ಭಾರತದ ಜ್ವಲಂತ ಸಮಸ್ಯೆಗಳು (ಓಷೋ ರಜನೀಶ್ ಚಿಂತನೆಗಳು)
ಈ ಜನರಿಗೆ ನನ್ನ ನಿಲುವನ್ನು ತಿಳಿಸಿಕೊಡಲು ಎಲ್ಲ ರೀತಿಯಲ್ಲೂ ಪ್ರಯತ್ನಿಸಿದೆ, ನನ್ನ ಆರೋಗ್ಯ, ಅನುಕೂಲಗಳನ್ನು ಲೆಕ್ಕಿಸದೇ ಮೂವತ್ತು ವರ್ಷಗಳ ಕಾಲ ದೇಶದೆಲ್ಲೆಡೆ ಸತತವಾಗಿ ಸಂಚರಿಸಿ “ನಿಮ್ಮ ಬಡತನಕ್ಕೆ ನೀವೇ ಹೊಣೆ” ಎಂದು ಹೇಳಿದೆ. ಪ್ರತಿಫಲವಾಗಿ ಇವರು ನನ್ನತ್ತ ಚಪ್ಪಲಿಗಳನ್ನು ಎಸೆದರು, ಕಲ್ಲಿನಲ್ಲಿ ಹೊಡೆದರು. ಎರಡು ಸಲ ವಿಷವುಣಿಸಲು ಪ್ರಯತ್ನಿಸಿದರು. ನನ್ನೊಂದಿಗೆ ಮುಕ್ತವಾಗಿ ಚರ್ಚೆ ಮಾಡಲೂ ಇವರು ಸಿದ್ಧರಿರಲಿಲ್ಲ. ಎಲ್ಲ ಧರ್ಮದ ಜನರಿಗೂ ಮುಕ್ತವಾಗಿ ಚರ್ಚೆ ಮಾಡಲು ಕರೆ ನೀಡಿದೆ. ತಮ್ಮ ಅಭಿಪ್ರಾಯಗಳು ಬುಡವಿಲ್ಲದ್ದು ಎಂದು ಎಲ್ಲೋ ಆಂತರ್ಯದಲ್ಲಿ ಅವರಿಗೆ ತಿಳಿದಿತ್ತು ಎನಿಸುತ್ತದೆ. ಇಂಥವರೇ ನಮ್ಮ ದೇಶಕ್ಕೆ ದಾರಿದ್ರ್ಯವನ್ನು ತಂದಿರುವುದು. ನಾನು ಮಾರ್ಕ್ಸ್ವಾದಿ ಅಲ್ಲದಿದ್ದರೂ “ಧರ್ಮಗಳು ಬಡವರ ಪಾಲಿನ ಅಫೀಮುಗಳಾಗಿವೆ” ಎಂಬ ಅವನ ಮಾತುಗಳನ್ನು ಅಲ್ಲಗಳೆಯಲಾರೆ. ಭಾರತದಲ್ಲಂತೂ ಅಕ್ಷರಶಃ ಈ ಅಫೀಮಿನ ಪ್ರಯೋಗ ನಡೆಯುತ್ತಿದೆ. ಒಂದು ದಿನ ನನ್ನ ಹಳ್ಳಿಯಲ್ಲಿ ಒಬ್ಬ ಕೂಲಿ ಹೆಂಗಸನ್ನು ನೋಡಿ ನನಗೆ ನಿಜಕ್ಕೂ ಆಘಾತವಾಯಿತು. ಅವಳು ಒಂದೆಡೆ ಕೂಲಿ ಕೆಲಸ ಮಾಡುತ್ತಿದ್ದರೆ ಇನ್ನೊಂದೆಡೆ ಮರದಡಿಯಲ್ಲಿ ಅವಳ ಮಕ್ಕಳು ತಮ್ಮ ಪಾಡಿಗೆ ತಾವು ಸಂತೋಷವಾಗಿ ಆಟ ಆಡಿಕೊಳ್ಳುತ್ತಿದ್ದವು. ನಾನು ಅವಳ ಹತ್ತಿರ ಹೋಗಿ “ನೀನು ತುಂಬ ಅದೃಷ್ಟವಂತೆ. ನಿನ್ನ ಮಕ್ಕಳು ಒಂದಿಷ್ಟೂ ಚೇಷ್ಟೆ ಮಾಡದೆ, ಹಟ ಮಾಡದೆ ಒಂದೇ ಕಡೆ ಕುಳಿತು ಆಟವಾಡಿಕೊಳ್ಳುತ್ತಿವೆಯಲ್ಲ” ಎಂದೆ. ಅದಕ್ಕೆ ಅವಳು “ಅವಕ್ಕೆ ಒಂದಿಷ್ಟು ಅಫೀಮು ಕುಡಿಸಿಬಿಡುತ್ತೇನೆ, ಅದಕ್ಕೇ ಅವು ಮಳೆ ಬಿಸಿಲು, ಹಸಿವು, ಬಾಯಾರಿಕೆ ಎಲ್ಲವನ್ನೂ ಮರೆತು ಆಡಿಕೊಳ್ಳುತ್ತವೆ, ಅವುಗಳ ಆರೈಕೆ ಮಾಡುತ್ತ ಕುಳಿತರೆ ಕೂಲಿ ಮಾಡುವುದು ಹೇಗೆ?” ಎಂದಳು. ಇದನ್ನು ಕೇಳಿ ನನಗೆ ನಿಜಕ್ಕೂ ಆಘಾತವಾಯಿತು. ಇದು ಬರೀ ಬಡತನ, ಹಸಿವಿನ ಪ್ರಶ್ನೆ ಮಾತ್ರವಲ್ಲ. ಇಲ್ಲಿ ಗತಿ ಇಲ್ಲದವರೂ ಸಹ ಧರ್ಮ ಕರ್ಮ, ವಿಧಿಬರಹ ಇತ್ಯಾದಿ ಅರ್ಥಹೀನ ಸಿದ್ಧಾಂತಗಳನ್ನು ನಂಬಿಕೊಂಡು ನೆಮ್ಮದಿಯಾಗಿ ಬದುಕಿಬಿಡುತ್ತಾರೆ. ಇಂದು ನಮ್ಮ ದೇಶ ಯಾವ ಕ್ಷಣದಲ್ಲಾದರೂ ಇಥಿಯೋಪಿಯಾ ಮಟ್ಟಕ್ಕೆ ಇಳಿಯುವ ಸ್ಥಿತಿಯಲ್ಲಿದೆ. ಸ್ವತಃ ಇಂದಿರಾಗಾಂಧಿ “ನಿಮ್ಮ ಮಾತು ನಿಜ, ಆದರೆ, ಅದನ್ನೆಲ್ಲ ಕಾರ್ಯಗತ ಮಾಡ ಹೊರಟರೆ ನಾವು ಹಿಂದೂಗಳ ಮತಗಳನ್ನು ಕಳೆದುಕೊಳ್ಳುತ್ತೇವೆ, ಮುಸ್ಲಿಂ ಮತಗಳನ್ನು ಕಳೆದುಕೊಳ್ಳುತ್ತೇವೆ,..” ಈ ಥರದ ಮಾತುಗಳನ್ನಾಡುತ್ತಿದ್ದರು. ನಮಗೆ ಸರಿ ಅನ್ನಿಸಿದ್ದನ್ನು ಮಾಡಲು ಆಗದಿದ್ದ ಮೇಲೆ ನಾವು ಕುರ್ಚಿಗೆ ಭದ್ರವಾಗಿ ಅಂಟಿಕೊಂಡು ಕೂರುವುದರಲ್ಲಿ ಏನರ್ಥ?
ಭಾರತ ಮುಸ್ಲಿಂ ರಾಷ್ಟ್ರವಲ್ಲದಿದ್ದರೂ ಇಷ್ಟೊಂದು ಸಂಖ್ಯೆಯ ಮುಸ್ಲಿಂರನ್ನು ಜಗತ್ತಿನ ಯಾವ ದೇಶವೂ ಹೊಂದಿಲ್ಲ. ಆದರೆ ಹೆಚ್ಚು ಕಡಿಮೆ ಎಲ್ಲ ಮುಸ್ಲಿಮರೂ ಏಕೆ ಬಡತನದಲ್ಲಿ ಬದುಕುತ್ತಿದ್ದಾರೆ ಎಂದು ನನಗರ್ಥವಾಗಲಿಲ್ಲ ಆಮೇಲೆ ಸರಿಯಾಗಿ ಬೆದಕಿದ ಮೇಲೆ ಅದಕ್ಕೆ ಕಾರಣ ಅವರು ನಂಬಿಕೊಂಡಿರುವ ಧರ್ಮಗ್ರಂಥದಲ್ಲಿರುವುದು ಕಾಣಿಸಿತು. ಅವರ ಧರ್ಮದ ಪ್ರಕಾರ ಬಡ್ಡಿಗೆ ಹಣವನ್ನು ಪಡೆಯುವಂತಿಲ್ಲ ಹಾಗು ಕೊಡುವಂತಿಲ್ಲ. ಒಂದು ಆರ್ಥಿಕತೆ ನಿಂತಿರುವುದೇ ಬಡ್ಡಿ ವ್ಯವಹಾರದ ಮೇಲೆ. ಈ ಮೂರ್ಖ ನಂಬಿಕೆಯೇ ಅವರನ್ನು ಬಡತನದಲ್ಲಿ ಇರಿಸಿದೆ. ಜೊತೆಗೆ ಇನ್ನೊಂದು ಕಾರಣವೂ ಉಂಟು, ಪೈಗಂಬರ್ ಇವರಿಗೆ ನಾಲ್ಕು ಹೆಣ್ಣುಗಳನ್ನು ಮದುವೆಯಾಗಲು ಅನುಮತಿ ನೀಡಿದ್ದಾನೆ. ಒಂದು ಹೆಣ್ಣು ನಾಲ್ವರನ್ನು ವರಿಸಿದರೆ ಏನೂ ಬಾಧೆಯಿಲ್ಲ. ಏಕೆಂದರೆ ಅವಳು ಎಷ್ಟು ಜನ ಗಂಡಸರನ್ನು ಮದುವೆಯಾದರೂ ವರ್ಷಕ್ಕೆ ಒಂದು ಮಗುವನ್ನಷ್ಟೇ ಹಡೆಯಬಲ್ಲಳು. ಆದರೆ ಒಬ್ಬ ಗಂಡು ನಾಲ್ಕು ಮದುವೆಯಾದರೆ ಏನು ಗತಿ! ಅವನು ವರ್ಷಕ್ಕೆ ನಾಲ್ಕು ಮಕ್ಕಳಿಗೆ ಜನ್ಮ ನೀಡಬಲ್ಲ. ಹೀಗೆ ಈ ಸಮುದಾಯವು ತಲೆಮಾರಿನಿಂದ ತಲೆಮಾರಿಗೆ ಬಡತನವನ್ನು ನಾಲ್ಕು ಪಟ್ಟು ಹೆಚ್ಚಿಸಿಕೊಳ್ಳುತ್ತಿದೆ. ಇನ್ನು ಬಿಹಾರದಲ್ಲಿ ಅಂತರ್ಜಲ ಬೇಕಾದಷ್ಟಿದೆ ಆದರೆ ಆ ಜನ ಅಲ್ಲಿ ಬಾವಿಗಳನ್ನೇ ತೋಡುವುದಿಲ್ಲ, ಪ್ರತಿ ಸಲ ಬರಗಾಲ ಬಂದರೂ ಅಲ್ಲಿನ ನಾಯಕರು ಇತರ ರಾಜ್ಯಗಳ ಮುಂದೆ ಭಿಕ್ಷಾಟನೆಗೆ ಕೈಚಾಚುತ್ತಾರೆ.
