಫುಲ್ಲವಾಗಿ ಅರಳಿ ನಗುವ‌ ಹೂವಂತ ಲಲಿತ ಪ್ರಬಂಧಗಳಾಗಿಸುವಲ್ಲಿ ಲೇಖಕರ ಕಲಾತ್ಮಕತೆ ಮತ್ತು ಅಭಿವ್ಯಕ್ತಿ ಸ್ತುತ್ಯರ್ಹ ಸಂಗತಿಯಾಗಿ ಕಾಣುತ್ತದೆ.

ಕಣ್ಣಿಗೆ ಕಟ್ಟುವಂತಹ ವಿಚಾರಗಳನ್ನು ಹೊತ್ತು ತಂದಿರುವ ಪ್ರಬಂಧಗಳು ದೃಶ್ಯಕಾವ್ಯ ರೂಪದಲ್ಲಿ ಮನಃಪಟಲದ ಮೇಲೆ ಸುಳಿದಾಡಿ ಓದುಗರ ಹೃದಯ ತಟ್ಟುತ್ತವೆ. ಹಸಿವು, ಸೌಲಭ್ಯಗಳ ಅಲಭ್ಯತೆ, ಅವಕಾಶಗಳ ಕೊರತೆ, ಕೌಟುಂಬಿಕ ಜವಾಬ್ದಾರಿಗಳು ಇವೇ ಮುಂತಾದ ಎಲ್ಲೆಗಳನ್ನು ದಾಟಿದ ಜೀವನಾನುಭವ ಅವರ ಬರಹಗಳ ತುಡಿತವಾಗಿದೆ.

ಒಬ್ಬ ಸೃಜನಶೀಲ ಬರಹಗಾರರಾಗಿ ಬದ್ಧತೆಯನ್ನು ಕಾಪಿಟ್ಟುಕೊಂಡು ಅಕ್ಷರ ಸಂಯೋಜನೆ ಜೊತೆಗೆ ಸ್ನೇಹಮಯಿಯಾದ ಲೇಖಕರ‌ ಅಕ್ಷರಬಂಧ ಸೊಗಸಾದ ಅರ್ಥಸಂಯೋಜನೆ ಜೊತೆಗೆ ಮನೋರಂಜನೆಯನ್ನು ನೀಡುತ್ತದೆ. ಡಾ. ಸತ್ಯನಾರಾಯಣರವರ ಲಲಿತ ಪ್ರಬಂಧಗಳು ನಗುವಿನ ಜೊತೆಗೆ ಸ್ವಲ್ಪ ಅಳುವನ್ನು ಸೇರಿಸಿಕೊಂಡು ಚಿಂತನೆ ಕಡೆಗೆ ಮುಖ ಮಾಡಿವೆ. ಹಾಗಂತ ಚಿಂತನಾ ಪ್ರಧಾನವಾದ ಬರಹಗಳಂತೂ ಅಲ್ಲ. ಹಾಸ್ಯಕ್ಕೆ ಪ್ರಾಧಾನ್ಯತೆ ಹಾಗೂ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿರುವುದನ್ನು ಇಲ್ಲಿ ಕಾಣಬಹುದು.

