ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೯)

ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೯)

ಬರಹ

*****ಭಾಗ ೯

ಈ ಮುಂಚೆಯೇ ವಾತಾಪಿಯಲ್ಲಿದ್ದಾಗ ಮಹಾಮಂತ್ರಿಗಳು ಒಂದು ದಿನ ಬಂದು "ಅರಸ ಅಯ್ಯವೊಳೆಯಲ್ಲಿ ನಿರ್ಮಿಸುತ್ತಿರುವ ದೇವಾಲಯದ ಬಗ್ಗೆ ನಿನಗೆ ತಿಳಿದೇ ಇದೆ. ಅರಸನಿಗೆ ಅವನ ಮುದ್ರೆ ಇತಿಹಾಸದ ಮೇಲೆ ಬೀಳಬೇಕೆಂಬ ಇಚ್ಛೆ. ಹಾಗಾಗಿ ಆ ದೇವಾಲಯದಲ್ಲಿ ಒಂದು ಶಾಸನ ಇರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅರಸನ ಕುಲ, ಹೆಸರು, ದಿನಾಂಕ, ಶೌರ್ಯ, ದಿಗ್ವಿಜಯ, ಹಾಗು ಈಗಿನ ಕಾಲದ ವಿವರಗಳನ್ನು ಬರುವ ಪೀಳಿಗೆಗಳಿಗೆ ತಿಳಿಸುವಂತಹ ಶಾಸನವಾಗಬೇಕು. ಇಂತಹ ಪ್ರತಿಯೊಂದನ್ನು ಸಿದ್ಧ ಗೊಳಿಸು. ನಮ್ಮ ಹಾಗು ಅರಸನ ಸಲಹೆಯ ಮೇರೆಗೆ ಅದನ್ನು ನಂತರ ತಿದ್ದೋಣ" ಎಂದು ಹೇಳಿದ್ದರು. ನಾನು ಅಂತಹ ಒಂದು ಪ್ರತಿಯನ್ನು ನಿಯೋಜಿಸಿ, ಮಹಾಮಂತ್ರಿ, ಅರಸ ಹಾಗು ಉಳಿದ ನಿಪುಣರ ಸಲಹೆಮೇರೆಗೆ ಅದನ್ನು ತಿದ್ದಿ ಸಿದ್ಧಪಡಿಸಿದೆ. ಈಗ ಆ ಪ್ರತಿಯನ್ನು, ಕೆಲವು ಬದಲಾವಣೆಗಳೊಂದಿಗೆ, ರವಿಕೀರ್ತಿಯು ತಾವು ನಿರ್ಮಿಸಿದ್ದ ದೇವಾಲಯದ ಭಿತ್ತಿಗಳ ಮೇಲೆ ಷಟ್ಪದಿಗಳ ರೂಪದಲ್ಲಿ ಕೆತ್ತಿದ್ದರು. ಆ ಶಾಸನದ ಸರಳ ಭಾಷೆಯ ಸಾರಾಂಶ ಹೀಗಿತ್ತು:

ಜನನ, ಮುಪ್ಪು, ಸಾವುಗಳು ಬಾರದ, ಜ್ಞಾನ ಸಾಗರದಲ್ಲಿ ಇಡೀ ಜಗತ್ತನ್ನೇ ದ್ವೀಪದ ಹಾಗೆ ತೋರುವ ಜಿನೇಂದ್ರನಿಗೆ ಜಯವಾಗಲಿ

ಈ ಪೃಥ್ವಿಗೇ ಆಭರಣಗಳಂತಿರುವ ಪುರುಷರತ್ನಗಳನ್ನು ಹೆತ್ತ ವಿಶಾಲ ಸಾಗರದಂತಹ ಚಾಳುಕ್ಯ ವಂಶಕ್ಕೆ ಜಯವಾಗಲಿ

ಪದವಿ ನೋಡದೆ ವೀರರಿಗೆ ಹಾಗು ವಿದ್ಯಾವಂತರಿಗೆ ವರ-ಸನ್ಮಾನಗಳನ್ನು ನೀಡುವ ಸತ್ಯಾಶ್ರಯನಿಗೆ ಜಯವಾಗಲಿ

