ರಾಜ್ ಎಂಬ ಸರಳತೆಯ ವಿಸ್ಮಯ

ರಾಜ್ ಎಂಬ ಸರಳತೆಯ ವಿಸ್ಮಯ

ಜಗತ್ತಿನಲ್ಲಿ ಮಹಾಪುರುಷರೆಲ್ಲಾ ತಮ್ಮ ಸರಳತೆಗೆ ಹೆಸರಾದವರೇ. ರಾಜ್ ಕೂಡಾ ಇದೇ ಹಾದಿಯಲ್ಲಿ ನಡೆದು ಬಂದವರು. ಶುಭ್ರ ಬಿಳೀ ಷರ್ಟ್ ಹಾಗೂ ಬಿಳಿ ಪಟ್ಟಿ ಪಂಚೆ, ತಲೆಯನ್ನು ಎಣ್ಣೆ ಹಾಕಿ ಬಾಚುತ್ತಿದ್ದರು, ಕೂದಲು ಉದುರಿದರೂ ವಿಗ್ ಧರಿಸುತ್ತಿರಲ್ಲಿಲ್ಲ. ಕಾಲಿಗೊಂದು ಸರಳವಾದ ಉಂಗುಷ್ಟದ ಚಪ್ಪಲಿ. ಮೊಗದಲ್ಲೊಂದು ಸದಾ ಮಗುವಿನ ಮುಗ್ಧ ನಗು. ಯಾರಾದರೂ ಪತ್ರಕರ್ತರು ಬಂದು ಪ್ರಶ್ನೆ ಕೇಳಿದರೆ 'ನನ್ನನ್ನು ಬೆಳಸಿದವರು ನೀವೇ. ನಾನು ಬರೀ ಮೂರನೇ ಕ್ಲಾಸ್ ಓದಿದ ದಡ್ಡ. ನಿರ್ಮಾಪಕರೇ ನನ್ನ ಅನ್ನದಾತರು. ನಾನು ಹೊಟ್ಟೆಯ ಪಾಡಿಗಾಗಿ ಈ ಕಸುಬಿಗೆ ಬಂದವನು. ನನ್ನ ಅಭಿಮಾನಿಗಳೇ ನನ್ನ ದೇವರು. ನನ್ನ ಅಭಿನಯದಲ್ಲಿ ಹೆಚ್ಚುಗಾರಿಕೆ ಏನೂ ಇಲ್ಲ. ನನ್ನ ತಂದೆಯೇ ನನಗೆ ಅಭಿನಯದ ಗುರು. ನಾನು ಆ ಚಿತ್ರದಲ್ಲಿ ಅಭಿನಯ ಇನ್ನೂ ಚೆನ್ನಾಗಿ ಮಾಡಬಹುದಿತ್ತೇನೋ. ಕಥೆ ಚೆನ್ನಾಗಿದ್ರೆ ನಿಮ್ಮ ರಾಜ್ ಕುಮಾ‌ರ್ ಎಲ್ಲಾ, ಕನ್ನಡ ನಾಡಿಗಾಗಿ ನಾನು ಏನು ಮಾಡಲೂ ಸಿದ್ಧ. ನಾನು ಅಭಿನಯಕ್ಕೆ ಬರದೇ ಇದ್ದಿದ್ರೆ ಊರಲ್ಲಿನ ನಾಲ್ಕೆಕ್ರೆ ಜಮೀನು ಉಳುಮೆ ಮಾಡ್ಕೊಂಡು ಇರ್ತಿದ್ದೆ... ಹೀಗೆ ರಾಜ್ ನಗುತ್ತಾ ಉತ್ತರಿಸಿಬಿಡುತ್ತಿದ್ದರು.

