ಬಿದಿಗೆ ಚಂದ್ರಮನ ಬಿಕ್ಕು

ಬಿದಿಗೆ ಚಂದ್ರಮನ ಬಿಕ್ಕು

ಪುಸ್ತಕದ ಲೇಖಕ/ಕವಿಯ ಹೆಸರು
ಶುಭಶ್ರೀ ಭಟ್ಟ
ಪ್ರಕಾಶಕರು
ಹರಿವು ಬುಕ್ಸ್, ಬಸವನಗುಡಿ, ಬೆಂಗಳೂರು -೫೬೦೦೦೪
ಪುಸ್ತಕದ ಬೆಲೆ
ರೂ. ೧೭೦.೦೦, ಮುದ್ರಣ: ೨೦೨೫

ಉದಯೋನ್ಮುಖ ಕಥೆಗಾರ್ತಿ ಶುಭಶ್ರೀ ಭಟ್ಟ ಅವರ ನೂತನ ಕಥಾ ಸಂಕಲನ ‘ಬಿದಿಗೆ ಚಂದ್ರಮನ ಬಿಕ್ಕು’ ಬಿಡುಗಡೆಯಾಗಿದೆ. ಈ ಕೃತಿಗೆ ಖ್ಯಾತ ಬರಹಗಾರ ವಿಕಾಸ ನೇಗಿಲೋಣಿ ಮುನ್ನುಡಿಯನ್ನು ಬರೆದಿದ್ದಾರೆ. ಅವರ ಮುನ್ನುಡಿಯ ಕೆಲವು ಸಾಲುಗಳು …

“ಮನುಷ್ಯ ಸೂಕ್ಷ್ಮವಾಗುತ್ತಾ ಆಗುತ್ತಾ ಅಸೂಕ್ಷ್ಮವನ್ನು ಗ್ರಹಿಸಬಲ್ಲವನಾಗುತ್ತಾನೆ. ಬೇಕಿದ್ದರೆ ಸುಮ್ಮನೇ ಯೋಚನೆ ಮಾಡಿ, ಒಬ್ಬ ಸೂಕ್ಷ್ಮ ವ್ಯಕ್ತಿಗೆ ಎಲ್ಲವೂ ಕಾಣಿಸತೊಡಗುತ್ತದೆ. ತೀರಾ ನಾಟಕೀಯತೆಯನ್ನೂ, ಕ್ರೌರ್ಯ ಮರೆಸಿ ತೋರುವ ಕಪಟ ಮಾನವತೆಯನ್ನೂ ಗ್ರಹಿಸಬಲ್ಲ. ಸೂಕ್ಷ್ಮ ವ್ಯಕ್ತಿ ಒಂದು ಮನೆ ಹೊಕ್ಕೊಡನೆ ಅಲ್ಲಿ ಮರೆಮಾಚಿಟ್ಟಿರುವ ಎಲ್ಲವನ್ನೂ ಗ್ರಹಿಸಬಲ್ಲ, ಮರೆಮಾಚಿಟ್ಟು ನಗುಮುಖದಲ್ಲಿ ವ್ಯವಹರಿಸುವ ಮನುಷ್ಯರನ್ನೂ ಗ್ರಹಿಸಬಲ್ಲ.

