"ಪ್ರಥಮವಾಗಿ ಹಾನಿ ಮಾಡದಿರು"
"ಪ್ರಥಮವಾಗಿ ಹಾನಿ ಮಾಡದಿರು"
ನಮ್ಮ ಪ್ರಾಚೀನ ವೈದ್ಯಕೀಯ ಪದ್ಧತಿಯಾದ ಆಯುರ್ವೇದದ ಗ್ರಂಥಗಳಲ್ಲಿ ಸಂಸ್ಕೃತದ ಸುಂದರ ನುಡಿಗಟ್ಟುಗಳನ್ನು ಕಾಣಬಹುದಾದಂತೆ, ಆಧುನಿಕ ವೈದ್ಯಕೀಯ ಪದ್ಧತಿಯ ಆರಂಭಿಕ ಗ್ರಂಥಗಳಲ್ಲಿ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಯ ನುಡಿಗಟ್ಟುಗಳನ್ನು ಕಾಣಬಹುದು. ಅಂತಹ ಅನೇಕ ನುಡಿಗಟ್ಟುಗಳಲ್ಲಿ ನನಗೆ ಬಹಳ ಮೆಚ್ಚುಗೆಯಾದದ್ದು ಮತ್ತು ಬಹಳ
ಅರ್ಥಗರ್ಭಿತವಾದದ್ದೆಂದರೆ ಕೇವಲ ಮೂರು ಶಬ್ದಗಳಿರುವ ಈ ನುಡಿ "Primum non nocere" . ಲ್ಯಾಟಿನ್ ಭಾಷೆಯಲ್ಲಿರುವ ಈ ನುಡಿಗಟ್ಟಿನ ಸರಳ ಅರ್ಥ "ಪ್ರಥಮವಾಗಿ ಹಾನಿ ಮಾಡದಿರು" ಎಂದು.
ಈ ನುಡಿಗಟ್ಟಿನ ಉತ್ಪತ್ತಿಯ ಬಗ್ಗೆ ನಮಗೆ ಖಚಿತವಾಗಿ ತಿಳಿದಿಲ್ಲ. ಆಧುನಿಕ ವೈದ್ಯಕೀಯ ಪದ್ಧತಿಯ ಪಿತಾಮಹನೆನಿಸಿರುವ ಹಿಪೋಕ್ರಿಟಿಸ್ ನ (ಕ್ರಿ.ಪೂ. ೪೬೦ ರಿಂದ ೩೭೦) ಕಾಲದಷ್ಟು ಪ್ರಾಚೀನವಾದುದು ಎಂದು ಕೆಲವರು ವಾದಿಸಿದರೆ, ಇನ್ನೂ ಕೆಲವರು ಇದು ಕೇವಲ ಎರಡು ಶತಮಾನಗಳಷ್ಟು ಹಳೆಯದೆಂದು ಪ್ರತಿಪಾದಿಸಿದ್ದಾರೆ. ಈ ನುಡಿಗಟ್ಟು ಹೊಮ್ಮಿಸುವ ಭಾವಕ್ಕೆ ಮಾತ್ರ ಪ್ರಾಧಾನ್ಯತೆ ನೀಡುವುದಾದರೆ, ಇದು ಹಿಪೋಕ್ರಿಟಿಸ್ ನ ಕಾಲಕ್ಕೇ ಹೋಗುತ್ತದೆ. ಇಂದಿನ ವೈದ್ಯಕೀಯ ವಿದ್ಯಾರ್ಥಿಗಳು ಸ್ವೀಕರಿಸುವ ಹಿಪೋಕ್ರಿಟಿಸ್ ಪ್ರತಿಜ್ಞಾವಿಧಿಯಲ್ಲಿ "ರೋಗಿಗೆ ಹಾನಿಮಾಡುವುದರಿಂದ ದೂರ ಇರು" ಎಂಬರ್ಥವಿರುವ ಪದಗುಚ್ಛವಿದೆಯಾದರೂ ಯಥಾವತ್ತಾಗಿ ಇದೇ ಪದಗಳಿಲ್ಲ. ಈ ನುಡಿಗಟ್ಟಿನ ಸಂದೇಶ ಪ್ರಾಚೀನ ಕಾಲದ ವೈದ್ಯರಿಗೆಷ್ಟು ಪ್ರಸ್ತುತವಾಗಿತ್ತೋ ಇಂದಿನ ವೈದ್ಯರಿಗೂ ಅಷ್ಟೇ ಪ್ರಸ್ತುತವಾಗಿದೆ. ಇದನ್ನು ವೈದ್ಯರಿಗೆ ನೀಡಿರುವ ಒಂದು ಅಪೂರ್ವ ಸಂದೇಶ, ಕಿವಿಮಾತು ಎಂದಷ್ಟಲ್ಲದೇ ಅವರಿಗೆ ನೀಡಿರುವ ನಯವಾದ ಎಚ್ಚರಿಕೆ ಎಂದೂ ಭಾವಿಸಬಹುದು. ಪ್ರತಿಯೊಬ್ಬ ವೈದ್ಯನೂ ಇದನ್ನು ಎಚ್ಚರಿಕೆ ಎಂದೇ ಭಾವಿಸಿ ಅದನ್ನು ಪಾಲಿಸಿಕೊಂಡು ಬಂದಲ್ಲಿ, ವೈದ್ಯ ಮತ್ತು ರೋಗಿಗಳ ಬಾಂಧವ್ಯ ಅನ್ಯೋನ್ಯವೆನಿಸುತ್ತದೆ. ಅಷ್ಟೇ ಅಲ್ಲ , ಈಗ ಜಾರಿಯಲ್ಲಿರುವ ಬಳಕೆದಾರರ ಕಾನೂನು (ವೈದ್ಯಕೀಯ ಸೇವೆಗೆ
ಸಂಬಂಧಿಸಿದಂತೆ) ನಮಗೆ ಬೇಕಾಗಿಯೇ ಇರುತ್ತಿರಲಿಲ್ಲ.
ವೈದ್ಯನೊಬ್ಬ ರೋಗಿಯನ್ನು ಉಪಚರಿಸುವ ಸಂದರ್ಭದಲ್ಲಿ ರೋಗಿಗೆ ಹಾನಿಯುಂಟು ಮಾಡಿರುವ ಪ್ರಕರಣಗಳು ಪ್ರಾಯಶಃ ಪ್ರಾಚೀನಕಾಲದಲ್ಲಿಯೂ ಸಂಭವಿಸಿರಬೇಕು. ಅದರಲ್ಲಿ ಬಹಳಷ್ಟು ಸಂದರ್ಭಗಳು ತಡೆಗಟ್ಟಬಹುದಾದಂಥ (preventable) ಪ್ರಕರಣಗಳಾಗಿರಬೇಕು. ಇದನ್ನು ಗಮನಿಸಿದ ಆಗಿನ ಕಾಲದ ಹಿರಿಯ ವೈದ್ಯರು ತಮ್ಮ ಕಿರಿಯರಿಗೆ ಈ ಬಗೆಯ ಹಿತನುಡಿಯನ್ನು ಹೇಳಿರಬೇಕೆನಿಸುತ್ತದೆ.
ಈ ಮೂರು ಶಬ್ದಗಳ ಪುಟ್ಟ ಸಂದೇಶದಲ್ಲಿ ಅದೆಷ್ಟು ಅರ್ಥ ಅಡಗಿದೆ ? ಪ್ರತಿಯೊಬ್ಬ ವೈದ್ಯನ ಹಿರಿಯಾಸೆ ರೋಗಿಯ ಕಾಯಿಲೆಯನ್ನು ಗುಣಪಡಿಸುವುದಾದರೆ, ರೋಗದಿಂದ ಮುಕ್ತಿಹೊಂದುವುದೇ ರೋಗಿಯ ಪರಮ ಗುರಿ. ಆದರೂ, ವಿಚಿತ್ರವೆಂದರೆ ಈ ಸಂದೇಶದಲ್ಲಿ ರೋಗನಿವಾರಣೆಗೆ ಪ್ರಥಮ ಪ್ರಾಶಸ್ತ್ಯವನ್ನು ನೀಡಿಲ್ಲ. ರೋಗಿಗೆ ಹಾನಿಯುಂಟುಮಾಡರಿದುವುದಕ್ಕೇ ಇಲ್ಲಿ ಮಹತ್ವಕೊಡಲಾಗಿದೆ. ಇದಕ್ಕೆ ಸೂಕ್ತವಾದ ಕಾರಣವಿದೆ.
