ಬಾಳಿಗೊಂದು ಚಿಂತನೆ - 168

ನಮಗೇನೋ ಕಷ್ಟ ಕಾಯಿಲೆ ಬಂತೆಂದು ವೈದ್ಯರ ಹತ್ತಿರ ಹೋಗುತ್ತೇವೆ. ಅವರು ಪರೀಕ್ಷಿಸಿ ಔಷಧ ಕೊಡುತ್ತಾರೆ. ಅಷ್ಟರಲ್ಲಿ ಮನೆಗೆ ಬಂದ ಹಿರಿಯ ಮಹಿಳೆಯೊಬ್ಬರು ಜ್ಯೋತಿಷಿಯ ಬಳಿಗೆ ಹೋಗಿ ವಿಚಾರಿಸಿ ಹೇಳುತ್ತಾರೆ. ರೋಗ, ಕಷ್ಟ-ನಷ್ಟ ಬಂದಾಗ ಮನೆಯ ಯಜಮಾನನಿಗೆ ತಲೆಯೇ ಓಡುವುದಿಲ್ಲ. ಜೋಯಿಸರ ಬಳಿಗೆ ಹೋಗುವಾಗ ಅವರು ಕೆಲವು ಶಾಂತಿ ಪೂಜೆ ಹೋಮ ಇತ್ಯಾದಿ ಪರಿಹಾರ ಹೇಳುತ್ತಾರೆ. ಅದೂ ಆಯಿತು. ಅಂತು ರೋಗ ಗುಣ ಆಯಿತು. ಮನೆಯವರೆಲ್ಲ ಜೋಯಿಸರ ಬಗ್ಗೆ ಬಹಳ ಗೌರವವಿಟ್ಟವರು. ಅವರಿಂದಾಗಿಯೇ ಸೌಖ್ಯ ಸಿಕ್ಕಿದ್ದು ಎಂದು ಪ್ರಚಾರವಾಗಿ, ಜೋಯಿಸರಲ್ಲಿಗೆ ಜನ ಕಷ್ಟ ಹೇಳಿಕೊಂಡು ಬರಲಾರಂಭಿಸಿದರು. ಅವರಿಗೆ ಶುಕ್ರದೆಸೆ ಆರಂಭವಾಯಿತು. ವೈದ್ಯರೋ ನಾಲ್ಕಾರು ಜನರು ಹೇಳುವುದು ಕೇಳಿ ಒಳಗೊಳಗೆ ನಗುತ್ತಿದ್ದರು.
ಇದನ್ನೆ ಹೇಳುವುದು ‘ಕಾಕತಾಳೀಯ ನ್ಯಾಯವೆಂದು’ ಒಂದಕ್ಕೊಂದು ಸಂಬಂಧವಿಲ್ಲದಿದ್ದರೂ, ಆ ಸಂದರ್ಭದಲ್ಲಿ ಹಾಗೆ ಮಾಡಿಸುತ್ತದೆ.
