ಮನದೊಳಗೆ ಸಾವಿನ ನೆರಳ ಸುಳಿಗಳು…! (ಭಾಗ 1)

ಹೆಜ್ಜೆ ಹೆಜ್ಜೆಗೆ ಬಂದೂಕು ಹಿಡಿದ ಸೈನಿಕರು, ಕಣ್ಣ ದೃಷ್ಟಿಗೆ ಸೌಂದರ್ಯ ರಾಶಿಯ ಹಿಮ ಕಣಿವೆಗಳು, ಮನದೊಳಗೆ ಸಾವಿನ ನೆರಳ ಸುಳಿಗಳು… ದೇಹ ಮತ್ತು ಮನಸ್ಸು, ಪ್ರಕೃತಿ ಮತ್ತು ಜೀವರಾಶಿ, ಧರ್ಮ ಮತ್ತು ಕಾನೂನು, ತಿಳಿವಳಿಕೆ ಮತ್ತು ನಡವಳಿಕೆ. ಜಮ್ಮು ಕಾಶ್ಮೀರ ಲಡಾಖ್ ಪ್ರಾಂತ್ಯದಲ್ಲಿ ಪ್ರವಾಸ ಮಾಡುತ್ತಿರುವ ಈ ಸಮಯದಲ್ಲಿ ಈ ವಿಷಯಗಳು ಒಂದು ಸವಾಲಿನಂತೆ ಕಾಡುತ್ತಿದೆ.
ಒಂದು ಕಡೆ ಪ್ರಾಕೃತಿಕ ಸೌಂದರ್ಯ ತನ್ನ ಪರಾಕಾಷ್ಠೆಯ ಹಂತದಲ್ಲಿ ಇರುವಂತೆ ಭಾಸವಾಗುತ್ತದೆ. ಆದರೆ ಅದೇ ಸಮಯದಲ್ಲಿ ಮೈನಸ್ ಡಿಗ್ರಿಯ ಕೊರೆಯುವ ಚಳಿ ಸ್ಥಳೀಯರನ್ನು ಹೊರತುಪಡಿಸಿ ಇತರ ಎಲ್ಲರಿಗೂ ಬಹುದೊಡ್ಡ ಸವಾಲಾಗುತ್ತದೆ. ಸೌಂದರ್ಯ ಸವಿಯಲು ಸಹ ಕಷ್ಟವಾಗಿ ಆರೋಗ್ಯದ ದೃಷ್ಟಿಯಿಂದ ಅನೇಕರಿಗೆ ಮಾನಸಿಕವಾಗಿ ಹಿಂಸಾತ್ಮಕವೂ ಆಗುತ್ತದೆ. ದೇಹವನ್ನು ಸದಾಕಾಲವೂ ಸೈನಿಕ ಶಿಸ್ತಿನಿಂದ ಅತ್ಯಂತ ಶ್ರಮದಾಯಕವಾಗಿ ರೂಪಿಸಿಕೊಂಡಿದ್ದರೆ ಮಾತ್ರ ಸ್ವಲ್ಪ ಸಹಜವಾಗಿರುತ್ತದೆ. ದೇಹದ ಯಾವ ಭಾಗವನ್ನು ಸಹ ಹೊರ ಚಾಚುವುದು ತುಂಬಾ ಕಷ್ಟ. ತಣ್ಣಗಿನ ನೀರನ್ನು ಮುಟ್ಟುವುದು ಸಹ ನೋವಿನ ಅನುಭವ ನೀಡುತ್ತದೆ. ಮನಸ್ಸು ಕುಗ್ಗುತ್ತದೆ. ಪ್ರಕೃತಿಯ ಸೌಂದರ್ಯ ಸವಿಯಲು ಅಡ್ಡಿಯಾಗುತ್ತದೆ.
