ಬರೆ ಬೀಳೋದು ಜನರಿಗೇ ಅಲ್ಲವೇ?

ಬರೆ ಬೀಳೋದು ಜನರಿಗೇ ಅಲ್ಲವೇ?

ರಾಜ್ಯದಲ್ಲಿ ಬಸ್ ಪ್ರಯಾಣ ದರ, ಡೀಸೆಲ್, ಹಾಲು ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿರುವುದು ಗೊತ್ತಿರುವ ಸಂಗತಿಯೇ. ಬೆಲೆ ಏರಿಕೆಯನ್ನು ವಿರೋಧಿಸಿ ರಾಜ್ಯ ಬಿಜೆಪಿಯವರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದೂ ಆಗಿದೆ. ಮತ್ತೊಂದೆಡೆ, ‘ರಾಜ್ಯದಲ್ಲಿ ಆಗುವ ಬೆಲೆ ಏರಿಕೆಗೆ ಕೇಂದ್ರ ಸರಕಾರದ ನೀತಿಗಳೇ ಪ್ರಮುಖ ಕಾರಣವಾಗುತ್ತವೆ. ತೆರಿಗೆ ವಿಷಯದಲ್ಲಿ ರಾಜ್ಯಕ್ಕಿಂತ ಕೇಂದ್ರವೇ ಹೆಚ್ಚು ನಿಯಂತ್ರಣ ಹೊಂದಿದೆ.’ ಎಂಬ ಅಭಿಪ್ರಾಯವೂ ಕಾಂಗ್ರೆಸ್ ಪಾಳಯದಿಂದ ಹೊಮ್ಮಿದೆ. ಹಾಗಿದ್ದರೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ನಿಜಕ್ಕೂ ಕಾರಣರಾರು? ಎಂಬುದು ರಾಜ್ಯದ ಜನರನ್ನು ಕಾಡುತ್ತಿರುವ ಪ್ರಶ್ನೆ ! 

ಬೆಲೆಯೇರಿಕೆಯ ಹಿಂದಿರುವ ತಾಂತ್ರಿಕ, ಆರ್ಥಿಕ ಅಥವಾ ರಾಜಕೀಯ ಲೇಪಿತ ಕಾರಣಗಳಾವುವೂ ಜನರಿಗೆ ಬೇಕಿಲ್ಲ. ಏಕೆಂದರೆ, ‘ಆಮ್ ದನ್ನಿ ಅಠನ್ನಿ, ಖರ್ಚಾ ರುಪಯ್ಯ’ ಎಂಬ ಹಿಂದಿಯ ಜಾಣ ನುಡಿಯಂತೆ ತಮಗೆ ಬರುವ ಆದಾಯ ಅಷ್ಟೇ ಇದ್ದರೂ, ಅಗತ್ಯ ವಸ್ತುಗಳ ಬೆಲೆ ಮಾತ್ರ ದುಪ್ಪಟ್ಟಾಗುತ್ತಿರುವ, ಕೆಲವೊಮ್ಮೆ ಗಗನಕ್ಕೇರುತ್ತಿರುವ ಕಾರಣದಿಂದಾಗಿ ಜನರು ಸಹಜವಾಗಿಯೇ ಅಸಮಧಾನಗೊಂಡಿದ್ದಾರೆ. ಅವರ ಮಾತುಗಳಲ್ಲಿ ಆಕ್ರೋಶ ಚಿಮ್ಮುತ್ತಿದೆ. ಜತೆಗೆ, ತಮ್ಮ ಹಿತವನ್ನು ರಕ್ಷಿಸುತ್ತಾರೆ ಎಂಬ ಭರವಸೆಯಿಟ್ಟುಕೊಂಡು ತಾವು ಚುನಾಯಿಸಿದ ಪ್ರತಿನಿಧಿಗಳೇ ಸಮಸ್ಯೆಗೆ ಮದ್ದು ಅರೆಯುವ ಯತ್ನವನ್ನು ಮಾಡದೆ, ಪರಸ್ಪರರ ಮೇಲೆ ಕೆಸರೆರಚುತ್ತಾ ದಿನವನ್ನು ಕಳೆಯುತ್ತಿದ್ದರೆ, ಅದ್ಯಾವ ಪುರುಷಾರ್ಥ? ಎಂಬ ಬಿರುನುಡಿಗಳೂ ಅವರಿಂದ ಕೇಳಿ ಬರುತ್ತಿವೆ. ಅವರ ಮಾತಿನಲ್ಲಿ ಸತ್ಯವಿದೆ. ಬೆಲೆ ಏರಿಕೆಗೆ ರಾಜ್ಯದ ಆಳುಗರೇ ಕಾರಣರಿರಲಿ ಅಥವಾ ಕೇಂದ್ರ ಸರಕಾರದ ನೀತಿಗಳೇ ಅದಕ್ಕೆ ಮೂಲವಾಗಿರಲಿ, ಅಂತಿಮವಾಗಿ ಬರೆ ಬೀಳುವುದು ಶ್ರೀಸಾಮಾನ್ಯರಿಗೆ ತಾನೇ? ಈ ದಿನದ ಕಥೆ ಹೀಗೆ, ನಾಳೆ ಇನ್ನೇನು ಕಾದಿದೆಯೋ? ಎಂಬ ಅನಿಶ್ಚಿತತೆಯಲ್ಲೇ ದಿನದೂಡುವಂತಾಗಿದೆ ಬಹಳಷ್ಟು ಮಂದಿಯ ಪರಿಸ್ಥಿತಿ. ಇಂಥ ಬಿಕ್ಕಟ್ಟಿನ ಸ್ಥಿತಿಯಲ್ಲಿ ಜನರಿಗೆ ಜನಪ್ರತಿನಿಧಿಗಳಿಂದ ಬೇಕಿರುವುದು ಉಪಶಾಮಕ ಹೆಜ್ಜೆಗಳೇ ವಿನಾ ‘ಬೆಣ್ಣೆಯಲ್ಲಿ ಕೂದಲು ತೆಗೆದಂಥ’ ಮಾತುಗಳಲ್ಲ. ಈ ಕಹಿಸತ್ಯವನ್ನು ಸಂಬಂಧಪಟ್ಟವರು ಇನ್ನಾದರೂ ಅರಿಯಲಿ.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೦೫-೦೪-೨೦೨೫