ದಿಗ್ವಿಜಯವನ್ನು ಆಶಿಸುವ, ಭೂಪ್ರಿಯರೆಂಬ ಬಿರುದು ಹೊರಲು ಸಮರ್ಥರಾಗಿರುವ, ಈ ವಂಶದ ವೀರರು ಹತರಾದ ನಂತರ

ಚಾಳುಕ್ಯ ವಂಶದಲ್ಲಿ ಜನಿಸಿದ ಜಯಸಿಂಹ-ವಲ್ಲಭನೆಂಬ ರಾಜನು ಅಶ್ವ, ಪಧಾತಿ, ಕುಂಜರಗಳು ಖಡ್ಗಕ್ಕೆ ತತ್ತರಿಸಿ ಬೀಳುತ್ತಿದ್ದ ಯುದ್ಧದಲ್ಲಿ ತನ್ನ ವೀರ್ಯದಿಂದ ಚಂಚಲ ಜಯಲಕ್ಷ್ಮಿಯನ್ನು ಒಲಿಸಿಕೊಂಡನು

ಅವನಪುತ್ರನಾದ ರಣರಾಗನು ದಿವ್ಯ ತೇಜಸ್ಸುಳ್ಳ ಜಗದೊಡೆಯ ಅತಿಮಾನುಷ ಶಕ್ತಿಯುಳ್ಳವನಾಗಿರುವುದು ಅವನು ಮಲಗಿದಾಗಲೂ ಜನರಿಗೆ ತಿಳಿಯುತ್ತಿತ್ತು.

ಇವನ ಪುತ್ರ ಪುಲಿಕೇಶಿ - ಚಂದ್ರನ ರೂಪುವುಳ್ಳವನಾಗಿ ಜಯಲಕ್ಷ್ಮಿಯ ಪ್ರಿಯನಾದರೂ ವಾತಾಪೀನಗರದ ಒಡೆಯನಾದ

ಈತನು ಅನುಸರಿಸಿದಂತೆ ಭೂಪತಿಗಳು ಸಾಗುವ ತ್ರಿ-ಕರ್ಮಗಳ ಮಾರ್ಗವನ್ನು ಇಂದಿಗೂ ಯಾರೂ ಪಾಲಿಸಲಾರರು! ಈತನು ಅಶ್ವಮೇಧಯಾಗ ಮಾಡಿದಾಗ ಈತನು ಮಿಂದ ನೀರು ನೆಲದಮೇಲೆ ಬಿದ್ದು ಭೂಮಿಯೇ ಹೊಳೆಯುತ್ತಿತ್ತು.

ಇವನ ಪುತ್ರನಾದ ಕೀರ್ತಿವರ್ಮನು ನಳ, ಮೌರ್ಯ ಕದಂಬರನ್ನು ಸದೆಬಡೆದು ಪರಸ್ತ್ರೀಯನ್ನು ಎಂದೂ ಸ್ಮರಿಸದಿದ್ದರೂ ವೈರಿಯ ಅದೃಷ್ಟಕ್ಕೆ ಆಕರ್ಷಿತನಾಗುತ್ತಿದ್ದ

ಇವನು ಯುದ್ಧದಲ್ಲಿ ತನ್ನ ಬಾಹುಬಲದಿಂದ ಜಯಲಕ್ಷ್ಮಿಯನ್ನು ತನ್ನವಳಾಗಿಸಿಕೊಂಡು, ಬಲಿಷ್ಠ ಕುಂಜರದಂತಹವನಾಗಿ ವಿಶಾಲವಾಗಿ ಬೆಳೆದಿದ್ದ ಕದಂಬ ವೃಕ್ಷಗಳನ್ನು ಕೆಡವಿದನು.