ಆದರೆ ಇದು ವರವೋ ಶಾಪವೋ, ಸೂಕ್ಷ್ಮ ವ್ಯಕ್ತಿತ್ವದವರು ತಮ್ಮ ಸೂಕ್ಷ್ಮತೆಯಿಂದ ಅನುಭವಿಸುವವರ ಜೀವನದ ಮೇಲೆ ಅವಲಂಬಿಸಿದೆ. What women want' ಅನ್ನುವ ಸಿನಿಮಾದಲ್ಲಿ ಒಬ್ಬ ವ್ಯಕ್ತಿಗೆ ಎಲ್ಲ ಹೆಣ್ಮಕ್ಕಳ ಮನಸ್ಸಿನ ಮಾತು ಕೇಳುವ ವರ ಲಭಿಸಿದ ಮೇಲೆ ಅವನ ಜೀವನ ಸಂಕಟಮಯವಾಗುತ್ತದಲ್ಲಾ, ಅದೇ ಸೂಕ್ಷ್ಮ ಮನಸ್ಥಿತಿಯವರ ಸಂಕಟ ಕೂಡ. ಅಂಥ ಸೂಕ್ಷ್ಮ ಗ್ರಹಿಕೆ ಒಬ್ಬ ಕತೆಗಾರನಿಗೋ, ಕವಿಗೋ ವರ. ಮಾಸ್ತಿ ವೆಂಕಟೇಶ ಅಯ್ಯಂಗಾರರು ಬರೆದಂತೆ 'ಕಪಿ ಹಾರಿತು ಹೆಗ್ಗಡಲನೇ ಎಂಬೆ, ಕಡಲನೇ ಕಡೆದರು ಬೆಟ್ಟದೊಳೆಂಬೆ, ನಿನ್ನೂಹೆಯ ಹೇರಾಳವ ತುಂಬೇ, ಸೃಷ್ಟಿಕರ್ತನಿಗೂ ಅರಿದೆಂಬೆ' ಸಾಹಿತ್ಯ ಸೂಕ್ಷ್ಮದಲ್ಲಿದೆ, ಕಲ್ಪನೆಯಲ್ಲಿದೆ, ರೇಷ್ಮೆನೂಲಿನ ನವಿರಲ್ಲಿದೆ.

ಇಲ್ಲಿ ಕತೆಗಾರ್ತಿ ಶುಭಶ್ರೀ ಭಟ್ಟ ಗೆಲ್ಲುತ್ತಾರೆ. ಈಗಾಗಲೇ ಸಾಹಿತ್ಯ ಲೋಕದಲ್ಲಿ ಸೂಕ್ಷ್ಮ ಬರಹಗಾರ್ತಿಯಾಗಿ ಗುರುತಿಸಿಕೊಂಡಿರುವ ಶುಭಶ್ರೀ ಅವರು ಎಲ್ಲದರ ಕಡೆಗೂ ಸೂಕ್ಷ್ಮ ನೋಟ ಹರಿಸುವವರು, ಎಲ್ಲ ಭಾವುಕ ಜಗತ್ತಿಗೂ ತಮ್ಮ ಬರವಣಿಗೆಯ ಶಕ್ತಿಯಿಂದ ಸಂಚರಿಸಬಲ್ಲವರು, ಮಿಕ್ಕವರ ದುಃಖಕ್ಕೆ ತಾವೇ ಬಿಕ್ಕಿ ಭುಜದ ಆಸರೆಯನಿಟ್ಟು ಸಾಂತ್ವನದಲ್ಲಿ ತಾಯಿಯೇ ಆಗುವಂಥವರು. 'ಬಿದಿಗೆ ಚಂದ್ರಮನ ಬಿಕ್ಕು' ಎಂಬ ಈ ಸಂಕಲನದ ಶೀರ್ಷಿಕೆಯಂತೆ ಇಲ್ಲಿನ ಅಷ್ಟೂ ಕತೆಗಳು; ನಾನಾ ಪಾತ್ರಗಳ ಬಿಕ್ಕುಗಳು ಅಥವಾ ಬಿಕ್ಕಿಗೆ ನಾನಾ ಕಾರಣಗಳು ಮತ್ತು ಲಿಯೋ ಟಾಲ್ ಸ್ಟಾಯ್ 'ಅನ್ನ ಕರೆನ್ನಿನಾ' ಕಾದಂಬರಿಯಲ್ಲಿ ಹೇಳುವ ಪ್ರಸಿದ್ಧ , 'All happy families are alike; each unhappy family is unhappy in its own way.' ಕುಟುಂಬಗಳ ದುಃಖ, ಬಿಕ್ಕಿನ ವಿವಿಧ ಮಜಲುಗಳನ್ನು ಹೇಳುತ್ತವೆ.

