ಪ್ಲಾಸ್ಟಿಕ್ ಕಸ ಪರಿಹಾರವೇನು?
ಇಂದು ಪ್ಲಾಸ್ಟಿಕ್ ಬಳಕೆ ಎಲ್ಲೆಡೆ ಸರ್ವವ್ಯಾಪಿಯಾಗಿದೆ. ಇದನ್ನು ಬಳಸಿ ಎಲ್ಲೆಂದರಲ್ಲಿ ಬಿಸಾಡಿ ಪರಿಸರಕ್ಕೆ ಭಾರೀ ಹಾನಿ ಉಂಟಾಗುತ್ತಿದೆ. ಇದಕ್ಕೆ ಪರಿಹಾರ ಇಲ್ಲವೇ? ಕೆಲವರು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಎಂದು ಹೇಳಿದರೆ, ಇನ್ನು ಕೆಲವರು ಪ್ಲಾಸ್ಟಿಕ್ ನಿಷೇಧ ಮಾಡಬೇಕು ಎಂದು ಹೇಳುತ್ತಾರೆ. ಯಾರು ಏನೇ ಹೇಳಿದರೂ, ಎಷ್ಟೇ ನಿಷೇಧ ಮಾಡಿದರೂ ಪ್ಲಾಸ್ಟಿಕ್ ಬಳಕೆ ದಿನೇ ದಿನೇ ಹೆಚ್ಚುತ್ತಿದೆಯೇ ಹೊರತು ಕಡಿಮೆ ಆಗುವುದು ಕಾಣಿಸುತ್ತಿಲ್ಲ. ಉದಾಹರಣೆಗೆ ನಾವು ಬಳಸುವ ಹಾಲು ಬರುವುದು ಪ್ಲಾಸ್ಟಿಕ್ ತೊಟ್ಟೆಯಲ್ಲಿ. ಬೇಕರಿ ತಿಂಡಿಗಳು ಬರುವುದು ಪ್ಲಾಸ್ಟಿಕ್ ಪ್ಯಾಕಿಂಗ್ನಲ್ಲಿ. ಸೂಪರ್ ಮಾರ್ಕೆಟ್ ಅಥವಾ ಮಾಲುಗಳಲ್ಲಿ ಬರುವ ಎಲ್ಲ ಆಹಾರ ಪದಾರ್ಥಗಳು (ದಿನಸಿ, ಧಾನ್ಯದ ಪುಡಿ, ಅಡಿಗೆ ಎಣ್ಣೆ ಇತ್ಯಾದಿ) ಬರುವುದು ಪ್ಲಾಸ್ಟಿಕ್ ಪ್ಯಾಕಿನಲ್ಲಿ. ನಾವು ಪ್ಲಾಸ್ಟಿಕ್ ಬಳಕೆ ಕಮ್ಮಿ ಮಾಡಬೇಕು ಎಂದು ಭಾವಿಸಿದರೂ ಇದು ನಮ್ಮ ಕೈಯಲ್ಲಿ ಇಲ್ಲ. ಪ್ಲಾಸ್ಟಿಕ್ ಪ್ಯಾಕಿಂಗ್ ಇಲ್ಲದೆ ಹೋದರೆ ಈ ಎಲ್ಲ ಪದಾರ್ಥಗಳೂ ಬೇಗನೆ ಹಾಳಾಗುತ್ತವೆ. ಇನ್ನೊಂದು ಅಂಶವೆಂದರೆ ಹಾಲು, ಎಣ್ಣೆ ಇತ್ಯಾದಿಗಳಲ್ಲಿ ಬಿಡಿ ಬಿಡಿಯಾಗಿ ಅಂದರೆ ಪ್ಲಾಸ್ಟಿಕ್ ಪ್ಯಾಕಿಂಗ್ ಇಲ್ಲದೆ ಇದ್ದರೆ ಕಲಬೆರಕೆಯ ಅಪಾಯ ಇದ್ದೇ ಇದೆ. ಪ್ರಸಿದ್ಧ ಕಂಪನಿಯ ಪ್ಲಾಸ್ಟಿಕ್ ಪ್ಯಾಕಿಂಗ್ ಇರುವ ಬ್ರಾಂಡ್ ಉತ್ಪನ್ನಗಳಲ್ಲಿ ಕಲಬೆರಕೆಗೆ ಅವಕಾಶ ಇಲ್ಲ. ಆದರೆ ಬಿಡಿಯಾಗಿ ಸಿಗುವ ಅಡಿಗೆ ಎಣ್ಣೆ, ಹಾಲು ಇತ್ಯಾದಿಗಳಲ್ಲಿ ಆರೋಗ್ಯಕ್ಕೆ ಅಪಾಯಕಾರಿಯಾದ ಭಾರೀ ಕಲಬೆರಕೆ ಇರುತ್ತದೆ ಎಂದು ಟಿವಿ ವಾಹಿನಿಗಳು ಸಾರುತ್ತಿವೆ. ಮಾರುಕಟ್ಟೆಯಲ್ಲಿ ದೊರಕುವ ನಾನಾ ಬ್ರಾಂಡಿನ ನೀರಿನ ಬಾಟಲುಗಳು ಪ್ಲಾಸ್ಟಿಕ್ ಆಗಿರುತ್ತವೆ. ನೀರನ್ನು ಪ್ಲಾಸ್ಟಿಕ್ ಅಲ್ಲದೆ ಬೇರೆ ಬಾಟಲುಗಳಲ್ಲಿ ತರಲು ಸಾಧ್ಯವಿಲ್ಲ. ಹೀಗಾಗಿ ಪ್ಲಾಸ್ಟಿಕ್ ನಿಷೇಧ ಕಾರ್ಯಸಾಧ್ಯವಲ್ಲ.
<-!break|-> ಪ್ಲಾಸ್ಟಿಕ್ ಅನ್ನು ಹೊತ್ತಿಸಿ ನಿರ್ಮೂಲ ಮಾಡುವಂತಿಲ್ಲ. ಪ್ಲಾಸ್ಟಿಕ್ ಅನ್ನು ಹೊತ್ತಿಸಿದರೆ ನಾನಾ ಬಗೆಯ ವಿಷಕಾರಕ ಹಾಗೂ ಕ್ಯಾನ್ಸರ್ ಕಾರಕ (ಡಯಾಕ್ಸಿನ್) ಅನಿಲಗಳು ವಾತಾವರಣಕ್ಕೆ ಬಿಡುಗಡೆಯಾಗುತ್ತವೆ. ಹೀಗಾಗಿ ಪ್ಲಾಸ್ಟಿಕ್ ಕಸ ನಿರ್ಮೂಲನೆಗೆ ಬೇರೆ ಹಾದಿ ಹುಡುಕಬೇಕಾಗಿದೆ. ಇಂಥ ಕೆಲವು ವಿಧಾನಗಳನ್ನು ಈಗಾಗಲೇ ಕಂಡುಕೊಳ್ಳಲಾಗಿದೆ. ಇದರಲ್ಲಿ ಒಂದು ಪ್ಲಾಸ್ಟಿಕ್ ಕಸವನ್ನು ರಸ್ತೆ ಡಾಮರೀಕರಣದಲ್ಲಿ ಬಳಸುವುದು. ಇದನ್ನು ಈಗಾಗಲೇ ಯಶಸ್ವಿಯಾಗಿ ಕೆಲವು ಕಡೆ ಮಾಡಲಾಗಿದೆ. ಪ್ಲಾಸ್ಟಿಕ್ ಕಸ ಬಳಸಿ ನಿರ್ಮಿಸಿದ ರಸ್ತೆ ದೀರ್ಘ ಬಾಳಿಕೆ ಬರುತ್ತದೆ ಎಂದು ಕಂಡುಕೊಳ್ಳಲಾಗಿದೆ. ಹೀಗಾಗಿ ಈ ವಿಧಾನವನ್ನು ರಾಜ್ಯದ ಪ್ರತಿ ತಾಲೂಕಿನಲ್ಲೂ ಅಳವಡಿಸಿಕೊಂಡು ಪ್ಲಾಸ್ಟಿಕ್ ಕಸದ ತೊಂದರೆಯನ್ನು ನಿವಾರಿಸಬಹುದು. ಇನ್ನೊಂದು ವಿಧಾನ ಎಂದರೆ ವೇಗವರ್ಧಕ ಬಳಸಿ ಪ್ಲಾಸ್ಟಿಕ್ ಅನ್ನು ಡಿಪಾಲಿಮರೈಸಶನ್ ಕ್ರಿಯೆಗೆ ಒಳಪಡಿಸಿ ಇಂಧನ ಉತ್ಪಾದಿಸುವುದು. ಈ ಕ್ರಿಯೆಯಲ್ಲಿ ವಾತಾವರಣಕ್ಕೆ ಯಾವುದೇ ವಿಷಕಾರಕ ಅನಿಲಗಳು ಬಿಡುಗಡೆಯಾಗುವುದಿಲ್ಲ. ಈ ಕ್ರಿಯೆಯಿಂದ ಒಂದು ಕಿಲೋ ಪ್ಲಾಸ್ಟಿಕ್ ಕಸದಿಂದ ೮೦೦ ಮಿಲಿ ಲೀಟರ್ ಇಂಧನ (ಕಚ್ಚಾ ತೈಲ, ಡೀಸೆಲ್ ಇತ್ಯಾದಿ) ಉತ್ಪಾದಿಸಬಹುದು ಎಂದು ಹೇಳಲಾಗುತ್ತಿದೆ. ಇಂಥ ಘಟಕವೊಂದು ಚೆನ್ನೈ ನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ. ಇಂಥ ಸಣ್ಣ ಸಣ್ಣ ಘಟಕಗಳನ್ನು ಪ್ರತಿ ಜಿಲ್ಲೆ ಅಥವಾ ತಾಲೂಕುಗಳಲ್ಲಿ ಸ್ಥಾಪಿಸಿ ಪ್ಲಾಸ್ಟಿಕ್ ಕಸದಿಂದ ಮುಕ್ತಿ ಪಡೆಯಲು ಸಾಧ್ಯವಿದೆ. ಈ ಬಗ್ಗೆ ಜನಜಾಗೃತಿ ಆಗಬೇಕಾಗಿದೆ. ಇಂಥ ಜನಜಾಗೃತಿ ಮಾಡುವುದು ಇಂದು ಟಿವಿ ಮಾಧ್ಯಮ, ಪತ್ರಿಕಾ ಮಾಧ್ಯಮ, ರೇಡಿಯೋ ಮಾಧ್ಯಮ, ಸಂಘ ಸಂಸ್ಥೆಗಳ ಮೂಲಕ ಆಗಬೇಕಾಗಿದೆ. ಪ್ರತಿಯೊಬ್ಬರೂ ಬಳಸುವ ಪ್ಲಾಸ್ಟಿಕ್ ಅನ್ನು ಬಳಸಿದ ನಂತರ ಮನೆಯಲ್ಲಿ ಸಂಗ್ರಹಿಸಿ ಸಾಕಷ್ಟು ಪ್ಲಾಸ್ಟಿಕ್ ಸಂಗ್ರಹವಾದಾಗ ಅದನ್ನು ತಾಲೂಕಿನಲ್ಲಿ ನಿಗದಿ ಪಡಿಸಿದ ಕೇಂದ್ರಕ್ಕೆ (ಅಥವಾ ದೊಡ್ಡ ನಗರಗಳಲ್ಲಿ ಅಲ್ಲಲ್ಲಿ ನಿಗದಿ ಪಡಿಸಿದ ಕಡೆ) ಕೊಡುವ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಎಲ್ಲಿಯೂ ಪ್ಲಾಸ್ಟಿಕ್ ಅನ್ನು ಬಳಸಿ ಬಿಸಾಡದಂತೆ ಜನರಿಗೆ ತಿಳುವಳಿಕೆ ಕೊಡಬೇಕಾದ ಅಗತ್ಯ ಇದೆ.
