ಬಾಳಿಗೊಂದು ಚಿಂತನೆ - 207

ಬಾಳಿಗೊಂದು ಚಿಂತನೆ - 207

ಸಮಸ್ತ ಜಗತ್ತಿಗೂ ತಂದೆ ಆ ಪರಮೇಶ್ವರ. ತಂದೆ ಹೇಗೆ ತನ್ನ ಕಂದನನ್ನು ಪೋಷಿಸುವನೋ ಹಾಗೆ ಆ ಶಂಕರನು, ಈಶ್ವರನು ಜಗದ ಜೀವರಾಶಿಗಳನ್ನು ಕಾಪಾಡುತ್ತಾನೆ ಎನ್ನುವ ನಂಬಿಕೆ ನಮ್ಮೆಲ್ಲರದು. ಅವನ ಆಣತಿಯಿಲ್ಲದೆ ಒಂದು ಹುಲ್ಲುಕಡ್ಡಿ ಸಹ ಅಲುಗಾಡದು. ಭಗವಂತ ನಿರಾಕಾರ ಸ್ವರೂಪನು .ಅವನಿಗೆ ಯಾವುದೇ ಆಡಂಬರಗಳು ಬೇಕಾಗಿಲ್ಲ. ನಿರ್ಮಲ ಚಿತ್ತ, ಏಕಾಗ್ರತೆ, ಶ್ರದ್ಧೆ, ಕಾಯಕನಿಷ್ಠೆ ಪ್ರಿಯನು.

*ಪಿತಾ ಯಥಾ ರಕ್ಷತಿ ಪುತ್ರ ಮೀಶ*

*ಜಗತ್ಪಿತಾ ತ್ವಂ ಜಗತಃ ಸಹಾಯಃ/*

*ಕೃತಾಪರಾಧಂ ತವ ಸರ್ವಕಾಲೇ*

*ಕೃಪಾನಿಧೇ ಮಾಂ ಶಿವ ಪಾಹಿ ಶಂಭೋ//*

ನಾವು ಈಶ್ವರ ದೇವರನ್ನು ನಿರ್ಗುಣ ಸಂಪನ್ನ, ನಿರಾಕಾರ, ಎಂದು ಹೇಳುವುದಿದೆ. ತಂದೆ, ಶ್ರೇಷ್ಠನಾದ ಗುರು, ಸರಿಸಮಾನರಾದವರು ಬೇರೆ ಯಾರೂ ಇಲ್ಲ ಈ ಪ್ರಪಂಚದಲ್ಲಿ. ಅಪ್ರತಿಮ ಪ್ರಭಾವ ವಿರುವವನು. ತಂದೆ ಮಗನ ಸಂಬಂಧದಂತೆ ಬಹಳ ಬೆಲೆಯುಳ್ಳ ಬಂಧವಾಗಿದೆ. ಸನ್ಮಾರ್ಗದಲ್ಲಿ ನಡೆಸುವವನು, ಬುದ್ಧಿ ತಿದ್ದುವವನು, ಭಯಮುಕ್ತಿಗೊಳಿಸುವವನು ಆಗಿದ್ದಾನೆ. ಅಂಧಕಾರದ ಭಯ ಹೋಗಲಾಡಿಸಲು, ಸೂರ್ಯ, ಚಂದ್ರ, ತಾರೆಗಳ ಸೃಷ್ಟಿ ಯಾಯಿತು. ಹಸಿವಿನ ಶಮನಕ್ಕಾಗಿ ದವಸಧಾನ್ಯ, ನದಿಗಳು, ಹಸಿರು ಸಸ್ಯಗಳು ಸೃಷ್ಟಿಯಾಯಿತು. ಇದಕ್ಕೆಲ್ಲ ಈಶ್ವರಾನುಗ್ರಹ ಕಾರಣವಾಯಿತು.

ಎಲ್ಲಾ ಶಾಸ್ತ್ರಗಳ ಸೃಷ್ಟಿಯಾಗಿ, ಅದರಲ್ಲಿ ಸತ್ಕರ್ಮ, ದುಷ್ಕರ್ಮಗಳ ಮರ್ಮವನ್ನು ನೀಡಲಾಯಿತು. ಯಾವಾಗ ಜಗತ್ತಿನಲ್ಲಿ ಜೀವರಾಶಿಗಳ ಉದ್ಭವವಾಯಿತೋ ಆಗಲೇ ಸನ್ಮಾರ್ಗದಲ್ಲಿ ನಡೆಯುವ ದಾರಿ ಸಹ ಆ ಭಗವಂತ ನೀಡಿ ಸಹಕರಿಸಿದನು. ನಾವು ಮಾತ್ರ ನಮಗೆ ಬೇಕಾದಂತೆ ಸಾಗುತ್ತೇವೆ. ತಪ್ಪಲ್ಲ, ಸಾಗುವಾಗ ಎಚ್ಚರಿಕೆಯಿರಲಿ. ಕಷ್ಟ-ನಷ್ಟಗಳು ಬರದಂತಿರಲಿ. ಎಲ್ಲವನ್ನೂ ಮೇಲೊಬ್ಬ ತನ್ನ ಅನಂತ ಚಕ್ಷುಗಳಿಂದ ವೀಕ್ಷಿಸುತ್ತಾನೆಂಬ ಒಳಪ್ರಜ್ಞೆಯಿರಲಿ.

-ರತ್ನಾ ಕೆ ಭಟ್ ತಲಂಜೇರಿ

(ಆಕರ ಗ್ರಂಥ : ಪುರಾಣ ಉಪದೇಶ ಸುಧಾ)

ಚಿತ್ರ ಕೃಪೆ: ಇಂಟರ್ನೆಟ್ ತಾಣ