ನನ್ನ ಬಳಿ ಕೆಲವು ದಲಿತರು ಬರುತ್ತಿದ್ದರು. ಅವರಿಗೆ ನಾನು ಒಳಗೆ ಬಂದು ಕುರ್ಚಿಯ ಮೇಲೆ ಕೂರಬೇಕು ಎಂದು ಹೇಳುತ್ತಿದ್ದೆ. ಆದರೂ ಅವರು ಬಾಗಿಲ ಬಳಿಯೇ ಕೂರುತ್ತಿದ್ದರು. ಒಬ್ಬ ಬ್ರಾಹ್ಮಣನಿಗೆ “ನೀನು ಎಲ್ಲರಿಗಿಂತ ಮೇಲು” ಎಂದು ನಂಬಿಸಿದರೆ ಅವನು ನಂಬುತ್ತಾನೆ ಸರಿ, ಆದರೆ ಒಬ್ಬ ಶೂದ್ರನಿಗೆ “ನೀನು ಎಲ್ಲರಿಗಿಂತ ಕೀಳು” ಎಂದು ಹೇಳಿದರೆ ಅವನು ಅದನ್ನು ಹೇಗೆ ನಂಬಿಬಿಡುವನೋ ನನಗೆ ಅರ್ಥವಾಗುವುದಿಲ್ಲ. ನಾನು ಒಬ್ಬ ಸ್ನೇಹಿತರ ಮನೆಯಲ್ಲಿ ಅತಿಥಿಯಾಗಿ ಉಳಿದುಕೊಂಡಿದ್ದಾಗ ಅಲ್ಲಿನ ದಲಿತರ ಕೇರಿಯಲ್ಲಿ ಒಮ್ಮೆ ರೈದಾಸ್ನ ಜಯಂತಿ ನಡೆಯಿತು. ರೈದಾಸ್ ಒಬ್ಬ ಮಧ್ಯಕಾಲೀನ ಅನುಭಾವಿ, ಜಾತಿಯಲ್ಲಿ ಮಾದಿಗ. ನಾನೂ ಆ ಸಮಾರಂಭದಲ್ಲಿ ಭಾಗವಹಿಸಲು ನಿರ್ಧರಿಸಿದಾಗ ಆ ಮನೆಯವರು “ಆದು ಹೊಲೆಯರ ಕೇರಿ, ಅಲ್ಲಿಗೆ ನೀವೇಕೆ ಹೋಗುವಿರಿ?” ಎಂದು ಕೇಳಿದರು. ಆದರೆ ನಾನಂತೂ ಹೋಗಲೇ ಬೇಕು ಎಂದು ನಿರ್ಧರಿಸಿಕೊಂಡಿದ್ದೆ. ಆ ಮನೆಯವರು “ನಮ್ಮನ್ನು ನೀವು ನಿಜಕ್ಕೂ ಫಜೀತಿಗೆ ಸಿಲುಕಿಸಿದಿರಿ. ನೀವು ನಮ್ಮ ಅತಿಥಿಗಳು, ನಿಮ್ಮನ್ನು ಒಬ್ಬರನ್ನೇ ಕಳಿಸುವಂತಿಲ್ಲ, ನಾವೂ ನಿಮ್ಮೊಂದಿಗೆ ಬರುವಂತೆಯೂ ಇಲ್ಲ, ನಾವು ಸವರ್ಣೀಯರು, ನಮಗೆ ಜಾತಿಯಿಂದ ಬಹಿಷ್ಕಾರ ಹಾಕುತ್ತಾರೆ” ಎಂದು ತಮ್ಮ ಕಷ್ಟ ಹೇಳಿಕೊಂಡರು. ಆಗ ನಾನು “ನೀವೇನೂ ಬರಬೇಡಿ ನಾನು ಹೋಗಿ ಬರುತ್ತೇನೆ” ಎಂದು ಹೇಳಿ ನಡೆದೆ. ಆ ಕೇರಿಗೆ ಹೋದಾಗ ಆ ದಲಿತರೂ ನನ್ನ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ “ನಿಮ್ಮಂಥವರು ಇಲ್ಲಿಗೆ ಬರಬಾರದು ನೀವು ಇಲ್ಲಿ ಕಾಲಿಟ್ಟರೆ ಆ ಪಾಪವನ್ನು ನಾವು ಹೊರಬೇಕಾಗುತ್ತದೆ” ಎಂದು ಹೇಳಿದರು. ಹಿಂದೂಗಳಲ್ಲಿರುವ ಜಾತೀಯತೆಯಂತಹ ಪದ್ಧತಿಯನ್ನು ನಾನು ಜಗತ್ತಿನ ಯಾವ ಮೂಲೆಯಲ್ಲೂ ಕಂಡಿಲ್ಲ. ಆದರೆ ಕ್ರಮೇಣ ಅವರನ್ನು ಓಲೈಸಿ ಆ ಕೇರಿಗಳಲ್ಲಿ ನಾನು ಪ್ರವೇಶ ಪಡೆದುಕೊಂಡೆ “ಯಾವ ಸಮಾಜ ನಿಮ್ಮ ಆತ್ಮಗೌರವಕ್ಕೆ ಬೆಲೆ ಕೊಡುವುದಿಲ್ಲವೋ ಅಂತಹ ಸಮಾಜ ನಿಮ್ಮ ಸಮಾಜ ಎಂದು ಹೇಳಿಕೊಳ್ಳಲೇ ಬಾರದು. ಅದನ್ನು ಬಿಟ್ಟು ಹೊರಬನ್ನಿ. ಬ್ರಾಹ್ಮಣರ ಶೌಚಾಲಯಗಳನ್ನು ಶುದ್ಧಿಗೊಳಿಸುವ ಕೆಲಸವನ್ನು ಬಿಟ್ಟುಬಿಡಿ. ನಾಲ್ಕು ದಿನಗಳಾದ ಮೇಲೆ ಧರ್ಮಗ್ರಂಥಗಳನ್ನು ಓದುತ್ತ ಕೂರುವುದು ನಿಜವಾದ ಪಾವಿತ್ರ್ಯವಲ್ಲ ಎಂದು ಅವರಿಗೇ ತಿಳಿಯುತ್ತದೆ. ಆ ಬ್ರಾಹ್ಮಣರನ್ನು ನೀವೇನೂ ಅವಲಂಬಿಸಿಲ್ಲ. ಸಾವಿರಾರು ವರ್ಷಗಳಿಂದ ಅವರೇ ಸಮಾಜದ ಎಂಜಲನ್ನು ನಂಬಿಕೊಂಡು ಜೀವಿಸುತ್ತಿದ್ದಾರೆ” ಎಂದು ಹೇಳುತ್ತಿದ್ದೆ. ಅವರೊಂದಿಗೆ ಸತತವಾಗಿ ಮಾತನಾಡಿದ ಮೇಲೆ ಅವರು ತಮಗೆ ಸಿಗುತ್ತಿದ್ದ ಸಾಮಾಜಿಕ ಸುರಕ್ಷತೆಯನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ ಎಂದು ಅರ್ಥವಾಯಿತು. ಅವರು ಯಾವ ಹೊಣೆಗಾರಿಕೆಯನ್ನೂ ಹೊರುವ ಸ್ಥಿತಿಯಲ್ಲಿಲ್ಲ. ತಮ್ಮ ಎಲ್ಲ ಪ್ರಾಥಮಿಕ ಜವಾಬ್ದಾರಿಯನ್ನೂ ಮೇಲ್ವರ್ಗದ ತಮ್ಮ ಯಜಮಾನರಿಗೇ ವಹಿಸಿಕೊಟ್ಟು ಎಲ್ಲ ಸಾಮಾಜಿಕ ಅನ್ಯಾಯ ಅವಮಾನಗಳಿಗೂ ಒಗ್ಗಿಬಿಟ್ಟಿದ್ದಾರೆ.
ನಾನು ಧಾರ್ಮಿಕ ಭಾವನೆಗಳಿಗೆ ನೋವನ್ನು ಉಂಟು ಮಾಡಿದೆ ಎಂಬ ಕಾರಣಕ್ಕೆ ಭಾರತದ ಹಲವು ನ್ಯಾಯಾಲಯಗಳಲ್ಲಿ ನನ್ನ ವಿರುದ್ಧ ಮೊಕದ್ದಮೆಗಳನ್ನು ಹೂಡಲಾಗಿದೆ. ನಾನು ನ್ಯಾಯಾಧೀಶರುಗಳನ್ನು “ಆ ಧರ್ಮ ಅಷ್ಟು ಸುಲಭವಾಗಿ ನೋವನ್ನು ಅನುಭವಿಸುವಷ್ಟು ದುರ್ಬಲವಾದುದೇ? ಅವರ ಭಾವನೆಗೆ ಧಕ್ಕೆಯಾಗಿದ್ದರೆ ಅದಕ್ಕೆ ನಾನೇನು ಮಾಡಲಿ? ಅವು ಎಲ್ಲೋ ಅವರೇ ಕಟ್ಟಿಕೊಂಡ ಮೂಢ ನಂಬಿಕೆಗಳಿರಬೇಕು. ಅಂಥವರಿಗೆ ಧಾರ್ಮಿಕ ನಂಬಿಕೆಯಲ್ಲ, ಮಾನಸಿಕ ಚಿಕಿತ್ಸೆ ಅಗತ್ಯ ಎಂದು ನನ್ನ ಸಲಹೆ. ಸತ್ಯಕ್ಕೆ ನೋವಾಗುತ್ತದೆ ಎಂದರೆ ಏನರ್ಥ? ಹಾಗಿದ್ದರೆ ಸುಳ್ಳು ಹೇಳಲು ನೀವು ಸಲಹೆ ನೀಡುವಿರೇ?” ಎಂದು ನೇರವಾಗಿಯೇ ಕೇಳಿದ್ದೇನೆ. ನ್ಯಾಯಾಧೀಶರಿಗೆ ಏನೆಂದು ಉತ್ತರಿಸಬೇಕೋ ತಿಳಿಯದೆ ಅಂತಹ ನೂರಾರು ಮೊಕದ್ದಮೆಗಳು ವಜಾಗೊಂಡಿವೆ. ಒಮ್ಮೆ ಮೊದಲ ಬಾರಿಗೆ ಕೋರ್ಟಿನ ಕಟಕಟೆಯಲ್ಲಿ ನಿಂತಾಗ ಧರ್ಮಗ್ರಂಥದ ಮೇಲೆ ಕೈ ಇಟ್ಟು ಪ್ರಮಾಣ ಮಾಡಲು ನಿರಾಕರಿಸಿದೆ. ನ್ಯಾಯಾಧೀಶರು ಏಕೆ ಎಂದು ಕೇಳಿದರು. ಆಗ ನಾನು “ಅದಕ್ಕೆ ಹಲವು ಕಾರಣಗಳಿವೆ. ಮೊದಲಿಗೆ, ಅದು ಬೈಬಲ್ ಆಗಿದ್ದರೆ ಅದರ ಮೇಲೆ ಪ್ರಮಾಣ ಮಾಡಲಾರೆ. ಏಕೆಂದರೆ ಸ್ವತಃ ಏಸುವೇ ಅವನ ಕಾಲದ ಕಾನೂನಿನ ದೃಷ್ಟಿಯಲ್ಲಿ ಅಪರಾಧಿ ಎನಿಸಿಕೊಂಡು ಶಿಕ್ಷೆ ಪಡೆದಿದ್ದವನು. ಅದಕ್ಕೇ ಅವನನ್ನು ಶಿಲುಬೆಗೇರಿಸಲಾದುದು”. ಆಗ ನ್ಯಾಯಾಧೀಶರು “ಅಲ್ಲ, ಅದು ಭಗವದ್ಗೀತೆ” ಎಂದರು “ಹಾಗಿದ್ದರೆ ಇನ್ನೂ ಅಸಾಧ್ಯ. ಕೃಷ್ಣ ೧೬,೦೦೦ ಹೆಣ್ಣುಮಕ್ಕಳನ್ನು ಹಾರಿಸಿಕೊಂಡು ಹೋದವನು. ಅವನೇ ತನ್ನ ಜೀವಮಾನದುದ್ದಕ್ಕೂ ಆಡಿದ ಮಾತಿನಂತೆ ಎಂದೂ ನಡೆದವನಲ್ಲ. ಸತ್ಯವನ್ನು ನುಡಿಯಲು ಅಂಥವನ ಪುಸ್ತಕದ ಮೇಲೆ ಕೈಯಿಡುವುದೇ? ಇಟ್ಟ ಮೇಲೆ ಕೈಯನ್ನು ತೊಳೆದುಕೊಳ್ಳಬೇಕಾಗುತ್ತದೆ” ಎಂದೆ. ಹಾಗಿದ್ದರೆ ಯಾವ ಗ್ರಂಥವೂ ಬೇಡ “ನಾನು ಹೇಳುವುದೆಲ್ಲ ಸತ್ಯ, ಸತ್ಯವನ್ನಲ್ಲದೆ ಬೇರೇನೂ ನುಡಿಯುವುದಿಲ್ಲ ಎಂದಾದರೂ ಹೇಳು” ಎಂದರು. “ಸಾಮಾನ್ಯ ತಿಳಿವಳಿಕೆಯೂ ಇಲ್ಲದಂತೆ ಮಾತನಾಡುವಿರಲ್ಲ, ಒಂದು ವೇಳೆ ನಾನು ಸುಳ್ಳನಾಗಿದ್ದರೆ ಹಾಗೆ ನುಡಿಯಲು ನನಗೇನು ಅಭ್ಯಂತರ? ನಾನು ಯಾವ ಪ್ರಮಾಣವನ್ನೂ ಮಾಡಲಾರೆ. ನನ್ನ ಮಾತುಗಳನ್ನು ನಂಬಿ, ಇಲ್ಲವೆ ಬಿಡಿ” ಎಂದು ಹೇಳಿದೆ...ಇದು ನಾವು ಸೃಷ್ಟಿಸಿಕೊಂಡಿರುವ ಸಮಾಜ. ಇಲ್ಲಿ ಸತ್ಯದ ಹೆಸರಿನಲ್ಲಿ ಕಟ್ಟುಕತೆಗಳನ್ನು, ನ್ಯಾಯದ ಹೆಸರಿನಲ್ಲಿ ಸುಳ್ಳುಗಳನ್ನು ನಂಬಿಕೊಂಡು ನಾವು ಬದುಕು ನಡೆಸುತ್ತಿದ್ದೇವೆ.