- ರಾಜ್ ‌ಮಗುವಿನಂತೆ ಮುಗ್ಧತೆಯಿಂದ ಉತ್ತರಿಸಿದಾಗ 'ಈ ನಟನೇನಾ ರಣಧೀರ ಕಂಠೀರವನಾಗಿ ಮೆರೆದದ್ದು, ಮಯೂರನಾಗಿ ಆರ್ಭಟಿಸಿದ್ದು?' ಎನ್ನಿಸದೇ ಇರದು. ರಾಜ್ ಆವೇಶ ಬಂದಂತೆ ನಟಿಸಿಬಿಡುತ್ತಿದ್ದರು. ಪರಕಾಯ ಪ್ರವೇಶಕ್ಕೆ ರಾಜ್ ಹೊಸ ಭಾಷ್ಯವನ್ನೇ ಬರೆದವರು. ನಿಮಗೆ ಗೊತ್ತಿರಲಿ, ಭಾವಾಭಿನಯದ ದೃಶ್ಯಗಳಲ್ಲಿ ರಾಜ್‌ಗೆ ಗ್ಲಿಸರೀನೇ ಬೇಡವಾಗಿತ್ತು. ಕಣ್ಣುಗಳರಳಿಸಿ ರಾಕ್ಷಸನ ಪಾತ್ರಗಳಲ್ಲಿ ಅಭಿನಯಿಸಲು ನಿಂತರೆ, ಎದುರಿಗಿದ್ದ ನಟ ನಟಿಯರೇ ಹೆದರಿಬಿಡುತ್ತಿದ್ದರು. ಒಬ್ಬ ಪತ್ರಕರ್ತ ಒಮ್ಮೆ 'ಸಾರ್ ಒಮ್ಮೆ ನವರಸಗಳನ್ನು ಅಭಿನಯಿಸಿ ತೋರಿಸಿ, ಆ ಫೋಟೋಗಳನ್ನು ತೆಗೆದುಕೊಳ್ಳುತ್ತೇನೆ' ಎಂದರಂತೆ. 'ನನಗೆ ಪಾತ್ರ ಕೊಟ್ಟರೆ ಆ ನವರಸಗಳನ್ನು ತೋರಿಸಬಲ್ಲೆನೇ ವಿನಃ ಹಾಗೇ ತೋರಿಸಿ ಎಂದರೆ ಅದು ಹೇಗೆ ಸಾಧ್ಯ?' ಎಂದು ಬಿಟ್ಟರಂತೆ!

ರಾಜ್ ಆಯಾ ಪಾತ್ರಗಳಿಗೇ ಜೀವ ತುಂಬಿಬಿಡುತ್ತಿದ್ದರು. ರಣಧೀರ ಕಂಠೀರವನ ಉಗ್ರಪಾತ್ರವನ್ನು ನೋಡಿದ ಕನ್ನಡ ಜನ ರಣಧೀರ ಕಂಠೀರವರು ಹೀಗೆಯೇ ಇದ್ದರೇನೋ ಎಂದು ಭಾವಿಸಿಬಿಟ್ಟರು. ರಾಜ್ ಇತಿಹಾಸದ ಪಾತ್ರಗಳಿಗೆ ತಮ್ಮದೇ ಆದ ಘನತೆಯನ್ನು ತಂದುಬಿಡುತ್ತಿದ್ದರು. ಮಯೂರ ಚಿತ್ರದಲ್ಲಿನ ಅವರ ಉಡುಪು ಹಾಗೂ ಮೈಕಟ್ಟನ್ನು ನೋಡಿದ ಮಹಾರಾಜರು ನೀವು ಈ ಉಡುಪಿನಲ್ಲಿ ನಮ್ಮ ಮುಂದೆ ಬಂದರೆ ನಮಗೇ ನಾಚಿಕೆಯಾಗಿ ಬಿಡುತ್ತದೆ' ಎಂದಿದ್ದರಂತೆ. ಎಚ್ಚಮ ನಾಯಕನ ಪಾತ್ರಮಾಡಿದ ನಂತರ, ರಾಜ್ ರನ್ನು ನೋಡಿದವರು ಆ ಪಾತ್ರವನ್ನು ಮಾಡಿದವರು ಇವರೇನಾ? ಎಂದು ಆಶ್ಚರ್ಯ ಪಡುತ್ತಿದ್ದರು.