ಇತ್ತೀಚಿಗೆ ಸುವರ್ಣ ನ್ಯೂಸ್ ವಾಹಿನಿಯಲ್ಲಿ ಪ್ಲಾಸ್ಟಿಕ್ ಕಸ ಸಮುದ್ರ ಸೇರುವುದರಿಂದಾಗಿ ಮೀನಿನ ಸಂತತಿ ಕಡಿಮೆಯಾಗಿ ಕರಾವಳಿಯ ಮೀನುಗಾರರಿಗೆ ತೊಂದರೆಯಾಗಿದ್ದು ಅವರು ಪ್ಲಾಸ್ಟಿಕ್ ನಿಷೇಧ ಮಾಡಬೇಕೆಂದು ಹೇಳುತ್ತಿರುವುದು ವರದಿಯಾಗಿದೆ. ಕೇರಳದಲ್ಲಿ ಪ್ಲಾಸ್ಟಿಕ್ ನಿಷೇಧ ಇದೆಯೆಂದೂ, ನಮ್ಮಲ್ಲೂ ಅದನ್ನು ನಿಷೇಧಿಸಬೇಕೆಂದು ಹೇಳಿದರು. ನಿಷೇಧ ಪ್ಲಾಸ್ಟಿಕ್ ಕ್ಯಾರಿಬ್ಯಾಗುಗಳಿಗೆ ಮಾಡಬಹುದು ಆದರೆ ನಾವು ಬಳಸುವ ಹಾಲಿನ ತೊಟ್ಟೆ, ಅಡುಗೆ ಎಣ್ಣೆಯ ತೊಟ್ಟೆ, ಬಿಸ್ಕತ್ತು, ಚಾಕೋಲೆಟ್, ಗೋಧಿ ಹುಡಿ, ನೀರಿನ ಬಾಟಲು, ಬೇಕರಿ ತಿಂಡಿಗಳು ಇತ್ಯಾದಿಗಳಿಗೆ ನಿಷೇಧ ಮಾಡಲು ಸಾಧ್ಯವಿದೆ ಎನಿಸುವುದಿಲ್ಲ. ನಿಷೇಧ ಮಾಡಿದರೆ ಪರ್ಯಾಯ ಏನು ಎಂಬ ಪ್ರಶ್ನೆ ಬರುತ್ತದೆ ಹಾಗೂ ಅದಕ್ಕೆ ಸೂಕ್ತ ಪರ್ಯಾಯ ಇಲ್ಲವೆಂದರೂ ಸರಿ.
ಹೀಗಾಗಿ ಪ್ಲಾಸ್ಟಿಕ್ ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವಂತೆ ನಮ್ಮ ಶಾಸಕರು, ಸಂಸದರು, ಚುನಾಯಿತ ಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಈ ಕೆಲಸವನ್ನು ಮಾಧ್ಯಮಗಳು ಮಾಡಬೇಕಾಗಿದೆ.
ಚಿತ್ರಃ ecologycenter.org
Comments
ಉ: ಪ್ಲಾಸ್ಟಿಕ್ ಕಸ ಪರಿಹಾರವೇನು?
In reply to ಉ: ಪ್ಲಾಸ್ಟಿಕ್ ಕಸ ಪರಿಹಾರವೇನು? by Shreekar
ಉ: ಪ್ಲಾಸ್ಟಿಕ್ ಕಸ ಪರಿಹಾರವೇನು?
ಉ: ಪ್ಲಾಸ್ಟಿಕ್ ಕಸ ಪರಿಹಾರವೇನು?
ಉ: ಪ್ಲಾಸ್ಟಿಕ್ ಕಸ ಪರಿಹಾರವೇನು?
ಉ: ಪ್ಲಾಸ್ಟಿಕ್ ಕಸ ಪರಿಹಾರವೇನು?