ಇಂತಹ ದೇಶಕ್ಕೆ ಬಂಡವಾಳಶಾಹಿಯನ್ನು ತರಲು ಇದೇ ತಕ್ಕ ಸಮಯ. ಇನ್ನು ಐವತ್ತು ವರ್ಷಗಳಲ್ಲಿ ನಮ್ಮ ದೇಶ ಬಂಡವಾಳಶಾಹಿಯಾಗಲಿದೆ ಎಂದು ಈಗಲೇ ಸಂಕಲ್ಪ ಮಾಡಿದಲ್ಲದೇ ಏನನ್ನೂ ಸಾಧಿಸಲಾಗದು. ಆ ತರುವಾಯ ಯಾವ ಇಂದಿರಾಗಾಂಧಿಯ ನೆರವೂ ಇಲ್ಲದೆ ಸಮಾಜವಾದ ತಾನಾಗಿಯೇ ಹುಟ್ಟುತ್ತದೆ. ಬಂಡವಾಳಶಾಹಿ ಹುಟ್ಟಿದ್ದೂ ಹೀಗೆಯೇ. ಊಳಿಗಮಾನ್ಯ ಪದ್ಧತಿ ತನ್ನ ಚರಮಾವಸ್ಥೆಯನ್ನು ತಲುಪಿದ ಮೇಲೆ ಬಂಡವಾಳಶಾಹಿ ತಾನಾಗಿಯೇ ಹುಟ್ಟಿತು. ಅದಕ್ಕೆ ಯಾರೂ ಜನ್ಮ ನೀಡಲಿಲ್ಲ. ನಮಗೆ ತಾಳ್ಮೆ ಬೇಕಷ್ಟೇ. ಅಮೆರಿಕಾದ ದೊಡ್ಡ ಬಂಡವಾಳಶಾಹೀ ಉದ್ಯಮಿ ರುತ್ಷೆಲ್ಡ್ನನ್ನು ಒಬ್ಬ ಕಮ್ಯುನಿಸ್ಟ್ “ನೀನು ದೇಶದ ಸಂಪತ್ತನ್ನೆಲ್ಲ ಕೂಡಿಟ್ಟುಕೊಂಡಿರುವೆ. ಅದನ್ನು ಎಲ್ಲ ಪ್ರಜೆಗಳಿಗೆ ಸಮಾನವಾಗಿ ಹಂಚಬೇಕಾದುದು ನಿನ್ನ ಧರ್ಮ” ಎಂದು ಕೇಳಿದಾಗ ರುತ್ಷೆಲ್ಡ್ ಒಂದು ತುಂಡು ಕಾಗದದ ಮೇಲೆ ಒಂದಿಷ್ಟು ಲೆಕ್ಕ ಮಾಡಿ ಆ ವ್ಯಕ್ತಿಗೆ ನಾಲ್ಕು ಸೆಂಟ್ ನೀಡಿದನಂತೆ “ಇದೋ, ನಿನ್ನ ಪಾಲನ್ನು ತೆಗೆದುಕೋ, ನನ್ನ ಸಂಪತ್ತನ್ನು ನಮ್ಮ ಒಟ್ಟು ಜನಸಂಖ್ಯೆಗೆ ಭಾಗಿಸಿದರೆ ಒಬ್ಬೊಬ್ಬರಿಗೆ ತಲಾ ನಾಲ್ಕು ಸೆಂಟ್ ಸಿಗುತ್ತದೆ” ಎಂದಿದ್ದ. ರುತ್ಷೆಲ್ಡ್ನಾದರೂ ನಾಲ್ಕು ಸೆಂಟ್ ನೀಡಿದ. ನಮ್ಮ ಟಾಟಾ ಬಿರ್ಲಾಗಳನ್ನು ಕೇಳಿದರೆ ತಲಾ ಒಂದು ಕಾಸೂ ಸಿಗದು. ನಮ್ಮಲ್ಲಿ ಬಂಡವಾಳಶಾಹಿ ಇನ್ನೂ ಭ್ರೂಣಾವಸ್ಥೆಯಲ್ಲಿದೆ. ಈಗ ನಮ್ಮ ಆರ್ಥಿಕತೆ ಯುರೋಪಿಯನ್ ಕೈಗಾರಿಕಾ ಕ್ರಾಂತಿಗೂ ಹಿಂದಿನ ಸ್ಥಿತಿಯಲ್ಲಿದೆ. ನಮ್ಮ ಸಾರ್ವಜನಿಕ ಉದ್ದಿಮೆಗಳೆಲ್ಲ ನಷ್ಟದಲ್ಲಿ ನಡೆಯುತ್ತಿದ್ದರೂ ಸರ್ಕಾರ ಕೈಗಾರಿಕೆಗಳ ರಾಷ್ಟ್ರೀಕರಣದ ಬಗ್ಗೆ ಯೋಚಿಸುತ್ತಿದೆ.
ಸಮಾಜವಾದದ ಪರಿಕಲ್ಪನೆಗಳನ್ನು ಇನ್ನೂ ಆಳವಾಗಿ ಶೋಧಿಸಬೇಕಿದೆ. ಸರ್ಕಾರೀ ಸ್ವಾಮ್ಯ ಬೇರೆ, ಸಮಾಜವಾದ ಬೇರೆ. ನಮ್ಮ ದೇಶದಲ್ಲಿ ಸರ್ಕಾರೀ ಬಂಡವಾಳವಾದವನ್ನೇ ಸಮಾಜವಾದ ಎಂದು ಪ್ರಚಾರ ಮಾಡಲಾಗುತ್ತಿದೆ. ಸರ್ಕಾರ ಸಮಾಜದಿಂದ ತನ್ನ ಬಂಡವಾಳವನ್ನು ಸಂಗ್ರಹ ಮಾಡದೇ ಬಂಡವಾಳವೇ ಸಮಾಜದ ಕಡೆಗೆ ಹರಿದಾಗ ಅದು ಸಮಾಜವಾದ ಎನಿಸಿಕೊಳ್ಳುತ್ತದೆ. ಇಂದು ನಮ್ಮ ಸರ್ಕಾರಗಳು ಎಷ್ಟು ದುರ್ಬಲವಾದುದು