ಯಾರು ಹೇಳಿದ್ದು ನಿಮಗೆ, ಜನ ಬದಲಾಗುವುದಿಲ್ಲವೆಂದು...

ಯಾರು ಹೇಳಿದ್ದು ನಿಮಗೆ, ಜನ ಬದಲಾಗುವುದಿಲ್ಲವೆಂದು...

ಬುದ್ದ, ಬಸವ, ವಿವೇಕ, ಗಾಂಧಿ, ಅಂಬೇಡ್ಕರ್, ಜೀಸಸ್, ಪೈಗಂಬರ್, ಗುರುನಾನಕ್, ಮಹಾವೀರ ಮುಂತಾದ ಯಾರೇ ಹೇಳಿದರೂ ಇವರು ಬದಲಾಗುವುದಿಲ್ಲವೆಂದು, ಹಣ ಕೊಟ್ಟು ನೋಡಿ ಹೇಗೆ ಬದಲಾಗುವರೆಂದು, ಅಧಿಕಾರ ಕೊಟ್ಟು ನೋಡಿ ಹೇಳಿ ಬದಲಾಗುವರೆಂದು, ಅಂತಸ್ತು ಕೊಟ್ಟು ನೋಡಿ ಹೇಗೆ ಬದಲಾಗುವರೆಂದು, ರೂಪ ಲಾವಣ್ಯ ಕೊಟ್ಟು ನೋಡಿ ಹೇಳಿ ಬದಲಾಗುವರೆಂದು, ಪ್ರಶಸ್ತಿ ಕೊಟ್ಟು ನೋಡಿ ಹೇಗೆ ಬದಲಾಗುವರೆಂದು, ಉನ್ನತ ಶಿಕ್ಷಣ ಕೊಟ್ಟು ನೋಡಿ ಹೇಗೆ ಬದಲಾಗುವರೆಂದು, ಮಂತ್ರಿ ಮಾಡಿ ನೋಡಿ ಹೇಗೆ ಬದಲಾಗುವರೆಂದು, ಸುಂದರವಾದ ಹೆಂಡತಿ ಕೊಟ್ಟು ನೋಡಿ, ಶ್ರೀಮಂತ ಗಂಡ ಕೊಟ್ಟು ನೋಡಿ, ಹೆಚ್ಚು ಸಂಬಳದ ಮಗ/ಮಗಳನ್ನು ಕೊಟ್ಟು ನೋಡಿ, ದೊಡ್ಡ ಉದ್ಯೋಗ ಕೊಟ್ಟು ನೋಡಿ, ಜಮೀನು ಬಂಗಲೆ ಕೊಟ್ಟು ನೋಡಿ, ವಿದೇಶಗಳಲ್ಲಿ ವಾಸಿಸುವ ಅಳಿಯ /ಸೊಸೆಯನ್ನು ಕೊಟ್ಟು ನೋಡಿ, ವಿದೇಶ ಯಾತ್ರೆ ಮಾಡಿ ಬರಲು ವೀಸಾ ಕೊಟ್ಟು ನೋಡಿ, ಐಷಾರಾಮಿ ಕಾರುಗಳನ್ನು ಕೊಟ್ಟು ನೋಡಿ, ಹೇಗೆ ಬದಲಾಗುವರೆಂದು... 

ಆಗ ನೀವೇ ಆಶ್ಚರ್ಯ ಪಡುವಿರಿ, ಅರೆ ಇವರು ಮೊದಲು ಹೀಗಿರಲಿಲ್ಲ, ಈಗ ಹೇಗೆ ಬದಲಾದರೆಂದು? ಅದು ಬಿಟ್ಟು, ಧ್ಯಾನ, ಪ್ರವಚನ, ಬೋಧನೆ, ಹರಿಕಥೆ, ಉಪನ್ಯಾಸ, ವಿಚಾರ ಸಂಕಿರಣ, ಚರ್ಚೆ, ಇವು ಯಾರನ್ನೂ ಬದಲಾಯಿಸುವುದಿಲ್ಲ (ಕೆಲವು ಅಪರೂಪದ ಉದಾಹರಣೆಗಳನ್ನು ಬಿಟ್ಟು) ಸಾಮಾನ್ಯವಾಗಿ ಮತ್ತು ಸಹಜವಾಗಿ ಬದಲಾಗುವುದೇ ಇಲ್ಲ. ಏನಿದರ ಗುಟ್ಟು, ಏನಿದರ ಮರ್ಮ, ಇನ್ನೂ ಯೋಚಿಸುತ್ತಲೇ ಇದ್ದೇನೆ. ಏಕೆಂದರೆ..