ಇವರ ಪ್ರಬಂಧಗಳನ್ನು ಓದುವಾಗ ಗಂಧವನ್ನು ತೇಯ್ದ ಅನುಭವವಾಗುತ್ತದೆ. ತೇದಷ್ಟು ಗಂಧ ಸುವಾಸನೆ ಬೀರುವಂತೆ ಬರಹಗಳು ಜೀವನಪ್ರೀತಿಯನ್ನು, ಜೀವನೋತ್ಸಾಹವನ್ನು, ಮನರಂಜನೆಯನ್ನು ನೀಡುತ್ತವೆ. ಇಲ್ಲಿ ಲೇಖಕರು ಕರೋನಾ ಪೀಡಿತರಾಗಿ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದ ಸಂದರ್ಭದಲ್ಲೂ "ಅಯ್ಯೋ ಎಷ್ಟೊಂದು ಕನ್ನಡದ ಪುಸ್ತಕಗಳನ್ನು ಓದದೆ ಸತ್ತುಹೋಗಿ ಬಿಡುತ್ತೇನಲ್ಲ" ಎಂದು ತಮ್ಮ ಶಿಷ್ಯರೊಂದಿಗೆ ಹಂಚಿಕೊಂಡ ಮಾಹಿತಿಯೊಂದು ಸಾಕು ಸಾಹಿತ್ಯಕ್ಷೇತ್ರ ಅವರನ್ನು ಅಪ್ಪಿಕೊಂಡು ಕದಂಬ ಬಾಹುಗಳಲ್ಲಿ ಬಂಧಿಸಿದೆ ಎಂಬುದನ್ನು ತೋರ್ಪಡಿಸಲು.

ಇಲ್ಲಿ ಓದುಗರ ಮನಸ್ಸನ್ನು ಬರ ಸೆಳೆದುಕೊಳ್ಳುವ ಮತ್ತೊಂದು ಪುರಾಣ ಯಾರದ್ದು. ಈ ಹಾರ ಪುರಾಣ ಓದಿ ಮುಗಿಸುವಷ್ಟರಲ್ಲಿ ಒಂದು ಸುಂದರವಾದ ಹೂಬನದಲ್ಲಿ‌ ಸುತ್ತಿ, ವೈವಿಧ್ಯಮಯ ಹಾರಗಳನ್ನು ಸ್ಮೃತಿಪಟಲದ ಮೇಲೆ ತಗೊಂಡು ಅದರ ಮಹಿಮೆಯನ್ನರಿತು ಸಂಭ್ರಮಿಸುತ್ತಾನೆ. ಹಾರ ಸಾಂಸ್ಕೃತಿಕ ಕಾರ್ಯಕ್ರಮದಿಂದ ಹಿಡಿದು ಸ್ವಾಗತ, ಬೀಳ್ಕೊಡುಗೆ, ದೇವರಪೂಜೆ, ಗೌರವ ಸಮರ್ಪಣೆ, ಅಭಿನಂದನೆ, ಮದುವೆ-ಮುಂಜಿ, ಹುಟ್ಟುಹಬ್ಬದಿಂದ ಹಿಡಿದು ಶವದ ಮೇಲೆ ಹಾರವಾಗುವವರೆಗೂ ಒಂದಿಲ್ಲೊಂದು ರೀತಿಯಲ್ಲಿ ಜನರ ಕೊರಳ ಸೇರಿ ಸುಗಂಧ ಸೂಸುತ್ತ ರಾರಾಜಿಸುತ್ತದೆ ಎಂಬುದನ್ನು ತುಂಬಾ ಸುಂದರವಾಗಿ ವರ್ಣಿಸಿದ್ದಾರೆ.

ಪೆಪ್ಪರ್ ಮೆಂಟ್ ಎಂಬ ಸಿಹಿಯ ಸ್ವರ್ಗ ಪ್ರಬಂಧದಲ್ಲಿ ಲೇಖಕರು ವಿವಿಧ ಆಯಾಮಗಳಲ್ಲಿ ಚರ್ಚಿಸುತ್ತಾ ಸಿಹಿ ಮಕ್ಕಳಿಗೆ ಪ್ರಿಯ ಎಂಬ ಸಣ್ಣ ಜಾಡಿನಲ್ಲಿ ‌ಸಾಗಿ ಬಾಯಲ್ಲಿ ನೀರು ಬರುವಂತೆ ಬಾಲ್ಯದ ಅನುಭವವನ್ನು ಮದ್ಯವಯಸ್ಸಿನಲ್ಲಿಯೂ ಸುಲಲಿತವಾಗುವುದು ವರ್ಣಿಸಿರುವುದು‌ ಪ್ರಯಾಸವೇ ಸರಿ. ಆದರೆ ತುಂಬಾ ಅನಾಯಾಸವಾಗಿ ಕಾವ್ಯವಾಗಿಸುವ ಸೂಕ್ಷ್ಮತೆ ಲೇಖಕರಿಗೆ ಇರುವುದು ಗೋಚರಿಸುತ್ತದೆ.

