ಮತ್ತೆ ಕಲ್ಲಾದಳು ಅಹಲ್ಯೆ!

ಮತ್ತೆ ಕಲ್ಲಾದಳು ಅಹಲ್ಯೆ!

ಇದು ಯಾವ ರಾಮಾಯಣದಲ್ಲೂ ಇಲ್ಲ. ಪರಿಚಯಸ್ಥರು ತಮಿಳಿನ ಪುಸ್ತಕವೊಂದರಲಿ ಓದಿದ್ದನ್ನು ಹೇಳಿದರು ‘ಮೀಡುಂ ಕಲ್ಲಾನಾಳ್ (ಮತ್ತೊಮ್ಮೆ ಕಲ್ಲಾದಳು ಅಹಲ್ಯೆ) ಅದರ ಕನ್ನಡಾನುವಾದ ಮಾತ್ರ.

 

ರಾವಣ ಸಂಹಾರದ ನಂತರ ಸೀತೆಯಾಂದಿಗೆ ಅಯೋಧ್ಯೆಗೆ ಮರಳಿದ ಶ್ರೀರಾಮ ಪಟ್ಟಾಭಿಷಿಕ್ತನಾಗಿ ಅರಸನಾದ. ಕೆಲ ಕಾಲದ ನಂತರ ಸೀತೆ ಗರ್ಭಿಣಿಯಾದಳು. ಒಬ್ಬ ಅಗಸನ ಮಾತಿಗೆ ಬೆಚ್ಚಿ, ಲೋಕೋಪವಾದಕ್ಕಾಗಿ ಬೆದರಿ ತುಂಬು ಗರ್ಭಿಣಿ ಸೀತೆಯನ್ನು ಮತ್ತೆ ಕಾಡಿಗೆ ಅಟ್ಟಿದ ಶ್ರೀರಾಮ. ಒಂಟಿತನ, ಮನದಲ್ಲಿ ದುಗುಡ ಕಾಡಲಾಗಿ, ನೆಮ್ಮದಿಯನರಸಿ ಋಷಿ-ಮುನಿಗಳ ದರುಶನಕ್ಕಾಗಿ ಹೊರಟನು. ಹಾಗೆಯೇ ಗೌತಮ ಮುನಿಗಳ ದರುಶನಕ್ಕಾಗಿ ಅವರ ಆಶ್ರಮಕ್ಕೂ ಬಂದನು. ಆಶ್ರಮಕ್ಕೆ ಬಂದ ಅರಸನನ್ನು ಗೌತಮ ಮತ್ತು ಅಹಲ್ಯರು ತುಂಬು ಹೃದಯದಿಂದ ಸ್ವಾಗತಿಸಿ, ಆಶೀರ್ವಾದಿಸಿದರು. ಋಷಿ ಮತ್ತು ಋಷಿಪತ್ನಿಯ ಆನಂದಕ್ಕೆ ಪಾರವೇ ಇಲ್ಲ. ಅಂದಿನ ರಾತ್ರಿ ರಾಮನಿಗೆ ಆಶ್ರಮದಲ್ಲೇ ತಂಗಲು ವಿನಂತಿಸಿಕೊಂಡರು. ಅವರೀರ್ವರಿಗೆ ಸೀತೆಯನ್ನು ಕಾಡಿಗೆ ಅಟ್ಟಿದ ವಿಷಯ ತಿಳಿದಿರಲಿಲ್ಲ.

 

ಆದರಾತಿಥ್ಯದ ನಂತರ ಮಾತೃ ವಾತ್ಸಲ್ಯದಿಂದ ಅಹಲ್ಯೆ ರಾಮನ ಬಳಿ ಬಂದು ಅವನನ್ನು ಪೊಗಳುತ್ತಾ ಸೀತಾರಾಮ, ಮಹರ್ಷಿಗಳಿಂದ ನೀನು ವನವಾಸಕ್ಕೆ ಹೋದುದು, ವಾಲಿ ಸಂಹಾರ, ಸೀತಾಪಹರಣ, ರಾವಣ ಸಂಹಾರಗಳ ಬಗ್ಗೆ ತಿಳಿದಿತ್ತು. ನೀನೀಗ ಮಹಾರಾಜ. ಇವೆಲ್ಲವನ್ನೂ ನಿನ್ನ ಬಾಯಿಂದಲೆ ಕೇಳಬೇಕೆಂಬ ಅಪೇಕ್ಷೆ. ನಿನಗೆ ಅಭ್ಯಂತರ ಇಲ್ಲದಿದ್ದರೆ ಕೆಲವು ಘಟನೆಗಳನಾದರೂ ಹೇಳು ಎಂದು ಬಿನ್ನವಿಸಿಕೊಂಡಳು. ಅವಳ ಮಾತಿಗೆ ಮನ್ನಣೆಯಿತ್ತು ರಾಮ ವಾನರ ಮೈತ್ರಿ, ಸೇತುಬಂಧ, ಕುಂಭಕರ್ಣ, ಇಂದ್ರಜಿತು, ರಾವಣ ಸಂಹಾರ, ಸೀತೆಯ ಅಗ್ನಿಪರೀಕ್ಷೆ ಮತ್ತೆ ಅಯೋಧ್ಯೆಗೆ ಮರಳಿದುದು ಇವುಗಳ ಬಗ್ಗೆ ವಿಶದವಾಗಿ ತಿಳಿಸಿದನು. ಕಡೆಗೆ ಸೀತೆ ತುಂಬು ಗರ್ಭಿಣಿ ಎಂದು ಹೇಳಿದಾಗ ಅಹಲ್ಯೆ- ಗೌತಮರ ಆನಂದಕ್ಕೆ ಪಾರವಿಲ್ಲದಂತಾಯಿತು.