ಆದಿಕಾಲದಿಂದ ಇಂದಿನವರೆಗೆ ಪ್ರತಿಯೊಬ್ಬ ವೈದ್ಯನ ಅನುಭವಕ್ಕೆ ಬಂದಿರುವಂತೆ, ಎಲ್ಲಾ ಕಾಯಿಲೆಗಳನ್ನು ಗುಣಪಡಿಸಲು ಸಾಧ್ಯವಿಲ್ಲ. ಕೆಲವೇ ಕೆಲವು ಕಾಯಿಲೆಗಳನ್ನು ಪೂರ್ತಿಯಾಗಿ ಗುಣಪಡಿಸಬಹುದು, ಬಹಳಷ್ಟನ್ನು ಹತೋಟಿಯಲ್ಲಿಡಬಹುದು ಮತ್ತು ಇನ್ನೂ ಕೆಲವು ರೋಗಗಳಿಗೆ ಯಾವುದೇ ಪರಿಹಾರವಿಲ್ಲ. ಈ ವಸ್ತುಸ್ಥಿತಿಯನ್ನು ಪ್ರತಿ ವೈದ್ಯನೂ ಮತ್ತು ರೋಗಿಯೂ ಅರಗಿಸಿಕೊಳ್ಳಬೇಕು. ವಸ್ತುಸ್ಥಿತಿ ಹೀಗಿರುವುದನ್ನು ಅರಿತೇ, ಕಾಯಿಲೆಯನ್ನು ಗುಣಪಡಿಸುವುದಕ್ಕೆ ಮಹತ್ವ ನೀಡಿಲ್ಲ. ರೋಗಿಯನ್ನು ಗುಣಪಡಿಸುವುದಕ್ಕಿಂತ ಹೆಚ್ಚಿನ ಜವಾಬ್ದಾರಿಯಿರುವುದು, ತನ್ನಿಂದಲೇ ರೋಗಿಗೆ ಯಾವ ಹಾನಿಯೂ ಉಂಟಾಗದಂತೆ ನೋಡಿಕೊಳ್ಳುವುದು.ರೋಗಿಗೆ ಯಾವುದೇ ಹಾನಿಯುಂಟು ಮಾಡಬಾರದೆಂದು ಬಯಸುವ ವೈದ್ಯನು ಅನೇಕ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕಾಗುತ್ತದೆ. ತಾತ್ವಿಕವಾಗಿ, ಚಿಕಿತ್ಸೆಯ ಸಮಯದಲ್ಲಿ ಹಲವಾರು ಮೂಲಗಳಿಂದ ರೋಗಿಗೆ ಹಾನಿ ಸಂಭವಿಸಭುದಾಗಿದೆ. ಅವೆಲ್ಲವುಗಳನ್ನು ಸರಿಯಾಗಿ ಅರಿತುಕೊಂಡು, ಆಚರಣೆಯಲ್ಲಿ ತರುವುದು ವೈದ್ಯನ ಕರ್ತವ್ಯವಾಗಿರುತ್ತದೆ.
೧. ವೈದ್ಯನಲ್ಲಿ ವೈದ್ಯಕೀಯ ಜ್ಞಾನದ ಕೊರತೆಯಿರುವುದು ಒಂದು ಮೂಲವಾಗಬಹುದು. ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗ ಪ್ರತಿಯೊಂದು ವಿಷಯದಲ್ಲಿ ಪಾಂಡಿತ್ಯ ಗಳಿಸಿಕೊಂಡಂತಹ ವೈದ್ಯನೂ ತನ್ನ ವೃತ್ತಿಯಲ್ಲಿ ಮಗ್ನನಾದಾಗ, ಹೊಸ ಆವಿಷ್ಕಾರಗಳನ್ನು ಅರಿಯಲಾಗದೇ, ಅವನ ಸೇವೆಯಲ್ಲಿ ಕೊರತೆಯುಂಟಾಗಬಹುದು. ಎಲ್ಲಾ ವಿಜ್ಞಾನಗಳಂತೆ ವೈದ್ಯ ವಿಜ್ಞಾನವೂ ನಿಂತ ನೀರಲ್ಲ. ವೈದ್ಯರಿಗೆ ವೈದ್ಯಕೀಯ ವಿಜ್ಞಾನದಲ್ಲಿನ ಹೊಸ ಆವಿಷ್ಕಾರಗಳನ್ನು ಪರಿಚಯಿಸುವುದಕ್ಕಾಗಿಯೇ "ಮುಂದುವರೆದ ವೈದ್ಯಕೀಯ ಶಿಕ್ಷಣ" ಶಿಬಿರಗಳು ಜರುಗುತ್ತಿರುತ್ತವೆ. ಆಗಾಗ್ಗೆ ಇಂತಹ ಶಿಬಿರಗಳಲ್ಲಿ ಭಾಗವಹಿಸಿ ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು ಪ್ರತಿಯೊಬ್ಬ ವೈದ್ಯನ ಕರ್ತವ್ಯವಾಗಿರುತ್ತದೆ.