*ಕಾಕತಾಳೀಯ ಕಥೆ ಲೋಕಚರಿತೆಯೊಳೆಷ್ಟೋ!/*
*ಟೀಕೆಗೆಟುಕವು ನಮಗೆ *ಕಾರ್ಯಕಾರಣಗಳ್//*
*ಏಕೊ* *ಕಣ್ಣಲೆಯುವುದು;ಏನೊ* *ಅದ ಪಿಡಿಯುವುದು/*
*ವ್ಯಾಕುಲತೆ ಫಲಿತಾಂಶ---ಮಂಕುತಿಮ್ಮ//*
ಯಾವ ಕಾರಣಗಳೂ ಇಲ್ಲದೆ ದಿನನಿತ್ಯದ ಕೆಲಸಕಾರ್ಯಗಳು ಅದರಷ್ಟಕ್ಕೆ ನಡೆಯುತ್ತದೆ. ಕಾಗೆ ಮರದ ಮೇಲೆ ಕುಳಿತುಕೊಳ್ಳುವುದಕ್ಕೂ ತಾಳೆಹಣ್ಣು ಉದುರುವುದಕ್ಕೂ ಸರಿಯಾಯಿತು ಎಂಬ ನ್ಯಾಯ ‘ಕಾಕತಾಳೀಯ ನ್ಯಾಯ’. ಇದರ ಹಿಂದಿನ, ಹಿನ್ನೆಲೆಯ ಕಾರಣ ಹುಡುಕುತ್ತಾ ಹೋದರೆ, ವಿಮರ್ಶೆ ಮಾಡಲು ಅಸಾಧ್ಯವಾದ್ದು. ನಮ್ಮ ಕಣ್ಣುಗಳು ಹುಡುಕುವುದು ಏನನ್ನೋ, ಮತ್ತೇನೋ ಸಿಗುತ್ತವೆ. ಇಲ್ಲಸಲ್ಲದ ಚಿಂತೆಗಳು ಕಟ್ಟಿಟ್ಟ ಬುತ್ತಿಯಂತೆ.
ಅದರ ಪರಿಹಾರಕ್ಕೆ ಮತ್ತು ಮತ್ತೂ ಧನ ವಿನಿಯೋಗ. ಅದರಿಂದ ಉತ್ತಮ ಯಾವುದೆಂದು ಕುಳಿತು ಆಲೋಚಿಸಿ ಕೈಗೊಳ್ಳುವುದು ಒಳ್ಳೆಯದಲ್ಲವೇ? ಸಾಲಸೋಲ ಮಾಡುವುದು ದೊಡ್ಡದಲ್ಲ. ಅದರ ಹೊರೆ ಹೊರಲಾರದಷ್ಟಾದರೆ ‘ಹೊನ್ನಶೂಲ’ ವಾಗಬಾರದಲ್ಲ? ಧಾರಾಳ ಕಟ್ಟಿಟ್ಟವನಿಗೆ ಹಣದ ಕೊರತೆ ಕಾಡದು. ದುಡಿದರೆ ಮಾತ್ರ ಊಟ ಎಂಬುವನಿಗೆ ಎಷ್ಟು ಕಷ್ಟ. ನಾಲ್ಕು ಜನ ಗೊತ್ತಿದ್ದವರ ಹತ್ತಿರ ಸಮಾಲೋಚನೆ ಮಾಡುವುದು ಸೂಕ್ತ. ಕಷ್ಷ ಬಂದಾಗ ನೋವು, ಸಿಟ್ಟು, ಹತಾಶೆ, ಬೇಸರ ಎಲ್ಲ ಒಟ್ಟೊಟ್ಟಿಗೆ ಬರುವುದು ಸಹಜ. ಆಗ ನಮ್ಮ ಆತ್ಮೀಯರ ಹತ್ತಿರ ಸಮಾಧಾನದಲ್ಲಿ ಕುಳಿತು ಮಾತನಾಡಿ ದಾರಿ ಕಂಡುಕೊಳ್ಳಬೇಕು. ನಮ್ಮ ತಾಪತ್ರಯಗಳಿಗೆ ನಮ್ಮಲ್ಲಿಯೇ ಪರಿಹಾರವಿದೆ. ಅದನ್ನು ಹುಡುಕುವ ವ್ಯವಧಾನ, ಮನಸ್ಸು, ಆಸಕ್ತಿ, ಬುದ್ಧಿವಂತಿಕೆ ನಮಗಿರಬೇಕು.
-ರತ್ನಾ ಕೆ ಭಟ್ ತಲಂಜೇರಿ
(ಆಧಾರ: ಮಂಕುತಿಮ್ಮನ ಕಗ್ಗ)
ಚಿತ್ರ ಕೃಪೆ: ಇಂಟರ್ನೆಟ್ ತಾಣ