ಬಾಳಿಗೊಂದು ಚಿಂತನೆ - 87

ನಮಗೆ ಏನಾದರೂ ಹುಶಾರು ತಪ್ಪಿದರೆ ನಾವು ವೈದ್ಯರ ಬಳಿ ಹೋಗ್ತೇವೆ. ಪ್ರಾರಂಭದಲ್ಲಿ ಸಣ್ಣಪುಟ್ಟ ಜ್ವರ, ಹೊಟ್ಟೆನೋವು, ತಲೆನೋವು, ಮೈಕೈನೋವು, ಗಂಟು ನೋವು ಆದಾಗ ನಮ್ಮದೇ ಆದ ಕೆಲವು ಮದ್ದುಗಳನ್ನು ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿ ಕಷಾಯ, ಎಣ್ಣೆ ಇತ್ಯಾದಿ ತಯಾರಿಸಿ ತೆಗೆದುಕೊಳ್ಳುತ್ತೇವೆ. ಒಮ್ಮೊಮ್ಮೆ ಕಡಿಮೆಯಾಗುತ್ತದೆ. ಒಂದೆರಡು ದಿನಗಳಲ್ಲಿ ಕಡಿಮೆ ಆಗದಿದ್ದರೆ ಮತ್ತೆ ವೈದ್ಯರ ಬಳಿ ಹೋಗುವುದು ವಾಡಿಕೆ.
*ವ್ಯಾಧೇಸ್ತತ್ತ್ವಪರಿಜ್ಞಾನಂ* *ವೇದನಾಯಾಶ್ಚ ನಿಗ್ರಹಃ/*
*ಏತದ್ವೈದ್ಯಸ್ಯ ವೈದ್ಯತ್ವಂ ನವೈದ್ಯಃ ಪ್ರಭುರಾಯುಷಃ//*
ವೈದ್ಯರ ಹತ್ತಿರ ಹೋದಾಗ ,ವ್ಯಾಧಿಯ ಸ್ವರೂಪವನ್ನು ಸರಿಯಾಗಿ ನಾವು ಹೇಳಬೇಕು. ಸಮರ್ಪಕ ವೈದ್ಯನು ವ್ಯಾಧಿಯ ಸ್ವರೂಪವನ್ನು ತಿಳಿದು, ಬೇಕಾದ ಮದ್ದು ನೀಡುವನು. ಇವೆರಡನ್ನೂ ಅರಿತು ವ್ಯವಹರಿಸುವವನೇ ನಿಜವಾದ ವೈದ್ಯ. ಆದರೆ ‘ಆಯುಷ್ಯದ ಒಡೆಯ’ ವೈದ್ಯನಲ್ಲ. ಆಯುಷ್ಯ ನೀಡುವವ ಮೇಲೊಬ್ಬ ಕುಳಿತು ಎಲ್ಲವನ್ನೂ ನೋಡುವ ಕಣ್ಣಿಗೆ ಕಾಣದ ಶಕ್ತಿ (ಭಗವಂತ). ನಾವು ಬುವಿಯಲ್ಲಿ ಹುಟ್ಟುವಾಗಲೇ ನಮ್ಮ ಆಯುಷ್ಯ ನಿರ್ಧಾರವಾಗಿರುತ್ತದೆ.
ಹುಟ್ಟು -ಸಾವುಗಳ ಬಗ್ಗೆ ನಮಗೇನೂ ಹೇಳಲು ಸಾಧ್ಯವಿಲ್ಲ. ಇವೆರಡರ ನಡುವೆ ನಮ್ಮದು ಹೋರಾಟ ಅಷ್ಟೆ. ಹಾಗೆಂದು ಅಸಡ್ಡೆ ಸಲ್ಲದು. ನಮ್ಮದೇ ಆದ ಕರ್ತವ್ಯ ನಾವು ಮಾಡಲೇ ಬೇಕು. ಎಲ್ಲಿಯಾದರೂ ಮೊದಲೇ ಎಲ್ಲವೂ ತಿಳಿದರೆ ನಾವೇನು ಮಾಡುತ್ತಿದ್ದೆವೋ ಅದನ್ನು ಊಹಿಸಲೂ ಸಾಧ್ಯವಿಲ್ಲ. ನಮಗೆ ಔಷಧ ನೀಡಿ ಸಹಕರಿಸುವ ವೈದ್ಯರನ್ನು ನಾವು ಹೀಯಾಳಿಸುವುದು, ಅಪಚಾರ ಮಾಡುವುದು ಮಾಡಬಾರದು. ಮೊದಲು ನಂಬಿಕೆ ಮತ್ತು ವಿಶ್ವಾಸ ಬೇಕು. ಅದೇ ಇಲ್ಲದವಗೆ ಎಷ್ಟು ಮದ್ದು ನೀಡಿದರೂ ಪರಿಹಾರ ಸಿಗದು, ಗುಣವಾಗದು. ವೈದ್ಯರ ಮೇಲೆ ಹಲ್ಲೆ ನಾವು ನಿಯತಕಾಲಿಕೆಗಳಲ್ಲಿ, ದೂರದರ್ಶನದಲ್ಲಿ ಸುದ್ಧಿಗಳನ್ನು ಕೇಳುತ್ತೇವೆ, ಓದುತ್ತೇವೆ. ಅದು ತಪ್ಪು ನಿರ್ಧಾರ, ಹತಾಶೆ, ಉದ್ಧಟತನದ ಪರಮಾವಧಿಯಿಂದ ಆಗುವುದು. ಮೊದಲೇ ಕರೆತಂದರೆ ರೋಗಿಯನ್ನು ಉಳಿಸಬಹುದಿತ್ತೇನೋ? ಎಲ್ಲಾ ಆದ ಮೇಲೆ ಬಂದರೆ, ವೈದ್ಯರ ಮಾತನ್ನು ಕೇಳದಿದ್ದರೆ, ಎಲ್ಲದರಿಂದ ಹೆಚ್ಚು ಆಯುಷ್ಯವೇ ಇಲ್ಲದಿದ್ದರೆ ಏನೂ ಮಾಡಲಾಗದು. ಹಾಗಾಗಿ ಅವರ ಕಷ್ಟವನ್ನೂ ಅರ್ಥ ಮಾಡಿಕೊಂಡು ವ್ಯವಹರಿಸೋಣ. ವೈದ್ಯರು ದೇವರೇ ಅಲ್ಲ, ದೇವರನ್ನು ಅವರಲ್ಲಿ ಕಾಣುವ ಮನೋಭಾವ ನಮ್ಮಲ್ಲಿರಬೇಕಷ್ಟೆ. ನಾವು ಮಾಡುವ ಕರ್ತವ್ಯ ಮಾಡೋಣ.
-ರತ್ನಾ. ಕೆ.ಭಟ್, ತಲಂಜೇರಿ
ಶ್ಲೋಕ: ಸರಳ ಸುಭಾಷಿತ
ಚಿತ್ರ ಕೃಪೆ: ಇಂಟರ್ನೆಟ್ ತಾಣ