೨. ಚಿಕಿತ್ಸಾ ಸಮಯದಲ್ಲಿ ವೈದ್ಯನ ದೇಹ ಸ್ಥಿತಿ ಮತ್ತು ಮನೋಸ್ಥಿತಿಯೂ ಅಜಾಗರೂಕತೆಗೆ ಕಾರಣವಾಗಬಹುದು. ಆದ್ದರಿಂದ ವೈದ್ಯನು ತನ್ನ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತಲೂ ಗಮನ ಹರಿಸಬೇಕು. ಶಿಸ್ತಿನ ಜೀವನ ನಡೆಸುವುದರಿಂದ ಮತ್ತು ಮಾದಕ ದ್ರವ್ಯಗಳ ಸೇವನೆಯಿಂದ ದೂರವಿರುವುದರಿಂದ ತನ್ನ ಮಾನಸಿಕ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು.
೩. ಚಿಕಿತ್ಸೆಯಲ್ಲಿ ಬಳಸುವ ಉಪಕರಣಗಳೂ ಸುಸ್ಥಿತಿಯಲ್ಲಿರದೇ ಇರುವುದು, ಸೂಕ್ತ ತರಬೇತಿಯನ್ನು ಪಡೆಯದ ಸಹಾಯಕರನ್ನು ಅವಲಂಬಿಸುವುದೂ ಕೂಡ ಅಚಾತುರ್ಯಗಳಿಗೆ ಕಾರಣವಾಗಬಹುದು.
೪. ವೃತ್ತಿಯೆಂದಮೇಲೆ, ಧನಗಳಿಕೆಯೂ ವೃತ್ತಿಯ ಉದ್ದೇಶವಾಗಿರುತ್ತದೆ. ವೈದ್ಯಕೀಯ ವೃತ್ತಿಯೂ ಇದಕ್ಕೆ ಹೊರತಾದುದಲ್ಲ. ಆದರೆ ಹೇಗಾದರೂ ಧನಗಳಿಸಬೇಕೆಂಬ ಮನೋವೃತ್ತಿ ವೈದ್ಯನನ್ನು ಕಾಡಬಾರದು. ಔಷಧಿ ತಯಾರಕರು ನೀಡುವ ಆಮಿಷಗಳಿಗಾಗಿ, ಅಗತ್ಯವಿರಲಿ ಇಲ್ಲದಿರಲಿ, ಅವರು ತಯಾರಿಸುವ ಔಷಧಿಗಳನ್ನು ಸೂಚಿಸುವುದಾಗಲೀ, ತನ್ನ ಪರಿಣತಿಯನ್ನು ಮೀರಿದಂತಹ ಚಿಕಿತ್ಸೆಗಳಲ್ಲಿ ತನ್ನನ್ನು ತೊಡಗಿಸುಕೊಳ್ಳುವುದಾಗಲೀ ಧನಸಂಪಾದನೆಯ ಮೂಲವಾಗಬಾರದು.
