ಯಾವುದು ಅದೃಷ್ಟ?

ಬಹು ಹಿಂದೆ ಒಬ್ಬ ಬಡ ಮುದುಕನಿದ್ದ. ಆತ ಒಂದು ಕುದುರೆ ಸಾಕಿದ್ದ. ಎತ್ತರವಾದ ಶ್ವೇತ ವರ್ಣದ ಆ ಕುದುರೆ ಸಾಕಲು ಆತ ಮತ್ತು ಆತನ ಮಗ ತಮ್ಮಿಬ್ಬರ ಸಂಪಾದನೆಯ ಬಹುಭಾಗವನ್ನು ವ್ಯಯಿಸುತ್ತಿದ್ದರು. ಊರಿನವರಿಗೆ ಆತನ ಕುದುರೆ ಕಂಡರೆ ಅಸೂಯೆ. ‘ಹೇಳಿ ಕೇಳಿ ಬಡವ, ಅವನಿಗೇಕೆ ಬೇಕು ಕುದುರೆ?’ ಎಂದು. ಅದನ್ನು ಮಾರಿ, ಹಣ ಸಂಪಾದಿಸು ಎಂದು ಆತನಿಗೆ ಬಹಳ ಜನ ಸಲಹೆ ನೀಡಿದ್ದರು. ‘ಇಲ್ಲಪ್ಪ, ಇದು ನನ್ನ ಗೆಳೆಯ. ನನಗೆ ಬೇಕು.’ ಎಂದು ಮುದುಕ ಕುದುರೆಯನ್ನು ಜತನದಿಂದ ಸಾಕುತ್ತಿದ್ದ.
ಕೆಲವು ದಿನಗಳು ಕಳೆದವು. ಒಂದು ಮುಂಜಾನೆ ನೋಡಿದರೆ ಆತನ ಕುದುರೆ ನಾಪತ್ತೆ! ಊರಿನವರೆಲ್ಲರೂ ಮುದುಕನನ್ನು ಕಂಡು “ನೋಡು, ಅವತ್ತೇ ನಿನಗೆ ಹೇಳಿದ್ದೆವು. ಕುದುರೆಯನ್ನು ಮಾರಿ ಹಣ ಸಂಪಾದಿಸು ಅಂತ. ನೀನು ಕೇಳಲಿಲ್ಲ. ಈಗ ನೋಡು, ಕುದುರೆಯನ್ನು ಯಾರೋ ಕದ್ದುಕೊಂಡು ಹೋಗಿದ್ದಾರೆ" ಎಂದರು.
ಆದರೆ ಮುದುಕ ಸಾಕಷ್ಟು ಸ್ಥಿತಪ್ರಜ್ಞ. “ಕುದುರೆ ಇಲ್ಲ ನಿಜ. ನನಗೆ ಪ್ರಾಪ್ತಿ ಇದ್ದಿದ್ದರೆ ಇರುತ್ತಿತ್ತು. ಆದರೆ ಅದನ್ನು ಕಳ್ಳರು ಕದ್ದಿದ್ದಾರೆ ಅಂತ ಹೇಗೆ ಹೇಳುತ್ತೀರಿ?’ ನೀವೇ ನಿರ್ಣಯ ಮಾಡಲು ಹೋಗಬೇಡಿ" ಎಂದ.
ಜನರು ಮುದುಕನನ್ನು ಅಪಹಾಸ್ಯ ಮಾಡಿದರು. ‘ನಿನ್ನ ಬಿಳಿ ಕುದುರೆಯನ್ನು ಯಾರೋ ಕದ್ದಿದ್ದಾರೆ. ಅದನ್ನು ಒಪ್ಪಿಕೋ. ಬಿಳಿ ಕುದುರೆ ಕಳವಾದರೆ ಅಪಶಕುನವಂತೆ" ಎಂದರು.
“ಕುದುರೆ ಇಲ್ಲ ನಿಜ. ಅದು ಕಳವಾಗಿದೆ. ಅದರಿಂದ ಅಪಶಕುನ ಎಂಬುದೆಲ್ಲಾ ಸುಳ್ಳು. ನೀವೇ ಎಲ್ಲಾ ನಿರ್ಣಯ ಮಾಡಬೇಡಿ.” ಎಂದ ಮುದುಕ.
ನಾಲ್ಕಾರು ದಿನಗಳ ನಂತರ, ಸಂಜೆ ಹೊತ್ತಿಗೆ ಆ ಬಿಳಿ ಕುದುರೆ ಮುದುಕನ ಬಳಿ ವಾಪಾಸಾಯಿತು ! ಅದನ್ನು ಬಹಳ ಪ್ರೀತಿಯಿಂದ ಮೈಸವರಿ, ಹುರುಳಿ ಹಾಕಿದ. ಮುದುಕನಿಗೆ ಇನ್ನೊಂದು ಅಚ್ಚರಿ ಕಾದಿತ್ತು. ಆ ಕುದುರೆಯ ಜತೆ ಇನ್ನೂ ಎರಡು ಕಾಡು ಕುದುರೆಗಳು ಬಂದಿದ್ದವು! ಅವಕ್ಕೂ ಹುರುಳಿ ತಿನ್ನಿಸಿದ.