ಇವನು ದೇವೇಂದ್ರನನ್ನೇ ಜೈಸುವ ಇಚ್ಛೆ ಹೊಂದಿರಲು ಇವನ ಕಿರಿಯ ಸಹೋದರನಾದ ಮಂಗಳೇಶ ಅರಸನಾಗಿ, ತನ್ನ ಯುದ್ಧದ ಕುದುರೆಯ ಧೂಳಿನಿಂದಲೇ ಪೂರ್ವ ಹಾಗು ಪಶ್ಚಿಮಸಾಗರಗಳ ತೀರಗಳಲ್ಲಿ ಬಿಡಾರ ಊರಿ ಅವರೆಡಕ್ಕೂ ಕಮಾನು ಕಟ್ಟಿ

ಯುದ್ಧಭೂಮಿಯಲ್ಲೇ ಕಳಚೂರಿಗಳ ಅದೃಷ್ಟದೇವತೆಯನ್ನು ವಧುವಾಗಿ ಸ್ವೀಕರಿಸಿ ನೆರೆದಿದ್ದ ವೈರಿಯ ಕುಂಜರಬಲದ ಅಂಧಕಾರವನ್ನು ನೂರಾರು ಖಡ್ಗಗಳ ಹೊಳಪಿನ ದೀಪಗಳಿಂದ ಹೋಗಲಾಡಿಸಿ

ನಂತರ ರೇವತೀ ದ್ವೀಪವನ್ನು ವಶಪಡಿಸಿಕೊಳ್ಳಲಿಚ್ಛಿಸಿದಾಗ ಆ ದ್ವೀಪಕ್ಕೆ ಮುತ್ತಿಗೆಯಿಟ್ಟ, ಧ್ವಜ-ಲಾಂಛನ-ಪತಾಕೆಗಳನ್ನು ಹೊತ್ತ ಇವನ ಸೈನ್ಯದ ಪ್ರತಿಬಿಂಬ ಸಮುದ್ರಜಲದೊಳಗೆ ಕಾಣಿಸುತ್ತಿರಲು ವರುಣನ ಆಜ್ಞೆಮೇರೆಗೆ ಬಂದ ಅವನ ಬಲದಂತೆ ತೋರುತ್ತಿತ್ತು.

ಇವನ ಹಿರಿಯ ಭ್ರಾತೃವಿನ ಪುತ್ರನಾದ, ನಾಹುಶನ ತೇಜಸ್ಸುಳ್ಳ, ರಾಜ್ಯಲಕ್ಷ್ಮಿಯ ಪ್ರಿಯನಾದ ಪುಲಿಕೇಶಿ ಎಂಬ ಹೆಸರಿನ ಯುವಕನು ಚಿಕ್ಕಪ್ಪನಲ್ಲಿ ತನ್ನ ಬೆದರಿಕೆಯಿಂದ ತನ್ನೆಡೆ ಮತ್ಸರ ಭಾವ ಕಂಡು ವನವಾಸದಲ್ಲಿರಲು

ಮಂಗಳೇಶನ ರಾಜಯೋಗವು ಇವನು ಶೇಖರಿಸಿದ ಹಿತೈಷಿಗಳ ಉಪದೇಶಗಳಿಂದ ಎಲ್ಲೆಡೆ ಕುಂದುತ್ತಿದ್ದು, ರಾಜ್ಯಲಕ್ಷ್ಮಿಯನ್ನು ಅವನ ಮಗನಿಗೆ ದೊರಕಿಸುವ ಯತ್ನವನ್ನೂ, ಪ್ರಾಣವನ್ನೂ ಪರಿತ್ಯಜಿಸಿ

ವೈರಿಗಳ ಅಂಧಕಾರದಿಂದ ಸುತ್ತುವರಿಯಲ್ಪಟ್ಟಿದ್ದ ಇಡೀ ಜಗವೇ ಭ್ರಮರಗಳ ಹಿಂಡಿನಂತೆ ಕಾರ್ಮೋಡಗಳು ಕವಿದ ಆಕಾಶದಲ್ಲಿ ಪತಾಕೆಗಳ ಮಿಂಚುತ್ತಿದ್ದ ಸೌದಾಮಿನಿಯು ಮಾರುತಗಳಿಂದ ಅಡಸುತ್ತಿದ್ದಂತೆ, ಇವನ ಅಪ್ರತಿಹತ ತೇಜಸ್ಸಿನ ಕಿರಣಗಳಿಂದ ಆಕ್ರಮಿಸಿದಂತೆ ಉಜ್ವಲವಾಗಿ

