ರಾಮಲಾಲ – ರಾಮಾನುಭೂತಿ - ರಾಜಕೀಯ
ಶ್ರೀ ರಾಮಚಂದ್ರ ಪರಮಾತ್ಮ, ನರಮಾನವ ರಾಜಶಿಶುವಾಗಿ ಆ ಸ್ಥಳದಲ್ಲೇ “ಗರ್ಭಾವತಾರ” ಪಡೆದೆನೆಂದು ಹಿಂದೂ ಜನತೆ ಆರ್ಷೇಯ ಕಾಲದ ನಂಬಿಕೆ. ಸದ್ಯಕ್ಕೆ ಅಲ್ಲಿ ಲೋಹದೆರಕದ ರಾಮಮೂರ್ತಿ ವಿರಾಜಮಾನ. ಅದನ್ನು ಅಲ್ಲಿಂದ ಕದಲಿಸಬಾರದೆಂದು ನ್ಯಾಯಾಂಗ ಹೇಳಿದೆ. ಇದು ಆಸ್ತಿಕ ಜನರಿಗೆ ರೋಮಾಂಚನ ತಂದಿದೆ; ಅಲ್ಲದವ ಸಹ ತಲೆತೂಗಿದ್ದಾರೆ. ಈ ಸ್ಥಳ ಇತಿಹಾಸದ ಶತಮಾನಗಳಲ್ಲಿ ಕಟ್ಟು-ಕುಟ್ಟು-ಕೆಡಹುಗಳನ್ನು ಕಂಡಿದೆ. ಆ ವಿದ್ಯಮಾನಗಳು ದಶಕಗಳಿಂದ ನ್ಯಾಯಾಂಗೀಯ ಗೊಜ್ಜು-ಗೋಜಲುಗಳಲ್ಲಿ ನುಲಿಚಿಕೊಂಡಿದೆ. ಅಂಥದರಲ್ಲೂ ಕೋರ್ಟು, ಆ ಸ್ಥಳ ವಿಶೇಷವನ್ನು “ಹಿಂದೂ ವಾರಸುದಾರರಿಗೆ” ಸಂದಾಯ ಮಾಡಿರುವುದು ಅತ್ಯದ್ಭುತ “ಲೌಕಿಕ” ಪ್ರಕ್ರಿಯೆ ಎನ್ನುವುದರಲ್ಲಿ ಸಂದೇಹವಿಲ್ಲ.
“ರಾಮ” ಎನ್ನುವುದು ನಮ್ಮ ಭಾವಕೋಶದಲ್ಲಿ ನೆಲೆಸಿರುವ ದೇವರು; ರಾಮನೆನ್ನುವುದು ಮಾನವತಾ ಮೌಲ್ಯಗಳ ಅಮೂರ್ತ ಮೇರು; ತಂದೆ-ಮಗ, ತಾಯಿ-ಮಗ, ಹಿರಿಯಣ್ಣ, ವಿಧೇಯ ಶಿಷ್ಯ, ಹೊಣೆಗಾರ ಪತಿಯೆಂಬ ಮಾನವ ಸಂಬಂಧಗಳಿಗೆ ಆತ ಇನ್ನಿಲ್ಲದ ಆದರ್ಶಪುರುಷ. ಹೀಗೆಲ್ಲಾ ಪ್ರತಿಯೊಂದು ಹಿಂದೂ ಜನರ ಮನವನ್ನೂ, ಮನೆಯನ್ನೂ ತುಂಬಿ ನಿಂತಿರುವ ರಾಮನೆಂದರೆ ಈ ರಾಮಲಾಲಾ ಮೂರ್ತಿ ಮಾತ್ರವೇ? ತುಳಸೀದಾಸರು, ಒಳಗೂ-ಹೊರಗೂ ಬೆಳಕು ಚೆಲ್ಲುವಂತೆ ನಾಲಗೆ-ತುಟಿಗಳ ನಡುವೆ ಮಣಿದೀಪವಾಗಿರಿಸಿಕೊಂಡಿದ್ದರು; ‘ರಾ’ ಎಂದು ಬಾಯಿತೆರೆದರೆ ಒಳಗಿದ್ದ ಪಾಪಗಳೆಲ್ಲಾ ಹೊರಹೋಗಿ ‘ಮ’ ಎಂದು ತುಟಿ ಮುಚ್ಚಿದಾಗ ಇನ್ನೆಂದೂ ಒಳಬಾರದೆಂದು ಪುರಂದರದಾಸರು ನಂಬಿದ್ದರು; ಆತನೊಬ್ಬನಿರುವವರೆಗೆ ನಮಗೆ ಕೊರತೆಯೆನ್ನುವುದಿನ್ನುಂಟೇ? ಎಂದು ರಾಮದಾಸರ ತುಂಬು ಭರವಸೆ; ತ್ಯಾಗರಾಜರಿಗಂತೂ ಈತ ಏಕೈಕ ಆಧ್ಯಾತ್ಮಿಕ ಆಸ್ತಿ! ಆ ಇಡೀ ರಾಮ, ಮಸೀದಿಯ ಮಧ್ಯ ಗೋಪುರದಡಿಯ ಬಾಲರಾಮನ ನಿಶ್ಚಲ ವಿಗ್ರಹದಲ್ಲಿ ಬಂದಿ ಎಂದು ಕೋರ್ಟ್ ತೀರ್ಪಿ ಅರ್ಥವಲ್ಲ, ತಾನೇ?!
