ಬಾಳಿಗೊಂದು ಚಿಂತನೆ - 171

ಸಾಮಾನ್ಯವಾಗಿ ಕಷ್ಟಗಳು ಬಂದಾಗ ಅಯ್ಯೋ ಎಂದು ದು:ಖಿಸುವುದು ಸಹಜ. ಆಕಾಶವೇ ತಲೆಯ ಮೇಲೆ ಬಿದ್ದ ಹಾಗೆ ಆಗುತ್ತದೆ. ಹಣಕಾಸಿನ ವಿಚಾರ, ಸಾಲಸೋಲಗಳಾದರೆ ಕೇಳುವುದೇ ಬೇಡ. ಪುರಾಣಗಳಲ್ಲೂ ನಾವು ಹಲವಾರು ಸನ್ನಿವೇಶಗಳನ್ನು ಓದಬಹುದು. ಇದಕ್ಕೊಂದು ಉದಾಹರಣೆ ಮಹಾಭಾರತ ಮಹಾಕಾವ್ಯದಲ್ಲಿ ಒಂದೆಡೆ ಓದಿದ್ದು ನೆನಪಾಯಿತು. ಪಾಂಡವರು ಅರಣ್ಯವಾಸದಲ್ಲಿ ಕಷ್ಟ ಪಡುತ್ತಾ ಇರುವ ಕಾಲಕ್ಕೆ ವೇದವ್ಯಾಸರು ಬಂದರಂತೆ. ಮೊಮ್ಮಕ್ಕಳ ದು:ಖವನ್ನು ನೋಡಿ ಬಹಳ ಬೇಸರವೂ ಆಗಿ ಲೋಕ ನೀತಿಯನ್ನು ಹೇಳಿ ಸಮಾಧಾನ ಪಡಿಸಿದರಂತೆ.
*ನಾತಪ್ತ ತಪಸೋ ಲೋಕೇ ಪ್ರಾಪ್ನುವಂತಿ ಮಹಾಸುಖಂ*/
*ಸುಖದ:ಖೇ ಹಿ ಪುರುಷ: ಪರ್ಯಾಯೇಣೋಪಸೇವತೇ*//
ತಪಸ್ಸು, ಸ್ವಾಧ್ಯಾಯ, ವ್ರತಾದಿಗಳನ್ನು ಮಾಡದವರಿಗೆ ಶಾಶ್ವತ ಸುಖ ಸಂತೋಷಗಳು ಲಭಿಸಿದ್ದಿಲ್ಲ. ಸುಖದ ನಂತರ ದುಃಖ, ದುಃಖದ ನಂತರ ಸುಖ ಇದು ಪರ್ಯಾಯದ ಹಾಗೆ. ಯಾರಿಗೂ ಶಾಶ್ವತ ಸುಖ ಇಲ್ಲ. ಕತ್ತಲು ಬೆಳಕಿನಾಟ, ಉದಯಾಸ್ತಮಾನದ ಹಾಗೆ. ಹಿಗ್ಗದೆ ಕುಗ್ಗದೆ ಅನುಭವಿಸಬೇಕು. ಸಮಸ್ಥಿತಿಯಿರಬೇಕು.
ರೈತರು, ಕೃಷಿಕರು ಗಾಳಿಮಳೆಗೆ ಫಸಲನ್ನೆಲ್ಲ ಕಳಕೊಳ್ಳುತ್ತಾರೆ. ಹಾಗೆಂದು ಮುಂದಿನ ವರ್ಷ ಬೆಳೆ ಬೆಳೆಯುವುದಿಲ್ಲವೇ? ಹಾಗೆ ನಿಮಗೆ ಸಹ ಈಗ ಕಷ್ಟ ಬಂದಿದೆ. ಮುಂದೆ ಸುಖ ಇದೆ. ಬೇಸರಿಸದಿರಿ ಎಂದು ಹೇಳಿದಾಗ ಪಾಂಡವರಿಗೆಲ್ಲ ಒಮ್ಮೆ ಸಮಾಧಾನವಾಯಿತಂತೆ. ಕಷ್ಟದಲ್ಲಿರುವಾಗ ಹಿರಿಯರು, ಸ್ನೇಹಿತರು ಸಾಂತ್ವನದ ನಾಲ್ಕು ನುಡಿಗಳನ್ನು ಹೇಳುವುದು ಧರ್ಮ. ಬದುಕಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಹಣಬೇಡ. ಮನಸ್ಸಿದ್ದರೆ ಸಾಕು.
-ರತ್ನಾ ಕೆ. ಭಟ್ ತಲಂಜೇರಿ
(ಶ್ಲೋಕ: ಮಹಾಭಾರತ)