ಮುಗ್ಧನಂತೆ, ಸಂತನಂತೆ; ಬೆರಗಾಗಿ, ಬಯಲಾಗಿ...

ಮುಗ್ಧನಂತೆ, ಸಂತನಂತೆ; ಬೆರಗಾಗಿ, ಬಯಲಾಗಿ...

ಎರಡು ವರುಷಗಳ ಹಿಂದೆ ಡೇವಿಡ್ ಅಟೆನ್‌ ಬರೋ ನಿರೂಪಿಸಿದ, ಜಾನ್ ಹ್ಯೂಜ್ ನಿರ್ದೇಶಿಸಿದ ‘ಎ ಲೈಫ್ ಆನ್ ಅವರ್ ಪ್ಲಾನೆಟ್’ ಎಂಬ ಸಾಕ್ಷ್ಯಚಿತ್ರ ಬಂದಿತ್ತು. ಅದು ಜಗತ್ತಿನ ಕಾಡಿನ ಚಿತ್ರಣವನ್ನು ನಮ್ಮ ಮುಂದೆ ಯಥಾವತ್ ತೆರೆದಿಟ್ಟ ಡಾಕ್ಯುಮೆಂಟರಿ. ಅದಕ್ಕೆ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಯಿತು. ಡೇವಿಡ್ ಅಟೆನ್ ಬರೋ ಅದನ್ನು ನಿರೂಪಿಸಿದ್ದರಿಂದ ಅದಕ್ಕೆ ವಿಶೇಷ ಮೌಲ್ಯವೂ ಬಂತು. ಹೀಗೆ ಪ್ರಸಿದ್ದರು ನಿರೂಪಕರಾಗಿರುವ ಸಾಕ್ಷ್ಯ ಚಿತ್ರಗಳು ಸಾಕಷ್ಟು ಸಿಗುತ್ತವೆ.

ಆದರೆ ‘ಗಂಧದ ಗುಡಿ’ ಅಂಥ ಸಾಕ್ಷ್ಯಚಿತ್ರಗಳಿಗಿಂತ ಭಿನ್ನವಾದದ್ದು. ಇಲ್ಲಿ ಪುನೀತ್ ನಿರೂಪಕರಲ್ಲ ಪಯಣಿಗರು. ಅವರು ಕಾಡನ್ನು ಅರಿಯುತ್ತಾ ಹೋಗುವುದೇ ಗಂಧದ ಗುಡಿಯ ಜೀವಾಳ. ಪ್ರಶ್ನೋತ್ತರಗಳ ಮೂಲಕ ಪುನೀತ್ ಮತ್ತು ಅಮೋಘವರ್ಷ ತಮಗೆ ಗೊತ್ತಿರುವುದನ್ನೆಲ್ಲ ಹೇಳಿಕೊಳ್ಳುತ್ತಾರೆ. ಗೊತ್ತಿರದೇ ಇರುವುದನ್ನು ತಿಳಿದುಕೊಳ್ಳುತ್ತಾರೆ. ಹಾಗೆ ಮಾಡುವ ಮೂಲಕ ನಮಗೆ ಅನೇಕ ಸಂಗತಿಗಳನ್ನು ಗೊತ್ತು ಮಾಡಿಸುತ್ತಾರೆ. 

ನಾಗರಹೊಳೆಯಿಂದ ಕಾಳಿನದಿ ಮೂಲದ ತನಕ ಸಾಗುವ ಈ ಪಯಣದಲ್ಲಿ ನೇತ್ರಾಣಿಯಿದೆ, ವಿಜಯನಗರ ಸಾಮ್ರಾಜ್ಯ ಇದೆ, ರಾಜ್ ಕುಮಾರ್ ಅಪಹರಣಕ್ಕೆ ಒಳಗಾದ ಸಂದರ್ಭದಲ್ಲಿ ಅಲೆದಾಡಿದ ಕಾಡುಗಳಿವೆ, ಕರಡಿಧಾಮವಿದೆ, ಸೋಲಿಗರ ಹಟ್ಟಿಯಿದೆ, ಅನೆಗಳನ್ನು ಪಳಗಿಸುವವರಿದ್ದಾರೆ, ಕಾಡು ಕಾಯುವ ಅರಣ್ಯರಕ್ಷಕರ ಕಷ್ಟಸುಖದ ಚಿತ್ರಣವಿದೆ, ಕಾಳಿಂಗ ಸರ್ಪವನ್ನು ಹಿಡಿಯುವ ಪರಿಣತರಿದ್ದಾರೆ, ಕುರಿಗಾಹಿಗಳಿದ್ದಾರೆ, ಅವರು ಮಾಡುವ ರುಚಿಯಾದ ರೊಟ್ಟಿಯಿದೆ. 