ಅವಕಾಶ ದೊರಕಿದಾಗ ಅಪ್ಪಯಿಕ ಹಾಗು ಗೋವಿಂದ ಎಂಬ ಹೆಸರುಳ್ಳವರು ತಮ್ಮ ಕುಂಜರ ಬಲದೊಡನೆ ಬಂದು ಭೈಮರಾಠಿಯ ಉತ್ತರದ ದೇಶವನ್ನು ಆಕ್ರಮಿಸಿದಾಗ ಇವನ ಸೇನೆಯ ಬಲದಿಂದ ಒಬ್ಬ ಭಯದ ರುಚಿಯನ್ನು ಕಂಡು, ಮತ್ತೊಬ್ಬ ತಾನು ಸಲ್ಲಿಸಿದ ಸೇವೆಯಿಂದ ಪಾರಿತೋಷಿಕವನ್ನು ಪಡೆದನು.

ಹಂಸ ಪಕ್ಷಿಗಳು ವರದಾ ತರಂಗಗಳಮೇಲೆ ನಲಿಯುವ ಕಾಂಚಿಯುಳ್ಳ, ದೇವನಗರದಂತೆ ಸಮೃದ್ಧವಾದ, ವನವಾಸಿಗೆ ಇವನು ಮುತ್ತಿಗೆಯಿಟ್ಟಾಗ, ಭೂಮಿಯಮೇಲಿದ್ದ ಕೋಟೆಯು ಎಲ್ಲೆಡೆ ಇವನ ಸೈನ್ಯದ ಸಾಗರದಿಂದ ಸುತ್ತುವರಿಯಲ್ಪಟ್ಟಾಗ ವೀಕ್ಷಕರಿಗೆ ಅಬ್ಧಿಯಮೇಲಿರುವ ದುರ್ಗದಂತೆ ಕಾಣಿಸುತ್ತಿತ್ತು

ಪೂರ್ವಕಾಲದಲ್ಲಿ ಗಂಗರು ಹಾಗು ಅಲೂಪರು ಏಳು ಪಾಪಗಳನ್ನು ತ್ಯಜಿಸಿ ಸಂತುಷ್ಟರಾಗಿದ್ದರೂ, ಇವನ ಘನತೆಯಿಂದ ಪರಂತಪರಾಗಿ ಇವನ ಸಾಮೀಪ್ಯದ ಮಧುವಿನಿಂದ ಮದವೇರಿಸಿಕೊಂಡಿರುತ್ತಿದ್ದರು.

ಕೊಂಕಣದಲ್ಲಿ ಇವನು ವಿಹಿಸಿದ ಸೈನ್ಯದ ಸಾಗರ ಉಲ್ಲೊಲಗಳು ಮೌರ್ಯರ ಸಣ್ಣ ಸರೋವರದ ತರಂಗಗಳನ್ನು ಕೊಚ್ಚಿಸಿಬಿಟ್ಟವು

ಆನೆಗಳ ಹಿಂಡಿನಂತೆ ಕಾಣಿಸಿಕೊಳ್ಳುವ ನೂರಾರು ನೌಕೆಗಳ ಸಹಾಯದಿಂದ, ಪುರ ವಿನಾಶಕನಂತೆ, ಪಶ್ಚಿಮ ಸಾಗರದ ಅದೃಷ್ಟದೇವತೆಯಾದ ಪುರಿಗೆ ಮುತ್ತಿಗೆಯಿಟ್ಟಾಗ, ಆಕಾಶವು ಎಳೆಯ ನೀಲಾಬ್ಜ ನೀಲಲೊಹಿತವರ್ಣವಾಗಿ ಕಾರ್ಮೋಡಗಳ ಪದರುಗಳಿಂದ ಕವಿದು ಸಾಗರದಂತೆ ಕಾಣಿಸುತ್ತಿದ್ದು ಸಾಗರವು ನಾಭದಂತೆ ಕಾಣಿಸುತ್ತಿತ್ತು