ಮರುದಿನ ಊರಿನ ಜನ ಇದನ್ನು ನೋಡಿ “ಏ ಮುದುಕಪ್ಪ, ನಿನ್ನ ಅದೃಷ್ಟ ಖುಲಾಯಿಸಿದೆ. ಬಿಳಿ ಕುದುರೆ ಜತೆ ಇನ್ನೂ ಎರಡು ಕುದುರೆ ಬಂದಿದೆ. ಅವುಗಳನ್ನು ಮಾರಿ ಲಾಭ ಸಂಪಾದಿಸು" ಎಂದರು.
“ಅಯ್ಯಾ ಗೆಳೆಯರೇ, ನಾನು ಈ ಕುದುರೆಗಳನ್ನು ಮಾರುವುದಿಲ್ಲ. ಅವುಗಳನ್ನೂ ಸಾಕುತ್ತೇನೆ. ತರಬೇತಿ ಕೊಡುತ್ತೇನೆ. ಇದು ಅದೃಷ್ಟ ಎಂಬುದು ನಿಮ್ಮ ಮಾತು. ಕುದುರೆ ವಾಪಾಸಾಗಿದೆ. ಅದರ ಜತೆ ಎರಡು ಕುದುರೆಗಳು ಬಂದಿವೆ ಎನ್ನುವುದು ಸರಳ ಸತ್ಯ ಅಷ್ಟೇ.” ಎಂದ ಮುದುಕ. ಆತನ ಮಗನು ಆ ಕುದುರೆಗಳಿಗೆ ತರಭೇತಿ ನೀಡಲು ಆರಂಭಿಸಿದ.
ಒಂದೆರಡು ವಾರ ಕಳೆದವು. ಕಾಡುಕುದುರೆಯ ಮೇಲೆ ಸವಾರಿ ಮಾಡುತ್ತಿದ್ದ ಮಗ, ಆಯ ತಪ್ಪಿ ಕೆಳಗೆ ಬಿದ್ದ. ಆತನ ಕಾಲು ಮುರಿದು ಹೋಯಿತು. ಊರಿನ ಜನ ಇದನ್ನು ನೋಡಿ ‘ಪಾಪ, ನಿನ್ನ ಮಗನ ಕಾಲೇ ಮುರಿದು ಹೋಯಿತು. ಆವತ್ತು ಆದ ಅಪಶಕುನ ಈಗ ನಿಜವಾಯಿತು. ನಿನಗೆ ಬಹಳ ಕಷ್ಟ. ಪಾಪ' ಎಂದರು.
ಮುದುಕನು ತಣ್ಣನೆಯ ದನಿಯಲ್ಲಿ ‘ನನ್ನ ಮಗ ಕುದುರೆಯಿಂದ ಬಿದ್ದು ಕಾಲು ಮುರಿದುಕೊಂಡದ್ದು ಸತ್ಯ. ಇದು ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ ಅಂತ ಯಾರು ತಾನೆ ಹೇಳಬಲ್ಲರು?’ ಎಂದು ತನ್ನ ಪಾಡಿಗೆ ತಾನು ಕೆಲಸ ಮಾಡತೊಡಗಿದ.
ಎರಡೇ ವಾರದಲ್ಲಿ ಆ ದೇಶದ ಮೇಲೆ ಶತ್ರುಗಳು ದಾಳಿ ಮಾಡತೊಡಗಿದರು. ಆ ಊರಿನ ಎಲ್ಲಾ ಯುವಕರು ಸೇನೆಗೆ ಸೇರಬೇಕೆಂದು ರಾಜಾಜ್ಞೆಯಾಯಿತು. ಮುದುಕನ ಮಗ ಕಾಲು ಮುರಿದುಕೊಂಡಿರುವುದರಿಂದ, ವಿನಾಯತಿ ದೊರಕಿತು. ಊರಿನವರು ಕಣ್ಣೀರು ಹಾಕುತ್ತಾ, ತಮ್ಮ ಮಕ್ಕಳನ್ನು ಸೇನೆಗೆ ಕಳಿಸಿ, ಮುದುಕನ ಬಳಿ ಬಂದು ‘ನೀನು ಹೇಳಿದ್ದು ನಿಜ. ನಿನ್ನ ಮಗ ಅದೃಷ್ಟವಂತ. ಸೇನೆಗೆ ಹೋಗುವ ಕೆಲಸ ಉಳಿಯಿತು'. ಎಂದು ಹೊಗಳಿದರು. ಆಗ ಮುದುಕ ಹೇಳಿದ ‘ಅದೃಷ್ಟ ಅಂತ ಹೇಗೆ ತೀರ್ಮಾನ ಮಾಡುತ್ತೀರಿ? ನಿಮ್ಮ ಮಕ್ಕಳನ್ನು ಬಲವಂತದಿಂದ ಸೇನೆಗೆ ಸೇರಿಸಿದರು. ನನ್ನ ಮಗ ಮನೆಯಲ್ಲೇ ಉಳಿದ ಎಂಬುದು ಮಾತ್ರ ಸತ್ಯ. ಎಲ್ಲವನ್ನೂ ನೀವೇ ನಿರ್ಧರಿಸಬೇಡಿ.’ ಚೀನಾ ದೇಶದ ತತ್ವಜ್ಞಾನಿ ಲಾವೋತ್ಸೆ ಹೇಳುತ್ತಿದ್ದ ಕಥೆ ಇದು.
-ಶಶಾಂಕ್ ಮುದೂರಿ
ಕೃಪೆ: ವಿಶ್ವವಾಣಿಯ ‘ವೇದಾಂತಿ ಹೇಳಿದ ಕಥೆ'
ಚಿತ್ರ ಕೃಪೆ: ಇಂಟರ್ನೆಟ್ ತಾಣ