ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷಗಳ ಆಡಳಿತದಲ್ಲಿ...(ಭಾಗ 1)

ಆರ್ಥಿಕ ಮೌಲ್ಯಗಳ ಬೆಳವಣಿಗೆ, ಧಾರ್ಮಿಕ ಮೌಲ್ಯಗಳ ವೃದ್ಧಿ, ರಕ್ಷಣಾ ಮೌಲ್ಯಗಳ ಹೆಚ್ಚಳ, ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧನೆ, ವಿದೇಶಗಳಲ್ಲಿ ಭಾರತದ ಬ್ರಾಂಡ್ ಮೌಲ್ಯ ಏರಿಕೆ...
ಸಾಮಾಜಿಕ ಸಾಮರಸ್ಯ ಕುಸಿತ, ಪ್ರಜಾಪ್ರಭುತ್ವದ ಮೌಲ್ಯಗಳ ನಾಶ, ಪ್ರಾಕೃತಿಕ ಸಂಪನ್ಮೂಲಗಳ ದುರುಪಯೋಗ, ರಾಜಕೀಯ ಮತ್ತು ಆಡಳಿತದಲ್ಲಿ ಸೇಡಿನ ಮನೋಭಾವ, ಮಾನವೀಯ ಮೌಲ್ಯಗಳ ಸಂಪೂರ್ಣ ಅಧೋಗತಿ....
ನರೇಂದ್ರ ಮೋದಿಯವರನ್ನು ಮೆಚ್ಚುವವರು ಮೇಲಿನ ಅಂಶಗಳಿಗೆ ಮತ್ತಷ್ಟು ಸೇರಿಸಿ ಅವರನ್ನು ಅಭಿವೃದ್ಧಿಯ ಹರಿಕಾರ ಎನ್ನುತ್ತಾರೆ, ಹಾಗೆಯೇ ಅವರನ್ನು ವಿರೋಧಿಸುವವರು ಕೆಳಗಿನ ಅಂಶಗಳಿಗೆ ಮತ್ತಷ್ಟು ಸೇರಿಸಿ ವಿನಾಶದ ಮುನ್ಸೂಚನೆ ಎಂದು ಟೀಕಿಸುತ್ತಾರೆ. ವಾದ - ಪ್ರತಿವಾದ, ಅಂಕಿಅಂಶಗಳನ್ನು ಬಳಸಿಕೊಂಡು ವಿರೋಧಿಸಲು ಅಥವಾ ಸಮರ್ಥಿಸಲು ಸಾಕಷ್ಟು ವಿಷಯಗಳು ಸಿಗುತ್ತದೆ. ಆದರೆ ಅಂತಃಕರಣ ಪೂರ್ವಕವಾಗಿ, ಯಾವುದೇ ಪೂರ್ವಾಗ್ರಹ ಇಲ್ಲದೇ, ಪ್ರಕೃತಿಯ ಮೂಲದಿಂದ, ಭಾರತೀಯ ಮೌಲ್ಯಗಳ ಆಧಾರದ ಮೇಲೆ, ಸಂವಿಧಾನದ ಚೌಕಟ್ಟಿನಲ್ಲಿ, ದೇಶ ಮತ್ತು ಜನರ ಹಿತಾಸಕ್ತಿಗಳನ್ನೇ ಮುಖ್ಯವಾಗಿಸಿ ಚರ್ಚಿಸಿದಾಗ ಸ್ವಲ್ಪಮಟ್ಟಿಗೆ ಸತ್ಯ ಮತ್ತು ವಾಸ್ತವದ ಹತ್ತಿರ ಹೋಗಲು ಸಾಧ್ಯ. ಈಗಿನ ಪರಿಸ್ಥಿತಿಯಲ್ಲಿ ಅದು ಅಷ್ಟು ಸುಲಭವಲ್ಲ. ಪರ ಅಥವಾ ವಿರೋಧಗಳು ಅತಿರೇಕವನ್ನು ತಲುಪಿಯಾಗಿದೆ. ಆದರೂ ವಿಮರ್ಶಿಸುವ ಪ್ರಯತ್ನಗಳು ನಡೆಯುತ್ತಲೇ ಇರಬೇಕು. ಅದು ಪ್ರಜಾಪ್ರಭುತ್ವದ ಜೀವಂತಿಕೆಯ ಲಕ್ಷಣ.