ರಾಜ್ ಸರಳತೆಯನ್ನೇ ತಮ್ಮ ಜೀವನದ ಮಂತ್ರವನ್ನಾಗಿ ಮಾಡಿಕೊಂಡವರು. ಮನೆಯಲ್ಲಿ ಮಕ್ಕಳು ಗಲೀಜು ಮಾಡಿದ ಬಾತ್ ರೂಂ ಅನ್ನು ಅವರೇ ಉಜ್ಜಿ ಶುದ್ಧ ಮಾಡುತ್ತಿದ್ದರಂತೆ. ಚಿತ್ರೀಕರಣಗಳಲ್ಲಿ ಎಲ್ಲರ ಜೊತೆಯಲ್ಲೇ ಊಟ ಮಾಡಿ ಆನಂದಿಸುತ್ತಿದ್ದರು. ಒಂದು ಚಾಪೆಯ ಮೇಲೇ ಮಲಗುತ್ತಿದ್ದ ರಾಜ್ ದೇಹವನ್ನು ಮತ್ತು ಮನಸ್ಸುಗಳನ್ನು ಆಗಾಗ್ಗೆ ಸ್ವಯಂ ದಂಡಿಸಿಕೊಳ್ಳುತ್ತಿದ್ದರು. ಅವರು ತಮ್ಮ ಗಾಜನೂರಿಗೆ ಹೋದಾಗ ಸಾಧಾರಣ ವ್ಯಕ್ತಿಯಂತೆ ಊರನ್ನೆಲ್ಲಾ ಸುತ್ತುತ್ತಿದ್ದರು. ಗೊತ್ತಿದ್ದ ಪರಿಚಯಸ್ಥರನ್ನೆಲ್ಲಾ ಹೆಸರು ಹಿಡಿದು ಮಾತನಾಡಿಸುತ್ತಿದ್ದರು. ತಾವು ಬಾಲ್ಯದಲ್ಲಿ ಆಟವಾಡಿದ ಸ್ಥಳಗಳನ್ನೆಲ್ಲಾ ನೋಡಿ ಭಾವ ಪರವಶರಾಗಿ ಬಿಡುತ್ತಿದ್ದರು. ರಾಜ್‌ಗೆ ಹಲಸಂದೆ ಬೋಂಡ ಎಂದರೆ ಬಹಳ ಇಷ್ಟ, ಗಾಜನೂರಿಗೆ ಹೋದಾಗಲೆಲ್ಲಾ ಅವರು ಮಾಡಿಸಿಕೊಂಡು ತಿಂದು ಬರುತ್ತಿದ್ದರು. ತಮ್ಮ ಗಾಜನೂರಿನ ಮನೆಯಲ್ಲಿ ಊಟ ಮಾಡಿ ಪತ್ನಿಯೊಂದಿಗೆ ನೆಲದ ಮೇಲೆ ಕುಳಿತು ಎಲೆ ಅಡಿಕೆ ಸವಿಯುತ್ತಿದ್ದಾಗ ಅವರ ಮುಖಭಾವದ ಸಂತೃಪ್ತಿಯನ್ನು ಕಾಣಬೇಕಿತ್ತು. ರಾಜ್ ಎಂದೂ ತಾವು ನಡೆದು ಬಂದ ಆ ಸರಳ ಹಾದಿಯನ್ನು ಮರೆತವರೇ ಅಲ್ಲ.

