ಬಾಳಿಗೊಂದು ಚಿಂತನೆ - 115

ನಾವು ಪ್ರತಿನಿತ್ಯ ದೇವರಿಗೆ ಕೈಮುಗಿಯುವುದು, ಪ್ರಾರ್ಥನೆ, ಪೂಜೆ, ಭಜನೆ ಮಾಡುತ್ತೇವೆ. ನಾವು ಈ ಸೃಷ್ಟಿಯ ಅದ್ಭುತಗಳನ್ನು ಗಮನಿಸಿದರೆ, ಇದೆಲ್ಲ ಹೇಗಾಯಿತು? ಎಂಬ ಪ್ರಶ್ನೆ ಸಹಜವಲ್ಲವೇ? ಹಾಗಾದರೆ ಇದರ ಹಿಂದೆ ಒಂದು ಚಾಲಕ ಮತ್ತು ನಿಯಂತ್ರಕ ಶಕ್ತಿ ಖಂಡಿತಾ ಇದೆ ಒಪ್ಪೋಣ. ಈ ಶಕ್ತಿಯನ್ನೇ ನಾವು ‘ಭಗವಂತ, ದೇವರು, ಪರಮಾತ್ಮ’ ಹೇಳ್ತೇವೆ. ಈ ದಿವ್ಯಶಕ್ತಿ ನಮ್ಮ ಕಣ್ಣಿಗೆ ಕಾಣಿಸದು. ಹಾಗಾದರೆ ಉಪಕಾರ ಸ್ಮರಣೆ ಬೇಡವೇ? ಜಗದ ಜೀವ ರಾಶಿಗೆ ಉಪಕಾರ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸುವ ಕೆಲಸವೇ ಕಣ್ಣಿಗೆ ಕಾಣದ ಅದ್ಭುತ ಶಕ್ತಿಗೆ ಪ್ರಾರ್ಥನೆ, ಸೇವೆ, ಭಜನೆ, ಪೂಜೆ ಇತ್ಯಾದಿ.
ಇವೆಲ್ಲವೂ ಭರವಸೆ, ನಂಬಿಕೆ ಎಂಬುದರಡಿಯಲ್ಲಿ ನಿಂತಿದೆ. ಶರೀರ ಆರೋಗ್ಯವಾಗಿರಲು ಒಳ್ಳೆಯ ಆಹಾರ ಬೇಕು. ಹಾಗೆಯೇ ಮನಸ್ಸಿನ, ಭಾವನೆಗಳ ಸಂಸ್ಕಾರಕ್ಕೆ ಪ್ರಾರ್ಥನೆ ಅಗತ್ಯ. ಮಾನಸಿಕ ದೃಢತೆಗೆ ಪ್ರಾರ್ಥನೆ, ಧ್ಯಾನ ಅತಿ ಅವಶ್ಯ. ಅರಿಷಡ್ವರ್ಗಗಳನ್ನು ಮಟ್ಟ ಹಾಕಲು, ಜೀವನ ಹಾದಿಯ ಜಂಜಾಟ ಶಮನ ಮಾಡಲು, ಒತ್ತಡ ನಿವಾರಣೆಗೆ, ಮಾನಸಿಕ ಶಾಂತಿಗೆ, ಅಹಂನ್ನು ಕಡಿಮೆ ಮಾಡಲು, ಏಕಾಗ್ರತೆಗೆ ಪ್ರಾರ್ಥನೆ ಬೇಕು.
*ಅನ್ಯಥಾ ಶರಣಂ ನಾಸ್ತಿ*
*ತ್ವಮೇವ ಶರಣಂ ಮಮ*
ಶರಣು ಹೋಗುವುದು ಭಗವಂತನಿಗೆ.ಆತನೊಬ್ಬನೇ ಶಕ್ತನು. ನಾವು ಮಾಡುವ ಎಲ್ಲಾ ಕಾಯಕದಲ್ಲೂ ಆತನನ್ನು ಕಾಣಲು ಪ್ರಯತ್ನಿಸೋಣ. ಸರಳತೆ ಮತ್ತು ಪ್ರಾಮಾಣಿಕತೆ ಪ್ರಾರ್ಥನೆಯಲ್ಲಿರಲಿ. ದೇವರು ಆಸ್ತಿ, ಒಡವೆ, ವಸ್ತ್ರ, ಐಶ್ವರ್ಯ, ಆಡಂಬರ ಯಾವುದನ್ನೂ ಕೇಳುವುದಿಲ್ಲ. ಶ್ರದ್ಧೆ, ಅಚಲವಾದ ಭಕ್ತಿ, ನಂಬಿಕೆ, ಶುದ್ಧ ಮನಸ್ಸು ಇಷ್ಟೆ. ಜಾತಿ, ಮತ, ನೀತಿ, ನಿಯಮ, ಕಾಲ, ದೇಶ, ಲಿಂಗ ಭೇದ, ಧರ್ಮ ಇದಾವುದೂ ಭೇದಭಾವ ಭಗವಂತನಿಗೂ ಇಲ್ಲ, ಪ್ರಾರ್ಥನೆಗೂ ಇಲ್ಲ. ‘ಕಾಯಕವೇ ಕೈಲಾಸ’ ಎಂಬ ತತ್ವವನ್ನು ಅಳವಡಿಸುತ್ತ, ನಮ್ಮ ವೃತ್ತಿಧರ್ಮಕ್ಕೆ ಚ್ಯುತಿ ಬಾರದಂತೆ ಅಗೋಚರ ಶಕ್ತಿಯ ಮಹಿಮೆಯನ್ನು ಅರಿಯೋಣ. ಎಲ್ಲರಿಗೂ ಒಳ್ಳೆಯದಾಗಲಿ.
-ರತ್ನಾ ಕೆ.ಭಟ್ ತಲಂಜೇರಿ