ಭ್ರಷ್ಟತೆಗಿದು ರಸಗೊಬ್ಬರ !

ಪಂಚರಾಜ್ಯಗಳ ಮತದಾನೋತ್ತರ ಫಲಿತಾಂಶಗಳೀಗ ಹೊರಬಿದ್ದಿವೆ. ದೇಶ ರಾಜಕಾರಣದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಭಾರತೀಯ ಜನತಾ ಪಾರ್ಟಿ ಮತ್ತು ಮಿತ್ರಕೂಟವು ಬಹುತೇಕ ನಾಲ್ಕು ರಾಜ್ಯಗಳಲ್ಲಿ ಮೇಲುಗೈ ಸಾಧಿಸುವುದಾಗಿ ಮತದಾನೋತ್ತರ ಸಮೀಕ್ಷೆ ನಡೆಸಿರುವ ಖಾಸಗಿ ಸಂಸ್ಥೆಗಳು ಭವಿಷ್ಯ ನುಡಿದಿವೆ. ಈ ಸಮೀಕ್ಷೆಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕಲಾಗದು.
ಹಾಗೆಂದು ಇದನ್ನೇ ಅಂತಿಮ ಎಂದೂ ಹೇಳಲಾಗದು. ಆಧುನಿಕ ಮಾಹಿತಿ ತಂತ್ರಜ್ಞಾನದ ನಾಗಲೋಟದಲ್ಲಿರುವ ಈ ದಿನಗಳು, ಪ್ರಪಂಚದ ಅತಿ ದೊಡ್ಡ ಪ್ರಜಾತಂತ್ರವಾಗಿರುವ ಭಾರತದ ಮೇಲೆ ಈ ಬಗೆಯ ಪರಿಣಾಮ ಬೀರಿರುವುದು ಚರ್ಚಾರ್ಹ. ಒಟ್ಟಿನಲ್ಲಿ ಪ್ರಜಾತಂತ್ರದಲ್ಲಿ ಮತದಾರನೇ ಸಾರ್ವಭೌಮ! ಅವನ ಅಂತಿಮ ಆದೇಶವೇನೆಂಬುದು ಲೋಕಕ್ಕೆ ತಿಳಿಯಬೇಕಾದರೆ ಮತಯಂತ್ರಗಳಲ್ಲಿ ದಾಖಲಾದ ಮತಗಳ ವಿವರ ಬಹಿರಂಗವಾಗಬೇಕು. ಮತ ಎಣಿಕೆಯಿಂದಲೇ ರಾಜಕೀಯ ಪಕ್ಷಗಳ ಸೋಲು ಮತ್ತು ಗೆಲುವು ನಿರ್ಧಾರಿತ. ಅದೇನೆ ಇರಲಿ. ಅಧಿಕಾರದ ಚುಕ್ಕಾಣಿ ಹಿಡಿಯುವಂತಹ ಯಾವುದೇ ಪಕ್ಷವಿರಲಿ. ಅದಕ್ಕೆ ಜನತೆ ಸ್ಪಷ್ಟ ಜನಾದೇಶ ನೀಡುವುದು ಲೇಸು. ಇದು ಪ್ರಜಾತಂತ್ರದ ಆರೋಗ್ಯಕ್ಕೂ ಒಳಿತು. ಅಸ್ಪಷ್ಟ ಜನಾದೇಶದಿಂದ ಇಡೀ ಪ್ರಜಾತಂತ್ರ ವ್ಯವಸ್ಥೆ ಗೊಂದಲಕಾರಿಯಾಗಿ ಪರಿಣಮಿಸಿ ಅಕ್ರಮಗಳ ಸರಣಿಯೇ ದೇಶದ ಮುಂದಿದೆ. ಸರ್ಕಾರ ರಚಿಸಲು ಅಗತ್ಯವಿರುವಷ್ಟು ಸಂಖ್ಯೆ ಯಾವುದೇ ಪಕ್ಷಕ್ಕೆ ಇಲ್ಲವೆಂದಾಗ ವಿಜಯದ ಸಮೀಪದಲ್ಲಿರುವ ಪಕ್ಷ ನಡೆಸುವ ತೆರೆಮರೆಯ ರಾಜಕೀಯ ಕಸರತ್ತು ಒಂದು ಎರಡಲ್ಲ. ಇಂದು ದೇಶದ ಜನತೆಯ ಮನಸ್ಸಿನಲ್ಲಿ ಹೇಸಿಗೆ ಮೂಡಿಸಿರುವುದಂತೂ ಕಟು ಸತ್ಯ. ಗೆದ್ದವರ ಸಾರಾಸಗಟಿನ ಖರೀದಿ. ಕುದುರೆ ವ್ಯಾಪಾರ, ರೆಸಾರ್ಟ್ ರಾಜಕಾರಣ ಮತ್ತು ರಾತ್ರೋರಾತ್ರಿ ಬದಲಾಗುವ ಪಕ್ಷನಿಷ್ಟೆ. ಇವುಗಳಿಂದು ದೇಶ ರಾಜಕಾರಣದಲ್ಲಿ ಸಾಮಾನ್ಯವಾಗಿರುವುದು ದುರ್ದೈವ! ಇದಕ್ಕೆಲ್ಲ ಮೂಲ ಕಾರಣ ಅಸ್ಪಷ್ಟ ಜನಾದೇಶ ಎಂಬುದನ್ನು ಮತ್ತೊಮ್ಮೆ ಇಲ್ಲಿ ಉಲ್ಲೇಖಿಸಬೇಕಿದೆ. ಪ್ರಜಾತಂತ್ರದ ಮೂಲಕ ಸಿದ್ಧಾಂತ ಮತ್ತು ತತ್ವಗಳನ್ನೇ ಅಪೋಷನ ತೆಗೆದುಕೊಳ್ಳುವ ಕೆಟ್ಟ ವಿದ್ಯಮಾನಗಳು ಮತ್ತೆ ಮರುಕಳಿಸುವುದೆಂದರೆ ಇದು ಮತದಾರನ ದೌರ್ಬಲ್ಯ ಮತ್ತು ವೈಫಲ್ಯ ಎಂದೇ ಹೇಳಬೇಕಾಗುತ್ತೆ.
ಚುನಾವಣೆಗಳು ಭ್ರಷ್ಟಾಚಾರ ಮುಕ್ತವಾಗಬೇಕೆಂಬುದು ಚುನಾವಣಾ ಆಯೋಗದ ಪರಮಾಶಯ. ಆದರೆ ಈ ಆಶಯಗಳಿಗೆ ತಕ್ಕಂತೆ ಇಂದಿನ ಯಾವುದೇ ಚುನಾವಣೆಗಳು ನಡೆಯುವಂತಹ ವಾತಾವರಣ ನಿರ್ಮಾಣವಾಗದಿರುವುದು ದುರದೃಷ್ಟಕರ. ದಿನದಿಂದ ದಿನಕ್ಕೆ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಖರ್ಚು ಮಾಡುವ ಹಣ, ಕೋಟಿಗಳನ್ನು ಮೀರಿದೆ! ಮೊದಲು, ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾಗಿದ್ದ ಮತ ಖರೀದಿ ಕೌಶಲ್ಯಗಳಿಂದು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕಾರ್ಪೋರೇಟ್ ಶೈಲಿಯಲ್ಲಿ ಚಾಲ್ತಿಯಲ್ಲಿವೆ ! ಒಟ್ಟಿನಲ್ಲಿ ಇವೆಲ್ಲವೂ ಭ್ರಷ್ಟ ಮುಕ್ತ ಹಾಗೂ ಪಾರದರ್ಶಕ ಚುನಾವಣೆ ಮತ್ತು ಪ್ರಜಾತಂತ್ರದ ಪರಮಶತ್ರುಗಳೇ ! ಐದು ವರ್ಷಗಳ ಅವಧಿಗೆ ಅಧಿಕಾರದಲ್ಲಿರಬೇಕಾದಂತಹ ಸರ್ಕಾರವನ್ನು ಈ ಅನಿಷ್ಟಗಳೇ ನೆಲಸಮಗೊಳಿಸಿ ಸ್ವಾರ್ಥ ರಾಜಕಾರಣವನ್ನು ಮೆರೆಸುತ್ತಿದೆ! ಅಸ್ಪಷ್ಟ ಜನಾದೇಶ ಎಂದರೆ ಸಮಯಸಾಧಕ ರಾಜಕಾರಣಿ ಹಾಗೂ ಭ್ರಷ್ಟ ರಾಜಕಾರಣವನ್ನು ಪೋಷಿಸುವ ರಸಗೊಬ್ಬರವಾಗಿ ಪರಿಣಮಿಸಿದೆ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೯-೦೩-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