ಸೂಪರ್ ಮ್ಯಾನ್ or ಸ್ಟಂಟ್ ಮ್ಯಾನ್? Quality ಮತ್ತು Quantity
***
ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನಿಯಾಗಿ ಮುನ್ನಡೆಸುತ್ತಿರುವ ನರೇಂದ್ರ ದಾಮೋದರ ಮೋದಿಯವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು. ಅಚ್ಚೇದಿನ್ ಘೋಷಣೆಯೊಂದಿಗೆ ಅಧಿಕಾರಕ್ಕೇರಿದ ಪ್ರಧಾನಿಯವರ ಈ ಹತ್ತು ವರ್ಷಗಳನ್ನು ಹೇಗೆ ನೋಡುವುದು, ಹೇಗೆ ಅರ್ಥೈಸುವುದು? ಲಕ್ಷ ಲಕ್ಷ ಅಭಿಪ್ರಾಯಗಳು ನಮ್ಮ ಮುಂದಿವೆ. ನರೇಂದ್ರ ಮೋದಿ ಒಬ್ಬ ಸಂತ ಎಂದು ಪ್ರಾರಂಭವಾಗಿ ದೇಶವನ್ನು ಹೀನಾಯ ಪರಿಸ್ಥಿತಿಗೆ ತಂದರು ಎಂಬಲ್ಲಿಗೆ ಬಂದು ನಿಲ್ಲುತ್ತದೆ.
ಅಂತಿಮ ಅಭಿಪ್ರಾಯ ಮತ್ತು ತೀರ್ಮಾನ ನಿಮ್ಮದೇ ಆದರೂ ಯಾವ ಅಂಶಗಳ ಆಧಾರದ ಮೇಲೆ ಇದನ್ನು ನಿರ್ಧರಿಸಬೇಕು ಎಂಬುದನ್ನು ಮಾತ್ರ ಇಲ್ಲಿ ಹೇಳಲಾಗಿದೆ. ತುಂಬಾ ಸರಳವಾದ ಒಂದು ಲೆಕ್ಕಾಚಾರ. ಭೂತ - ಭವಿಷ್ಯದ ಆಧಾರದ ಮೇಲೆ ಸಮರ್ಥನೆ ಅಥವಾ ವಿರೋಧ ಬೇಡ. ಕೇವಲ ಅವರ ಹತ್ತು ವರ್ಷಗಳ ಆಡಳಿತದಲ್ಲಿ ಆದ ಅನುಕೂಲ ಮತ್ತು ಅನಾನುಕೂಲಗಳನ್ನು ನಮ್ಮ ನೆಲೆಯಲ್ಲಿ ನಿಂತು ನೋಡೋಣ. ಈ ಹತ್ತು ವರ್ಷಗಳಲ್ಲಿ ನಮ್ಮ ವೈಯಕ್ತಿಕ ಬದುಕಿನಲ್ಲಿ ಆಗಿರುವ ಬದಲಾವಣೆ, ಹಾಗೆಯೇ ನಮ್ಮ ಕುಟುಂಬ, ನಮ್ಮ ಬೀದಿ, ನಮ್ಮ ಊರು ನಮ್ಮ ಹೋಬಳಿ, ತಾಲ್ಲೂಕು, ಜಿಲ್ಲೆ , ರಾಜ್ಯ ಮತ್ತು ದೇಶ ಇವೆಲ್ಲವೂ ಉತ್ತಮ ಗುಣಮಟ್ಟದಲ್ಲಿ ಅಭಿವೃದ್ಧಿ ಆಗಿದೆಯೇ ಅಥವಾ ಮೊದಲಿಗಿಂತ ಕಠಿಣ ಪರಿಸ್ಥಿತಿ ಎದುರಾಗಿದೆಯೇ ?
