ಬಾಳಿಗೊಂದು ಚಿಂತನೆ - 163

ಭಗವಂತನ ಮೇಲೆ ಭಾರಹಾಕಿ, ನೀನೇ ಎಲ್ಲಾ ನೋಡಿಕೊಂಡು ಏನು ಬೇಕಾದರೂ ಮಾಡು ಎಂದು ಸುಮ್ಮನೆ ಕೈಕಟ್ಟಿ ಕುಳಿತರೆ ಹೊಟ್ಟೆ ತುಂಬಲು ಸಾಧ್ಯವೇ? ನಾವು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಡವೇ? ಕಷ್ಟಪಟ್ಟು ಕೆಲಸ ಮಾಡಿದರೆ ಮಾತ್ರ ತುತ್ತಿನ ಚೀಲ ತುಂಬಬಹುದು. ಇತರರ ಅನ್ನವನ್ನು ಕಸಿಯಬಾರದಲ್ಲವೇ? ಅದನ್ನು ಉಂಡರೂ ದೇಹಕ್ಕೆ ಹಿಡಿಸದು.
‘ಕಾಯಕವೇ ಶಿವನ ಪೂಜೆ’ ಇದ್ದಂತೆ. ‘ಕೈ ಕೆಸರಾದರೆ ಬಾಯಿಗೂ ಮೊಸರು ಸಿಗಬಹುದು’. ಸುಮ್ಮನೆ ಕುಳಿತರೆ ಹಣ ಕೊಟ್ಟರೆ ಹಾಲು ತಂದು ಮೊಸರು ಮಾಡಬಹುದು ಎಂಬ ಧೋರಣೆ ಇರಬಹುದು. ಆದರೆ ಆ ಹಣ ಕೊಡಲು, ಸಂಪಾದಿಸಲು ದುಡಿಮೆ ಬೇಕಲ್ಲವೇ? ದುಡಿಯೋಣ, ಗಳಿಸೋಣ, ಉಣ್ಣೋಣ. ಹಿರಿಯರಾದವರು ದುಡಿಮೆಯ ದಾರಿಯನ್ನು ಕಿರಿಯರಿಗೆ ಕಲಿಸಬೇಕು. ಇಲ್ಲದಿದ್ದರೆ ಉಂಡಾಡಿಗಳಾಗಬಹುದು. ಮನೆಗೂ, ಸಮಾಜಕ್ಕೂ ಯಾವುದೇ ಉಪಯೋಗವಿಲ್ಲದ ಮಕ್ಕಳಾಗಬಹುದು. ಹೋಗಲಿ ಅವರ ಅನ್ನ ಆದರೂ ಗಳಿಸಿಯಾರೆಂದರೆ ಅದೂ ಇಲ್ಲ. ಸರಿಯಾದ ಮಾರ್ಗದರ್ಶನ ನೀಡಬೇಕಾದ ಪ್ರಾಯದಲ್ಲಿ ನೀಡಲೇ ಬೇಕು.
*ನ ದೈವಮಿತಿ ಸಂಚಿಂತ್ಯ ತ್ಯಜೇದುದ್ಯೋಗಮಾತ್ಮನಃ/*
*ಅನುದ್ಯಮೇನ ಕಸ್ತ್ಯೆಲಂ ತಿಲೇಭ್ಯಃ ಪ್ರಾಪ್ತುಮರ್ಹತಿ//*
ದೈವದೇವರುಗಳ ಮೇಲೆ ಭಾರ ಹಾಕಿ ಮನುಷ್ಯ ತನ್ನ ಉದ್ಯೋಗವನ್ನು ಬಿಡಕೂಡದು. ಕಷ್ಟ ಬಂದು ಸಂಪಾದಿಸಿದ್ದರಲ್ಲಿ ಉಣ್ಣುವಾಗ ಆಗುವ ಸಂತೋಷ ಅಷ್ಟಿಷ್ಟಲ್ಲ. ಕೈಯಿಂದ ಕೆಲಸ ಮಾಡದೆ ಎಳ್ಳಿನಿಂದ ಎಣ್ಣೆ ತೆಗೆಯಬಲ್ಲೆ ಎಂದರೆ ಹೇಗೆ? ದುಡಿಮೆ ಎನ್ನುವುದು ಯಾವ ವ್ಯಕ್ತಿಯನ್ನೂ ವಂಚಿಸಲಾರದು. ಆದರೆ ವ್ಯಕ್ತಿಯೇ ದುಡಿಮೆಗೆ ವಂಚಿಸಬಲ್ಲ. ಕೆಲಸ ಮಾಡಲು ಸೋಮಾರಿತನ ಅಡ್ಡಗೋಡೆಯಾಗದಂತೆ ಎಚ್ಚರಿಕೆ ವಹಿಸಬೇಕು.
-ರತ್ನಾ ಕೆ ಭಟ್ ತಲಂಜೇರಿ
(ಶ್ಲೋಕ: ಸುಭಾಷಿತ ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