ರಾಜ್ ಚಿತ್ರೀಕರಣದ ಸ್ಥಳದಲ್ಲಿ ತಮಗೆ ಯಾವ ವಿಶೇಷತೆಗಳನ್ನೂ ಕೇಳುತ್ತಿರಲಿಲ್ಲ. ತಮ್ಮ ನಟನೆಯಾಯಿತು; ಸಹನಟರೊಂದಿಗೆ ಒಂದಿಷ್ಟು ಮಾತುಕತೆಯಾಯಿತು ಎನ್ನುವಂತೆ ಇರುತ್ತಿದ್ದರು. ನಂತರ ತಾವು ಹೇಳಬೇಕಾಗಿದ್ದ ಡೈಲಾಗ್‌ಗಳ ಕಡೆ ಕಣ್ಣು ಹಾಯಿಸುತ್ತಿದ್ದರೆ. ಮುಂದೆ ಆ ಸನ್ನಿವೇಶಗಳಲ್ಲಿ ತಮಗೆ ತೋಚಿದ ವಿಷಯಗಳನ್ನು ಲಘುವಾಗಿ ಚರ್ಚಿಸುತ್ತಿದ್ದರು. ಚಿತ್ರೀಕರಣದ ಸ್ಥಳಕ್ಕೆ ಅರ್ಧ ಗಂಟೆ ಮುಂಚಿತವಾಗಿಯೇ ಬಂದು ನಮಸ್ಕರಿಸಿ ಕೂತು, ಇತರೇ ನಟ ನಟಿಯರ ಆಗಮನಕ್ಕೆ ಕಾಯುತ್ತಿದ್ದರು. ರಾಜ್ ತಮ್ಮ ಚಿತ್ರಗಳ ಹೊಡೆದಾಟದ ಸಂದರ್ಭಗಳಲ್ಲಿ ಡ್ಯೂಪ್ ಇಲ್ಲದೇ ತಾವೇ ಭಾಗವಹಿಸಿಬಿಡುತ್ತಿದ್ದರು. ರಾಜ್‌ಗೆ ಫೈಟಿಂಗ್ ಚಿತ್ರಗಳೆಂದರೆ ಭಾರೀ ಇಷ್ಟ. ಅವರು ಮದರಾಸಿನಲ್ಲಿ ಬಿಡುವು ಸಿಕ್ಕಾಗಲೆಲ್ಲಾ ಇಂಗ್ಲೀಷ್ ಚಿತ್ರಗಳನ್ನು ನೋಡುತ್ತಿದ್ದರು.

ರಾಜ್ ತಮಗೆ ಗೊತಿಲ್ಲದ ವಿಷಯಗಳನ್ನು ಕಲಿತು ನಟಿಸುತ್ತಿದ್ದರು, ಅದು ಹೊಡೆದಾಟವಾಗಲಿ, ನೃತ್ಯವಾಗಲೀ, ಕಾರು, ಬೈಕು ಸವಾರಿಯಾಗಲೀ, ಕುದುರೇ ಸವಾರಿಯಾಗಲೀ ಎಲ್ಲವನ್ನೂ ಕಲಿತು ಅಭಿನಯಕ್ಕೆ ಇಳಿಯುತ್ತಿದ್ದರು ರಾಜ್. ರಾಜ್‌ರ ಕನ್ನಡ ಉಚ್ಛಾರಣೆ ಇಡೀ ಕನ್ನಡ ನಾಡಿನಲ್ಲೇ ಪ್ರಸಿದ್ದಿ ಬಿಡಿ. ಆದರೆ ಮೂರನೆಯ ತರಗತಿ ಓದಿದ ಒಬ್ಬ ಹಳ್ಳಿ ಹೈದ, ಇಂಗ್ಲಿಷ್ ಪ್ರೊಫೆಸರ್ ಪಾತ್ರ ಮಾಡಿ ಇಂಗ್ಲಿಷ್ ಭಾಷೆಗೇ ಒಂದು ಘನತೆಯನ್ನು ತಂದು ಕೊಟ್ಟವರು ರಾಜ್ ಎಂಬುದು ಅತಿಶಯೋಕ್ತಿಯಲ್ಲ. ಸರಳತೆಯೇ ಸಾಕಾರವೆತ್ತಿದ ಬೃಹತ್ ಚೇತನ ನಮ್ಮ ರಾಜ್.

(ಡಾ. ಕೆ. ನಟರಾಜ್ ಅವರ ‘ಮೌಲ್ಯಗಳ ಸರದಾರ ಡಾ. ರಾಜಕುಮಾರ್’ ಕೃತಿಯಿಂದ ಆಯ್ದ ಅಧ್ಯಾಯ)