ಹದಿನೆಂಟು ಕತೆಗಳುಳ್ಳ ಈ ಸಂಕಲನದಲ್ಲಿ ಬಹುತೇಕ ಪಾತ್ರಗಳು ಉತ್ತರ ಕನ್ನಡದ ಬೇರಿನಲ್ಲಿ ಅರಳಿದ ಪಾಪದ ಹೂಗಳು. ಅವರ ಕತೆ ಹೇಳಲು ಶುಭಶ್ರೀ ಬಳಸುವ ಭಾಷೆ ಬಹುತೇಕ ಉತ್ತರ ಕನ್ನಡದ ಕೆಳ ಸಮುದಾಯದ್ದು. ಜೊತೆಗೆ ಮಕ್ಕಳಾಗದವರ ಬಿಕ್ಕು, ಗಂಡನ ದೌರ್ಬಲ್ಯದ ನೆರಳಲ್ಲಿ ನರಳುವ ಹೆಣ್ಮಕ್ಕಳ ಬಿಕ್ಕು, ಮನೆ ತೊರೆದು ಹೋದವರ ನರಳುಗಳನ್ನೆಲ್ಲಾ ಗದ್ಗದಿತ ಕೊರಳಿನಿಂದ ಹೇಳುತ್ತಾ ಹೋಗುತ್ತಾರೆ. ಸಂಕಲನದ ಅತ್ಯಂತ ಗಾಢ ಕತೆಯೆಂದರೆ 'ಹಗಲು ವೇಷ.' ಮನೆ ತೊರೆದು, ಅನ್ಯ ಕೋಮಿನ ಹುಡುಗನನ್ನು ಮದುವೆಯಾಗಿ, ನರಳುವ ಹೆಣ್ಮಗಳೊಬ್ಬಳ ಚಿತ್ರಣ ಇರುವ ಆ ಕತೆಯಲ್ಲಿ ಧರ್ಮ ಅಥವಾ ದ್ವೇಷದ ಸೋಂಕು ಇಲ್ಲದೇ, ಜಡ್ಜ್ ಮೆಂಟಲ್ ಕೂಡ ಆಗದಂತೆ ಹೆಣ್ಣೂಬ್ಬಳ ಅಂತಃಕರಣದಿಂದ ಆಯೇಷಾ ಅನ್ನುವ ಪಾತ್ರವನ್ನು ಕತೆಗಾರ್ತಿ ನಿರ್ವಹಿಸಿದ್ದು ಮೆಚ್ಚುವಂತಿದೆ. ಅದರಲ್ಲೂ ಕತೆಯ ಅಂತ್ಯ ಬಹಳ ಗಾಢವೂ, ಆಘಾತಕಾರಿಯೂ, ಎದೆಗಿರಿಯುವಷ್ಟು ಚೂಪಾಗಿಯೂ ಇದೆ. ಆಸಕ್ತಿಕರ ವಿಷಯವೆಂದರೆ ದೇಹದಾನದಂಥ ವಸ್ತುವನ್ನು ಗಂಡಸಿನ ದೃಷ್ಟಿಕೋನದಲ್ಲಿ ಹೇಳುವ ಕತೆಯೊಂದು ಈ ಸಂಕಲನದಲ್ಲಿದೆ, ಅದು ಇಡೀ ಸಂಕಲನದ ಸ್ತ್ರೀ ದೃಷ್ಟಿಕೋನವನ್ನು ಮುರಿಯುವ ಕತೆಯಾಗಿದೆ.

