ಮೈಸೂರು ರಮಾನಂದರ ಹೊಸ ಸಾಮಾಜಿಕ ನಾಟಕ - ಕಾಣೆಯಾಗಿದ್ದಾನೆ - ಒಂದು ವಿಶ್ಲೇಷಣೆ

ಮೈಸೂರು ರಮಾನಂದರ ಹೊಸ ಸಾಮಾಜಿಕ ನಾಟಕ - ಕಾಣೆಯಾಗಿದ್ದಾನೆ - ಒಂದು ವಿಶ್ಲೇಷಣೆ

ಬರಹ

ನಾವು ದಿನ ಪತ್ರಿಕೆಗಳನ್ನು ನೋಡುತ್ತಿದ್ದರೆ ಕಡೇ ಪಕ್ಷ ವಾರಕ್ಕೆರಡುಬಾರಿಯಾದರೂ ಯಾರಾದರೊಬ್ಬ ವ್ಯಕ್ತಿ ಕಾಣೆಯಾಗಿ ಹೋಗಿರುವ ಸುದ್ದಿಯನ್ನು ಓದಿಯೇತೀರುತ್ತೇವೆ. ಅದು ಗಂಡಸಾಗಿರಬಹುದು, ಹೆಣ್ಣಾಗಿರಬಹುದು, ವಯಸ್ಕರಾಗಿರಬಹುದು ಅಥವಾ ವಯೋವೃದ್ಧರಾಗಿರಬಹುದು.

ಹೀಗೆ ಕಾಣೆಯಾದವರು ಹೇಗೆ ಕಾಣೆಯಾದರು, ಕಾಣೆಯಾಗಿ ಎಲ್ಲಿ ಹೋದರು ಎಂಬುದು ಸಂಶೋಧನಾತ್ಮಕವಾದ ವಿಚಾರವೂ, ವಿಚಾರ ಪ್ರಚೋದಕವೂ ಹೌದು.

ವ್ಯಕ್ತಿಯೊಬ್ಬರು ಕಾಣೆಯಾಗಿ ಹೋಗಲು ಹಲವಾರು ಕಾರಣಗಳಿರುತ್ತವೆ.

ಮನೆಯಲ್ಲಿ ಶಾಂತಿ ಸಿಗದೆ, ಯಾರಿಗೂ ಬೇಡವೆನಿಸಿಕೊಂಡ ವ್ಯಕ್ತಿ ರೋಸಿ ಹೋಗಿ ಸಂಸಾರದ ಜಂಜಾಟವೇ ಬೇಡವೆಂದು ಯಾರಿಗೂ ಹೇಳದೆ ದೂರದ ಸ್ಥಳಕ್ಕೆ ಹೊರಟು ಹೋಗಿ ಕಾಣೆಯಾಗಬಹುದು.

ಕೆಟ್ಟ ಸ್ನೇಹವನ್ನು ಬೆಳೆಸಿ, ಕಲಿಯಬಾರದ್ದನ್ನು ಕಲಿತು, ಮನೆಯವರಿಗೆ ತಲೆನೋವಾಗಿ ಪರಿಣಮಿಸಿ, ಕೊನೆಗೆ ಏನನ್ನೋ ಸಾಧಿಸಲು ಹೊರಟವನಂತೆ ಕಾಣೆಯಾಗಿ ಹೋಗಬಹುದು.

ಮನೆಯಲ್ಲಿ ದೊರಕುವ ಪ್ರೀತಿ, ವಿಶ್ವಾಸಗಳು ಸರಿಹೊಂದಲಿಲ್ಲವೆಂದು ಹೊರಗಿನವರ ಪ್ರೀತಿಗೆ ಆಸೆ ಪಟ್ಟು ಅವರೊಂದಿಗೆ ಯಾರಿಗೂ ತಿಳಿಯದ ಸ್ಥಳಕ್ಕೆ ಹೊಗಿ ತಮ್ಮ ಹೊಸ ಜೀವನವನ್ನು ನಡೆಸುವ ಆಸೆಯಿಂದ ಕಾಣೆಯಾಗಿ ಹೋಗಬಹುದು.

ಹೆಚ್ಚು ತಿಳುವಳಿಕೆ ಇಲ್ಲದ ಅಪ್ರಾಪ್ತರು, ಪುಟ್ಟ ಮಕ್ಕಳು ತಂದೆ ತಾಯಿಗಳ ಅಥವಾ ಪೋಷಕರ ಅಜಾಗರೂಕತೆಯಿಂದಾಗಿ ಎಲ್ಲೋ ಕಳೆದು ಹೋಗಿ ತಮ್ಮವಿಳಾಸವನ್ನರಿಯದ್ದರಿಮ್ದ ಕಾಣೆಯಾಗಿ ಹೋಗಬಹುದು.