ಈ ಭಾಗದ ಇನ್ನೊಂದು ವಿಶೇಷತೆ ಹಿಂದೂ ಮತ್ತು ಮುಸ್ಲಿಂ - ಸೈನಿಕರು ಮತ್ತು ಭಯೋತ್ಪಾದಕರು - ದೇಶ ಪ್ರೇಮ ಮತ್ತು ದೇಶ ದ್ರೋಹ - ಇತಿಹಾಸ ಮತ್ತು ವರ್ತಮಾನ - ಭಾವುಕತೆ ಮತ್ತು ವಾಸ್ತವ ಇವುಗಳ ತಾಕಲಾಟ ಮತ್ತು ಸಮಗ್ರ ಚಿಂತನೆಯ ಕೊರತೆ. ಸ್ವಾರ್ಥವು ನಮ್ಮ ವಿಶಾಲ ಮತ್ತು ಸತ್ಯ ಚಿಂತನೆಯನ್ನು ಮಂಕುಗೊಳಿಸುತ್ತದೆ. ಸೃಷ್ಟಿಯ ಸಹಜತೆಯನ್ನು ಅದರ ಮೂಲದಿಂದ ಯೋಚಿಸುವ ಬದಲು ನನ್ನ ದೇಶ ನನ್ನ ಧರ್ಮ ನನ್ನ ಜಾತಿ ನನ್ನ ಭಾಷೆ ಹೀಗೆ ಯೋಚಿಸುತ್ತಾ ಹೋದಾಗ ಸಮಸ್ಯೆಗಳು ಜಟಿಲವಾಗುತ್ತದೆ. ಕಾಶ್ಮೀರ ಭಾಗದ ಸಾಮಾಜಿಕ ವಾತಾವರಣವನ್ನು ಗಮನಿಸಿದಾಗ ಈ ಅಂಶಗಳೇ ಮೇಲುಗೈ ಪಡೆದಿವೆ.
ಒಂದು ಅಂದಾಜಿನ ಪ್ರಕಾರ ಕಾಶ್ಮೀರ ಕಣಿವೆಯ ಬಹುತೇಕ ಮುಸ್ಲಿಮರು ನಾವು ಇಲ್ಲಿನ ಮೂಲನಿವಾಸಿಗಳು. ಸುಮಾರು ಶತಮಾನಗಳ ಹಿಂದೆ ಆಕ್ರಮಣದಿಂದ ಮತ್ತು ವಲಸೆಯಿಂದ ಇಲ್ಲಿ ಬಂದು ನೆಲೆಸಿದ ಮೇಲೆ ಇಲ್ಲಿಯೇ ಹುಟ್ಟಿ ಬೆಳೆದವರು. ಇದು ನಮ್ಮ ಸ್ವತಂತ್ರ ದೇಶ. ಭಾರತದ ಸ್ವಾತಂತ್ರ್ಯ ಮತ್ತು ವಿಭಜನೆಯ ನಂತರ ನಮ್ಮದು ಸ್ವತಂತ್ರ ರಾಷ್ಟ್ರ ಎಂಬುದು ಅವರ ಅಭಿಪ್ರಾಯ
.ಅವರು ಸ್ವಾಯತ್ತ ಮತ್ತು ಸ್ವತಂತ್ರ ರಾಷ್ಟ್ರವನ್ನು ಬಯಸುತ್ತಾರೆ. ಇದರಲ್ಲಿಯೂ ಅನೇಕರು ವಿಶೇಷ ಸ್ಥಾನಮಾನ ಹೊಂದಿ ಭಾರತದ ಜೊತೆಯೇ ಇರಬೇಕು ಎಂಬ ಆಕಾಂಕ್ಷೆಯನ್ನು ಹೊಂದಿದ್ದಾರೆ. ಸುಮಾರು ಶೇಕಡಾ 10 ರಷ್ಟು ಇಸ್ಲಾಂ ಧರ್ಮದ ಕಟ್ಟಾ ಅನುಯಾಯಿಗಳು ಧರ್ಮ ಮತ್ತು ವ್ಯಾವಹಾರಿಕ ಕಾರಣಕ್ಕಾಗಿ ಪಾಕಿಸ್ತಾನಕ್ಕೆ ಸೇರಲು