ಇಂಗ್ಲಿಷ್‌ನಲ್ಲಿ Sappy ಅನ್ನುವ ಒಂದು ಪದವಿದೆ, ಅಂದರೆ ಅತಿ ಭಾವುಕತೆ, insincerely emotional ಅಂತ. ಕಣ್ಣುಂಬಿಕೊಳ್ಳುವಂಥ ಗೋಳಿನ ಕತೆಗಳನ್ನು, ಅಳಿಸಲೆಂದೇ ಬರೆದ ಕತೆಗಳನ್ನು ಈ ರೀತಿ ಕರೆಯಲಾಗುತ್ತದೆ. ಆದರೆ ಭಾವು-ಕತೆ ಎಲ್ಲಾ ಕಲಾ ಪ್ರಕಾರಗಳ ಮೂಲಸ್ರೋತ. ಗೋಳು ಬೇರೆ, ಪೇನ್ ಬೇರೆ. ನೋವನ್ನು ಗೋಳಾಗಿಸದೇ, ಅದನ್ನೊಂದು ಇನ್‌ಸೈಟ್‌ಗೆ ಪರಿವರ್ತಿಸುವುದು ಆಯಾ ಲೇಖಕರ ಕೈಲಿರುತ್ತದೆ. ಶುಭಶ್ರೀ ಅವರ ಕತೆಗಳಲ್ಲಿ ಪಾತ್ರಗಳು ಕಣ್ಣೀರು ಹಾಕುವುದಕ್ಕಿಂತ ಗಂಟಲು ಕಟ್ಟುವ ನೋವು, ನಿರಾಶೆ, ಹತಾಶೆಗಳ ಸನ್ನಿವೇಶಗಳು ಎದುರಾಗುತ್ತವೆ. ಆ ಸಂಯಮ ಶುಭಶ್ರೀ ಅವರ ಕತೆಗಳಲ್ಲಿವೆ ಎನ್ನುವುದನ್ನು ಗಮನಿಸಬೇಕು.

ಬಿಕ್ಕು ಎನ್ನುವುದು ದುಃಖದ ಅನುರಣನ, ಅದು ಕೊಳಕ್ಕೆ ಎಸೆದ ಕಲ್ಲಿನಂತೆ ಅಲೆ ಅಲೆಗಳಾಗಿ ದುಃಖವನ್ನು ಜ್ಞಾಪಿಸುತ್ತದೆ. ಶಾಕುಂತಲೆಯ ದುಃಖಕ್ಕೆ ಅಭಿಜ್ಞಾ ಹೇಗೆ ಜ್ಞಾಪಕಕ್ಕೆ ರೂಪಕವೋ ಶುಭಶ್ರೀ ಕತೆಗಳ ಪಾತ್ರಗಳ ಬಿಕ್ಕೂ ಅವರ ನೋವಿನ ಜ್ಞಾಪಕ. ಅಂಥ ಹಲವು ಜ್ಞಾಪಕಗಳ ಕಟ್ಟು ಈ ಸಂಕಲನವಾಗಿದೆ.

ಮುಂದಿನ ಕತೆಗಳ ಕಟ್ಟು ಬರುವ ಹೊತ್ತಿಗೆ ಲೇಖಕಿಯಾಗಿ ಶುಭಶ್ರೀ ಅವರು ಇನ್ನೂ ಬೆಳೆಯಬೇಕು, ಮಾಗಬೇಕು. ದುಃಖದಿಂದ ಬಿಡಿಸಿಕೊಂಡು ಮತ್ತೊಂದು ವಿಸ್ತರಣೆಗೆ ಸಾಗಬೇಕು. ಓದುಗರ ಇಂಥ ನಿರೀಕ್ಷೆಗೆ ಪರೀಕ್ಷೆಗೊಡ್ಡುವ ಸಂಕಲನ ಇದು.”