ಇದನ್ನು ಸಾಕ್ಷ್ಯಚಿತ್ರ ಎಂದು ಕರೆಯಲಾಗದು. ಇದು ಸಾಕ್ಷ್ಯಚಿತ್ರ ನಾಟಕ, ಪುನೀತ್ ಮುಗ್ಧತೆ, ಅರಿಯುವ ಹಂಬಲ, ಮುಗುಳ್ಳಗೆ, ಕುತೂಹಲ, ಹುಡುಕಾಟಗಳೆಲ್ಲ ಈ ಚಿತ್ರದುದ್ದಕ್ಕೂ ನಮ್ಮನ್ನು ಕಾಡುತ್ತವೆ. ಇದರ ಬಹುದೊಡ್ಡ ಪ್ರಯಾಣ ಶಕ್ತಿಯೆಂದರೆ ಎಲ್ಲೂ ಕೂಡ ಪುನೀತ್ ಸುಳ್ಳು ಹೇಳಿಲ್ಲ. ತನಗೆ ಗೊತ್ತಿಲ್ಲದೇ ಇರುವುದನ್ನು ಗೊತ್ತಿದೆ ಎಂದು ಹೇಳಿಕೊಂಡಿಲ್ಲ. ಹೀರೋಯಿಸಮ್ ತೋರಿಸಿಲ್ಲ. ಬುಸುಗುಟ್ಟುವ ಹಾವಿನೆದುರು ಅಂಜಿಕೆಯ ಹುಡುಗನಂತೆ, ಜಲಪಾತದ ಎದುರು ಬೆರಗುಗೊಂಡ ಪಯಣಿಗನಂತೆ, ಕಾಡಿನ ಎದುರು ಶರಣಾದ ಸಂತನಂತೆ ಕಾಣಿಸುತ್ತಾರೆ. ಮನುಷ್ಯ ಅಹಂಕಾರವನ್ನೆಲ್ಲ ಪಕ್ಕಕ್ಕಿಟ್ಟು ಕಾಡಿನ ಮುಂದೆ ಹೇಗೆ ಮುಗ್ಧ ಮನುಷ್ಯನಾಗಿ ನಿಲ್ಲಬೇಕು ಅನ್ನುವುದನ್ನು ತೋರುತ್ತಾರೆ.

ಇಲ್ಲಿ ಗಾಜನೂರು, ರಾಜ್‌ಕುಮಾರ್ ಧ್ಯಾನಸ್ಥರಾಗುತ್ತಿದ್ದ ಆಲದ ಮರ, ಅಪ್ಪು ಹೇಳುವ ಬಾಲ್ಯದ ಕತೆಗಳು- ಎಲ್ಲವೂ ಇದೆ. ಎಲ್ಲಿ ಬೇಕೋ ಅಲ್ಲಿ ಸೊಗಸಾದ ಹಾಡುಗಳಿವೆ. ನಾವಿದ್ದಲ್ಲೇ ಊರು, ಆಕಾಶಾನೇ ಸೂರು ಅನ್ನುವ ಅರ್ಥ ಪೂರ್ಣ ಸಾಲುಗಳನ್ನು ಕಿರಣ್‌ ಕಾವೇರಪ್ಪ ಬರೆದಿದ್ದಾರೆ. ಪ್ರತೀಕ್ ಶೆಟ್ಟಿ ಕೆಮರಾ ಕಾಡನ್ನು ನಮ್ಮ ಮುಂದೆ ಕಡೆದಿಟ್ಟಿದೆ. ಅಜನೀಶ್ ಲೋಕನಾಥ್ ಸಂಗೀತ ನಾಟಕೀಯವಾಗದೇ, ಕಾಡಿನ ಮೂಡನ್ನು ಸೆರೆಹಿಡಿಯುತ್ತದೆ. ಈಗ ಕಾಡಿನ ಮುಗಿದು, ಅಂತರಂಗದ ಪ್ರಯಾಣ ಶುರುವಾಗುತ್ತದೆ ಎಂಬ ಮಾತು ಚಿತ್ರದಲ್ಲಿದೆ. ಗಂಧದ ಗುಡಿ ನೋಡಿದ ನಂತರ ನಮ್ಮಲ್ಲಾಗುವುದೂ ಅದೇ.

-ಜೋಗಿ

(ಸಂಗ್ರಹಿಸಿದ್ದು : ರಾಜೇಶ್ ಐತಾಳ್, ಸುರತ್ಕಲ್)

ಚಿತ್ರ: ಇಂಟರ್ನೆಟ್ ತಾಣ