ತುಂಬಾ ನಿಷ್ಪಕ್ಷಪಾತವಾಗಿ ಯೋಚಿಸಬೇಕು. 360 ಡಿಗ್ರಿ ದೃಷ್ಟಿಕೋನದಿಂದ ಪರಿಶೀಲಿಸಬೇಕು. ಇಲ್ಲಿ ಬೇರೆಯವರಿಗೆ ಉತ್ತರಿಸುವುದಕ್ಕಿಂತ ನಮ್ಮ ಆತ್ಮಸಾಕ್ಷಿಗೆ ಉತ್ತರ ಹೇಳಬೇಕಿದೆ. ಇಲ್ಲಿ ಮತ್ತೊಂದು ವಿಷಯ ನೆನಪಿಡಿ, ನರೇಂದ್ರ ಮೋದಿ ನಮ್ಮ ದೊಡ್ಡಪ್ಪ ಅಲ್ಲ, ರಾಹುಲ್ ಗಾಂಧಿ ನಮ್ಮ ಚಿಕ್ಕಪ್ಪ ಅಲ್ಲ, ಮಮತಾ ಬ್ಯಾನರ್ಜಿ ಮಾಯಾವತಿಯವರು ನಮ್ಮ ಆಂಟಿಯರಲ್ಲ. ಅವರು ನಮ್ಮಿಂದ ಅಜಗಜಾಂತರ ದೂರದಲ್ಲಿದ್ದಾರೆ. ಅವರಿಂದ ನಮಗೆ ವೈಯಕ್ತಿಕವಾಗಿ ಯಾವುದೇ ಲಾಭವೂ ಇಲ್ಲ ನಷ್ಟವೂ ಇಲ್ಲ. ಈ ಮಣ್ಣಿನಲ್ಲಿ ಹುಟ್ಟಿದ್ದೇವೆ, ಇಲ್ಲಿನ ಗಾಳಿ ನೀರು ಆಹಾರ ಸೇವಿಸಿದ್ದೇವೆ. ಈ ದೇಶಕ್ಕೆ ಕೃತಜ್ಞರಾಗಿರುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ಒಬ್ಬ ವ್ಯಕ್ತಿ ಮುಖ್ಯವಲ್ಲ ಇಲ್ಲಿನ ಜನರು ಮತ್ತು ದೇಶ ಮುಖ್ಯ.
ಜಾತಿ ಧರ್ಮ ಭಾಷೆ ಎಲ್ಲವೂ ಮನುಷ್ಯನ ಸೃಷ್ಟಿ. ಮನುಷ್ಯನ ಏಳಿಗೆಯೇ ನಿಜವಾದ ಅಭಿವೃದ್ಧಿ. ಆ ದೃಷ್ಟಿಕೋನದಿಂದ ಆಡಳಿತವನ್ನು ನೋಡಬೇಕು. ಅತ್ಯುತ್ತಮ ಆಡಳಿತ ಎಂಬ ಭಜನೆಯಾಗಲಿ ಅಥವಾ ಕೆಟ್ಟ ಆಡಳಿತ ಎಂಬ ದ್ವೇಷವೂ ಒಳ್ಳೆಯದಲ್ಲ. ಯಾವುದೋ ಪಕ್ಷ ಅಥವಾ ಪಂಥದ ವಕ್ತಾರರಂತೆ ಮಾತನಾಡುವುದು ಸುಲಭ. ಏಕೆಂದರೆ ಅವರನ್ನು ಹೊಗಳಲು ಮತ್ತು ಟೀಕಿಸಲು ಹಲವಾರು ಕಾರಣಗಳು ಸಿಗುತ್ತವೆ. ಅಂಕಿಅಂಶಗಳು ದೊರೆಯುತ್ತದೆ. ಆದರೆ ಅದು ವಾಸ್ತವ ಪರಿಸ್ಥಿತಿಯನ್ನು ಬಿಂಬಿಸುವುದಿಲ್ಲ. ಕೆಲವು ಆರ್ಥಿಕ ತಜ್ಞರು, ರಾಜಕೀಯ ಚಿಂತಕರು, ಮಾಧ್ಯಮ ಪಂಡಿತರುಗಳು ಹಲವಾರು ವೇದಿಕೆಗಳಲ್ಲಿ ಅವರ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಅನೇಕರು ಮೋದಿಯವರ ಆಡಳಿತದ ಬಗ್ಗೆ ಲೇಖನಗಳನ್ನು ಬರೆಯುತ್ತಾರೆ. ಆದರೆ ನಾವುಗಳು ಇವುಗಳ ಪ್ರಭಾವಕ್ಕೆ ಒಳಗಾಗಬಾರದು. ಇದನ್ನು ಒಂದು ಮಾಹಿತಿ ಎಂದು ಪರಿಗಣಿಸಿ ಇದರ ಆಧಾರದ ಮೇಲೆ ನಾವೇ ಚಿಂತಿಸಿ ಒಂದು ಅಭಿಪ್ರಾಯ ರೂಪಿಸಿಕೊಳ್ಳಬೇಕು.