ಈ ದೇಶದಲ್ಲಿ, ಜನರ ಭಾವನೆಗಳನ್ನು ಕೆರಳಿಸುವವನು ನಾಯಕನಾಗುತ್ತಾನೆ, ಜನರನ್ನು ಮಾತಿನ ಮೋಡಿಯಲ್ಲಿ ಮರುಳು ಮಾಡುವವನು ರಾಜಕಾರಣಿಯಾಗುತ್ತಾನೆ, ಜನರಲ್ಲಿ ಆಸೆ ಹುಟ್ಟಿಸಿ ನಂಬಿಸುವವನು ಎಂ ಎಲ್ ಎ - ಮಂತ್ರಿ ಆಗುತ್ತಾನೆ, ಜನರನ್ನು ಭಯಪಡಿಸಿ ಭಕ್ತಿ ಉಕ್ಕಿಸುವವನು ಸ್ವಾಮೀಜಿಯಾಗುತ್ತಾನೆ, ಜನರಲ್ಲಿ ಭ್ರಮೆಗಳನ್ನು ಸೃಷ್ಟಿಸಿ ಸುಳ್ಳು ಭವಿಷ್ಯ ಹೇಳುವವನು ಜ್ಯೋತಿಷಿಯಾಗುತ್ತಾನೆ, ಜನರನ್ನು ತನ್ನ ಬಾಹು ಬಲದಿಂದ ಹೆದರಿಸುವವನು ರೌಡಿಯಾಗುತ್ತಾನೆ, ಮಧ್ಯವರ್ತಿ ಕೆಲಸ ಮಾಡುವವನು ಕೋಟ್ಯಾಧಿಪತಿಯಾಗುತ್ತಾನೆ, ಕೃತಕ ಭಾವನೆಗಳನ್ನು ವ್ಯಕ್ತಪಡಿಸುವವನು  ನಟನಾಗುತ್ತಾನೆ, ಆಕರ್ಷಕವಾಗಿ ಬರೆಯುವವನು ಪ್ರಖ್ಯಾತ ಸಾಹಿತಿಯಾಗುತ್ತಾನೆ, ನಾಚಿಕೆ, ಮಾನ ಮರ್ಯಾದೆ ಬಿಟ್ಟವನು ಎಲ್ಲರಿಗಿಂತ ದೊಡ್ಡವನಾಗುತ್ತಾನೆ, ಮತ್ತೊಂದೆಡೆ... 

ಹೊಲದಲ್ಲಿ ಬೆವರು ಸುರಿಸುವವರು ಬಡ ರೈತರಾಗುತ್ತಾರೆ, ಬಿಸಿಲಿನಲ್ಲಿ ಒಣಗುವವರು ದಿನಗೂಲಿ ಕಟ್ಟಡ ಕಾರ್ಮಿಕರಾಗುತ್ತಾರೆ, ತೂಕದ ಮೂಟೆ ಹೊರುವವರು ಕೂಲಿಯಾಗುತ್ತಾರೆ, ಹೋಟೆಲ್ಲಿನಲ್ಲಿ ಎಂಜಲು ತಟ್ಟೆ, ಲೋಟ ತೊಳೆಯುವವರು ಬಾಲ ಕಾರ್ಮಿಕರಾಗುತ್ತಾರೆ, ಮಲ ಹೊರುವವರು ಅಸ್ಪೃಷ್ಯರಾಗುತ್ತಾರೆ, ಹೊಟ್ಟೆಪಾಡಿಗಾಗಿ ದೇಹ ಮಾರುವವರು ವೇಶ್ಯೆಯರಾಗುತ್ತಾರೆ, ಕರುಣಾಮಯಿಗಳು ಅನಾಥನಾಗುತ್ತಾರೆ. ಮಾನ-ಮರ್ಯಾದೆಗಳಿಗೆ ಅಂಜುವವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಇದೆಲ್ಲಾ ವಾಸ್ತವ ಹೇಳುವವರು ಕೊಲೆಯಾಗುತ್ತಾರೆ, ಇದನ್ನೆಲ್ಲಾ ಅರಿತವರು ಅರೆ ಹುಚ್ಚರಾಗುತ್ತಾರೆ.

" ಷರತ್ತುಗಳು ಅನ್ವಯ ".

ಬದಲಾಣೆಯ ವಿವಿಧ ಮಗ್ಗುಲುಗಳನ್ನು ಹುಡುಕುತ್ತಾ, ಪರಿವರ್ತನೆಯ ವಿವಿಧ ಮಾರ್ಗಗಳನ್ನು ಅರಸುತ್ತಾ,.... ಹೊಸ ಹೊಸ ಪ್ರಯೋಗಗಳ ಹಾದಿಯಲ್ಲಿ ನಿಮ್ಮೊಂದಿಗೆ....

***

ನಿನ್ನೆ 9/12/2021 ಗುರುವಾರ ಯೋಗ ಶಿಕ್ಷಕರು ಮತ್ತು ಆತ್ಮೀಯ ಗೆಳೆಯರಾದ ಸದಾನಂದ ಗುಡದ್ ಅವರೊಂದಿಗೆ ಪ್ರಗತಿಪರ ಚಿಂತಕರು ವೈಚಾರಿಕ ಬರಹಗಾರರು ಮತ್ತು ಹೋರಾಟಗಾರರಾದ ಆತ್ಮೀಯ ಗೆಳೆಯರಾದ ಜಿ ಬಿ ಪಾಟೀಲ್ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ‌ ಆರೋಗ್ಯ ವಿಚಾರಿಸಿ ಮುಂದೆ  ಮಾನವೀಯ ಮೌಲ್ಯಗಳ ಪುನರುತ್ಥಾನದ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು 

ಚಿತ್ರ ಕೃಪೆ: ಇಂಟರ್ನೆಟ್ ತಾಣ