 

ತದ ನಂತರ ಸುಳ್ಳು ಹೇಳದ ಶ್ರೀರಾಮ ಅಗಸನ ದೃಷ್ಟಾಂತ ತಿಳಿಸಿ ಲೋಕೋಪವಾದಕ್ಕಾಗಿ ಬೆಚ್ಚಿ ತುಂಬು ಗರ್ಭಿಣಿ ಸೀತೆಯನ್ನು ಕಾಡಿಗೆ ಅಟ್ಟಿದ ವಿಷಯವನ್ನು ಕೂಡ ಮುಚ್ಚಿಡದೆ ತಿಳಿಸಿದನು. ಈ ವಿಷಯ ಕೇಳಿ ಅಹಲ್ಯೆಯ ಕಣ್ಣಲ್ಲಿ ನೀರು ತುಂಬಿ ನಿಂತಿತ್ತು. ಸಂಕಟ ಪಟ್ಟಳು. ಸೀತೆಗಾಗಿ ಮರುಗಿದಳು. ಪ್ರಾತಃಕಾಲ ಸಮಯವಾಯಿತು. ಎಂದಿನಂತೆ ಕೋಳಿ ಕೂಗಿತು. ಪತಿಯ ಪೂಜೆಗೆ ತಡವಾಗುವುದೆಂದು ಗಡಬಡಿಸಿ ಎದ್ದಳು ಅಹಲ್ಯೆ. ಪತಿಯ ಚರಣಗಳಿಗೆ ಎರಗಿ, ಶ್ರೀರಾಮನಿಗೆ ಆಹ್ನಿಕಾದಿಗಳನ್ನು ಮುಗಿಸಿ ಬರಲು ತ್ವರೆ ಮಾಡಿದಳು. ಸ್ನಾನಾಹ್ನಿಕಾದಿಗಳನ್ನು ಮುಗಿಸಿ ಬಂದ ಪತಿ ಮತ್ತು ರಾಮನಿಗೆ ಫಲಾಹಾರಗಳನ್ನಿತ್ತಳು. ನಂತರ ರಾಮನ ಬಳಿ ಬಂದು ‘ ರಾಮ, ಬಹಳ ವರುಷಗಳ ಹಿಂದೆ ಕಲ್ಲಾಗಿದ್ದ ನೀನು ನನಗೆ ಮುಕ್ತಿಯನಿತ್ತ ಸ್ಥಳಕ್ಕೆ ನಿನ್ನೊಡನೆ ಹೋಗುವಾಸೆ, ಬಾ ನನ್ನೊಡನೆ ಎಂದು ಕರೆದೊಯ್ದಳು. ಮಹರ್ಷಿ ಗೌತಮರೂ ರಾಮನೊಡಗೂಡಿ ಬಂದರು.

 