ಹಿಂದೂ ಮಾನಾಭಿಮಾನದ ಕೇಂದ್ರವಾದ ಶ್ರೀರಾಮಚಂದ್ರನ ಹುಟ್ಟುಸ್ಥಳವನ್ನು ಅನ್ಯಮತೀಯರ ಮುಷ್ಟಿಯಿಂದ ಬಿಡಿಸಿ ‘ರಾಮನಿಗೆ ನ್ಯಾಯ’ ಒದಗಿಸುವ ಹಿಂದೂ ಜಾಗೃತಿ, ಐಕಮತ್ಯ ಮೂಡಿಸುವ ಧ್ಯೇಯ ಬರೆದುಕೊಂಡ ರಥಯಾತ್ರೆಯಂದನ್ನು ಪಶ್ಚಿಮದ ಸೋಮನಾಥದಿಂದ ಅಯೋಧ್ಯಾ ಭೂಮಿಯವರೆಗೆ ಹಿಂದೊಮ್ಮೆ ಸಂಕಲ್ಪಿಸಲಾಗಿತ್ತು. ಇದು ದೇಶದ ಬಹುಸಂಖ್ಯಾತರಲ್ಲಿ ಎಚ್ಚರ ಮೂಡಿಸಿದ್ದೂ, ಅಭೂತಪೂರ್ವ ಒಗ್ಗಟ್ಟೂ ಕಾಣಿಸಿಕೊಂಡಿದ್ದೂ ರಾಜಕೀಯ ಸತ್ಯ. ಆದರೆ ಅರ್ಧದಲ್ಲೇ ಯಾತ್ರೆಗೆ ಅಡ್ಡ ಹಾಕುವಲ್ಲಿ ವಿರೋಧಿಗಳೇನೋ ಯಶಸ್ವಿಯೂ ಆದರು. ಆದರೆ ಆಗ ಎರಡೇ ಎರಡು ಲೋಕಸಭಾ ಸ್ಥಾನಬಲ ಹೊಂದಿದ್ದ ರಥಯಾತ್ರೆ ನೇತಾರರ ಪಕ್ಷ, ಮುಂದಿನ ಚುನಾವಣೆಯಲ್ಲಿ 85 ಸೀಟುಗಳನ್ನು ಗೆದ್ದುಕೊಳ್ಳುವಷ್ಟು ಪ್ರಜಾಸತ್ತಾತ್ಮಕ ತಾಖತ್ ಗಳಿಸಿದ್ದನ್ನು ದೇಶ ಕಂಡಿತು. ಬೆರಕೆ ಸರಕಾರದ ಒತ್ತಡದಿಂದಾಗಿ ಅದು ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ಸಾಧ್ಯವಾಗಲಿಲ್ಲ; ಅದು ಅಕ್ಷಮ್ಯವೂ ಅಲ್ಲ. ಆದರೆ ರಾಮನಾಮ ಮೂಡಿಸಿದ ಹಿಂದುತ್ವ ಜಾಗೃತಿಯನ್ನು, ರಾಜಕೀಯಾತೀತವಾಗಿ ಸಾಮಾಜಿಕ ಸಾಮರಸ್ಯ, ಧಾರ್ಮಿಕ-ಆಧ್ಯಾತ್ಮಿಕ ಏಕತೆ ಹುಟ್ಟಿಸಲು ಇದ್ದ ಅವಕಾಶವನ್ನು ಮಠ-ಮಾನ್ಯಾದಿ ಹಿಂದೂ ಘಟಕಗಳ್ಯಾವವೂ ಬಳಸಿಕೊಳ್ಳಲಿಲ್ಲ!
ಹೈಕೋರ್ಟ್ ತೀರ್ಪನ್ನು ಈಗ ಕೋಮು ಸೌಹಾರ್ದಕ್ಕೆ ದ್ಯೋತಕ ಎಂದು ಕೊಂಡಾಡಲಾಗುತ್ತಿದೆ. ಅದು ಸುಳ್ಳೂ ಅಲ್ಲ. ಅದಕ್ಕಿಂತಾ ಹೆಚ್ಚಾಗಿ ಇದು ಹಿಂದೂ ಸಮುದಾಯದ ಸಾಮರಸ್ಯ-ಸಮಾನತೆಗಳಿಗೆ ಇಂಬು ನೀಡುವ ಅವಕಾಶ ಇದರಲ್ಲೂ ಅಡಗಿದೆ. ತಕ್ಷಣದ ರಾಜಕೀಯ ಹಪಾಹಪಿಯಿರದ ಹಿಂದೂ ಸಂಘಟನೆಗಳು ಅದನ್ನು ಹಾಗೆ ಉಪಯೋಗಿಸಲು ಈಗಲಾದರೂ ಪ್ರಾಮಾಣಿಕ ಯೋಜನೆ ರೂಪಿಸಬೇಡವೇ? ಇದರಿಂದ ಉತ್ತರೋತ್ತರ ರಾಜಕೀಯ ಪ್ರಯೋಜನವೂ ಸಾಧ್ಯವಾಗಲಾರದೇ?!