ನಮ್ಮಲ್ಲಿ ಸ್ವತಂತ್ರ ಚಿಂತನೆಯ ಕೊರತೆ ಬಹಳ ಇದೆ. ನಾವು ತಜ್ಞರಲ್ಲದೇ ಇರಬಹುದು. ಆದರೆ ಯೋಚಿಸುವ ಶಕ್ತಿ ಇದೆಯಲ್ಲವೇ, ಎಲ್ಲಾ ಮಾಹಿತಿಗಳು ಬೆರಳ ತುದಿಯಲ್ಲಿ ಸಿಗುತ್ತದೆ. ಅದನ್ನು ಉಪಯೋಗಿಸಿಕೊಳ್ಳಬೇಕು. ನಾನೇ ಆಗಲಿ ಅಥವಾ ಯಾರೇ ಆಗಿರಲಿ ಏನೇ ಬರೆದರು ಅದು ನಮ್ಮ ಅಭಿಪ್ರಾಯ. ದೇಶದ ಪ್ರತಿ ವ್ಯಕ್ತಿಯ ಸ್ವತಂತ್ರ ಚಿಂತನೆ ಬೆಳೆಸಿಕೊಂಡರೆ ಪ್ರಬುದ್ಧ ಸಮಾಜದ ನಿರ್ಮಾಣ ಸಾಧ್ಯ. ಚುನಾವಣಾ ರಾಜಕೀಯದಲ್ಲಿ ತನ್ನ ಮತವನ್ನು ಜವಾಬ್ದಾರಿಯಿಂದ ಚಲಾಯಿಸಲು ಸಾಧ್ಯ.
ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರ ಹತ್ತು ವರ್ಷಗಳ ಆಡಳಿತವನ್ನು ವಿಮರ್ಶಸಬೇಕು. ಈ ಅವಧಿಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಮೇಲೇರಿದೆಯೇ ಅಥವಾ ಕುಸಿದಿದೆಯೇ, ಜಾತಿ ಧರ್ಮಗಳ ಸಾಮಾಜಿಕ ಸಾಮರಸ್ಯ ಉತ್ತಮವಾಗಿದೆಯೇ ಅಥವಾ ಹದಗೆಟ್ಟಿದೆಯೇ, ನಿರುದ್ಯೋಗಿಗಳ ಸಂಖ್ಯೆ ಕಡಿಮೆಯಾಗಿದೆಯೇ ಅಥವಾ ಹೆಚ್ಚಾಗಿದೆಯೇ, ಅವರು ಘೋಷಿಸುವ ಯೋಜನೆಗಳು ಕೇವಲ ಪುಸ್ತಕದಲ್ಲಿ ಮಾತ್ರವೇ ಅಥವಾ ವಾಸ್ತವವಾಗಿ ಜಾರಿಯಾಗುತ್ತಿದೆಯೇ, ಪ್ರಜಾಪ್ರಭುತ್ವ ವ್ಯವಸ್ಥೆಯ ಸಂಸ್ಥೆಗಳನ್ನು ಅವರು ಸರಿಯಾಗಿ ನಿಭಾಯಿಸುತ್ತಿದ್ದಾರೆಯೇ ಅಥವಾ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಯೇ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ಮಾಡುತ್ತಿದ್ದಾರೆಯೇ ಅಥವಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆಯೇ, ಅವರ ಪ್ರತಿ ಮಾತುಗಳಲ್ಲಿ ಇರುವ ಸ್ವಾಭಾವಿಕತೆ ಅಥವಾ ಕೃತಕತೆ ಎಷ್ಟು, ಅದರಲ್ಲಿ ಅಡಗಿರುವ ಪ್ರೀತಿ ವಿಶ್ವಾಸ ಕರುಣೆ ಸ್ವಾರ್ಥ - ನಿಸ್ವಾರ್ಥ ದ್ವೇಷ ಅಸೂಯೆ ಕ್ರೌರ್ಯದ ಪ್ರಮಾಣ ಯಾರ ಬಗ್ಗೆ ಹೇಗಿದೆ, ಭರವಸೆ ಮತ್ತು ಕಾರ್ಯಗತಗೊಳಿಸುವಿಕೆ ಇವುಗಳ ನಡುವಿನ ಅಂತರ ಎಷ್ಟಿದೆ ಮುಂತಾದ ವಿಷಯಗಳನ್ನು ಸೂಕ್ಷ್ಮವಾಗಿ ಮತ್ತು ಕೂಲಂಕಷವಾಗಿ ನಮ್ಮ ಮನದಲ್ಲಿ ಚಿಂತನ ಮಂಥನ ನಡೆಸಬೇಕು.