ಇವನ ಕಾಂತಿಯಿಂದ ಪರಾಜಯ ಹೊಂದಿದ ಲತ-ಮಾಲವ-ಗುರ್ಜರರು ಇವನ ಬಲಕ್ಕೆ ಸೋತ ಸಾಮಂತರ ಆಚಾರ ಗುಣಗಳಿಗೆ ಗುರುಗಳಾದರು.

ಅನಂತ ದ್ರವ್ಯ ಹಾಗು ಪರಾಕ್ರಮವುಳ್ಳ ಸಾಮಂತ ರಾಜರುಗಳ ಮುಕುಟಗಳ ರತ್ನಗಳ ಕಿರಣಗಳಿಂದ ಚುಂಬಿಸಲ್ಪಡುತ್ತಿದ್ದ ರಾಜೀವ ಚರಣಗಳುಳ್ಳ ಹರ್ಷನು ಇವನ ಕಾರಣದಿಂದ ತನ್ನ ಹರ್ಷವನ್ನು ಕಳೆದುಕೊಂಡು, ಯುದ್ಧದಲ್ಲಿ ತನ್ನ ಕುಂಜರಬಲದ ಹತವನ್ನು ಕಂಡು ಭಯ-ಭೀಬತ್ಸಗಳನ್ನು ಗ್ರಹಿಸಿದ.

ಅಪಾರ ಸೈನ್ಯಗಳೊಡಗೂಡಿದ ಇವನು, ರೇವಾ ಮರಳು ತೀರಗಳು ಇವನ ಕಾಂತಿಯಿಂದ ಇನ್ನೂ ಹೆಚ್ಚು ಪ್ರಜ್ವಲಿಸಿದ ಕಾರಣ, ಘನತೆಯ ಕೊರತೆಯೇ ಇಲ್ಲದ ವಿಂಧ್ಯಾ ಪರ್ವತ ಪ್ರದೇಶದಲ್ಲಿ ಭೂಮಂಡಲವನ್ನಾಳುತ್ತಿರಲು, ಇವನ ಆನೆಯ ಬಲ ಅದಕ್ಕೆ ಸಾಟಿಯಾಗಿ ಅದು ವರ್ಜ್ಯವಾಯಿತು.

ದೇವೇಂದ್ರನಿಗೆ ಸಮಾನನಾಗಿ, ನಿಯಮದ ಪ್ರಕಾರ ಮೂರೂ ಶಕ್ತಿಗಳನ್ನು ಸಂಯೋಜಿಸಿದ ಇವನು, ತನ್ನ ಅಭಿಜಾತ ಹಾಗು ಅನ್ಯ ಅಮೂಲ್ಯ ಗುಣಗಳಿಂದ ತಲಾ ತೊಂಬತ್ತೊಂಬತ್ತು ಸಹಸ್ರ ಗ್ರಾಮಗಳ ಮೂರು ಮಹಾರಾಷ್ಟ್ರಕಗಳ ಆಧೀನ ಹೊಂದಿದನು.

ಪ್ರಜೆಗಳ ಜೀವನದ ಮೂರು ಅರ್ಥಗಳ ಸಾಧನೆಯಿಂದ, ಅವರ ಉತ್ತಮ ನಡತೆಯಿಂದ ಭೂಮಿಯ ಉಳಿದ ಅರಸರ ಸೊಕ್ಕು ಮುರಿದಿದ್ದ ಕಳಿಂಗ-ಕೋಸಲರು ಇವನ ಬಲದಿಂದ ಭೀತಿಯನ್ನು ಕಾಣುವಂತಾದರು

ಇವನಿಂದ ಪಿಷ್ಠಿತವಾದ ಪಿಷ್ಠಪುರ ಕಷ್ಟ ಗ್ರಹಣದ ದುರ್ಗವಾಗಲಿಲ್ಲ; ಅತಿಶಯವಾಗಿ ಕಲಿಯುಗದ ಪಂಥಗಳು ಇವನಿಗೆ ನಿರ್ಗ್ರಹಣ್ಯವಾದವು.

