ಪಸಾ
![](https://saaranga-aws.s3.ap-south-1.amazonaws.com/s3fs-public/styles/medium/public/pasa.jpg?itok=8Xa0TN1h)
ಉದಯೋನ್ಮುಖ ಕಾದಂಬರಿಗಾರ್ತಿ ರಂಜನೀ ಕೀರ್ತಿ ಅವರ ಸಂಗೀತಾತ್ಮಕ ಥ್ರಿಲ್ಲರ್ ಕಾದಂಬರಿ ‘ಪಸಾ’ ಇತ್ತೀಚೆಗೆ ಬಿಡುಗಡೆಯಾಗಿದೆ. ಕಾದಂಬರಿಯು ಅತ್ಯಂತ ರೋಚಕವಾಗಿ ಸಾಗುತ್ತಾ, ಎಲ್ಲಿಯೂ ಬೋರ್ ಹೊಡೆಸದೇ ಮುಂದುವರಿಯುತ್ತದೆ. ಈ ಕಾದಂಬರಿಯ ಕುರಿತಾಗಿ ನಾಡಿನ ಹಿರಿಯ ಕವಿ ಎಚ್ ಎಸ್ ವೆಂಕಟೇಶಮೂರ್ತಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಮತ್ತು ಈ ಕೃತಿಗೆ ಬೆನ್ನುಡಿಯನ್ನು ಬರೆದು ಲೇಖಕಿಯ ಬೆನ್ನು ತಟ್ಟಿದ್ದಾರೆ. ಅವರು ಬೆನ್ನುಡಿಲ್ಲಿ ಬರೆದ ವಾಕ್ಯಗಳು ನಿಮ್ಮ ಓದಿಗಾಗಿ…
‘ಪಸಾ' ರಂಜನೀ ಕೀರ್ತಿ ಅವರ ರೋಚಕ ಕಿರು ಕಾದಂಬರಿ. ಕಥನದ ವೇಗ ಮತ್ತು ಅನಿರೀಕ್ಷಿತ ತಿರುವುಗಳು ಈ ಕೃತಿಯ ಓದನ್ನು ಒಂದು ತ್ರಿಲಿಂಗ್ ಅನುಭವವಾಗಿಸುತ್ತವೆ. ಪ್ರಖ್ಯಾತ ಶಾಸ್ತ್ರೀಯ ಸಂಗೀತ ವಿದ್ವಾಂಸ ಸಾರಂಗಪಾಣಿಶಾಸ್ತ್ರಿಗಳು ಒಮ್ಮೆಗೇ ಕಾಣೆಯಾಗುವುದು, ಅವರಿಗೆ ಪರಮಾಪ್ತರಾದ ಸಂಗೀತ ಮತ್ತು ರತ್ನಾಕರ ಗುರುಗಳ ಶೋಧದಲ್ಲಿ ತೊಡಗುವದು ಕಾದಂಬರಿಗೆ ರೋಮಾಂಚಕವಾದ ಆರಂಭವನ್ನು ಕಲ್ಪಿಸುತ್ತದೆ.
ಅಮೆರಿಕಾದಲ್ಲಿರುವ ಗೆಳೆಯರು ಈ ಶೋಧನೆಯಲ್ಲಿ ತೊಡಗಿಕೊಳ್ಳುತ್ತಾರೆ. ಮುಂದೆ ಕಾದಂಬರಿ ಅಮೆರಿಕ ಮತ್ತು ಭಾರತದ ನಿಗೂಢ ವನ್ಯಪ್ರದೇಶದಲ್ಲಿ ಸಮಾನಾಂತರವಾಗಿ ಸಾಗುತ್ತದೆ. ಸಂಗೀತ ಮತ್ತು ರತ್ನಾಕರನಿಗೆ ಮಾರ್ಗದರ್ಶಿಯಾಗಿ ಒದಗುವ ಹಳ್ಳಿಯ ತರುಣ ಮಾರ ಸ್ವತಃ ಜಾನಪದ ಗಾಯಕ. ಹೀಗೆ ಶೋಧದಲ್ಲಿ ತೊಡಗುವ ಪಾತ್ರಗಳೆಲ್ಲಾ ಸಂಗೀತ ಬಲ್ಲವರು. ಗುರುಗಳ ಹುಡುಕಾಟದ ನಡುವೆ ಸೂಕ್ಷ್ಮವಾದ ಸಂಗೀತದ ಚರ್ಚೆಯೂ ಕೃತಿಗೆ ಭಾರವಾಗದಂತೆ ಸಹಜವಾಗಿ ನಡೆಯುತ್ತದೆ.
(ಲೇಖಕಿ ರಂಜನಿಯವರೂ ಸ್ವತಃ ಸಂಗೀತಗಾರ್ತಿ!). ಶೋಧದಲ್ಲಿ ಒದಗುವ ಚಿಹ್ನೆಗಳೂ ರಾಗಾಧಾರಿತವೇ. ಹಾಗಾಗಿ ಇದೊಂದು ಸಂಗೀತಾತ್ಮಕ ರೋಚಕ ತ್ರಿಲ್ಲರ್. ಕಾದಂಬರಿಯ ಕೊನೆಯವರೆಗೂ ಉಸಿರು ಬಿಗಿ ಹಿಡಿದು ಓದಬೇಕಾಗುತ್ತದೆ. ಇಂತಹ ರೋಮಾಂಚಕ ಸಾಹಸಮಯ ಶೋಧಕ ಕೃತಿಗಾಗಿ ರಂಜನಿ ಕೀರ್ತಿ ಅವರನ್ನು ಅಭಿನಂದಿಸುತ್ತೇನೆ.” ಈ ಪುಟ್ಟ ಕಾದಂಬರಿಯನ್ನು ಕೈಗೆತ್ತಿಕೊಂಡರೆ ಓದಿ ಮುಗಿಸುವ ತನಕ ಕೆಳಗಿಡಲು ಮನಸ್ಸಾಗದು.