ಈ ಕೃತಿಗೆ ಸೊಗಸಾದ ಬೆನ್ನುಡಿ ಬರೆದಿದ್ದಾರೆ ಅರ್ಜುನ್ ದೇವಾಲದಕೆರೆ. ಅವರು ತಮ್ಮ ಬೆನ್ನುಡಿಯಲ್ಲಿ “ಕಥೆಗಳೆಂದರೇನು? ನನ್ನ ಪ್ರಕಾರ ಅನುಭವದ ಹಗೇವಿನಲ್ಲಿ ಕಾಲ್ಪನಿಕತೆಯ ಲೇಪವನ್ನು ಹೊತ್ತು ಹುಟ್ಟುವ ಬರಹಗಳೇ ಕಥೆಗಳು. ಹಾಗೇ ಹುಟ್ಟಬೇಕು ಕಥೆಗಳು, ಅನುಭವಿಸಿ ಬರೆಯದ ಹೊರತು, ಅಸ್ವಾದಿಸಿಕೊಂಡು ಓದಲಾಗುವುದಿಲ್ಲ. ಈ ಇಡೀ ಪುಸ್ತಕದಲ್ಲಿ ಓದುಗನಿಗೊಂದು ಅಂತಹ ಆಸ್ವಾದ ದೊರೆಯುವುದು ಖಂಡಿತ. ಇಲ್ಲಿ ಕಾಗಕ್ಕ-ಗುಬ್ಬಕ್ಕನ ಕಥೆಗಳಿಲ್ಲ. ಇಲ್ಲಿರುವುದೆಲ್ಲ ನಮ್ಮ-ನಿಮ್ಮ ಕಥೆಗಳೇ. ನಾವುಗಳು ಹಿಂದೆಂದೋ ನೋಡಿದ್ದೋ, ಕೇಳಿದ್ದೋ, ಅನುಭವಿಸಿದ ಅನುಭವಗಳೋ ಕಥೆಗಳಾಗಿ ನಮ್ಮ ಮುಂದೆ ನಿಂತಂತೆ ಭಾಸವಾಗುತ್ತದೆ. ಮಲೆನಾಡ ಸೊಗಡಿರುವ ಕಥೆಗಳು, ಬಯಲು ಸೀಮೆಗೂ ಸಲ್ಲುತ್ತವೆ. ಇಲ್ಲಿರುವ ಹೆಂಗಳೆಯರ ನೋವುಗಳು, ಗಂಡಸರನ್ನೂ ಕಾಡುತ್ತವೆ. ಕೆಲವೊಂದು ಕಥೆಗಳು ತರ್ಕಕ್ಕೆ ದೂಡಿದರೆ, ಇನ್ನಷ್ಟು ಕಥೆಗಳು ಮನಸ್ಸನ್ನು ಆದ್ರ್ರಗೊಳಿಸುತ್ತವೆ. ನನ್ನ ಪ್ರಕಾರ ಈ ಪುಸ್ತಕವನ್ನ ಒಂದೇ ಗುಕ್ಕಿನಲ್ಲಿ ಓದಲಾಗುವುದಿಲ್ಲ. ಅದಕ್ಕೆ ಕಾರಣ ಇಲ್ಲಿ ಪ್ರಸ್ತಾಪವಾಗಿರುವ ವಿಷಯಗಳು. ಒಂದು ಕಥೆಯ ವಿಷಯವನ್ನ ಅರಗಿಸಿಕೊಂಡು ಮುಂದಿನ ವಿಷಯಕ್ಕೆ ತಮ್ಮನ್ನ ತಾವು ತೆರೆದುಕೊಳ್ಳಲು ಖಂಡಿತ ಓದುಗನಿಗೆ ಸಮಯಬೇಕು. ಅಷ್ಟು ಗಾಢವಾಗಿವೆ ವಿಷಯಗಳು. ಉಳಿದಂತೆ, ಓದುಗರಿಗೆ ಶ್ರೀಮತಿ ಶುಭಶ್ರೀ ಭಟ್ ಹೊಸಬರಲ್ಲ. ಅವರಿಗೆ ಭಾಷೆಯ ಮೇಲೆ ಮತ್ತು ಬರಹದ ಮೇಲಿರುವ ಅದ್ಭುತ ಹಿಡಿತದ ಬಗ್ಗೆ ಓದುಗರಿಗೆ ತಿಳಿದೇ ಇದೆ. ಹಾಗಾಗಿ ಅದರ ಬಗ್ಗೆ ಹೆಚ್ಚೇನೂ ಹೇಳದೆ, ಮತ್ತೊಂದು ಭಾವಯಾನಕ್ಕೆ ತಯಾರಾಗಿ ಎಂದಷ್ಟೇ ಹೇಳಬಲ್ಲೆ. ಕಥೆಗಳು ನಿಜಕ್ಕೂ ಅದ್ಭುತವಾಗಿ ಮೂಡಿಬಂದಿವೆ. ಓದಿ ನೋಡಿ ಒಮ್ಮೆ... ಹ್ಯಾಪಿ ರೀಡಿಂಗ್.” ಎಂದು ಕಥೆಗಾರ್ತಿಯನ್ನು ಹುರಿದುಂಬಿಸಿದ್ದಾರೆ.