ವೈಭವಯುತ ಜಿವನವನ್ನು ನಡೆಸುವ ವ್ಯಕ್ತಿಯನ್ನು ಗಮನಿಸಿದ ಸಮಾಜ ಕಂಟಕರು ಅವರಿಂದ ಹಣ ಸೆಳೆಯುವ ಪ್ರಯತ್ನವೆಂದು ಅಂತಹ ವ್ಯಕ್ತಿಯ್ತನ್ನು ಅಪಹರಿಸಿ ಕಾಣೆಯಾಗಿಸಬಹುದು. ಹಣ ದೊರೆತರೂ ತಮ್ಮ ಕುರುಹು ತಿಳಿಯುತ್ತದೆಂದು ಅಥವಾ ಹಣ ದೊರೆಯದೆ ರೋಷದಿಂದ ಸೆರೆಹಿಡಿದು ತಂದ ವ್ಯಕ್ತಿಯನ್ನು ಕೊಲೆ ಮಾಡಿ ಕಾಣೆಯಾಗಿಸಬಹುದು.

ಮಿದುಳಿನ ಮೇಲಾಗುವ ಪರಿಣಾಮದಿಮ್ದ ವ್ಯಕ್ತಿಯ ಜ್ಞಾಪಕ ಶಕ್ತಿ ಕುಂದಿ ಹೋಗಿ, ಎಲ್ಲಿಗೋ ಹರಟವರು ಮನೆಗೆ ಹಿಂದಿರುಗಲಾರದೆ ಕಾಣೆಯಾಗಿ ಹೋಗಬಹುದು.

ಈ ಎಲ್ಲಾ ಕಾಣೆಯಾಗಿ ಹೋಗಬಹುದಾದ ಪ್ರಸಂಗಗಳನ್ನು ಮೈಸೂರು ರಮಾನಂದರು ತಮ್ಮ ಇತ್ತೀಚಿನ ನಾಟಕ - ಕಾಣೆಯಾಗಿದ್ದಾನೆ-ಯಲ್ಲಿ ಅತ್ಯಂತ ಮನೋಜ್ಞವಾಗಿ ವಿಶ್ಲೇಷಿಸಿದ್ದಾರೆ. ಮೈಸೂರು ರಮಾನಂದರೆಂದರೆ ಕಾಮೆಡಿ, ಕಾಮೆಡಿ ಎಂದರೆ ಮೈಸೂರು ರಮಾನಂದ್ ಆಗಿರುವುದರಿಂದ ಈ ನಾಟಕದುದ್ದಕ್ಕೂ ಹಾಸ್ಯದ ಝಳಕು ಇದ್ದದ್ದೇ. ಆದರೆ ಅದು ಎಲ್ಲೂ ಅತಿರೇಕಕ್ಕೆ ಹೋಗದೆ, ವಿಷಯಕ್ಕೆ ನವಿರಾದ ನಗೆ ಲೇಪವನ್ನು ಹಚ್ಚಿರುವುದು ಈ ನಾಟಕದ ವಿಶೇಷತೆ.

ಮೈಸೂರು ರಮಾನಂದರ ಸಾಮಾಜಿಕ ಕಳಕಳಿ ಅವರ ಎಲ್ಲಾ ನಾಟಕಗಳಲ್ಲಿಯೂ ಹಾಸುಹೊಕ್ಕಾಗಿ ಮೂಡಿ ಬಂದಿದ್ದು, ಈ ನಾಟಕವೂ ಅದಕ್ಕೆ ಹೊರತಾಗಿಲ್ಲ. ಹಾಗಾಗಿ ಅವರು ಕೇವಲ ವ್ಯಕ್ತಿಗಳು ಕಾಣೆಯಾಗಿರುವುದನ್ನು ಮಾತ್ರ ತಮ್ಮ ನಾಟಕದಲ್ಲಿ ಉದ್ದೇಶಿಸಿಲ್ಲದೆ, ಸಾಮಾಜಿಕವಾಗಿ ಮಾನವರಲ್ಲಿರಬೇಕಾದ ಹಲವಾರು ಗುಣಗಳು ಮಾಯವಾಗಿರುವುದನ್ನೂ ಸೂಕ್ಷ್ಮವಾಗಿ ತಿಳಿಸಿಕೊಟ್ಟು ನೋಡುಗರನ್ನು ಚಿಂತನೆಗೆ ಹಚ್ಚಿದ್ದಾರೆ.