ಇವನಿಂದ ನಾಶಮಾಡಲ್ಪಟ್ಟ ಕುನಲದ ನೀರು ಬಹುಶಸ್ತ್ರಗಳಿಂದ ಹತರಾದವರ ರಕ್ತದ ವರ್ಣ ಹೊಂದಿ ಭೂಮಿಯು ಹತ ಗಜಗಳ ಅಂಗಗಳಿಂದ ಆವರಿಸಲ್ಪಟ್ಟು ಮೋಡತುಂಬಿದ ಸಂಧ್ಯಾಕಾಲದ ಅಂಬರದಲ್ಲಿ ಚೆಲ್ಲಿದ ಕೆಂಪು ಪ್ರಕಾಶದಂತಿತ್ತು.

ಅಕಳಂಕಿತ ಶಂಖಗಳು, ನೂರಾರು ಧ್ವಜಗಳು, ಛತ್ರಗಳು ಹಾಗು ಅಂಧಕಾರವನ್ನೇ ಹೊತ್ತು ಹೊರಟ, ಶೌರ್ಯ-ವೀರ್ಯಗಳಿಂದ ವೈರಿಯನ್ನು ಸದೆಬಡೆದ ಇವನ ಆರು ವರ್ಗದ ಸೈನ್ಯದೊಡಗೂಡಿ, ಇವನ ಸಾರ್ವಭೌಮತ್ವವನ್ನು ಎದುರಿಸಿದ ಪಲ್ಲವರಾಜನು ಇವನ ಸೈನ್ಯದ ಧೂಳಿನಿಂದ ಮರೆಯಾಗಿ ಕಾಂಚೀಪುರದ ಭಿತ್ತಿಗಳ ಹಿಂದೆ ಕಾಣೆಯಾಗುವಂತೆ ಮಾಡಿದನು.

ಇವನು ಚೋಳರನ್ನು ಜೈಸಲು ಹೊರಟಾಗ, ವೇಗವಾಗಿ ಚಲಿಸುವ ಮೀನುಗಳನ್ನೇ ಕಣ್ಣುಗಳಾಗಿ ಉಳ್ಳ ಕಾವೇರಿಯ ಪ್ರವಾಹವು ಇವನ ಆನೆಯ ಅಕ್ಷೋಹಿಣಿಯಿಂದ ತಡೆಗಟ್ಟಲ್ಪಟ್ಟು ಸಮುದ್ರದೊಡನೆ ಸಂಪರ್ಕವನ್ನೇ ಕಳೆದುಕೊಂಡಿತು.

ಅಲ್ಲಿ ಚೋಳ, ಚೇರ, ಪಾಂಡ್ಯರನ್ನು ಸಮೃದ್ಧಗೊಳಿಸಿದರೂ, ತಪ್ತ ಕಿರಣಗಳುಳ್ಳ ದಿವಾಕರನಾಗಿ ಪಲ್ಲವರ ಸೈನ್ಯವನ್ನು ನಾಶಮಾಡಿದನು.

ಸತ್ಯಾಶ್ರಯನಾದ ಇವನು, ಶಕ್ತಿ, ಯುಕ್ತಿ, ನಿಪುಣತೆ ಹಾಗೂ ಹಿತವಚನಗಳ ಅದೃಷ್ಟ ಹೊಂದಿದ ಇವನು, ಸುತ್ತ-ಮುತ್ತಲಿನ ರಾಜ್ಯಗಳನ್ನು ಜೈಸಿ, ಅಲ್ಲಿಯ ಸಾಮಂತರನ್ನು ಸನ್ಮಾನ ಸಹಿತ ಕಳುಹಿಸಿ, ದೇವ ಬ್ರಾಹ್ಮಣರನ್ನು ಆದರಿಸಿ, ವಾತಾಪಿ ನಗರವನ್ನು ಸೇರಿ, ಅಂಬುಧಿಯನ್ನೇ ಕಂದಕವಾಗಿ ಹೊಂದಿದ ಭೂಮಿಯನ್ನು ಒಂದೇ ನಗರದಂತೆ ಆಳುತ್ತಿದ್ದಾನೆ.