ಅಮ್ಮನ ಸರ್ಕಾರಿ ಆಸ್ಪತ್ರೆ ಬರಹದಲ್ಲಿ ಸರ್ಕಾರಿ ಆಸ್ಪತ್ರೆಯ ಕಾರ್ಯವೈಖರಿ, ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ತಾಕಲಾಟ, ಜವಾಬ್ದಾರಿಗಳ ನಡುವೆ ಪಾಲಿಸಲೇಬೇಕಾದ ಕೆಲವು ಕಟ್ಟುನಿಟ್ಟಿನ ನಿಯಮಗಳು, ಆಯುಧ ಪೂಜೆಯ ಸಂಭ್ರಮ ಜಗಮಗಿಸುತ್ತವೆ. ಲೇಖಕರ ಅಮ್ಮ ಅಲ್ಲಿ ಆಯಾ ಆಗಿದ್ದರಿಂದ ಸರ್ಕಾರಿ ಆಸ್ಪತ್ರೆಯೊಂದಿಗಿನ ಒಡನಾಟವನ್ನು ತುಂಬಾ ಆಪ್ಯಾಯಮಾನ ‌ರೂಪದಲ್ಲಿ ವಿವರಿಸಿದ್ದಾರೆ.

ಒಟ್ಟಾರೆ ಹೇಳುವುದಾದರೆ, ಒಂದಕ್ಕಿಂತ ಮತ್ತೊಂದು ಪ್ರಬಂಧವು ಭಾವಗೀತಾತ್ಮಕ ರೂಪದಲ್ಲಿ ಗದ್ಯ ಪದ್ಯ ಮಿಶ್ರಿತ ಶೈಲಿಯಂತೆ ಜನ್ಮ ತಳೆದಿದ್ದು ಅದ್ಭುತವಾದ ಮನಮೋಹಕವಾದ ಮತ್ತು ಮನಸೆಳೆವ ಸೊಗಸಾದ ನಿರೂಪಣೆಯನ್ನು ಅಲ್ಲಿಯೇ ಓದಿ ತಿಳಿಯಬೇಕು. ಲೇಖಕರು ಅನುಭವಿಸಲು ಕಷ್ಟ ಕೋಟಲೆಗಳನ್ನು ಲಲಿತಪ್ರಬಂಧವಾಗಿಸುವ ಪ್ರಯತ್ನ ಶ್ಲಾಘನೀಯ. ಈ ಬರಹಗಳು ಲೇಖಕರಾದ ಸತ್ಯನಾರಾಯಣರವರ ಸ್ಥೂಲ ಪರಿಚಯವನ್ನು ಮಾಡಿಕೊಡುತ್ತವೆ. ಇವು ಲೇಖಕರ ಹರಳುಗಟ್ಟಿದ ಅನುಭವವನ್ನು, ಸಾಂದರ್ಭಿಕ ಕವಿವಾಣಿಗಳನ್ನು ಗರ್ಭೀಕರಿಸಿಕೊಂಡಿವೆ. ಇಲ್ಲಿ ಲೇಖಕರು ತನ್ನನ್ನು ತಾನೇ ದರ್ಶಿಸಿ ಕೊಳ್ಳುತ್ತಾ ಅದರ ಸುತ್ತ ಹೆಣೆದ ರೋಚಕ ಮಾಲೆ ಪನ್ನೆರಳೆ. ಇದು ಲೇಖಕರ ವಿದ್ವತ್ಪೂರ್ಣ ಕೃತಿಯ ಫಲವಾಗಿ ಮೂಡಿಬಂದಿದೆ.

-ಅನುಸೂಯ ಯತೀಶ್, ಬೆಂಗಳೂರು