ಉದಾಹರಣೆಗೆ ಇಂದಿನ ಸಮಾಜದಲ್ಲಿ ಹಿರಿಯರಿಗೆ ನೀಡಬೇಕಾದ ಗೌರವಾದರಗಳು ಕಿರಿಯರಲ್ಲಿ ಕಾಣೆಯಾಗಿರುವುದು, ಕಿರಿಯರನ್ನು ಕಂಡರೆ ಪ್ರೀತಿ ವಿಶ್ವಾಸಗಳು ಹಿರಿಯರಲ್ಲಿ ಕಾಣೆಯಾಗಿರಿವುದು, ಪರೋಪಕಾರ ಮನೋಭಾವ ಕಾಣೆಯಾಗಿರುವುದು, ಕೆಲಸ ಕಾರ್ಯಗಳಲ್ಲಿ ಶ್ರದ್ಧೆ, ನಿಷ್ಠೆಗಳು ಕಾಣೆಯಾಗಿರುವುದು, ಅನ್ನದಾತನಲ್ಲಿಡಬೇಕಾದ ನಿಷ್ಠೆ, ಗೌರವ, ಅಭಾರಿತನಗಳು ಕಾಣೆಯಾಗಿರುವುದು, ಗಂಡ ಹೆಂಡತಿಯ ಮೇಲೆ, ಹೆಂಡತಿ ಗಂಡನೆಮೇಲೆ ಇಡಬೇಕಾದ ನಂಬಿಕೆ ಕಾಣೆಯಾಗಿರುವುದ್ . . . ಹೀಗೆ ಕಾಣೆಯಾಗಿರುವುದರ ಪಟ್ಟಿ ಅವರ ನಾಟಕದುದ್ದಕ್ಕೂ ನೋಡುಗರ ಬೆನ್ನು ಬಿಡದೆ ಹಿಂಬಾಲಿಸುತ್ತದೆ.

ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸುಭಾಶ್ ಚಂದ್ರಬೋಸರು ಕಾಣೆಯಾಗಿರುವುದು, ಕಲ್ಕತ್ತಾದ ಮ್ಯೂಸಿಯಂನಿಂದ ಗುರುದೇವ ರಬೀಂದ್ರನಾಥ ಠಾಕೂರರಿಗೆ ದೊರಕಿದ ನೊಬೆಲ್ ಪ್ರಶಸ್ತಿಯೇ ಕಾಣೆಯಾಗಿರುವುದು, ಮುನಿಸಿಪಾಲಿಟಿಯವರು ಹಣ ಖರ್ಚುಮಾಡಿ ಹಾಕಿಸಿದ ರಸ್ತೆಯೇ ಕಾಣೆಯಾಗಿರುವುದು . . . ಹೀಗೆ ಇಂದಿನ ರಾಜಕಾರಣದ ವ್ಯಥೆಯ ಕಥೆಯನ್ನೂ ವ್ಯಂಗ್ಯವಾಗಿ ತಿಳಿಸಿಕೊಟ್ಟಿರುವುದು, ನಮ್ಮ ದೇಶದ ಆಡಳಿತ ವ್ಯವಸ್ಥೆಯಲ್ಲಿರುವ ಲೋಪದೋಶಗಳನ್ನು ಎತ್ತಿ ತೋರಿಸಿ, ಎಚ್ಚರಿಕೆ ನೀಡುತ್ತಿರುವುದೂ ಈ ನಾಟಕದ ವಿಶೇಷತೆಯೇ ಸರಿ.

ನಾಟಕ ರಮಾನಂದರ ಹೊಸ ಕೃತಿಯಾಗಿದ್ದು, ರಂಗದಮೇಲೆ ಇದೇ ವರ್‍ಶದಲ್ಲಿ ಪಾದಾರ್ಪಣೆ ಮಾಡುತ್ತಿದ್ದು (ಗದಗಿನಲ್ಲಿ) ಪ್ರೇಕ್ಷಕರು ಹೇಗೆ ಪ್ರತಿಕ್ರಿಯಿಸುವರೆಂಬುದನ್ನು ಕಾದು ನೋಡಬೇಕು.

ನಾಟಕ ಯಶಸ್ಸು ಕಾಣಲಿ, ನಾಟಕದ ಉದ್ದೇಶ ಜನರ ಮನಸ್ಸನ್ನು ಮುಟ್ಟಲಿ ಎಂದು ಹಾರೈಸುವ

ಎ.ವಿ. ನಾಗರಾಜು
ಅಗಿಲೆನಾಗ್[ಎಟ್]ರಿಡಿಫ್ ಮೈಲ್.ಕಾಂ