ಈಗ ಮಹಾಭಾರತ ಯುದ್ಧಾನಂತರ ಮೂರು ಸಹಸ್ರ ಏಳು ಶತಕ ಮೂವತ್ತೈದು ಸಂವತ್ಸರಗಳು ಕಳೆದಿರಲು

ಮತ್ತು ಕಲಿಯುಗದಲ್ಲಿ ಶಕ ಚಕ್ರವರ್ತಿಗಳ ಐದು ಶತಕ ಐವತ್ತಾರು ವರ್ಷಗಳು ಕಳೆದಿರಲು

ಸಮಸ್ಥ ಉತ್ತಣಗತಗಳನ್ನು ಹೊಂದಿದ ಜಿನೇಂದ್ರನ ಈ ಶಿಲಾಗೃಹವು ಮೂರು ಸಾಗರಗಳನ್ನಾಳುವ ಸತ್ಯಾಶ್ರಯನ ಅನುಗ್ರಹಕ್ಕೆ ಪಾತ್ರನಾಗಿರುವ ಪಂಡಿತ ರವಿಕೀರ್ತಿಯಿಂದ ಕಟ್ಟಲ್ಪಡಲಾಗಿದೆ.

ಈ ಶಾಸನದ ಲಿಪಿಕಾರ ಹಾಗು ಮೂರು ಲೋಕದಲ್ಲಿ ಶ್ರೇಷ್ಠವಾದ ಜಿನೇಂದ್ರನ ಈ ಆಲಯದ ನಿರ್ಮಾಣಕಾರಿ ಪಂಡಿತ ರವಿಕೀರ್ತಿ

ವಿವೇಕದಿಂದ, ಶಿಲೆಗಳಿಂದ ಕಟ್ಟಲ್ಪಟ್ಟ ಜಿನೇಂದ್ರನ ಈ ಆಲಯವನ್ನು, ತಮ್ಮ ನವ ವಸ್ತು ಆಚರಣೆಗಾಗಿ ಸಂಯೋಜಿಸಿರುವ, ತಮ್ಮ ಕಾವ್ಯ ದಕ್ಷತೆಯಿಂದ ಕಾಳಿದಾಸ ಭಾರವಿಯರ ಸಮಾನ ಕೀರ್ತಿ ಹೊಂದಿರುವ ಆ ರವಿಕೀರ್ತಿಗೆ ಜಯವಾಗಲಿ

ಇಷ್ಟು ಓದಿ ನನಗೆ ಮತ್ತೊಮ್ಮೆ ನಾವು ಪುಲಿಕೇಶಿ ಅರಸನ ನಾಮ-ದಿನಾಂಕಗಳು ಬರುವ ಪೀಳಿಗೆಗಳಿಗೆ ತಿಳಿಯುವ ಹಾಗೆ ಮಾಡುವ ನಮ್ಮ ಧ್ಯೇಯದಲ್ಲಿ ಯಶಸ್ವಿಯಾದವೆಂದೆನಿಸಿತು. ದಿನವು ನಿಷೆಗೆ ತಿರುಗುತ್ತಿದ್ದಂತೆ ಸಮಾರಂಭವು ಮುಕ್ತಾಯವಾಯಿತು. ಅಂದು ಅಯ್ಯವೊಳೆಯಲ್ಲಿಯೇ ತಂಗಿದ್ದು, ಮಾರನೆಯ ದಿನ ಎದ್ದು ವಾತಾಪಿ ನಗರದ ದಿಕ್ಕಿನಲ್ಲಿ ಯಾಣ ಬೆಳೆಸಿ, ಪ್ರಸಂಗರಹಿತವಾಗಿ ರಾಜಧಾನಿಯನ್ನು ಸೇರಿದೆವು.