ಬಾಳಿಗೊಂದು ಚಿಂತನೆ - 114

ನಮ್ಮ ಬದುಕಿನ ದಾರಿಯಲ್ಲಿ ನಾವು ತನು ಮನದಿಂದ ಶೀಲವಂತರಾಗಿರಲು ಪ್ರಯತ್ನಿಸಬೇಕು. ‘ಶೀಲ’ ಎನ್ನುವುದು ಕೋಟಿ ಹಣಕ್ಕಿಂತಲೂ, ನವರತುನಕ್ಕಿಂತಲೂ ಬೆಲೆಯುಳ್ಳದ್ದು. ಎಷ್ಟು ಐಶ್ವರ್ಯ ಇದ್ದರೇನು, ನೋಡಲು ಅಂದ ಚಂದವಾಗಿದ್ದರೇನು, ಶೀಲವೇ ಇಲ್ಲದ ಮೇಲೆ, ತೃಣ ಸಮಾನ. ಶೀಲ ಎನ್ನುವುದು ಬರಿಯ ಬಾಯಿಮಾತಿನಲಿ ಅಲ್ಲ, ವ್ಯವಹಾರದಲಿ, ಗುಣ ನಡತೆಯಲಿ, ಹೃದಯದಲಿ ಇರಬೇಕು.
ನಮ್ಮ ನಡೆನುಡಿಯಲಿ ಸತ್ಯ, ಪ್ರಾಮಾಣಿಕತೆ, ವಿಚಾರಗಳು ಎದ್ದು ಕಾಣಬೇಕು. ಹಣ, ಸಂಪತ್ತು, ಆಸ್ತಿ ಇಂದು ಇರಬಹುದು, ನಾಳೆ ಹೋಗಬಹುದು. ಆದರೆ ಒಮ್ಮೆ ಕಳೆದುಕೊಂಡ ಶೀಲವನ್ನು ಮರಳಿ ಪಡೆಯಲಾಗದು. ‘ಶೀಲವಿಲ್ಲದವರು ಬದುಕಿದ್ದರೂ ಸತ್ತಂತೆ, ಶವಕ್ಕೆ ಸಮ’.
*ವಿತ್ತಂ ಯತ್ನೇನ ಸಂರಕ್ಷೇತ್ ವಿತ್ತಮೇತಿ ಯಾತಿ ಚ|*
*ಅಕ್ಷಿಣೋ ವಿತ್ತತಃ ಕ್ಷೀಣೋ ವೃತ್ತ ತಸ್ತು ಹತೋಹತಃ||*
ವಿತ್ತಂ ಎಂದರೆ ನಡತೆ ಎನ್ನಬಹುದು. ಪ್ರತಿಯೊಬ್ಬ ಮನುಷ್ಯನು ಉತ್ತಮ ಗುಣನಡತೆಯನ್ನು ಹೊಂದಿರಬೇಕು, ಉಸಿರುವಲ್ಲಿವರೆಗೆ ರಕ್ಷಿಸಿಕೊಂಡು ಬರಬೇಕು.
ನಮ್ಮ ಮಾತುಗಳಲ್ಲಿ ಅವಾಚ್ಯ ಪದಗಳು ಯಾವಾಗಲೂ ಬರಬಾರದು. ನಾವು ದೊಡ್ಡವರು, ಹಿರಿಯರು ಎನಿಸಿಕೊಂಡಿರುವವರೇ ಹೀಗಿದ್ದ ಪದಗಳನ್ನು ಉಸುರಿದರೆ ಅದನ್ನು ಕೇಳಿದ ನಮ್ಮ ಮನೆಯ ಮಕ್ಕಳ ಗತಿ ಏನು?
ನನ್ನ ಶಾಲಾ ಕರ್ತವ್ಯದ ದಿನಗಳಲ್ಲಿ ಈ ರೀತಿಯ ಅನುಭವಗಳು ಬಹಳಷ್ಟು ನಡೆದಿದೆ. ತುಂಬಾ ಹಳ್ಳಿ ಪ್ರದೇಶದ ಶಾಲೆ. ಪುಟ್ಟ ಮಕ್ಕಳ ಬಾಯಿಯಲ್ಲಿ ದೊಡ್ಡ ದೊಡ್ಡ ಪದಗಳು. ಸೇರಿದ ಸಮಯದಲ್ಲಿ ನನಗೆ ಆಶ್ಚರ್ಯ. ನಾನು ಕೇಳದ ಕೆಲವಾರು ಪದಗಳು ಮಕ್ಕಳು ಪರಸ್ಪರ ಹೇಳುತ್ತಿದ್ದರು. ಅಂತೂ ಹೆತ್ತವರನ್ನು ಬರಹೇಳಿ, ಬೇಸರವಾಗದ ಹಾಗೆ ಸೂಕ್ಷ್ಮವಾಗಿ ವಿಷಯವನ್ನು ಮನದಟ್ಟು ಮಾಡಿ ಸರಿಪಡಿಸಲು ಪುನರ್ಜನ್ಮ ಪಡೆದಷ್ಟು ಕಷ್ಟ ಆಯಿತು. ಅವರು ಹೇಳುವ ಮಾತು "ಮನೆಯ ವಯಸ್ಸಾದವರು ಹೇಳ್ತಾರೆ. ಅವರ ಬಾಯನ್ನು ಯಾರು ಮುಚ್ಚಿಸುವುದು ಎಂದು" ಗಣತಿ, ಮನೆ ಭೇಟಿ ಇತ್ಯಾದಿಗಳಿಗೆ ಹೋದಾಗ ಹಿರಿಯರ ಹತ್ತಿರ ಸಹ ಬೇಸರವಾಗದ ಹಾಗೆ ಮಾತುಕತೆ ನಡೆಸಿದೆ. ಒಂದೆರಡು ವರ್ಷಗಳೇ ಆಯಿತು ಸರಿಪಡಿಸಲು. ಮನೆಯ ವಾತಾವರಣ ಸಹ ಸರಿಯಾಗಿರಬೇಕು, ನಮ್ಮ ನಡೆ ನುಡಿ ಮಕ್ಕಳ ಮೇಲೆ ಗಾಢ ಪರಿಣಾಮ ಬೀರುವುದು. ನಮ್ಮಿಂದ ಕೂಡಿದಷ್ಟು ಒಳ್ಳೆಯವರಾಗಿ, ಇತರರ ಬಗ್ಗೆ ಕಾಳಜಿಯುಳ್ಳವರಾಗಿ ಶೀಲವಂತರಾಗಿ ಜೀವನ ಕಳೆಯೋಣ. ಇತರರಿಗೆ ಮಾದರಿಯಾಗೋಣ.
ಸಂಗ್ರಹ: ರತ್ನಾ ಕೆ.ಭಟ್ ತಲಂಜೇರಿ
(ಶ್ಲೋಕ ಆಕರ: ಮಹಾಭಾರತ ಚಿಂತನಮ್)
ಚಿತ್ರ ಕೃಪೆ: ಇಂಟರ್ನೆಟ್ ತಾಣ