ಇಲ್ಲಿಯೂ ನಮಗೆ ಲಾಭವಾಗುವ ವಿಷಯಗಳು ಉತ್ತಮ ಮತ್ತು ತೊಂದರೆಯಾಗುವ ವಿಷಯಗಳು ಕೆಟ್ಟದ್ದು ಎಂಬ ಆಧಾರದಲ್ಲಿ ಅಭಿಪ್ರಾಯ ವ್ಯಕ್ತಪಡಿಸದೆ ಒಟ್ಟು ದೇಶದ ಹಿತಾಸಕ್ತಿಯಿಂದ ನೋಡಬೇಕು. ಆಗ ಮಾತ್ರ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಹತ್ತು ವರ್ಷಗಳ ಆಡಳಿತದ ಬಗ್ಗೆ ನಿಷ್ಪಕ್ಷಪಾತ ಮತ್ತು ವಾಸ್ತವ ವಿಮರ್ಶೆ ಸಾಧ್ಯ. ಅಷ್ಟು ಸಮಯ ಮತ್ತು ಆಸಕ್ತಿ ಇದ್ದರೆ ಮಾತ್ರ ಇದರ ಬಗ್ಗೆ ಒಂದಷ್ಟು ಖಚಿತವಾಗಿ ಮಾತನಾಡಬಹುದು. ಅವರ ಅವಧಿಯ Quality ಮತ್ತು Quantity ಯ ಪ್ರಮಾಣ ನಿರ್ಧರಿಸಬಹುದು.
ಭಾರತದ ಶ್ರೀಮಂತರ ಸಂಖ್ಯೆ ಎಷ್ಟು ಹೆಚ್ಚಾಗುತ್ತಿದೆ, ಆರ್ಥಿಕ ಗಾತ್ರ ಹೇಗೆ ಬೆಳೆಯುತ್ತಿದೆ, ದೇಶದ ಜಾಗತಿಕ ವರ್ಚಸ್ಸು ಹೇಗೆ ವೃದ್ಧಿಸುತ್ತಿದೆ ಎಂದು ಯೋಚಿಸುವ ಮನಸ್ಸುಗಳು ಹಾಗೆಯೇ ರೈತರು, ಕೂಲಿ ಕಾರ್ಮಿಕರು, ಮಹಿಳೆಯರು, ನಿರ್ಗತಿಕರು, ಸಾಮಾನ್ಯ ವರ್ಗದ ಜನ ಹೇಗೆ ನರಳುತ್ತಿದ್ದಾರೆ ಎಂಬುದನ್ನೂ ಗಣನೆಗೆ ತೆಗೆದುಕೊಳ್ಳಬೇಕು.
ಬುಲೆಟ್ ಟ್ರೈನ್ ಮತ್ತು ಹಸಿವಿನ ಸಾವು ಎರಡೂ ನಿಮ್ಮನ್ನು ಕಾಡಬೇಕು, ಗಾಂಧಿ ಮತ್ತು ಗೋಡ್ಸೆ ಅರ್ಥವಾಗಬೇಕು, ಅಂಬೇಡ್ಕರ್ ಮತ್ತು ಮನುಸ್ಮೃತಿಯ ವಾಸ್ತವ ಪ್ರಜ್ಞೆ ಇರಬೇಕು. ಕಾರ್ಲ್ ಮಾರ್ಕ್ಸ್ ಮತ್ತು ಗೌತಮ್ ಅಧಾನಿ ಸ್ವಲ್ಪ ಮಟ್ಟಿಗೆ ತಿಳಿದಿರಬೇಕು. ಆಗ ಭಾರತದ ದಿಕ್ಕು ದೆಸೆಯ ಬಗ್ಗೆ ಒಂದು ಅಭಿಪ್ರಾಯ ವ್ಯಕ್ತಪಡಿಸಬಹುದು. ಮೋದಿಯವರ ಸಾಮರ್ಥ್ಯ ಮತ್ತು ಯೋಗ್ಯತೆ ಅಳೆಯಬಹುದು. ಅದರೊಂದಿಗೆ ನಮ್ಮ ಅರ್ಹತೆಗಳನ್ನು, ಮಾನವೀಯತೆಯನ್ನು ಆತ್ಮಾವಲೋಕನ ಮಾಡಿಕೊಳ್ಳಬಹುದು.
ಸ್ವಾವಲಂಬನೆಯ ಭಾರತ ಆಗಬೇಕಾದರೆ ಸ್ವಾಭಿಮಾನಿ ಭಾರತ ಮೊದಲ ಆಧ್ಯತೆಯಾಗಬೇಕು. ಗುಲಾಮಗಿರಿ ಅಥವಾ ಭಜನೆ ಮಂಡಳಿ ಬಿಡಿ. ಸ್ವತಂತ್ರ ಚಿಂತನೆ ಬೆಳೆಸಿಕೊಳ್ಳಿ. ಮನಸ್ಸಿನ ಅಗಾಧವಾದ ಸರೋವರದಲ್ಲಿ ಸ್ವಚ್ಛಂದವಾಗಿ ವಿಹರಿಸಿ. ಸ್ವಾತಂತ್ರ್ಯದ ಸವಿಯನ್ನು ಅನುಭವಿಸಿ.ಣ
(ಇನ್ನೂ ಇದೆ)
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