ಎಂಬುದು ಹಳ್ಳಿಯ ಒಬ್ಬ ಕಿರಾಣಿ ಅಂಗಡಿಯವನಿಗೂ ಗೊತ್ತು. ರಸ್ತೆ ಬದಿಯಲ್ಲಿ ಸೈಕಲ್ ರಿಪೇರಿ ಮಾಡುವವನೂ ನಮ್ಮ ಸರ್ಕಾರಕ್ಕಿಂತ ಜಾಣ್ಮೆಯಿಂದ ಕಾರ್ಯ ನಿರ್ವಹಿಸುತ್ತಿರುತ್ತಾನೆ. ನಾವೇನು ಆತ್ಮಹತ್ಯೆ ಮಾಡಿಕೊಳ್ಳಲು ಸಂಕಲ್ಪ ಮಾಡಿರುವೆವೇ? ಈಗಾಗಲೇ ತಲೆಕೆಟ್ಟವರು ಅಧಿಕಾರ ವಹಿಸಿಕೊಂಡಿದ್ದಾರೆ. ಈಗ ಬಂಡವಾಳವನ್ನೂ ತಾವೇ ವಹಿಸಿಕೊಳ್ಳಲಿದ್ದಾರಂತೆ! ಎಲ್ಲವೂ ಅವರ ಕೈಸೇರಿದರೆ ಆಮೇಲೆ ನಿಜಕ್ಕೂ ಉಳಿಗಾಲ ಇರುವುದಿಲ್ಲ. ಹಿಟ್ಲರ್ ಹಾಗು ಸ್ಟಾಲಿನ್ ಮಹಾನ್ ಸಮಾಜವಾದಿಗಳು ಎಂದು ತಿಳಿದಿರಲಿ. ಹಿಟ್ಲರ್ನ ರಾಜಕೀಯ ಪಕ್ಷದ ಹೆಸರೇ ’ರಾಷ್ಟ್ರೀಯ ಸಮಾಜವಾದೀ ಪಕ್ಷ’. ಆರ್ಥಿಕ ಸ್ವಾತಂತ್ರ್ಯ ಇದ್ದಾಗ ಮಾತ್ರ ಮನುಷ್ಯ ಮನುಷ್ಯನಂತೆ ಯೋಚಿಸುವುದು. ಅದು ಇಲ್ಲದಾಗ ಅವನು ರಷ್ಯಾದ ಪ್ರಜೆಗಳಂತೆ, ಪಶುವಿಗಿಂತ ಕಡೆಯಾಗುತ್ತಾನೆ. ಬಂಡವಾಳಶಾಹಿ ವಿಕಾಸಗೊಳ್ಳಬೇಕಾದರೆ ಸರಕಾರ ಕಾರ್ಯನಿರ್ವಹಣೆಯ ಸಂಸ್ಥೆಯಾಗಿರಬೇಕೇ ವಿನಃ ಅದಕ್ಕೆ ಹೆಚ್ಚಿನ ಅಧಿಕಾರ ಸಿಗಬಾರದು ಎಂದು ನನ್ನ ಅಭಿಪ್ರಾಯ. ಮನೆಯ ಅಡುಗೆಯವನಿಗೆ ಮನೆಯ ವ್ಯವಹಾರಗಳಲ್ಲಿ ಎಷ್ಟು ಪ್ರಾಮುಖ್ಯವಿದೆಯೋ ಗೃಹ ಸಚಿವನಿಗೂ ದೇಶದ ವ್ಯವಹಾರಗಳಲ್ಲಿ ಅಷ್ಟೇ ಮಹತ್ವ ಇರತಕ್ಕದ್ದು. ಅವನು ತನ್ನ ಇಲಾಖೆಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದರೆ ಅವನಿಗೆ ಅಡುಗೆಯವನಿಗೆ ನೀಡುವ ಉತ್ತೇಜನವನ್ನಷ್ಟೇ ನೀಡಬೇಕು. ರುಚಿಯಾದ ಅಡುಗೆ ಮಾಡಿದರೆ ಭಕ್ಷೀಸನ್ನೂ ನೀಡಬಹುದು. ಆದರೆ ಇಂದು ಗೃಹ ಸಚಿವ ಒಬ್ಬ ಅಡುಗೆಯವನು ಮಾತ್ರ ಆಗಿಲ್ಲ. ಹಣಕಾಸಿನ ಶಕ್ತಿಯನ್ನು ಸರ್ಕಾರ ಸಂಪೂರ್ಣ ಸ್ವಾಧೀನ ಪಡಿಸಿಕೊಂಡರೆ ಎಲ್ಲ ತರಹದ ಕ್ರಾಂತಿಗಳನ್ನೂ ಸುಲಭವಾಗಿ ಹತ್ತಿಕ್ಕಬಹುದು ಎಂದು ಪ್ರಭುತ್ವಕ್ಕೆ ಅರ್ಥವಾಗಿದೆ. ಇದಕ್ಕೆ ಇಂದಿನ ರಷ್ಯಾವೇ ಸಾಕ್ಷಿ. ಖಾಸಗೀ ಒಡೆತನವಿರದ ಯಾವ ವ್ಯವಸ್ಥೆಯಲ್ಲೂ ಕ್ರಾಂತಿ ಸಂಭವಿಸದು.