ಹೀಗೆ ವೈದ್ಯನು ತನ್ನಿಂದಾಗಬಹುದಾದ ಹಾನಿಯನ್ನು ಕೆಲಮಟ್ಟಿಗೆ ತಡೆಯಬಹುದಾಗಿದೆ. ಅಂದಹಾಗೆ, ಈ ಸಂದೇಶವನ್ನು ಅತೀ ಸೂಕ್ಷ್ಮವಾಗಿ ಅರ್ಥೈಸುವುದೂ ಸರಿಯೆನಿಸುವುದಿಲ್ಲ. ಏಕೆಂದರೆ, ಬಹಳಷ್ಟು ಚಿಕಿತ್ಸೆಗಳಲ್ಲಿ ರೋಗಿಗೆ ಸ್ವಲ್ಪವಾದರೂ ತೊಂದರೆಯುಂಟಾಗಬಹುದು. ಅದು ಅನಿವಾರ್ಯವಾಗಿರುತ್ತದೆ. ಉದಾಹರಣೆಗೆ, ಲಸಿಕೆಗಳನ್ನು ನೀಡಿದ ಬಳಿಕ ಉಂಟಾಗಬಹುದಾದ ಲಘು ಅಸೌಖ್ಯಗಳಿಂದ ಹಿಡಿದು, ಕ್ಯಾನ್ಸರ್ ಗೆ ಕೀಮೋಥೆರಪಿ ನೀಡುವಾಗ ಉಂಟಾಗಬಹುದಾದ ತೀವ್ರತರ ಅಡ್ಡ ಪರಿಣಾಮಗಳು. ಇಂತಹ ಸಂದರ್ಭಗಳಲ್ಲಿ, ಚಿಕಿತ್ಸೆ ಕೊಡದೇ ಇದ್ದರೆ ರೋಗಿಗಾಗಬಹುದಾದ ಹಾನಿಯನ್ನು
ಗಮನಿಸಿ ಚಿಕಿತ್ಸೆಯ ಅಡ್ಡ ಪರಿಣಾಮಗಳನ್ನು ಎದುರಿಸಿದ ನಂತರ ರೋಗಿಗೆ ಸಿಕ್ಕುವ ನೆಮ್ಮದಿಯೊಂದಿಗೆ ತುಲನೆ ಮಾಡಬೇಕಾಗುತ್ತದೆ. ಈ ಸಂದರ್ಭಕ್ಕೆ "primum non nocere" ಗೆ ಪ್ರತಿವಾದಿಯಾಗಿ "primum succurere" ಎಂಬ ನುಡಿಗಟ್ಟಿದೆ. ಇದರ ಅರ್ಥ "ಪ್ರಥಮವಾಗಿ ಸಹಾಯಕ್ಕಾಗಿ ಧಾವಿಸು" ಎಂದು. ಅರ್ಥಾತ್ ಮೇಲೆ ಹೇಳಿದ ಸಂದರ್ಭಗಳಲ್ಲಿ ಚಿಕಿತ್ಸೆಯಿಂದಾಗಬಹುದಾದ ತೊಂದರೆಗೆ ಗಮನ ನೀಡದೆ, ರೋಗಿಯ ಚಿಕಿತ್ಸೆಗೆ ಮಹತ್ವ ನೀಡಿ ತುರ್ತಾಗಿ ರೋಗಿಯ ಸಹಾಯಕ್ಕೆ ಧಾವಿಸು ಎಂದು.
ಈ ಎರಡೂ ಸಂದೇಶಗಳನ್ನು ತನ್ನ ವೃತ್ತಿಯಲ್ಲಿ ಅಳವಡಿಸಿಕೊಂಡ ವೈದ್ಯನು ರೋಗಿಗೆ ನಾರಾಯಣಸ್ವರೂಪನೇ ಆಗುತ್ತಾನೆ.
(ಚಾರಿತ್ರಿಕ ಅಂಶಗಳಿಗಾಗಿ ವಿಕಿಪೀಡಿಯಾದ ನೆರವನ್ನು ಪಡೆದಿದ್ದೇನೆ)
*************************************************************************************************************************************
Comments
ಉ: "ಪ್ರಥಮವಾಗಿ ಹಾನಿ ಮಾಡದಿರು"
In reply to ಉ: "ಪ್ರಥಮವಾಗಿ ಹಾನಿ ಮಾಡದಿರು" by ksraghavendranavada
ಉ: "ಪ್ರಥಮವಾಗಿ ಹಾನಿ ಮಾಡದಿರು"
ಉ: "ಪ್ರಥಮವಾಗಿ ಹಾನಿ ಮಾಡದಿರು"
In reply to ಉ: "ಪ್ರಥಮವಾಗಿ ಹಾನಿ ಮಾಡದಿರು" by nagarathnavina…
ಉ: "ಪ್ರಥಮವಾಗಿ ಹಾನಿ ಮಾಡದಿರು"