ಪತಿಯ ಚರಣಗಳಿಗೆ ವಂದಿಸಿ, ಅವರನ್ನು ಕ್ಷಮೆ ಬೇಡಿ, ಶಾಪದಿಂದ ಶಿಲೆಯಾಗಿ ನಿಂತಿದ್ದ ಅದೇ ಸ್ಥಳದಲ್ಲಿ ನಿಂತು ರಾಮನೆಡೆ ನೋಡಿದಳು. ಶ್ರೀರಾಮ, ಏನೊಂದು ಪಾಪವರಿಯದ ನಾನು ಅಂದು ಇಂದ್ರನ ಮೋಸಕ್ಕೆ ಒಳಗಾದೆ, ಪತಿತೆ ಎಂದು ನಿಂದಿಸಿ ಕಲ್ಲಾಗು ಎಂದು ಶಿಕ್ಷಿಸಿದನು ಪತಿ ಮಹರ್ಷಿ ಗೌತಮರು. ಪುರುಷೋತ್ತಮನಾದ ನಿನ್ನಿಂದ ಶಾಪವಿಮೋಚನೆಗೊಂಡೆ. ನನ್ನನ್ನು ಶಾಪದಿಂದ ವಿಮುಕ್ತಿಗೊಳಿಸಿ ಮರುಜೀವವನ್ನಿತ್ತ ಅದೇ ಶ್ರೀರಾಮ, ಪುರುಷೋತ್ತಮ ಲೋಕೋಪವಾದಕ್ಕಾಗಿ ಅಂಜಿ ಸ್ವಂತ ಪತ್ನಿಯನ್ನು ಅಗ್ನಿಪರೀಕ್ಷೆಗೊಳಪಡಿಸಿ, ಸ್ವೀಕರಿಸಿ ಕಡೆಗೆ ಒಬ್ಬ ಸಾಮಾನ್ಯ ಅಗಸನ ಮಾತಿಗೆ ಬೆಚ್ಚಿ, ತುಂಬು ಗರ್ಭಿಣಿಯೆಂದು ಕೂಡ ನೋಡದೆ ಕಾಡಿಗೆ ಅಟ್ಟಿದೆಯಲ್ಲಾ? ರಾಜಧರ್ಮವನ್ನು ಪಾಲಿಸಿ ಪತಿ ಧರ್ಮವನ್ನು ಮರೆತೆಯಲ್ಲಾ? ಸೀತೆಗೆ ಆದ ಈ ಶೋಷಣೆ ಸ್ತ್ರೀ ಕುಲಕ್ಕೇ ಆದ ಅವಮಾನ. ಅಂದು ನಿನ್ನಿಂದ ನನಗೆ ಶಾಪವಿಮೋಚನೆ ಆಯಿತಲ್ಲಾ ಎಂದು ಖೇದವಾಗುತ್ತಿದೆ. ಮೋಸ ಹೋದ ನನಗೆ ಮುಕ್ತಿ, ಅಪಹರಣಗೊಂಡ ನಿನ್ನ ಪತ್ನಿಗೆ ಕಾಡು. ಇದು ನ್ಯಾಯವೇ?. ಇಂತಹ ಶಿಕ್ಷೆಗಾಗಿಯೇ ಅಗ್ನಿಪರೀಕ್ಷೆಗೈದಳೇ ಆ ಸೀತೆ. ನೀ ನನಗೆ ನೀಡಿದ ಶಾಪವಿಮೋಚನೆ, ವಿಮುಕ್ತಿ ನನಗೆ ಬೇಡವಾಗಿದೆ. ನಡೆದ ಅನ್ಯಾಯಕ್ಕೆ ನಾನೀಗ swaಇಚ್ಛೆಯಿಂದ ಮತ್ತೆ ಇದೇ ಸ್ಥಳದಲ್ಲಿ ಶಿಲೆಯಾಗಿ ನಿಲ್ಲಲು ನನ್ನನ್ನು ನಾನೇ ಶಿಕ್ಷಿಸಿಕೊಳ್ಳುತ್ತೇನೆ. ಇನ್ನು ಯಾವುದೇ ಕಾರಣಕ್ಕೂ ನನಗೆ ವಿಮುಕ್ತಿ ಬೇಡ ಎಂದು ‘ ಮೀಡುಂ ಕಲ್ಲಾನಾಳ್‌ ಅಹಲ್ಯೆ’ (ಮತ್ತೆ ಕಲ್ಲಾದಳು ಅಹಲ್ಯೆ) ಎಂದರು.

 

ಇಂದಿನ ಕಾಲಕ್ಕೆ ಅನುಗುಣವಾಗಿ ಯೋಚಿಸಿದ ರಾಮಾಯಣದ ಈ ಕಥೆಯನ್ನು ಪರಿಚಯಸ್ಥರು ನನಗೆ ಹೇಳಿದ್ದು, ಹೆಚ್ಚು ವಿಮರ್ಶಿಸದೆ ಓದಲು ಚೆನ್ನಾಗಿದೆ ಎಂದು ಲಿಖಿತ ರೂಪದಲಿ ಇಳಿಸಿದೆ. ರಾಮಯಣದ ಕಾಲ ಬೇರೆ, ಇಂದಿನ ಕಾಲ ಬೇರೆ...ಅವರವರ ಭಾವಕ್ಕೆ ಅಲ್ಲವೇ....

Comments