ವ್ಯಕ್ತಿಯಲ್ಲ ದೇಶ ಮುಖ್ಯ ಎಂಬ ತಪ್ಪು ಕಲ್ಪನೆಯನ್ನು ಸಮಾಜವಾದ ನಿರಂತರವಾಗಿ ಹರಡುತ್ತಿದೆ. ನಿಜವಾಗಿ ಎಲ್ಲ ಪ್ರಾಮುಖ್ಯವೂ ಮನುಷ್ಯನಿಗೆ ಮಾತ್ರ ಸಲ್ಲತಕ್ಕದ್ದು, ಸಮಾಜಕ್ಕಲ್ಲ. ಸಮಾಜ ಎಂಬುದು ಒಂದು ಅರ್ಥವಿಲ್ಲದ, ಅರ್ಥಕ್ಕೆ ಸಿಗದ ಖಾಲಿ ಶಬ್ದವಾಗಿದೆ. ಆದರೆ ಅರ್ಥವಿಲ್ಲದ ಪರಿಕಲ್ಪನೆಗಳಿಗೆ ಮನುಷ್ಯ ಅನಾದಿಕಾಲದಿಂದಲೂ ಬಲಿಪಶುವಾಗುತ್ತಲೇ ಬಂದಿದ್ದಾನೆ, ಹಿಂದೆ ದೇವರ ಹೆಸರಿನಲ್ಲಿ, ಇಂದು ಸಮಾಜವಾದದ ಹೆಸರಿನಲ್ಲಿ ಬಲಿಪಶುಗಳು ಗೌರವ ಸಂಪಾದಿಸುತ್ತಿವೆ. ಸಮಾಜವಾದದ ಮರೆಯಲ್ಲಿ ಪ್ರಭುತ್ವವಿದೆ, ಪ್ರಭುತ್ವದ ಹಿಂದೆ ಹಸಿದ ತೋಳಗಳಂತಹ ರಾಜಕಾರಣಿಗಳು ಹುದುಗಿದ್ದಾರೆ. ವಿಜ್ಞಾನ ತಂತ್ರಜ್ಞಾನಗಳ ನೆರವಿನಿಂದ ಇಂದಿನ ಪ್ರಭುತ್ವ ಹಿಂದೆಂದಿಗಿಂತಲೂ ಬಲಿಷ್ಟವಾಗಿದೆ. ರಷ್ಯಾದ ವಿಜ್ಞಾನಿಗಳು ಮೆದುಳಿನ ಒಂದು ಭಾಗದಲ್ಲಿ ಎಲೆಕ್ಟ್ರೋಡುಗಳನ್ನು ಜೋಡಿಸಿ ಮನುಷ್ಯರನ್ನು ರೋಬೋಟ್ಗಳಂತೆ ನಡೆಸಿಕೊಳ್ಳುವ ತಂತ್ರಜ್ಞಾನವನ್ನು ಆವಿಷ್ಕರಿಸಿದ್ದಾರಂತೆ. ಇಂಥದೇನಾದರೂ ಪ್ರಭುತ್ವದ ಕೈಗೆ ಸಿಕ್ಕರೆ ಏನುಗತಿ ಎಂದು ನನಗೆ ಚಿಂತೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಪ್ರಭುತ್ವವು ರಾಸಾಯನಿಕ ಯುದ್ಧಗಳನ್ನು ಘೋಷಿಸಲಿವೆ. ಗಾಳಿ, ನೀರುಗಳಲ್ಲಿ ರಾಸಾಯನಿಕ ವಸ್ತುಗಳನ್ನು ಬೆರೆಸಿ ಮನುಷ್ಯರನ್ನು ಮೂಕಪ್ರಾಣಿಗಳ ಸ್ಥಿತಿಗೆ ಇಳಿಸುವ, ಅವನ ನೆನಪಿನ ಕೋಶಗಳನ್ನೇ ಖಾಲಿ ಮಾಡಿಬಿಡುವ ತಂತ್ರಜ್ಞಾನ ಬರುವ ಕಾಲವೂ ದೂರವಿಲ್ಲ.
ಈತನಕ ಸಮಾಜವನ್ನು ನಡೆಸುವಲ್ಲಿ ಪ್ರಭುತ್ವ ಸೋಲುತ್ತಲೇ ಬಂದಿದೆ. ಇಡೀ ಮನುಷ್ಯಜಾತಿಯ ಚರಿತ್ರೆಯೇ ಪ್ರಭುತ್ವದ ನಿರ್ವೀರ್ಯತೆಯ ಚರಿತ್ರೆಯಾಗಿದೆ. ಖಾಸಗೀ ಒಡೆತನದಿಂದ ಹಾಗು ಬಂಡವಾಳಶಾಹಿ ವ್ಯವಸ್ಥೆಯಿಂದಲಾದರೂ ವ್ಯಕ್ತಿ ಸ್ವತಂತ್ರನಾಗುತ್ತಾನೆ, ವ್ಯವಸ್ಥೆ ವಿಕೇಂದ್ರೀಕರಣಗೊಳ್ಳುತ್ತದೆ. ಆದರೆ ಪ್ರಭುತ್ವ ಸಮಾಜವಾದದ ಹೆಸರಿನಲ್ಲಿ ತನ್ನಂತೆಯೇ ಇಡೀ ಜಗತ್ತನ್ನೇ ನಿರ್ವೀರ್ಯಗೊಳಿಸಲು ಸನ್ನದ್ಧವಾದಂತಿದೆ. ಬಂಡವಾಳಶಾಹಿಗೆ ಒಂದು ಸೈದ್ಧಾಂತಿಕ ನೆಲೆಯಿಲ್ಲ. ಹಾಗಾಗಿ ಅಧಿಕಾರ ಪಿಪಾಸುಗಳ ಸಮಾಜವಾದೀ ಸಿದ್ಧಾಂತ, ಘೋಷಣೆಗಳು ಬಂಡವಾಳಶಾಹಿಯಲ್ಲಿಯೂ ಪಾಪಪ್ರಜ್ಞೆ ಹುಟ್ಟಿಸುತ್ತಿದೆ. ಐಸೆನ್ಹೋವರ್ ಕಮ್ಯುನಿಸ್ಟರ ಎದುರು ಮಾತನಾಡಲು ತೊದಲುತ್ತಿದ್ದನಂತೆ. ಸಮಾಜವಾದಕ್ಕೆ ಜನ್ಮನೀಡಬಲ್ಲ ಬಂಡವಾಳಶಾಹಿ ವ್ಯವಸ್ಥೆಯು ತನ್ನದೇ ಸಿದ್ಧಾಂತವನ್ನು ಇನ್ನಾದರೂ ರೂಪಿಸಿಕೊಳ್ಳಬೇಕು ಎಂದು ನನ್ನ ಅಭಿಪ್ರಾಯ. ರೋಗಗ್ರಸ್ಥ ತಾಯಿಯು ಒಳ್ಳೆಯ ಮಗುವಿಗೆ ಜನ್ಮ ನೀಡಲಾರಳು. ಇಂದಿನ ಸಮಾಜವಾದಿಗಳಾದರೂ ತಾಯಿಯನ್ನು ಕೊಂದು ಮಗುವನ್ನು ಹೊರತರಲು ಹೊರಟಿರುವ ಮೂರ್ಖರಾಗಿದ್ದಾರೆ.