ಬಯಸುತ್ತಾರೆ. ಇಂತಹವರ ಬೆಂಬಲಕ್ಕಾಗಿ ನೆರೆಯ ಪಾಕಿಸ್ತಾನ ಅಧಿಕೃತವಾಗಿಯೇ ಕೆಲಸ ಮಾಡುತ್ತದೆ. ಅವರಿಗೆ ಜೊತೆಯಾಗಿ ಭಯೋತ್ಪಾದಕ ಸಂಘಟನೆಗಳು ನಿರಂತರ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಅದರ ಭಾಗವಾಗಿ ಅಲ್ಲಿನ ಹಿಂದುಗಳ ಹತ್ಯೆಯೂ ನಡೆಯುತ್ತಿದೆ. ಮತ್ತೂ ಮುಂದುವರಿದು ಭಾರತದ ರಾಜಕೀಯ ಪಕ್ಷಗಳು ಸಹ ಈ ವಿಷಯವನ್ನು ಭಾವನಾತ್ಮಕ ಮತ್ತು ರಾಜಕೀಯಗೊಳಿಸಿವೆ. ಸೈನ್ಯದ ಕೆಲವು ಅತಿರೇಕಗಳು, ರಾಜಕಾರಣಿಗಳ ತುಷ್ಟೀಕರಣ ಸಹ ಇದರಲ್ಲಿ ತಮ್ಮ ಪಾತ್ರ ನಿರ್ವಹಿಸಿದೆ.
ಒಟ್ಟಾರೆ ಕಾಶ್ಮೀರದ ಬಗ್ಗೆ ಸ್ಥಳೀಯರು, ಪಾಕಿಸ್ತಾನದವರು, ಭಾರತದವರು, ಭಯೋತ್ಪಾದಕರು ಬೇರೆ ಬೇರೆ ಅಭಿಪ್ರಾಯ ಹೊಂದಿದ್ದಾರೆ. ಆದರೆ ಸಮಸ್ಯೆ ಬಗೆಹರಿಯಲು ಯಾರು ಏನು ಮಾಡಬೇಕು ಮತ್ತು ಯಾವ ದೃಷ್ಟಿಕೋನದಿಂದ ಯೋಚಿಸಬೇಕು ಎಂಬುದು ಅನುಮಾನದ ಹುತ್ತದೊಳಗೆ ಸಿಲುಕಿ ಗೊಂದಲವಾಗಿದೆ. ಪಾಕಿಸ್ತಾನದವರಿಗೆ ಕಾಶ್ಮೀರದ ಅವಶ್ಯಕತೆ ಇಲ್ಲ. ಇರುವ ದೇಶವನ್ನು ಉತ್ತಮವಾಗಿ ನಿರ್ವಹಿಸಿ ಭಾರತದೊಂದಿಗೆ ಇತರೆ ವಿಷಯಗಳಲ್ಲಿ ಸೌಹಾರ್ದತೆ ಕಾಪಾಡಿಕೊಂಡು ವ್ಯಾಪಾರ ವ್ಯವಹಾರ ಸಾಧಿಸಿ ಅಭಿವೃದ್ಧಿ ಹೊಂದುವುದು ಉತ್ತಮ ನಿರ್ಧಾರ. ಇಲ್ಲದಿದ್ದರೆ ಅದು ನಿರಂತರ ಕಷ್ಟಕ್ಕೆ ಸಿಲುಕಿದೆ ಮತ್ತು ಸಿಲುಕುತ್ತಲೇ ಇರುತ್ತದೆ. ಅಪಾರ ಪ್ರಮಾಣದ ಹಣ ಅನವಶ್ಯಕವಾಗಿ ಇದಕ್ಕಾಗಿ ವ್ಯಯಿಸುವ ಮೂರ್ಖತನ ಬಿಡಬೇಕು.ಣ
(ಇನ್ನೂ ಇದೆ)
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